Showing posts with label ಅಲೆತ.. Show all posts
Showing posts with label ಅಲೆತ.. Show all posts

Tuesday, January 27, 2015

ಸದ್ದಿರದ ಕಣಿವೆ.


ಮೊನ್ನೆ ರವಿವಾರ ಜನೇವರಿಯ ೧೮ಕ್ಕೆ, ಕೇರಳದ Silent Valley ರಾಷ್ಟ್ರೀಯ ಉದ್ಯಾನಕ್ಕೆ ಹೋಗಿದ್ದೆ. ನಮ್ಮದೊಂದು ಬಳಗವಿದೆ, ’ಪ್ರಕೃತಿ ಬಳಗ’ ಎಂದು. ನಾವು ಕೆಲವರು ಸಮಾನಮನಸ್ಕ ಅಧ್ಯಾಪಕರು ಮತ್ತು ಆಸಕ್ತ ವಿದ್ಯಾರ್ಥಿಗಳಿರುವ ಬಳಗ ಅದು. ವಿರಾಮಕಾಲದಲ್ಲಿ ಪ್ರಕೃತಿಯ ಸೆರಗು ಹಿಡಿದು ಅಲೆದಾಡುವುದು ಇದರ ಹವ್ಯಾಸ. ಹಾಗೆ ಮೊನ್ನೆ ಆಯೋಜನೆಯಾದ್ದು ನಮ್ಮಿಂದ ೧೨೫ ಕಿ. ಮೀ ದೂರದಲ್ಲಿರುವ ಕೇರಳದ ಸದ್ದಿರದ ಕಣಿವೆ.

ನಮ್ಮ ವಾಹನ ಬೆಟ್ಟದ ಬಾಯಲ್ಲಿ ನಿಂತಾಗ ಬೆಳಗಿನ ೯ ಗಂಟೆ. ಅಲ್ಲೆಲ್ಲ ಇನ್ನೂ ಚಳಿಯಿತ್ತು, ಸೈಲೆಂಟ್ ವ್ಯಾಲಿಯ ಅರಣ್ಯ ಇಲಾಖೆಯ ಮಾಹಿತಿಕೇಂದ್ರಕ್ಕೆ ನಾವು ಬರುವ ಸೂಚನೆ ಮೊದಲೇ ಇತ್ತು. ಈ ಕಾಡಿಗೆ ಕಾಲಿಡುವುದಕ್ಕೆ ಇದೊಂದು ನಿಯಮವಿದೆ, ಮೊದಲೇ ಹೆಸರು ನೋಂದಾಯಿಸಬೇಕು. ಅದಿರದೆ ಪ್ರವೇಶವಿಲ್ಲ. 

ಕಾಡಿನ ಬಾಗಿಲಿಗೆ ಬಂದ ಬಳಿಕ ನಿಮ್ ನಿಮ್ಮ  ವಾಹನ ಬಡಿಗಿಡಬೇಕೆಂಬುದು ತಾಕೀತು. ಕಾಡಿನ ಅಂತರಂಗಕ್ಕೆ ಒಯ್ಯುವುದಕ್ಕೆ ಇಲಾಖೆಯದೇ ವಾಹನಗಳಿವೆ, ಖಾಸಗಿ ವಾಹನಗಳಿಗೆ ಒಳಬರುವಿಲ್ಲ. ಸರಿ, ಅವರಂದಿದ್ದಕ್ಕೆಲ್ಲ ಹೂಂ ಎಂದು ಗೋಣಾಡಿಸಿ, ಇಲಾಖೆಯ ಬಸ್ಸಲ್ಲಿ ಕೂತಾಯ್ತು. ನಮ್ಮೊಡನೆ ಒಬ್ಬ ದಾರಿತೋರುಗನೂ ಬಂದ. ಮುಂದಿನ ೨೫ ಕಿ. ಮೀ ಪೂರ್ತಿ ಗಾಢ ಬೆಟ್ಟ ಮತ್ತು ಕಡಿದಾದ ರಸ್ತೆ. ಅಲ್ಲಿನ ಓಡಾಟಕ್ಕೆ ಅದೇ ಚಾಲಕರೇ ಇದ್ದರೆ ಸರಿಯೆನ್ನಿಸುವಂತಿದೆ ರಸ್ತೆ. 

ಅದೊಂದು ನಿಸರ್ಗರಮಣೀಯವಾದ ಕಾಡಿನ ಮೌನ ತಪಸ್ಸಿನ ಕಣಿವೆ. ಕಾಡಿನ ನೀರವತೆಯನ್ನು ಕಲಕದಂತೆ ಮನವಿ, ಅಣತಿ ಎಲ್ಲವನ್ನೂ ದಾರಿತೋರುಗನೇ ಮಾಡಿದ. ಆ ನೀರವದಲ್ಲಿ ಅವ ಕಥೆ ಶುರುವಿಟ್ಟುಕೊಂಡ....

"ಅಪಾರ ಹಸಿರು ರಾಶಿ, ಎಂದಿಗೂ ಎಲೆಯುದುರಿಸಿ ಬೋಳಾಗದ ಕಾಡು, ಮನುಷ್ಯನನ್ನು ಒಳಗೆ ಬಿಟ್ಟುಕೊಂಡಿರದ ಕತ್ತಲೆ ಕಾನು, ಸೂರ್ಯಕಿರಣಗಳಿಗೂ ಹಸಿರುಗುಡಿಯೊಳಗೆ ಪ್ರವೇಶವಿಲ್ಲ... ಅಂಥಾ ಪರಮ ಗಂಭೀರ ಕಾಡಿನಲ್ಲಿ ಎರಡು ಪರ್ವತರಾಶಿಗಳು ಭೂಮಿಗಿಳಿಯುವ ಕಣಿವೆಯಲ್ಲೊಂದು ನದಿ. ಬಂಡೆಗಳನ್ನೇ ಕೊರೆದು ದಾರಿ ಮಾಡಿಕೊಂಡಿದೆಯೆನ್ನುವಂಥಾ ನದಿ ಅದು. ಆ ಕಾಡಿನ ನೆರಳಿನಲ್ಲಿ, ಆ ನದಿಯ ತಟಾಕದಲ್ಲಿ ಭಾರತದ ಅಪರೂಪದ ಕಾಡುಪ್ರಾಣಿಗಳಿವೆ.

ಹೀಗಿರುವಾಗ ಮನುಷ್ಯನೆಂಬ ದುರಂತ ಅವತಾರಕ್ಕೆ ಆ ಕಾಡು ದುರಾಸೆ ತಂಪಾಗಿಸುವ ಕಲ್ಪವೃಕ್ಷದಂತೆ ಕಂಡಿತು. ನದಿಯ ಹರಿವಿಗೆ ಹೆಚ್ಚಿನ ಖರ್ಚಿಲ್ಲದೆ ಅಣೆ ಕಟ್ಟೆ ಕಟ್ಟುವ, ಆ ಮೂಲಕ ಜಲವಿದ್ಯುತ್ ಉತ್ಪಾದಿಸುವ ಯೋಜನೆಯೊಂದು ಸಿದ್ಧವಾಯ್ತು. ಶಕ್ತಿಯ ದಾಹದ ಮುಂದೆ ಆ ಹಸಿರು ಹೊನ್ನು, ಅಲ್ಲಿನ ಜೀವರಾಶಿ, ಬುಡಕಟ್ಟು ಜನ, ಅಷ್ಟೆಲ್ಲ ಭೂಮಿ... ಹೀಗೆ ನಾಶವಾಗಲಿರುವ ಯಾವುದೂ ಮುಖ್ಯವಾಗಲಿಲ್ಲ. ಯೋಜನೆಯ ದಾಹಕ್ಕೆ ತೀವ್ರತೆಯೂ ಸಾಕಷ್ಟಿತ್ತು, ಇಂದಿರಾ ಸರಕಾರ ಎಪ್ಪತ್ತರ ದಶಕದಲ್ಲಿ ತರಾತುರಿಯಿಂದ ಯೋಜನೆಗೆ ಅಸ್ತು ಎಂದಿತ್ತು. ನೀಲನಕ್ಷೆ, ರಸ್ತೆ, ಉಳಿದ ಪರಿಕಲ್ಪನೆಗಳು.. ಎಲ್ಲವೂ ಸಿದ್ಧವಾದವು. ಪೂರ್ತಿ ಕಾಡು ಮನುಷ್ಯನ ಶಕ್ತಿದಾಹಕ್ಕೆ ಬಲಿಯಾಗಲು ಸಿದ್ಧವಾಯ್ತು. ಅಲ್ಲಿನ ಕೆಲವು ಮರಗಳ ಎದುರು ನಿಂತರೆ ನಾವೆಷ್ಟು ಚಿಕ್ಕವರೆಂಬುದು ಅರಿವಾಗುತ್ತದೆ. ೨೦೦-೩೦೦ ವರ್ಷದ ಮರಗಳಿರುವ ಕಾಡಿಗೆ ಮಾನವನೆಂಬ ಹುಲು(ಳು) ಜೀವಿ ಬಂದಳಿಕದಂತೆ ಅಮರಿದ್ದ ಸಂದರ್ಭ ಅದು.
ಭಾರತದ ಕೆಲವೇ ಬೆಟ್ಟಗಳಲ್ಲಿ ಬೆಳೆಯುವ ಅತಿ ಎತ್ತರದ ಮರಗಳು ಇಲ್ಲಿ ಬೆಳೆಯುತ್ತವೆ. ನೀಲಗಿರಿ ಲಂಗೂರ್ ಇಲ್ಲಿಯ ಪ್ರಮುಖ ಆಕರ್ಷಣೆಯ ಜೀವಿ. ಅದು ಬಿಟ್ಟರೆ ಎಲ್ಲೆಂದರಲ್ಲಿ ಸುಳಿದಾಡುವ ಆನೆ, ಅಲ್ಲೊಂದು ಇಲ್ಲೊಂದು ಚಿರತೆ... ಹೀಗೆ ಸಮೃದ್ಧ ಪ್ರಾಣಿ ಸಂಕುಲವಿದೆ. ಇಂದಿಗೂ ಕಾಡಿನೊಳಕ್ಕೆ ಒಯ್ಯುವ ಕಚ್ಚಾ ರಸ್ತೆಯ ತುಂಬ ಆನೆ ಲದ್ದಿ ಹೇರಳವಾಗಿ ಬಿದ್ದಿರುತ್ತದೆ.

