Tuesday, July 14, 2015

ಮರೆಯಲಾಗದ ಸ್ವಪ್ನ.

ಇತ್ತೀಚೆಗೆ ಇನ್ನೊಂದು ಇಂಥಾ ಗ್ರಂಥವನ್ನು ಓದಿರಲಿಲ್ಲ. ಮಾನವ ಜೀವನದ ಗತಿವಿಧಿಯನ್ನು ಸಹಜ ಸರಳವಾಗಿ ಆಡಂಬರವಿಲ್ಲದೆ ಸಾಕ್ಷೀ ಭಾವದಿಂದೆಂಬಂತೆ ದಾಖಲಿಸುತ್ತ, ಯಾವ ತತ್ತ್ವ ಸಿದ್ಧಾಂತದ ಹೇರಿಕೆಯಿಲ್ಲದೆ ಪ್ರಕೃತಿಯ ಇನ್ನೊಂದು ರೂಪೋ ಎಂಬಂತೆ ನಿರೂಪಿತಗೊಳ್ಳುತ್ತ, ೪೭೦ ಪುಟಗಳಷ್ಟು ವಿಸ್ತಾರಕ್ಕೆ ಹಬ್ಬಿಕೊಂಡೂ ಓದುಗನನ್ನು ಹಿಡಿದಿಡುವಲ್ಲಿ ಸೋಲದ ಇನ್ಯಾವುದೇ ಕಾದಂಬರಿಯನ್ನು ನಾನು ಈ ದಿನಗಳಲ್ಲಿ ಓದಿದ್ದಿರಲಿಲ್ಲ.
ಗೋಪಾಲಕೃಷ್ಣ ಪೈ- ಬರೆದ ಸ್ವಪ್ನ ಸಾರಸ್ವತ.



ನಮ್ಮನ್ನು ಅತಿಯಾಗಿ ತಾಕುವ ಕೃತಿಗಳು ಅವುಗಳ ಕಥೆಯ ಹಂದರದಿಂದಾಗಿಯಲ್ಲದೆ, ಕಥೆಯ ನೆವದಲ್ಲಿ ನಡೆಯುವ ಬದುಕಿನ ಶೋಧದ ಕಾರಣಕ್ಕೆ ಶಕ್ತವಾಗಿರುತ್ತವೆ. ಸ್ವಪ್ನ ಸಾರಸ್ವತ ಕೃತಿ ಅಂಥಾ ಕೃತಿಗಳ ಸಾಲಿನಲ್ಲಿ ಮೊದಲಿಗೆ ನಿಲ್ಲಬಹುದಾದದ್ದು. ಕಥೆಯನ್ನು ಗಮನಿಸುವುದಾದರೆ ಸ್ವಪ್ನಸಾರಸ್ವತದ ಕಥೆ ಗೋಜಲು ಗೋಜಲು, ಸಂಬಂಧಗಳ ಕಾಡಿನಲ್ಲಿ ದಿಕ್ಕು ತಪ್ಪಿಸುವಂಥದು. ಆದರೆ, ಸಾರಸ್ವತ ಕುಲದ ವಲಸೆಯಿಂದಾರಂಭಿಸಿ ಕುಲವೇ ಇನ್ನೊಂದೆಡೆಗೆ ನೆಲೆಯಾದಬಳಿಕವೂ ಮತ್ತೆ ನೆಲೆ ಹುಡುಕುತ್ತಲೇ ಇರುವ ಕುಲದ ಒಳ ಅಂಗವಾದ ವ್ಯಕ್ತಿಗಳ, ಅಥವಾ ಕುಲದ ಅವಿನಾಶಿ ಪ್ರಜ್ಞೆಯ ಹರಿವನ್ನು ಅದು ಕಟ್ಟಿಕೊಡುವ ಬಗೆ ಅನನ್ಯವೇ ಸರಿ. ಬರೀ ಒಂದು ಕುಲದ ಕಥೆಯಷ್ಟೇ ಆಗಿರದೆ, ಆ ಹಿನ್ನೆಲೆಯಲ್ಲಿಯೇ ಕಾಲದ ಕಥೆಯೂ ಆಗುವ ಸ್ವಪ್ನ ಸಾರಸ್ವತವೆಂಬುದು ಅತ್ಯಂತ ಶಕ್ತಿಶಾಲಿಯಾದ ಕೃತಿಕಾರನ ಉತ್ಪನ್ನ.

ಗೋವೆಯ ಬ್ರಾಹ್ಮಣರನ್ನು ಹೊರಗಿನಿಂದ ಬಂದ ಕಿರಿಸ್ತಾನರು ಧರ್ಮದ ಅಮಲಿನಲ್ಲಿ ಒಕ್ಕಲೆಬ್ಬಿಸಿದರು, ಹಿಂಸಿಸಿದರು, ಅತ್ಯಾಚಾರ ಗೈದರು, ಕೊಂದರು, ತಿಂದರು..... ರಕ್ತ ಕುದಿಯುವಷ್ಟು ಬರೆದು ಮುಗಿಸಬಹುದಿತ್ತು. ಸಾರಸ್ವತರ ನಂಬುಗೆಗಳು, ಆಚಾರಗಳು, ಜೀವನ ಪದ್ಧತಿ, ಅದರ ಹೆಮ್ಮೆ... ಹೀಗೂ ಬರೆದು ಒಂದು ಕೃತಿ ಮುಗಿಯಬಹುದಿತ್ತು. ಸಮುದಾಯವೊಂದರ ನೋವು, ಸಂಭ್ರಮ, ಹತಾಸೆ, ಆಸೆ, ಸಾವು ಹುಟ್ಟುಗಳ ಕಥೆಯಾಗಿಯೂ ಸಾರಸ್ವತ ಮುಗಿಯಬಹುದಿತ್ತು. ಆದರೆ ಅದೆಲ್ಲವನ್ನೂ ಅಂಶತಃ ಒಳಗೊಳ್ಳುತ್ತ ಮಾನವ ಬದುಕಿನ ಸತ್ಯಗಳನ್ನು ಅರಿಯುವ ಪ್ರಯತ್ನವಿರುವ ಮಹತ್ತರ ಕೃತಿಯಾಗಿ ಸಾರಸ್ವತ ಹರಿಯುತ್ತಿದೆ. ಬದುಕನ್ನು ಸಮಗ್ರವಾಗಿ ನೋಡುವ ಸಾಮರ್ಥ್ಯವಿರುವವರಲ್ಲದೆ, ಬರಿಯ ಬರಹಗಾರನೊಬ್ಬ ಇಂಥಾ ಕೃತಿಯನ್ನು ಬರೆಯಲಾರ.

