Tuesday, August 11, 2015

ರಿಯಾಲಿಟಿ ಶೋ ಎಂಬ ವಿಕ್ಷಿಪ್ತ ಮನರಂಜನೆ! (ಭಾಗ ಒಂದು)


ರಿಯಾಲಿಟಿ ಶೋ ಎಂಬ ಇಪ್ಪತ್ತೊಂದನೇ ಶತಮಾನದ ಒಪ್ಪಿತ ವಿಕೃತಿಯ ಕುರಿತಾಗಿ ಸಾಕಷ್ಟು ಚರ್ಚೆಯಾಗಿದೆ. ಹಾಗಿದ್ದೂ ಅದನ್ನು ನಿಲ್ಲಿಸುವಲ್ಲಿಯಾಗಲೀ, ಅದರ ಸ್ವರೂಪವನ್ನು ಬದಲಿಸುವಲ್ಲಿಯಾಗಲೀ ಯಾರೂ ಸಮರ್ಥರಾಗಿಲ್ಲ. ಕಾರಣ ಒಂದೇ, ಅದರ ಹಿಂದೆ ಹಣದ ಅಮೋಘ ಪ್ರವಾಹವಿದೆಯೆನ್ನುವುದು. ರಿಯಾಲಿಟಿ ಶೋಗಳ ಒಳ ಮರ್ಮವನ್ನು ಅರಿತ ಬಳಿಕವೂ ಜನ ಅದನ್ನು ನಿಜವೆಂದೇ ತಿಳಿದು ಖುಶಿ(!!) ಪಡುವುದು ನಡೆದೇ ಇದೆ.


ಮೊನ್ನೆ ಕೆಲವು ದಿನಗಳ ಹಿಂದೆ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ’ನಿಜಾಯಿತಿ ತೋರ್ಕೆ’ (ರಿಯಾಲಿಟಿ ಶೋ) ಕಾರ್ಯಕ್ರಮದ  ಎದುರು ಕೂರುವ ಕರ್ಮ ನನ್ನದಾಗಿತ್ತು. ಅಂದವಾದ ಭಾಷೆಯಿಲ್ಲದ, ದೇಹ ಬೆಳೆಸಿದ ಕಾರಣಕ್ಕೇ ಟಿವಿಯೊಳಗೆ ಸೇರಿಕೊಂಡ, ಹೋ ಹಾ ಎಂದೆಲ್ಲ ಒದರಿಕೊಳ್ಳುವ ಘೇಂಡಾಮೃಗದಂಥಾ ನಿರೂಪನೊಬ್ಬ ನಿಜಾಯಿತಿ ತೋರ್ಕೆಯನ್ನು ನಿರ್ವಹಿಸುತ್ತಿದ್ದ. ನಾ ನೋಡುತ್ತಿದ್ದ ತೋರ್ಕೆಯ ವಿಷ್ಯ ಏನಪ್ಪಾಂದ್ರೆ- ಹಳ್ಳಿ ಹೈದ ಪ್ಯಾಟೆಗೆ ಬಂದ್ರೆ ಆಗುವ ಹಳವಂಡಗಳ ಕುರಿತಾದ್ದು.
ಹಳ್ಳಿ ಹುಡುಗ್ರು ಅಂತ ಬಿಂಬಿಸಲಿಕ್ಕೆ ಇಲ್ಲಿ ಉತ್ತರಕನ್ನಡದಿಂದ ಸಿದ್ಧಿ ಜನಾಂಗದ ಎರಡ್ಮೂರು ಹುಡುಗರನ್ನೂ, ಉತ್ತರಕರ್ನಾಟಕದ ಹಳ್ಳಿಯಿಂದ ಯಾರೋ ಒಂದಿಬ್ಬರನ್ನೂ ಹಿಡಿದು ತಂದು ಕ್ಯಾಮೆರ ಎದುರು ನಿಲ್ಲಿಸಿಕೊಂಡಿದ್ದರು. ಅವರಿಗೆಲ್ಲ ಬಲು ಜಾಣೆಯರಂತೆ ತೋರುವ (ಈ ಹೆಣ್ ಮಕ್ಕಳಿಗೆ ಬರಕೊಟ್ಟ ಸಂಭಾಷಣೆ ಆ ಪರಿಯಲ್ಲಿತ್ತು) ತಲಾ ಒಬ್ಬೊಬ್ಬಳು ಗೆಳತಿ, ಅದೂ ಬಿಳೀ ಬಣ್ಣದವರು. (ಕೆಲವರನ್ನು ಬಹಳೆ ಮುತುವರ್ಜಿಯಿಂದ ಬಿಳಿ ಮಾಡಿದಂತಿತ್ತು). ಆ ಹೆಣ್ ಹೈಕಳೆಲ್ಲ ಭಾಳಾ ಶಾಣ್ಯಾ ಜನ, ಮತ್ತು ಈ ಗಂಡ್ ಪೋರರು ಪಕ್ಕಾ ಪೆದ್ದು ಎನ್ನುವುದೇ ಆ ಕಾರ್ಯಕ್ರಮದ ಒಳ ತಿರುಳು. ಘೇಂಡಾಮೃಗವಂತೂ ಈ ಪೋರರನ್ನು ಇದ್ದಿದ್ದೂ ಹೀನೈಸುವ ಪ್ರಯತ್ನವನ್ನು ತನ್ನ ಭಾಷಾ ಪರಿಣತಿಯ ಮಿತಿಯಲ್ಲಿ ಮಾಡುತ್ತಲೇ ಇರುವವ.

ಇಂತಿರಲು, ನಿರೂಪಕನ ಬಾಯಲ್ಲಿ ಬರುವ ಕನ್ನಡವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾ ನಾನು ಕಾರ್ಯಕ್ರಮವನ್ನು ಭಲೇ ಆಸಕ್ತಿಯಿಂದ ನೋಡಲು ಶುರುವಿಟ್ಟೆ. ನಮ್ಮೂರಿನ ಮಕ್ಕಳು ಇದ್ದರಲ್ಲ ಎಂಬುದಷ್ಟೆ ನನ್ನ ಕುತೂಹಲವನ್ನು ಕಾಯ್ದಿರಿಸಿದ ಸಂಗತಿ. ಶುರುವಾಯ್ತು ನೋಡಿ, ಹಡೆ ಮಾಡುವ ವಿವಿಧ ಚೇಷ್ಟೆಗಳು. (ಹಡೆ ಮಾಡುವುದು ಅಂದರೇನು ಅಂತ ಪ್ರಶ್ನೆ ಇದ್ದರೆ ಆ ಕಾರ್ಯಕ್ರಮ ನೋಡಿ, ತಿಳಿದೀತು). ಬಿಳೀ ಹೆಣ್ ಮಕ್ಕಳು ತಮ್ಮ ಕರ್ಲ್ ಕರ್ಲಿ ಕೂದಲು ತಿರುವುತ್ತಾ, ನಿರ್ದೇಶಕ ಕೊಟ್ಟಷ್ಟೆ ಬಟ್ಟೆಯಲ್ಲಿ ಮೈ ತುಂಬಿಡುವ ಪ್ರಯತ್ನ ಮಾಡುತ್ತಾ ತಮ್ ತಮ್ಮ ಕರೀ ಹುಡುಗರನ್ನ (ಇನ್ನಷ್ಟು ಕಪ್ಪಾಗಿ ಬೇಕಂತಲೇ ಬಿಂಬಿಸಿದ್ದರಾ ಅಂತ ಡೌಟು)  ವೇದಿಕೆಯ ಮೇಲೆ ಕರೆತರುವ ಹೊತ್ತಿಗೆ ನಿರೂಪಕನ ಭೀಕರ ಹೂಂಕಾರ ದಯನೀಯ ಹಂತ ತಲುಪಿತ್ತು. ಆ ಹೆಣ್ ಹೈಕಳು ತಮಗೆ ವಹಿಸಿದ್ದ ಈ ಹುಡುಗರನ್ನು ಪಕ್ಕಾ ಶಾಲೆ ಮಕ್ಕಳಂತೆ ಗೇಣುದ್ದದ ನೀಲಿ ಚಡ್ಡಿ, ಟಿಪಿಕಲ್ ಯೂನಿಫಾರ್ಮಿನ ಗೆರೆ ಗೆರೆ ಅಂಗಿ, ಬೆನ್ನಿಗೊಂದು ಸುಲೇಖಾ ಪಾಟಿಚೀಲ ತೊಡಿಸಿ ಕರಕೊಂಡು ಬಂದಿದ್ದರು. ಶಾಲೆಗೆ ಮಕ್ಕಳನ್ನು ಕರೆತರುವ ಅಮ್ಮಂದಿರನ್ನೇನೂ ನೀವಿಲ್ಲ ಕಲ್ಪಿಸಬೇಕಾದ್ದಿಲ್ಲ, ಸಂಜೆ ಹೊತ್ತಿಗೆ ನಗರದ ಶಾಂತ ಓಣಿಗಳಲ್ಲಿ ತಮ್ ತಮ್ಮ ಸಾಕುನಾಯಿಯ ಜೊತೆಗೆ ಕಾಲಾಡಿಸಿ (ವಾಕಿಂಗು) ಬರಲು ಹೊರಡುವ ಟೀ ಶರ್ಟಿನ ಹೆಣ್ ಮಕ್ಕಳನ್ನೂ (ಅವರ ಪೆಟ್ ನಾಯಿಯನ್ನೂ) ಕಣ್ ಮುಂದೆ ತಂದ್ಕಳಿ ಸಾಕು.

ಅಷ್ಟಾಯ್ತಾ, ಇವಾಗ ಮುಂದಿಂದು ಏನಪಾಂದ್ರೆ ನಮ್ಮೂರ್ ಹುಡುಗ್ರು ಆ ಪ್ಯಾಟೆ ಕೂಸ್ಗಳು ಹೇಳಿಕೊಟ್ಟ ಇಂಗ್ಲೀಷ್ ಶ್ಲೋಕಗಳನ್ನು (ರೈಮ್ಸ್ ಅನ್ನಬೇಕಿತ್ತಾ? ಮರೆತೆ) ಆ ಘೇಂಡಾಮೃಗಕ್ಕೆ ಒಪ್ಪಿಸೋ ಟಾಸ್ಕು. ಒಬ್ಬ ಟ್ವಿಂಕಲ್ ಟ್ವಿಂಕಲ್ ಪೂರ್ತಿ ಹೇಳಕ್ಕಾಗದೆ ಪಿಂಕ್ ಪಿಂಕ್ ಅಂದ, ಇನ್ನೊಬ್ಬ ಅಂಥದ್ದೇ ಬಾಲ್ವಾಡಿ ಶ್ಲೋಕವೊಂದನ್ನ ಬಾಯ್ಪಾಠ ಹೇಳಲಾಗದೆ ಪೆದ್ದ್ ಪೆದ್ದಾಗಿ ಚಡ್ಡಿ ಹಿಂಜಿಕೊಳ್ಳುತ್ತ ನಿಂತ. ಅದಷ್ಟಾದ ಬಳಿಕ, ಬೇರ್ ಬೇರೆ ಪ್ರಾಣಿಗಳ ಚಿತ್ರವನ್ನು ಪಟದಲ್ಲಿ ತೋರಿಸಿ ಇಂಗ್ಲೀಷಲ್ಲಿ ಅವುಗಳ ಹೆಸರು ಹೇಳುವುದಕ್ಕೆ ನಿರೂಪಕ ಕೇಳುತ್ತಿದ್ದ. ಆ ಹಳ್ಳಿ ಯುವಕರು ಅದು ತಿಳಿಯದೆ ಮಂಗಾ ಆಗುವುದನ್ನು ನೋಡಿ ಅವರ ಬಿಳೀ ಗೆಳತಿಯರು ನಾಚಿ ನೀರಾಗುವುದೇ ಕ್ಯಾಮೆರಾಕ್ಕೆ ಆಹಾರ. ಇನ್ನೂ ಹಲವಾರು ಪ್ರಶ್ನೆಗಳನ್ನು ಕೇಳಿ ಅವರನ್ನು ’ಹಳ್ಳೀ ಪೆದ್ದೂಸ್’ ಎಂದು ಬಿಂಬಿಸುವ ನಿರೂಪಕ ತನ್ನನು ತಾನು ಹೀರೋ ಅಂತ ಬಿಂಬಿಸಿಕೊಳ್ಳಲು ಹೆಣಗಾಡುತ್ತಿದ್ದ. ಒಟ್ಟಿನಲ್ಲಿ ಅದೊಂದ್ ಮೂರ್ ನಾಲ್ಕು ಜನ ಹಳ್ಳೀ  ಜನರನ್ನಿಟ್ಟುಕೊಂಡು, ಅವರನ್ನು ಧಡ್ಡಾ ದಡ್ಡವಾಗಿ ಬಿಂಬಿಸುವ ಮತ್ತು ಅದನ್ನು ಮನರಂಜನೆಯ ಹೆಸರಿನಲ್ಲಿ ಮಾರಾಟ ಮಾಡುವ ವ್ಯವಸ್ಥಿತ ಕಾರ್ಯಕ್ರಮಕ್ಕೆ ನಿಜಾಯ್ತಿ ತೋರ್ಕೆಯ ಹೆಸರು.

ಸರಿ, ಇದೆಲ್ಲ ಇವತ್ತಿನ ಬೇಡಿಕೆ ಮತ್ತು ಪೂರೈಕೆಯ ಆಧಾರದಲ್ಲಿ ನಡೆಯುತ್ತಿರುವ ಧಂಧೆ ಅಂತ ಸುಮ್ಮನಿರೋಣ ಅಂದ್ರೆ, ಯಾಕೋ ಆ ಕಾರ್ಯಕ್ರಮ ನೋಡ್ತಾ ಇದ್ದಂತೆ ಇದೊಂದು ಸಕಾರಾತ್ಮಕ ಕಾರ್ಯಕ್ರಮ ಎಂದು ಅನ್ನಿಸಲೇ ಇಲ್ಲ. ಸಿದ್ಧಿ ಜನಾಂಗ ಎನ್ನುವುದು ಪೂರ್ಚುಗೀಸರ ಕಾಲದಲ್ಲಿ ಅವರ ಹಡಗುಗಳಲ್ಲಿ ಗುಲಾಮರಾಗಿ ಭಾರತಕ್ಕೆ ಬಂದಿಳಿದು ಕಾಡುಗಳಲ್ಲಿ ಸೇರಿ ಯಾರಿಗೂ ತೊಂದರೆ ಕೊಡದೆ ಬದುಕುತ್ತಿರುವ ಜನಾಂಗ. ಆಧುನಿಕತೆ ಆ ಜನಕ್ಕೆ ಹೊಸದಿರಬಹುದು, ಹಾಗಂತ ಅವರು ಧಡ್ಡರೇನಲ್ಲ. ಇವತ್ತು ಅವರನ್ನು ಬುಡಕಟ್ಟು ಜನಾಂಗದ ಕಲೆಯ ಹೆಸರಿನಲ್ಲಿ ನಾಯಿಕೊಡೆಯಂಥಾ ರೆಸಾರ್ಟುಗಳ elite ಪ್ರವಾಸಿಗರ ಮೋಜಿಗಾಗಿ ಅರೆಬೆತ್ತಲೆ ಕುಣಿಸಲಾಗುತ್ತದೆ. ರಿಯಾಲಿಟಿ ಶೋಗಳಲ್ಲಿ Specimen ಎನ್ನುವಂತೆ ಬಿಂಬಿಸಿ ಹಣ ಮಾಡಲಾಗುತ್ತದೆ. ಭಾಗವಹಿಸುವವರಿಗೆ ಮನಸಿದ್ದರೆ ನಿಮ್ಮದೇನ್ ತಕರಾರು ಎಂದು ನೀವು ಕೇಳಬಹುದು, ಕಾನೂನಿನ ಪ್ರಕಾರ ಇದು ಸರಿಯಾದ ಪ್ರಶ್ನೆಯೇ. ಆದರೆ, ಅವರ ಮುಗ್ಧತೆಯನ್ನು ಆಡಿಕೊಂಡು ನಗುವುದಕ್ಕೆ ಅವಕಾಶ ಕಲ್ಪಿಸುವ ನಮ್ಮ ವಾಹಿನಿಗಳನ್ನು ಪ್ರಶ್ನಿಸುವುದು ಕಾನೂನಿನ ಪ್ರಶ್ನೆಗಿಂತ ಮಾನವೀಯ ಪ್ರಶ್ನೆ ಎನ್ನುವುದು ನನ್ನ ನಿಲುವು. ಇನ್ನೊಂದು ವಿಷ್ಯ ಏನಂದ್ರೆ, ನಮ್ಮ ಓರಾಟಗಾರರ್ಯಾರಿಗೂ ಇದು ಕುಚೋದ್ಯ ಎಂದಾಗಲೀ, ಸಮಾಜದಲ್ಲಿ ಹಿಂದುಳಿದವರ ವಿರುದ್ಧ ಮೇಲ್ವರ್ಗದ ಜನ ಮಾಡುವ ದೌರ್ಜನ್ಯ ಎಂದಾಗಲೀ ಅನ್ನಿಸುವುದಿಲ್ಲ.

ಯಾಕೋ, ಮನರಂಜನೆ ಎನ್ನುವ ಪರಿಕಲ್ಪನೆಯನ್ನೆ ನಮ್ಮ ಮನರಂಜನೆಯ ಮನೆಗಳು ಅಪಾರ್ಥ ಮಾಡಿಕೊಂಡಿವೆ ಅನ್ನಿಸುತ್ತಿದೆ. ಯಾವುದು ಮನರಂಜನೆ? ಸೃಜನಶೀಲವಾದ ಮನರಂಜನೆಯನ್ನು ಸೃಷ್ಟಿಸಲು, ಒಂದೋ ಕಲೆಯಿರಬೇಕು, ಅಥವಾ ಅಸೀಮ ಬುದ್ಧಿವಂತಿಕೆಯಿರಬೇಕು (ಚಾತುರ್ಯ). ಎರಡನೆಯದರ ಕೊರತೆ ಇವತ್ತಿಗೆ ಕಾಡುತ್ತಿದೆ. ಹಾಗಾಗಿಯೇ, ಇನ್ನೊಬ್ಬನನ್ನು ಮಂಗ ಮಾಡಿ ಖುಷಿಪಡುವ ಪರಿಸ್ಥಿತಿ ನಮಗೆ ಬಂದಿದೆ.