ಸರಕಾರದ ಕೈಗಳು ಕಾಡಿಗೆ ನುಗ್ಗುತ್ತಿದ್ದಂತೆ ಬಹುಶಃ ಕಾಡಿನ ಪ್ರತಿಯೊಂದು ಜೀವವೂ ಮರುಗತೊಡಗಿತೇನೋ. ಜನಗಳು ಜಾಗೃತವಾದರು. ಆ ಜನಗಳೇನೂ ಅಲ್ಲಿ ವಾಸಿಸುವವರಲ್ಲ, ಆ ಬೆಟ್ಟ ಮುಳುಗಿದರೆ ಮನೆ ಹೋಗುವ ಸಂಕಟವೂ ಅವರಿಗಿಲ್ಲ.ಆದರೆ ಕಾಡು ಪ್ರೀತಿಸುವವರಿಗೆ ಗೊತ್ತು ಅದರ ನಾಶ ಎಂಥಾ ಬಗೆಯ ನೋವು ತರುತ್ತದೆ ಎಂಬುದು. ಅತಿ ಸಾಮಾನ್ಯ ಜನ ಹೋರಾಟಕ್ಕಿಳಿದರು, ಜಲಯೋಜನೆಯನ್ನೂ ಸರಕಾರದ ಉಪಕ್ರಮವನ್ನೂ ದಿಟ್ಟವಾಗಿ ವಿರೋಧಿಸಿದರು. ಒತ್ತಡಕ್ಕೆ ಸರಕಾರ ಮಣಿಯಲೇ ಬೇಕಾಯ್ತು, ಅಂತೂ ೧೯೮೫ ರಲ್ಲಿ ಸರಕಾರ ತನ್ನ ನಿಲುಮೆಯಿಂದ ಹಿಂಸರಿಯಿತು. ಅದೊಂದು ರಾಷ್ಟ್ರೀಯ ಉದ್ಯಾನವಾಗಿ ಉಳಿದಿದೆ ಇಂದು. ಅದರ ಉಳಿಕೆಗೆ ಜೀವ ತೇಯ್ದ ಎಲ್ಲ ಚೇತನಗಳಿಗೂ ನಮನ ಸಲ್ಲಿಸಿ ಆ ಹಸಿರಿನ ತಾಣದಲಿ ಮನಸು ಧ್ಯಾನಸ್ಥವಾಯ್ತು.
ಕಣಿವೆಯ ಹಾದಿ.

ಭಾರತದ ಗ್ರಾಮಗಳು, ಇಲ್ಲಿನ ಜನ, ಇಲ್ಲಿನ ಚರಿತ್ರೆ, ಕಡೆಗೆ ಇಲ್ಲಿನ ಕಾಡುಗಳು ಕೂಡ ಹೇಳುವುದಕ್ಕೆ ತಮ್ಮದೇ ಆದ ರಾಮಾಯಣದ್ದೋ ಮಹಭಾರತದ್ದೋ ಕಥೆಗಳನ್ನು ಉಳಿಸಿಕೊಂಡಿವೆ. ಅವು ಮೂಲಭಾರರತದಲ್ಲಿ ರಾಮಾಯಣದಲ್ಲಿ ಇರಲೇಬೇಕೆಂದಿಲ್ಲ, ತಮ್ಮ ತಮ್ಮ ಗ್ರಹಿಕೆಯೊಂದಿಗೆ ಪ್ರತಿಯೊಂದು ಸ್ಥಳವನ್ನೂ ಆ ಎರಡು ಮಹಾಕಾವ್ಯಗಳೊಡನೆ ಹೊಂದಿಸುವಲ್ಲಿ ನಮ್ಮವರಿಗೇನೋ ಖುಷಿಯಿದೆ. ಈ ವಿಷಯದಲ್ಲಿ ನಾವೆಷ್ಟು ಸಹಜವಾಗಿ ಮುಕ್ತವಾಗಿದ್ದೇವೆಂದರೆ, ಇಲ್ಯಾರೂ ಯಾರನ್ನೂ ಪ್ರಶ್ನಿಸುವುದಿಲ್ಲ "ಮೂಲ ಕಥೆಯಲ್ಲಿ ಹೀಗೆಲ್ಲ ಉಲ್ಲೇಖ ಇದೆಯೆ?" ಎಂದು. ಈ ಖುಶಿಯಿದೆಯಲ್ಲ, ಇದು ಸಂಸ್ಕೃತಿಯೊಂದರ ಮುಕ್ತತೆಯ ಕಾರಣಕ್ಕೆ ಬರುವಂಥದು.
ಸರಿ, ಈ ಕಾಡು ತನ್ನೊಡಲಲ್ಲಿ ಮಹಾಭಾರತದ ಕಥೆಯೊಂದನ್ನು ಉಳಿಸಿಕೊಂಡಿದೆ. ಮೂಲದಲ್ಲಿ ಅದು ಸೈರಂಧ್ರಿ ವನವಂತೆ. ಸೈರಂಧ್ರಿ ಎನ್ನುವುದು ಅಜ್ಞಾತವಾಸದ ಕಾಲದಲ್ಲಿ ದ್ರೌಪದಿಯ ಹೆಸರು. ಆಕೆಗೂ ಇಲ್ಲಿನ ಕಣಿವೆಯಲ್ಲಿ  ಹರಿಯುವ ನದಿಗೂ ಸಂಬಂಧವಿದೆಯೆಂಬುದು ಸಾರಾಂಶ.
ಅಂಥಾ ಕಣಿವೆಗೆ ತಲುಪುವುದಕ್ಕೆ ಕಚ್ಚಾ ರಸ್ತೆಯಿದೆ, ಏಕಮುಖಸಂಚಾರಕ್ಕೆ ಅನುವಾಗಿರುವ ಹಾದಿಯದು. ಬಹುಶಃ ಅಣೆಕಟ್ಟೆಯ ಜನ ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ರಸ್ತೆ ಇರಬಹುದು.
ಬರಬರುತ್ತ ಗಾಢವಾಗುವ ಕಾಡು ಸೈಲೆಂಟ್ ವ್ಯಾಲಿ ಎಂದು ಯಾಕೆ ಕರೆಸಿಕೊಳ್ಳುತ್ತದೆಯೆಂಬುದು ಮುಂದೆ ಸಾಗಿದಂತೆ ಅನುಭವಕ್ಕೆ ಬರುತ್ತದೆ. ಮಾತಿರಬಾರದು, ಕಾಡಿನ ಧ್ಯಾನಕ್ಕೆ ಒಳಗು ತೆರೆಯಬೇಕು ಎನ್ನುವ ಭಾವವೊಂದು ಅಪ್ರಯತ್ನವಾಗಿ ಮನಸನ್ನಾವರಿಸುತ್ತದೆ.

ಇಪ್ಪತ್ತೆರಡು ಕಿಲೋಮೀಟರು ಸಾಗಿದ ಬಳಿಕ ನದಿ, ಕಣಿವೆ ಪರ್ವತಾವಳಿಗಳು ಆಕಾಶವೆಂಬ ತೆರೆಯಲ್ಲಿ ಮೂಡಿದಂತೆ ಅನಾವರಣಗೊಳ್ಳುತ್ತವೆ. ಮನಸ್ಸು ಇನ್ನಷ್ಟು ಧ್ಯಾನಸ್ಥವಾಗಬಹುದಾದ ತಾಣ ಅದು. ಮುಮ್ದಿನದು ಚಾರಣದ ಭಾಗ; ಒಂದೈದು ಕಿಲೋಮೀಟರು. ನದಿಯ ತಣ್ಣೀರು, ಅಚಲ ಬಂಡೆಗಳ ಮಹಾರಾಶಿ, ಬೆಟ್ಟವೆಂಬ ದೇವತೆಯ ಸಜೀವ ದೇಗುಲ. ಚಿಂತನೆಗಳು ತಿಳಿಯಾಗುತ್ತ ಸಾಗಿ ಕೊನೆಗೊಮ್ಮೆ ಅವುಗಳಿಲ್ಲವಾಗುವ ಆನಂದಕ್ಕೆ ಇದೊಂದು ನೆಲೆಯಂತಿದೆ.
ಊಟಿ ಪರ್ವತದ ಇನ್ನೊಂದು ಮಗ್ಗುಲಂತೆ ಇದು.
ಶಿಖರದ ನೆತ್ತಿಯಲ್ಲಿ ವೀಕ್ಷಣಾ ಗೋಪುರವಿದೆ. ಅಲ್ಲಿಂದ ಸಿಗುವ ದೃಶ್ಯ ವೈಭವ ಅಮೋಘವಾದ್ದು. ಅಲ್ಲಿ ನಿಂತರೆ ಪರ್ವತಗಳೆಲ್ಲ ಅಂಗೈಲಿ ಬಂಧಿಯಾದಂತೆ, ಅಂಗಾಲಿಗೆ ನಿಲುಕಿದಂತೆ ಭಾಸ. ಕಾಲವೆಂಬುದು ಆ ಎತ್ತರದಲ್ಲಿ ಸಾವಧಾನಿಸಿ ಚಲಿಸುತ್ತಿರುವುದೋ ಎಂಬ ಭ್ರಮೆ.

ನೀಲಗಿರಿ ಲಂಗೂರ್ ಕಪಿಯನ್ನು ಹಿಡಿದು ತಿಂದ ಚಿರತೆ ವಿಸರ್ಜಿಸಿದ ಮಲವನ್ನು ಹೇರಳವಾಗಿ ಕಾಣಿಸಿದ ನಮ್ಮ ಗೈಡ್. ಅಲ್ಲಿನವರೆಲ್ಲ ಕಾಡಿನ ಪರಿಸರಕ್ಕೆ ಒಗ್ಗಿದ್ದಾರೆ, ಗಾಢ ಕಾಡಿನ ಜೀವಿಗಳ ಜೊತೆ ಸಹವಾಸ ಸಾಧಿಸಿದ್ದಾರೆ. ನಮ್ಮನ್ನಾತ ಎಷ್ಟು ಎಚ್ಚರಿಸಿದನೆಂದರೆ, ಗುಂಪು ಬಿಟ್ಟು ಕೊಂಚವೂ ಆಚೆ ಹೋಗಲು ಬಿಡುತ್ತಿರಲಿಲ್ಲ. ಆನೆಗಳು ಎಲ್ಲಿಂದಾದರೂ ಪ್ರತ್ಯಕ್ಷವಾಗಬಹುದು, ಒಂಟಿಯಾಗಿರುವುದು ಅಪಾಯ ಎಂಬುದು ಅವನ ಎಚ್ಚರಿಕೆ. ಎಲೆಯುದುರಿಸದ ಕಾಡಿನ ಪಕ್ಕಾ ಗುರುತು ಕೆಂಪು ಚಿಗುರಿನ ಮರಗಳು. ಜೀವದ ಬೆಂಕಿ ಬಿದ್ದಂತೆ ಚಿಗುರನ್ನೇ ಮುಡಿದು ನಿಲ್ಲುವ ಮರಗಳಿವೆ.  ಬಿಡಿ ಕಾಡಿನ ಸೌಂದರ್ಯವನ್ನು ಎಷ್ಟೆಂದರೂ ಪದಗಳಲ್ಲಿ ಹಿಡಿಯುವುದು ಆಗದ ಮಾತು.
ಕೆಂಚಿಗುರಿನ ನೋಟ. 
ಸೈಲೆಂಟ್ ವ್ಯಾಲಿಗೆ ಭೇಟಿ ಕೊಡುವ ಮನಸಿದ್ದರೆ ಮೊದಲು ತತ್ಸಂಬಂಧಿ ಜಾಲತಾಣಕ್ಕೆ ಭೇಟಿ ಕೊಡಿ. ಕೊಂಡಿ ಇಲ್ಲಿದೆ. ಒಮ್ಮೆ ಭೇಟಿಯಿತ್ತರೆ ಉಳಿದ ವಿವರಣೆಯನ್ನು- ಅಲ್ಲ- ಅನುಭವವನ್ನು ಕಾಡು ಕರುಣಿಸುತ್ತದೆ. ಕಾಡನ್ನು ತುಂಬ ಉನ್ನತವಾದ ದೃಷ್ಟಿಯಿಂದ ಕಾಣುವುದು ಮತ್ತು ಅದೇ ಬಗೆಯಲ್ಲಿ ನೋಡುವಂತೆ ಕೇಳಿಕೊಳ್ಳುವುದು ನನಗೆ ಇಲ್ಲಿ ಅತ್ಯಂತ ಮನನೀಯವೆನಿಸಿದ ಸಂಗತಿ. ಕಾಡೆಂಬುದು ಒಂತರಾತ್ಮನ ಕಾಣಬಹುದಾದ ನೆಲೆ, ಸದ್ದು ಮಾಡಬೇಡಿ, ಇದು ಸತ್ಯದ ಅರಿವಿನ ತಾಣ ಎಂಬ ಫಲಕಗಳು ಎದೆ ತುಂಬ ಖುಶಿ ತುಂಬಿದವು. ಒಮ್ಮೆ ಈ ನೆಲೆ ಬಂದು ಶಾಂತಿಯನ್ನನುಭವಿಸುವ ಮನಸು ಮಾಡಿ ನೀವೂ. ಮರಳಿ ಮನೆಗೆ ಬರುವಾಗ ಕಾಡೆಂಬ ದೇವರನ್ನು ಸಂದರ್ಶಿಸಿದ ಧನ್ಯತೆ ನಮ್ಮಲ್ಲಿತ್ತು.