ನಾನು ಭಾವಿಸುವಂತೆ ಕಾದಂಬರಿಯ ಬೆನ್ನೆಲುಬಾದ ಅಂಶವೆಂದರೆ, ಯಾವೊಂದು ಸಂಗತಿಗೂ ಪೂರ್ತಿ ಅರ್ಪಿತವಾಗಿ ಅದರಲ್ಲಿಯೇ ಲೀನವಾಗದೆ ಅತ್ಯಂತ ದಕ್ಷವಾದ ’ಸ್ಥಿತಿ’ಯೊಂದನ್ನು ಕಂಡುಕೊಂಡುದು. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ- ಬರಿಯ ಅದೃಷ್ಟಕ್ಕಾಗಲೀ, ಯಾವುದೋ ಆದರ್ಶವನ್ನು ಕಾಣಿಸುವ ಒತ್ತಡಕ್ಕಾಗಲೀ, ಇತಿಹಾಸವೆಂಬುದು ಅನ್ಯಾಯ ಎಸಗಿದ ಪಾಪಿ ಎಂಬ ಭಾವಕ್ಕಾಗಲೀ, ಮಾನವಾತೀತವಾದ ಶಕ್ತಿಗಾಗಲೀ, ಅಥವಾ ಪ್ರಕೃತಿಯೆಂಬ ಚಿರಂತನ ಸತ್ಯಕ್ಕೇ ಆಗಲೀ ಕಾದಂಬರಿಯು ತನ್ನೆಲ್ಲ ಮೈ ಅರ್ಪಿಸಿ ಮೈಲಿಗೆಯಾಗಿಲ್ಲ. ಹಾಗಂತ ಅದೆಲ್ಲವನ್ನೂ ಬಿಟ್ಟ ಸೆಕ್ಯುಲರ್ ಕೃತಿಯೂ ಆಗದೆ, ಎಲ್ಲವನ್ನೂ ಹದವರಿತು ಬಳಸಿಕೊಂಡು ’ಬೆನ್ನು ಹುರಿ ಇರುವ” ಅಪರೂಪದ ಕೃತಿಯಾಗಿ ಹೊಮ್ಮಿದೆ. ಯಾವುದೋ ಒಂದು ಸಂಗತಿಗೆ ಅರ್ಪಿತವಾಗುವ ಕೃತಿ- ಅದು ದೇಶಭಕ್ತಿ, ಮಾನವ ಪ್ರೇಮ, ದೈವಿಕತೆ, ನಂಬುಗೆ, ಆಚಾರ, ಇತಿಹಾಸ, ಕರ್ಮ ಸಿದ್ಧಾಂತ ಹೀಗೆ ಯಾವುದೇ ಇರಬಹುದು- ಅಷ್ಟರಮಟ್ಟಿಗೆ ಬದುಕಿನ ಸಮಗ್ರತೆಯನ್ನು ಚಿತ್ರಿಸುವಲ್ಲಿ ಹಿಂದೆ ಉಳಿಯುತ್ತದೆ. ರಸೋನ್ನತಿಯನ್ನು ಸಾಧಿಸುವುದಕ್ಕೆ ಹಾಗೂಂದು ಆನಿಕೆಯನ್ನು ಅರಸುವುದು ಅನಿವಾರ್ಯವೂ ಇರಬಹುದೇನೋ. ಹಾಗಿದ್ದೂ, ತತ್ತ್ವದ ಹುಡುಕಿಗೆ ಹೊರಟ ಕೃತಿಯೊಂದು ರಸದ ಗುಲಾಮಿತನಕ್ಕೆ ಬೀಳದೆ ಇರುವುದೇ ಹೆಚ್ಚು ಪ್ರಶಸ್ತವಾದ್ದು. ಸ್ವಪ್ನ ಸಾರಸ್ವತ ಆ ದಿಶೆಯಲ್ಲಿ ವಿಜೃಂಭಿಸುವ ಕೃತಿ. ಯಾವುದರ ಹೆಗಲ ಮೇಲೆಯೂ ಅತಿಯಾದ ಭಾರ ಹಾಕದೆ ತಾನೇ ತಾನಾಗಿ ಉಳಿಯುವ ಶಕ್ತಿ ಇದರಲ್ಲಿದೆ.

ಇತಿಹಾಸವನ್ನು, ಪ್ರಜ್ಞೆಯ ಒಂದು ತುದಿಯಿಂದ ಇನ್ನೊಂದನ್ನು, ನೆನಪನ್ನು, ಕಥೆಯುದ್ದಕ್ಕೂ ನೇಯ್ದುಕೊಂಡು ಹೋಗುವ ಅದ್ಭುತವಾದ ಪಾತ್ರವೊಂದಿದೆ; ನಾಗ್ಡೋ ಬೇತಾಳ ಎಂಬ ವಿಲಕ್ಷಣ ಪಾತ್ರ ಅದು. ಕಾದಂಬರಿಯ ಯಾವುದೇ ಭಾಗದಲ್ಲಿ ಚಿತ್ರಿತವಾದ ಯಾವೆಲ್ಲ ಬಗೆಯ ದೇವರ ಪರಿಕಲ್ಪನೆಗಿಂತಲೂ ಈ ನಾಗ್ಡೋ ಬೇತಾಳನೆಂಬೋ ಪಾತ್ರ, ಐಹಿಕ ಪಾರಲೌಕಿಕ ಎರಡೂ ಅರ್ಥದಲ್ಲಿ ಶಕ್ತನೆಂದು ನನಗೆ ಅನ್ನಿಸಿತು. ಒಂದರ್ಥದಲ್ಲಿ ಈ ಪಾತ್ರ ಲೌಕಿಕ ಮತ್ತು ಅಲೌಕಿಕಗಳನ್ನು ಬೆಸೆಯುವ ಅಪೂರ್ವ ಕೊಂಡಿಯೂ ಹೌದು. ಅವನಲ್ಲಿ ಬಹುವಾಗಿ ನನ್ನನ್ನು ಸೆಳೆದ ಗುಣವೆಂದರೆ ಆ ಪಾತ್ರದ ಅಪ್ಡೇಟಾಗುವಿಕೆ. ಸಾವೇ ಇರದಂತೆ ಬದುಕಿ ತಲೆ ತಲಾಂತರದ ಪರಂಪರೆಯನ್ನು ತಲೆಮಾರುಗಳಿಗೆ ಸಾಗಿಸುತ್ತ ಪರಂಪರೆಯ ರಕ್ಷಣೆಗೆಂಬಂತೆ ಇರುವ ಆ ಮೂರ್ತಿ, ಇದುವರೆಗೆ ಚಿತ್ರಿತವಾದ ಅತ್ಯಂತ ಪ್ರಸ್ತುತ, ಅಂಗೀಕಾರಾರ್ಹ, ವಾಸ್ತವ ಚಿಂತನೆಯ ದೇವರು! ಶತಮಾನಗಳ ಹಿಂದಿನ ನಿಯಮಗಳ ಕಟ್ಟನ್ನು, ಚಿಂತನೆಯ ಕಟ್ಟನ್ನು ಯಥಾವತ್ತಾಗಿ ಇಂದಿಗೆ ಅನ್ವಯಿಸುವಂತೆ ಹೇರುವ ಕಾಲ್ಪನಿಕ ದೇವರುಗಳಿಗಿಂತ, ಅತ್ಯಂತ ವಾಸ್ತವ ಚಿಂತನೆಯ ನಾಗ್ಡೋ ಬೇತಾಳನು ಹೊಳೆ ಹೊಳೆಯುವ ಮೂರ್ತಿಯಾಗಿ ನನಗೆ ಕಾಣಿಸುತ್ತಾನೆ. ನಿಜವೆಂದರೆ ಕಾದಂಬರಿಯುದ್ದಕ್ಕೂ ಈ ಪಾತ್ರವು ತುಂಬಿದಷ್ಟು ಬೆರಗನ್ನು ಇನ್ಯಾವುದೂ ನನಗೆ ತುಂಬಿಲ್ಲ. ಬೆರಗನ್ನಷ್ಟೇ ಅಲ್ಲ, ಜಿಜ್ಞಾಸೆಯನ್ನೂ, ಚಿಂತನೆಯ ಕಿಡಿಯನ್ನೂ ಬಹುವಾಗಿ ಹೊತ್ತಿಸಿದ ಪಾತ್ರ ನಾಗ್ಡೋ ಬೇತಾಳನದು. ಇಂಥಾ ಪಾತ್ರದ ಪರಿಕಲ್ಪನೆಯೂ, ಹದವರಿತ ಅದರ ದುಡಿಮೆಯೂ, ಕೃತಿಕಾರನಿಗೆ ಒಲಿದುದರ ಬಗ್ಗೆ ನನ್ನಲ್ಲಿ ತೀರದ ಅಚ್ಚರಿಯಿದೆ.