ಇಷ್ಟರಮೇಲೂ ನಮ್ಮೂರ ಹುಡುಗರು ಮಂಗಾ ಆಗುವುದನ್ನು ನೋಡಲೇಬೇಕೆಂದಿದ್ದರೆ, ನಿಮ್ಮಿಷ್ಟ ನೋಡಿ J

ಮತ್ತೇನಲ್ಲ, ನಮ್ಮದೇ ವಿಕೃತಿಯನ್ನು ಝಗಾ ಝಗ್ ಬೆಳಕಿನಲ್ಲಿ ನೋಡಿಕೊಂಡಂತೆ ಇದು. 

Monday, August 10, 2015

ಒಲುಮೆಯಿಲ್ಲದ ಕೂಟ : Porn



ಕೇಂದ್ರ ಸರಕಾರದ ಪೋರ್ನ್ ban ನಿರ್ಣಯದ ಕುರಿತಾಗಿ ಬೌದ್ಧಿಕದಾಸ್ಯದ ವಲಯದಿಂದ ಬಂದ ಪ್ರತಿಕ್ರಿಯೆಗಳು ಮತ್ತು ಹಾಹಾಕಾರಗಳು ನನ್ನನು ಬಹುವಾಗಿಯೇ ಕಾಡಿದ್ದುವು, ಆದರೆ ಮತ್ತೇನನ್ನೂ ಬರೆಯಲಾಗದಂತೆ ಕೆಲಸವೊಂದರಲ್ಲಿ ಮಗ್ನವಾಗಿದ್ದೆ. ಇದೀಗ ಸಮಯ ಒದಗಿದೆ. ಬರೆಯದಿರಲಾಗದೆ ಬರೆಯುತ್ತಿದ್ದೇನೆ. 



ಮೊದಲಸಲ ನಾನು ಪೋರ್ನ್ ನೋಡಿದಾಗ ಖರೆಯೂ ಗಾಢವಾಗಿ  ಅನ್ನಿಸಿದ್ದು -“ಪ್ರೇಮವಿಲ್ಲದ ಕಾಮಕ್ಕೆ ಅರ್ಥವೂ, ಅಂದವೂ, ಮಾನವತೆಯೂ ಇಲ್ಲ” ಎಂದು.  ವಿಶ್ವಕ್ಕೆ ಸಂಸ್ಕೃತವು ಕೊಡಮಾಡಿದ ಸಾರ್ವಕಾಲಿಕ ಶ್ರೇಷ್ಠ ಕಾವ್ಯಗಳನ್ನು ಓದಿಕೊಂಡು ಮಾನವ ಪ್ರೇಮದ ಉತ್ಸವವನ್ನು ಮನಸಿನಲ್ಲಿ ಮೂಡಿಸಿಕೊಂಡಿದ್ದ ನನಗೆ, ಕಾವ್ಯಗಳ ಶಬ್ದ ಶರೀರದಲ್ಲಿ ಸ್ತ್ರೀ ಸೌಂದರ್ಯವನ್ನು ಕಲ್ಪಿಸಿಕೊಂಡಿದ್ದ ನನಗೆ, ವಿಪ್ರಲಂಭ ಶೃಂಗಾರದ ವರ್ಣನೆ ಓದಿದ್ದ ನನಗೆ, ಪೋರ್ನ್  ಕೊಡಮಾಡಿದ್ದು ಹಿಂಸೆಯನ್ನು ಮತ್ತು ಹೇವರಿಕೆಯನ್ನಷ್ಟೆ. ಮನುಷ್ಯನ ಮಧ್ಯೆ ಪ್ರೇಮವಿರದ ಬರೀ ಕಾಮದ ಇರವನ್ನೇ ತಿಳಿದಿರದಿದ್ದ ನನಗೆ ಪೋರ್ನ್ ಎಂಬುದು ನಾನು ಕಲ್ಪಿಸಿಯೂ ಇರದಿದ್ದ ಲೋಕವೊಂದನ್ನು ತೆರೆದಿಟ್ಟಿತು. ಪ್ರೇಮದ ಸುಳಿವೇ ಇರದ ಬರಿಯ ಮಾನವ ಕೂಟ ನನಗೆ ಕಾವ್ಯಾತ್ಮಕವೆನ್ನಿಸಲಿಲ್ಲ.

ಬದುಕನ್ನು ಹೆಚ್ಚು ಹೆಚ್ಚು ಜೀವಂತವಾಗಿಸಿಕೊಳ್ಳುತ್ತ, ಹೊರ ಹೊರಗಿನ ತೋರಿಕೆಯಲ್ಲದೆ ಒಳಗಿನ ಸಂವೇದನೆಗೆ ಸ್ಪಂದಿಸುವುದನ್ನು ಕಲಿಸಿಕೊಟ್ಟ ನನ್ನ ಪರಿಸರ, ಪ್ರಕೃತಿ, ಓದಿಕೊಂಡ ಸಾಹಿತ್ಯ ಮತ್ತು ಒದಗಿದ ಪರಿಸ್ಥಿತಿಗಳ ಉನ್ನತಿಯ ಎದುರು ಪೋರ್ನ್ ಎನ್ನುವುದು ಎಲ್ಲೆಂದರೆ ಎಲ್ಲಿಯೂ ಹೊಂದಿಕೆಯಾಗದ ಪ್ರೇತದ ಚಿತ್ರದಂತಿತ್ತು. ಅದೆಂದಿಗೂ ನನಗೆ ಮಾನವೀಯ ಎಂದೆನಿಸಲಿಲ್ಲ. ಆದರೆ, ಅದೇ ಅಮಾನುಷ ತೊಗಲಿನ ಲೋಕದ ನಿರ್ಮಾಣಕ್ಕಾಗಿ ಜಗತ್ತಿನಲ್ಲಿ ಎಷ್ಟು ದೊಡ್ಡ ಹಿಂಸೆಯ, ನರಕ ಸದೃಶ ಲೋಕವನ್ನು ಸೃಷ್ಟಿಸಿಕೊಳ್ಳಲಾಗಿದೆ ಎನ್ನುವುದು ತಿಳಿಯುತ್ತ ಬಂತು. ನಮ್ಮ ದಕ್ಷಿಣಕನ್ನಡ ಜಿಲ್ಲೆಯಿಂದ ವರ್ಷಕ್ಕೆ ಹತ್ತಿಪ್ಪತ್ತರ ಲೆಕ್ಕದಲ್ಲಿ ಮಾಯವಾಗುವ, ಅಡ್ರೆಸ್ಸೇ ಸಿಗದೆ ಹೋಗುವ, ಹೆಣ್ಣುಮಕ್ಕಳು ಅಂಥದೇ ನರಕಕ್ಕೆ ನೂಕಲ್ಪಟ್ಟಿರಬಹುದಲ್ಲವೇ ಅನ್ನಿಸಿದಾಗೆಲ್ಲ ಹಿತ್ತಿಲಲ್ಲೇ ಕೊಳಚೆ ನಿರ್ಮಾಣವಾದ ಅನುಭವ.  ಪ್ರತಿ ವರ್ಷವೊಂದಕ್ಕೆ ಹೆಸರೇ ಇಲ್ಲದ ಕಾಣೆಯಾಗುವ ಹೆಣ್ಣುಮಕ್ಕಳ ವಿಷಯವಾಗಿ ಪೋಲೀಸ್ ಒದಗಿಸಿದ ಅಂಕಿ ಸಂಖ್ಯೆ ನೋಡಿದರೆ ತಲೆ ತಿರುಗುತ್ತದೆ. ಅದರಲ್ಲೂ ಕರ್ನಾಟಕವಂತೂ ದಕ್ಷಿಣಭಾರತಕ್ಕೆ ಈ ವಿಷಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ೨೦೧೪ ರಲ್ಲಿ ಕಾಣೆಯಾದ ೭೮೩ ಹೆಣ್ ಮಕ್ಕಳ ಪತ್ತೆ ಇಂದಿಗೂ ಆಗಿಲ್ಲ. ಇದೆಲ್ಲ ಅಧಿಕೃತ ದಾಖಲಾದ ಸಂಗತಿ. ಇದರ ಹೊರತಾಗಿ ನೇತ್ರಾವತಿಯಲ್ಲಿ ಸಿಗುವ ಅನಾಥ ಶವಗಳು ಯಾವ ಕಾರಣಕ್ಕೆ ಶವಗಳಾದವು ಎನ್ನುವುದು ಎಂದೆಂದಿಗೂ ನಿಗೂಢ. ಮಾನವ ಕಳ್ಳ ಸಾಗಣೆ ಎನ್ನುವುದು ಯಾಕಿಷ್ಟು ಬೆಳೆದಿದೆ? ಮತ್ತದೇ ಪೋರ್ನ್ ಪ್ರಪಂಚಕ್ಕೆ ಬಂದು ನಿಲ್ಲುತ್ತದೆ ಚರ್ಚೆ.

ಖಜುರಾಹೋ ಶಿಲ್ಪಗಳನ್ನು, ಬೇಲೂರಿನ ಶಿಲಾ ಬಾಲಿಕೆಯರನ್ನು, ಹೋಗಲಿ- ಉತ್ತರ ಕನ್ನಡ ಜಿಲ್ಲೆಯ ಸೋದೆ ಅರಸರ ಕ್ಷೇತ್ರಗಳಲ್ಲಿ ಕಾಡಿನೊಂದಿಗೆ ಕಾಡಿನಂತೆ ನಿಂತ ದೇವಾಲಯಗಳ ಭಿತ್ತಿಗಳಲ್ಲಿನ ಚಿತ್ರಗಳನ್ನು ಪೋರ್ನ್ ಗೆ ಹೋಲಿಸುವುದಾದರೆ, ಕಲೆಯನ್ನು ವ್ಯಭಿಚಾರದೊಂದಿಗೆ ತುಲನೆ ಮಾಡಿದಂತೆ. ಕೋಕ ಶಾಸ್ತ್ರವನ್ನು, ವಾತ್ಯ್ಸ್ಯಾಯನನ ಕಾಮಸೂತ್ರವನ್ನು ಇವತ್ತಿನ ಪೋರ್ನ್ ಜೊತೆ ಸಮವಾಗಿ ಕಾಣುವುದೆಂದರೆ ಶಾಸ್ತ್ರೀಯ ಅಧ್ಯಯವನ್ನು ಫಟಿಂಗರ ಪೋಲಿ ಪುಸ್ತಕದೊಡನೆ ತುಲನೆ ಮಾಡಿದಂತೆ. ಅಧ್ಯಯನ ಇರುವ ಯಾರೂ ಈ ಬಗೆಯ ವಾದವನ್ನು ಮಾಡಲಾರರು.  ಇವರೇನಾದರೂ ಮೇಘದೂತವನ್ನೋ, ಮಾಘಕವಿಯನ್ನೋ, ಕುಮಾರಸಂಭವವನ್ನೋ ಓದಿದ್ದಿದ್ದರೆ ಅವೆಲ್ಲ ರತಿ ಚಕೋರಿಗಿಂತ ಭಿನ್ನವಾದ ಸಾಹಿತ್ಯವಲ್ಲ ಎಂದೇ ಬರೆಯುತ್ತಿದ್ದರೇನೋ!

ನಮ್ಮ ಶೃಂಗಾರ ಸಾಹಿತ್ಯದ ಮೊದಲ ಅಂಶವೇ ಒಲುಮೆ. ಒಲಿಸಿಕೊಳ್ಳುವ ಅಂದ, ಒಲಿಯೆನೆನ್ನುವ ಹುಸಿ ಹಠ, ಕೊನೆಗೂ ಒಲಿಯುವ ನಮ್ಯತೆ, ಒಲಿಸಿಕೊಳ್ಳುವ ಪ್ರಕ್ರಿಯೆಯೇ ಸಲ್ಲಾಪವೆನ್ನುವ ಗ್ರಹಿಕೆ- ಈ ಅಂಶಗಳಿಲ್ಲದ ಶೃಂಗಾರ ಕಲ್ಪನೆ ನಮ್ಮಲ್ಲಿಲ್ಲ. ಕಾವವನ್ನು ಮಹಾಪಾಪವೆಂದು ಬಗೆದ, ಸ್ತ್ರೀ ಪುರುಷ ಸಂಯೋಗವನ್ನೇ ಪಾಪದ ಆರಂಭವೆಂದು ತಿಳಿದ ನಾಗರಿಕತೆ ನಮ್ಮದಲ್ಲ. ಒಲುಮೆಯಿಲ್ಲದ ಕಾಮದ ಕುರುಹು ನಮ್ಮಲ್ಲಿ  ಪ್ರಾಯಃ  ಸಿಗಲಾರದು. ಕಾವ್ಯಕ್ಕೆ ಕಾವ್ಯವಾಗುವ ತಾಕತ್ತು ಬರುವುದೇ ಒಲುಮೆಯ ಹಿನ್ನೆಲೆಯಲ್ಲಿ. ಪಾಶುಪತ ಪಡೆಯಲು ಹಿಮಾಲಯ ಬೆಟ್ಟ ಹತ್ತಿದ ಅರ್ಜುನನದೂ ಒಲುಮೆಯೇ. ಒಲಿಸಿಕೊಳ್ಳುವ ತಾಳ್ಮೆಯಿಲ್ಲದ, ಬರಿಯ ಉನ್ಮಾದದ ಯಾವುದೂ ಬದುಕಾಗಲೀ ಕಾವ್ಯವಾಗಲೀ ಆಗದು. ಅಲ್ಲಿಗೆ ಅದಕ್ಕೆ ಬೆಲೆಯೂ ಇರದು. ಒಲುಮೆ ಎನ್ನುವುದು ಸಣ್ಣ ಸಂಗತಿಯಲ್ಲ, ಅದಿಲ್ಲದೆ ಯಾವ ಸಾಧನೆಯೂ ಇಲ್ಲ. ಅದೊಂದು ತಪಸ್ಸು.  ಅಂಥದರಲ್ಲಿ ಒಲುಮೆಯ ಸೆಲೆಯೇ ಇಲ್ಲದ ಬೆತ್ತಲೆ ಮಿಥುನಗಳ ಉದ್ವೇಗ ಮುಖಿಯಾದ ಚಿತ್ರಣ- ಪೋರ್ನ್- ಮಾನವಪರವಾದ ಸಂಗತಿ ಹೇಗಾದೀತು? ಕೆಡುಕಿನ ಕಲ್ಪನೆ ಒಬ್ಬನಿಗೆ ಬೇಕಿದ್ದಲ್ಲಿ ಪೋರ್ನ್ ನೋಡಬಹುದೇನೋ.
ಸಾಮಾನ್ಯರ ಕಲ್ಪನೆಗೆ ನಿಲುಕದೇ ಇರುವಷ್ಟು ಹಿಂಸೆ, ಪಾಶವೀಯತೆ, ಈ ಭೂಮಿಯ ಮೇಲೆ ನಮ್ಮ ಬೃಹತ್ ಮಾನವ ಕುಲದ ಮಧ್ಯೆ ಇದೆ. (ISIS ನೆನಪಾಗುತ್ತದೆ ಇಲ್ಲಿ) ಮತ್ತದೇ ಒಲುಮೆಯಿರದ ಲೈಂಗಿಕತೆಯ ವಿಜೃಂಭಣೆಯೇ ಮಾನವ ಸೃಷ್ಟಿಸಬಹುದಾದ ಹಿಂಸೆಯ ಪರಮ ಪಾತಾಳ ಎಂದು ನನ್ನ ಊಹೆ. ಹಿಂಸೆ ಮತ್ತು ಒಲವಿಲ್ಲದ ಲೈಂಗಿಕತೆ ಇವೆರಡೇ ಭೂಮಿಯ ಮೇಲೆ ನರಕ ಸೃಷ್ಟಿಸಿರುವ ಸಂಗತಿಗಳು, ಮತ್ತಿವು ಪರಸ್ಪರ ಅಂತಃಸಂಬಂಧ ಉಳ್ಳವೂ ಆಗಿವೆ.
ಒಲುಮೆಯ ತಪಸ್ಸಿಗೆ ಕುಳಿತು ಚೈತನ್ಯಯುತವಾದ ಬದುಕು ಬದುಕುವುದಕ್ಕೆ ಭಾರತೀಯ ಪ್ರಜ್ಞೆಯಲ್ಲಿ ದೂಡ್ಡ ಅವಕಾಶ ಇದೆ. ನಮಗಲ್ಲದಿದ್ದರೂ ನಮ್ಮ ಹಿಂದಿನ ಸಾಹಿತ್ಯಕ್ಕೆ ಆ ಉನ್ನತಿಯ ನೆನಪಿದೆ. ಇಂಥ ಶುದ್ಧ ಗಂಗೆಯಂಥಾ ಬದುಕನ್ನು ಬಿಟ್ಟು ಅಚೈತನ್ಯದ, ಸಂವೇದನಾರಹಿತ, ಜೀವ ಕಳೆಯಿಲ್ಲದ ಉದ್ವೇಗದ ಮೇಲಾಟದ ಮಾನವ ಮಿಲನವನ್ನು ಆನಂದಿಸುವ ತುಚ್ಛತೆ ನಮಗೆ ಬೇಕೆ?

ಪೋರ್ನ್ ಉಳಿಯಬೇಕು ಎನ್ನುವವರು ಅದೆಷ್ಟು ಕುರುಡಾಗಿ ವಾದಗಳನ್ನು ಮಂಡಿಸುತ್ತಿದ್ದಾರೆಂದರೆ, ಬಳಕೆ ಸಂಸ್ಕೃತಿಯ Commodity  ಪ್ರಪಂಚದ ದಾಸರೇ ಆಗಿಹೋಗಿದ್ದಾರೋ ಅನ್ನಿಸುವಷ್ಟು. ಅಗತ್ಯವಿದೆ, ಹಾಗಾಗಿ ಪೂರೈಕೆಯೂ ಆಗಲೇ ಬೇಕು ಎನ್ನುವ ವಾದ ಅದು. ಈಗಾಗಲೇ ನಮ್ಮ ಶೋಕಿಗಾಗಿ ನಾವು ಮಾನವತೆಯ ಎಲ್ಲೆಯನ್ನು ದಾಟಿಯಾಗಿದೆ. ಸುಗಂಧಕ್ಕಾಗಿ ಒಂದು ಪ್ರಾಣಿ, ರೆಕ್ಕೆ ಪುಕ್ಕಕ್ಕಾಗಿ ಹಕ್ಕಿ, ಚರ್ಮಕ್ಕಾಗಿ ಹಾವು ಹುಲಿಗಳು, ದಂತಕ್ಕಾಗಿ ಆನೆ... ನಮ್ಮ ಕೊಲೆಗಡುಕತನ ಇನ್ನೂ ವಿಸ್ತಾರವಾಗುತ್ತಲೇ ಇದೆ. ಬಹುಶಃ, ಪೋರ್ನ್ ಇರಲೇ ಬೇಕು ಎನ್ನುವುದು ಇದೇ ಕೊಲೆಗಡುಕತನದ ಇನ್ನಷ್ಟು ವಿಸ್ತಾರವಾದ ಪರಿಧಿ. ಕೊಲೆಗಿಂತಲೂ ಹಿಂಸಾತ್ಮಕವಾದ್ದು ಪೋರ್ನ್. 


