Tuesday, May 31, 2016

ಮೋದಿ ಜೀ...



’ಕಾಲಾ ಧನ್ ಇಸ್ ಚುನಾವ್ ಕಿ ಮುದ್ದಾ ಹೆ ಯಾ ನಹಿ?’ ಅಂತ ಜೋರು ಜೋರಾಗಿ ಭಾಷಣ ಮಾಡುತ್ತಲೇ ವಿಜಯದ ನಗೆ ಬೀರಿದ್ದು ನಿಮ್ಮ ಸಾರಥ್ಯದ ಎನ್ಡಿಏ. ಅಚ್ಛೇ ದಿನ್ ಬಗ್ಗೆ ನೀವು ಅದೆಷ್ಟೇ ಭಾಷಣ ಕೊಟ್ಟಿದ್ದರೂ ಅದೆಲ್ಲವನ್ನೂ ನಂಬಿ ವೋಟ್ ಮಾಡುವಷ್ಟು ನಮ್ಮ ತಲೆಮಾರು ಮುಗ್ಧವಾಗಿರಲಿಲ್ಲ. ಹಾಗಂತ ತೀರಾ ನಿಮ್ಮ ಸರಕಾರ ತೆರಿಗೆ ಹೆಸರಲ್ಲಿ ಲೂಟಿ ಮಾಡಬಹುದು ಅಂತಲೂ ಅಂದುಕೊಂಡಿರಲಿಲ್ಲ.
ಈ ದೇಶದ ಮಧ್ಯಮವರ್ಗದವರು ಕಾಲಾ ಧನ್ ವಾಪಸ್ ತರುವುದರಬಗ್ಗೆ ನೀವು ಮಾತಾಡಿದಾಗೆಲ್ಲ ನಮ್ಮ ಖಾತೆಗೆ ಲಕ್ಷ ಲಕ್ಷ ಹಣ ಬಂದುಬೀಳುವ ಕನಸು ಕಂಡ ಜನ ಆಗಿರಲಿಲ್ಲ. ಆದರೆ ಕಾಲಾ ಧನ್ ಬಗ್ಗೆ ಭಾರೀ ಮಾತಾಡುವ ಮೋದಿ ಕಾಲಾ ಧನ್ ಪ್ರಮಾಣವೇ ಕಡಿಮೆಯಾಗುವಂತೆ ಮಾಡಿಯಾರೆಂಬ ನಂಬುಗೆಯಿತ್ತು. ಇನ್ನು ನಾವ್ಯಾವತ್ತೂ ಲಕ್ಷುರಿಯ ಕನಸು ಕಂಡವರಲ್ಲವಾದ್ದರಿಂದ ಅಚ್ಛೇ ದಿನ್ ಅಂದರೆ ಲಕ್ಷುರಿ ಬಾರತ ಅಂತಲೂ ಅಂದುಕೊಂಡಿರಲಿಲ್ಲ. ನಿಮ್ಮ ವರಸೆ ನಮ್ಮಲ್ಲೇನೋ ಭರವಸೆ ತುಂಬಿದ್ದು ನಿಜ.

ಮನುಷ್ಯನ ಕೈಲಿ ನಗದು ರೂಪದಲ್ಲಿ ಹಣ ಓಡಾಡದ ಹೊರತು ಕಪ್ಪು ಹಣ ಉತ್ಪತ್ತಿಯಾಗುವುದೇ ಸಾಧ್ಯವಿಲ್ಲದ್ದರಿಂದ, ಕಪ್ಪು ಹಣದ ಬಗ್ಗೆ ಭಾರೀ ಮಾತಾಡಿದ್ದ ನಿಮ್ಮ ಸರಕಾರ ಆನ್ ಲೈನ್ ಟ್ರಾನ್ಸಾಕ್ಷನ್ ಗಳ ಮೇಲೆ ಸೇವಾ ತೆರಿಗೆಯನ್ನು ಮತ್ತು ಪ್ರೊಸೆಸಿಂಗ್ ಫೀಯನ್ನು ಕಡಿಮೆ ಮಾಡಬಹುದು ಅಂದುಕೊಂಡಿದ್ದೆವು. ಅಂದರೆ ಆನ್ಲೈನ್ ವ್ಯವಹಾರಗಳಿಗೆ ಉತ್ತೇಜನ ಕೊಡುವ ಪ್ರಯತ್ನ ಮಾಡುತ್ತೀರಿ ಅಂತ ನಮ್ಮ ನಿರೀಕ್ಷೆಯಾಗಿತ್ತು. ಹಾಗಂತ ನಮ್ಮ ಫ್ಲಿಪ್ ಕಾರ್ಟು, ಅಮೇಝಾನ್ ಎಲ್ಲಾ ನಿಮ್ಮ ಮಾತು ಕೇಳಿ ಸೇವಾ ತೆರಿಗೆ ಇಲ್ಲದೇ ಕೆಲಸ ಮಾಡುತ್ತವೆ ಅಂತ ಅಂತೇನೂ ಬಯಸಿರಲಿಲ್ಲ. ಅವೆಲ್ಲ ಖಾಸಗಿ ಸಂಸ್ಥೆಗಳು ನಿಮ್ಮ ಮಾತು ಕೇಳಲಿಕ್ಕೆ ಕಾನೂನು ಮೂಲಕ ಬಿಗಿ ಮಾಡಬೇಕಾಗುತ್ತದೆ, ಮತ್ತದಕ್ಕೆ ಸಮಯ ಬೇಕಾಗುತ್ತದೆ ಅನ್ನುವುದೂ ಗೊತ್ತಿದೆ. ಅದರೆ ಭಾರತೀಯ ರೈಲ್ವೇ ಅಂತೊಂದು ಮಹಾನ್ ವ್ಯವಸ್ಥೆ ಉಂಟಲ್ಲ, ಅದು ನಿಮ್ಮಡಿಯಲ್ಲೇ ಇದೆ ಅನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ. ಪ್ರತಿ ಟಿಕೇಟ್ ಮೇಲೆ, ಮೋದಿ ಜೀ, ಪ್ರತಿ ಟಿಕೆಟ್ ಮೇಲೆ ಆನ್ ಲೈನ್ ಬುಕಿಂಗ್ ಮಾಡುವಾಗ ೨೨.೯ (ಇಪ್ಪತ್ಮೂರು ಅಂತಿಟ್ಟುಕೊಳ್ಳಿ) ಸೇವಾ ತೆರಿಗೆ ತೆಗೆದುಕೊಳ್ಳುತ್ತದೆ ರೈಲ್ವೆ ಇಲಾಖೆ! ಅಷ್ಟಕ್ಕೇ ಮುಗಿಯಲಿಲ್ಲ, ಬ್ಯಾಂಕಿನ ಮೂಲಕ ಹಣ ತುಂಬಬೇಕು ತಾನೆ, ಮತ್ತೆ ಅದಕ್ಕೂ ಸೇವಾತೆರಿಗೆ ತೆರಬೇಕು. ಪ್ರತಿ ಟ್ರಾನ್ಸಾಕ್ಷನ್ನಿಗೆ ೧೦ ರೂಪಾಯಿ. ಅಲ್ಲಿಗೆ ಸೇವೆಯ ಹೆಸರಲ್ಲಿ ಮೂವತ್ಮೂರ್ರುಪಾಯ್ ತಣ್ಣಗೆ ಕರಗೋಗಿರುತ್ತದೆ. ಮೋದಿ ಜೀ, ಆನ್ಲೈನ್ ಬುಕಿಂಗ್ ಅನ್ನುವುದು ಗ್ರಾಹಕನಿಗೆ ವರದಾನದಂತಿದ್ದರೂ ಇಷ್ಟೆಲ್ಲ ತೆರಿಗೆ ತೆರುವಷ್ಟು ಜನ ಗಟ್ಟಿಯಿದ್ದಾರೆ ಅಂದುಕೊಳ್ಳಬೇಡಿ. ಅದಲ್ಲದೆ ಆನ್ ಲೈನ್ ವ್ಯವಹಾರವನ್ನು ಹೆಚ್ಚಿಸಬೇಕೆಂದು ಬಯಸುವುದಾದರಂತೂ ಇದು ಸಹಿಸಲಸಾಧ್ಯ ತೆರಿಗೆ ಪದ್ಧತಿ. ಕರ್ನಾಟಕ ಸರಕಾರದ ಸಾರಿಗೆ ಕೂಡ ನಿಮ್ಮನ್ನೇ ಅನುಸರಿಸಿ ಮೂವತ್ ರೂಪಾಯಿ ತೆರಿಗೆ ಪಾವತಿಸಿಕೊಳ್ಳುತ್ತಾನೆ, ಬ್ಯಾಂಕಿನ ಸೇವೆಗೆ ೧೦ ರೂಪಾಯಿ, ಅಲ್ಲಿಗೆ ಹೆಚ್ಚಿಗೆ ೪೦ ರೂಪಾಯಿ ಕೊಟ್ಟಂತಾಗುತ್ತದೆ. ಅಚ್ಛೇ ದಿನ್ ಮೆನೂ ಇಷ್ಟೆಲ್ಲ ತುಟ್ಟಿ ಇದೆಯಾ ಮೋದಿ ಜೀ!?

ದೇಶದ್ದೇ ಕಾರ್ಡ್ ವ್ಯವಸ್ಥೆ ’ರೂಪೇ’ ಬಂದಾಗ ತುಂಬಾ ಖುಷಿ ಪಟ್ಟಿದ್ದೆವು; ಅದರಲ್ಲಿ ಸೇವಾ ತೆರಿಗೆ ಪ್ರಮಾಣ ಕಡಿಮೆ ಇರಬಹುದೇನೋ ಅಂತ. ನಿಮ್ಮಂಥ ನೀವೇ ಪ್ರಧಾನಿ ಆದಾಗ್ಯೂ ರೂಪೇ ಯನ್ನು ಜನಪ್ರಿಯ ಮಾಡುವಲ್ಲಿ ನೀವು ಯಶಸ್ವಿಯಾಗಿಲ್ಲ.

ನೀವು ಸ್ವಚ್ಛಭಾರತ್ ಸೆಸ್ ಹೆಸರಲ್ಲಿ ಸೇವಾ ತೆರಿಗೆಯನ್ನು ಶೇ.೧೪ಕ್ಕೆ ಏರಿಸಿದಾಗ ಜಿ ಎಸ್ ಟಿ ಸಧ್ಯದಲ್ಲೇ ಬರುತ್ತದೆ ಅಂದಿರಿ. ಆಗಲೂ ನಾವು ಮಧ್ಯಮ ವರ್ಗದವರು ಸರಿ, ಜಿ ಎಸ್ ಟಿ ಬಂದರೆ ಸರಿಯಾದೀತೆಂದು ಸುಮ್ಮನಾದೆವು. ಎರಡು ಅಧಿವೇಶನ ನಡೆದರೂ ಜಿ ಎಸ್ ಟಿ ತರಲು ತಮ್ಮಿಂದಾಗಲಿಲ್ಲ. ಪ್ರತಿಪಕ್ಷದವರು ಗಲಾಟೆ ಮಾಡಿದರು ಅನ್ನುವ ಕಥೆ ಬೇಡ, ಸರಕಾರ ನಿಮ್ಮ ಕೈಲಿದ್ದುದರಿಂದ ಜಿ ಎಸ್ ಟಿ ತರದೇ ಇರುವ ಅಪಖ್ಯಾತಿ ತಮ್ಮದಾಗುತ್ತದೆಯೇ ವಿನಾ ಪ್ರತಿಪಕ್ಷದ್ದಲ್ಲ. ಇದೀಗ ಸೇವಾ ತೆರಿಗೆ ೧೫ ಪರ್ಸೆಂಟ್ ಅನ್ನುತ್ತಿದ್ದೀರಿ. ಯಾರ ಹಿತಕ್ಕೆ ಇದೆಲ್ಲ? ನಿಮ್ಮ ಭಕ್ತರು ಇದನ್ನೆಲ್ಲವನ್ನೂ ಪಾಸಿಟಿವ್ ಆಗಿ ವ್ಯಾಖ್ಯಾನ ಮಾಡುತ್ತಾರೆ. ಆದರೆ ಜನ ಸಾಮಾನ್ಯನಿಗೆ ವ್ಯಾಖ್ಯಾನ ಬೇಕಿಲ್ಲ.

ಮೋದಿ ಜೀ, ನೀವು ಭಯೋತ್ಪಾದಕರ ವಿರುದ್ಧ ತೊಡೆ ತಟ್ಟಿದ್ದು, ನಾಲ್ಕಾರು ದೇಶ ಸುತ್ತಿ ಅಲ್ಲಿ ಜನಗಳನ್ನು ಸೇರಿಸಿ ಭಾಷಣ ಮಾಡಿದ್ದು, ನೀವು ಹೋದಲ್ಲೆಲ್ಲ ನಿಮಗೆ ಭೋಪರಾಕ್ ದೊರೆತಿದ್ದು, ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದು, ತಿಂಗಳಿಗೊಮ್ಮೆ ಮನಸು ತೆರೆದು ಮಾತಾಡೋದು ಇದೆಲ್ಲ ಇದೆಯಲ್ಲ- ಜನ ಸಾಮಾನ್ಯನ ಬದುಕನ್ನು ತೆರಿಗೆ ಹೆಸರಲ್ಲಿ ದುರ್ಭರ ಮಾಡುತ್ತ ಸಾಗಿದಲ್ಲಿ ಇದೆಲ್ಲ ನಮಗೆ ಮನರಂಜನೆಯ ಸರಕಷ್ಟೇ. ನೀವು ಯಾರ ಕೈ ಕುಲುಕಿದರೂ ಜನ ಸಾಮಾನ್ಯನ ಬದುಕು ಬದಲಾಗದಿದ್ದಲ್ಲಿ ನಿಮ್ಮ ಸರಕಾರವನ್ನು ಮೆಚ್ಚುವ ಮನಸು ನಮಗುಳಿಯದು/ ಉಳಿಯಬೇಕಿಲ್ಲ ಕೂಡ.