ಚಿರಂತನವಾದ ಚಿಂತನೆಯನ್ನು ತನ್ನೊಳಗೆ ತೆಗೆದುಕೊಳ್ಳುವುದು ಸ್ವಲ್ಪ ಶ್ರಮಪಟ್ಟರೆ ಯಾರಿಗಾದರೂ ಸಾಧ್ಯವಾಗಬಹುದಾದ ಕೆಲಸ. ಅದರೆ ಕಾಲದ ಜೊತೆಯಲ್ಲಿ ಅದನ್ನು ನಿಭಾಯಿಸುವುದಿದೆಯಲ್ಲ, ಅದು ತುಂಬಾ ಮಹತ್ತರವಾದ ಪಕ್ವತೆಯನ್ನು ಬೇಡುವ ತಪಸ್ಸು. ’ಜೀವನ ನೀರ ಮೇಲಣ ಗುಳ್ಳೆ, ದೇಹ ನಶ್ವರ..’ ಎಂಬೆಲ್ಲಬಗೆಯ ವೇದಾಂತ ಸಾರಾಂಶವನ್ನು ಮಿದುಳಿಗೆ ಉಣ್ಣಿಸುವುದು ತುಂಬ ಸರಳವಾದ ಕ್ರಿಯೆ. ಅದೆಲ್ಲವನ್ನು ತಿಳಿದೂ ಬದುಕನ್ನು ಪ್ರೀತಿಸುವುದು, ನಿಭಾಯಿಸುವುದು, ಇವತ್ತಿಗಾಗಿ ಬದುಕುವುದು, ಎಲ್ಲಕ್ಕಿಂತ ಹೆಚ್ಚಾಗಿ ಸಹಜವಾಗಿ ಬದುಕುವುದು ಬಹಳ ದೊಡ್ಡದಾದ ಸಂಗತಿ. ಶತಂಜೀವನಾದ ಒಬ್ಬನಿಗೆ ಜೀವ ಹಿಡಿದಿಕೊಳ್ಳುವುದಕ್ಕೆ ಬೇಕಾದ ಶಕ್ತಿಗಿಂತಲೂ ದೊಡ್ಡ ಮಟ್ಟದ ಶಕ್ತಿ, ಕಾಲವನ್ನು ಅರ್ಥೈಸಿಕೊಂಡು ಅದಕ್ಕನುಗುಣವಾಗಿ ಸ್ಪಂದಿಸುವಾಗ ಇರಬೇಕಾದೀತು ಎಂಬುದು ನನ್ನ ಗ್ರಹಿಕೆ. ಬಹುಶಃ ಮನುಷ್ಯ ಚಿರಂಜೀವಿಯಾದರೆ ಆತ ಹುಚ್ಚು ಹಿಡಿದು ಸಾಯುತ್ತಾನೆ, ಯಾಕೆಂದರೆ ಕಾಲದ ಜೊತೆಗೆ ಅಪ್ಡೇಟಾಗುವ ನಮ್ಮ ಮನಸಿನ ಶಕ್ತಿ ಬಹಳೇ ನಿಯಮಿತವಾದದ್ದು. ನಾಗ್ಡೋ ಬೇತಾಳ ಎಂಬ ನಗ್ನ ಚಿರಂಜೀವಿ ಸನ್ಯಾಸಿ ಈ ಎಲ್ಲ ಕಾರಣಕ್ಕೆ ನನ್ನನ್ನು ಬಹಳವಾಗಿ ಕಾಡಿದ ಪಾತ್ರ. ಕೃತಿಯನ್ನೋದಿ ಮುಗಿದ ಈ ಹೊತ್ತಿಗೂ ನನ್ನಲ್ಲಿ ಆತ ಸಂಚರಿಸುತ್ತಲೇ ಇದ್ದಾನೆ.

ಉಳಿದ ವ್ಯಕ್ತಿ ಪಾತ್ರಗಳು ಕಥೆಯ ಒಳ ಹಂದರವನ್ನು ತುಂಬಿವೆ. ಗೋವೆಯ ಪರಿಸರ, ಕರ್ನಾಟಕದ ಕರಾವಳಿಯ ವಿವರಣೆ, ಜನಸಾಮಾನ್ಯರ ಬದುಕು, ರಾಜಕೀಯ ಪರಿಸ್ಥಿತಿಗಳು, ಭೂಗೋಳದ ಅರಿವು, ಬದುಕಿನ ಶೈಲಿ- ಎಲ್ಲವೂ ಭರಪೂರ ಮಾಹಿತಿಯ ಕಣಜ. ವ್ಯಕ್ತಿಪಾತ್ರಗಳು ಕೆಲವೊಮ್ಮೆ ಏಕತಾನತೆಯನ್ನೂ ತರುತ್ತವೆ. ಕಥೆಯನ್ನು ಬೆಳೆಸದೆ ತಾವೇ ಬೆಳೆಯುವ ಅವುಗಳ ರೀತಿಗೆ ಸಿಟ್ಟೂ ಬರುತ್ತದೆ! ಹಾಗಿದ್ದೂ ಆ ಮಾಹಿತಿಗಾ ಕೃತಿಕಾರ ಪಟ್ಟಿರಬಹುದಾದ ಶ್ರಮ ಸಣ್ಣದಲ್ಲ.   

ಗಾಢವಾಗಿ ಓದುವ ಹುಮ್ಮಸ್ಸಿರುವ ಯಾರೇ ಆದರೂ ಓದಬೇಕಾದ ಗ್ರಂಥ. ಚೂರುಪಾರು ಲೇಖನಗಳು, ವಿಕಿ ಪುಟದ ಮಾಹಿತಿಗಳು, ವಾಟ್ಸಾಪಿನಲ್ಲಿ ಫಾರ್ವರ್ಡ್ ಮಾಡಿದ ತತ್ತ್ವೋಪದೇಶ, ಫೇಸ್ಬುಕ್ಕಿನ ಗೋಡೆ ಗೀಚು, ಬ್ಲಾಗಿನ ಇಣುಕುಗಳು- ಎಲ್ಲವೂ ಆ ಕ್ಷಣಕ್ಕೆ ಚಂದ. ಆದರೆ ಮನಸಲ್ಲಿ ಉಳಿಯುವಂಥ, ಬದುಕಿನೊಡನೆ ಹೆಜ್ಜೆಹಾಕುವ ಓದು ಬೇಕೆಂದರೆ ಸಾರಸ್ವತದಂಥಾ ಕೃತಿಯನ್ನೋದಬೇಕು.

ನನ್ನನು ಈ ಕೃತಿಯನ್ನೋದಿಸಿದ ಎಲ್ಲ ಸಹೃದಯರಿಗೆ ಮನದುಂಬಿದ ಧನ್ಯವಾದ J

Saturday, February 28, 2015

           ಸಂಸ್ಕೃತ ವ್ಯಾಕರಣ; ಕಿರುಪರಿಚಯ

                 ಭಾಗ ಎರಡು.


                 ವ್ಯಾಕರಣದಲ್ಲಿ ಎರಡುಬಗೆಯ ವ್ಯವಸ್ಥಾಪಕರಿದ್ದಾರೆ. ಸಂಜ್ಞಾಸೂತ್ರ ಮತ್ತು ಪರಿಭಾಷಾಸೂತ್ರ ಅಂತ ಅವುಗಳ ಹೆಸರು. ಸಂಜ್ಞಾಸೂತ್ರಗಳೆಂದರೆ ಹೆಸರಿಸುವ ಸೂತ್ರಗಳು, ಉದಾ- ವೃದ್ಧಿ, ಗುಣ- ಇತ್ಯಾದಿ ಹೆಸರುಗಳು ಈ ಸೂತ್ರಗಳ ಕೊಡುಗೆ. ಇನ್ನೊಂದು ಬಗೆಯ ವ್ಯವಸ್ಥಾಪಕರು ಪರಿಭಾಷಾ ಸೂತ್ರಗಳು. ಅಂದ್ರೆ ಇಂತಿಂಥಾ ಕ್ರಿಯೆಯನ್ನು ಹೀಗೇ ಮಾಡಬೇಕು ಎಂಬ ನಿಯಮಗಳನ್ನು ಲೋಕಾಭಿರಾಮವಾಗಿ ಬೋಧಿಸುವ ಸೂತ್ರಗಳು. ಉದಾ- ಸೂತ್ರದಲ್ಲಿ ಎಲ್ಲೆಲ್ಲಿ ಷಷ್ಠೀ ವಿಭಕ್ತಿಯಿರುತ್ತದೋ ಅಲ್ಲೆಲ್ಲ ಆ ವಿಭಕ್ತಿಯನ್ನು ಹೊಂದಿರುವ ಪದಕ್ಕೆ ಸಾಕ್ಷಾತ್ತಾಗಿ ಕಾರ್ಯ ಬರುತ್ತದೆ ಎನ್ನುವುದು. ಇವೆರಡೂ ಬಗೆಯ ಸೂತ್ರಗಳು ಎಲ್ಲಾ ಉಳಿದ ಸೂತ್ರಗಳಿಗೂ ಉಪಕಾರ ಮಾಡುವ ಸ್ವಭಾವದವು. ಸ್ವಯಂ ಯಾವುದೇ ಕ್ರಿಯೆಯನ್ನು ಇವು ಮಾಡವು, ಹಾಗಿದ್ದೂ ಇವುಗಳಿಲ್ಲದೆ ಮತ್ಯಾವುದೇ ಸೂತ್ರವೂ ಕೆಲಸ ಮಾಡದು!