Saturday, January 17, 2015

ಪ್ರೇತ ನಗರಿಯ ಸಂಕಥನ ಕೊನೆಯ ಭಾಗ:

Ghost City ಎಂದ ಮಾತ್ರಕ್ಕೆ ಪ್ರೇತಗಳ ನಗರಿ ಅದಾಗಬೇಕಿರಲಿಲ್ಲ. ಆದರೆ ಧನುಷ್ಕೋಡಿಯ ಚಿತ್ರಣ ಅದಕ್ಕೆ ಪೂರಕವಾಗಿ ಬದಲಾಯ್ತು.  ಎಲ್ಲವೂ ನಾಶವಾದ ಸ್ಥಿತಿಯಲ್ಲಿ ಬಿಕೋ ಎನ್ನುತ್ತಿರುವಾಗಲೇ ಅದು LTTE ಎಂಬ ತಮಿಳ್ ಉಗ್ರರ ತಾಣದಂತಾಯ್ತು. ಜಗತ್ತಿನಿಂದ ಬೇರಾಗಿ ನಿಂತ ಆ ನೆಲ ಶ್ರೀಲಂಕೆ ಮತ್ತು ಭಾರತದ ಮಧ್ಯೆ ಉಗ್ರರಿಗಿರುವ ಸುರಕ್ಷಿತ ಜಾಗವಾಯ್ತು. (ಒಂದು ಕಾಲಕ್ಕೆ ಲಂಕೆಯಿಂದ ಪ್ರತಿದಿನವೂ ಈ ಮಾರ್ಗವಾಗಿ ಹಾಲು ತರಲಾಗುತ್ತಿತ್ತಂತೆ, ರಾಮೇಶ್ವರನ ಅಭಿಷೇಕಕ್ಕಾಗಿ. ಈಗ ಅದೆಲ್ಲ ಕನಸಿನ ಮಾತು. ತುಂಬಾ ಹತ್ತಿರವಾಗಿ ಕಾಣಿಸುವ ಲಂಕೆಯೂ ಇಂದಿಗೆ ಭಾರತದಿಂದ ಒಂದು ತಾಸು ಹಾರಾಟದಷ್ಟು ದೂರ). ಹಾಗೆ ಜನ ಸಂಚಾರಕೆ ನಿರ್ಬಂಧ ಅಯಾಚಿತವಾಗಿ ಹೇರಿಕೆಯಾಯ್ತು. ಇದನ್ನೆಲ್ಲ ಮನಗಂಡ ನಮ್ಮ ಸರಕಾರಗಳು ಭಾರತೀಯ ಸೇನೆಯನ್ನು ಅಲ್ಲಿಗೆ ಕಳಿಸಿದುವು. ಕ್ರಮೇಣ ಭಾರತೀಯ ಸೇನೆಯ ವಿಚಿತ್ರ ಚಟುವಟಿಕೆಗಳ ತಾಣವಾಯ್ತು ಧನುಷ್ಕೋಡಿ ಎಂಬ Once flourished City. ಸೈನ್ಯವೆಂದ ಬಳಿಕ, ಸಾಮಾನ್ಯ ಜನತೆಗೆ ನಿಲುಕದ ಕೆಲವು ಚಟುವಟಿಕೆಗಳಿರುವುದು ಅಚ್ಚರಿಯೇನಲ್ಲ.  ಇದಿಷ್ಟೂ ಕಾಲವೂ ಅಲ್ಲಿಗೆ ಯಾವೊಬ್ಬ ನಾಗರಿಕನಿಗೂ ಪ್ರವೇಶವಿರಲಿಲ್ಲ. ಭಾರತದ ಭೂಭಾಗವೊಂದಕ್ಕೆ ಭಾರತೀಯರಿಗೂ ಪ್ರವೇಶವಿರಲಿಲ್ಲ! ನಿಧಾನಕ್ಕೆ LTTE ಬಲ ಕುಸಿಯಿತು. ತಮಿಳ್ ಲಿಬರೇಶನ್ನಿನ ಹುಲಿ ಪ್ರಭಾಕರ್ ಕೊನೆಯಾದ. ಆ ಬಳಿಕ ಭಾರತೀಯ ಸೇನೆ ಕೂಡ ಅಲ್ಲಿಂದ ನಿಧಾನಕ್ಕೆ ಕಾಲ್ತೆಗೆಯಿತು. 

ಮುಂದಿನ ಕೆಲವೇ ವರ್ಷಗಳಲ್ಲಿ ಜನತೆಗೆ ಮುಕ್ತವಾಯ್ತು ಧನುಷ್ಕೋಡಿ. 

ಆ ಹೊತ್ತಿಗೆ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಜನರಲ್ಲಿ ಸಾವಿರ ಬಗೆಯ ಗುಮಾನಿ ಹುಟ್ಟಿಕೊಂಡಿತ್ತು. ಕತ್ತಲೆಯ ಬಣ್ಣದ ಕಥೆಗಳು ಪುಕ್ಕ ಬಂದು ಸಮುದಾಯದೆಲ್ಲೆಡೆ ಹಾರಾಡಿದುವು. ಸತ್ತವರೆಲ್ಲ ಸಂಸ್ಕಾರವಿಲ್ಲದೆ ಪ್ರೇತವಾಗಿ ಅಲ್ಲಿಯೇ ಸುಳಿದಾಡುತ್ತಿದ್ದಾರೆ ಎನ್ನುವ ರಂಜನೆಯೂ ಅಂಟಿಕೊಂಡಿತು. ಒಟ್ಟಿನಲ್ಲಿ ಕೆಲವೇ ವರ್ಷಗಳಲ್ಲಿ ಧನುಷ್ಕೋಡಿ ಎಂಬ ಹಿಂದೂ ಯಾತ್ರಾ ಸ್ಥಳ, ರಾಮ ನಡೆದಾಡಿದ ತಾಣ, ಪ್ರೇತಗಳ ನಗರಿಯಾಗಿ ಬದಲಾಯ್ತು. ಇಂದಿಗೂ ಕೆಲವರ ಕಣ್ಣಲ್ಲಿ ಧನುಷ್ಕೋಡಿಯಲ್ಲಿ ಪ್ರೇತಗಳಿವೆ!
People awaiting for a train before ruined station!!!
ಈ ಕಥೆಯ ಹೊರತಾಗಿಯೂ ಇಂದಿಗೆ ಅ ನಗರವನ್ನು ಕಂಡರೆ ಮುರುಕು ಕಟ್ಟಡಗಳು, ಕಿತ್ತೆದ್ದ ರಸ್ತೆಗಳು ಮತ್ತು ಮರಳು- ನಮ್ಮನ್ನು ಮರುಳಾಗಿಸುತ್ತವೆ- ಪ್ರೇತಗಳಿರಬಹುದೇ ಎಂದು! ಇದೀಗ ಸರಕಾರ ಧನುಷ್ಕೋಡಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಚಿಂತನೆ ನಡೆಸುತ್ತಿದೆಯಂತೆ. ಅದಾಗುವುದಾದರೆ ಅಲ್ಲಿ ಮೂಲಸೌಕರ್ಯಗಳನ್ನಾದರೂ ನಿರೀಕ್ಷಿಸಬಹುದು. 

ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದೆನಷ್ಟೆ. ಸುತ್ತಲೂ ಸಮುದ್ರವೇ ಇರುವ ಈ ಮರಳೂರಿನಲ್ಲಿ ಸಿಹಿನೀರಿಗೆ ಕೊರತೆಯಿಲ್ಲ! ಸಿಹಿನೀರಿನ ಸಹಜ ಕುಣಿಗಳಿವೆ, ಇದೊಂದು ವಿಚಿತ್ರ ಸತ್ಯ. ಅದೇ ಕುಣಿಗೆ ರಿಂಗ್  ಇಳಿಸಿ ಬಾವಿಯಂತೆ ಮಾಡಿಕೊಂಡಿದ್ದಾರೆ ಕೆಲವೆಡೆ. ಅದೇನೂ ಆಳವಿರುವುದಿಲ್ಲ. ಎಂಟೋ ಹತ್ತೋ ಅಡಿ ಆಳವಿರಬಹುದಷ್ಟೇ. ಜನ ಇವುಗಳಿಂದ ನೀರು ಪಡೆಯುತ್ತಾರೆ. ಮುರಿದ್ಉ ಬಿದ್ದ ಅವಶೇಷಗಳ ಮಧ್ಯೆ ಬದುಕಿ ಕೂಡ ಅವಶೇಷದಂತೆಯೇ ಸಾಗುತ್ತಿದೆ ಅಲ್ಲಿ.
ಸಿಹಿನೀರಿನ ಸಹಜ ಹೊಂಡ.
ಒಂದು ಕಾಲದಲ್ಲಿ ಚೆನ್ನಾಗೇ ಇದ್ದ ಚರ್ಚ್ ಆಗಿತ್ತಂತೆ ಇದು!
ಅಂದಿನ ಗೋಡೆಗಳಿಗೆ ಬಳಸಲಾದ ಕಲ್ಲಿನ ಸಂರಚನೆಯೂ ಮುಳುಗದೆ ತೇಲುವ ಕಲ್ಲಿನ ಸಂರಚನೆಯನ್ನು ಹೋಲುತ್ತದೆ. ಹಾಗಂತ ಇದೆಲ್ಲ ತೇಲುವ ಕಲ್ಲಲ್ಲ ಮತ್ತೆ! ಭೂಪದರಗಳ ನಿರ್ಮಾಣ ಹಂತದಲ್ಲಿ ಯಾವುದೋ ಬಗೆಯ ನಿರ್ದಿಷ್ಟ ಪ್ರಕ್ರಿಯೆಗೆ ಒಳಗಾಗಿದೆ ಇಲ್ಲಿನ ಶಿಲಾರಾಳ ಎಂದಂತಾಯ್ತು. ಇಲ್ಲಿ ಪಕ್ಕದಲ್ಲಿರುವುದು ಚರ್ಚ್ ಗೋಡೆಗೆ ಬಳಸಲಾದ ಕಲ್ಲಿನ ಚಿತ್ರ. ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿಯೂ ರಂಧ್ರಗಳು ಕಾಣ ಸಿಗುತ್ತವೆ.
ಇದೀಗ ಧನುಷ್ಕೋಡಿಯಲ್ಲಿ ದೂರದೂರದವರೆಗೆ ಉಳಿದಿರುವುದೆಲ್ಲ ಒಡಕು ಕಟ್ಟಡಗಳು, ಎಲ್ಲೋ ಮರಳಿನೊಡನೆ ಮರೆಯಾಗಿರಬಹುದಾದ ತಲೆಬುರುಡೆಗಳು ಮತ್ತು ಸಂಜೆ ೩- ೪ ರ ಹೊತ್ತಿಗೆ ಆರಂಭವಾಗಿ ಮರುಬೆಳಗು ೧೦ ಗಂಟೆಯವರೆಗೆ ಅವ್ಯಾಹತವಾದ ನಿರ್ಜನ ಮೌನ. ಇಲ್ಲಿರುವಷ್ಟೇ ಜನವಾದರೆ ಎಂಥ ಶಬ್ದ ಮಾಡಿಯಾರು! ಸಮುದ್ರವೂ ಮೌನಿಯಿಲ್ಲಿ. 
ತಂದಿದ್ದ ನೀರು ಖಾಲಿಯಾಗುವವರೆಗೆ ಅಲ್ಲೆಲ್ಲ ಸುತ್ತಾಡಿ, ಸಾಕೆನಿಸಿದ ನಂತರ ನಾವೆಲ್ಲ ಮತ್ತೆ ನಮ್ಮನ್ನು ಹೊತ್ತು ಬಂದಿದ್ದ ಮ್ಯಾಕ್ಸಿ ಕ್ಯಾಬ್ ಇದ್ದಲ್ಲಿ ಮರಳಿದೆವು. ಅದೋ, ನಮ್ಮನು ಅದೇ ದಾರಿಯಲ್ಲದ ದಾರಿಯಲ್ಲಿ ಹೊತ್ತು ಬಂದಿತು. ಅಷ್ಟು ಪ್ರಯಾಣಕ್ಕೆ ಎಲ್ಲ ಸೇರಿ ಗಾಡಿಯವನಿಗೆ ೨೦೦೦ ರೂ. ಕೊಟ್ಟಿದ್ದಾಯ್ತು. ವಾಪಸ್ ಬಸ್ಸು ಹತ್ತುವ ಜಾಗಕ್ಕೆ ಬಂದಾಗ ಧನುಷ್ಕೋಡಿಗೆ ಹೊರಟಿದ್ದ ಜೋಡಿ ಉದ್ದುದ್ದದ್ದೆರಡು ಐಸ್ ಕ್ಯಾಂಡಿ ಮೆಲ್ಲುತ್ತ ಸಮುದ್ರ ದಂಡೆಯ ಮರಳಲ್ಲಿ ಆತು ಕುಳಿತಿದ್ದರು. 