ನ್ಯಾಯಾಂಗವಾಗಲೀ ಸರಕಾರವಾಗಲೀ ಪೋರ್ನ್ ಎಂಬ ಹೀನಾಯವನ್ನು ನಿಲ್ಲಿಸುವುದರಲ್ಲಿ ಸಮರ್ಥವಾದರೆ ಅದು ಸ್ವಸ್ಥವಾದ ಹೊಸಯುಗದ ಆರಂಭಕ್ಕೆ ನಾಂದಿಯಾದೀತು.      

Monday, August 3, 2015

ಅರಿಯದ ಶಾಕುಂತಲೆಯ ಅಂತ-ರಂಗ


ನಾಟಕವೆಂದರೆ ಅಭಿಜ್ಞಾನ ಶಾಕುಂತಲೆಯೇ ಎನ್ನುವ ಅರ್ಥದ ಮಾತೊಂದಿದೆ ಸಂಸ್ಕೃತದಲ್ಲಿ. ಅಷ್ಟು ಚೇತೋಹಾರಿಯಾದ ನಾಟಕ ಅದು. ಅದರ ಕರ್ತೃ ಕಾಲಿದಾಸನ ಬಗ್ಗೆಯೂ ’ಕವಿಯೆಂದರೆ ಕಾಲಿದಾಸನಯ್ಯಾ’ ಎನ್ನುವ ಅರ್ಥದ ಮಾತೂ  ಚಾಲ್ತಿಯಲ್ಲಿದೆ. ಅಗ್ರಮಾನ್ಯ ಕವಿಯೊಬ್ಬನ ಅಗ್ರಮಾನ್ಯ ಕೂಸು ಅಭಿಜ್ಞಾನ ಶಾಕುಂತಲ ನಾಟಕ. ಭಾರತೀಯ ಸಾಹಿತ್ಯದ ಗಣನೆಯಲ್ಲಿ ಯಾವಕಾಲಕ್ಕೂ ಬಿಡಲೇ ಆಗದ ಕೃತಿಯದು.


ಅದೇ ನೆರಳಲ್ಲಿ ಆರಂಭಗೊಳ್ಳುವ ಆಧುನಿಕ ಕನ್ನಡ ನಾಟಕ ’ಅನಭಿಜ್ಞ ಶಾಕುಂತಲ’ ಇವತ್ತಿನ ರಂಗಭೂಮಿಯ ಬೆರಗು. ನಿನ್ನೆ ರಂಗಶಂಕರದಲ್ಲಿ ಅನಭಿಜ್ಞಶಾಕುಂತಲದ ೪೯ ಮತ್ತು ೫೦ ನೇ ಪ್ರಯೋಗ ತುಂಬಿದ ಸಭಾಂಗಣದಲ್ಲಿ ಯಶಸ್ವಿಯಾಯ್ತು. ಬದುಕಿನ ಎರಡು ತಾಸು ಕಳೆದಿದ್ದೇ ತಿಳಿಯಲಿಲ್ಲ! ಅಷ್ಟು ಒಪ್ಪ ಓರಣವಾದ ಎಲ್ಲಿಯೂ ಜಾರಿಲ್ಲದ, ಕೊಸರಿಲ್ಲದ ಪ್ರಯೋಗ ಅನಭಿಜ್ಞ ಶಾಕುಂತಲ.

ಡಾ. ಕೆ ವೈ ನಾರಾಯಣ ಸ್ವಾಮಿಯವರ ಕಲ್ಪನೆಯ ಕೂಸು ಅನಭಿಜ್ಞ ಶಾಕುಂತಲ.

ಪಾರಂಪರಿಕವಾಗಿ ಬಂದ ಸಂಸ್ಕೃತ ರಂಗಭೂಮಿಯ ಮಂಗಳಗೀತೆ ’ ಆಂಗಿಕಂ ಭುವನಂ ಯಸ್ಯ...’ (ಭರತಮುನಿಯ ನಾಟ್ಯ ಶಾಸ್ತ್ರ) ಅಂತಲೇ ಶುರುವಾಗುವ ನಾಟಕ, ಸಂಸ್ಕೃತ ನಾಟಕಗಳ ರೀತಿಯನ್ನೇ ಅನುಸರಿಸುತ್ತ ಸೂತ್ರಧಾರನಿಂದ ಶುರುವಾಗುತ್ತದೆ. ಅಭಿಜ್ಞಾನ ಶಾಕುಂತಲವನ್ನು ಆಡಲು ಸಿದ್ಧಗೊಳ್ಳುತ್ತಿದ್ದಂತೆ ಬಂದೆರಗುವ ಅಭಿಜ್ಞಾನದ ಕರ್ತೃ ಕಾಲಿದಾಸನ ಹತ್ಯೆಯ ವಾರ್ತೆ, ನಾಟಕ ಆಡುಗರನ್ನು ತಡೆಯುತ್ತದೆ. ಅಭಿಜ್ಞಾನಕ್ಕಾಗಿ ಸಿದ್ಧವಾದ ವೇದಿಕೆ ನೋವಿನ, ಗಾಬರಿಯ ಬೀಡಾಗಿ ಬದಲಾಗುತ್ತದೆ, ಮತ್ತು ಉದ್ದೇಶಿತ ಪ್ರದರ್ಶನ ಅಲ್ಲಿಗೆ ನಿಲ್ಲುತ್ತದೆ. ಅಲ್ಲಿಂದಲೇ ಅನಭಿಜ್ಞ ಶಾಕುಂತಲ ಶುರುವಾಗುತ್ತದೆ. ಕೃತಿಕಾರ ಬದುಕಿರುವವರೆಗೆ ಸ್ವತಂತ್ರವಾಗಿಲ್ಲದೆ ಕೃತಿಕಾರನ ಮನದ ಭಾವಕ್ಕೆ ಮತ್ತು ವಿಚಾರಕ್ಕೆ ಮಾತ್ರವೇ ದನಿಯಾಗಿದ್ದ ಪಾತ್ರಗಳೆರಡು ಕವಿಯ ಮರಣದಿಂದಾಗಿ ಬಿಡುಗಡೆ ಹೊಂದಿದಂತಾಗಿ ಮಾಯಾಕನ್ನಡಿಯಿಂದೆಂಬಂತೆ ಹೊರಬಂದು ವಾಸ್ತವದೊಳಗೆ ಬೆರೆತು ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸಲು ಶುರುವಿಡುತ್ತವೆ.

ಅಜ್ಞಾತ ಅಮ್ಮನ ಪುತ್ರನಾದ ಕಾಳಿ ಎಂಬಾತ ಕಾಶ್ಮೀರದ ಹಳ್ಳಿಯ ಹಾಡಿಯ ಜನರ ನಡುವೆ ಬೆಳೆದು ಆ ಬೆಳ್ಳಂಬೆಟ್ಟಗಳ, ತಿಳಿ ಮೋಡಗಳ, ನೀಲಿಯಾಗಸವ, ಹರಿವ ನದಿಯ, ಉಲಿವ ಹಕ್ಕಿಗಳ ಕಾಣ್ ಕಾಣುತ್ತ ಕವಿಯಾದ ಕಥೆ ಅದು.  ಉಸಿರೆಲ್ಲವೂ ಕವಿತನವೇ ಆದ ಅವನ ಅಕ್ಷರದ ಮೋಡಿಗೆ, ಸಿರಿಗಾಯನದ ಕೊರಳಿಗೆ ಮರುಳಾದ ಹೆಣ್ಣುಗಳ ಸುತ್ತ ಕಾಳಿಯ ಬದುಕು ಒಂದೊಂದು ಮಹಾಕಾವ್ಯವಾಗಿ ಮೈದಳೆಯುತ್ತದೆ. ಗಂಧರ್ವ ಕನ್ಯೆಯೆಂಬ ಭ್ರಮೆಯ ಮೋಹಕ್ಕೆ ಬಿದ್ದ ಕಾಳಿ ಅವಳನ್ನು ಭೋಗಿಸುತ್ತಾನೆ, ಆಕೆ ಗರ್ಭವತಿಯಾಗುತ್ತಾಳೆ. ಆದರೆ ಇತ್ತ  ಭೋಜನ ಧಾರಾನಗರಿಯೇ ಬಂದು ಕಾಳಿಯನ್ನು ಕೊಂಡೊಯ್ದು ಕಾಳಿದಾಸನೆಂಬ ಅಭಿಧಾನವನ್ನೀಯುತ್ತದೆ. ಬಹುಶಃ ಅಲ್ಲಿಂದ ಕಾಳಿಯ ಬದುಕಿನ ನೋವು ಶುರುವಾಗುತ್ತದೆ. ಅರಳುವುದಕ್ಕೆ ಒತ್ತಾಯಕ್ಕೆ ಒಳಗಾದ ಮೊಗ್ಗಿನ ರೀತಿಯಲ್ಲಿ ಕಾಳಿದಾಸ ರಾಜತ್ವದ ಬಂಧನದಲ್ಲಿ ಬಳಲುತ್ತಾನೆ. ಕಥೆ ಇಲ್ಲೆಲ್ಲ ಬಲು ನಾಟಕೀಯವಾಗಿ ನಡೆದುಕೊಳ್ಳುತ್ತದೆ. ಅದಲ್ಲದೇ ಕೊರಗಿನ ಕಾವ್ಯವಾದ ಮೇಘದೂತವೂ ಸಿದ್ಧವಾಗುತ್ತದೆ. ತನ್ನ ಪ್ರಿಯೆಯ ಪ್ರೇಮವನ್ನು ಹೊಂದಲಾಗದ ನೋವಿನಲ್ಲಿ ಕಾಳಿದಾಸ ತನ್ನ ಗುಡ್ಡ ಕಾಡುಗಳ ಬೆಳ್ಳಿ ಬೆಟ್ಟಗಳ ನಗರಿಗೆ ಪುನಃ ಬರುತ್ತಾನೆ. ಅಲ್ಲಿ ತನ್ನ ಅಭಿಜ್ಞಾನ ಶಾಕುಂತಲೆಯನ್ನು ವಾಚಿಸುತ್ತಿರುವಾಗಲೇ  ಕೈಬೀಸಿನ ಕತ್ತಿಯ ಇರಿತಕ್ಕೆ ಎದೆಯೊಡ್ಡಿ ಕೊನೆಯಾಗುತ್ತಾನೆ. ಕಾಳಿದಾಸನ ನಾಟಕದಿಂದ ಬಿಡುಗಡೆಗೊಂಡು ಕನ್ನಡಿಯಿಂದ ಹೊರಬಂದಂತೆ ಬಂದ ಬಿಂಬಗಳು ಮತ್ತದೇ ಕನ್ನಡಿಯನ್ನು ಸೇರಿಕೊಂಡು ಬರಿಯ ಬಿಂಬಗಳಾಗುತ್ತವೆ.

ಕಾಳಿದಾಸ ಸಾಯುವ ಕವಿಯಲ್ಲ, ಎಲ್ಲರೆದೆಗಳಲ್ಲಿ ಬೆಳಗುವ ಕವಿ.

ಕತ್ತಲೆಯಾಗುವ ಪೂರ್ಣ ರಂಗಮಂದಿರವನ್ನು ಹರ್ಷದ ಚಪ್ಪಾಳೆ ತುಂಬಿಕೊಳ್ಳುತ್ತದೆ.    

ಕೊಲೆ ಮಾಡಿದ್ದು ಯಾರು ಎನ್ನುವುದನ್ನು, ಮತ್ತು ಅಲ್ಲಿನ ಸಂಘರ್ಷವನ್ನು ನಾನಿಲ್ಲಿ ಬರೆದು ನಾಟಕದ ಕುತೂಹಲವನ್ನು ಕೊಲ್ಲಲಾರೆ.

ಪ್ರೇಮ, ಪ್ರೇಮದ ಒಡಲಿನ ಕೂಸಾಗುವ ದ್ವೇಷ, ಬಯಕೆಯ ಬೆನ್ನು ಬೀಳುವ ಹೆಣ್ಣುಗಳು, ಯಾರಿಗೂ ದೊರೆಯದೆ ಹೋಗುವ ಕಾಳಿ, ಕಾಶ್ಮೀರದ ಹಾಡಿಯ ಜೀವಗಳ ಅಭಿಮಾನ ಇವಿಷ್ಟು ಕಥೆಯ ಜೀವ ಬಿಂದುಗಳಾದರೆ ಸಂಗೀತ, ಬೆಳಕು, ರಂಗ ಸಜ್ಜಿಕೆ, ತಾಂತ್ರಿಕತೆ, ನಟನೆಯ ಔಚಿತ್ಯ, ಭಾಷೆಯ ತುಂಬು ಯೌವನ ಸೌಂದರ್ಯ, ಹಾಡುಗಾರನ ಕಂಠ ಮತ್ತು ಸಾಹಿತ್ಯ ಎಲ್ಲವೂ ಉತ್ತಮ ಕೃತಿಯೊಂದನ್ನು ರೂಪಿಸಿವೆ. ಡಾ. ಕೆ ವೈ ನಾರಾಯಣ ಸ್ವಾಮಿಯವರ ಪ್ರತಿಭೆಗೆ ಸರಿಯಾದ ಸಾಥ್ ಕೊಟ್ಟು ಇದನ್ನೊಂದು ಯಶಸ್ವಿ  ನಾಟಕವನ್ನಾಗಿಸಿದ್ದು  ನಿರ್ದೇಶಕ ಪ್ರಕಾಶ್ ಶೆಟ್ಟಿಯವರು. ಪ್ರತಿಭೆ ಈ ನಾಟಕದಲ್ಲಿ ಅದೆಷ್ಟು ದುಡಿದಿದೆ ಮತ್ತು ಅದೆಂತು ಸಫಲವಾಗಿದೆ ಎನ್ನುವುದು ಅರಿವಾಗುವುದಕ್ಕೆ ನಾಟಕವನ್ನೊಮ್ಮೆ ನೀವೇ ನೋಡಬೇಕು.
ಪ್ರಜ್ಞಾ ನವ ನವೋನ್ಮೇಷಶಾಲಿನೀ ಪ್ರತಿಭಾ ಎನ್ನುವುದು ಎಷ್ಟನೆಯದೋ ಬಾರಿಗೆ ನನಗೂ ಖರೆಯೆನ್ನಿಸಿತು. ಕಾಳಿದಾಸನೆಂಬ ಇತಿಹಾಸಿಕ ಸತ್ಯವನ್ನು ಕಲ್ಪನೆಯ ಮಾಯಾ ಬಲೆಯ ಮಧ್ಯೆ ಮರು-ಹೆಣೆಯುವ ಕೌಶಲಕ್ಕೆ ಮಣಿದೆ. ತುಂಬಾ ಪ್ರಭಾವಿಯಾದ ಬರವಣಿಗೆ. ಭಾಷೆಯಂತೂ ಕನ್ನಡದ ಅಂತಃಸತ್ವವೇ ನವಿರೇಳುವಂತೆ ಮನೋಜ್ಞವಾಗಿದೆ.
ಆನಂದದ ಸಂದಾಯವೇ ಕಲೆಯ ಉನ್ನತ ಕಾಣಿಕೆ. ಆ ಮಾತಿಗೆ ಎರಡಿಲ್ಲ.

ಆದರೆ....

ಯಾಕೆ ಇಷ್ಟು ಒಳ್ಳೆಯ ಪ್ರತಿಭೆ ತನ್ನ ಉನ್ನತಿಯನ್ನು ಯಾವುದೋ ಕೆಲಸಕ್ಕೆ ಬಾರದ ಅಜೆಂಡಾದ ಧ್ವನಿಯಾಗುತ್ತದೆ? ಕೀಳಿನ ಸ್ಪರ್ಷವಿಲ್ಲದ ಶುದ್ಧ ಸಾಹಿತ್ಯವನ್ನು ಬರೆಯುವುದಕ್ಕೆ ಶಕ್ತಿಯಷ್ಟೇ ಅಲ್ಲ, ಮನಸಿರಬೇಕು. ರಸದ ಅನುಭೂತಿ ನನ್ನ ಒಳಗಿನ ಖಾಲಿ ಜೇನುಗೂಡನ್ನೆಲ್ಲ ಆವರಿಸಿ ನಿಂತ ಬಳಿಕವೂ ಅಜೀರ್ಣವಾದ ಕೆಲವು ಅಂಶಗಳಿವೆ ನಾಟಕದಲ್ಲಿ ಅಂತ ನನ್ನ ವಿಮರ್ಶಕ ಮನಸಿನ ಅನಿಸಿಕೆ.