ವ್ಯವಸ್ಥಾಪಕ ಸೂತ್ರಗಳಾಗಿದ್ದರಿಂದ ಅವುಗಳ ಕೆಲಸ ಸೀಮಿತ ಪ್ರದೇಶಕ್ಕಲ್ಲದೆ ಪೂರ್ಣ ಶಾಸ್ತ್ರದಲ್ಲಿ ಇದ್ದಿರುತ್ತದೆಯಷ್ಟೆ. ಹಾಗಾಗಿ ಎರಡೂ ಮನೆಗಳಲ್ಲೂ ಅವು ಬಳಕೆಯಾಗಬೇಕಾದ್ದು ಅನಿವಾರ್ಯ. ಅವಕ್ಕೆ ಈ ಎರಡುಮನೆಗಳ ಅಂಧತ್ವದ ವ್ಯವಹಾರ ಕಟ್ಟಿಕೊಂಡು ಆಗಬೇಕಾದ್ದು ಏನೂ ಇಲ್ಲ!

ಹಾಗಾಗಿ ಅವುಗಳಿಗೋಸ್ಕರ ಮಾಡಿದ ವ್ಯವಸ್ಥೆಯೇ ಕಾರ್ಯಕಾಲ ಪಕ್ಷ ಮತ್ತು ಯಥೋದ್ದೇಶ ಪಕ್ಷ ಎಂಬ ಎರಡು ಸಾಧ್ಯತೆಗಳ ಪರಿಕಲ್ಪನೆ. ಕಾರ್ಯಕಾಲ ಅಂದರೆ ವಿಧಿಸೂತ್ರಗಳು ಕರೆದಲ್ಲಿಗೆ ಹೋಗಿ ವ್ಯವಸ್ಥಾಪಕ ಸೂತ್ರಗಳು ಅವುಗಳಿಗೆ ಅರ್ಥ ಕಟ್ಟುವ ಕೆಲಸ. ಯಥೋದ್ದೇಶ ಅಂದರೆ  ವ್ಯವಸ್ಥಾಪಕರು ಇದ್ದಲ್ಲೇ ಇದ್ದು, ವಿಧಿಸೂತ್ರಗಳು ಬಂದು ಕೇಳಿದಾಗೆಲ್ಲಾ ಅರ್ಥ ಒದಗಿಸುವ ಕೆಲಸ. (ಈ ಬರುವುದು ಇರುವುದು ಹೋಗುವುದು ಎಲ್ಲ ಯಾಕೆ, ಶಬ್ದ ನಿರ್ಮಾಣ ಪ್ರಕ್ರಿಯೆ ನಮಗೆ ತಿಳಿದಿದೆಯಲ್ಲ, ಹಾಗಾಗಿ ಒಂದು ಸೂತ್ರ ಒಂದು ಕಾರ್ಯವನ್ನು ಸ್ಪಷ್ಟವಾಗಿ ಹೇಳಿದರೆ ಸಾಲದೆ? ಎಂಬ ಪ್ರಶ್ನೆ ಬರಬಹುದು. ಹೌದು, ಕೆಲವು ಶಬ್ದಗಳ ಪ್ರಕ್ರಿಯೆ ನಮಗೆ ತಿಳಿದಿದೆ, ಆದರೆ ಶಾಸ್ತ್ರಕ್ಕೆ ತಿಳಿದಿಲ್ಲವಲ್ಲ! ಅದು ಒಂದು ಪ್ರೋಗ್ರಾಮಿನಂತೆ, ಪ್ರತಿಯೊಂದನ್ನೂ ತಾರ್ಕಿಕವಾಗಿ ನಿರ್ಮಾತೃಗಳೇ feed ಮಾಡಬೇಕು. ಎಷ್ಟೇ command ಕೊಟ್ಟರೂ ಸ್ವಯಂ ಯೋಚಿಸುವ ಶಕ್ತಿ command ಗಳಿಗೆ ಇಲ್ಲ, ಅವೆಲ್ಲ ಒಂದು ನಿರ್ದಿಷ್ಟ ಕೋನದಲ್ಲಿ ಸೇರಿದಾಗ ಪ್ರತಿಕ್ರಿಯೆಯೊಂದನ್ನು ಹೊಮ್ಮಿಸುತ್ತವೆ; ಹಾಗೆಯೇ ಸೂತ್ರಗಳು! ಲೋಕಾಭಿರಾಮವಾಗಿ ಮಾತಾಡುವಾಗ ’ಇಕೋ ಯಣಚಿ’ ಸೂತ್ರದಿಂದ ಯಣ್ ಕಾರ್ಯ ವಿಧಾನವಾಗುತ್ತದೆ ಎಂದುಬಿಡುತ್ತೇವೆ. ಆದರೆ ನಿಜವಾಗಿ ಆ ಕಾರ್ಯವನ್ನು ಸಾಧಿಸುವುದಕ್ಕೆ ಇದೊಂದು ಸೂತ್ರಕ್ಕೆ ಕನಿಷ್ಟ ಐದಾರು common command ಗಳ ಅಗತ್ಯ ಇದೆ. ಯಣ್ ಎಂದರೆ ’ಯವರಲ’’ ವರ್ಣಗಳು ಎಂದು ಹೇಳಿದವರ್ಯಾರು? ಅದನ್ನೂ command ಮೂಲಕ ಹೇಳಿಯೇ ಅರ್ಥ ಮಾಡಿಸಬೇಕು ನಮ್ಮ ತಂತ್ರಾಂಶಕ್ಕೆ, ಅದು ಯೋಚಿಸಲಾರದು, ಅದು ಕಥೆಯ ಪಾತ್ರದಂತೆ ಅಲ್ಲ! ಸ್ವಯಂ ಅರ್ಥಪೂರ್ಣತೆ ಯಾವುದೇ ವಿಧಿಸೂತ್ರಕ್ಕೆ ಇಲ್ಲ. ಈ ದಿಕ್ಕಿನಲ್ಲಿ ನೋಡಿದಾಗ ಪಾಣಿನಿವ್ಯಾಕರಣವನ್ನು ಓದುವಾತ ಪೂರ್ತಿ ಹೊಸದೇ ಆದ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇದೊಂದು ತಂತ್ರಾಂಶ ಮಾನವ ಮಿದುಳಿಗೆ install ಆಗಲು ಹೊಸದೇ ಅದರ ಅಗತ್ಯ ಇದೆ. ದುರದೃಷ್ಟವೆಂದರೆ ಆ ಮನಸ್ಥಿತಿ ನಿರ್ಮಾಣ ಇವತ್ತಿನ ವ್ಯವಸ್ಥೆಯಲ್ಲಿ ಬಹುತೇಕ ಸಾಧ್ಯವಾಗುತ್ತಿಲ್ಲ. )   

ಯಾಕೆ ಎರಡು ಪಕ್ಷ?