ನನ್ನ ಮುಂದಿನ ಪ್ರಯಾಣ ಅಗ್ನಿತೀರ್ಥವೆಂಬ ಸಮುದ್ರ ತೀರಕ್ಕೆ. ವಸ್ತುತಃ ಜನ ಅಲ್ಲಿ ಸ್ನಾನ ಮಾಡಿ ಪುಣ್ಯ ಗಳಿಸುತ್ತಾರಂತೆ. ನನಗೆ ಬೋಟ್ ರೈಡಿಂಗ್ ಕಂಡಿದ್ದರಿಂದ ಆ ಕಡೆಗೆ ಹೋದೆ. ಮಧ್ಯಾಹ್ನದ ಬಳಿಕದ ಸಾಗರ ತನ್ನ ವಿಶಿಷ್ಟ ಬಣ್ಣದಲ್ಲಿ ಹೊಳೆಯುತ್ತಿತ್ತು.ಆ ಹೊತ್ತಿನ ಜಲಯಾನ ಮನಸಿಗೆ ಮುದ ಕೊಟ್ಟಿತು. ಬರೀ ಅರವತ್ತು ರೂಪಾಯಿಗೆ ಅವ ನಮ್ಮನ್ನು ಸಮುದ್ರದಲ್ಲಿ ತುಂಬ ದೂರ ಒಯ್ದು ಒಂದು ಸುತ್ತು ಸುತ್ತಿಸಿ ತರುತ್ತಾನೆ. ಆಗ ಬೋಟಲ್ಲಿ ನೀವೇನು ಮಾಡಬಹುದು ಎಂದರೆ ಫೋಟೊ ತೆಗೆಯಬಹುದು, ಅಥವಾ ಚಂದದ ಕೂಸ್ಗಳಿದ್ದರೆ ನೋಡಬಹುದು. 

ನನ್ನ ಮುಂದಿನ ಪ್ರಯಾಣ ಪಾಂಬನ್ ಸೇತುಎಯ ಆರಂಭದ ಜಾಗ. ಸಾಧ್ಯವಾಗುವುದಾದರೆ ಆ ಸೇತುವೆಯ ನಡುಭಾಗ. ಆದರೆ ಆ ಜಾಗ ಒಂದು ಬೇಟಿಯ ತಾಣವೇ ಅಲ್ಲ, ಎಲ್ಲೋ ಹೋಗುವವರು ಅಲ್ಲಿಳಿದು ಅದನ್ನ ನೋಡಬೇಕಷ್ಟೆ. ಈ ಸೇತುವೆಯದು ಅಚ್ಚರಿಗಳು ಹಲವಿವೆ. ತನ್ನ ಕೆಳಗಿನ ಸಮುದ್ರದಲ್ಲಿ ಹಡಗು ಹಾಯ್ದು ಹೋಗುವಾಗ ಈ ಸೇತುವೆಯ ಒಂದು ಭಾಗ ಗೋಪುರದಂತೆ ಮೇಲೆದ್ದು ಹಡಗಿನ ಎತ್ತರಕ್ಕೆ ಜಾಗಮಾಡಿ ಕೊಡುತ್ತದೆ. ಇದು ತುಂಬಾ ಅಪರೂಪದ ದೃಶ್ಯ ಎಂಬುದು ನನ್ನ ಅನಿಸಿಕೆ. 
ಅದ್ಯಾವುದೋ ರೈಲಿಗೆ ಜೋತು,ಪಾಂಬಂನ್ ಜಂಕ್ಷನ್ ಗೆ ಬಂದಿಳಿದು, ಅಲ್ಲಿಂದ ಕಿಲೋಮೀಟರುಗಳಷ್ಟು ನಡೆದು ನಾನು ಸೇತುವೆಯ ಬುಡ ತಲುಪಿದೆ. ಸೂರ್ಯ ಆ ಹೊತ್ತಿಗೆ ಮುಳುಗುವ ತಯಾರಿಯಲ್ಲಿದ್ದ. ಸೇತುವೆಯ ಮೇಲೆ ಸ್ಥಳೀಯರು ನಡೆಯಗೊಡಲಿಲ್ಲ. ಅಲ್ಲೊಂದಿಷ್ಟು ಸಮಯ ಕಳೆದು ಮತ್ತೆ ರಾಮೇಶ್ವರಂ ರೈಲು ನಿಲ್ದಾಣಕ್ಕೆ ಬರುವ ವೇಳೆಗೆ ನನ್ನ ರೈಲು ಸಿದ್ಧವಿತ್ತು.



ಇನ್ನೂ ನೋಡಬಹುದಾದ ಸ್ಥಳಗಳಿದ್ದುವು, ಆದರೆ ಅಲ್ಲೆಲ್ಲ ದೇವಾಲಯಗಳ ಹೊರತು ಇನ್ನೇನಿಲ್ಲ ಎಂದು ಕೇಳಿದೆ. ರಾಮಪಾದ ಎಂಬುದೊಂದು ದೇವಾಲಯ ಚೆಂದವಿದೆಯಂತೆ. ಉಳಿದಂತೆ ಅಗ್ನಿ ತೀರ್ಥದ ಮಂಡಪದ ಸಮೀಪ ಅಪ್ರಕ್ರಿಯೆಯಲ್ಲಿ ತೊಡಗಿದ್ದ ಜನರು, ವೈದಿಕರು ಸಾಲು ಸಾಲಾಗಿ ಕಂಡರು. ಮೂನ್ನೆ ಮೊನ್ನೆಯಷ್ಟೇ ನಾನು ಅನುವಾದಿಸಿ ಮುಗಿಸಿದ ’ಕರ್ಮ’ ಕಾದಂಬರಿಯ ಹಲವು ಪಾತ್ರಗಳು ನನ್ನ ಕಣ್ಣ ಮುಂದೆ ಹಾದು ಹೋದುವು. 

 ಮತ್ತೆ ಮರಳುವಾಗ ಪಾಂಬನ್ ಸೇತುವಿನ ನೀರ ಕಲಕಲ ನನ್ನ ಕಿವಿದುಂಬಿತು, ಗಾಢ ನಿದ್ರೆ ನನ್ನನ್ನಾವರಿಸಿತು. 









Friday, January 16, 2015

....ಮುಂದುವರೆದಿದೆ.