ಕಾಳಿದಾಸನೆಂಬ ಕಾವ್ಯಸಂತಾನದ ಬಗ್ಗೆ ಒಮ್ಮತ ಭಾರತೀಯ ವಿದ್ವಾಂಸರಲ್ಲೂ ಪಾಶ್ಚಾತ್ಯರಲ್ಲೂ ಇಲ್ಲ. ನಮ್ಮ ಸಾಹಿತ್ಯ ಸ್ರೋತದ ಮೂಲಭೂತ ಸಮಸ್ಯೆ ಅವುಗಳ ಕಾಲಘಟ್ಟದ್ದು ಮತ್ತು ಕರ್ತೃಗಳ ಜೀವನದ ಕುರಿತಾದ ಪಕ್ಕಾ ನಿರುತ್ತರಕ್ಕೆ ಸಂಬಂಧಿಸಿದ್ದು. ಕಾಳಿದಾಸನೂ ಇದಕ್ಕೆ ಹೊರತಲ್ಲ. ಕಾಳಿದಾಸನ ಕೆಲವು ಕೃತಿಗಳ ಪೂರ್ಣ ಕರ್ತೃ ಕಾಳಿದಾಸನೇ ಅಲ್ಲ ಎಂಬುದರಿಂದ ಹಿಡಿದು, ಒಂದಕ್ಕಿಂತ ಹೆಚ್ಚು ಕಾಳಿದಾಸರು ಇದ್ದರೆಂಬ ಕಥೆಯವರೆಗೂ ಈ ಪ್ರತಿಭಾನ್ವಿತ ಕವಿಯ ಜೀವನದ್ದು ಬರೀ ಊಹಾಪೋಹಗಳೇ ಹೊರತು ಘನವಾದ ಐತಿಹಾಸಿಕ ಆಧಾರವಿಲ್ಲ. ಭೋಜನ ಧಾರಾನಗರಿಯಲ್ಲಿ ಇದ್ದನೆಂದೂ, (ಇಂದಿನ ಮಧ್ಯಪ್ರದೇಶ), ವಿಕ್ರಮಾದಿತ್ಯನ ಆಸ್ಥಾನ ಕವಿಯೆಂದೂ,  ಕಾಶ್ಮೀರದ ಹಿಮಬೆಟ್ಟದ ಮರುಳಿನ ಕವಿಯಾಗಿದ್ದನೆಂದೂ ಕಾಳಿದಾಸನ ಬಗೆಗಿನ ಸಾಮಾನ್ಯ ಅರಿವು. ಕಾಲವಂತೂ ಕ್ರಿ.ಪೂ ಮತ್ತು ಕ್ರಿಶ ಆರನೇ ಶತಮಾನದವರೆಗೆ ಹೊಯ್ದಾಡುತ್ತದೆ. ಇಂತಿಪ್ಪ ಕಾಳಿದಾಸನ ಬದುಕಿನ ಅಜ್ಞಾತ ಕಥೆಯನ್ನು ’ಅನಭಿಜ್ಞ ಶಾಕುಂತಲ’ ಎಂಬ ಹೆಸರಲ್ಲಿ ಅವನ ಕೃತಿಗಳ ಹಿನ್ನೆಲೆ ಕಲ್ಪಿಸಿ ಹೆಣೆಯುವಾಗ ಪ್ರತಿಭೆ ಅದ್ಭುತವನ್ನೇ ಮೆರೆದಿದೆ.

“ಕಾಡಿನಲ್ಲಿ ಮುನಿಗಳು ರಾಜಕುಮಾರರಿಗೆ ಮತ್ತು ಕಾಡು ಜನರ ಮಕ್ಕಳಿಗೆ ಅಕ್ಷರ ಹೇಳಿಕೊಡುವಾಗ ಕದ್ದು ಅದನ್ನೆಲ್ಲ ಆಲಿಸಿ, ಮರಳಿನಲ್ಲಿ ಅವರು ತಿದ್ದಿ ಬಿಟ್ಟಿ ಹೋದ ಅಕ್ಷರಗಳಮೇಲೆಯೇ ತಿದ್ದಿ ಬರೆದು ಕಾಳಿ ಅಕ್ಷರ ಕಲಿತ” ಅಂತ ನಾಟಕದಲ್ಲಿ ಒಂದು ಕಡೆ ಬರುವ ಮಾತು. ಸರಿ. ಕಾಳಿದಾಸ ಅಕ್ಷರ ಕಲಿತದ್ದು ಹಾಗೇ ಎನ್ನುವುದು ಕವಿಯ ಸ್ವಾತಂತ್ರ್ಯ.

ಮುಂದೊಂದು ಕಡೆಗೆ ಕಾಳಿದಾಸ ತನ್ನ ಅನುರಕ್ತೆಯಲ್ಲಿ ಸಂದರ್ಭವೊಂದರಲ್ಲಿ ಉಲ್ಲೇಖಿಸುತ್ತಾನೆ “ಹಾರ್ವ ಪಿಳ್ಳೆಗಳಿಗೆ ತಿಳಿದರೆ ಕಷ್ಟ”- ಎಂದು. ಇಲ್ಲಿ ರಾಜಸಂತಾನಗಳಿಗೆ ಮತ್ತು ಕಾಡು ಜನರ ಮಕ್ಕಳಿಗೆ ಲಭ್ಯವಿದ್ದ ಅಕ್ಷರವಿದ್ಯೆಯನ್ನು ಕದ್ದು ಕೇಳಿಸಿಕೊಂಡು ಕಾಳಿದಾಸ ಬೆಳೆದ ಎನ್ನುವುದಕ್ಕೂ, ಮುಂದೆ ಅದೇ ಕಾಳಿದಾಸ ಹಾರ್ವಪಿಳ್ಳೆಗಳನ್ನು ತನ್ನ ಪ್ರತಿಗಾಮಿಗಳಂತೆ ಕಂಡುದಕ್ಕೂ ಸಾರಾಪೂರ ಹೊಂದಿಕೆಯಾಗುತ್ತಿಲ್ಲ.    ಎಲ್ಲರಿಗೂ ಲಭ್ಯವಿದ್ದ ವಿದ್ಯೆಯನ್ನು ಕದ್ದು ಕಲಿತನೆಂಬುದೂ, ಕೊನೆಯಲ್ಲಿ ಹಾರ್ವರನ್ನು ಅನಗತ್ಯವಾಗಿ ಎಳೆದು ತಂದುದೂ ಒಂದಕ್ಕೊಂದು ವಿರುದ್ಧವಾದ ಸಂಗತಿಗಳು. ಈ ಚರ್ಚೆ ಬೆಳೆದರೆ ಲೇಖಕ ಯಾವುದೋ ಸಮಜಾಯಿಷಿ ಕೊಟ್ಟು ಇದನ್ನು ಸಮರ್ಥಿಸೊಕೊಳ್ಳಬಹುದು. ಆದರೆ ನಾಟಕದ ರಸ ಚೌಕಟ್ಟಿಗೆ, ರೋಚಕತೆಗೆ, ಇದೊಂದು ಮಾತಿನ ಅಗತ್ಯವೇ ಇರಲಿಲ್ಲ. ಅಗತ್ಯ ಇರಲಿಲ್ಲ ಒಂದೇ ಅಲ್ಲ, ಅದು ರಸೋನ್ನತಿಯ ಎದುರು ಮಾನವ ಮನಸಿನ ಕುಬ್ಜತೆ  ಬಯಲಾದಂತೆ.

ಹೀಗೆ ಇತಿಹಾಸದ ಅನಿಶ್ಚಿತ ಸಂಗತಿಗಳನ್ನು ಕಲೆಯ ಕುಂದಣದಲ್ಲಿ ಕಟ್ಟುವ ಪ್ರತಿಭೆಗೆ ವಾದಗಳ ಹೊಗೆ ಅಂಟದೇ ಇದ್ದರೆ ಚೆನ್ನಿತ್ತು ಎಂಬುದೇ ನನ್ನ ನಿಲುವು. ಇದೇ ಬಗೆಯ ಕಾಲದ ಮತ್ತು ಸಂಗತಿಯ ಅನಿಶ್ಚಿತತೆಯನ್ನು ದುಡಿಸಿಕೊಂಡು ಶಂಕರ ಮೊಕಾಶಿ ಪುಣೇಕರರು ಬರೆದ ಕನ್ನಡದ ಮಹತ್ತರ ಕಾದಂಬರಿ “ಅವಧೇಶ್ವರಿ” ನನ್ನ ನೆನಪಿನಲ್ಲಿ ಮಗ್ಗುಲು ಬದಲಿಸಿತು.  ನಾಟಕದ ಆದಿಯಲ್ಲಿ ಗಣೇಶನ ಸ್ತುತಿಯಿಂದ ಆರಂಭಿಸುವ ವಾಡಿಕೆಯನ್ನು ಮುರಿದುದಕ್ಕೇ ಪ್ರತ್ಯಕ್ಷವಾಗುವ ಗಣಪನನ್ನು ಲಘುವಾಗಿ ಚಿತ್ರಿಸಿದರಲ್ಲ, ಅದೊಂದು ವಿಡಂಬನೆಯಂತಿತ್ತಲ್ಲ ಎಂದು ಸಾಂಪ್ರದಾಯಿಕ ಮನಸುಗಳಿಗೆ ಅನ್ನಿಸಲೂ ಬಹುದು, ಆದರೆ ಅಷ್ಟು ಮಾತ್ರದ ವಿಡಂಬನೆಯನ್ನು ಕಲೆಯ ಭಾಗವಾಗಿಯೇ ಸ್ವೀಕರಿಸುವ ಸಾಂಸ್ಕೃತಿಕ ಹಿರಿತನ ಈ ಪರಂಪರೆಗೆ ಇದೆ.
ಅನಭಿಜ್ಞ ಶಾಕುಂತಲ ಅಚ್ಚಾದ ಒಂದು ನೆನಪಿನಂತೆ ಉಳಿದುಕೊಳ್ಳುತ್ತದೆ ನನ್ನಲ್ಲಿ.  


Tuesday, July 14, 2015

ಮರೆಯಲಾಗದ ಸ್ವಪ್ನ.

ಇತ್ತೀಚೆಗೆ ಇನ್ನೊಂದು ಇಂಥಾ ಗ್ರಂಥವನ್ನು ಓದಿರಲಿಲ್ಲ. ಮಾನವ ಜೀವನದ ಗತಿವಿಧಿಯನ್ನು ಸಹಜ ಸರಳವಾಗಿ ಆಡಂಬರವಿಲ್ಲದೆ ಸಾಕ್ಷೀ ಭಾವದಿಂದೆಂಬಂತೆ ದಾಖಲಿಸುತ್ತ, ಯಾವ ತತ್ತ್ವ ಸಿದ್ಧಾಂತದ ಹೇರಿಕೆಯಿಲ್ಲದೆ ಪ್ರಕೃತಿಯ ಇನ್ನೊಂದು ರೂಪೋ ಎಂಬಂತೆ ನಿರೂಪಿತಗೊಳ್ಳುತ್ತ, ೪೭೦ ಪುಟಗಳಷ್ಟು ವಿಸ್ತಾರಕ್ಕೆ ಹಬ್ಬಿಕೊಂಡೂ ಓದುಗನನ್ನು ಹಿಡಿದಿಡುವಲ್ಲಿ ಸೋಲದ ಇನ್ಯಾವುದೇ ಕಾದಂಬರಿಯನ್ನು ನಾನು ಈ ದಿನಗಳಲ್ಲಿ ಓದಿದ್ದಿರಲಿಲ್ಲ.
ಗೋಪಾಲಕೃಷ್ಣ ಪೈ- ಬರೆದ ಸ್ವಪ್ನ ಸಾರಸ್ವತ.



ನಮ್ಮನ್ನು ಅತಿಯಾಗಿ ತಾಕುವ ಕೃತಿಗಳು ಅವುಗಳ ಕಥೆಯ ಹಂದರದಿಂದಾಗಿಯಲ್ಲದೆ, ಕಥೆಯ ನೆವದಲ್ಲಿ ನಡೆಯುವ ಬದುಕಿನ ಶೋಧದ ಕಾರಣಕ್ಕೆ ಶಕ್ತವಾಗಿರುತ್ತವೆ. ಸ್ವಪ್ನ ಸಾರಸ್ವತ ಕೃತಿ ಅಂಥಾ ಕೃತಿಗಳ ಸಾಲಿನಲ್ಲಿ ಮೊದಲಿಗೆ ನಿಲ್ಲಬಹುದಾದದ್ದು. ಕಥೆಯನ್ನು ಗಮನಿಸುವುದಾದರೆ ಸ್ವಪ್ನಸಾರಸ್ವತದ ಕಥೆ ಗೋಜಲು ಗೋಜಲು, ಸಂಬಂಧಗಳ ಕಾಡಿನಲ್ಲಿ ದಿಕ್ಕು ತಪ್ಪಿಸುವಂಥದು. ಆದರೆ, ಸಾರಸ್ವತ ಕುಲದ ವಲಸೆಯಿಂದಾರಂಭಿಸಿ ಕುಲವೇ ಇನ್ನೊಂದೆಡೆಗೆ ನೆಲೆಯಾದಬಳಿಕವೂ ಮತ್ತೆ ನೆಲೆ ಹುಡುಕುತ್ತಲೇ ಇರುವ ಕುಲದ ಒಳ ಅಂಗವಾದ ವ್ಯಕ್ತಿಗಳ, ಅಥವಾ ಕುಲದ ಅವಿನಾಶಿ ಪ್ರಜ್ಞೆಯ ಹರಿವನ್ನು ಅದು ಕಟ್ಟಿಕೊಡುವ ಬಗೆ ಅನನ್ಯವೇ ಸರಿ. ಬರೀ ಒಂದು ಕುಲದ ಕಥೆಯಷ್ಟೇ ಆಗಿರದೆ, ಆ ಹಿನ್ನೆಲೆಯಲ್ಲಿಯೇ ಕಾಲದ ಕಥೆಯೂ ಆಗುವ ಸ್ವಪ್ನ ಸಾರಸ್ವತವೆಂಬುದು ಅತ್ಯಂತ ಶಕ್ತಿಶಾಲಿಯಾದ ಕೃತಿಕಾರನ ಉತ್ಪನ್ನ.

ಗೋವೆಯ ಬ್ರಾಹ್ಮಣರನ್ನು ಹೊರಗಿನಿಂದ ಬಂದ ಕಿರಿಸ್ತಾನರು ಧರ್ಮದ ಅಮಲಿನಲ್ಲಿ ಒಕ್ಕಲೆಬ್ಬಿಸಿದರು, ಹಿಂಸಿಸಿದರು, ಅತ್ಯಾಚಾರ ಗೈದರು, ಕೊಂದರು, ತಿಂದರು..... ರಕ್ತ ಕುದಿಯುವಷ್ಟು ಬರೆದು ಮುಗಿಸಬಹುದಿತ್ತು. ಸಾರಸ್ವತರ ನಂಬುಗೆಗಳು, ಆಚಾರಗಳು, ಜೀವನ ಪದ್ಧತಿ, ಅದರ ಹೆಮ್ಮೆ... ಹೀಗೂ ಬರೆದು ಒಂದು ಕೃತಿ ಮುಗಿಯಬಹುದಿತ್ತು. ಸಮುದಾಯವೊಂದರ ನೋವು, ಸಂಭ್ರಮ, ಹತಾಸೆ, ಆಸೆ, ಸಾವು ಹುಟ್ಟುಗಳ ಕಥೆಯಾಗಿಯೂ ಸಾರಸ್ವತ ಮುಗಿಯಬಹುದಿತ್ತು. ಆದರೆ ಅದೆಲ್ಲವನ್ನೂ ಅಂಶತಃ ಒಳಗೊಳ್ಳುತ್ತ ಮಾನವ ಬದುಕಿನ ಸತ್ಯಗಳನ್ನು ಅರಿಯುವ ಪ್ರಯತ್ನವಿರುವ ಮಹತ್ತರ ಕೃತಿಯಾಗಿ ಸಾರಸ್ವತ ಹರಿಯುತ್ತಿದೆ. ಬದುಕನ್ನು ಸಮಗ್ರವಾಗಿ ನೋಡುವ ಸಾಮರ್ಥ್ಯವಿರುವವರಲ್ಲದೆ, ಬರಿಯ ಬರಹಗಾರನೊಬ್ಬ ಇಂಥಾ ಕೃತಿಯನ್ನು ಬರೆಯಲಾರ.

ನಾನು ಭಾವಿಸುವಂತೆ ಕಾದಂಬರಿಯ ಬೆನ್ನೆಲುಬಾದ ಅಂಶವೆಂದರೆ, ಯಾವೊಂದು ಸಂಗತಿಗೂ ಪೂರ್ತಿ ಅರ್ಪಿತವಾಗಿ ಅದರಲ್ಲಿಯೇ ಲೀನವಾಗದೆ ಅತ್ಯಂತ ದಕ್ಷವಾದ ’ಸ್ಥಿತಿ’ಯೊಂದನ್ನು ಕಂಡುಕೊಂಡುದು. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ- ಬರಿಯ ಅದೃಷ್ಟಕ್ಕಾಗಲೀ, ಯಾವುದೋ ಆದರ್ಶವನ್ನು ಕಾಣಿಸುವ ಒತ್ತಡಕ್ಕಾಗಲೀ, ಇತಿಹಾಸವೆಂಬುದು ಅನ್ಯಾಯ ಎಸಗಿದ ಪಾಪಿ ಎಂಬ ಭಾವಕ್ಕಾಗಲೀ, ಮಾನವಾತೀತವಾದ ಶಕ್ತಿಗಾಗಲೀ, ಅಥವಾ ಪ್ರಕೃತಿಯೆಂಬ ಚಿರಂತನ ಸತ್ಯಕ್ಕೇ ಆಗಲೀ ಕಾದಂಬರಿಯು ತನ್ನೆಲ್ಲ ಮೈ ಅರ್ಪಿಸಿ ಮೈಲಿಗೆಯಾಗಿಲ್ಲ. ಹಾಗಂತ ಅದೆಲ್ಲವನ್ನೂ ಬಿಟ್ಟ ಸೆಕ್ಯುಲರ್ ಕೃತಿಯೂ ಆಗದೆ, ಎಲ್ಲವನ್ನೂ ಹದವರಿತು ಬಳಸಿಕೊಂಡು ’ಬೆನ್ನು ಹುರಿ ಇರುವ” ಅಪರೂಪದ ಕೃತಿಯಾಗಿ ಹೊಮ್ಮಿದೆ. ಯಾವುದೋ ಒಂದು ಸಂಗತಿಗೆ ಅರ್ಪಿತವಾಗುವ ಕೃತಿ- ಅದು ದೇಶಭಕ್ತಿ, ಮಾನವ ಪ್ರೇಮ, ದೈವಿಕತೆ, ನಂಬುಗೆ, ಆಚಾರ, ಇತಿಹಾಸ, ಕರ್ಮ ಸಿದ್ಧಾಂತ ಹೀಗೆ ಯಾವುದೇ ಇರಬಹುದು- ಅಷ್ಟರಮಟ್ಟಿಗೆ ಬದುಕಿನ ಸಮಗ್ರತೆಯನ್ನು ಚಿತ್ರಿಸುವಲ್ಲಿ ಹಿಂದೆ ಉಳಿಯುತ್ತದೆ. ರಸೋನ್ನತಿಯನ್ನು ಸಾಧಿಸುವುದಕ್ಕೆ ಹಾಗೂಂದು ಆನಿಕೆಯನ್ನು ಅರಸುವುದು ಅನಿವಾರ್ಯವೂ ಇರಬಹುದೇನೋ. ಹಾಗಿದ್ದೂ, ತತ್ತ್ವದ ಹುಡುಕಿಗೆ ಹೊರಟ ಕೃತಿಯೊಂದು ರಸದ ಗುಲಾಮಿತನಕ್ಕೆ ಬೀಳದೆ ಇರುವುದೇ ಹೆಚ್ಚು ಪ್ರಶಸ್ತವಾದ್ದು. ಸ್ವಪ್ನ ಸಾರಸ್ವತ ಆ ದಿಶೆಯಲ್ಲಿ ವಿಜೃಂಭಿಸುವ ಕೃತಿ. ಯಾವುದರ ಹೆಗಲ ಮೇಲೆಯೂ ಅತಿಯಾದ ಭಾರ ಹಾಕದೆ ತಾನೇ ತಾನಾಗಿ ಉಳಿಯುವ ಶಕ್ತಿ ಇದರಲ್ಲಿದೆ.