ಈ ಎರಡು ಪಕ್ಷಗಳ ದೃಷ್ಟಿಯ ಬಗ್ಗೆ ಒಂದು ನಿದರ್ಶನವಿದೆ. ಎರಡು ವಿದ್ಯಾರ್ಥಿಗಳಿದ್ದಾರೆ ಅದರಲ್ಲೊಬ್ಬ ಕುಶಾಗ್ರಮತಿ, ಮತ್ತು ಇನ್ನೊಬ್ಬ ಸಾಮಾನ್ಯಮತಿ ಎಂದುಕೊಳ್ಳೋಣ. ಅವರಿಬ್ಬರಿಗೂ ಗುರುಗಳು ಅಷ್ಟಾಧ್ಯಾಯಿ ಸೂತ್ರಗಳನ್ನು ಹೇಳಿಕೊಡುತ್ತಿದ್ದಾರೆ ಅಂದುಕೊಂಡರೆ, ಕ್ರಮಪ್ರಾಪ್ತವಾದ ಸಂಜ್ಞಾ ಮತ್ತು ಪರಿಭಾಷಾ ಸೂತ್ರಗಳನ್ನು ಹೇಳಿದಾಗ ಅವರ ಚಿಂತನೆ ಹೀಗಿರುತ್ತದೆ-

೧. ಕುಶಾಗ್ರಮತಿ- ಯಾವುದೇ ಕಾರ್ಯವನ್ನು ವಿಧಿಸದ ಈ ಸೂತ್ರಗಳಿಗೆ ಏನು ಕೆಲಸ, ಮತ್ತಿವುಗಳ ಅರ್ಥವೇನು?
೨. ಸಾಮಾನ್ಯಮತಿ- ಗುರುಗಳು ಹೇಳಿದ್ದಾರೆ ಅಂದರೆ ಈ ಸೂತ್ರಗಳಿಗೆ ಇಲ್ಲಿ ಸಧ್ಯಕ್ಕೆ ಕೆಲಸವಿರದಿದ್ದರೂ ಮುಂದೆಂದೋ ಕೆಲಸ ಬಂದೀತು, ಆಗ ನೋಡಿಕೊಂಡರೆ ಸಾಕು.

ಮೊದಲನೆಯವನ ತಲೆಯಲ್ಲಿ ಎಲ್ಲಿ ಏನು ಹೇಗೆ ಯಾಕೆ ಎಂಬ ಆಕಾಂಕ್ಷೆ (ಪ್ರಶ್ನರೂಪ) ಇದೆ, ಇದು ಕಾರ್ಯಕಾಲ ಪಕ್ಷ. ಆದರೆ ಎರಡನೆಯವನ ತಲೆಯಲ್ಲಿ ಇದೇನಿಲ್ಲ, ಅವನದು ಇರುವುದನ್ನು ಇರುವಂತೆ ಅರಿವಾಗಿಸಿಕೊಂಡು ಸುಮ್ಮನಾಗುವ ಮನಃಸ್ಥಿತಿ. ಇದು ಯಥೋದ್ದೇಶ ಪಕ್ಷ.

ಈ ನಡುವೆ ಇನ್ನೊಂದನ್ನು ಅರಿವಾಗಿಸಿಕೊಳ್ಳಬೇಕು. ಅದೇನೆಂದರೆ-
ಮನೆಯ ಸದಸ್ಯರ ವಿಳಾಸದ ಬಗ್ಗೆ ಹೇಳಿದೆನಲ್ಲ, ಅದೆಷ್ಟು ಸೂಕ್ಷ್ಮವೆಂದರೆ- ಅದನ್ನೆಂದಿಗೂ ಅಲಕ್ಷ್ಯ ಮಾಡುವಂತಿಲ್ಲ. ಅವುಗಳ ಕ್ರಮಸಂಖ್ಯೆಯೂ ಮುಖ್ಯ, ಯಾಕೆಂದರೆ ಒಂದೇ ಕಾರ್ಯದ ವಿಷಯದಲ್ಲಿ ಹಿಂದಿನ ಸೂತ್ರ ಹೇಳಿದ್ದಕ್ಕಿಂತ ಮುಂದಿನ ಸೂತ್ರ ಹೇಳಿದ್ದಕ್ಕೆ ಹೆಚ್ಚು ಬೆಲೆ, ಅದೇ ಊರ್ಜಿತವಾಗಿ ನಿಲ್ಲುತ್ತದೆ.

ಅಷ್ಟಾಧ್ಯಾಯಿಯ ಹಿರಿಮನೆಯಲ್ಲಿಯೇ ಎಲ್ಲ ಸಂಜ್ಞಾಸೂತ್ರಗಳೂ ಪರಿಭಾಷಾ ಸೂತ್ರಗಳೂ ಹೇಳಲ್ಪಟ್ಟಿವೆ. ಕಿರಿಮನೆಯಲ್ಲಿ ಇರುವುದೆಲ್ಲ ವಿಧಿಸೂತ್ರಗಳು ಮಾತ್ರ. ಇದೀಗ ಒಂದು ಕಲ್ಪನೆ ಮಾಡಿಕೊಳ್ಳೋಣ...

ಕಿರಿಮನೆಯಲ್ಲಿರುವ ಯಾವುದೋ ವಿಧಿಸೂತ್ರಕ್ಕೆ ಪರಿಭಾಷೆಯೊಂದರ ಅಗತ್ಯವಿದೆ, ಮತ್ತು ಆ ಪರಿಭಾಷೆ ಅವಶ್ಯವಾಗಿಯೂ ಹಿರಿಮನೆಯಲ್ಲಿಯೇ ಇದೆ. ಹಿರಿಮನೆಯಲ್ಲಿರುವ ಆ ಪರಿಭಾಷೆಗೆ ಮೊದಲೇ ಮಾಡಿಕೊಂಡ ನಿಯಮದ ಪ್ರಕಾರ ಈ ಕಿರಿಮನೆಯಾಗಲೀ, ಅಲ್ಲಿರುವ ಸೂತ್ರವಾಗಲೀ, ಆ ಸೂತ್ರದ ಅಗತ್ಯವಾಗಲೀ ಕಾಣಿಸುವುದೇ ಇಲ್ಲ. ಹೀಗಿರುವಾಗ ವ್ಯವಸ್ಥೆ ಹೇಗೆ!? ಸಂಜ್ಞಾ ಸೂತ್ರಕ್ಕೂ ಅಷ್ಟೇ, ಕಿರಿಮನೆ ಕಾಣಿಸುವುದಿಲ್ಲ!

ಈ ಹಂತದಲ್ಲಿ ಅವ್ಯವಸ್ಥೆಯಾಗದೆ? ಹಿರಿಮನೆಯ ಸೂತ್ರಗಳಿಗೆ ಸಂಸ್ಕಾರ ಪೂರ್ತಿಯಾಗದೆ ಹೋಗುವ ಸಂದರ್ಭ ಈಗ! ಹಾಗಾಗಿಯೇ ಪರಿಭಾಷೆಯೆಂಬುದು ನಡುಮನೆಯ ಹೊಸಿಲಲ್ಲಿ ಹಚ್ಚಿಟ್ಟ ದೀಪದಂತೆ, ಅದು ಇದ್ದಲ್ಲೇ ಇದ್ದು ಇಡೀ ಮನೆಗೆ (ನಮ್ಮ ಉದಾಹರಣೆಯಲ್ಲಿ ಎರಡು ಮನೆಗೂ ಬೆಳಕು ಕೊಡುತ್ತದೆ ಎಂದಾಗಬೇಕು) ಬೆಳಕು ಕೊಡುತ್ತದೆ ಎಂದು ಭಾಷ್ಯಕಾರರು ಬರೆಯುತ್ತಾರೆ. (ಇದಕ್ಕೆ ದೇಹಲೀ-ದೀಪ-ನ್ಯಾಯ ಅಂತ ಹೆಸರು. ದೇಹಲೀ ಎಂದರೆ ಮನೆಯ ಹೊಸ್ತಿಲು ಎಂದರ್ಥ. ದೆಹಲಿ ನಗರಿಗೆ ಈ ಹೆಸರು ಬಂದಿರುವುದೂ ಈ ಅರ್ಥದಲ್ಲಿ ಇದ್ದೀತು). ಪರಿಭಾಷೆಗಳ ವಿಷಯದಲ್ಲಿ ಇದೊಂದೇ ಮಾತು, ಪರಿಭಾಷೆ ಎಂಬ ವ್ಯವಸ್ಥಾಪಕಸೂತ್ರವು ಕಾರ್ಯಕಾಲ ಮತ್ತು ಯಥೋದ್ದೇಶ ಎಂಬೆರಡೂ ಪಕ್ಷಗಳಲ್ಲಿ ತಾನಿದ್ದಲ್ಲಿಯೇ ಇದ್ದು ವಿಧಿ ಸೂತ್ರಗಳನ್ನು ಉಪಕರಿಸುತ್ತದೆ.