Monday, February 29, 2016

ಬರುವಾಗ ಚಿಂತನ ಭಗೀರಥರಾಗಿ ಬನ್ನಿ


ನಾಳೆಯಿಂದ ಇಪ್ಪತ್ತು ದಿನಗಳ ಜ್ಞಾನಸತ್ರವೊಂದು ರಾಷ್ಟ್ರಿಯ ಸಂಸ್ಕೃತ ಸಂಸ್ಥಾನದ ಅಗರ್ತಲಾ (ಗಣತಂತ್ರ ಭಾರತದ ತ್ರಿಪುರಾ ರಾಜ್ಯದ ರಾಜಧಾನಿ) ಶಾಖೆಯಲ್ಲಿ ನಡೆಯಲಿಕ್ಕಿದೆ. ಮಾಸವ್ಯಾಪೀ ಸತ್ರಗಳು ಈ ಹಿಂದೆಯೂ ಸಾಕಷ್ಟು ನಡೆದಿವೆಯಾದರೂ ಇದೀಗ ನಡೆಯುತ್ತಿರುವುದು ಅದೆಲ್ಲಕ್ಕಿಂತ ಭಿನ್ನವಾದ್ದು ಮತ್ತು ಭವಿಷ್ಯದ ದೃಷ್ಟಿಯಿಂದ ಅವೆಲ್ಲಕ್ಕಿಂತ ಬಲು ಮುಖ್ಯವಾದ್ದು.

ಪಾರಂಪರಿಕ ಶಾಸ್ತ್ರಾಧ್ಯಯನವನ್ನು ಪೋಷಿಸಿಕೊಂಡು ಬರುತ್ತಿರುವ ಮಹತ್ತರ ಸರ್ವಕಾರೀಯ ಮಾನಿತ ವಿಶ್ವವಿದ್ಯಾಲಯ ರಾಷ್ಟ್ರಿಯ ಸಂಸ್ಕೃತ ಸಂಸ್ಥಾನ. ತನ್ನ ಅಡಿಯಲ್ಲಿ ಭಾರತದಾದ್ಯಂತ ಹನ್ನೊಂದು ಶಾಖೆಗಳು, ಸುಮಾರು ಇಪ್ಪತ್ತೈದು ಸಂಸ್ಕೃತ ಮಹಾವಿದ್ಯಾಲಯಗಳನ್ನು ಒಳಗೊಂಡು ಸಾಗುತ್ತಿದೆ. ರಾಷ್ಟ್ರಿಯ ಮಟ್ಟದಲ್ಲಿ ಸಂಸ್ಕೃತದ ವಕ್ತಾರನಂತೆ ನಿಲ್ಲುವ ಬೃಹತ್ ವ್ಯವಸ್ಥೆ ಸಂಸ್ಥಾನವೆಂದರೆ. ಸಂಪನ್ಮೂಲಗಳ ಕೊರತೆಯ ಸರ್ವೇ ಸಾಮಾನ್ಯ ಗ್ರಹಚಾರದಾಚೆಗೂ ವಿದ್ವತ್ತೆಯಲ್ಲಿ ಘನವಾದ್ದನ್ನು ಕೊಡುವ ವಿಶ್ವಾಸಾರ್ಹ ವಿವಿ ಅದು.

ಭಾರತೀಯ ಚಿಂತನಪರಂಪರೆಯ ಮೂಲಭೂತವಾದ ಎರಡು ಸಂಗತಿಗಳು ಪೂರ್ವಪಕ್ಷ ಮತ್ತು ಸಿದ್ಧಾಂತ. ಮೊದಲನೆಯದು ಪ್ರಶ್ನೆಯನ್ನು ಕೇಳುವ ಪಕ್ಷ ಮತ್ತಿನ್ನೊಂದು ಅದಕ್ಕೆ ಸಮಾಧಾನ ಹೇಳುವ ಪಕ್ಷ. ನಿಂತನೀರಾಗದೆ ನಿರಂತರವಾಗಿ ಹೊಸ ಪ್ರಶ್ನೆಗಳನ್ನು ಮತ್ತು ಅದಕ್ಕೆ ಸಮಂಜಸವಾದ ಉತ್ತರಗಳನ್ನು ಹುಡುಕುತ್ತ ನಮ್ಮ ಶಾಸ್ತ್ರಪರಂಪರೆಯು ಹರಿದು ಬಂದಿದೆಯಷ್ಟೆ. ಆ ಪರಂಪರೆಯೇ ನಮ್ಮ ಸಿದ್ಧಾಂತಗಳನ್ನು ಉಳಿಸಿದೆ ಮತ್ತು ಇನ್ನೊಬ್ಬರದನ್ನೂ ಉಳಿಯಗೊಟ್ಟಿದೆ. (ಇವತ್ತು ಭಾರತವನ್ನು ಅಸಹಿಷ್ಣು ಎನ್ನುವವರು ಇತಿಹಾಸದುದ್ದಕ್ಕೂ ಒಮ್ಮೆ ಕಣ್ಣಾಡಿಸಿ ಬರಬೇಕು. ಚಿಂತನೆ ಮತ್ತು ಬದುಕು ಎರಡರಲ್ಲೂ ನಾವೆಷ್ಟು ಮುಕ್ತರಾಗಿದ್ದೆವು/ ಇದ್ದೇವೆ ಎಂಬುದು ಆಗ ತಿಳಿದೀತು). ಆದರೆ ವಸಾಹತೂತ್ತರ ಭಾರತಕ್ಕೆ ಬಡಿದ ಅಪ್ರಜ್ಞೆಯ ಗುಂಗು ಇನ್ನೂ ಪೂರ್ತಿಯಾಗಿ ಇಳಿದಿಲ್ಲ. ನಾವೆಂಥಾ ಹಂತದಲ್ಲಿದ್ದೇವೆ ಅಂದರೆ ನಮ್ಮನ್ನು ಪ್ರಶ್ನಿಸುವವರನ್ನು ಪ್ರತಿಪ್ರಶ್ನೆ ಮಾಡುವ ಛಾತಿಯೇ ನಮ್ಮಲ್ಲಿ ಮಾಯವಾಗಿ ಹೋಗಿದೆ. ವಾದ ಮಾಡುವುದನ್ನೂ ಅದೆಷ್ಟರಮಟ್ಟಿಗೆ ಮರೆತುಕೊಂಡಿದ್ದೇವೆ ಅಂದರೆ ನಮಗೆ ಉದಾರತೆ ಮತ್ತು ಹೇಡಿತನಗಳ ಮಧ್ಯೆ ಏನೊಂದೂ ವ್ಯತ್ಯಾಸ ಕಾಣದೆ ಹೇಡಿತನವನ್ನೇ ಮಾನವೀಯತೆಯ ಹೆಸರಲ್ಲಿ ಅಪ್ಪಲು ಮುಂದಾಗಿದ್ದೇವೆ. ನಮ್ಮ ಕೆಲವು ಉದ್ದಾಮ ಮಾಧ್ಯಮ ಬೃಹಸ್ಪತಿಗಳಂತೂ ಭಾರತೀಯವಾದ್ದೆಲ್ಲವನ್ನೂ ಮೂರನೆಯ ದರ್ಜೆಯ ಸಂಗತಿಯಂತೆ ಬಗೆದು ಫರ್ಮಾನು ಹೊರಡಿಸುವ ಕೆಲಸದಲ್ಲಿ ಮಗ್ನವಾಗಿದ್ದಾರೆ. ಉಳಿದ ವಿವಿಗಳು ಈ ರೋಗದ ಪರಿಹಾರಕ್ಕೆ ಎಷ್ಟು ಮಾತ್ರ ಸಹಕರಿಸಿಯಾವು ಎನ್ನುವುದು ಬಗೆಹರಿಯದ ಪ್ರಶ್ನೆ; ಯಾಕೆಂದರೆ ಭಾರತದೊಳಗೇ ಇದ್ದು ಇಲ್ಲಿನ ಸಮಗ್ರತೆಗೆ ಸವಾಲೆಸೆಯುವ ಉದ್ಧಟತನಕ್ಕೆ ಅವು ಮುಂದಾಗುತ್ತಿವೆ. ಆಶಾಕಿರಣವೆಂದರೆ ಆ ಬಗೆಯ ಅತಿರೇಕಗಳನ್ನು ತನ್ನೊಳಕ್ಕೆ ಬಿಟ್ಟುಕೊಳ್ಳದ ಪಾರಂಪರಿಕ ವಿದ್ಯಾತಾಣಗಳು. ಅಂಥಾದ್ದೊಂದು ಹೆಸರು ರಾಷ್ಟ್ರಿಯ ಸಂಸ್ಕೃತ ಸಂಸ್ಥಾನ.

ನಾಳೆಯಿಂದ ನಡೆಯಲಿಕ್ಕಿರುವ ಸತ್ರದ ಮುಖ್ಯ ವಿಷಯವೇ  ಪ್ರಶ್ನೆಮಾಡುವ ನಮ್ಮ ಪರಂಪರೆ ಮತ್ತು ಅದಕ್ಕೆ ಉತ್ತರಕೊಡುವ ಕಲೆಯ ಕುರಿತಾದ್ದು. ವಾದ ಮಂಡನೆ, ವಾದಕ್ಕೆ ಇರಬೇಕಾದ ಸಂಯಮನಗಳೇನು, ನಿಯಮನಗಳೇನು, ಪ್ರತಿಪಕ್ಷಿಯನ್ನು ನಿಗ್ರಹಿಸುವ ವಾದ ತಂತ್ರವೇನು ಎಂಬೆಲ್ಲ ಸಂಗೋಷ್ಠಿಗಳು ಅಲ್ಲಿ ನಡೆಯಲಿಕ್ಕಿವೆ. ಇದು ದೂರದೃಷ್ಟಿಯುಳ್ಳ ವಿದ್ವಾಂಸರ ಕಲ್ಪನೆಯ ಕೂಸು ಎನ್ನಲಡ್ಡಿಯಿಲ್ಲ. ಎಡಪಂಥದ ಅತಿರೇಕಗಳಿಗೆ ಜಾಗತಿಕ ಮಟ್ಟದಲ್ಲಿ ಸಮರ್ಥ ಉತ್ತರ ಕೊಡಬಲ್ಲ ವಿಚಾರ ಸನ್ನದ್ಧ ಪಾರಂಪರಿಕ ಯುವ ವಿದ್ವಾಂಸರ ಪಡೆಯೊಂದನ್ನು ಕಟ್ಟುವ ಕನಸೊಂದು ಇಲ್ಲಿದೆ. ಅಭ್ಯರ್ಥಿಗಳಾಗಿ ಅಲ್ಲಿ ಭಾಗವಹಿಸುತ್ತಿರುವರೆಲ್ಲ ಭಾರತದ ಎಲ್ಲ ರಾಜ್ಯಗಳಿಂದ ಆಯ್ಕೆಯಾದ ಯುವ ಶಾಸ್ತ್ರವೇತ್ತರು. ಅವರ ಹೆಗಲಮೇಲೆ ಪರಂಪರೆಯ ಜವಾಬ್ದಾರಿಯಿದೆ. ಅದರ ಅರಿವು ಮೂಡಿಸುವ ಸತ್ರವೇ ನಾಳೆಯಿಂದ ಆರಂಭವಾಗಲಿಕ್ಕಿರುವುದು.

ಇಷ್ಟೆಲ್ಲ ಯಾಕೆ ಮಾಡಬೇಕು? ನಾವೇಕೆ ಪ್ರಶ್ನೆ ಕೇಳಬೇಕು ಅಥವಾ ಯಾರಿಗಾದರೂ ಉತ್ತರಿಸಬೇಕು?- ಅನ್ನುವ ಪ್ರಶ್ನೆಯಿರುವವರು ರಾಜೀವ್ ಮಲ್ಹೋತ್ರಾ ರವರ ’ದಿ ಬ್ಯಾಟಲ್ ಫರ್ ಸಂಸ್ಕೃತ್’ ಪುಸ್ತಕವನ್ನೊಮ್ಮೆ ಓದುವುದು ಅಗತ್ಯ. ಪ್ರಶ್ನೆ ಕೇಳುವುದು ಮತ್ತು ಉತ್ತರ ಕೊಡುವುದು ಅವಶ್ಯವಾಗಿಯೂ ನಮ್ಮಿಂದ ಆಗಲೇ ಬೇಕಾದ ಸಧ್ಯದ ಜರೂರ್ ಕಾರ್ಯಗಳು. ನಾವಿನ್ನೂ ನಿದ್ರೆಯಲ್ಲಿದ್ದೇವೆ ಅನ್ನುವುದದನ್ನು ಅರ್ಥಮಾಡಿಸುವ ಪುಸ್ತಕ ಅದು. ಜಗತ್ತು ನಮ್ಮನ್ನು ನಮಗಿಂತ ಚೆನ್ನಾಗಿ ತಿಳಿದುಕೊಳ್ಳುತ್ತಿದೆ. ಭಾರತೀಯತೆಯನ್ನು ವ್ಯವಸ್ಥಿತವಾಗಿ ಕಡಿದು ಉದುರಿಸುವ (systematic dissemble) ಹುನ್ನಾರಗಳ ಬಗ್ಗೆ ನಾವು ಅಜಾಗರೂಕರಾಗಿದ್ದೇವೆ. ಆ ಎಚ್ಚರ ಸಾಮಾನ್ಯ ಜನಕ್ಕೆ ಬಂದರೆ ಸಾಲದು,  ತರುಣ ವಿದ್ವದ್ವಲಯದಲ್ಲಿ ವ್ಯಾಪಕವಾಗಿ ಬರಬೇಕು ಅನ್ನುವ ಉದ್ದೇಶದಿಂದ ನಾಳೆಯ ಕಾರ್ಯಶಾಲೆ ತೆರೆದುಕೊಳ್ಳುತ್ತದೆ. ಕೇಂದ್ರ ಸರಕಾರ ಇದರ ಮೇಲೆ ಹಣ ತೊಡಗಿಸುತ್ತಿದೆ. ಚಿಂತನ ಪರಂಪರೆಯ ಯೋಧರನ್ನು well equipped ಆಗಿಸುವುದು ಸಾಂಸ್ಕೃತಿಕ ಭದ್ರತೆಯ ಅತಿ ಮುಖ್ಯ ಅಂಶವೆಂಬುದು ಸರಕಾರಗಳಿಗೆ ಈಗಲಾದರೂ ಅರ್ಥವಾದ್ದು ಸ್ವಾಗತಾರ್ಹ. ಆಗ ಮಾತ್ರ ತರುಣ ವಿದ್ವಾಂಸರ ಪಡೆಯೊಂದು ನಮ್ಮೊಳಗಿನ ಚಿಂತಕಭಸ್ಮಾಸುರರನ್ನು ನಿಗ್ರಹಿಸುತ್ತ, ಹೊರಗಡೆಯ ಆಕ್ರಮಣಕ್ಕೂ ಮಿದುಳೊಡ್ಡುವ ಕಾರ್ಯಕ್ಕೆ ಸಿದ್ಧವಾಗುತ್ತದೆ.  