ಇತಿಹಾಸವನ್ನು, ಪ್ರಜ್ಞೆಯ ಒಂದು ತುದಿಯಿಂದ ಇನ್ನೊಂದನ್ನು, ನೆನಪನ್ನು, ಕಥೆಯುದ್ದಕ್ಕೂ ನೇಯ್ದುಕೊಂಡು ಹೋಗುವ ಅದ್ಭುತವಾದ ಪಾತ್ರವೊಂದಿದೆ; ನಾಗ್ಡೋ ಬೇತಾಳ ಎಂಬ ವಿಲಕ್ಷಣ ಪಾತ್ರ ಅದು. ಕಾದಂಬರಿಯ ಯಾವುದೇ ಭಾಗದಲ್ಲಿ ಚಿತ್ರಿತವಾದ ಯಾವೆಲ್ಲ ಬಗೆಯ ದೇವರ ಪರಿಕಲ್ಪನೆಗಿಂತಲೂ ಈ ನಾಗ್ಡೋ ಬೇತಾಳನೆಂಬೋ ಪಾತ್ರ, ಐಹಿಕ ಪಾರಲೌಕಿಕ ಎರಡೂ ಅರ್ಥದಲ್ಲಿ ಶಕ್ತನೆಂದು ನನಗೆ ಅನ್ನಿಸಿತು. ಒಂದರ್ಥದಲ್ಲಿ ಈ ಪಾತ್ರ ಲೌಕಿಕ ಮತ್ತು ಅಲೌಕಿಕಗಳನ್ನು ಬೆಸೆಯುವ ಅಪೂರ್ವ ಕೊಂಡಿಯೂ ಹೌದು. ಅವನಲ್ಲಿ ಬಹುವಾಗಿ ನನ್ನನ್ನು ಸೆಳೆದ ಗುಣವೆಂದರೆ ಆ ಪಾತ್ರದ ಅಪ್ಡೇಟಾಗುವಿಕೆ. ಸಾವೇ ಇರದಂತೆ ಬದುಕಿ ತಲೆ ತಲಾಂತರದ ಪರಂಪರೆಯನ್ನು ತಲೆಮಾರುಗಳಿಗೆ ಸಾಗಿಸುತ್ತ ಪರಂಪರೆಯ ರಕ್ಷಣೆಗೆಂಬಂತೆ ಇರುವ ಆ ಮೂರ್ತಿ, ಇದುವರೆಗೆ ಚಿತ್ರಿತವಾದ ಅತ್ಯಂತ ಪ್ರಸ್ತುತ, ಅಂಗೀಕಾರಾರ್ಹ, ವಾಸ್ತವ ಚಿಂತನೆಯ ದೇವರು! ಶತಮಾನಗಳ ಹಿಂದಿನ ನಿಯಮಗಳ ಕಟ್ಟನ್ನು, ಚಿಂತನೆಯ ಕಟ್ಟನ್ನು ಯಥಾವತ್ತಾಗಿ ಇಂದಿಗೆ ಅನ್ವಯಿಸುವಂತೆ ಹೇರುವ ಕಾಲ್ಪನಿಕ ದೇವರುಗಳಿಗಿಂತ, ಅತ್ಯಂತ ವಾಸ್ತವ ಚಿಂತನೆಯ ನಾಗ್ಡೋ ಬೇತಾಳನು ಹೊಳೆ ಹೊಳೆಯುವ ಮೂರ್ತಿಯಾಗಿ ನನಗೆ ಕಾಣಿಸುತ್ತಾನೆ. ನಿಜವೆಂದರೆ ಕಾದಂಬರಿಯುದ್ದಕ್ಕೂ ಈ ಪಾತ್ರವು ತುಂಬಿದಷ್ಟು ಬೆರಗನ್ನು ಇನ್ಯಾವುದೂ ನನಗೆ ತುಂಬಿಲ್ಲ. ಬೆರಗನ್ನಷ್ಟೇ ಅಲ್ಲ, ಜಿಜ್ಞಾಸೆಯನ್ನೂ, ಚಿಂತನೆಯ ಕಿಡಿಯನ್ನೂ ಬಹುವಾಗಿ ಹೊತ್ತಿಸಿದ ಪಾತ್ರ ನಾಗ್ಡೋ ಬೇತಾಳನದು. ಇಂಥಾ ಪಾತ್ರದ ಪರಿಕಲ್ಪನೆಯೂ, ಹದವರಿತ ಅದರ ದುಡಿಮೆಯೂ, ಕೃತಿಕಾರನಿಗೆ ಒಲಿದುದರ ಬಗ್ಗೆ ನನ್ನಲ್ಲಿ ತೀರದ ಅಚ್ಚರಿಯಿದೆ.

ಚಿರಂತನವಾದ ಚಿಂತನೆಯನ್ನು ತನ್ನೊಳಗೆ ತೆಗೆದುಕೊಳ್ಳುವುದು ಸ್ವಲ್ಪ ಶ್ರಮಪಟ್ಟರೆ ಯಾರಿಗಾದರೂ ಸಾಧ್ಯವಾಗಬಹುದಾದ ಕೆಲಸ. ಅದರೆ ಕಾಲದ ಜೊತೆಯಲ್ಲಿ ಅದನ್ನು ನಿಭಾಯಿಸುವುದಿದೆಯಲ್ಲ, ಅದು ತುಂಬಾ ಮಹತ್ತರವಾದ ಪಕ್ವತೆಯನ್ನು ಬೇಡುವ ತಪಸ್ಸು. ’ಜೀವನ ನೀರ ಮೇಲಣ ಗುಳ್ಳೆ, ದೇಹ ನಶ್ವರ..’ ಎಂಬೆಲ್ಲಬಗೆಯ ವೇದಾಂತ ಸಾರಾಂಶವನ್ನು ಮಿದುಳಿಗೆ ಉಣ್ಣಿಸುವುದು ತುಂಬ ಸರಳವಾದ ಕ್ರಿಯೆ. ಅದೆಲ್ಲವನ್ನು ತಿಳಿದೂ ಬದುಕನ್ನು ಪ್ರೀತಿಸುವುದು, ನಿಭಾಯಿಸುವುದು, ಇವತ್ತಿಗಾಗಿ ಬದುಕುವುದು, ಎಲ್ಲಕ್ಕಿಂತ ಹೆಚ್ಚಾಗಿ ಸಹಜವಾಗಿ ಬದುಕುವುದು ಬಹಳ ದೊಡ್ಡದಾದ ಸಂಗತಿ. ಶತಂಜೀವನಾದ ಒಬ್ಬನಿಗೆ ಜೀವ ಹಿಡಿದಿಕೊಳ್ಳುವುದಕ್ಕೆ ಬೇಕಾದ ಶಕ್ತಿಗಿಂತಲೂ ದೊಡ್ಡ ಮಟ್ಟದ ಶಕ್ತಿ, ಕಾಲವನ್ನು ಅರ್ಥೈಸಿಕೊಂಡು ಅದಕ್ಕನುಗುಣವಾಗಿ ಸ್ಪಂದಿಸುವಾಗ ಇರಬೇಕಾದೀತು ಎಂಬುದು ನನ್ನ ಗ್ರಹಿಕೆ. ಬಹುಶಃ ಮನುಷ್ಯ ಚಿರಂಜೀವಿಯಾದರೆ ಆತ ಹುಚ್ಚು ಹಿಡಿದು ಸಾಯುತ್ತಾನೆ, ಯಾಕೆಂದರೆ ಕಾಲದ ಜೊತೆಗೆ ಅಪ್ಡೇಟಾಗುವ ನಮ್ಮ ಮನಸಿನ ಶಕ್ತಿ ಬಹಳೇ ನಿಯಮಿತವಾದದ್ದು. ನಾಗ್ಡೋ ಬೇತಾಳ ಎಂಬ ನಗ್ನ ಚಿರಂಜೀವಿ ಸನ್ಯಾಸಿ ಈ ಎಲ್ಲ ಕಾರಣಕ್ಕೆ ನನ್ನನ್ನು ಬಹಳವಾಗಿ ಕಾಡಿದ ಪಾತ್ರ. ಕೃತಿಯನ್ನೋದಿ ಮುಗಿದ ಈ ಹೊತ್ತಿಗೂ ನನ್ನಲ್ಲಿ ಆತ ಸಂಚರಿಸುತ್ತಲೇ ಇದ್ದಾನೆ.

ಉಳಿದ ವ್ಯಕ್ತಿ ಪಾತ್ರಗಳು ಕಥೆಯ ಒಳ ಹಂದರವನ್ನು ತುಂಬಿವೆ. ಗೋವೆಯ ಪರಿಸರ, ಕರ್ನಾಟಕದ ಕರಾವಳಿಯ ವಿವರಣೆ, ಜನಸಾಮಾನ್ಯರ ಬದುಕು, ರಾಜಕೀಯ ಪರಿಸ್ಥಿತಿಗಳು, ಭೂಗೋಳದ ಅರಿವು, ಬದುಕಿನ ಶೈಲಿ- ಎಲ್ಲವೂ ಭರಪೂರ ಮಾಹಿತಿಯ ಕಣಜ. ವ್ಯಕ್ತಿಪಾತ್ರಗಳು ಕೆಲವೊಮ್ಮೆ ಏಕತಾನತೆಯನ್ನೂ ತರುತ್ತವೆ. ಕಥೆಯನ್ನು ಬೆಳೆಸದೆ ತಾವೇ ಬೆಳೆಯುವ ಅವುಗಳ ರೀತಿಗೆ ಸಿಟ್ಟೂ ಬರುತ್ತದೆ! ಹಾಗಿದ್ದೂ ಆ ಮಾಹಿತಿಗಾ ಕೃತಿಕಾರ ಪಟ್ಟಿರಬಹುದಾದ ಶ್ರಮ ಸಣ್ಣದಲ್ಲ.   

ಗಾಢವಾಗಿ ಓದುವ ಹುಮ್ಮಸ್ಸಿರುವ ಯಾರೇ ಆದರೂ ಓದಬೇಕಾದ ಗ್ರಂಥ. ಚೂರುಪಾರು ಲೇಖನಗಳು, ವಿಕಿ ಪುಟದ ಮಾಹಿತಿಗಳು, ವಾಟ್ಸಾಪಿನಲ್ಲಿ ಫಾರ್ವರ್ಡ್ ಮಾಡಿದ ತತ್ತ್ವೋಪದೇಶ, ಫೇಸ್ಬುಕ್ಕಿನ ಗೋಡೆ ಗೀಚು, ಬ್ಲಾಗಿನ ಇಣುಕುಗಳು- ಎಲ್ಲವೂ ಆ ಕ್ಷಣಕ್ಕೆ ಚಂದ. ಆದರೆ ಮನಸಲ್ಲಿ ಉಳಿಯುವಂಥ, ಬದುಕಿನೊಡನೆ ಹೆಜ್ಜೆಹಾಕುವ ಓದು ಬೇಕೆಂದರೆ ಸಾರಸ್ವತದಂಥಾ ಕೃತಿಯನ್ನೋದಬೇಕು.

ನನ್ನನು ಈ ಕೃತಿಯನ್ನೋದಿಸಿದ ಎಲ್ಲ ಸಹೃದಯರಿಗೆ ಮನದುಂಬಿದ ಧನ್ಯವಾದ J

Saturday, February 28, 2015

           ಸಂಸ್ಕೃತ ವ್ಯಾಕರಣ; ಕಿರುಪರಿಚಯ

                 ಭಾಗ ಎರಡು.


                 ವ್ಯಾಕರಣದಲ್ಲಿ ಎರಡುಬಗೆಯ ವ್ಯವಸ್ಥಾಪಕರಿದ್ದಾರೆ. ಸಂಜ್ಞಾಸೂತ್ರ ಮತ್ತು ಪರಿಭಾಷಾಸೂತ್ರ ಅಂತ ಅವುಗಳ ಹೆಸರು. ಸಂಜ್ಞಾಸೂತ್ರಗಳೆಂದರೆ ಹೆಸರಿಸುವ ಸೂತ್ರಗಳು, ಉದಾ- ವೃದ್ಧಿ, ಗುಣ- ಇತ್ಯಾದಿ ಹೆಸರುಗಳು ಈ ಸೂತ್ರಗಳ ಕೊಡುಗೆ. ಇನ್ನೊಂದು ಬಗೆಯ ವ್ಯವಸ್ಥಾಪಕರು ಪರಿಭಾಷಾ ಸೂತ್ರಗಳು. ಅಂದ್ರೆ ಇಂತಿಂಥಾ ಕ್ರಿಯೆಯನ್ನು ಹೀಗೇ ಮಾಡಬೇಕು ಎಂಬ ನಿಯಮಗಳನ್ನು ಲೋಕಾಭಿರಾಮವಾಗಿ ಬೋಧಿಸುವ ಸೂತ್ರಗಳು. ಉದಾ- ಸೂತ್ರದಲ್ಲಿ ಎಲ್ಲೆಲ್ಲಿ ಷಷ್ಠೀ ವಿಭಕ್ತಿಯಿರುತ್ತದೋ ಅಲ್ಲೆಲ್ಲ ಆ ವಿಭಕ್ತಿಯನ್ನು ಹೊಂದಿರುವ ಪದಕ್ಕೆ ಸಾಕ್ಷಾತ್ತಾಗಿ ಕಾರ್ಯ ಬರುತ್ತದೆ ಎನ್ನುವುದು. ಇವೆರಡೂ ಬಗೆಯ ಸೂತ್ರಗಳು ಎಲ್ಲಾ ಉಳಿದ ಸೂತ್ರಗಳಿಗೂ ಉಪಕಾರ ಮಾಡುವ ಸ್ವಭಾವದವು. ಸ್ವಯಂ ಯಾವುದೇ ಕ್ರಿಯೆಯನ್ನು ಇವು ಮಾಡವು, ಹಾಗಿದ್ದೂ ಇವುಗಳಿಲ್ಲದೆ ಮತ್ಯಾವುದೇ ಸೂತ್ರವೂ ಕೆಲಸ ಮಾಡದು!

ವ್ಯವಸ್ಥಾಪಕ ಸೂತ್ರಗಳಾಗಿದ್ದರಿಂದ ಅವುಗಳ ಕೆಲಸ ಸೀಮಿತ ಪ್ರದೇಶಕ್ಕಲ್ಲದೆ ಪೂರ್ಣ ಶಾಸ್ತ್ರದಲ್ಲಿ ಇದ್ದಿರುತ್ತದೆಯಷ್ಟೆ. ಹಾಗಾಗಿ ಎರಡೂ ಮನೆಗಳಲ್ಲೂ ಅವು ಬಳಕೆಯಾಗಬೇಕಾದ್ದು ಅನಿವಾರ್ಯ. ಅವಕ್ಕೆ ಈ ಎರಡುಮನೆಗಳ ಅಂಧತ್ವದ ವ್ಯವಹಾರ ಕಟ್ಟಿಕೊಂಡು ಆಗಬೇಕಾದ್ದು ಏನೂ ಇಲ್ಲ!