ಸಂಜ್ಞಾ ಸೂತ್ರದ್ದು ಮಾತ್ರ ಬೇರೆ ಪರಿಸ್ಥಿತಿ. ಅದು ಯಥೋದ್ದೇಶ ಪಕ್ಷದಲ್ಲಿ ತಾನಿದ್ದಲ್ಲಿಯೇ ಇದ್ದು ಬಂದವರಿಗೆಲ್ಲ ಸಹಾಯ ಮಾಡಿ ಕಳಿಸುತ್ತದೆ, ಆದರೆ ಕಾರ್ಯಕಾಲ ಪಕ್ಷದಲ್ಲಿ ಕರೆದಲ್ಲಿಗೆ ಹೋಗಲೇ ಬೇಕಾದ ಪರಿಸ್ಥಿತಿ. ಹಾಗೆ ಹೋದಾಗ ಸಮಸ್ಯೆ ಉದ್ಭವವಾಗುತ್ತದೆಯಲ್ಲವೆ? ಉದಾ- ಯಾವುದೋ ಸೂತ್ರಕ್ಕೆ ಸಹಾಯ ಮಾಡಲೆಂದು ಹಿರಿಮನೆಯ ಸಂಜ್ಞಾಸೂತ್ರವೊಂದು ಕಿರಿಮನೆಗೆ ಹೋಯ್ತು ಅಂದುಕೊಳ್ಳುವಾ. ಅಲ್ಲಿಗೆ ಹೋಗಿ ಅಲ್ಲಿನ ವಿಧಿ ಸೂತ್ರದೊಂದಿಗೆ ಸೇರಿ ತನ್ನ ಅರ್ಥವನ್ನೂ ಕಂಡುಕೊಳ್ಳುವುದರಿಂದ ಸಂಜ್ಞಾಸೂತ್ರವೂ ಅಲ್ಲಿಯದೇ ಸೂತ್ರವಾಗುತ್ತದೆ, ಹಾಗಾದಾಗ ವಿಳಾಸ ಬದಲಾಗುತ್ತದೆ. ವಿಳಾಸ ಬದಲಾಯಿತೆಂದರೆ ವ್ಯವಸ್ಥೆ ಕೆಡುತ್ತದೆ. ಇನ್ಯಾವುದೋ ಸಂಜ್ಞಾಸೂತ್ರಕ್ಕಿಂತ ಪ್ರಸ್ತುತ ಸಹಾಯಕ್ಕೆಂದು ಹೋಗಿರುವ ಸಂಜ್ಞಾಸೂತ್ರವೇ ಮುಂದಿನದಾಗಿ ಬದಲಾದರೆ ಎದುರಾಗಬಹುದಾದ ಸಮಸ್ಯೆಗಳು ಒಂದೆರಡಲ್ಲ. ಹಾಗೆಯೇ ಬದಲಾಗಬೇಕಾಗಿರುವುದೇ ಅಪೇಕ್ಷಿತ ಬದಲಾವಣೆಯಾಗುವ ಸಂದರ್ಭವೂ ಇಲ್ಲವೆಂದಿಲ್ಲ. ಇಲ್ಲಿ ಬಹು ವಿವೇಚನೆಯಿಂದ ಯಥೋದ್ದೇಶ ಮತ್ತು ಕಾರ್ಯಕಾಲ ಪಕ್ಷಗಳನ್ನು ಆಯ್ದುಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಲಾಗುತ್ತದೆ.

ಹೀಗೆ ವ್ಯವಸ್ಥಾಪಿತವಾದ ಎರಡು ಪಕ್ಷಗಳನ್ನು ಪೂರ್ಣ ವ್ಯಾಕರಣದಲ್ಲಿ ಕಾರ್ಯಸಿದ್ಧಿಗಾಗಿ ಉಪಯೋಗಿಸಲಾಗುತ್ತದೆ. ಪಕ್ಷಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದಕ್ಕೆಂದೇ ಎರಡು ಪರಿಭಾಷೆಗಳನ್ನು ಭಾಷ್ಯದಲ್ಲಿ ಪರಿಕಲ್ಪಿಸಲಾಗಿದೆ! ಅವು ಚೇಂಜ್ ಓವರ್ ಸ್ವಿಚ್ ಇದ್ದಂತೆ. ಅಗತ್ಯಬಿದ್ದಾಗ ಯಥೋದ್ದೇಶ ಪಕ್ಷ, ಅಗತ್ಯಬಿದ್ದಾಗ ಕಾರ್ಯಕಾಲಪಕ್ಷ ಎನ್ನುವುದು ಅದರ ಹಿಂದಿನ ತತ್ತ್ವ. ಇಲ್ಲಿ ಸ್ವಿಚ್ ಬದಲಾವಣೆ ಮಾಡುವ ಅವಕಾಶವಿದೆಯೇ ಹೊರತು ಆಯಾ ಸ್ವಿಚ್ ಬದಲಾಯಿಸಿದಾಗ ಆಗುವ ನಿರ್ದಿಷ್ಟ ಪರಿಣಾಮಗಳನ್ನು ತಡೆಯಲಾಗದು. ಇಡೀ ಶಾಸ್ತ್ರವನ್ನು ಎಲ್ಲಿಯೂ ಅತಿವ್ಯಾಪ್ತಿ ಅವ್ಯಾಪ್ತಿ ಅಸಂಭವಗಳಾಗದಂತೆ ಈ ವ್ಯವಸ್ಥೆಯಲ್ಲಿ ಅಳವಡಿಸುವ ಬುದ್ಧಿ ಕೌಶಲ ಎಂಥದ್ದಿರಬಹುದು!!

ಹೀಗೆ ಭಾಷೆಯ ಸಂರಚನೆಯ ಮೂಲಸ್ವರೂಪವನ್ನು ಅರ್ಥೈಸಿಕೊಂಡು, ಅದಕ್ಕೆ ತಕ್ಕುದಾದ ಸೂತ್ರಗಳನ್ನು ಹೆಣೆದಿದ್ದು ಬರೀ ಒಂದು ಜೀವಮಾನದಲ್ಲಿನ ಮಾನವ ಸಾಧನೆಯಲ್ಲ. ಪಾಣಿನಿಮಹರ್ಷಿಗಳಿಗಿಂತಲೂ ಹಿಂದೆಯೇ ಆಗಿ ಹೋದ ಹಲವಾರು ವೈಯಾಕರಣರಿದ್ದಾರೆ. ಆದರೆ ಈ ಬಗೆಯ ಸ್ವಿಚ್ ಪರಿಕಲ್ಪನೆ, ಎಲ್ಲಿಯೂ ನಿಯಮಬಾಹಿರವಾಗದ ವ್ಯವಸ್ಥೆಯ ಸಂಯೋಜನೆ ಪಾಣಿನಿವ್ಯಾಕರಣದ ಅನನ್ಯ ಅಂಶ. ಅರ್ಥಕ್ಕಾಗಿ  ಬಳಕೆಯಾಗುವ ಶಬ್ದಗಳನ್ನು ಅರ್ಥದ ಬಂಧನದಿಂದ ಮುಕ್ತಗೊಳಿಸಿ, ಅದನ್ನೊಂದು ದ್ರವ್ಯವಾಗಿ ಪರಿಗಣಿಸಿ ವ್ಯಾಕರಣವು ಕೆಲಸ ಮಾಡುತ್ತದೆ. (ಅರ್ಥದಿಂದ ಪದಗಳನ್ನು ಪ್ರತ್ಯೇಕಿಸುವುದಕ್ಕೂ ಸೂತ್ರವಿದೆ!)

ವ್ಯಾಕರಣದ ಒಳಹೊಕ್ಕಾಗ ಅದು ಕ್ಲಿಷ್ಟ ಎನ್ನುವ ಭಾವನೆ ಬಂದರೆ ಸಹಜವೇ. ನನ್ನ ಇದುವರೆಗಿನ ಅನುಭವದಂತೆ ವ್ಯಾಕರಣದ ಒಳಹೊಗುವ ನಿಟ್ಟಿನಲ್ಲಿ ಇವತ್ತಿನ ಅಧ್ಯಯನ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ. ಅತ್ಯಂತ ಮೂಲಭೂತವಾದ ಸಂಶಯಗಳನ್ನು ಪರಿಹರಿಸದೆ ವ್ಯಾಖ್ಯಾನಕ್ಕೆ ಇಳಿಯುವ ಅಧ್ಯಯನ ಶೈಲಿ ಸರಿಯಾದುದಲ್ಲ. ಇದು ಹೇಗಿದೆಯೆಂದರೆ- 
ವ್ಯಾಕರಣವೇ ಹೇಳುವಂತೆ ವ್ಯಾಕರಣದ ಕುರಿತಾಗಿ ಎರಡು ಬಗೆಯ approach ಇದೆ.