ಕರ್ನಾಟಕ ಸೇರಿದಂತೆ ಎಲ್ಲ ಭಾಗಗಳಿಂದ ದೂರದ ಅಗರ್ತಲಾಗೆ ಹೊರಟ ನನ್ನ ಮಿತ್ರಗಣವು ಅಂಥಾ ವೈಚಾರಿಕ ಭಗೀರಥರ ಪಡೆಯಾಗಿ ಹೊಮ್ಮಲೆಂದು ಹಾರೈಸುವೆ. ಹೋಗುವ ಮುನ್ನವಾಗಲೀ ಹೋಗಿ ಬಂದಮೇಲೊಮ್ಮೆಯಾಗಲೀ ದಯವಿಟ್ಟು ನಮ್ಮ ಪೂರ್ವಪಕ್ಷಿಗಳಾರೆಂಬುದನ್ನು ತಿಳಿಯಲೋಸುಗ ವಿದ್ವಾಂಸರ ವಿಚಾರಗಳನ್ನು ಕೇಳಿಸಿಕೊಳ್ಳಿ/ ಓದಿಕೊಳ್ಳಿ. ನಮ್ಮದನ್ನು ಚೆನ್ನಾಗಿ ಓದುವುದು ಮಾತ್ರವಲ್ಲ ನಮ್ಮ ವೈಚಾರಿಕ ವಿರೋಧಿಗಳ ನೆಲೆಯೇನೆಂಬುದನ್ನು ತಿಳಿದುಕೊಳ್ಳುವುದು ತುಂಬ ಮುಖ್ಯವಾದ ಸಂಗತಿ. ಆ ನೆಲೆಯಲ್ಲಿ ಅಗರ್ತಲಾದ ಇಪ್ಪತ್ತು ದಿನಗಳು ನಿಮ್ಮೆಲ್ಲರ ಚಿಂತನಯಾತ್ರೆಯನ್ನು ಪ್ರಭಾವಿಸಲಿ. ಶುಭಯಾತ್ರಾ. 

Monday, February 8, 2016


                     ಸಂಸ್ಕೃತ ಮತ್ತು ಕನ್ನಡಗಳ ಅಂತರ್ಜಾಲ ಸ್ಥಿತಿಗತಿ


ಸಂಸ್ಕೃತದ ಕುರಿತಾಗಿ ಭಾರೀ ಅನುಕಂಪದಿಂದ ಮಾತಾಡುವ ಬಲುದೂರದ ಮಿತ್ರವಲಯವೊಂದಿದೆ ನನ್ನ ಬಳಿ. ಸಂಸ್ಕೃತವನ್ನೋದಿಕೊಂಡ ನಾನು, ನನ್ನಂಥವರು, ನಮ್ಮ ಸಂಸ್ಕೃತ ಸಂಸ್ಥೆಗಳು, ಸಂಸ್ಕೃತ ಪ್ರಪಂಚ ಮತ್ತು ಸಂಸ್ಕೃತಭಾಷೆಯ ಕುರಿತಾದ ಆಳವಾದ ಅನುಕಂಪ ಮತ್ತು ಕರುಣವೊಂದು ಅವರ ದನಿಯಲ್ಲಿರುತ್ತದೆ. ಆದರೆ ನನಗೆಂದಿಗೂ ಈ ಅನುಕಂಪ ಸಮರ್ಪಕವೆಂದೆನಿಸಿಲ್ಲ. ಬಹುಶಃ ಎಪತ್ತು ಎಂಭತ್ತು ತೊಂಭತ್ತರ ದಶಕದ ಸಂಸ್ಕೃತದ ಸ್ಥಿತಿಯ ಕುರಿತಾದ ಅವರ ಗ್ರಹಿಕೆ ಇನ್ನೂ ಅಪ್ಡೇಟಾಗಿಲ್ಲವೆಂದು ಸುಮ್ಮನಾಗುತ್ತೇನೆ. ವಾಸ್ತವದಲ್ಲಿ ಸಂಸ್ಕೃತದ ಪ್ರಪಂಚ ಚಟುವಟಿಕೆಯಿಂದ ಕೂಡಿದೆಯಲ್ಲದೆ ಅದು ಪ್ರಪಂಚದ ಬಹುಪಾಲನ್ನು ತಲುಪುವ ದಿಕ್ಕಿನಲ್ಲಿ ಸಮರ್ಥ ಹೆಜ್ಜೆಯನ್ನಿಟ್ಟಿದೆ. ಸಂಸ್ಕೃತಕ್ಕಾಗಿ ಉಳಿದೆಲ್ಲವನ್ನೂ ತೊರೆದ ನಿಷ್ಠ ಕಾರ್ಯಕರ್ತರಿದ್ದಾರೆ, ವಿದ್ವಾಂಸರಿದ್ದಾರೆ, ಸಂಸ್ಥೆಗಳಿವೆ ಮತ್ತು ವಿವಿ ಗಳಿವೆ. ನಿಜವೆಂದರೆ ಸಂಸ್ಕೃತದ ಕಾರ್ಯ ಭಾರತದಲ್ಲಿ ಮಾತ್ರವಲ್ಲ, ಯೂರೋಪ್ ನಿಂದ ಕೂಡ ನಡೆಯುತ್ತಿದೆ. ಅದರ ಪರಿಣಾಮವೇ ಸಂಸ್ಕೃತದ ಲಭ್ಯತೆ ಎಲ್ಲಾ ಅರ್ಥದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿಮ್ಮಲ್ಲಿ ಅಂತರ್ಜಾಲದ ವ್ಯವಸ್ಥೆ ಇದೆಯೆಂದರೆ ಸಂಸ್ಕೃತ ವಿಶ್ವದ ಕ್ಲಾಸಿಕ್ ಕೃತಿಗಳೆಲ್ಲವೂ ನಿಮ್ಮಲ್ಲಿವೆ ಎಂದೇ ಅರ್ಥ. ಈ ಮಾತುಗಳಲ್ಲಿ ನಿಮಗೆ ನಂಬಿಕೆಯಿಲ್ಲವೆಂದಾದರೆ ಸುಮ್ಮನೇ ಒಮ್ಮೆ ಗೂಗಲಿನಲ್ಲಿ ಸಂಸ್ಕೃತದ ಕೃತಿಯೊಂದಕ್ಕಾಗಿ ಹುಡುಕಾಡಿ ನೋಡಿ.