ಹಾಗೆ ಆ ಮ್ಯಾಕ್ಸಿ ಕ್ಯಾಬ್ ನ ಚಾಲಕನ ಮೇಲೆ ವಿಶ್ವಾಸವಿಟ್ಟು ರಾಮ ಸೇತುವಿನ ನಿರ್ಮಾಣಕ್ಕೆ ಹೊರಟ ಕಪಿ ಸೈನ್ಯದಂತೆ ನಾವಿದ್ದೆವು. ಈ ಮಧ್ಯೆ ನಮ್ಮ ವಾಹನದಲ್ಲಿ ಕೂರಲೆಂದು ಮುಂದೆ ಬಂದ ನವ ವಿವಾಹಿತ ಜೋಡಿಯೊಂದನ್ನು ತಡೆದು ನಿಲ್ಲಿಸಿದ ಚಾಲಕ ತನ್ನ ಭಯಂಕರ ಶೈಲಿಯಲ್ಲಿ ’ಎನ್ನ’? ಎಂದ. ಗುಬ್ಬಚ್ಚಿಯಂತಿದ್ದ ಆ ಜೋಡಿ ಹೆದರುತ್ತಲೇ ಉತ್ತರಿಸಿತು ’ಧನುಷ್ಕೋಡಿ ಜಾನಾ ಹೆ’. ನಮ್ಮ ಚಾಲಕ ತನ್ನ ಭಾಷೆಯಲ್ಲಿ ಅವರಿಗೆ ಅರ್ಥವಾಗುವಂತೆ (!) ವಿವರಿಸಿದ. ’ಧನುಷ್ಕೋಡಿ ಅಂದ್ರೆ, ಪ್ರೇತಗಳ ನಾಡು, The Ghost city. ಹೊಸದಾಗಿ ಮದ್ವೆಯಾದೋರು, ಸಂತಾನದ ನಿರೀಕ್ಷೆಯಲ್ಲಿರೋರು ಅಲ್ಲಿಗೆಲ್ಲ ಬರಬಾರ್ದು, ಬರ್ಬ್ಯಾಡ್ರಪ್ಪ’ ಅದ. ಆ ಜೋಡಿ ಭಯಗೊಂಡವೋ ಇಲ್ಲವೋ ತಿಳಿಯಲಿಲ್ಲ, ಆದರೆ ನಮ್ಮ ನಡುವೆ ಕೆಲವರು ಬೆವರಿದರು!!
ಅಂತೂ ಅವರನ್ನಲ್ಲೇ ಬಿಟ್ಟು ನಾವು ಮುಂಚಲಿಸಿದೆವು.
ತಾನು ಸಾಗಿದ್ದೇ ದಾರಿ ಎನ್ನುವ ಹಮ್ಮಿನಲ್ಲಿ ಅವ ಮರಳು ಹಾದಿಯಲ್ಲಿ ಮ್ಯಾಕ್ಸಿ ಕ್ಯಾಬ್ ನುಗ್ಗಿಸಿದ. ಆ ಕುಲುಕಾಟಕ್ಕೆ ನಲುಗಿದ ನಾವೆಲ್ಲ ಕೈಲಿದ್ದ ಮೊಬೈಲು ಕ್ಯಾಮೆರಾಗಳನ್ನು ಜೋಳಿಗೆಗೆ ಸೇರಿಸಿ, ಸಿಕ್ಕ ಯಾವುದೋ ಆಧಾರವನ್ನು ಹಿಡಿದು ಕೂತೆವು. ಆ ವಾಹನ ಚಲಿಸುತ್ತಿದ್ದ ದಾರಿಯನ್ನು ನೋಡಿದರೆ ಗಾಬರಿಯಾಗುವಂತಿತ್ತು. (Of course, ಉತ್ತರಕನ್ನಡದ ಹಳ್ಳಿಗಳಲ್ಲಿ ಸಂಚರಿಸಿದವರಿಗೆ ಅಂಥಾ ಭಯವೇನೂ ಆಗಲಿಕ್ಕಿಲ್ಲ) ರಸ್ತೆಯೆಂಬುದೇ ಇರಲಿಲ್ಲ. ಇರುವುದೆಲ್ಲ ನೀರು ಮರಳು ಮತ್ತು ಕುರುಚಲು ಕಾಡು! ಯು. ಪಿ ಯಿಂದ ಬಂದಿದ್ದ ಇನ್ನೊವಾ ಕಾರಿನ ಮಾಲಿಕ ತನ್ನ ಕಾರು ಯಾಕಿಲ್ಲಿ ಬರಲಾಗದು ಎಂಬ ಸತ್ಯವನ್ನು ಈಗ ಅರ್ಥಮಾಡಿಕೊಳ್ಳುತ್ತಿದ್ದ. ಮ್ಯಾಕ್ಸಿ ಕ್ಯಾಬ್ ಉಸುಕಿನಲ್ಲಿ ಮಾತ್ರವಲ್ಲ ನೀರಲ್ಲಿಯೂ ಸಂಚರಿಸುವ ಪರಿಗೆ ಒಳಗೇ ಕುಳಿತು ಬೆವರುತ್ತಿದ್ದ.
ಹೌದು, ನಮ್ಮ ವಾಹನ ನೀರಲ್ಲಿಯೂ ಸಂಚರಿಸುತ್ತಿತ್ತು. ಯಾಕಷ್ಟು ತುಕ್ಕು ಹಿಡಿದಿದೆಯೆಂದೂ, ಎರಡೇ ವರ್ಷಕ್ಕೆ ಯಾಕದು ಮುದಿಯಾಗುವುದೆಂದೂ ಈ ಹಾದಿಯಲ್ಲಿ ಬಂದ ಮೇಲೆ ಅರ್ಥವಾಯ್ತು. ಆ ಕಡೆಯೂ ಸಮುದ್ರ ಈ ಕಡೆಯೂ ಸಮುದ್ರ, ನಡುವಿನ ಅರೆಬರೆ ಭೂಖಂಡದಲ್ಲಿ ಚೆದುರಿಬಿದ್ದ ಹಿನ್ನೀರಿನ ಹರಿವನ್ನು ಹಾಯುತ್ತ ಅವ ದಾರಿ ಮಾಡಿಕೊಳ್ಳುತ್ತ ಸಾಗಿದ.
ದಾರಿ ಯಾವುದಯ್ಯಾ..
ಅಲ್ಲಿನವರೇ ಆದ ಚಾಲಕರಿಗೆ ನೀರಲ್ಲಿಯೂ ಮಾರ್ಗ ಗೊತ್ತಿದೆ, ಅವರಮೇಲೆ ನಂಬುಗೆಯಿಟ್ಟು ಕೂರುವುದಾದರೆ ಭಯವೇನಿಲ್ಲ. ನಡೆದು ಸಾಗಿ ಬರುವುದಾದರೆ ಕಾಲುಭಾಗದ ಹಾದಿಯನ್ನೂ ಹಾಯಲಾಗದು. ಮುಂದಿರುವುದೆಲ್ಲ ಸಮುದ್ರ ಎನ್ನಿಸಿಬಿಡುತ್ತದೆ, ಆದರೆ ಭೂಖಂಡ ಇನ್ನೂ ಉಳಿದಿರುತ್ತದೆ. ಅದರ ಮರ್ಮ ತಿಳಿದವರೇ ಗಣನಾಯಕರಾದರೆ ಆದೀತು.

ಸುಮಾರು ಮುಕ್ಕಾಲು ಗಂಟೆಯ ಈ ಹಾದಿಯಲ್ಲದ ಹಾದಿಯಲ್ಲಿ ಹಾದು ಬಂದು ಒಂದೆಡೆ ವಾಹನ ನಿಂತಿತು. ಇತಿಹಾಸದ ಅವಶೇಷಗಳ ನಡುವೆ ಬಂದು ನಿಂತಂತೆ ಅನ್ನಿಸಿತು. ಮತ್ತೆ ಅದೇ ಭಾವ, ಎಲ್ಲೆಡೆಯೂ ನೀರು, ನಾನು ನಿಂತಿರುವ ಜಾಗ ಮಾತ್ರವೇ ಭೂಮಿ ಎಂಬ ಭ್ರಮೆ. ಶುರುವಿನಲ್ಲಿ ಒಂದು ಶಿವಾಲಯವಿದೆ. ಶಿವಾಲಯದ ಎದುರಿನ ನೀರ ತೊಟ್ಟಿಯಲ್ಲಿ ಕಲ್ಲೊಂದಿದೆ. ಕಲ್ಲಿರುವುದು ಅಚ್ಚರಿಯಲ್ಲ, ಆದರೆ ಆ ಕಲ್ಲು ಉಳಿದ ಕಲ್ಲುಗಳಂತೆ ಮುಳುಗಿಲ್ಲ. ನಂಬಿ, ಅದು ತೇಲುತ್ತಿದೆ!!
ಕಲ್ಲೇ ಹೌದೋ ಅಲ್ಲವೋ ಎಂದು ಪರೀಕ್ಷೆ ಮಾಡಿದ್ದೂ ಆಯ್ತು, ಅದು ಕಲ್ಲೇ. ನಮ್ಮಲ್ಲಿ ಸಿಗುವ ಲಾಟರೈಟ್ ಕಲ್ಲಿನಂತೆಯೇ ಇದೆ, ಬಿಳಿ ವರ್ಣ, ಆದರೆ ಅದಕ್ಕಿಂತ ಹೆಚ್ಚಿಗೆ ಇನ್ನೇನೋ ಇದೆ ಇದರಲ್ಲಿ- ಬಹುಶಃ ಗಾಳಿ! ಎತ್ತಿ ನೋಡಿದ್ದೂ ಆಯ್ತು, ಸಾಕಷ್ಟು ಭಾರವಾಗಿಯೂ ಇದೆ.
ಕಪಿಸೇನೆ ಕಟ್ಟಿದ ರಾಮಸೇತುವಿಗೆ ಬಳಕೆಯಾದ ಕಲ್ಲು ಈ ಬಗೆಯದ್ದು ಎಂಬುದು ಸ್ಥಳೀಯರ ವಿವರಣೆ. ಅಲ್ಲೆಲ್ಲ ಆ ಬಗೆಯ ಕಲ್ಲು ಸಿಗುವುದಂತೆ. ನಮ್ಮ ಕಾವ್ಯಗಳು ಎಷ್ಟು ವ್ಯವಸ್ಥಿತವಾಗಿ ನಮ್ಮ ಭೂಸಂರಚನೆಯೊಡನೆ ತಳುಕು .
ತೇಲುವ ಶಿಲೆ.
ಹಾಕಿಕೊಂಡಿವೆ ಎಂಬುದು ಇಂಥ ಉದಾಹಾಣೆಗಳಿಂದ ಸ್ಪಷ್ಟವಾಗುತ್ತದೆ. ಧನುಷ್ಕೋಡಿ ೨೧ನೇ ಶತಮಾನದ ಸಾಮಾನ್ಯ ವಾಹನಗಳಿಗೆ ದುರ್ಭೇದ್ಯ, ಅಂಥದರಲ್ಲಿ ಕಾಡುಗಳೇ ಭೂಮಿಯ ಒಡೆಯರಾಗಿದ್ದ ಕಾಲದಲ್ಲಿ ಕವಿ ವಾಲ್ಮೀಕಿ ಈ ಭೂಭಾಗದ ಅಂಚನ್ನು ಗುರುತಿಸುತ್ತಾನೆ, ಅದು ಲಂಕೆಗೆ ಭಾರತದಿಂದ ಇರಬಹುದಾದ ಅತಿ ಹತ್ತಿರದ ಮಾರ್ಗ ಎಂಬುದನ್ನೂ ಅರ್ಥಮಾಡಿಕೊಳ್ಳುತ್ತಾನೆ. ಇಲ್ಲಿಂದ ಲಂಕೆ ಬರೀ ಹದಿನೆಂಟು ಕಿ. ಮೀ!! ಭಾರತದ ಭೂಭಾಗದೊಡನೆ, ಇಲ್ಲಿನ ಮಣ್ಣು ಗಾಳಿಯೊಡನೆ ಒಂದಾದ ಕಾವ್ಯಗಳಿವೆ ಎನ್ನುವುದೇ ನೆಲದ ಹೆಮ್ಮೆ. ಇರಲಿ. ಅಂಥಾ ಕಲ್ಲು ಇದ್ದರೆ ನನಗೂ ತರಬೇಕಿತ್ತು. ಅಂಥದೇ ಸಂರಚನೆಯಿರುವ ಕಲ್ಲನ್ನೇನೋ ತಂದೆ, ಆದರೆ ಇಲ್ಲಿ ಬಂದು ನೋಡಿದರೆ ಅದು ಎಲ್ಲ ಕಲ್ಲುಗಳಂತೆ ಅಮಾಯಕವಾಗಿ ನೀರಲ್ಲಿ ಮುಳುಗುತ್ತಿದೆ.