೧. ಲಕ್ಷ್ಯೈಕಚಕ್ಷುಷ್ಕತೆ- ಶಬ್ದಶಃ ಅರ್ಥ- ಗುರಿಯೆಡೆಗೆ ನಟ್ಟ ದೃಷ್ಟಿ.      
೨. ಲಕ್ಷಣೈಕಚಕ್ಷುಷ್ಕತೆ- ಶಬ್ದಶಃ ಅರ್ಥ- ಗುರಿಯೆಡೆಗೊಯ್ಯುವ ದಾರಿಯಮೇಲೆ ನಟ್ಟ ದೃಷ್ಟಿ.

 ವ್ಯಾಕರಣದ ವಿಷಯದಲ್ಲಿ ಇದೆರಡು approach ಇವೆ. ಮೊದಲನೆಯದು ಇವತ್ತಿನ ಯಾರಿಗೂ ಇರಲು ಸಾಧ್ಯವಿಲ್ಲದ, ಪಾಣಿನಿ ಮತ್ತು ಅವರ ಎತ್ತರಕ್ಕಿರುವ ವಿದ್ವಾಂಸರಿಗೆ ಮಾತ್ರ ಸಾಧ್ಯವಾಗುವ ದೃಷ್ಟಿ. ಶಬ್ದಗಳ ನಿಜವಾದ ಸ್ವರೂಪ ಅವರಿಗೆ ತಿಳಿದಿದೆ, ಹಾಗಾಗಿ ಶಬ್ದಗಳ ಅಗತ್ಯಕ್ಕೆ ತಕ್ಕಂತೆ ಶಾಸ್ತ್ರವನ್ನು (ಸೂತ್ರಗಳನ್ನು) ನಿರ್ಮಿಸಿದರು ಆ ಮಹಾತ್ಮರು. ಆದರೆ ಆ ಪರಂಜ್ಞಾನ ನಮಗೆಲ್ಲಿ ಬರಬೇಕು!? ಹಾಗಾಗಿ ಸಾಮಾನ್ಯರಾದ ನಾವೆಲ್ಲ ಎರಡನೆಯ ವರ್ಗದ ಜನ; ಸೂತ್ರಗಳೆಂಬ ದಾರಿಯ ಮೂಲಕ ಸಾಗಿ ಪದದ ಸ್ವರೂಪವನ್ನು ಅರಿಯುವವರು. ದಾರಿಯ ಮೇಲೆ ನಟ್ಟ ನೋಟ ನಮ್ಮದು.
ಇದೇ ನಮ್ಮ ಸಮಸ್ಯೆ! ದಾರಿಗಳು ಸದಾ ಗೋಜಲು, ಗೊಂದಲ ತರುತ್ತವೆ. ಇದಕ್ಕೊಂದು ನಿದರ್ಶನ ಕೊಡುತ್ತೇನೆ-

೧. ಮೊದಲನೆಯವರು ನಗರವೊಂದನ್ನು ಗೂಗಲ್ ಅರ್ಥ್ ತಂತ್ರಾಂಶದಲ್ಲಿ ಗಗನದ ಮೂಲಕ ನೋಡುತ್ತಿರುವಂತೆ ನೋಡುತ್ತಿದ್ದಾರೆ. ಅವರಿಗೆ ಆ ಮಾರ್ಗಗಳು, ಅವುಗಳ ಕವಲು, ಅವುಗಳ ಬದಲೀ ವ್ಯವಸ್ಥೆ ಎಲ್ಲವೂ ನಿಚ್ಚಳ, ಸರಾಗ.

೨. ಎರಡನೆಯವರಾದ ನಾವು ಅದೇ ಗೂಗಲ್ ಅರ್ಥ್ ತಂತ್ರಾಂಶದಲ್ಲಿ ಪೂರ್ತಿ ಝೂಮ್ ಮಾಡಿ street view ಅಯ್ಕೆಯನ್ನು ಮಾಡಿಕೊಂಡವರಂತಿದ್ದೇವೆ. ನಮಗೆ ಆ ನಗರ ಸಾಗರದಂತೆ; ಸಾವಿರ ದಾರಿಗಳ ಗೋಜಲಿನಲ್ಲಿ ಗಲಿಬಿಲಿಯಾಗಿದ್ದೇವೆ.  
ಅಕ್ಷರಶಃ ನಮ್ಮದು ಈ ಅವಸ್ಥೆ. ಮೇಲಿನಿಂದ ಎಲ್ಲವನ್ನೂ ಒಂದು ಪೂರ್ಣ ವ್ಯವಸ್ಥೆಯಂತೆ ನೋಡಲು ಸಾಧ್ಯವಾಗುವವನಿಗೆ ಕಾರ್ಯಕಾಲ ಪಕ್ಷ ಅಥವಾ ಯಥೋದ್ದೇಶ ಪಕ್ಷ ಎಂಬುದು ಗೊಂದಲವಲ್ಲ. ಆದರೆ ಅದು ಸಾಧ್ಯವಾಗದಿದ್ದಾಗ ಶಾಸ್ತ್ರ ಕಠಿಣವೆನ್ನಿಸುತ್ತದೆ.

ನನ್ನ ಸಮಸ್ಯೆ ಏನಪ್ಪಾಂದ್ರೆ.......

ತನಗೆ ಬೇಕಾದ ಸ್ವಿಚ್ ಬಳಸಿ ಉದ್ದೇಶಿತ ಕಾರ್ಯವನ್ನು ಸಾಧಿಸುವ ವ್ಯಾಕರಣದ ಈ ಪರಿಯಿದೆಯಲ್ಲ, ನನಗದು ಅನುಕೂಲತರ್ಕವಾಗಿ ಕಾಣುತಿತ್ತು. ಅದರಲ್ಲೂ ಯಥೋದ್ದೇಶ ಪಕ್ಷದ ನೆಲೆಯಲ್ಲಿ ಉದ್ಭವಿಸಿದ ಪ್ರಶ್ನೆಯೊಂದಕ್ಕೆ ಕಾರ್ಯಕಾಲ ಪಕ್ಷವನ್ನು ಆಶ್ರಯಿಸಿ ಉತ್ತರಕೊಡುವುದು ತಾರ್ಕಿಕವೇ ಅಲ್ಲದ್ದು ಎನ್ನಿಸುತ್ತಿತ್ತು. ಯಥೋದ್ದೇಶಪಕ್ಷದ ಪ್ರಕಾರ ಸಮಸ್ಯೆ ಉದ್ಭವಿಸಿದ್ದು ಎಂದಾದರೆ ಅದರಲ್ಲಿಯೇ ಉತ್ತರ ಕೊಡಬೇಕು ಎನ್ನುವ ನನ್ನ ವಾದದ ನೆಲೆ ಇದ್ದುದು ಮತ್ತದೇ ನನ್ನ approach ನಲ್ಲಿ. ನನಗೆ ಪೂರ್ಣವನ್ನು ನೋಡಲಾಗುತ್ತಿಲ್ಲ, ಮತ್ತು ಇವೆರಡೂ ಪಕ್ಷಗಳು ವಾದ ಮಾಡಲಿಕ್ಕಲ್ಲ ಬದಲಾಗಿ ಅಂದುಕೊಂಡಿರುವ ಗುರಿಯನ್ನು ತಲುಪಲಿಕ್ಕಾಗಿ ಅನ್ನುವುದು ಅರ್ಥವೇ ಆಗುತ್ತಿರಲಿಲ್ಲ. ನನಗನ್ನಿಸುವಂತೆ ವ್ಯಾಕರಣದ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಪ್ರತಿಯೊಬ್ಬನೂ ಎದುರಿಸುವ ಸಮಸ್ಯೆ ಇದು. ಸೂತ್ರಗಳನ್ನು ಕಂಠಸ್ಥ ಮಾಡಿ ಅದರ ಉದಾಹರಣೆಯನ್ನು ಪಟಪಟನೆ ಹೇಳುವುದೇ ಅಧ್ಯಯನ ಅಂದುಕೊಂಡರೆ ಈ ಸಮಸ್ಯೆಯಿಲ್ಲ, ಅದು ಬೇರೆ ವಿಚಾರ.