ಸಂಸ್ಕೃತದ ಕೃತಿಗಳಿಗಾಗಿ ಹುಡುಕಿದಂತೆಯೇ ಕನ್ನಡದ ಕ್ಲಾಸಿಕ್ ಕೃತಿಗಳಿಗಾಗಿ ಹುಡುಕಿ ನೋಡಿದರೆ ನಿಮಗೆ ನಿಜಕ್ಕೂ ಖೇದವಾಗುತ್ತದೆ. ನಾವು ಆರೇಳು ಕೋಟಿ ಜನ ಕರ್ನಾಟಕದಲ್ಲಿ ಕುಳಿತು, ಬೆಂಗಳೂರಿನಂಥ ಸಿಲಿಕಾನ್ ಕಣಿವೆಯನ್ನು ನಮ್ಮ ರಾಜಧಾನಿಯನ್ನಾಗಿ ಇಟ್ಟುಕೊಂಡು, ಮಹಾ ಮಹಾ ವಿಶ್ವ ವಿದ್ಯಾಲಯಗಳನ್ನು ಕಟ್ಟಿಕೊಂಡು, ಕನ್ನಡಕ್ಕಾಗಿ ಕೈಯೆತ್ತುವ ಸಂಘ ಸಂಸ್ಥೆಗಳನ್ನೆಲ್ಲಾ ಇಟ್ಟುಕೊಂಡು ನಮ್ಮ ಮಹತ್ತರ ಕೃತಿಗಳನ್ನು ಇನ್ನೂ ಅಂತರ್ಜಾಲಕ್ಕೆ ಬಿಡುಗಡೆ ಮಾಡದೇ ಗೆಣಸು ಹೆರೆಯುತ್ತ ಕೂತಿದ್ದೇವೆ. ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾಮಂಜರಿ (ಕೆಲಸ ಅರ್ಧವಾಗಿದೆ), ಕುವೆಂಪುರವರ ರಾಮಾಯಣ ದರ್ಶನಮ್ (ಕಣಜದಲ್ಲಿದೆ), ಇವನ್ನು ಹೊರತುಪಡಿಸಿದರೆ ಕನ್ನಡದ ಕ್ಲಾಸಿಕ್ ಅಂತರ್ಜಾಲದಲ್ಲಿ ಲಬ್ಯವಿಲ್ಲ. ಕಾರಂತರು, ತೇಜಸ್ವಿಯವರು, ಮತ್ತು ಕೆಲವು ಕಾದಂಬರಿಕಾರ್ತಿಯರ ಕೃತಿಗಳು ಪಿಡಿಎಫ್ ಆಗಿ ಲಭ್ಯವಿದ್ದರೂ ಓಸಿಆರ್ ತಂತ್ರಜ್ಞಾನ ಇಲ್ಲದ್ದರಿಂದ ರೆಫರೆನ್ಸ್ ಗೆ ಅಷ್ಟೇನೂ ಉಪಯೋಗವಿಲ್ಲ. ಬಹುಶಃ ನಮಗೆ ಹೋರಾಟಗಳೇ ಮುಗಿಯೋದಿಲ್ಲ, ದಿನಾ ಬೆಳಗಾದರೆ ಪಂಥಗಳ ಹೆಸರಿನಲ್ಲಿ ಟೌನ್ ಹಾಲ್ ಮುಂದೆ ಜಮಾಯಿಸೋದಷ್ಟೇ ಕನ್ನಡದ ಕೆಲಸ ಅಂದುಕೊಂಡು ಬಿಟ್ಟಿದ್ದೇವೆ. ಕೆಲವರಂತೂ ಮಾತೆತ್ತಿದರೆ ಸಂಸ್ಕೃತದ ವಿರುದ್ಧ ಹರಿಹಾಯುತ್ತಾರೆ. ಸಂಸ್ಕೃತ ಸತ್ತೋಗಿದೆ ಅನ್ನುತ್ತಾರೆ. ಆದರೆ ಆಧುನಿಕ ಜಗತ್ತಿನಲ್ಲಿ ಸಂಸ್ಕೃತವು ಕನ್ನಡಕ್ಕಿಂತ ವ್ಯಾಪಕವಾದ ಬದುಕನ್ನು ಬದುಕುವತ್ತ ಮುನ್ನುಗ್ಗುತ್ತಿದೆ. ನೆನಪಿಡಿ, ಸಂಸ್ಕೃತದಲ್ಲಿ ಓಸಿಆರ್ ಈಗಾಗಲೇ ಇದೆ. ಆರ್ಕೈವ್ ನಿಂದ ಅಥವ ಗೂಗಲ್ ಪುಸ್ತಕದಿಂದ ತೆರೆದುಕೊಂಡ ಸಂಸ್ಕೃತಪುಸ್ತಕದಲ್ಲಿ ಯಾವುದೇ ಶಬ್ದವನ್ನು ಆರಾಮವಾಗಿ ಹುಡುಕಬಹುದು. ಇದನ್ನೆಲ್ಲ ಭಾರತೀಯರೇ ಮಾಡಿದ್ದೆಂದು ನಾನು ಹೇಳುತ್ತಿಲ್ಲ, ಆದರೆ ಸಂಸ್ಕೃತ ನಿಷ್ಠೆಯ ಜನರಿಂದ ವಿಶ್ವದಾದ್ಯಂತ ಇದೆಲ್ಲ ಕೆಲಸ ನಡೆಯುತ್ತಿದೆ.  ಕನ್ನಡದಂಥಾ ಕನ್ನಡಕ್ಕೇನಾಗಿದೆ?
ಕನ್ನಡದಲ್ಲಿ ಹೊಸ ಬರಹಗಾರರು, ಅವರ ಬರಹಗಳು ಮತ್ತು ಕನ್ನಡದ ಸಾಹಿತ್ಯದ ಕಟ್ಟೋಣದ ಕಾರ್ಯಗಳಿಗೇನೂ ಕೊರತೆಯಿಲ್ಲ. ಬ್ಲಾಗ್ ಗಳು ಮತ್ತು ಫೇಸ್ಬುಕ್ ಬಂದಮೇಲಂತೂ ಕನ್ನಡಲ್ಲಿ ಸಾಹಿತ್ಯದ ಮಹಾಪೂರವೇ ಹರಿಯುತ್ತಿದೆ. ಇದೆಲ್ಲ ಚಂದದ ಸಂಗತಿಗಳು. ಆದರೆ ನಮ್ಮ ಮೇರು ಬರಹಗಾರರ ಜ್ಞಾನಪೀಠ ಪುರಸ್ಕೃತ ಕೃತಿಯನ್ನೋ ಸಮಗ್ರ ಸಾಹಿತ್ಯವನ್ನೋ ಜನಕ್ಕೆ ಮುಕ್ತವಾಗಿ ಅರ್ಪಿಸುವಲ್ಲಿ ತೀರಾ ಹಿಂದಕ್ಕಿದೆ ಕನ್ನಡ ಲೋಕ. ಬೇಂದ್ರೆಯವರ ನಾಕುತಂತಿ ತುಂಬಾ ಸಣ್ಣ (ಗಾತ್ರದಲ್ಲಿ) ಕವನ ಸಂಕಲನ, ಹಾಗಿದ್ದೂ ಕನ್ನಡದ ಉನ್ನತ ಕೃತಿ. ವಿಷಾದವೆಂದರೆ ಅದು ಪೂರ್ತಿಯಾಗಿ ಅಂತರ್ಜಾಲದಲ್ಲಿ ಉಪಲಬ್ಧವಿಲ್ಲ. ಇದು ನಾಕುತಂತಿಯೊಂದರ ಪರಿಸ್ಥಿತಿಯಲ್ಲ, ನಮ್ಮೆಲ್ಲ ಉನ್ನತ ಕೃತಿಗಳ ಕಥೆಯೂ ಅದೇ. ಯಾಕೆ ನಮ್ಮ ಜ್ಞಾನಪೀಠ ಪುರಸ್ಕೃತರ ಕೃತಿಗಳನ್ನಾದರೂ ಅಂತರ್ಜಾಲಕ್ಕೆ ಮುಕ್ತವಾಗಿ ತೆರೆದಿಡಲಾರದಷ್ಟು ಬಡವರೇ ನಾವು? ನಮಗೆ ಅವುಗಳ ಮಾರಾಟವೇ ಆಗಬೇಕೆ? ಅಂತರ್ಜಾಲಕ್ಕೆ ತೆರೆದಿಟ್ಟರೆ ಆ ಕೃತಿಗಳ ಮಾರಾಟ ನಿಲ್ಲುತ್ತದೆಯೆನ್ನುವುದು ಶುದ್ಧ ಕುಂಟು ನೆಪ. ಗ್ರಂಥದ ಗಂಭೀರ ಓದು ಬೇಕಾದವನಿಗೆ ಇವತ್ತಲ್ಲ ನಾಳೆಗೂ ಪುಸ್ತಕವೇ ಶರಣು, ಗೂಗಲ್ಲಲ್ಲ. ಹಾಗಿದ್ದಾಗ ಪುಸ್ತಕಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಆದರೆ ಅಂತರ್ಜಾಲದಲ್ಲಿರುವ ಪುಸ್ತಕದ ಸಮಯೋಚಿತ ಉಪಯೋಗ ಹೆಚ್ಚು. ಇವತ್ತಿನ ಅನಿವಾರ್ಯತೆ ಅದು. ಯೇನ ಕೇನ ಪ್ರಕಾರೇಣ ನಾವೀ ಡಿಜಿ ಲೋಕದಲ್ಲಿ ಪ್ರಸ್ತುತವಿರಲೇ ಬೇಕಾದ ತುರ್ತಿದೆ. ಪುಸ್ತಕವನ್ನು ಮುದ್ರಿಸಿಯೇ ಓದುವೆವೆಂಬ ಹಟ ಬಿಡಬೇಕಾದ ಕಾಲ ಇದು.
ಮರಳಿ ಸಂಸ್ಕೃತದ ಲೋಕದ ಬಗ್ಗೆ ಹೇಳುವುದಾದರೆ- ಸಂಸ್ಕೃತ ವ್ಯಾಕರಣದ ಎಲ್ಲಾ ಸೂತ್ರ ಮತ್ತದರ ವಿವರಣೆಗಳು, ಉದಾಹರಣೆಗಳು, ಸಂಧಿ ಸಂಯೋಜಕ ಮತ್ತು ಸಂಧಿ ವಿಭಾಜಕ ವೆಬ್ ಸೈಟ್ ಗಳು, ಪದಾರ್ಥ ಹೇಳುವ ಕೋಶಗಳು (ಪ್ರಾಚೀನ ಮತ್ತು ನವೀನ ಎರಡೂ), ಪದವೊಂದು ರಚನೆಯಾದ ರೀತಿ ಪ್ರಕ್ರಿಯಾ ಸಮೇತ,  ವ್ಯಾಕರಣ ಪರಂಪರೆಯ ಪೂರ್ಣ ಮಹಾಭಾಷ್ಯ, (ಇದರ ಪೂರ್ಣ ಆವೃತ್ತಿಯ ಒಟ್ಟೂ ಒಂಭತ್ತು ಪುಸ್ತಕಗಳಿಗೆ ಐದು ಸಾವಿರ ರೂಗಳಾಗುತ್ತವೆ. ಹಾಗಿದ್ದೂ ಅದು ಅಂತರ್ಜಾಲದಲ್ಲಿ ಲಭ್ಯವಿದೆ), ಕಾವ್ಯಗಳು, ನಾಟಕಗಳು, ಶಾಸ್ತ್ರಗ್ರಂಥಗಳು, ಆಧುನಿಕ ಸಾಹಿತ್ಯದ ಕೆಲವು ಭಾಗ- ಗಳು ಕೈಬೆರಳ ತುದಿಯಲ್ಲಿವೆ. ಇವನ್ನೆಲ್ಲ ಸುಮ್ಮನೆ ಗೂಗಲ್ಲಲ್ಲಿ ಮುದ್ರಿಸಿ ಹುಡುಕಲಿಕ್ಕೆ ಹಚ್ಚಿದರೆ ನೂರಾರು ಲಿಂಕ್ಸ್ ತೆರೆದುಕೊಳ್ಳುತ್ತವೆ. ಎಲ್ಲಕಡೆ ಪಿಡಿಎಫ್ ನಲ್ಲಿ ಓಸಿಆರ್ ಲಭ್ಯವಿದೆ. ಕೆಲವಾರು ಗ್ರಂಥಗಳ ಮೊಬೈಲ್ ಆಪ್ ಸಿದ್ಧವಾಗಿದೆ. ಸಂಸ್ಕೃತ ನಿಯತಕಾಲಿಕೆಗಳು, ಮ್ಯಾಗಝೀನ್ ಮತ್ತು ಬ್ಲಾಗ್ ಗಳು ಮುಕ್ತವಾಗಿ ಲಭ್ಯವಿವೆ. ಸಂಸ್ಕೃತ ವಿಕಿಪೀಡಿಯದ ಕೆಲಸ ನಡೆದಿದೆ, ಹಲವಷ್ಟು ಈಗಾಗಲೇ ಲಭ್ಯವಿದೆ.  ಇದಿಷ್ಟೇ ಅಲ್ಲ, ಬೌದ್ಧ ಮತ್ತು ಜೈನ ಗ್ರಂಥಗಳೆಲ್ಲ ದಿನವೂ ಅಪ್ಡೇಟಾಗುತ್ತಿವೆ. ನಾನು ಭಾಗವಹಿಸುವ ಗೂಗಲ್ ಸಮುದಾಯವೊಂದರಲ್ಲಿ ವಾರಕ್ಕೆರಡಾದರೂ ಹೊಸದೊಂದು ಜಾಲಪುಸ್ತಕದ ಲಿಂಕ್ ಬಂದಿರುತ್ತದೆ. ಅಂದರೆ ಆ ವೇಗದಲ್ಲಿ ಕೆಲಸ ನಡೆಯುತ್ತಿದೆ. ಮೊನ್ನೆ ಮೊನ್ನೆ ಶುರುವಾದ ಸಂಸ್ಕೃತ ಸಂವರ್ಧನ ಪ್ರತಿಷ್ಠಾನದಡಿಯಲ್ಲಿ ಈ ಕೆಲಸ ಇನ್ನಷ್ಟು  ಭರದಿಂದ ಸಾಗಿದೆ. ನನಗೆ ಪೂರ್ಣ ವಿಶ್ವಾಸವಿದೆ, ಇನ್ನು ಕೆಲವೇ ಕಾಲದಲ್ಲಿ ಪೂರ್ಣ ಸಂಸ್ಕೃತ ಲೋಕ ಅಂತರ್ಜಾಲದಲ್ಲಿರುತ್ತದೆ.  ನೆನಪಿಸುತ್ತೇನೆ, ಇಷ್ಟೆಲ್ಲ ಆಗುವಾಗ ಕನ್ನಡದ ವೈಯಾಕರಣ ಕೇಶಿರಾಜರ ಶಬ್ದಮಣಿದರ್ಪಣ ಸಮಗ್ರವಾಗಿ ಅಂತರ್ಜಾಲದಲ್ಲಿ ಲಭ್ಯವಿಲ್ಲ. ಮುದ್ದಣ ಮನೋರಮೆಯರು ಅರ್ಧಂಬರ್ಧ ಸಿಗುತ್ತಾರೆ. (ಹಾಗಿದ್ದೂ ಸಂಸ್ಕೃತದ ದೂಷಣೆಗೆ ಸಭ್ಯೆ ಮನೋರಮೆಯನ್ನು ಬಳಸಿಕೊಳ್ಳುವುದನ್ನಿಲ್ಲಿ ಸ್ಮರಿಸಬಹುದು) ಏನಾಗಿದೆ ಕನ್ನಡಕ್ಕೆ? ಕನ್ನಡ ವಿಶ್ವವಿದ್ಯಾಲಯಗಳಿಗೆ ಮತ್ತು ಸಾಹಿತ್ಯಧುರಂಧರರಿಗೆ?
ಸಂಸ್ಕೃತವನ್ನು ಅಲ್ಲಿಟ್ಟರು, ಇಲ್ಲಿಟ್ಟರು, ಪೆಟ್ಟಿಗೆಯೊಳಗೆ ಮತ್ತು ಹೊಟ್ಟೆಯೊಳಗಿಟ್ಟರು, ಸೀಸ ಸುರಿದರು ಎಂದೆಲ್ಲ ಇವತ್ತಿಗೂ ಕನ್ನಡ ಲೋಕದ ಒಂದು ಭಾಗ ಬೊಬ್ಬಿರಿಯುತ್ತಲೇ ಇದೆ. ಜಗತ್ತು ಮಾತ್ರ ಇವರನ್ನು ಹಿಂದಕ್ಕೆ ಬಿಟ್ಟು ಸಂಸ್ಕೃತವನ್ನು ತಬ್ಬಿಕೊಳ್ಳುತ್ತಿದೆ. ಅದಕ್ಕೆ ಸಂಸ್ಕೃತ ಜಗತ್ ಕೂಡ ಸಹಜವಾಗೇ ಸ್ಪಂದಿಸುತ್ತಿದೆ. ಸೀಸದ ಪ್ಯಾಕ್ಟರಿ ಮಾಲೀಕರದ್ದೇನೂ ಈ ಬಗ್ಗೆ ತಕರಾರು ಬಂದಿಲ್ಲ.
ಇನ್ನು ಸರಕಾರ ನಡೆಸುವ ಸಾಹಿತ್ಯ ಜಾತ್ರೆಗಳ ಅವ್ಯವಸ್ಥೆ ಮತ್ತು ಗಲಾಟೆಯನ್ನಂತೂ ಪ್ರತಿವರ್ಷ ನೋಡುತ್ತೇವೆ. ಸಂಸ್ಕೃತದ ಹೆಸರಲ್ಲಿ ಮಹಾಮೇಲವೊಂದು ಕೆಲ ವರ್ಷಗಳ ಹಿಂದೆ ಬೆಂಗಳೂರಲ್ಲಿ ನಡೆದಿತ್ತು, ನಾಲ್ಕು ದಿನಗಳ ಕಾಲ. ಅದರ ವ್ಯವಸ್ಥಿತ ನಿರ್ವಹಣೆ ಹೇಗಿತ್ತೆಂಬುದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.
ಕೊನೆಯದಾಗಿ, ಕನ್ನಡದ ಮನಸುಗಳು ಜಾತಿ ಪ್ರಜ್ಞೆಯಿಂದ ಹೊರಬರಲೆಂಬ ಪ್ರಾರ್ಥನೆಯೊಂದಿಗೆ ಕನ್ನಡದ ಮೇರು ಕೃತಿಗಳ ಅಂತರ್ಜಾಲ ಲಭ್ಯತೆಗಾಗಿ ಕಾಯುತ್ತೇನೆ.  

Sunday, January 31, 2016

ಹಣತೆ.

ಇಂದಿರುಳು ಎನಗಿರಲಿ
ಒಂದು ಮೃದು ಹೊಂಬೆಳಕು
ಚೆನ್ನಿರುಳು; ಹೊಸಬಗೆಯ ಕಕ್ಕುಲಾತಿ. 
ಹಳೆಯದೊಂದಿರಲಿಂದು
ಸಹಜ ಬೆಚ್ಚನೆ ಭಾವ
ಇರಲಿ ಈ ಇರುಳಿನಲಿ ನನ್ನನಾವರಿಸಿ.

ತಿಳಿನೆರಳ ಕಪ್ಪಿನಲಿ
ನನ್ನಿರವನಡಗಿಸಲು
ಅನುವಾಗಲೊಂದೊಮ್ಮೆ ಹಣತೆ ದೀಪ;
ಸುಡುಗಣ್ಣ ಸಾಂತ್ವನಿಸೆ
ತಂಪು ಕಿರಣಗಳಿರಲಿ
ನಾ ಮೆಚ್ಚದುರಿ ಕಳೆವ ದೀಪ ರೂಪ.

ಅಡಗಬೇಕಿಂದಿರುಳು;
ತಮವದಾವರಿಸುವುದು
ಭಯಗೊಳಿಪುದೆನ್ನನೀ ಘೋರ ಬೇನೆ.
ಅಳಿಯದೇ ಉಳಿವೊಂದು
ದೀಪಕುಡಿಯಿರಲೆನಗೆ
ಇರುಳುಕಳೆದೆನ್ನ ತಾ ಸಮ್ಮೋಹಗೊಳಿಸೆ.

ಇರುಳು ನಾನೇಕಾಂಗಿ
ಅವಧರಿಸು ಈ ನನ್ನ
ತನುದುಂಬಿದಾವಿರಹ ಖಾಲಿತನವ.
ನಾ ಮೌನಿ, ನಾನೊಂಟಿ
ಈ ಬೆಳಕ ಹೊನಲೊಡನೆ,
ಬೆಳಗುವೆನು ಹಣತೆಯನು ಕಳೆಯೆ ನೋವ.


Candle.

Tonight, I need a softer light,
a softer night, a different
kind of care.. I need
an old fashioned thing,
simple comfort to wrap me in;
candle light so I may hide,
in softer shadows, I need the
soothe, the gentle flame,
for eyes that burn, eyes
that prickle.. though I refuse them.
Tonight I need to hide,
the dark encroaches, and
I fear this dreadful ache..
I need the steady flicker, the slow
burn wick, to mesmerise,
to keep the night away..
hold back this hollow feeling,
this bereft.. heavy in my bones.
Tonight I am alone so
I light a candle, to assuage, 
this awful ache..
I am quiet, alone.. 
with
a flame that gutters...!!!




ಅವತರಣ- ನವೀನ ಗಂಗೋತ್ರಿ.

Friday, January 29, 2016

ಭಾಗ್ಯದ ವಲಯೇಶ.....