ಹಾಗಾಗಿ ಅವುಗಳಿಗೋಸ್ಕರ ಮಾಡಿದ ವ್ಯವಸ್ಥೆಯೇ ಕಾರ್ಯಕಾಲ ಪಕ್ಷ ಮತ್ತು ಯಥೋದ್ದೇಶ ಪಕ್ಷ ಎಂಬ ಎರಡು ಸಾಧ್ಯತೆಗಳ ಪರಿಕಲ್ಪನೆ. ಕಾರ್ಯಕಾಲ ಅಂದರೆ ವಿಧಿಸೂತ್ರಗಳು ಕರೆದಲ್ಲಿಗೆ ಹೋಗಿ ವ್ಯವಸ್ಥಾಪಕ ಸೂತ್ರಗಳು ಅವುಗಳಿಗೆ ಅರ್ಥ ಕಟ್ಟುವ ಕೆಲಸ. ಯಥೋದ್ದೇಶ ಅಂದರೆ  ವ್ಯವಸ್ಥಾಪಕರು ಇದ್ದಲ್ಲೇ ಇದ್ದು, ವಿಧಿಸೂತ್ರಗಳು ಬಂದು ಕೇಳಿದಾಗೆಲ್ಲಾ ಅರ್ಥ ಒದಗಿಸುವ ಕೆಲಸ. (ಈ ಬರುವುದು ಇರುವುದು ಹೋಗುವುದು ಎಲ್ಲ ಯಾಕೆ, ಶಬ್ದ ನಿರ್ಮಾಣ ಪ್ರಕ್ರಿಯೆ ನಮಗೆ ತಿಳಿದಿದೆಯಲ್ಲ, ಹಾಗಾಗಿ ಒಂದು ಸೂತ್ರ ಒಂದು ಕಾರ್ಯವನ್ನು ಸ್ಪಷ್ಟವಾಗಿ ಹೇಳಿದರೆ ಸಾಲದೆ? ಎಂಬ ಪ್ರಶ್ನೆ ಬರಬಹುದು. ಹೌದು, ಕೆಲವು ಶಬ್ದಗಳ ಪ್ರಕ್ರಿಯೆ ನಮಗೆ ತಿಳಿದಿದೆ, ಆದರೆ ಶಾಸ್ತ್ರಕ್ಕೆ ತಿಳಿದಿಲ್ಲವಲ್ಲ! ಅದು ಒಂದು ಪ್ರೋಗ್ರಾಮಿನಂತೆ, ಪ್ರತಿಯೊಂದನ್ನೂ ತಾರ್ಕಿಕವಾಗಿ ನಿರ್ಮಾತೃಗಳೇ feed ಮಾಡಬೇಕು. ಎಷ್ಟೇ command ಕೊಟ್ಟರೂ ಸ್ವಯಂ ಯೋಚಿಸುವ ಶಕ್ತಿ command ಗಳಿಗೆ ಇಲ್ಲ, ಅವೆಲ್ಲ ಒಂದು ನಿರ್ದಿಷ್ಟ ಕೋನದಲ್ಲಿ ಸೇರಿದಾಗ ಪ್ರತಿಕ್ರಿಯೆಯೊಂದನ್ನು ಹೊಮ್ಮಿಸುತ್ತವೆ; ಹಾಗೆಯೇ ಸೂತ್ರಗಳು! ಲೋಕಾಭಿರಾಮವಾಗಿ ಮಾತಾಡುವಾಗ ’ಇಕೋ ಯಣಚಿ’ ಸೂತ್ರದಿಂದ ಯಣ್ ಕಾರ್ಯ ವಿಧಾನವಾಗುತ್ತದೆ ಎಂದುಬಿಡುತ್ತೇವೆ. ಆದರೆ ನಿಜವಾಗಿ ಆ ಕಾರ್ಯವನ್ನು ಸಾಧಿಸುವುದಕ್ಕೆ ಇದೊಂದು ಸೂತ್ರಕ್ಕೆ ಕನಿಷ್ಟ ಐದಾರು common command ಗಳ ಅಗತ್ಯ ಇದೆ. ಯಣ್ ಎಂದರೆ ’ಯವರಲ’’ ವರ್ಣಗಳು ಎಂದು ಹೇಳಿದವರ್ಯಾರು? ಅದನ್ನೂ command ಮೂಲಕ ಹೇಳಿಯೇ ಅರ್ಥ ಮಾಡಿಸಬೇಕು ನಮ್ಮ ತಂತ್ರಾಂಶಕ್ಕೆ, ಅದು ಯೋಚಿಸಲಾರದು, ಅದು ಕಥೆಯ ಪಾತ್ರದಂತೆ ಅಲ್ಲ! ಸ್ವಯಂ ಅರ್ಥಪೂರ್ಣತೆ ಯಾವುದೇ ವಿಧಿಸೂತ್ರಕ್ಕೆ ಇಲ್ಲ. ಈ ದಿಕ್ಕಿನಲ್ಲಿ ನೋಡಿದಾಗ ಪಾಣಿನಿವ್ಯಾಕರಣವನ್ನು ಓದುವಾತ ಪೂರ್ತಿ ಹೊಸದೇ ಆದ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇದೊಂದು ತಂತ್ರಾಂಶ ಮಾನವ ಮಿದುಳಿಗೆ install ಆಗಲು ಹೊಸದೇ ಅದರ ಅಗತ್ಯ ಇದೆ. ದುರದೃಷ್ಟವೆಂದರೆ ಆ ಮನಸ್ಥಿತಿ ನಿರ್ಮಾಣ ಇವತ್ತಿನ ವ್ಯವಸ್ಥೆಯಲ್ಲಿ ಬಹುತೇಕ ಸಾಧ್ಯವಾಗುತ್ತಿಲ್ಲ. )   

ಯಾಕೆ ಎರಡು ಪಕ್ಷ?

ಈ ಎರಡು ಪಕ್ಷಗಳ ದೃಷ್ಟಿಯ ಬಗ್ಗೆ ಒಂದು ನಿದರ್ಶನವಿದೆ. ಎರಡು ವಿದ್ಯಾರ್ಥಿಗಳಿದ್ದಾರೆ ಅದರಲ್ಲೊಬ್ಬ ಕುಶಾಗ್ರಮತಿ, ಮತ್ತು ಇನ್ನೊಬ್ಬ ಸಾಮಾನ್ಯಮತಿ ಎಂದುಕೊಳ್ಳೋಣ. ಅವರಿಬ್ಬರಿಗೂ ಗುರುಗಳು ಅಷ್ಟಾಧ್ಯಾಯಿ ಸೂತ್ರಗಳನ್ನು ಹೇಳಿಕೊಡುತ್ತಿದ್ದಾರೆ ಅಂದುಕೊಂಡರೆ, ಕ್ರಮಪ್ರಾಪ್ತವಾದ ಸಂಜ್ಞಾ ಮತ್ತು ಪರಿಭಾಷಾ ಸೂತ್ರಗಳನ್ನು ಹೇಳಿದಾಗ ಅವರ ಚಿಂತನೆ ಹೀಗಿರುತ್ತದೆ-

೧. ಕುಶಾಗ್ರಮತಿ- ಯಾವುದೇ ಕಾರ್ಯವನ್ನು ವಿಧಿಸದ ಈ ಸೂತ್ರಗಳಿಗೆ ಏನು ಕೆಲಸ, ಮತ್ತಿವುಗಳ ಅರ್ಥವೇನು?
೨. ಸಾಮಾನ್ಯಮತಿ- ಗುರುಗಳು ಹೇಳಿದ್ದಾರೆ ಅಂದರೆ ಈ ಸೂತ್ರಗಳಿಗೆ ಇಲ್ಲಿ ಸಧ್ಯಕ್ಕೆ ಕೆಲಸವಿರದಿದ್ದರೂ ಮುಂದೆಂದೋ ಕೆಲಸ ಬಂದೀತು, ಆಗ ನೋಡಿಕೊಂಡರೆ ಸಾಕು.

ಮೊದಲನೆಯವನ ತಲೆಯಲ್ಲಿ ಎಲ್ಲಿ ಏನು ಹೇಗೆ ಯಾಕೆ ಎಂಬ ಆಕಾಂಕ್ಷೆ (ಪ್ರಶ್ನರೂಪ) ಇದೆ, ಇದು ಕಾರ್ಯಕಾಲ ಪಕ್ಷ. ಆದರೆ ಎರಡನೆಯವನ ತಲೆಯಲ್ಲಿ ಇದೇನಿಲ್ಲ, ಅವನದು ಇರುವುದನ್ನು ಇರುವಂತೆ ಅರಿವಾಗಿಸಿಕೊಂಡು ಸುಮ್ಮನಾಗುವ ಮನಃಸ್ಥಿತಿ. ಇದು ಯಥೋದ್ದೇಶ ಪಕ್ಷ.

ಈ ನಡುವೆ ಇನ್ನೊಂದನ್ನು ಅರಿವಾಗಿಸಿಕೊಳ್ಳಬೇಕು. ಅದೇನೆಂದರೆ-
ಮನೆಯ ಸದಸ್ಯರ ವಿಳಾಸದ ಬಗ್ಗೆ ಹೇಳಿದೆನಲ್ಲ, ಅದೆಷ್ಟು ಸೂಕ್ಷ್ಮವೆಂದರೆ- ಅದನ್ನೆಂದಿಗೂ ಅಲಕ್ಷ್ಯ ಮಾಡುವಂತಿಲ್ಲ. ಅವುಗಳ ಕ್ರಮಸಂಖ್ಯೆಯೂ ಮುಖ್ಯ, ಯಾಕೆಂದರೆ ಒಂದೇ ಕಾರ್ಯದ ವಿಷಯದಲ್ಲಿ ಹಿಂದಿನ ಸೂತ್ರ ಹೇಳಿದ್ದಕ್ಕಿಂತ ಮುಂದಿನ ಸೂತ್ರ ಹೇಳಿದ್ದಕ್ಕೆ ಹೆಚ್ಚು ಬೆಲೆ, ಅದೇ ಊರ್ಜಿತವಾಗಿ ನಿಲ್ಲುತ್ತದೆ.

ಅಷ್ಟಾಧ್ಯಾಯಿಯ ಹಿರಿಮನೆಯಲ್ಲಿಯೇ ಎಲ್ಲ ಸಂಜ್ಞಾಸೂತ್ರಗಳೂ ಪರಿಭಾಷಾ ಸೂತ್ರಗಳೂ ಹೇಳಲ್ಪಟ್ಟಿವೆ. ಕಿರಿಮನೆಯಲ್ಲಿ ಇರುವುದೆಲ್ಲ ವಿಧಿಸೂತ್ರಗಳು ಮಾತ್ರ. ಇದೀಗ ಒಂದು ಕಲ್ಪನೆ ಮಾಡಿಕೊಳ್ಳೋಣ...

ಕಿರಿಮನೆಯಲ್ಲಿರುವ ಯಾವುದೋ ವಿಧಿಸೂತ್ರಕ್ಕೆ ಪರಿಭಾಷೆಯೊಂದರ ಅಗತ್ಯವಿದೆ, ಮತ್ತು ಆ ಪರಿಭಾಷೆ ಅವಶ್ಯವಾಗಿಯೂ ಹಿರಿಮನೆಯಲ್ಲಿಯೇ ಇದೆ. ಹಿರಿಮನೆಯಲ್ಲಿರುವ ಆ ಪರಿಭಾಷೆಗೆ ಮೊದಲೇ ಮಾಡಿಕೊಂಡ ನಿಯಮದ ಪ್ರಕಾರ ಈ ಕಿರಿಮನೆಯಾಗಲೀ, ಅಲ್ಲಿರುವ ಸೂತ್ರವಾಗಲೀ, ಆ ಸೂತ್ರದ ಅಗತ್ಯವಾಗಲೀ ಕಾಣಿಸುವುದೇ ಇಲ್ಲ. ಹೀಗಿರುವಾಗ ವ್ಯವಸ್ಥೆ ಹೇಗೆ!? ಸಂಜ್ಞಾ ಸೂತ್ರಕ್ಕೂ ಅಷ್ಟೇ, ಕಿರಿಮನೆ ಕಾಣಿಸುವುದಿಲ್ಲ!

ಈ ಹಂತದಲ್ಲಿ ಅವ್ಯವಸ್ಥೆಯಾಗದೆ? ಹಿರಿಮನೆಯ ಸೂತ್ರಗಳಿಗೆ ಸಂಸ್ಕಾರ ಪೂರ್ತಿಯಾಗದೆ ಹೋಗುವ ಸಂದರ್ಭ ಈಗ! ಹಾಗಾಗಿಯೇ ಪರಿಭಾಷೆಯೆಂಬುದು ನಡುಮನೆಯ ಹೊಸಿಲಲ್ಲಿ ಹಚ್ಚಿಟ್ಟ ದೀಪದಂತೆ, ಅದು ಇದ್ದಲ್ಲೇ ಇದ್ದು ಇಡೀ ಮನೆಗೆ (ನಮ್ಮ ಉದಾಹರಣೆಯಲ್ಲಿ ಎರಡು ಮನೆಗೂ ಬೆಳಕು ಕೊಡುತ್ತದೆ ಎಂದಾಗಬೇಕು) ಬೆಳಕು ಕೊಡುತ್ತದೆ ಎಂದು ಭಾಷ್ಯಕಾರರು ಬರೆಯುತ್ತಾರೆ. (ಇದಕ್ಕೆ ದೇಹಲೀ-ದೀಪ-ನ್ಯಾಯ ಅಂತ ಹೆಸರು. ದೇಹಲೀ ಎಂದರೆ ಮನೆಯ ಹೊಸ್ತಿಲು ಎಂದರ್ಥ. ದೆಹಲಿ ನಗರಿಗೆ ಈ ಹೆಸರು ಬಂದಿರುವುದೂ ಈ ಅರ್ಥದಲ್ಲಿ ಇದ್ದೀತು). ಪರಿಭಾಷೆಗಳ ವಿಷಯದಲ್ಲಿ ಇದೊಂದೇ ಮಾತು, ಪರಿಭಾಷೆ ಎಂಬ ವ್ಯವಸ್ಥಾಪಕಸೂತ್ರವು ಕಾರ್ಯಕಾಲ ಮತ್ತು ಯಥೋದ್ದೇಶ ಎಂಬೆರಡೂ ಪಕ್ಷಗಳಲ್ಲಿ ತಾನಿದ್ದಲ್ಲಿಯೇ ಇದ್ದು ವಿಧಿ ಸೂತ್ರಗಳನ್ನು ಉಪಕರಿಸುತ್ತದೆ.

ಸಂಜ್ಞಾ ಸೂತ್ರದ್ದು ಮಾತ್ರ ಬೇರೆ ಪರಿಸ್ಥಿತಿ. ಅದು ಯಥೋದ್ದೇಶ ಪಕ್ಷದಲ್ಲಿ ತಾನಿದ್ದಲ್ಲಿಯೇ ಇದ್ದು ಬಂದವರಿಗೆಲ್ಲ ಸಹಾಯ ಮಾಡಿ ಕಳಿಸುತ್ತದೆ, ಆದರೆ ಕಾರ್ಯಕಾಲ ಪಕ್ಷದಲ್ಲಿ ಕರೆದಲ್ಲಿಗೆ ಹೋಗಲೇ ಬೇಕಾದ ಪರಿಸ್ಥಿತಿ. ಹಾಗೆ ಹೋದಾಗ ಸಮಸ್ಯೆ ಉದ್ಭವವಾಗುತ್ತದೆಯಲ್ಲವೆ? ಉದಾ- ಯಾವುದೋ ಸೂತ್ರಕ್ಕೆ ಸಹಾಯ ಮಾಡಲೆಂದು ಹಿರಿಮನೆಯ ಸಂಜ್ಞಾಸೂತ್ರವೊಂದು ಕಿರಿಮನೆಗೆ ಹೋಯ್ತು ಅಂದುಕೊಳ್ಳುವಾ. ಅಲ್ಲಿಗೆ ಹೋಗಿ ಅಲ್ಲಿನ ವಿಧಿ ಸೂತ್ರದೊಂದಿಗೆ ಸೇರಿ ತನ್ನ ಅರ್ಥವನ್ನೂ ಕಂಡುಕೊಳ್ಳುವುದರಿಂದ ಸಂಜ್ಞಾಸೂತ್ರವೂ ಅಲ್ಲಿಯದೇ ಸೂತ್ರವಾಗುತ್ತದೆ, ಹಾಗಾದಾಗ ವಿಳಾಸ ಬದಲಾಗುತ್ತದೆ. ವಿಳಾಸ ಬದಲಾಯಿತೆಂದರೆ ವ್ಯವಸ್ಥೆ ಕೆಡುತ್ತದೆ. ಇನ್ಯಾವುದೋ ಸಂಜ್ಞಾಸೂತ್ರಕ್ಕಿಂತ ಪ್ರಸ್ತುತ ಸಹಾಯಕ್ಕೆಂದು ಹೋಗಿರುವ ಸಂಜ್ಞಾಸೂತ್ರವೇ ಮುಂದಿನದಾಗಿ ಬದಲಾದರೆ ಎದುರಾಗಬಹುದಾದ ಸಮಸ್ಯೆಗಳು ಒಂದೆರಡಲ್ಲ. ಹಾಗೆಯೇ ಬದಲಾಗಬೇಕಾಗಿರುವುದೇ ಅಪೇಕ್ಷಿತ ಬದಲಾವಣೆಯಾಗುವ ಸಂದರ್ಭವೂ ಇಲ್ಲವೆಂದಿಲ್ಲ. ಇಲ್ಲಿ ಬಹು ವಿವೇಚನೆಯಿಂದ ಯಥೋದ್ದೇಶ ಮತ್ತು ಕಾರ್ಯಕಾಲ ಪಕ್ಷಗಳನ್ನು ಆಯ್ದುಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಲಾಗುತ್ತದೆ.

ಹೀಗೆ ವ್ಯವಸ್ಥಾಪಿತವಾದ ಎರಡು ಪಕ್ಷಗಳನ್ನು ಪೂರ್ಣ ವ್ಯಾಕರಣದಲ್ಲಿ ಕಾರ್ಯಸಿದ್ಧಿಗಾಗಿ ಉಪಯೋಗಿಸಲಾಗುತ್ತದೆ. ಪಕ್ಷಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದಕ್ಕೆಂದೇ ಎರಡು ಪರಿಭಾಷೆಗಳನ್ನು ಭಾಷ್ಯದಲ್ಲಿ ಪರಿಕಲ್ಪಿಸಲಾಗಿದೆ! ಅವು ಚೇಂಜ್ ಓವರ್ ಸ್ವಿಚ್ ಇದ್ದಂತೆ. ಅಗತ್ಯಬಿದ್ದಾಗ ಯಥೋದ್ದೇಶ ಪಕ್ಷ, ಅಗತ್ಯಬಿದ್ದಾಗ ಕಾರ್ಯಕಾಲಪಕ್ಷ ಎನ್ನುವುದು ಅದರ ಹಿಂದಿನ ತತ್ತ್ವ. ಇಲ್ಲಿ ಸ್ವಿಚ್ ಬದಲಾವಣೆ ಮಾಡುವ ಅವಕಾಶವಿದೆಯೇ ಹೊರತು ಆಯಾ ಸ್ವಿಚ್ ಬದಲಾಯಿಸಿದಾಗ ಆಗುವ ನಿರ್ದಿಷ್ಟ ಪರಿಣಾಮಗಳನ್ನು ತಡೆಯಲಾಗದು. ಇಡೀ ಶಾಸ್ತ್ರವನ್ನು ಎಲ್ಲಿಯೂ ಅತಿವ್ಯಾಪ್ತಿ ಅವ್ಯಾಪ್ತಿ ಅಸಂಭವಗಳಾಗದಂತೆ ಈ ವ್ಯವಸ್ಥೆಯಲ್ಲಿ ಅಳವಡಿಸುವ ಬುದ್ಧಿ ಕೌಶಲ ಎಂಥದ್ದಿರಬಹುದು!!