ಮುಂದುವರಿದಂತೆ ನಮ್ಮನ್ನು ಬರಮಾಡಿಕೊಂಡಿದ್ದು ಕಾಲದ ಎದುರಿಗೆ ಬಟಾಬಯಲು ಬೆತ್ತಲೆ ನಿಂತ ಹಲವು ಕಟ್ಟಡಗಳು. ಆಕಾರದಲ್ಲಿ ಭಾರೀ ಆಗಿಯೇ ಕಾಣಿಸುವ ಆ ಅವಶೇಷಗಳ ಮಧ್ಯೆ ಈಗಲೋ ಆಗಲೋ ಹಾರುವಂತಿರುವ ಜೋಪಡಿಗಳು, ಮತ್ತು ಜೀವಧಾರಣೆಗೆ ಹಂಬಲಿಸುತ್ತಿರುವ ಸಾಧಾರಣ ಕಣ್ಣುಗಳು. ಹೆಜ್ಜೆ ಕಸಿಯುವ ಉಸುಕಿನಲ್ಲಿ ಪಾದಗಳಿಗೆ ಗಟ್ಟಿಯಾದ ಆವಾರವೇನೋ ತಾಕುತ್ತಿದೆ! ಗಮನಿಸಿ ನೋಡಿದರೆ ರಸ್ತೆ! ಈ ನೆಲದಲ್ಲಿ ನಾನದನ್ನು ಊಹಿಸಲು ಸಾಧ್ಯವಿರಲಿಲ್ಲ. ಆದರಿಲ್ಲಿ ಅದು ಸತ್ಯವಾಗಿತ್ತು. ಸುತ್ತಮುತ್ತಲಿನ ಅವಶೇಷಗಳು ಮತ್ತು ನೆಲದಡಿಯ ರಸ್ತೆ ಏನನ್ನೋ ಹೇಳಲು ಪ್ರಯತ್ನ ಮಾಡ್ತಿವೆ. ಅದ್ಯಾವ ಕಥೆಯಿರಬಹುದು ಎಂಬ ಕುತೂಹಲ ತಡೆಯಲಾಗಲಿಲ್ಲ. ಹಾಗಂತ ಅಲ್ಲಿದ್ದ ಎನ್ನಡ ಎಕ್ಕಡಗಳಿಂದ ಅದರ ವಾಸ್ತವ ಕಥೆಯನ್ನು ನಿರೀಕ್ಷಿಸುವುದು ಸಾಧ್ಯವೂ ಇರಲಿಲ್ಲ.

ರಸ್ತೆಯಿಲ್ಲ, ಶಾಲೆಯಿಲ್ಲ, ವಾಹನವ್ಯವಸ್ಥೆ ಇಲ್ಲ, ಆಸ್ಪತ್ರೆಯಿಲ್ಲ, ವಿದ್ಯುತ್ತಿಲ್ಲ. ಆದರೆ ನನ್ನ ದೇಶದ ಜನರಿದ್ದಾರೆ ಅಲ್ಲಿ!! ಅಂದಾಜು ೫೦೦ ಜನಸಂಖ್ಯೆ ಇದೆ ಎಂಬುದು ಕೇಳಿಬಂದ ಮಾತು. ಧನುಷ್ಕೋಡಿಯಲ್ಲಿ ಎಂದಲ್ಲ, ಪೂರ್ತಿಯಾಗಿ ರಾಮೇಶ್ವರಮ್ ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಭಿಕ್ಷುಕರು, ಅಸಹಾಯಕರು, ಹುಚ್ಚರು ಇದ್ದಾರೆ. ಇದಕ್ಕೆ ಕಾರಣ ಗೊತ್ತಿಲ್ಲ. ಧನುಷ್ಕೋಡಿಯಲ್ಲಂತೂ ಅದೊಂದು ಜೀವನಾಧಾರ ಕಸುಬಿನಂತಾಗಿದೆ. ರಣ ಬಿಸಿಲಲ್ಲಿ ಮರಳಲ್ಲಿ ಕುಳಿತು ಭಿಕ್ಷೆ ಕೇಳುತ್ತಾರೆ. ಅವರ ಅವಸ್ಥೆಯನ್ನು ಕಂಡರೆ ನನ್ನ ಭಾರತದ ಬಗ್ಗೆ ಮನಸು ಮರುಕಪಡುತ್ತದೆ.

ಭಾರತ ಭೂಶಿರ ಕನ್ಯಾಕುಮಾರಿಯಲ್ಲಿ ನಿಂತಾಗಿನ ರೋಮಾಂಚನಕ್ಕೂ ಇಲ್ಲಿನದಕ್ಕೂ ವ್ಯತ್ಯಾಸವಿತ್ತು. ಅದು ಮೂರು ಸಮುದ್ರಗಳು ಸೇರುವಾಗಿನ ಅಪೂರ್ವ ಮೇಳ. ವಿವೇಕಾನಂದರು ತಪಗೈದ ನೆಲೆಯ ಅನುಭೂತಿ.  ಇಲ್ಲಿನದು ಶಾಂತ ಶರಧಿಯಲ್ಲಿ ಕೊನೆಯಾಗುವ ಭೂಭಾಗ. ಸೀತೆಯಿರದ ರಾಮನ ಕೋಪಕ್ಕೆ ಹೆದರಿ ಶಾಂತವಾದ ಸಾಗರ ಇಂದಿಗೂ ಶಾಂತವಾಗಿಯೇ ಇರುವನೇ ಎಂಬ ಭಾವ.
At the tip of My India. 

ರಾಮ ಸೇತು ನೋಡುವ ಉಮೇದಿಯಿದ್ದರೆ ಅದಿಲ್ಲಿ ಸುಳ್ಳಾಗುತ್ತದೆ. ಸೇತುವೆಯ ಆರಂಭ ಅಂತೆಲ್ಲ ಗುರುತಿಸಲಾಗದು. ಅದರಲ್ಲೂ ನಮ್ಮ ವಾಹನ ಸಾರಥಿ ಹೇಳಿದಂತೆ ಈಗಿರುವ ನೀರಿನ ಪ್ರಮಾಣದಲ್ಲಿ ಅಲ್ಲಿಯವರೆಗೆ ಹೋಗಲಾಗದಂತೆ. ಆದರೆ ಅದೊಂದು ಅನುಭೂತಿಯನ್ನು ಪಡೆಯಬಹುದಷ್ಟೆ, ನನ್ನ ನೆಲದ ಮಹಾಮಹಿಮನೊಬ್ಬ ಇಲ್ಲಿ ಐತಿಹಾಸಿಕ ನಿರ್ಮಿತಿಯೊಂದನ್ನು ನಡೆಸಿದ್ದ ಎಂಬ ರೋಮಾಂಚನ ನಮ್ಮದಾಗಿಸಿಕೊಳ್ಳಬಹುದು. ಇಷ್ಟೇ ರೋಮಾಂಚನಕಾಗಿ ಪ್ರವಾಸ ಹೊರಡುವ ನನ್ನಂಥವರಿಗೆ ಅಡ್ಡಿಯಿಲ್ಲ. ಮಧ್ಯಾಹ್ನ ಹನ್ನೆರಡಾದರೂ ಸುಡದ ಬಿಸಿಲಿನಲ್ಲಿ ಆ ಪ್ರೇತ ನಗರಿಯ ಉದ್ದಗಲಕ್ಕೆ ತಿರುಗಿದೆ. ಒಬ್ಬನೇ ಇದ್ದೆನಲ್ಲ, ಹಾಗಾಗಿ ನನ್ನ ಚಿತ್ರಗಳು ಕಡಿಮೆಯೇ ಇವೆ, ಸೆಲ್ಫಿ ನನಗೆ ಸರಿಯಾಗದು, ಹಾಗಾಗಿ ಜೊತೆಗಾರರು ಸಿಕ್ಕಾಗ ಮಾತ್ರ ’One click please' ಅಂತ ಅರಿಕೆ ಮಾಡಿಕೊಂಡು ನನ್ನ ಚಿತ್ರ ತೆಗೆಸಿಕೊಂಡಿದ್ದೇನೆ. ಆಹ್, ಪ್ರೇತಗಳ ಕಥೆ ಹೇಳಬೇಕಲ್ಲವೆ, ಹೇಳುವೆ. ಅದಕ್ಕೆಂದೇ ಹೊರಟಿದ್ದೇನೆ.

ಅದು 1964 ನೇ ಇಸವಿ. ಡಿಸೆಂಬರ್ 22 ರಾತ್ರಿ. ಅದುವರೆಗೆ ಕಂಡು ಕೇಳರಿಯದ ಮಹಾ ಚಂಡಮಾರುತವೊಂದು ಧನುಷ್ಕೋಡಿಯನ್ನೂ ರಾಮೇಶ್ವರಂ ಅನ್ನೂ ಅಪ್ಪಳಿಸುತ್ತದೆ. ಅದೆಂಥಾ ಚಂಡ ಮಾರುತವೆಂದರೆ, ಅದರ ರಭಸಕ್ಕೆ ಎದ್ದ ಅಲೆಗಳು 7 ಮೀಟರ್ ನಷ್ಟು ಎತ್ತರಕ್ಕೆ ನೆಗೆದಿದ್ದುವು ಎಂಬುದು ಇತಿಹಾಸದ ನೆನಕೆ. ಆ ಭೀಕರ ಚಂಡ ಮಾರುತ ಪೂರ್ತಿ ನಗರವನ್ನು ಹೊಸಕಿ ಹಾಕಿತು. ಅದುವರೆಗೆ ರಾಮೇಶ್ವರಂ ನಂತೆಯೇ ಪ್ರಸಿದ್ಧವಾಗಿದ್ದ ನಗರ ಪೂರ್ತಿಯಾಗಿ ಸತ್ತು ಮಲಗಿತು. ೧೮೦೦ ಜನ ಕ್ಷಣದಲ್ಲಿ ಹೆಣವಾದರು. ಭಾರತ ಮತ್ತು ಲಂಕೆಯ ಮಧ್ಯೆ ಇದ್ದ ಬೋಟ್ ಸಂಪರ್ಕವ್ಯವಸ್ಥೆಯನ್ನು ಶಾಶ್ವತವಾಗಿ ಮುಚ್ಚಲಾಯ್ತು. ನಗರದಲ್ಲಿ ದೇವಾಲಯಗಳಿದ್ದವು, ರೇಲ್ವೆ ವ್ಯವಸ್ಥೆಯಿತ್ತು, ರಸ್ತೆ ವ್ಯವಸ್ಥಿತವಾಗಿತ್ತು, ಪೋಸ್ಟಾಫೀಸೂ ಇತ್ತು, ದೊಡ್ಡ ದೊಡ್ಡ ಕಟ್ಟಡಗಳಿದ್ದುವು. ಭಾರತವನ್ನಾಳಿದ ಬ್ರಿಟಿಷರು ಇದೆಲ್ಲವನ್ನೂ ವ್ಯವಸ್ಥಿತವಾಗಿ ರೂಪಿಸಿದ್ದರು. ಈಗಿರುವುದಕ್ಕಿಂತ ಮೂರ್ನಾಲ್ಕು ಕಿಲೋಮೀಟರು ಮುಂದಿನವರೆಗೂ ಭೂಭಾಗ ಇತ್ತು. ಈಗದು ಶಾಶ್ವತವಾಗಿ ನೀರಲ್ಲಿ ಮುಳುಗಿದೆ. ಆ ರಾತ್ರಿ ತಲುಪಬೇಕಿದ್ದ ರಾಮೇಶ್ವರಂ- ಧನುಷ್ಕೋಡಿ ಪ್ಯಾಸೆಂಜರ್ ಟ್ರೈನ್ ಅಂದಿನ ಜಲವಿಕೋಪಕ್ಕೆ ಆಹುತಿಯಾಯ್ತು. ಒಟ್ಟಿಗೆ ೧೧೦ ಪ್ರಯಾಣಿಕರನ್ನು ಬಲಿ ಪಡೆಯಿತು. ಒಟ್ಟಿನಲ್ಲಿ ಭೂಭಾಗ  ನೀರಲ್ಲಿ ಶಾಶ್ವತವಾಗಿ ಮುಳುಗುವ ಪ್ರಕೃತಿ ಪ್ರಕ್ರಿಯೆಗೆ ಸಾವಿರಾರು ಜನ ಪ್ರಾಣ ತೆತ್ತರು. ನಗರವೊಂದು ನಿರ್ನಾಮವಾಯ್ತು. ಮತ್ತದು ಇಂಗ್ಲೀಷಿನಲ್ಲಿ Ghost Town ಅನ್ನಿಸಿಕೊಂಡಿತು. (ಪರಿತ್ಯಕ್ತ ನಗರಕ್ಕೆ ಆ ಭಾಷೆಯಲ್ಲಿ ಬಳಕೆಯಲ್ಲಿರುವ ಪದ ಅದು).
ಪುರಾತನ ರೇಲ್ವೆ ನಿಲ್ದಾಣ. 