ಭಾಗ್ಯದ! ವಲಯೇಶ, ಯಾಹಿ ಮಜ್ಜನೀನಿಲಯಮ್
ತೇಹಂ ಕಥಂ ಜಾನೇ ಜನಿಕಾಯಾಃ ಸಂವಸಥಮ್
ಜಾನಾಮಿ ತನ್ಮಾರ್ಗಮಪಿ ನೈವ ಹೇ ಬಾಲೇ
ಸಂದಿಶ ಮೇ ಯಾಹಿ ತವ ದೇಶಮ್ 

ಸವ್ಯೇ ರಂಭಾವಾಟೀ, ಸವ್ಯೇತರೇ ಪನಸಮ್
ತನ್ಮಧ್ಯಮಾರ್ಗೇ ಸರ ತತ್ರ ವಲಯೇಶ
ತತ್ರೈವ ಮನ್ಮಾತೃಸಂವಸನಮ್
ಸುಮಂಗಲೇ ವತ್ಸೇ ಯಾಹಿ ಸಂದಿಶ ಪಂಥಾನಮ್

ಉನ್ನತೋನನ್ನತ ವೇಶ್ಮ, ಕಾಂಸ್ಯನಿರ್ಮಿತ ದ್ವಾರಮ್
ಸಂವದಮಾನಂ ಶುಕಯುಗಲಮೀಕ್ಷಸ್ವ
ತತ್ರೈವ ಮನ್ಮಾತೃಸಂವಸನಮ್
ಸುಮಂಗಲೇ ವತ್ಸೇ ಯಾಹಿ ಸಂದಿಶ ಪಂಥಾನಮ್


ಇಕ್ಷುಪೇಷಣಹೇತೋರ್ವಿಚಲಂತಿ ಯಂತ್ರಾಣಿ
ಕೇಕಿನಃ ಸಾರಂಗಾ ನಂದಂತಿ ವಲಯೇಶ
ತತ್ರೈವ ಮನ್ಮಾತೃಸಂವಸನಮ್
ಸುಮಂಗಲೇ ವತ್ಸೇ ಯಾಹಿ ಸಂದಿಶ ಪಂಥಾನಮ್

ಪುಣ್ಯಪರ್ಣೋಟಜೇ ಮೌಕ್ತಿಕ ಮಂಟಪೇ
ದೀವ್ಯತಿ ಸಾಕ್ಷೈರ್ವಲಯೇಶ ವೀಕ್ಷಸ್ವ
ಸಾ ಹಿ ಮಮಾಂಬಾ ಜಾನೀಹಿ..
ಸುಮಂಗಲೇ ವತ್ಸೇ ಯಾಹಿ ಸಂದಿಶ ಪಂಥಾನಮ್


ಗಾಢಲೋಹಿತಹರಿತವಲಯಾಯ ಸ್ಪೃಹಯಂತಿ
ಪ್ರಾಣಾಃ ಮನ್ಮಾತುರಿತಿ ವಿದ್ಧಿ ವಲಯೇಶ
ತತ್ರೈಕವಾರಂ ಚಲ ಕೃಪಯಾ...

ಭಾಗ್ಯದ! ವಲಯೇಶ, ಯಾಹಿ ಮಜ್ಜನೀನಿಲಯಮ್


ಭಾಗ್ಯದ ಬಳೆಗಾರ ಹೋಗಿ ಬಾ ನನ್ತವರಿಗೆ
ನಿನ್ನ ತವರೂರ ನಾನೇನು ಬಲ್ಲೇನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
ತೋರಿಸು ಬಾರೇ ತವರೂರ


ಬಾಳೆ ಬಲಕ್ಕೆ ಬಿಡೊ, ಸೀಬೇ ಎಡಕ್ಕೆ ಬಿಡೊ
ನಟ್ಟ ನಡುವೇಲಿ ನೀ ಹೋಗೋ ಬಳೆಗಾರ
ಅಲ್ಲಿಹುದೇ ನನ್ನ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರುಬಾರೆ ತವರೂರ


ಅಂಚಿನ ಮನೆ ಕಾಣೊ ಕಂಚಿನ ಕದ ಕಾಣೊ
ಮಿಂಚಾಡೊವೆರಡು ಗಿಣಿ ಕಾಣೊ ಬಳೆಗಾರ
ಅಲ್ಲಿಹುದೇ ನನ್ನ ತವರೂರು
ಮುತ್ತೈಡೆ ಎಲೆ ಹೆಣ್ಣೆ ತೋರು ಬಾರೆ ತವರೂರ


ಆಲೆ ಆಡುತಾವೆ ಗಾಣ ತಿರುಗುತಾವೆ
ನವಿಲು ಸಾರಂಗ ನಲಿತಾವೆ ಬಳೆಗಾರ
ಅದೇ ಕಾಣೋ ನನ್ನ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ


ಮುತ್ತೈದೆ ಹಟ್ಟೀಲಿ ಮುತ್ತೀನ ಚಪ್ಪರ ಹಾಕಿ
ನಟ್ಟ ನಡುವೇಲಿ ಪಗಡೆಯ ಆಡುತಾಳೆ
ಅವಳೆ ಕಾಣೊ ಎನ್ನ ಹಡೆದವ್ವಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ
 ಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ
ಎನ್ನ ಹಡೆದವ್ಗೆ ಬಲು ಆಸೆ ಬಳೆಗಾರ
ಕೊಂಡೋಗೋ ಎನ್ನ ತವರಿಗೆ
ಭಾಗ್ಯದ ಬಳೆಗಾರ ಹೋಗಿ ಬಾ ನನ್ತವರಿಗೆ
ಜಾನಪದ ಮೂಲ.
ಅನುವಾದ: ನವೀನ ಗಂಗೋತ್ರಿ




Friday, January 22, 2016

ಕ್ರಿಯಾಶೂನ್ಯ ಚಿಂತನೆಗಳ ಜಾತ್ರೆ ಮರುಳಿನಲ್ಲಿ...


ಅವರ ವಾದ ಹೇಗಿರುತ್ತದೆಯೆಂದರೆ-  ಅದನ್ನು ನೀವು ಸಾರಾಸಗಟಾಗಿ ತಳ್ಳಿಹಾಕಲಾರಿರಿ, ಅದರಲ್ಲಿನ ಎಲ್ಲವೂ ಸುಳ್ಳು ಎನ್ನಲಾರಿರಿ, ಒಪ್ಪುವ ಮಾತು ದೂರವುಳಿಯಿತು ಬಿಡಿ. ಅದರ ತಳದಲ್ಲೆಲ್ಲೋ ವಿಷದ ವಾಸನೆ ಬರುತ್ತಿದೆಯೆಂಬುದು ನಿಮಗೆ ಗೊತ್ತಾಗುತ್ತದೆ. ಇಲಿ ಪಾಷಾಣವನ್ನು ಮಸಾಲೆ ಬನ್ ಜೊತೆ ಇಡುತ್ತಾರಲ್ಲ, ಹಾಗೆಯೇ ಅದು.

ಹೌದು, ನಾನು ವಿತಂಡವಾದ ಮತ್ತು ವಿತಂಡವಾದಿಗಳ ಬಗ್ಗೆ ಮಾತಾಡುತ್ತಿದ್ದೇನೆ. ತನ್ನದಾದ ಮತ ಯಾವುದು ಅನ್ನುವುದನ್ನು ಸಾಂಗವಾಗಿ ಪ್ರತಿಪಾದನೆ ಮಾಡದ, ಮತ್ತು ಸಂಗತಿಯೊಂದನ್ನು ಖಂಡನೆ ಮಾತ್ರವೇ ಮಾಡಿ ಎದ್ದು ಹೋಗುವ ವಾದದ ಶೈಲಿಯೇ ವಿತಂಡಾ. ವಾದವೆಂದರೆ ಅದಕ್ಕೊಂದು ಚಂದವಿರಬೇಕು, ಸುಮ್ಮನೆ ಇನ್ನೊಬ್ಬನ ಮಾತನ್ನು ಖಂಡನೆ ಮಾಡುವುದು ಮತ್ತು ತನ್ನದನ್ನು ಮಂಡನೆ ಮಾಡದೆ ಎದ್ದು ನಡೆಯುವುದು ವಾದ ಅಂತಲೇ ಅನ್ನಿಸಿಕೊಳ್ಳುವುದಿಲ್ಲ. ನೀವು ಸರಿಯಾಗಿ ಊಹಿಸುತ್ತಿದ್ದೀರಾದರೆ ಇತ್ತೀಚೆಗೆ ಫೇಸ್ ಬುಕ್ಕಲ್ಲಿ ಚಲಾವಣೆ ಪಡೆದುಕೊಂಡ ಅಲಾವಿಕಾ ಅನ್ನುವವರು ಬರೆದ ಸಂಸ್ಕೃತದ ಕುರಿತಾದ ಲೇಖನ ಮತ್ತು ಡಾ. ಬರಗೂರರು ಭೈರಪ್ಪನವರ ಸಂಸ್ಕೃತದ ಕುರಿತಾದ ಮಾತುಗಳಿಗೆ ಬರೆದ ಪ್ರತಿಕ್ರಿಯಾತ್ಮಕ ಲೇಖನಗಳನ್ನು ಎದುರಿಗಿಟ್ಟುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ. ಇದಿಷ್ಟೇ ಅಲ್ಲದೆ ಹಿಂದೂ ಮದುವೆಗಳಲ್ಲಿ ಬಲಗಾಲಿಟ್ಟು ಒಳಗೆ ಬರುವುದನ್ನು ರಾಯರೊಬ್ಬರು ಮೇಲು ಕೀಳಿನ ಸಂಕೇತವೆಂದು ಕರೆದದ್ದು, ರಾಮ ಕಬ್ಬಿಣದ ಅದಿರು ತರಲು ಲಂಕೆಗೆ ಹೋದ ಅಂತ ಠರಾವು ಹೊರಡಿಸಿದ್ದು, ಸಾಕ್ಷಾತ್ ಭಗವಾನನೇ ಎದ್ದು ಆಸ್ತಿಕ ಮತ್ತು ನಾಸ್ತಿಕಪದಗಳಿಗೆ ಅರ್ಥ ಹೇಳಿ ಪ್ರಶಸ್ತಿ ಪಡೆದದ್ದು, ರೋಹಿತ್ ವೆಮುಲನ ಸ್ವಯಂಹತ್ಯೆಗೆ ಕರುಣಾಪೂರ್ಣವಾಗಿ ಕರಗುತ್ತಿರುವ ಕಾಮ್ರೇಡುಗಳು ಅವನ ದಲಿತತ್ತ್ವವನ್ನು ಮುಂದುಮಾಡಿಕೊಂಡು ಧೂಳೆಬ್ಬಿಸಿದ್ದು- ಇದೆಲ್ಲವೂ ಒಂದೇ ಐಡಿಯಾಲಜಿಯ ಬೇರೆ ಬೇರೆ ಸಂಭೂತಿಗಳು. ಒಟ್ಟಿನಲ್ಲಿ ಭಾರತದ ಐಡೆಂಟಿಟಿ ಯಾವುದೇ ಇದ್ದರೂ ಅದಕ್ಕವರ ವಿರೋಧ ಇದೆ.

ಇವರ ಐಡಿಯಾಲಜಿಗೆ ಸರಿಯಾದ ಗ್ರೌಂಡ್ ಲೆವಲ್ ಸಂಘಟನೆ ಅನ್ನುವುದೇ ಇಲ್ಲ. ಅಂದರೆ, ತಮ್ಮ ಐಡಿಯಾಲಜಿಯನ್ನು ಕಾರ್ಯರೂಪಕ್ಕೆ ತರುವ ಯಾವ ಸ್ವನಿರ್ಮಿತ ಸಾಧನವೂ ಅವರ ಬಳಿ ಇಲ್ಲ. ಸಮಯ ಬಂದಾಗ ಹೆಸರು ಹಾಕಿಕೊಂಡು ಪ್ಲಕಾರ್ಡ್ ಹಿಡಿದು ಆಯಕಟ್ಟಿನ ಜಾಗಗಳಲ್ಲಿ ಗಲಾಟೆ ಮಾಡುವುದು ಅವುಗಳ ಕಾರ್ಯ ಶೈಲಿ. ಹೆಗಲುಕೊಟ್ಟು  ತಮ್ಮ ಐಡಿಯಾಲಜಿಯನ್ನು ನಿರ್ಮಾಣ ಕಾರ್ಯವಾಗಿ ಬದಲಾಯಿಸುವ ಶಕ್ತಿ ಸಂಚಯ ಅವರಲ್ಲಿ ಇಲ್ಲ. ಚಿಂತನೆಗಳು, ಚಿಂತನೆಗಳು ಮತ್ತು ಚಿಂತನೆಗಳು ಮಾತ್ರವೇ ಅವರ ಬಂಡವಾಳ. ಅವಾದರೂ ತಮ್ಮ ಕಾಲ ಮೇಲೆ ತಾವು ನಿಲ್ಲುವ ಚಿಂತನೆಗಳೋ? ಅಲ್ಲ, ಪಕ್ಕಾ ಪರಾವಲಂಬಿ ಚಿಂತನೆಗಳು. ಯಾಕವನ್ನು ನಾನು ಪರಾವಲಂಬಿ ಅನ್ನುತ್ತಿದ್ದೇನೆ ಅಂದರೆ- ಮುಖ್ಯವಾಹಿನಿಯ ಮೂಲ ಚಿಂತನೆಯನ್ನು ಹಳಿಯುತ್ತ,ಅದನ್ನು ಕೀಳೈಸುತ್ತ, ಅದರ ದೋಷಗಳನ್ನು (of course ದೋಷಗಳಿದ್ದೇ ಇರುತ್ತವೆ) ಆಡಿಕೊಳ್ಳುತ್ತ, ಅದರ ಉತ್ಪನ್ನಗಳನ್ನು ದ್ವೇಷಿಸುತ್ತ ಈ ಜನಗಳ ಚಿಂತನೆಗಳು ಬದುಕುಳಿಯುತ್ತವೆ. ಉದಾಹರಣೆಗೆ - ರಾಷ್ಟ್ರವಾದದ ವಿರೋಧ. ರಾಷ್ಟ್ರವಾದವನ್ನು ವಿರೋಧಿಸಲಿಕ್ಕಾಗಿ ಇವರ ಉದಾಹರಣೆಯಾಗಿ ಜರ್ಮನಿಯ ಹಿಟ್ಲರನನ್ನು ಘೋರಿಯಿಂದೆಬ್ಬಿಸಿ ತರಲಾಗುತ್ತದೆ. ರಾಷ್ಟ್ರವಾದವೆಂದರೆ ಏಕಸಂಸ್ಕೃತಿ ವಾದವೆಂದೂ, ಅದರ ಹೇರಿಕೆಯಾಗುತ್ತಿದೆಯೆಂದೂ, ಬಹುಸಂಸ್ಕೃತಿ ನಾಶವಾಗುವುದೆಂದೂ ಎದೆ ಬಡಿದುಕೊಂಡು ಭೀಕರವಾಗಿ ಅಳುತ್ತಾರೆ. (ಹಾಗಂತ ಇವರೇ ಕೆಂಪು ಕಮ್ಯುನಿಸಮ್ಮನ್ನು ಆಲಂಗಿಸುತ್ತಾರೆ; ಅದನ್ನಪ್ಪಿಕೊಂಡ ಚೀನಾದ ಬಹುಸಂಸ್ಕೃತಿ ಏನಾಯ್ತೆಂದು ಗೊತ್ತಿದ್ದರೂ.) ಅತಿರಾಷ್ಟ್ರವಾದದ ಗಂಭೀರ ಅಪಸವ್ಯಗಳನ್ನೇ ಸಾಮಾನ್ಯ ರಾಷ್ಟ್ರ ಚಿಂತನೆಗೂ ಅನ್ವಯಿಸಿ ಅದಕ್ಕೆ ಕೆಲವು ಹಿರಿಯರ ಮಾತುಗಳನ್ನು ಕೋಟ್ ಮಾಡುತ್ತಾರೆ. (ಉದಾ- ರವೀಂದ್ರನಾಥ್ ಟಾಗೋರರು ರಾಷ್ಟ್ರವಾದ ಅತಿಯಾದರೆ ಏನಾಗುತ್ತದೆಂದು ಬರೆದಿದ್ದನ್ನೇ ತಮ್ಮ ವಾದಕ್ಕೆ ಬಳಸುವುದು). ಅಮೃತವೇ ಆದರೂ ಸರಿ, ಅತಿಯಾದರೆ ವಿಷವೇ ಅನ್ನುವುದು ಈ ದೇಶದಲ್ಲಿ ಸಾಮಾನ್ಯಜನಕ್ಕೆಲ್ಲ ಗೊತ್ತಿರುತ್ತದೆ. ಹಾಗಿದ್ದಾಗ, ರಾಷ್ಟ್ರವಾದವಾಗಲೀ, ಏಕತೆಯ ಚಿಂತನೆಯಾಗಲೀ ಅತಿಯಾದರೆ ಉಸಿರು ಕಟ್ಟುತ್ತದೆಂಬುದು ನಮ್ಮ ಜನಕ್ಕೆ ಗೊತ್ತಿರಲಾರದೆ? ಗೊತ್ತಿರುತ್ತದೆ, ಸಾಮಾನ್ಯರಿಗೆ ತಿಳಿದಿರುತ್ತದೆ; ಆದರೆ ಬುದ್ಧಿಹಲ್ಲು ಮೂಡಿಸಿಕೊಂಡವರಿಗಲ್ಲ. (ರಾಷ್ಟ್ರವಾದದ ಅತಿರೇಕವನ್ನು ವಿರೋಧಿಸುವ ಇವರೇ ಬುದ್ಧನನ್ನು ತಮ್ಮ ಆದರ್ಶ ಪುರುಷನನ್ನಾಗಿ ಬಗೆದು, ಬುದ್ಧನ ಉಪದೇಶದ ಅಹಿಂಸೆಯನ್ನು ಜಗತ್ತಿಗೆಲ್ಲ ಏಕಕಾಲಕ್ಕೆ ಅನ್ವಯಿಸಿ ಅತಿರೇಕಕ್ಕ ಒಯ್ದುಬಿಡುತ್ತಾರೆ.)