ಹೀಗೆ ಭಾಷೆಯ ಸಂರಚನೆಯ ಮೂಲಸ್ವರೂಪವನ್ನು ಅರ್ಥೈಸಿಕೊಂಡು, ಅದಕ್ಕೆ ತಕ್ಕುದಾದ ಸೂತ್ರಗಳನ್ನು ಹೆಣೆದಿದ್ದು ಬರೀ ಒಂದು ಜೀವಮಾನದಲ್ಲಿನ ಮಾನವ ಸಾಧನೆಯಲ್ಲ. ಪಾಣಿನಿಮಹರ್ಷಿಗಳಿಗಿಂತಲೂ ಹಿಂದೆಯೇ ಆಗಿ ಹೋದ ಹಲವಾರು ವೈಯಾಕರಣರಿದ್ದಾರೆ. ಆದರೆ ಈ ಬಗೆಯ ಸ್ವಿಚ್ ಪರಿಕಲ್ಪನೆ, ಎಲ್ಲಿಯೂ ನಿಯಮಬಾಹಿರವಾಗದ ವ್ಯವಸ್ಥೆಯ ಸಂಯೋಜನೆ ಪಾಣಿನಿವ್ಯಾಕರಣದ ಅನನ್ಯ ಅಂಶ. ಅರ್ಥಕ್ಕಾಗಿ  ಬಳಕೆಯಾಗುವ ಶಬ್ದಗಳನ್ನು ಅರ್ಥದ ಬಂಧನದಿಂದ ಮುಕ್ತಗೊಳಿಸಿ, ಅದನ್ನೊಂದು ದ್ರವ್ಯವಾಗಿ ಪರಿಗಣಿಸಿ ವ್ಯಾಕರಣವು ಕೆಲಸ ಮಾಡುತ್ತದೆ. (ಅರ್ಥದಿಂದ ಪದಗಳನ್ನು ಪ್ರತ್ಯೇಕಿಸುವುದಕ್ಕೂ ಸೂತ್ರವಿದೆ!)

ವ್ಯಾಕರಣದ ಒಳಹೊಕ್ಕಾಗ ಅದು ಕ್ಲಿಷ್ಟ ಎನ್ನುವ ಭಾವನೆ ಬಂದರೆ ಸಹಜವೇ. ನನ್ನ ಇದುವರೆಗಿನ ಅನುಭವದಂತೆ ವ್ಯಾಕರಣದ ಒಳಹೊಗುವ ನಿಟ್ಟಿನಲ್ಲಿ ಇವತ್ತಿನ ಅಧ್ಯಯನ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ. ಅತ್ಯಂತ ಮೂಲಭೂತವಾದ ಸಂಶಯಗಳನ್ನು ಪರಿಹರಿಸದೆ ವ್ಯಾಖ್ಯಾನಕ್ಕೆ ಇಳಿಯುವ ಅಧ್ಯಯನ ಶೈಲಿ ಸರಿಯಾದುದಲ್ಲ. ಇದು ಹೇಗಿದೆಯೆಂದರೆ- 
ವ್ಯಾಕರಣವೇ ಹೇಳುವಂತೆ ವ್ಯಾಕರಣದ ಕುರಿತಾಗಿ ಎರಡು ಬಗೆಯ approach ಇದೆ.

೧. ಲಕ್ಷ್ಯೈಕಚಕ್ಷುಷ್ಕತೆ- ಶಬ್ದಶಃ ಅರ್ಥ- ಗುರಿಯೆಡೆಗೆ ನಟ್ಟ ದೃಷ್ಟಿ.      
೨. ಲಕ್ಷಣೈಕಚಕ್ಷುಷ್ಕತೆ- ಶಬ್ದಶಃ ಅರ್ಥ- ಗುರಿಯೆಡೆಗೊಯ್ಯುವ ದಾರಿಯಮೇಲೆ ನಟ್ಟ ದೃಷ್ಟಿ.

 ವ್ಯಾಕರಣದ ವಿಷಯದಲ್ಲಿ ಇದೆರಡು approach ಇವೆ. ಮೊದಲನೆಯದು ಇವತ್ತಿನ ಯಾರಿಗೂ ಇರಲು ಸಾಧ್ಯವಿಲ್ಲದ, ಪಾಣಿನಿ ಮತ್ತು ಅವರ ಎತ್ತರಕ್ಕಿರುವ ವಿದ್ವಾಂಸರಿಗೆ ಮಾತ್ರ ಸಾಧ್ಯವಾಗುವ ದೃಷ್ಟಿ. ಶಬ್ದಗಳ ನಿಜವಾದ ಸ್ವರೂಪ ಅವರಿಗೆ ತಿಳಿದಿದೆ, ಹಾಗಾಗಿ ಶಬ್ದಗಳ ಅಗತ್ಯಕ್ಕೆ ತಕ್ಕಂತೆ ಶಾಸ್ತ್ರವನ್ನು (ಸೂತ್ರಗಳನ್ನು) ನಿರ್ಮಿಸಿದರು ಆ ಮಹಾತ್ಮರು. ಆದರೆ ಆ ಪರಂಜ್ಞಾನ ನಮಗೆಲ್ಲಿ ಬರಬೇಕು!? ಹಾಗಾಗಿ ಸಾಮಾನ್ಯರಾದ ನಾವೆಲ್ಲ ಎರಡನೆಯ ವರ್ಗದ ಜನ; ಸೂತ್ರಗಳೆಂಬ ದಾರಿಯ ಮೂಲಕ ಸಾಗಿ ಪದದ ಸ್ವರೂಪವನ್ನು ಅರಿಯುವವರು. ದಾರಿಯ ಮೇಲೆ ನಟ್ಟ ನೋಟ ನಮ್ಮದು.
ಇದೇ ನಮ್ಮ ಸಮಸ್ಯೆ! ದಾರಿಗಳು ಸದಾ ಗೋಜಲು, ಗೊಂದಲ ತರುತ್ತವೆ. ಇದಕ್ಕೊಂದು ನಿದರ್ಶನ ಕೊಡುತ್ತೇನೆ-

೧. ಮೊದಲನೆಯವರು ನಗರವೊಂದನ್ನು ಗೂಗಲ್ ಅರ್ಥ್ ತಂತ್ರಾಂಶದಲ್ಲಿ ಗಗನದ ಮೂಲಕ ನೋಡುತ್ತಿರುವಂತೆ ನೋಡುತ್ತಿದ್ದಾರೆ. ಅವರಿಗೆ ಆ ಮಾರ್ಗಗಳು, ಅವುಗಳ ಕವಲು, ಅವುಗಳ ಬದಲೀ ವ್ಯವಸ್ಥೆ ಎಲ್ಲವೂ ನಿಚ್ಚಳ, ಸರಾಗ.

೨. ಎರಡನೆಯವರಾದ ನಾವು ಅದೇ ಗೂಗಲ್ ಅರ್ಥ್ ತಂತ್ರಾಂಶದಲ್ಲಿ ಪೂರ್ತಿ ಝೂಮ್ ಮಾಡಿ street view ಅಯ್ಕೆಯನ್ನು ಮಾಡಿಕೊಂಡವರಂತಿದ್ದೇವೆ. ನಮಗೆ ಆ ನಗರ ಸಾಗರದಂತೆ; ಸಾವಿರ ದಾರಿಗಳ ಗೋಜಲಿನಲ್ಲಿ ಗಲಿಬಿಲಿಯಾಗಿದ್ದೇವೆ.  
ಅಕ್ಷರಶಃ ನಮ್ಮದು ಈ ಅವಸ್ಥೆ. ಮೇಲಿನಿಂದ ಎಲ್ಲವನ್ನೂ ಒಂದು ಪೂರ್ಣ ವ್ಯವಸ್ಥೆಯಂತೆ ನೋಡಲು ಸಾಧ್ಯವಾಗುವವನಿಗೆ ಕಾರ್ಯಕಾಲ ಪಕ್ಷ ಅಥವಾ ಯಥೋದ್ದೇಶ ಪಕ್ಷ ಎಂಬುದು ಗೊಂದಲವಲ್ಲ. ಆದರೆ ಅದು ಸಾಧ್ಯವಾಗದಿದ್ದಾಗ ಶಾಸ್ತ್ರ ಕಠಿಣವೆನ್ನಿಸುತ್ತದೆ.

ನನ್ನ ಸಮಸ್ಯೆ ಏನಪ್ಪಾಂದ್ರೆ.......

ತನಗೆ ಬೇಕಾದ ಸ್ವಿಚ್ ಬಳಸಿ ಉದ್ದೇಶಿತ ಕಾರ್ಯವನ್ನು ಸಾಧಿಸುವ ವ್ಯಾಕರಣದ ಈ ಪರಿಯಿದೆಯಲ್ಲ, ನನಗದು ಅನುಕೂಲತರ್ಕವಾಗಿ ಕಾಣುತಿತ್ತು. ಅದರಲ್ಲೂ ಯಥೋದ್ದೇಶ ಪಕ್ಷದ ನೆಲೆಯಲ್ಲಿ ಉದ್ಭವಿಸಿದ ಪ್ರಶ್ನೆಯೊಂದಕ್ಕೆ ಕಾರ್ಯಕಾಲ ಪಕ್ಷವನ್ನು ಆಶ್ರಯಿಸಿ ಉತ್ತರಕೊಡುವುದು ತಾರ್ಕಿಕವೇ ಅಲ್ಲದ್ದು ಎನ್ನಿಸುತ್ತಿತ್ತು. ಯಥೋದ್ದೇಶಪಕ್ಷದ ಪ್ರಕಾರ ಸಮಸ್ಯೆ ಉದ್ಭವಿಸಿದ್ದು ಎಂದಾದರೆ ಅದರಲ್ಲಿಯೇ ಉತ್ತರ ಕೊಡಬೇಕು ಎನ್ನುವ ನನ್ನ ವಾದದ ನೆಲೆ ಇದ್ದುದು ಮತ್ತದೇ ನನ್ನ approach ನಲ್ಲಿ. ನನಗೆ ಪೂರ್ಣವನ್ನು ನೋಡಲಾಗುತ್ತಿಲ್ಲ, ಮತ್ತು ಇವೆರಡೂ ಪಕ್ಷಗಳು ವಾದ ಮಾಡಲಿಕ್ಕಲ್ಲ ಬದಲಾಗಿ ಅಂದುಕೊಂಡಿರುವ ಗುರಿಯನ್ನು ತಲುಪಲಿಕ್ಕಾಗಿ ಅನ್ನುವುದು ಅರ್ಥವೇ ಆಗುತ್ತಿರಲಿಲ್ಲ. ನನಗನ್ನಿಸುವಂತೆ ವ್ಯಾಕರಣದ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಪ್ರತಿಯೊಬ್ಬನೂ ಎದುರಿಸುವ ಸಮಸ್ಯೆ ಇದು. ಸೂತ್ರಗಳನ್ನು ಕಂಠಸ್ಥ ಮಾಡಿ ಅದರ ಉದಾಹರಣೆಯನ್ನು ಪಟಪಟನೆ ಹೇಳುವುದೇ ಅಧ್ಯಯನ ಅಂದುಕೊಂಡರೆ ಈ ಸಮಸ್ಯೆಯಿಲ್ಲ, ಅದು ಬೇರೆ ವಿಚಾರ.

ಈ ಸಮಸ್ಯೆಗೆ ಆಗಾಗ ಸಮಾಧಾನವೂ ಮತ್ತೆ ಮತ್ತೆ ಸಮಸ್ಯೆಯೂ ಉದ್ಭವಿಸುವ ಪ್ರಕ್ರಿಯೆಯಲ್ಲಿಯೇ ಸುಮಾರಷ್ಟು ವರ್ಷ ಕಳೆದಿದ್ದೆ ನಾನು.

ಮೊನ್ನೆ ಒಂದಿನ ಏನಾಯ್ತಪ್ಪಾಂದ್ರೆ-

ನಮ್ಮಲ್ಲಿ ಆಂಡ್ರಾಯಿಡ್ ಕಾರ್ಯವ್ಯವಸ್ಥೆಯ ಕಾರ್ಯಾಗಾರ ಆಯೋಜಿತವಾಗಿತ್ತು, ಒಂದು ತಾಸು ಅಲೆದಾಡಲೆಂದು ನಾನೂ ಹೋಗಿದ್ದೆ. ಒಬ್ಬಾತ ಸರ್ಕೀಟ್ ಬೋರ್ಡ್ ಒಂದನ್ನು ಅದೆಷ್ಟು ಚಂದವಾಗಿ ವಿವರಿಸುತ್ತಿದ್ದ ಎಂದರೆ, ನನಗೆ ವ್ಯಾಕರಣದ ಪಕ್ಷದ್ವಯದ ತರ್ಕಸಂಬದ್ಧತೆ ಅರ್ಥವಾಗುವಷ್ಟು ಚಂದವಾಗಿ!! ಅವ ಪ್ರತಿಯೊಂದು ಎಳೆ ಎಳೆಯನ್ನೂ ಅದರ ಹಿಂದಿನ ಲಾಜಿಕ್ ಸಮೇತ ವಿವರಿಸುತ್ತಿದ್ದ. ಯಾವುದೇ ಗೇಮ್ ಆಡುವಾಗಿನ ಒಂದು ಪುಟ್ಟ ಕಾರ್ಯ ತೆರೆಯಮೇಲೆ (screen) ಮೂಡಬೇಕಾದರೆ ಅದರ ಹಿಂದೆ ಸರ್ಕೀಟ್ ಬೋರ್ಡಿನಲ್ಲಿ ಮತ್ತು processor ನಲ್ಲಿ ನಡೆಯುವ ತರ್ಕ ಪ್ರತಿತರ್ಕಗಳನ್ನು ಆತ ವಿವರಿಸಿದ. ತನಗೆ ಬೇಕಾದ್ದನ್ನು ಸಾಧಿಸುವುದಕ್ಕಾಗಿ ಹೀಗೆ switching ಮಾಡಿಕೊಳ್ಳುವ ವ್ಯಾಕರಣವೂ ಒಂದು ತರ್ಕಸಹಿತ ತಂತ್ರಜ್ಞಾನ ಅನ್ನಿಸಿತು.

ಹಾಗೆ ಆ ಕ್ಷಣಕ್ಕೆ ಸ್ಫುರಿಸಿದ್ದನ್ನೇ ಇಲ್ಲಿ ಬರೆದಿದ್ದೇನೆ. ನಡುವೆ ಆಗಿಹೋದ ಎಷ್ಟೋ ಪ್ರಶ್ನೆ ಮತ್ತು ಸಮಾಧಾನಗಳ ಮಧ್ಯೆ ಇದೂ ಒಂದು ಸಮಾಧಾನವಿರಬಹುದು, ನಾಳೆ ಮತ್ತೆ ಇನ್ನೊಂದು ಪ್ರಶ್ನೆ ಎದುರಾಗಬಹುದು. ತರ್ಕದಲ್ಲಿ ಕೊನೆಯೆಂಬುದಿಲ್ಲವಲ್ಲ! ಆ ಇನ್ನೊಂದು ಪ್ರಶ್ನೆ ಬರುವವರೆಗೆ ಬೆಳವಣಿಗೆಯಿಲ್ಲ, ಪ್ರಶ್ನೆ ಬೇಗ ಬರಲಿ.  

Friday, February 27, 2015

ಸಂಸ್ಕೃತ ವ್ಯಾಕರಣ;  ಒಂದು ಸಣ್ಣ ಪರಿಚಯ. 
ಭಾಗ ಒಂದು.




 ವ್ಯಾಕರಣದಲ್ಲಿ ಪ್ರವೇಶ ಸಾಧ್ಯವಾಗುವುದು ಮಿದುಳಿನ ಮಟ್ಟಿಗೆ ಒಂದು ಅಸಾಧಾರಣ ಸಂಭವ. ’ಪದಗಳ ಸಾಧುತ್ವವನ್ನಲ್ಲವೆ ಹೇಳಲು ಹೂರಟಿರುವುದು, ಅದಕ್ಯಾಕೆ ಅಷ್ಟು ಕಷ್ಟಪಡಬೇಕು?’- ಎನ್ನುವ ಭಾವನೆ ಜನರಲ್ಲಿ ಬಂದರೆ ತಪ್ಪಲ್ಲ. ಯಾಕೆಂದರೆ ನಮಗೆ ಪರಿಚಯವಿರುವ ಯಾವುದೇ ಭಾಷೆಯ ವ್ಯಾಕರಣದಲ್ಲಿ, ಸಂಸ್ಕೃತದಲ್ಲಿ ನಡೆದಂಥ ಚಿಂತನೆಯಾಗಲೀ ಅಲ್ಲಿನ ವ್ಯವಸ್ಥೆಯಾಗಲೀ ನಮಗೆ ಕಂಡಿಲ್ಲ.  ಹಾಗಾಗಿ ಭಾಷೆಯ ಬಗ್ಗೆ ನಮ್ಮ ಊಹೆಗೆ ನಿಲುಕದ ಪ್ರಪಂಚವೊಂದು ಸಂಸ್ಕೃತದಲ್ಲಿ ಇದೆಯೆಂದರೆ ನಂಬುವುದು ಕಷ್ಟ. ನಂಬುವುದು ಕಷ್ಟ ಎಂಬುದಕ್ಕಿಂತ ಅದು ನಮಗೆ ಸಾಧ್ಯವಿರುವ ಎಲ್ಲ ಆಯಾಮದಿಂದ ಹೊರಗಿನ ಸಂಗತಿಯಾಗಿ ನಿಲುತ್ತದೆ.  

ಭಾಷೆಯೆಂಬ ಮಹಾ ವೈಚಿತ್ರ್ಯಕ್ಕೆ ಸೀಮೆಯನ್ನೂ ಚೌಕಟ್ಟನ್ನೂ ಬರೆಯುವ ಪ್ರಯತ್ನವೇ ಕಲ್ಪನೆಗೆ ಮೀರಿದ್ದು. ಇದೋ ನನ್ನ ಹಿಡಿತಕ್ಕೆ ಸಿಲುಕಿದೆ ಎನಿಸುವಷ್ಟರಲ್ಲೇ ನುಸುಳಿಕೊಂಡುಬಿಡುವ ಸ್ವಭಾವ ಅದರದ್ದು. ವ್ಯಾಕರಣ ಮಾಡಲು ಹೊರಟಿರುವುದು ಇಂಥಾ ಕೆಲಸವನ್ನೇ. ಅದರಲ್ಲೂ ಸಂಸ್ಕೃತದಂಥ ವಿಶಾಲ ಹರಹಿನ, ಕಾಲಾನುಭವದ ಮಹಾನ್ ಇತಿಹಾಸವಿರುವ ಭಾಷೆಯನ್ನು ವಿವರಿಸುವುದಕ್ಕೆ ನಿಯಮಗಳ ವ್ಯವಸ್ಥೆ ಅಳವಡಿಸಿದರೆ ಅದು ತುಂಬಾ ಸಂಕೀರ್ಣವಾಗಿಯೇ ಆಗುತ್ತದೆ. ಪಾಣಿನಿಮಹರ್ಷಿಗಳ ಅಷ್ಟಾಧ್ಯಾಯೀ ಗ್ರಂಥ ಮತ್ತದರ ವಿವರಣೆ ಇವತ್ತಿಗೂ ಮಾನವ ಮಿದುಳಿಗೆ ನಿರಾಯಾಸವಾಗಿ ಹೊಗುವ ಸಂಗತಿಗಳಲ್ಲ. ಪಾಶ್ಚಾತ್ಯ ವಿದ್ವಾಂಸ ಎಲ್. ಬ್ಲೂಮ್ ಫೀಲ್ಡ್ ಹೇಳುವಂತೆ ’ಪಾಣಿನಿಯ ವ್ಯಾಕರಣವೆಂಬುದು ಮಾನವ ಬುದ್ಧಿಮತ್ತೆಗೆ ಇದುವರೆಗೆ ಸಾಧ್ಯವಾಗಿರುವ ಅದ್ಭುತಗಳಲ್ಲಿ ಒಂದು’.  ಭಾಷೆಯಂಥ ಸಂಕೀರ್ಣ ವ್ಯವಸ್ಥೆಯನ್ನು ವಿವರಿಸಲು ಹೊರಟ ಅದು ಸಂಕೀರ್ಣವಾಗಿಯೇ ಇರಬೇಕಾದ್ದು ಸಹಜ.