ಅಳಿದುಳಿದ ಜನ ಅಲ್ಲಿಂದ ಕಾಲ್ಕಿತ್ತರು, ಹಲವಷ್ಟು ಹೆಣಗಳು ಕೊನೆಗೂ ಸಿಗದೆ ಉಳಿದುವು. ಇವತ್ತಿಗೆ ಬೆರಳೆಣಿಕೆಯ ಕುಟುಂಬಗಳಷ್ಟೇ ಅಲ್ಲಿರುವುದು. ಅದೂ ಅತ್ಯಂತ ದಯನೀಯ ಸ್ಥಿತಿಯಲ್ಲಿ. ಆದರೂ ಅದನ್ನು ಪ್ರೇತ ನಗರಿ ಎಂದು ಜನ ಕರೆಯಲು ತೊಡಗಿದ್ದಕ್ಕೆ ಮತ್ತಷ್ಟು ಕಾರಣಗಳಿವೆ. ಅದನ್ನು ಮತ್ತೆ ಚರ್ಚಿಸುವೆ. ಇನ್ನಷ್ಟು ಚಿತ್ರಗಳೊಂದಿಗೆ, ಮುಂದಿನ ಸಂಚಿಕೆಯಲ್ಲಿ....

Thursday, January 15, 2015

ಧನುಷ್ಕೋಡಿಯೆಂಬ ಪ್ರೇತ ನಗರಿಗೆ.....

ಏಳು ತಾಸಿನ ಸುಲಲಿತ ನಿದ್ರೆಯನ್ನು ಯಾರೋ ಕಲಕಲ ಧ್ವನಿಗೈದು ತಿಳಿಯಾಗಿ ಕಲಕುತ್ತಿದ್ದರು. ಭಾರತೀಯ ರೇಲ್ವೆಯ ಯಾವುದೇ ಬಗೆಯ ಸದ್ದು ನನಗೆ ಕಳೆದ ಏಳು ವರ್ಷಗಳಿಂದ ಪರಿಚಿತ. ಆದರೆ ಈ ಶಬ್ದ ರೇಲ್ವೆಯದಲ್ಲ! ಕಣ್ ಬಿಟ್ಟು ಎದ್ದು ಕುಳಿತೆ. ಆ ಶಬ್ದ ಇನ್ನಷ್ಟು ಸ್ಪಷ್ಟವಾಯ್ತು. ಕಿಟಕಿಯ ಪಕ್ಕ ಬಂದು ಕುಳಿತು ಹೊರಗಿಣುಕಿದೆ. ಇನ್ನೂ ಸೂರ್ಯ ಮೂಡುವುದರಲ್ಲಿದ್ದ, ಬೆಳಕು ನಿಚ್ಚಳವಾಗಿರಲಿಲ್ಲ, ಚಳಿಯು ಹದವಾಗಿತ್ತು. ಕಣ್ಣರಳಿಸಿ ನೋಡುತ್ತೇನೆ- ಮಬ್ಬು ಬೆಳಕಲ್ಲಿ ಅಂತವಿರದ ಜಲರಾಶಿ, ಆ ಕಡೆಗೂ ಈ ಕಡೆಗೂ. ನಾನಿದ್ದ ರೇಲ್ವೆ ನಿಧಾನಕ್ಕೆ ಸದ್ದಿರದೆ ಸಾಗುತ್ತಿದೆ, ಹಾಗಾಗಿ ನೀರಿನ ಆ ಕಲಕು ಶಬ್ದವೇ ತುಂಬಿಕೊಂಡಿದೆ ಎಲ್ಲೆಲ್ಲಕಡೆಗೂ. ಸಮುದ್ರಕ್ಕೆ ಕಟ್ಟಿದ ಸೇತುವೆಯ ಮೇಲಿನ ಮೊದಲ ರೈಲು ಅನುಭವ ನನ್ನದು. ಅಲೆಗಳ ಮೊರೆತ, ಇತಿಹಾಸದ ತುಂಡಿನಂತೆ ಇರುವ ಆ ಅಪೂರ್ವ ಸೇತುವೆ... ನಾನು ರಾಮೇಶ್ವರಂ ಎಂಬ ದ್ವೀಪನಾಡನ್ನು ತಲುಪುತ್ತಿದ್ದೆ. ಮತ್ತೆ ಆ ಸೇತುವೆ ಭಾರತದೊಂದಿಗೆ ಸಂಪರ್ಕ ಕಲ್ಪಿಸುವ ಅನನ್ಯ ಮಾರ್ಗ, ಅದಿಲ್ಲದಿದ್ದರೆ ಭಾರತದ ಪಾಲಿಗೆ ರಾಮೇಶ್ವರಮ್ ಎಂದೆಂದಿಗೂ ದ್ವೀಪವೆ. ಎರಡೂಕಾಲು ಕಿಲೋಮೀಟರು ಉದ್ದದ, ನೂರು ವರ್ಷದ ಇತಿಹಾಸವಿರುವ  ಪಾಂಬನ್ ಸೇತುವೆ!
Pamban Bridge.
ಆ ಸೇತುವೆಯ ವಯಸ್ಸನ್ನೂ, ಒಂದೇ ವರ್ಷದಲ್ಲಿ ಕಟ್ಟಿ ಮುಗಿಸಿದ ಆ ಜನಗಳ ಎಂಜಿನಿಯರಿಂಗ್ ಕೌಶಲವನ್ನೂ ಚಿಂತಿಸುತ್ತ ಕುಳಿತೆ. ನಾನಿದ್ದ ರಾಮೇಶ್ವರಂ ಎಕ್ಸ್ಪ್ರೆಸ್ ಸುಮಾರು ಹದಿನೈದು ನಿಮಿಷ ಹೆಚ್ಚಿನ ಸದ್ದಿರದೆ ಸೇತುವೆ ಕ್ರಮಿಸಿತು. ನನ್ನನು ಭಾರತದ ದ್ವೀಪ ಪ್ರದೇಶವೊಂದಕ್ಕೆ ಕೊಂಡೊಯ್ದಿತು.

ಬೆಳಗಿನ ಆರುವರೆಗೆಲ್ಲ ರಾಮೇಶ್ವರಮ್ ನ ಸಮುದ್ರದ ಎದುರಿಗೆ ನಿಂತಿದ್ದೆ. ಸೂರ್ಯ ಇನ್ನೂ ಉದಯಿಸುತ್ತಿದ್ದ, ಮೋಡಗಳು ಮಳೆ ಹನಿಸುತ್ತಿದ್ದುವು. ಸಮುದ್ರ ಸ್ನಾನದ ಜನರು ಪಾವನವಾಗುತ್ತಿದ್ದರು. ಅದೋ ಅಲ್ಲಿ ದೇವಸ್ಥಾನ ಆಗಲೇ ಜನಗಳ ಗಡಿಬಿಡಿಗೆ ಸಾಕ್ಷಿಯಾಗುತ್ತಿತ್ತು. ನನಗೆ ದೇವಾಲಯದ ದರ್ಶನಕ್ಕಿಂತ ಹೆಚ್ಚಿಗೆ ಸಮುದ್ರ ಮತ್ತು ರಾಮಸೇತು ಕರೆಯುತಿದ್ದುವು, ಅದಕ್ಕಲ್ಲವೆ ಇಷ್ಟು ದೂರ ಒಂಟಿ ಪ್ರಯಾಣಿಸಿ ಬಂದಿದ್ದು!
              

ರಾಮೇಶ್ವರದ ಬೆಳಗು. 
ದೇವಾಲಯ ತುಂಬಾ ವಿಸ್ತಾರವಾದ್ದು. ತುಂಬ ಹಳೆಯ ಶೈಲಿಯದಲ್ಲ, ಆದರೆ ಇಲ್ಲಿಯ ಆಚರಣೆಗಳು ವಿಶಿಷ್ಟವಾದವುಗಳು. ದೇವಾಲಯದ ಆವರಣದಲ್ಲಿ ೨೨ ಬಾವಿಗಳಿವೆ, ಅವೆಲ್ಲವನ್ನೂ ತೀರ್ಥವೆಂದು ಬಗೆಯುವ ಭಕ್ತರು ಅವಷ್ಟರಲ್ಲೂ ಸ್ನಾನ ಮಾಡಿ ದೇವರ ದರ್ಶನ ಮಾಡುತ್ತಾರೆ. ಪೂರ್ಣ ಶಿಲಾಮಯವಾದ ದೇವಾಲಯದಲ್ಲಿ ಬೃಹತ್ ನಂದಿ ಮತ್ತು ಶಿವಲಿಂಗ ಇವೆ. ರಾಮ ಅರ್ಚನೆ ಮಾಡಿದ್ದು ಮರಳಿನ ಲಿಂಗವಾದ್ದರಿಂದ ಈ ದೇವಾಲಯದಲ್ಲಿ ಲಿಂಗವಿರಲಿಲ್ಲ, ಆದಿ ಶಂಕರರು ಸ್ಫಟಿಕ ಲಿಂಗವನ್ನು ಪೂಜೆಗಾಗಿ ಕೊಟ್ಟರೆಂಬ ಪ್ರತೀತಿ ಕೇಳಿಬಂತು. ಬೃಹತ್ತಾದ ಈ ದೇವಾಲಯದಲ್ಲಿ ಅರ್ಚನೆಯ ಲಿಂಗವಿರಲಿಲ್ಲ ಎಂಬುದು ವಿಚಿತ್ರಗಳಲಿ ಒಂದೆನ್ನಿಸಿತು. ದೇವಾಲಯದ ಒಳ ಮೇಲ್ಛಾವಣಿಯನ್ನು ಅಲಂಕರಿಸಿದ ಚಿತ್ರಗಳು ಚಿತ್ತಾಕರ್ಷಕವಾಗಿವೆ. ಖುಷಿಯಾದ ಸಂಗತಿಯೆಂದರೆ ಸಾಮಾನ್ಯ ದೇವಾಲಯಗಳಲ್ಲಿ ಇರುವಂತೆ ಹಣಕ್ಕಾಗಿ ಪೀಡನೆ ಇಲ್ಲಿ ಅಷ್ಟಾಗಿ ಕಂಡು ಬರಲಿಲ್ಲ. ನಾನೊಂದು ತಾಸು ದೇವಾಲಯದ ಪ್ರಾಂಗಣದಲ್ಲಿ ಕಳೆದೆ. ಅಲ್ಲಂತೂ ಫೋಟೊಗ್ರಫಿಗೆ ಅವಕಾಶವಿರಲಿಲ್ಲ. ನನ್ನ ಗಮನವೆಲ್ಲ ಧನುಷ್ಕೋಡಿಯೆಂಬ ಭಾರತ ಭೂಶಿರದ ತುದಿಯಲ್ಲಿತ್ತು. ದೇವಾಲಯದಿಂದ ಹೊರಗೆ ಹೊರಟೆ. 