ಅಂದರೆ ಇವರ ಚಿಂತನೆಗಳು ಬದುಕುಳಿಯಲಿಕ್ಕೆ ಮುಖ್ಯವಾಹಿನಿಯ, ಬಹುಜನರೊಪ್ಪುವ, ಸಾಮಾನ್ಯ ಮನಸಿಗೆ ಸಮಾಧಾನಕರವಾಗಿರುವ ಚಿಂತನೆಗಳ ಅಗತ್ಯ ಇದ್ದೇ ಇದೆ. ಅದಿಲ್ಲದೆ ಇವರ ಚಿಂತನೆಗಳಿಗೆ ಅಸ್ತಿತ್ವವೇ ಇಲ್ಲ. ಸಂಸ್ಕೃತವನ್ನು ಬ್ರಾಹ್ಮಣರು ಬಧ್ರವಾಗಿ ಬಂಧಿಸಿಟ್ಟರು, ಶೂದ್ರರು ಕೇಳಿಸಿಕೊಂಡರೂ ಕಿವಿಯಲ್ಲಿ ಕಾದಸೀಸ ಸುರಿದರು ಅಂತೆಲ್ಲ ಇವರ ವಾದಗಳಿರುತ್ತವೆ. ಸ್ವಾತಂತ್ರ್ಯ ಬಂದಾಗಿನಿಂದ ಈ ದೇಶದಲ್ಲಿ ಸಂಸ್ಕೃತ ಒಂದೇ ಯಾಕೆ, ವೇದಗಳ ಕಲಿಕೆಯೂ ಎಲ್ಲರಿಗೆ ಮುಕ್ತವಾಗಿದೆ. ಅದಾಗಿ ಎಪ್ಪತ್ತು ವರ್ಷ ಕಳೆದರೂ ಅವರ ಅಳಲು ಮಾತ್ರ ಬದಲಾಗಿಲ್ಲ. ಅಂದರೆ, ಸಂದರ್ಭವೊಂದು ಬದಲಾದ ಮೇಲೂ ಆ ಕುರಿತಾದ ಹಳಹಳಿಕೆಗಳು ಇವರಲ್ಲಿ ಇಂಗಲಾರವು. ತಮ್ಮ ಗೋಳಾಟ ಇಲ್ಲದಂತಾಗುವ ಸಂದರ್ಭವೊಂದು ದೇಶದಲ್ಲಿ ಸೃಷ್ಟಿಯಾಗಲಿಕ್ಕೇ ಬಿಡದವರು ಇವರು.

ಅಯ್ತು, ಬ್ರಾಹ್ಮಣರು ಸಂಸ್ಕೃತ ಮತ್ತು ವೇದವನ್ನು ತಮ್ಮ ಜೋಳಿಗೆಯಿಂದ ಹೊರಬರಗೊಡಲಿಲ್ಲ ಅಂದವರು, ಅದಕ್ಕಾಗಿ ಗೋಳಿಟ್ಟವರು, ಅದರ ಬದಲಾವಣೆಗಾಗಿ ಕ್ರಿಯಾತ್ಮಕವಾಗಿ ಏನು ಮಾಡಿದರು? ಸಂಸ್ಕೃತ ಶಾಲೆ ತೆರೆದರೆ? ವೇದ ಮಂದಿರ ತೆರೆದರೆ? ಇಲ್ಲ. ಆದರೆ, ಬ್ರಾಹ್ಮಣ ಸಂಘಟನೆ ಎಂದು ಇವರೇ ಕರೆದು ಜರೆಯುವ ಆರೆಸ್ಸೆಸ್ ತಾನು ನಡೆಸುವ ಹಲವಾರು ಗುರುಕುಲಗಳಲ್ಲಿ ಶೂದ್ರರಿಗೂ ವೇದ ಸಂಸ್ಕೃತವನ್ನು ಹೇಳಿಕೊಡುತ್ತಿದೆ. ಕಲಿಯುತ್ತಿರುವ ಮಕ್ಕಳೂ ಇದ್ದಾರೆ. ಪಕ್ಕಾ ಬುಡಕಟ್ಟು ಜನಾಂಗದ ಸಿದ್ಧಿ ಸಮುದಾಯದ ಹುಡುಗ ಕೂಡ ವೇದ ಕಲಿಯುತ್ತಿದ್ದಾನೆ. ಇದೆಲ್ಲ ಕ್ರಿಯಾತ್ಮಕತೆಯಿಂದಲ್ಲದೆ ಬರಿಯ ಚಿಂತನೆಯಿಂದ ಸಾಧ್ಯವಾದ ಸಂಗತಿಯಲ್ಲ. ಚಿಂತನೆ ಅಂತ ಗಗನಕ್ಕೆ ಮುಖಮಾಡಿ ಕೂತವರು ಇವತ್ತಿಗೂ ಅದನ್ನಷ್ಟೇ ಮಾಡುತ್ತಿದ್ದಾರೆ.
ಹೀಗಾಗಿ, ಅಂದರೆ ಕ್ರಿಯಾತ್ಮಕತೆ ಇಲ್ಲದಿರುವುದರಿಂದಾಗಿ, ಅವಕ್ಕೆ ಸಜ್ಜಿತ ಸಂಘಟನೆಯ ಅಗತ್ಯವೇ ಇರಲಾರದು. ಇದ್ದರೂ ಅದರ ಕೆಲಸ ಹೃದಯ ವಿದ್ರಾವಕ ಕವಿಗೋಷ್ಠಿ ಮತ್ತು ಉನ್ಮತ್ತ ಬರವಣಿಗೆಗಳ ಚೌಕಟ್ಟಿನಿಂದ ಹೊರಬಂದು ದೇಶದ ಮಟ್ಟದಲ್ಲಿ ಏನನ್ನಾದರೂ ನಿರ್ಮಿಸುವ, ನಷ್ಟ ತುಂಬುವ ಕೆಲಸಕ್ಕಂತೂ ಒದಗಲಾರದು. ಹಾಗಿದ್ದೂ ಈ ಚಿಂತನೆ ಜೀವಂತವಾಗಿರುವುದು ಕಾಮ್ರೇಡುಗಳ ಕಂಠದ ಬಲದ ಮೇಲೆ. ಒಟ್ಟಿನಲ್ಲಿ ಚೀರಾಡಬೇಕು, ದೊಡ್ಡ ಸುದ್ದಿಯಾಗಬೇಕು, ಜನ ಮಾತಾಡಿಕೊಳ್ಳಬೇಕು. ಅದಷ್ಟಾಯಿತೆಂದರೆ ಅವರ ಕೆಲಸ ಮುಗಿದಂತೆ.

ಅವರು ಟೌನ್ ಹಾಲಿನ ಎದುರೋ, ಇನ್ನೆಲ್ಲೋ ಸರ್ಕಲ್ಲಿನಲ್ಲೋ ಘೋಷಣೆ ಕೂಗಿ, ಮೊಂಬತ್ತಿ ಹಚ್ಚಿ, ಎದ್ದು ಹೋದಬಳಿಕ ಕಟ್ಟುವ ಕಾರ್ಯಕ್ಕೆ ಅವರ್ಯಾರೂ ಒದಗಲಾರರು. ಅದನ್ನು ಇನ್ಯಾರೋ ಮಾಡಬೇಕು. ಅರ್ಧ ದಿನದ ಶೋ ಮತ್ತು ಸಂಜೆ ಹೊತ್ತಿನ ಪಾನಗೋಷ್ಠಿಗಳಲ್ಲೇ ಇಷ್ಟುಕಾಲ ಬದುಕಿದ ಬರೀ ಚಿಂತನೆಗೆ ಆಲಂಬನವೆಂದರೆ ಕಟ್ಟುವ ಮನಸ್ಥಿತಿಯ ಶ್ರಮ ಮತ್ತು ಕಾರ್ಯಗಳೇ ಅಲ್ಲದೆ ಬೇರೆ ಅಲ್ಲ. ವಿಭಾಜಕ ಮನಸ್ಥಿತಿಯನ್ನು ಮಾತ್ರ ಇಟ್ಟಕೊಂಡು ನಿರ್ಮಿತಿಯ ಚಿಂತನೆಯಿಲ್ಲದೆ ಹಿಸೆಯಾದ ಪಾಕಿಸ್ತಾನದ ಅವಸ್ಥೆಯಾದರೂ ಇವರ್ಯಾರಿಗೆ ನಿರ್ಮಾಣಾತ್ಮಕ ಚಿಂತನೆಯ ಅಗತ್ಯವನ್ನು ಅರಿವಾಗಿಸುತ್ತಿಲ್ಲ.
ಒಂದನ್ನು ವಿರೋಧಿಸುತ್ತೇವೆಂದರೆ ಅದಕ್ಕೆ ಪರ್ಯಾಯವಾದ ಗಟ್ಟಿ ಸಂಗತಿಯೊಂದು ನಮ್ಮಲ್ಲಿರಬೇಕಾಗುತ್ತದೆ; ಅದು ಸಕಾರಾತ್ಮಕತೆಯ ಮತ್ತು ನಿರ್ಮಾಣಾತ್ಮಕತೆಯ ಲಕ್ಷಣ. ನಿರ್ಮಿತಿಯ ಬಯಕೆ ಇಲ್ಲದ ಯಾವುದಕ್ಕೇ ಆದರೂ ನಿರಂತರ ಶ್ರದ್ಧೆ ಮತ್ತು ತಪಸ್ಸಿನ ಅಗತ್ಯ ಇಲ್ಲ; ಅದಕ್ಕೆ ನಡುಮಧ್ಯಾಹ್ನದಲ್ಲಿ ಬೀದಿಗಿಳಿಯುವ ಉಮೇದಿಯೊಂದೇ ಸಾಕಾಗುತ್ತದೆ. ನಿರ್ಮಾಣ ಬುದ್ಧಿಯ ತೊಂಭತ್ತು ವರ್ಷದ ಸಂಘಟನೆ ಆರೆಸ್ಸೆಸ್ ಇವತ್ತಿಗೂ ದಿನಾ ಬೆಳಗ್ಗೆ ಮತ್ತು ಸಂಜೆ ಶಾಖೆಯಲ್ಲಿ ತಪಸ್ಸು ಮಾಡುತ್ತದೆ, ಶಕ್ತಿ ಸಂಚಯಿಸಿಕೊಳ್ಳುತ್ತದೆ; ಯಾಕೆಂದರೆ ಅದಕ್ಕೆ ಮಾಡುವುದಕ್ಕೆ ಕೆಲಸವಿದೆ.  