ಪದವೊಂದು ಸಾಧುವೋ ಅಲ್ಲವೋ ಎಂಬ ನಿಶ್ಚಯಕ್ಕೆ ವ್ಯಾಕರಣವೇ ಶರಣು. ಮೇಲ್ನೋಟಕ್ಕೆ ವ್ಯಾಕರಣದ ಮೇಲೆ ದೊಡ್ಡ ಹೊರೆಯೇನೂ ಇದ್ದಂತೆ ಕಾಣದು. ಡಿಕ್ಷನರಿಯಂತೆ ಪದಗಳನ್ನು ಪಟ್ಟಿಮಾಡುತ್ತಾ ಸಾಗಿದರಾಗದೆ? ಸರಿಯಾಗಿರುವ ಪದಗಳನ್ನು ಪಟ್ಟಿ ಮಾಡಿದರಾಯ್ತಲ್ಲ, ಮತ್ತೆ ಸಾಧುತ್ವ ಹೇಳುವುದಕ್ಕೆ ವ್ಯಾಕರಣ ಯಾಕೆ  ಬೇಕು? ನಿಘಂಟು ಸಾಕು. ಹಾಗೆ ನೋಡಿದರೆ ಡಿಕ್ಷನರಿ ಎಂಬುದು ಮಾನವ ಮಿದುಳಿನ ಬುದ್ಧಿಮತ್ತೆಯ ಉತ್ಪನ್ನವಲ್ಲ. ಅದು smart ಕೆಲಸ ಎನ್ನುವುದಕ್ಕಿಂತ massive ಕೆಲಸ. ತುಂಬಾ ದೊಡ್ಡ ಶ್ರಮವನ್ನು ಬೇಡುವ ಕೆಲಸ.  ಆದರೆ ಪಾಣಿನಿಯ ವ್ಯಾಕರಣ massive ಅಲ್ಲ, ಅದು ಅತ್ಯಂತ smart ರೀತಿಯದು. ಹಾಗಾಗಿಯೇ ಅದು ಸಂಕೀರ್ಣ, ಮತ್ತು ತರ್ಕಾಶ್ರಿತ. ಭಾಷೆಯೊಂದರ ಎಲ್ಲ ಬಗೆಯ ಸಾಧ್ಯತೆಗಳನ್ನು ಬರೀ ೩೯೫೯  ಸೂತ್ರಗಳಲ್ಲಿ ಹಿಡಿದಿಟ್ಟ ಹೆಮ್ಮೆ ಅಷ್ಟಾಧ್ಯಾಯಿಯದು. ಭಾಷೆಯ ಅಗಾಧತೆಗೆ ಹೋಲಿಸಿದರೆ ಈ ಸೂತ್ರಗಳ ಪ್ರಮಾಣ ಬಲು ಸಣ್ಣದು. ಇಷ್ಟು ಸಣ್ಣ ಸಂಖ್ಯೆಯ  ಸೂತ್ರಗಳಲ್ಲಿ ಅಷ್ಟಾಧ್ಯಾಯಿ ಪೂರ್ತಿ ಭಾಷೆಯ ಎಲ್ಲಾ ಆಯಾಮಗಳನ್ನು ವಿವರಿಸಲು ಪ್ರಯತ್ನಿಸುತ್ತದೆ. ಎಲ್ಲಾ ಆಯಾಮಗಳನ್ನು ಎಂದರೆ ಕನ್ನಡದ ಮೂಲಕ ನಮಗೆ ತಿಳಿದಿರುವ ಸಂಧಿ ಸಮಾಸ ಕ್ರಿಯಾಪದ, ನಾಮಪದ, ಸರ್ವನಾಮ ಇದಿಷ್ಟೇ ಅಲ್ಲ. ಅವುಗಳ ವ್ಯುತ್ಪತ್ತಿ, ಸಿದ್ಧಿಪ್ರಕಾರ, ಸ್ವರಪ್ರಕ್ರಿಯೆ ಎಲ್ಲ ಎಲ್ಲವನ್ನೂ ವಿವರಿಸುವ ಕೆಲಸ.


ಅಷ್ಟಾಧ್ಯಾಯಿಯೆಂಬ ಎಂಟು ಅಧ್ಯಾಯಗಳ ಪೂರ್ತಿ ರಚನೆಯಲ್ಲಿ ಮುಖ್ಯವಾಗಿ ಎರಡು ಭಾಗ. ಎಂಟು ಅಧ್ಯಾಯಗಳಲ್ಲಿ ಪ್ರತಿಯೊಂದು ಅಧ್ಯಾಯವೂ ನಾಲ್ಕು ಪಾದಗಳಲ್ಲಿ ವಿಭಾಗವಾಗಿದೆ. ಇದರಲ್ಲಿ ಏಳು ಅಧ್ಯಾಯಗಳು ಮತ್ತು ಎಂಟನೆಯದರ ಮೊದಲನೆಯ ಪಾದ- ಒಂದು ಭಾಗ. ಉಳಿದ ಮೂರೇ ಪಾದಗಳದ್ದು ಇನ್ನೊಂದು ಭಾಗ. ಸೋಜಿಗವೆಂದರೆ, ಮೊದಲನೆಯ ಭಾಗದ ದೃಷ್ಟಿಯಲ್ಲಿ ಎರಡನೆಯ ಭಾಗವೆಂಬುದೇ ಇಲ್ಲ! ಅಂದರೆ, ಶಬ್ದಸಿದ್ಧಿಯ ಪ್ರಕ್ರಿಯೆಯಲ್ಲಿ ಎರಡನೆಯ ಭಾಗದಲ್ಲಿರುವ ಸೂತ್ರಗಳ ಮೂಲಕ ಯಾವೆಲ್ಲ ಕಾರ್ಯ ಆಗಿವೆಯೋ, ಅವು- ಮೊದಲನೆಯ ಭಾಗದ ದೃಷ್ಟಿಯಲ್ಲಿ ಅಸಿದ್ಧ ( ಆಗದೇ ಇರುವಂತೆ). ಹಾಗಂತ ಮೂರೇ ಪಾದಗಳ ಎರಡನೆಯ ಭಾಗ ಇದೆಯಲ್ಲ, ಅದರ ದೃಷ್ಟಿಯಲ್ಲಿ ಮೊದಲನೆಯ ಭಾಗ ಇದ್ದೇ ಇದೆ, ಅಸಿದ್ಧವಲ್ಲ. ಅಂದರೆ ಇದು ದ್ವಿಮುಖ (ಟೂವೇ) ಅಂಧತ್ವ ಅಲ್ಲ. ಹೀಗೆ ಹೇಳಿದರೂ ಸ್ಪಷ್ಟವಾಗಲಿಕ್ಕಿಲ್ಲ, ಇನ್ನೂ ಸರಳವಾಗಿ ಹೇಳಬೇಕೆಂದರೆ...

ಎರಡು ಮನೆಗಳಿದ್ದಾವೆ, ಮತ್ತದರಲ್ಲಿ ಮನೆಯ ಸದಸ್ಯರಿದ್ದಾರೆ ಎಂದುಕೊಳ್ಳುವಾ. ಮೊದಲನೆಯದಕ್ಕೆ ಹಿರಿಮನೆ ಎಂದೂ ಎರಡನೆಯದಕ್ಕೆ ಕಿರಿಮನೆ ಎಂದೂ ಕರೆಯುವಾ. ಈ ಹಿರಿಮನೆಯ ಜನಗಳಿಗೆ ಕಿರಿಮನೆಯ ಜನ ಲೆಕ್ಕಕ್ಕೇ ಇಲ್ಲ, ಅವರ ಇರುವಿಕೆ ಮತ್ತು ಅವರ ಕಾರ್ಯಗಳು ಲೆಕ್ಕಕ್ಕಿಲ್ಲ. ಅಥವಾ ಆ ಕಿರಿಮನೆಯೆಂಬುದೇ ಇಲ್ಲ. ಹಾಗಂತ ಕಿರಿಮನೆಯವರಿಗೆ ಹಿರಿಮನೆಯ ಜನ, ಅವರ ಕಲಸಗಳೆಲ್ಲವೂ ಸ್ಪಷ್ಟ ಸ್ಪಷ್ಟ.  ಕಿರಿಮನೆಯ ಜನ ಅಡುಗೆ ಮಾಡಿಕೊಂಡರೂ, ಹೊಸ ಬಟ್ಟೆ ತಗೊಂಡರೂ, ಇನ್ನೇನೇ ಮಾಡಿದರೂ ಅದಕ್ಕೆ ಸಂಬಂಧಪಟ್ಟಂತೆ ಹಿರಿಮನೆಯ ಜನಗಳ ಪಾಲಿಗೆ ಅದು ಮಾಡಿಲ್ಲದಂತೆ. ಈ ಮೊದಲಮನೆಯ (ಹಿರಿಮನೆ) ಜನ ಅವರಿನ್ನೂ ಅಡುಗೆ ಮಾಡಿಲ್ಲ, ಬಟ್ಟೆ ತಗೊಂಡಿಲ್ಲ ಎಂದೇ ಅಂದುಕೊಳ್ಳುತ್ತಾರೆ. ಹಾಗಂದುಕೊಂಡು ಸುಮ್ಮನಿರುವುದಿಲ್ಲ, ಅದಕ್ಕನುಗುಣವಾಗಿಯೇ ತಮ್ಮ ಕೆಲಸ ಮಾಡುತ್ತಾರೆ.  

ಉದಾ-

ಹಿರಿಮನೆಯಲ್ಲಿ ಒಬ್ಬರಿದ್ದಾರೆ, ಗುಣಸಂಧಿಯನ್ನು ವಿಧಿಸುವವರು. ಅವರ ಪ್ರಕಾರ ಅ, ಆ, ಕಾರಗಳ ಮುಂದೆ ಯಾವುದೇಸ್ವರವರ್ಣ ಬಂದರೆ, ಅವುಗಳ ಬದಲಿಗೆ ಏ ಮತ್ತು ಓ ಎಂಬ ವರ್ಣಗಳು ಯೋಗ್ಯತೆಯನುಸಾರ ಒಂದೇ ಆದೇಶವಾಗಿ ಬರುತ್ತವೆ. ಉದಾ- ರಮಾ+ ಈಶಃ= ರಮೇಶಃ (+= ). ಸರಿ, ಇದೊಂದು ವಿಧಿ ಸೂತ್ರ, ಮತ್ತದು ಪೂರ್ತಿ ಭಾಷೆಯಲ್ಲಿ ತನ್ನ ಅಗತ್ಯವೆಲ್ಲಿದೆಯೆಂದು ಹುಡುಕುತ್ತಲೇ ಇರುತ್ತದೆ.

ಈಗ ಇನ್ನೊಂದು ಉದಾಹರಣೆ ನೋಡೋಣ. ’ಬಾಲಕಾ ಇಹ’ (ಇಲ್ಲಿ ಬಾಲಕರಿರುವರು ಎಂದರ್ಥ) ಅಂತ ಒಂದು ಶಬ್ದ ಪ್ರಸಂಗ. ವಸ್ತುತಃ ’ಬಾಲಕಾಸ್’ ’ಇಹ’ ಎಂದು ಎರಡು ಪದಗಳು ಅವು, ಆದರೆ ಸಂಹಿತೆಯ (ಸಂಧಿಸಂಭವ) ಕ್ರಮದಲ್ಲಿ ಸಂಧಿಯಾದಾಗ ಬಾಲಕಾ ಶಬ್ದದ ಮುಂದಿರುವ ಸಕಾರಕ್ಕೆ ರ ಎಂಬುದು ಆದೇಶವಾಗಿ,  ಆ ’ರ’ ವರ್ಣಕ್ಕೆ ಯಕಾರಾದೇಶವಾಗಿ ಮುಂದೆ ಆ ಯಕಾರಕ್ಕೂ ಲೋಪ ಬಂದು ಬರೀ ’ಬಾಲಕಾ’ ಅಂತ ಉಳಿದುಕೊಳ್ಳುತ್ತದೆ. ಇದಿಷ್ಟೂ ಕೆಲಸ ಮಾಡುವವರು ಕಿರಿಮನೆಯ ಜನ.

ಪರಿಸ್ಥಿತಿ ಹೀಗಿರಲಾಗಿ, ಗುಣ ಸಂಧಿಯನ್ನು ಹೇಳುವ ಸೂತ್ರ ಹಿರಿಮನೆಯಲ್ಲಿರುವುದು ನಮಗೆ ನೆನಪಾಗಿಬಿಡುತ್ತದೆ. ಅಕಾರ ಆಕಾರಗಳ ಮುಂದೆ ಬಾಕಿ ಯಾವುದೇ ಸ್ವರ ಬಂದರೂ ಏ ಮತ್ತು ಓ ವರ್ಣಗಳು ಯೋಗ್ಯತೆಯನುಸಾರ ಬರುತ್ತವೆ ಎಂಬುದು ತಾನೆ ಆ ಸೂತ್ರ! ಹಾ, ಇಲ್ಲಿದೆಯಲ್ಲ, ಬಾಲಕಾ ಇಹ ಅನ್ನುವಲ್ಲಿ ಆ ಕಾರದ ಮುಂದೆ ಇಕಾರ ಇದೆ, ಹಂಗಾಗಿ ಏಕಾರ ಬರಲಿ ಎಂಬುದು ಸಂಶಯ. ಹಾಗಾಗೋದಿಲ್ಲ, (ಹಾಗಾಗಿದ್ದಿದ್ದರೆ ಅದು ಲೋಕದ ವ್ಯವಸ್ಥೆಗೆ ವಿರುದ್ಧವಾಗುತ್ತಿತ್ತು. ವ್ಯಾಕರಣದಿಂದ ಭಾಷೆಯಲ್ಲ, ಭಾಷೆಗಾಗಿ ವ್ಯಾಕರಣ ತಾನೆ!)  ಮೊದಲೇ ಹೇಳಿದೆನಲ್ಲ, ಹಿರಿಮನೆಯವರಿಗೆ ಕಿರಿಮನೆಯವರು ಮಾಡಿದ್ಯಾವುದೂ ಕಾಣುವುದಿಲ್ಲ, ಜನ ಇರುವುದೂ ಗೊತ್ತಾಗುವುದಿಲ್ಲ ಎಂದು, ಹಾಗೆಯೇ ಇಲ್ಲಿ ಕಿರಿಮನೆಯವರು ಮಾಡಿದ ಕೆಲಸಗಳಾದ ಯಕಾರಾದೇಶ, ಲೋಪ- ಇದ್ಯಾವುದೂ ಹಿರಿಮನೆಯ ಗುಣಸಂಧಿಗೆ ಕಾಣುವುದಿಲ್ಲ. ಕಾಣುವುದಿಲ್ಲ ಅಂದರೆ ಅದರ ಪಾಲಿಗೆ ಅಲ್ಲಿನ ಶಬ್ದರೂಪ ’ಬಾಲಕಾಸ್’ ಎಂದೇ ಇದೆ. ಹಾಗಿದ್ದಾಗ ಗುಣಸಂಧಿಯಾಗುತ್ತದಲ್ಲ ಎಂಬ ಪ್ರಸಂಗವೇ ಏಳದು.

ಹೀಗೆ ಈ ಉದಾಹರಣೆಯಲ್ಲಿ ಗುಣಸಂಧಿಯಾಗದಿರುವುದೇ ಬೇಕಾದ್ದು. ಅದನ್ನೇ ಹಿರಿಮನೆ ಕಿರಿಮನೆ ವ್ಯವಸ್ಥೆಯಲ್ಲಿ ನಿರ್ವಹಿಸಲಾಗಿದೆ. ಇದು ಒಂದು ಉದಾಹರಣೆ ಮಾತ್ರ, ಇದರೊಂದಿಗೆ ಇನ್ನೂ ಹಲವು ಆಯಾಮಗಳನ್ನೊಳಗೊಂಡ ಸಮಸ್ಯೆಗಳು ಬಂದಾಗೆಲ್ಲ ಪೂರ್ತಿ ಅಷ್ಟಾಧ್ಯಾಯಿಯೆಂಬುದು ಸ್ವಯಂ ಒಂದು ತಂತ್ರಾಂಶದಂತೆ ಕಾರ್ಯ ನಿರ್ವಹಿಸುತ್ತದೆ!
ಇದಲ್ಲದೆ ಎರಡೂ ಮನೆಯ ಪ್ರತಿಯೊಬ್ಬ ಸದಸ್ಯನಿಗೂ ನಿರ್ದಿಷ್ಟ ಕಾರ್ಯಭಾರ ಇದ್ದಂತೆಯೇ ನಿರ್ದಿಷ್ಟ ವಿಳಾಸವೂ ಇದೆ. ಯಾವ ಅಧ್ಯಾಯದ ಯಾವ ಪಾದದ ಎಷ್ಟನೆಯ ಸೂತ್ರ ಎಂಬುದು unique ಆದ ವಿಳಾಸ.


ಎರಡು ಮನೆಗಳ ಚಿತ್ರ ಇಷ್ಟಾದಬಳಿಕ, ಇನ್ನುಮೇಲೆ ಕಾರ್ಯಕಾಲ ಮತ್ತು ಯಥೋದ್ದೇಶ ಪಕ್ಷಗಳ ವಿಚಾರಕ್ಕೆ ದಾರಿಯಾಯ್ತು. ಅದೇನಪ್ಪ ಅಂದ್ರೆ-

(ಮುಂದುವರಿಯುವುದು.....)