ಮುಂದಿನ ಪ್ರಯಾಣ ಧನುಷ್ಕೋಡಿಯೆಡೆಗೆ. ಆ ಹೊತ್ತಿಗೆ ಆಗಸ ಶುದ್ಧವಾಗಿತ್ತು, ಸೂರ್ಯ ಸ್ಪಷ್ಟವಾಗಿದ್ದ. ಬಸ್ಸೊಂದು ನನ್ನನ್ನು ಧನುಷ್ಕೋಡಿಯ ದಿಕ್ಕಿಗೆ ಒಯ್ದಿತು. ಎರಡೂ ಕಡೆಗೆ ನೀರಿರುವ, ಮಿಕ್ಕ ಜಾಗದಲ್ಲೆಲ್ಲ ಹಸುರು ಹೊದ್ದಿರುವ, ಮಣ್ಣೆಂದರೆ ಮರಳೋ ಎಂಬಂತಿರುವ ಹಾದಿಯಲ್ಲಿ ಮುಕ್ಕಾಲು ಗಂಟೆ ಪ್ರಯಾಣ. ಸ್ಪಷ್ಟವಾಗಿ ತಿಳಿಯುವಂತೆ ಅದು ಸಮುದ್ರದ ಮಧ್ಯದಲ್ಲಿ ಭೂಮಿಯ ಒಳಚಾಚು. ಅದರ ಅಂತೂ ಅಗಲ ಒಂದು ಕಿ. ಮೀ ಇದ್ದೀತಷ್ಟೆ. ಟಾರ್ ರಸ್ತೆ ಮುಗಿಯುವಲ್ಲಿ ಬಂದು ಬಸ್ಸಿನವ ನಿಂತ, ಎದುರಿಗೆ ಸಮುದ್ರವಿತ್ತು. ಮನಸು ಸಂಭ್ರಮಿಸಿತು.
ಅಲೆಯೆದ್ದು- ಅಲೆಬಿದ್ದು...
ಅರಬ್ಬಿ ಸಮುದ್ರದ ಪರಿಚಯವಿದ್ದ ನನಗೆ ಈ ಸಮುದ್ರ ಬಣ್ಣದಲ್ಲಿ, ಸ್ವಭಾವದಲ್ಲಿ, ಧ್ವನಿಯಲ್ಲಿ ಭಿನ್ನವಾಗಿ ಕಂಡಿತು. ತಿಳಿ ನೀಲಿ ಬಣ್ಣದ (ಅಥವಾ ಹಸಿರೋ!) ಅಗಾಧ ಜಲರಾಶಿ, ಸಮುದ್ರವೆಂದರೆ ಶಬ್ದ ಎಂಬಂತಿರುವ ನಮ್ಮ ಪಶ್ಚಿಮ ಕರಾವಳಿಯಿಂದ ಪೂರ್ತಿ ಭಿನ್ನವಾದ ಅದರ ಸದ್ದಿರದ ಸ್ವಭಾವ, ಒಮ್ಮೆಗೇ ಆಳವಾಗುವ ಹರವಲ್ಲದ ತೀರ, ಆಗೊಮ್ಮೆ ಈಗೊಮ್ಮೆ ಬರುವ ಅಲೆ... ಬಂಗಾಳಕೊಲ್ಲಿಯ ವ್ಯವಹಾರ ಅರಬ್ಬಿ ಸಮುದ್ರಕ್ಕಿಂತ ಭಿನ್ನ. ಎಲ್ಲಕ್ಕಿಂತ ನನಗೆ ಆಕರ್ಷಕವೆನ್ನಿಸಿದ್ದು ಅದರ ಬಣ್ಣ. ತುಂಬಾ ಸೊಗಸಾದ, ಕಣ್ ಸೆಳೆಯುವ ವರ್ಣ ಅದರದ್ದು. ಅರಬ್ಬೀ ಸಮುದ್ರಕ್ಕಿಂತ ಸ್ಪಷ್ಟವಾಗಿ ನೆಲಕಾಣಿಸುವ ಶುದ್ಧತೆ. ಅರಬ್ಬೀ ಸಮುದ್ರ ಮನುಷ್ಯನನ್ನು ಆರಾಮಕ್ಕೆ ಒಳಗೆ ಬಿಟ್ಟುಕೊಂಡರೆ ಇದರದ್ದು ಸ್ವಲ್ಪ ಬಿಗುಮಾನ. ಅಲೆಗಳನ್ನು ಊಹಿಸಲಾಗದು, ತೀರದ ಆಳವನ್ನೂ. ಹಾಗಾಗಿ ಸಮುದ್ರದ ಒಳಕ್ಕಿಳಿಯುವುದು ಕಷ್ಟ. ದೂರದಿಂದ ಚಂದವೆನ್ನಿಸುವ ನೀರ್ರಾಶಿ. ಸೂರ್ಯ ಹೊಳೆಯುತ್ತಿದ್ದರೂ ಆ ಪುಲಿನರಾಶಿ ಅಹಿತವೆನಿಸಲಿಲ್ಲ, ಹಿತವಾದ ಚಳಿಯಿತ್ತು. ಕನ್ಯಾಕುಮಾರಿಯಲ್ಲಿ ಮೂರು ಸಮುದ್ರ ಸೇರುವ ಜಾಗದಲ್ಲಿ ( ಅವು ಬೇರೆ ಬೇರೆ ಎಂಬುದೇ ಕಲ್ಪನೆ ಎಂಬುದು ಬೇರೆ ಮಾತು) ಈ ತಿಳಿಸುಂದರಿಯ ಗುರುತು ಇಷ್ಟು ಸ್ಪಷ್ಟವಾಗಿಲ್ಲ. ಇಲ್ಲಿ ಅವಳದ್ದೇ ಸಾಮ್ರಾಜ್ಯ. ಪೂರ್ವ ಜಲಧಿಯದ್ದು. 
ನನ್ನ ಕನಸಿನ ಧನುಷ್ಕೋಡಿ ಇದಲ್ಲವೆಂದು ಕೈಲಿದ್ದ ಗೂಗಲ್ ಮ್ಯಾಪ್ ತೋರಿಸುತ್ತಿತ್ತು. ಇದು ಸಾಮಾನ್ಯವಾಗಿ ಪ್ರವಾಸಿಗರು ಬಂದು ಹೋಗುವ ಕೊನೆಬಿಂದು. ಇಲ್ಲಿಗೆ ರಸ್ತೆ ಮುಗಿಯುತ್ತದೆ,  ಆದರೆ ಸಮುದ್ರದ ಒಳಚಾಚು ಇದಿಷ್ಟಕ್ಕೆ ಮುಗಿಯುವುದಿಲ್ಲ. ಅದಿನ್ನೂ ಕಿರಿದಾಗುತ್ತ ಸಾಗುತ್ತದೆ. ನಡು ನಡುವೆ ಭೂಖಂಡಗಳೇ ಮರೆಯಾಗಿ ಬರಿಯ ನೀರು ಸಿಗುತ್ತದೆ. ಒಂದೊಂದು ಭಾಗವೂ ಒಂದೊಂದು ದ್ವೀಪದಂತೆ. ಗೂಗಲ್ ಅರ್ಥ್ ನಲ್ಲಿಯೂ ಈ ಭಾಗ ಕಿರಿದಾಗುತ್ತ ಸಾಗುವ ಬಾಲದಂತೆಯೇ ಕಾಣಿಸುತ್ತದೆ. 

ನನಗಲ್ಲಿ ನಿಲ್ಲಲು ಮನಸು ಒಗ್ಗಲಿಲ್ಲ. ಭೂಮಿ ಖಾಲಿಯಾಗುವವರೆಗೆ ನಡೆಯುವ ಹುಚ್ಚಿತ್ತು, ಹೆಗಲ ಭಾರ ಹೆಚ್ಚಿರಲಿಲ್ಲ, ಮನಸೂ ಹಗುರವಿತ್ತು. ಯಾವುದೇ ಖಾಸಗಿ ವಾಹನದವರಿಗೂ ಮುಂದಕ್ಕೆ ವಾಹನ ಚಲಾಯಿಸುವ ಅನುಮತಿಯಿಲ್ಲ, ’ರಸ್ತೆ ಅಪಾಯಕಾರಿ, ಹಾಗಾಗಿ ಹೋಗಗೊಡುವುದಿಲ್ಲ’ ಎಂದು ಸ್ಥಳೀಯರು, ಭಾಡಿಗೆ ವಾಹನದದವರು ತಮಗೆ ಬರುವ ಅಷ್ಟೂ ಭಾಷೆಯಲ್ಲಿ ಪ್ರವಾಸಿಗರ ಮನ ಒಲಿಸುತ್ತಿದ್ದರು. ಇದೆಲ್ಲ ಹಣ ಮಾಡುವ ಹುನ್ನಾರು ಎಂದು ನಾವೆಲ್ಲ ಪ್ರವಾಸಿಗರು ಮೂಗು ಮುರಿಯುತ್ತ ಸುಮಾರು ಹೊತ್ತು ಕಳೆದೆವು. ಅಂತೂ ಕೊನೆಗೊಂದಿಪ್ಪತ್ತು ಜನ ಸೇರಿ ಮಾಕ್ಸಿ ಕ್ಯಾಬ್ ಒಂದನ್ನು ಒಪ್ಪಿಸಿದೆವು. ಆ ವಾಹನದ ಸರ್ವಾಂಗವೂ ಕಂಪಿಸುತ್ತಿತ್ತು, ತುಕ್ಕು ಅಕಾಲಿಕವಾಗಿ ಬಂದ ಮುಪ್ಪಿನಂತೆ ಆ ವಾಹನವನ್ನು ತಿಂದು ಹಾಕುತಿತ್ತು. ಆ ಚಾಲಕನಿಗೆ ವಾಹನದ ಮೇಲೆ ಕರುಣೆಯೇ ಇದ್ದಂತಿರಲಿಲ್ಲ!! ’ಇವನ ಲಡ್ಕಾರು ಮ್ಯಾಕ್ಸಿ ಕ್ಯಾ ಬ್ ಹೋಗುವುದಾದರೆ ನಮ್ಮ ಇನ್ನೋವಾ ಹೋಗದೆ?’ ಯು.ಪಿ. ಇಂದ ಬಂದಿದ್ದ ಪ್ರವಾಸಿಗರು ಪರಿಪ್ರಶ್ನೆಗೈಯುತಿದ್ದರು. ಕೊನೆಗೂ ನಾವೆಲ್ಲ ಆ ಮ್ಯಾಕ್ಸಿ ಕ್ಯಾಬಿನಲ್ಲಿ ಸೀಟುಗಳನ್ನು ಹುಡುಕಿ ತೂರಿಕೊಂಡೆವು.

ಆ ವಾಹನ ರಸ್ತೆಯಲ್ಲದ ರಸ್ತೆಯಲ್ಲಿ ಹೊರಟಿತು. ನೀರು,ಕಾಡುಗಳ ಮಧ್ಯೆ...

ಮತ್ತೆ ಬರೆಯುತ್ತೇನೆ...