ಕಟ್ಟುವ ಬಗ್ಗೆ ಮಾತಾಡಿರೆಂದರೆ ’ಮುರಿಯದೆ ಕಟ್ಟುವುದೆಂತು?’ ಎಂದು ಪ್ರಶ್ನೆ ಮಾಡುತ್ತಾರೆ. ಸಮಗ್ರವಾಗಿ ಕೆಡವಿಯೇ ಕಟ್ಟಬೇಕಾದ ಯಾವುದೂ ಪ್ರಕೃತಿಯಲ್ಲಿ ಇಲ್ಲ, ಅದು ಮಾನವ ಸಮಾಜದ ವ್ಯವಸ್ಥೆಗೂ ಅನ್ವಯಿಸುತ್ತದೆ. ಯಾವುದು ಸರಿಯಿಲ್ಲವೋ ಅದನ್ನಷ್ಟೇ ನೇರ್ಪುಗೊಳಿಸಿಕೊಳ್ಳುತ್ತ ಪ್ರಕೃತಿ ತನ್ನ ಬದುಕನ್ನು ಬದುಕುತ್ತದೆ. ಸಮಾಜವೂ ಹಾಗೆಯೇ; ಅದು ಸ್ವಯಂ ಗತಿಶೀಲವಾದ್ದು. ಪ್ರತಿಭಟನೆ, ಕ್ರಾಂತಿ ಮಾತ್ರವೇ ಅದನ್ನು ಮುನ್ನಡೆಸಬೇಕಿಲ್ಲ. ಕ್ರಾಂತಿಯ, ಸುಧಾರಣೆಯ, ವ್ಯವಸ್ಥೆಯ ಬದಲಾವಣೆಯ  ಮಾತಾಡುವ ಇವರೆಲ್ಲ ಇಷ್ಟು ವರ್ಷಗಳಲ್ಲಿ ಸಮಾಜದ ಶಾಂತಿಯ ಮತ್ತು ನಿಷ್ಕಾಮ ಬುದ್ಧಿಯ ಯಾವ ಸಂಘಟನೆಯನ್ನು ಬೆಳೆಸಿದ್ದಾರೆ? ದೇಶದ ಯಾವುದೇ ಭಾಗದಲ್ಲಿ ಅನಾಹುತವಾದರೆ ನೆರವಿಗೆ ಧಾವಿಸುವ ಯಾವ ’ಬುದ್ಧಿಜೀವಿ ಸಂಘಟನೆ’ ’ಚಿಂತಕರ ಚಾವಡಿ’  ಈ ದೇಶದಲ್ಲಿವೆ? ಅಂದರೆ,  ಚಿಂತನೆ ಮತ್ತು ವಿರೋಧಗಳು ಮಾತ್ರವೇ ತಮ್ಮ ಕೆಲಸವೆಂದೂ ಅಂತಿಮ ಕರ್ತವ್ಯವೆಂದೂ ಅವು ಬಗೆದಿವೆ. ಪ್ರತಿಭಟನೆಯಿಂದ ಯಾವು ಮತ್ತು ಘೋಷಣೆಗಳಿಂದ ಕಾರ್ಯ ಸಿದ್ಧಿಸುತ್ತದೆಂದು ನಂಬುವುದು ಈ ಜನರ ಮೂಢ ನಂಬಿಕೆಯಷ್ಟೇ.   

ಇವರಲ್ಲೇ ಕೆಲವು ಜನ ಮಾಧ್ಯಮದ ಆಯಕಟ್ಟಿನ ಜಾಗದಲ್ಲಿ ಕುಳಿತು ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ವ್ಯಾಖ್ಯಾನಿಸಬಲ್ಲವರಾಗಿರುತ್ತಾರೆ. ಅದೆಷ್ಟು ನಯವಾದ ಸುಳ್ಳುಗಳನ್ನಿವರು ಆಡಬಲ್ಲರೆಂದರೆ, ಯಾವುದೇ ಐಡಿಯಾಲಜಿಯ ಹುಳ ಇನ್ನೂ ಹೊಕ್ಕಿರದ ಶುದ್ಧ ಮನಸಿನ ಒಬ್ಬಾತ ಅವರನ್ನೋದಿಕೊಂಡರೆ ಯಾವುದೋ ಒಂದು ವರ್ಗವನ್ನು ಶರಂಪರ ದ್ವೇಷಿಸತೊಡಗುತ್ತಾನೆ. ಇಲ್ಲದ ಒಂದನ್ನು ತಮ್ಮ ಮಾತಿನ ಭರದಲ್ಲೇ ಇವರು ಕಟ್ಟಿನಿಲ್ಲಿಸಬಲ್ಲರು (ಈ ವಿಷಯದಲ್ಲಿ ನಿರ್ಮಿತಿಯ ಶಕ್ತಿ ಅವಕ್ಕಿದೆ). ಸಧ್ಯದ ಸಂದರ್ಭದಲ್ಲಿ ಈ ನಿರ್ಮಾಣಶಕ್ತಿಗೊಂದು ಒಳ್ಳೆಯ ಉದಾಹರಣೆಯೆಂದರೆ ಅಸಹಿಷ್ಣುತೆಯ ಹೊಗೆ ಹಬ್ಬಿಸಿದ್ದು. ದೇಶವೆಲ್ಲ ಉಸಿರುಗಟ್ಟಿಹೋಗುತ್ತಿದೆ ಅಂತ ಕೆಲವು ಬುದ್ಧಿಶೂರರು ಕೂಗಿದ್ದೇ ತಡ, ಅದಕ್ಕೆ ಹೆಗಲೆಣೆಯಾಗಿ ಈ ದೇಶದ ಮಾಧ್ಯಮದ ಒಂದು ಭಾಗ ಆ ಹೊಗೆಯ ಗಾಢತೆಯನ್ನು ಹೆಚ್ಚಿಸಲು ತೊಡಗಿತು. ದೇಶದ ಜನಸಂಖ್ಯೆಗೆ ಹೋಲಿಸಿದರೆ ಧೂಳಿನಕಣಕ್ಕೂ ಸಮವಾಗದ ಇವರ ಸಂಖ್ಯೆ ಇಡೀ ದೇಶದಲ್ಲಿ ಗದ್ದಲ ಮಾಡಬಹುದು ಅಂದರೆ ಕಾಮ್ರೇಡುಗಳ ಚೀರಾಡುವ ಶಕ್ತಿಯನ್ನೊಪ್ಪಲೇ ಬೇಕು. ಒಂದೈವತ್ತು ಜನ ಅಜ್ಞಾತ ಸಾಹಿತಿಗಳು ಮತ್ತು ಕಲಾವಿದರು ಅಸಹಿಷ್ಣುತೆಯನ್ನು ವಿರೋಧಿಸಿ ’ಅವಾರ್ಡ್ ವಾಪಸಿ’ ಮಾಡಿದ್ದೇನು, ದಿನಾ ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದೇನು, ಅಮೀರ್ ಖಾನ್ ದೇಶ ಬಿಡುತ್ತೇನೆ ಅಂದಿದ್ದೇನು- ಆಹ್, ದೇಶದ ಜನಕ್ಕೆ ಅಸಹಿಷ್ಣುತೆ ಅನ್ನುವ ಪದ ಪರಿಚಯವಾಗಿ ಅದರ ಉಚ್ಚಾರಣೆ ಕಲಿಯುತ್ತಿರುವ ಹೊತ್ತಿನಲ್ಲೇ ಕಾಮ್ರೇಡುಗಳ ಕಂಠ ಸುಮ್ಮನಾಗಿಬಿಟ್ಟಿತ್ತು. ಬಿಹಾರ್ ಚುನಾವಣೆ ಮುಗಿದಿತ್ತಲ್ಲ ಹೇಗೂ! ಇದೀಗ ಒಬ್ಬೊಬ್ಬರಾಗಿ ವಾಪಾಸ್ ಮಾಡಿದ್ದನ್ನ ವಾಪಾಸ್ ಪಡೆದುಕೊಳ್ಳುತ್ತಿದ್ದಾರೆ. ನಯನ್ ತಾರ ಸೆಹಗಲ್ ಮರಳಿ ಪಡೆದುಕೊಳ್ಳೋದಕ್ಕೆ ಒಪ್ಪಿದರಂತೆ!

ಇಷ್ಟೆಲ್ಲ ಮಾಡಿದ್ದು, ದೇಶದ ತುಂಬಾ ಧೂಳೆಬ್ಬಿಸಿದ್ದು, ನೂರಕ್ಕಿಂತ ಕಡಿಮೆ ಸಂಖ್ಯೆಯ ಬುದ್ಧಿಜೀವಿಗಳೆಂದರೆ ನಂಬಬೇಕಷ್ಟೆ. ಅಂದರೆ, ಕೆಲವೇ ಜನ ಗಲಾಟೆಮಾಡಿಯೂ ದೇಶದ ಚಿಂತನೆಯನ್ನು ಚಂಚಲ ಮಾಡಬಹುದೆನ್ನುವುದಕ್ಕೆ ಇದು ಉದಾಹರಣೆ. ಯಾಕೂಬ್ ಮೆಮೊನ್ ತಾನು ಮಾಡಿದ ಪಾಪಕ್ಕೆ ಗಲ್ಲಿಗೇರಿದಾಗ, ಅವನ ಪರವಾಗಿ ಮಾನವೀಯತೆ ಇವರೊಳಗೆ ಎದ್ದುನಿಲ್ಲುತ್ತದೆ. ದೇಶದ ನಿರ್ದಿಷ್ಟ ಸಮುದಾಯದ ಯಾರಿಗೇನೇ ಆದರೂ ಇವರ ಪ್ರೊಫೈಲುಗಳಲ್ಲಿ ಶೋಕ ಮಡುಗಟ್ಟುತ್ತದೆ. ಇವರೆಂಥಾ ಸಂವೇದನಾಶೀಲರೆಂದರೆ ದೂರದೇಶದ ಹಿಂಸೆಯೂ ಇವರ ಎದೆ ಕಲಕುತ್ತದೆ. ಆದರೆ ದುರಂತವೆಂದರೆ ನಮ್ಮ ಮನೆಯಾಚೆಯ ರೈತನ ಸಾವು ಲೆಕ್ಕಕ್ಕಿಲ್ಲದ್ದಾಗುತ್ತದೆ. ಅದೆಷ್ಟು ನಿರ್ಲಜ್ಜವಾಗಿ ಸೆಲೆಕ್ಟಿವ್ ಮಾನವೀಯತೆ ಮತ್ತು ಜೀವಪರ ಸಂವೇದನೆ ಇವರದಾಗುತ್ತದೆ ಅಂದರೆ, ದೇಶದೊಳಗಿರುವ ಶತ್ರುಗಳೆಂದರೆ ಇವರೇ ಇರಬೇಕು ಅನ್ನಿಸುವಷ್ಟು.  

ಇವರು ಮಂಡಿಸುವ ವಾದಗಳೋ, ತಲೆ ಬುಡ ಇಲ್ಲದವು. ಕೆಲವು ಉದಾಹರಣೆಗಳು- ಸಾವು ದಲಿತನದಾಗಿದ್ದರೆ ಪ್ರತಿಕ್ರಿಯಿಸುವ ರೀತಿಗೂ, ದಲಿತನಲ್ಲದವನ ಸಾವಾಗಿದ್ದರೆ ಪ್ರತಿಕ್ರಿಯಿಸುವ ರೀತಿಗೂ ಅವರಿಗೆ ಮಾತ್ರವೇ ಅರ್ಥವಾಗಬಲ್ಲ ಡೆಮಾಕ್ರೆಟಿಕ್ ವ್ಯತ್ಯಾಸಗಳಿರುತ್ತವೆ. ಸಂಸ್ಕೃತಭಾಷೆಯು ಸಮಗ್ರವಾಗಿಲ್ಲವೆಂಬ ತಮ್ಮ ಮೂಗಿನ ನೇರದ ಅಭಿಪ್ರಾಯಕ್ಕೆ ತಕ್ಕಂತೆ ಫರ್ಮಾನ್ ಹೊರಡಿಸಿ ಆ ಬಳಿಕ ಅದು ಸ್ವಂತದ ಅಭಿಪ್ರಾಯ ಮತ್ತದು ಸಾರ್ವಜನಿಕವಲ್ಲ ಅಂದುಬಿಡಲಾಗುತ್ತದೆ. ಬರೆಯಲು ಮತ್ತೇನೂ ಸಿಗದಿದ್ದರೆ ನಮ್ಮಲ್ಲೇ ಭೈರಪ್ಪನವರಂಥಾ ಸಾಹಿತಿಗಳನ್ನೋ, ಅಥವ ವಿವೇಕಾನಂದರ ಮಾತುಗಳನ್ನೋ ತಮಗೆ ಬೇಕಾದಂತೆ ತಿರುಚಿ- ವ್ಯಾಖ್ಯಾನ ಬರೆಯಲಾಗುತ್ತದೆ. ಹೇಳ ಹೊರಟರೆ ಇನ್ನೂ ಸಾವಿರ ಇದೆ. ಒಟ್ಟರ್ಥ ಒಂದೇ, ಇವರ ಮನಸಿನ ಅಶಾಂತಿಯನ್ನೇ ಜಗತ್ತಿನ ತುಂಬ ಹಬ್ಬಿಸುವ ಜನ ಇವರು.

ತಮ್ಮ ಢೋಂಗಿ ಹೋರಾಟಗಳನ್ನು ಮತ್ತು ವಿರೋಧಕ್ಕಾಗಿ ವಿರೋಧಿಸುವ ಹುಸಿತನವನ್ನು ಬಿಟ್ಟು ಸಕಾರಾತ್ಮಕವಾದ ಮತ್ತು ತಾಳ್ಮೆಯಿರುವ ಸಂಘಟನೆಯೊಂದನ್ನು ಇವರು ಕಟ್ಟಬಲ್ಲವರಾದರೆ, ಆಗ ಸೈದ್ಧಾಂತಿಕ ಭಿನ್ನಾಪ್ರಾಯದ ಹೊರತಾಗಿಯೂ ಸಮಾಜ ಇವರನ್ನು ಒಪ್ಪಬಹುದು. ಅದಿಲ್ಲದಿದ್ದಲ್ಲಿ, ಪಿಶಾಚಿಗಳಂತೆಯೇ ಇವರ ಸಿದ್ಧಾಂತಗಳೂ ಸುತ್ತೆಲ್ಲ ಅಲೆಯುತ್ತ, ಆಗಾಗ ರಕ್ತ ಹರಿಸುತ್ತ, ಸ್ಮಶಾನದ ರುದ್ರತೆಯನ್ನು ದೇಶದಲ್ಲಿ ಪಸರಿಸುತ್ತ, ಜನಸಾಮಾನ್ಯರ ನೆಮ್ಮದಿ ಕೆಡಿಸುತ್ತ ವಿಘಟಕ ಬದುಕು ಬದುಕುವುದಷ್ಟೇ ಇವರ ಸಾಧನೆಯಾದೀತು.


Thursday, December 10, 2015

ಬೆಳಕಿನ ಹಾಡು  (ಕಾಂತಿಕಾವ್ಯಮ್)
==========
===========

ಒಂದೊಮ್ಮೆ ಮಂಜುನಾಥ ಕೊಳ್ಳೆಗಾಲರೊಡನೆ  ಮಾತಾಡುತ್ತ ಈ ಅನುವಾದದ ವಿಷಯ ಬಂದಿತ್ತು. ಮಂಜುನಾಥ ಕೊಳ್ಳೆಗಾಲರು ಅಂತರ್ಜಾಲದಲ್ಲಿ ನನಗೆ 
ದೊರೆತ ಹಿರಿಯರು, ವಿದ್ವನ್ಮಿತ್ರರು. ಅವರು ತಮ್ಮ ’ಬೆಳಕಿನ ಹಾಡು’ ಕವಿತೆಯನ್ನು ಸಂಸ್ಕೃತದಲ್ಲಿ ನೋಡುವ ಅಭಿಲಾಷೆಯಿದೆ ಅಂದಿದ್ದರು. ಅವರ ಕವಿತೆಯ ಅನುವಾದವನ್ನು ಯಥಾಮತಿ ಮಾಡಿದ್ದೇನೆ. ಇದೊಂದು ಸಂವಾದಿ ಕಾವ್ಯವೇ ಹೊರತು ಯಥಾವತ್ ಅನುವಾದ ಅಲ್ಲ.
ಅವರ ಹಾಡಿನ ಯಥಾವದ್ರೂಪವನ್ನೂ ಮತ್ತು ಅದನ್ನನುಸರಿಸಿ ನಾನು ಮಾಡಿದ ಅನುವಾದವನ್ನೂ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. 


ಚುಕ್ಕಿ ಬೆಳಕ ಚೆಲ್ಲುವಲ್ಲಿ
ಹಕ್ಕಿ ಹಾಡು ಮೂಡುವಲ್ಲಿ
ಕತ್ತಲೊಡನೆ ತೆಕ್ಕೆಬಿದ್ದು
ಎತ್ತಲಾಗೊ ಹೊರಳುತಿದ್ದ
ಬೆಳಕ ಹಬ್ಬವೆದ್ದಿತೈ
ಹೊಳೆವ ಮೈಯ ಮುರಿದಿತೈ

ತತಃ ಸುತಾರಾಗಣಮುಕ್ತಭಾಭಿಃ ಶಕುಂತಿಶಬ್ದಾಯಿತಸುಪ್ರಭಾತೇ
ತಮೋ ವಿನಿಘ್ನನ್ನುದತಿಷ್ಠದೇಷಃ ಪ್ರಭಾವಲೀಪೂರ್ಣಸುದೀಪರಾಜಃ ||೧||

ಒಳಗೆ ಬಚ್ಚಲಲ್ಲಿ ನೀರು
ಮರಳಿ ಮರಳಿ ಕುದಿವ ಜೋರು
ಕಾದ ಎಣ್ಣೆ ಸೌಟ ಹಿಡಿದು
ಸೀದ ಜಗುಲಿಯೆಡೆಗೆ ನಡೆದು
ಬಂದಳಿವಳು ಸರಸರ
ಚಂದವವಳ ಸಡಗರ

ಕೈಯನೆತ್ತಿ ತಲೆಯ ಸುತ್ತಿ
ಮೈಯ ಸವರಿ ಮೊಗವನೊತ್ತಿ
ಕಾದ ಎಣ್ಣೆ ಸುಡಲು ನೆತ್ತಿ
ಆಹ ಬಡಿಯೆ ಕೈಯನೆತ್ತಿ
ಉಜ್ಜುತಿರಲು ಗಸಗಸ
ತೋರುತಿತ್ತು ಗರಗಸ

ಸ್ನಾನಾಲಯೇ ತತ್ರ ಜಲಂ ವಿದುನ್ವತ್ ಕ್ವಥನ್ನದತ್ತಚ್ಚ ರವಂ ತನೋತಿ
ಹಸ್ತಸ್ಥಿತೋಷ್ಣೀಕೃತತೈಲಪಾತ್ರಾ ಸಾಕ್ಷಾದಿಯಂ ಸಂಭ್ರಮತಃ ಸಮಾಗಾತ್ ||೨||

ಚಲತ್ಕರಾಭ್ಯಾಮಭಿಲೇಪಯಂತೀ ತೈಲೇನ ಕಾಯಂ ಚ ಶಿರೋ ಮುಖಂ ಮೇ
ಮಾಽಕಾರಯತ್ ಸಾ ಸುಖಿತಂ ಪ್ರಸನ್ನಂ ಹಿತೋಷ್ಣಸಂವೇದನದಾನಶೀಲಾ ||೩||

ಕುದಿವ ನೀರ ಮೈಯಿಗೆರಚಿ
ಅಯ್ಯೊ ಬೇಡವೆಂದು ಅರಚಿ
ಕಣ್ಣ ತುಂಬ ತುಂಬಿ ಸೀಗೆ
ಆಗಬಹುದೆ ಇಂದು ಹೀಗೆ
ಕೊನೆಗು ಬಂತೆ ಬಿಡುಗಡೆ
ಆಹ ಎಂಥ ನಿಲುಗಡೆ!
ಹೊಸತು ಬಟ್ಟೆ ಹೊಸತು ಹೂ
ಹೊಸತು ಗಂಧ ಎಂಥ ಚಂದ
ಹೊಸತು ಬೆಳಕು ಬಣ್ಣ ಬಿಳುಪು
ಕಣ್ಣುಗಳಲಿ ಹೊಳೆವ ಹೊಳಪು
ನಮಿಸಿ ದೇವ ದೇವಗೆ
ಗಮನವಾ ಪಟಾಕಿಗೆ

ತಪಜ್ಜಲಂ ಜೀವಮಿಮಂ ಹಿನಸ್ತಿ ಕ್ರಂದನ್ನಹೋ ಸೋಢುಮಥಾಸ್ತಿ ಕೋ ಹಿ
ಫೇನಾವಲಿಪ್ತೇ ನಯನೇ ದ್ರವೇತೇ ಮುಕ್ತಿಸ್ಸಮಾಯಾಚ್ಚ ಕಥಂಚಿದಂತೇ || ೪ ||

ವಾಸೋ ನವಂ ತತ್ಸುಮನಂ ನವೀನಂ ಗಂಧೋ ನವೋ ನೂತನಮಸ್ತಿ ತೇಜಃ
ನಮನ್ತತೋನಾಥಮನಾಥಪಾಲಂ ಲೀಲಾಸ್ಫುಟತ್-ಸ್ಫೋಟಕಮಾದದಾತಿ || ೫ ||



ಮಗನಿಗಾ ಪಟಾಕಿ ಕೇಪು
ಒಳಗೆ ನಡುಗಿ ಕಿರುಚೆ ಪಾಪು
ಇವಳಿಗೆ ಸುರುಬತ್ತಿ ಕುಂಡ
ಬಾಣ ಬಿರುಸು ಬರಿಯ ದಂಡ
ಸಮಯವೀಗ ಊಟಕೆ
ಸಗ್ಗದ ರಸದೂಟಕೆ

ಉಚ್ಚೈಃ ಶಿಶುಃ ಕ್ರಂದತಿ ಶಬ್ದಭೀತಃ ಸುಪುತ್ರಕೇ ಫೋಟರತೇ ಬಹಿಷ್ಠೇ
ಅಸ್ಯಾಯಿದಂ ಸುರ್ಸುರುಶಬ್ದಕುಂಡಂ ಕಾಲಃ ಸಮೇತಃ ಪರಿಪಾತುಮತ್ತುಮ್ ||೭ ||

ಪಾಯಸ ಪುಳಿಯೋಗರೆ ಗೊಜ್ಜುಗಳೇನ್
ರಾಯತ ಕೋಸಂಬರಿ ಪಲ್ಯಗಳೇನ್
ಬಾಯೊಳು ನೀರೊಡೆಸುವ ಚಕ್ಕುಲಿಯೇನ್
ಕಾಯೊಬ್ಬಟ್ಟಿನ ಗಮಗಮ ಕಂಪೇನ್
ರಾಯನಡುಗೆಯೇಂ ಸಮನೆ ಇದಕೆ ಪೇಳ್
ಬಾಯ ತುಂಬ ನೀಂ ತಿಂದುಣ್ಣುತ ಬಾಳ್

ಆಯಾಸಾಪಗಮಪ್ರಸಿದ್ಧವಿಫುಲಾನನ್ನಾದಿಕಾನಾದರಾತ್  
ಪಲ್ಯಾದೀನಥಶಷ್ಕುಲೀಪರಿಯುತಂ ತದ್ರಾಜತಂ ರಾಯತಮ್
ಲಾಲಾಗ್ರಂಥಿವಿಭೇದಪೇಶಲಪುಲೀಯೋಗಾರಕೋಸಂಬರೀಮ್-
ಓಬ್ಬಟ್ಟಾದಿಸುರಾಜಸಗ್ಧಿಸಮಗಾನ್ ಭುಕ್ತ್ವಾ ರಮಸ್ವಾಧುನಾ ||೮||


ಹಗಲಿನ ಕೊನೆಗಿರಣಗಳಾಡುತಿರಲ್
ಹೆಗಲಿನ ಭಾರವ ರವಿ ಕೊಡವುತಿರಲ್
ಬೆವರಿದನೆನೆ ಹನಿಯೆರಡುದುರುತಿರಲ್
ಅವನಿಯ ಮೇಲ್ಕತ್ತಲೆ ಸೆರಗಿಕ್ಕಲ್

ದಿಗಂತವಿಶ್ರಾಂತರವಿಂ ಕೃತಶ್ರಮಮ್  ದಿನಾಂತಕಾಲೇ ಕಿರಣಾ ವ್ಯಭೂಷಯನ್
ತದಂಗತೋ ತೋಯಕಣಾ ಪತಂತ್ಯಮೀ ಸ್ವವಾಸಸಾ ರಾತ್ರಿರಿಳಾಮವಾರಯತ್  ||೯ ||

ಓಹೊ ಬೆಳಕು ಹರಿಯಿತೇಂ
ಬಾನು ಬಣ್ಣ ತಳೆಯಿತೇಂ
ಏಳುಬಣ್ಣದಿಂದ್ರಚಾಪ
ಬೆಳಕ ಸೆಳೆದು ಬಿಟ್ಟಿತೇಂ
ಹಳದಿ ಕೆಂಪು ಹಸಿರು ನೀಲಿ
ಬಿಳುಪ ಬಸಿರ ಸೀಳಿ ಸೀಳಿ
ತಮದ ಮಹಾಭಿತ್ತಿಯಲ್ಲಿ
ಗಮನಸೆಳೆವ ರಂಗವಲ್ಲಿ
ಸುರರ ಕಲ್ಪತರುವೆ ಹಿಗ್ಗು
ತರಳಿ ಹೂವ ಬಿಟ್ಟಿತೇಂ
ಮನದಿ ಮನೆಯ ಕಟ್ಟಿತೇಂ
ಮನದ ಕದವ ತಟ್ಟಿತೇಂ

ಅಹೋ ವಿಭಾಭಾಸಿತಭೂರಭೂದಿಯಂ ನಭೋಭವದ್ವರ್ಣಚಯಾನುಲೇಪಿತಮ್
ಸಮಂತತಃ ಕಿಂ ವಿಗುಣೀಕೃತಾದ್ಯುತಿಃ ಸುಸಪ್ತವರ್ಣಾಂಚಿತಶಕ್ರಧನ್ವನಾ ||೧೦ ||

ಸಿತಶ್ರಿಯೋ ನಿಷ್ಕ್ರಮಿತಾ ಕ್ರಮಾದಿಮೇ ಸಿತೇತರಾ ಲೋಹಿತಪೀತನೀಲಕಾಃ
ಸ ಕಲ್ಪವೃಕ್ಷೋ ಕಿಮು ಪುಷ್ಪಿತಃ ಸ್ವತೋ ತಮಸ್ಸುರಾರಾಜಿತರಾಗರಂಜನಾತ್ ||೧೧||  

ಮಂದಾನಿಲ ತಣ್ಣಗೆ ಬೀಸುತಿರಲ್
ಸುಂದರ ಕನಸೆನೆ ಹಬ್ಬವು ಕರಗಲ್
ಹಿತಮಿತದಿರುಳೂಟದ ಸವಿಯೆರೆಯಲ್
ಅತಿ ಹಿತದೊಳ್ ಮೆದು ಹಾಸಿಗೆ ಕರೆಯಲ್
ಹಬ್ಬದ ಬೆಳಕದು ಕಣ್ಣೊಳ್ ಕುಣಿಯಲ್
ತಬ್ಬಿದ ನಿದಿರೆಯ ತೋಳೊಳ್ ಜಾರಲ್
ಮುಗಿದಿತ್ತಾ ಸವಿ ದೀವಳಿಗೆ
ಸೊಗವನು ಹಂಚುತಲೀಯಿಳೆಗೆ

ಮಂದಂಮಂದಂ ನುದತಿ ಪವನೇ ಪರ್ವಣಿ ಕ್ಲಾಂತಿಮಾಪ್ತೇ
ಖಾದಂಖಾದಂ ನಿಶಿತದುಚಿತಂ ಭಕ್ಷ್ಯಭೋಜ್ಯಂಸುಭೋಜ್ಯಂ
ತತ್ರಶ್ರಾಂತ್ಯಾ ಮುದಿತಮನಸಾ ತಲ್ಪಮಾರುಹ್ಯ ಸಾಕ್ಷಾತ್
ಭದ್ರಾಂನಿದ್ರಾಂ ಪಿಹಿತನಯನೋ ಪ್ರೀತಿಭಾರಃ ಸಮೇತಿ ||೧೨||

ಇತಿ ದೀಪಾವಲೀನಾಮಾ ಶಾಂತಿಮಾಪ್ನೋತಿ ಸೂತ್ಸವಃ

ವಿಕಿರನ್ಕಾಂತಿಮಾಮೋದಂ ಲೋಕೇ ಸರ್ವತ್ರ ಭಾಸತೇ || ೧೩ ||