ಈ ಸಮಸ್ಯೆಗೆ ಆಗಾಗ ಸಮಾಧಾನವೂ ಮತ್ತೆ ಮತ್ತೆ ಸಮಸ್ಯೆಯೂ ಉದ್ಭವಿಸುವ ಪ್ರಕ್ರಿಯೆಯಲ್ಲಿಯೇ ಸುಮಾರಷ್ಟು ವರ್ಷ ಕಳೆದಿದ್ದೆ ನಾನು.

ಮೊನ್ನೆ ಒಂದಿನ ಏನಾಯ್ತಪ್ಪಾಂದ್ರೆ-

ನಮ್ಮಲ್ಲಿ ಆಂಡ್ರಾಯಿಡ್ ಕಾರ್ಯವ್ಯವಸ್ಥೆಯ ಕಾರ್ಯಾಗಾರ ಆಯೋಜಿತವಾಗಿತ್ತು, ಒಂದು ತಾಸು ಅಲೆದಾಡಲೆಂದು ನಾನೂ ಹೋಗಿದ್ದೆ. ಒಬ್ಬಾತ ಸರ್ಕೀಟ್ ಬೋರ್ಡ್ ಒಂದನ್ನು ಅದೆಷ್ಟು ಚಂದವಾಗಿ ವಿವರಿಸುತ್ತಿದ್ದ ಎಂದರೆ, ನನಗೆ ವ್ಯಾಕರಣದ ಪಕ್ಷದ್ವಯದ ತರ್ಕಸಂಬದ್ಧತೆ ಅರ್ಥವಾಗುವಷ್ಟು ಚಂದವಾಗಿ!! ಅವ ಪ್ರತಿಯೊಂದು ಎಳೆ ಎಳೆಯನ್ನೂ ಅದರ ಹಿಂದಿನ ಲಾಜಿಕ್ ಸಮೇತ ವಿವರಿಸುತ್ತಿದ್ದ. ಯಾವುದೇ ಗೇಮ್ ಆಡುವಾಗಿನ ಒಂದು ಪುಟ್ಟ ಕಾರ್ಯ ತೆರೆಯಮೇಲೆ (screen) ಮೂಡಬೇಕಾದರೆ ಅದರ ಹಿಂದೆ ಸರ್ಕೀಟ್ ಬೋರ್ಡಿನಲ್ಲಿ ಮತ್ತು processor ನಲ್ಲಿ ನಡೆಯುವ ತರ್ಕ ಪ್ರತಿತರ್ಕಗಳನ್ನು ಆತ ವಿವರಿಸಿದ. ತನಗೆ ಬೇಕಾದ್ದನ್ನು ಸಾಧಿಸುವುದಕ್ಕಾಗಿ ಹೀಗೆ switching ಮಾಡಿಕೊಳ್ಳುವ ವ್ಯಾಕರಣವೂ ಒಂದು ತರ್ಕಸಹಿತ ತಂತ್ರಜ್ಞಾನ ಅನ್ನಿಸಿತು.

ಹಾಗೆ ಆ ಕ್ಷಣಕ್ಕೆ ಸ್ಫುರಿಸಿದ್ದನ್ನೇ ಇಲ್ಲಿ ಬರೆದಿದ್ದೇನೆ. ನಡುವೆ ಆಗಿಹೋದ ಎಷ್ಟೋ ಪ್ರಶ್ನೆ ಮತ್ತು ಸಮಾಧಾನಗಳ ಮಧ್ಯೆ ಇದೂ ಒಂದು ಸಮಾಧಾನವಿರಬಹುದು, ನಾಳೆ ಮತ್ತೆ ಇನ್ನೊಂದು ಪ್ರಶ್ನೆ ಎದುರಾಗಬಹುದು. ತರ್ಕದಲ್ಲಿ ಕೊನೆಯೆಂಬುದಿಲ್ಲವಲ್ಲ! ಆ ಇನ್ನೊಂದು ಪ್ರಶ್ನೆ ಬರುವವರೆಗೆ ಬೆಳವಣಿಗೆಯಿಲ್ಲ, ಪ್ರಶ್ನೆ ಬೇಗ ಬರಲಿ.  

Friday, February 27, 2015

ಸಂಸ್ಕೃತ ವ್ಯಾಕರಣ;  ಒಂದು ಸಣ್ಣ ಪರಿಚಯ. 
ಭಾಗ ಒಂದು.




 ವ್ಯಾಕರಣದಲ್ಲಿ ಪ್ರವೇಶ ಸಾಧ್ಯವಾಗುವುದು ಮಿದುಳಿನ ಮಟ್ಟಿಗೆ ಒಂದು ಅಸಾಧಾರಣ ಸಂಭವ. ’ಪದಗಳ ಸಾಧುತ್ವವನ್ನಲ್ಲವೆ ಹೇಳಲು ಹೂರಟಿರುವುದು, ಅದಕ್ಯಾಕೆ ಅಷ್ಟು ಕಷ್ಟಪಡಬೇಕು?’- ಎನ್ನುವ ಭಾವನೆ ಜನರಲ್ಲಿ ಬಂದರೆ ತಪ್ಪಲ್ಲ. ಯಾಕೆಂದರೆ ನಮಗೆ ಪರಿಚಯವಿರುವ ಯಾವುದೇ ಭಾಷೆಯ ವ್ಯಾಕರಣದಲ್ಲಿ, ಸಂಸ್ಕೃತದಲ್ಲಿ ನಡೆದಂಥ ಚಿಂತನೆಯಾಗಲೀ ಅಲ್ಲಿನ ವ್ಯವಸ್ಥೆಯಾಗಲೀ ನಮಗೆ ಕಂಡಿಲ್ಲ.  ಹಾಗಾಗಿ ಭಾಷೆಯ ಬಗ್ಗೆ ನಮ್ಮ ಊಹೆಗೆ ನಿಲುಕದ ಪ್ರಪಂಚವೊಂದು ಸಂಸ್ಕೃತದಲ್ಲಿ ಇದೆಯೆಂದರೆ ನಂಬುವುದು ಕಷ್ಟ. ನಂಬುವುದು ಕಷ್ಟ ಎಂಬುದಕ್ಕಿಂತ ಅದು ನಮಗೆ ಸಾಧ್ಯವಿರುವ ಎಲ್ಲ ಆಯಾಮದಿಂದ ಹೊರಗಿನ ಸಂಗತಿಯಾಗಿ ನಿಲುತ್ತದೆ.  

ಭಾಷೆಯೆಂಬ ಮಹಾ ವೈಚಿತ್ರ್ಯಕ್ಕೆ ಸೀಮೆಯನ್ನೂ ಚೌಕಟ್ಟನ್ನೂ ಬರೆಯುವ ಪ್ರಯತ್ನವೇ ಕಲ್ಪನೆಗೆ ಮೀರಿದ್ದು. ಇದೋ ನನ್ನ ಹಿಡಿತಕ್ಕೆ ಸಿಲುಕಿದೆ ಎನಿಸುವಷ್ಟರಲ್ಲೇ ನುಸುಳಿಕೊಂಡುಬಿಡುವ ಸ್ವಭಾವ ಅದರದ್ದು. ವ್ಯಾಕರಣ ಮಾಡಲು ಹೊರಟಿರುವುದು ಇಂಥಾ ಕೆಲಸವನ್ನೇ. ಅದರಲ್ಲೂ ಸಂಸ್ಕೃತದಂಥ ವಿಶಾಲ ಹರಹಿನ, ಕಾಲಾನುಭವದ ಮಹಾನ್ ಇತಿಹಾಸವಿರುವ ಭಾಷೆಯನ್ನು ವಿವರಿಸುವುದಕ್ಕೆ ನಿಯಮಗಳ ವ್ಯವಸ್ಥೆ ಅಳವಡಿಸಿದರೆ ಅದು ತುಂಬಾ ಸಂಕೀರ್ಣವಾಗಿಯೇ ಆಗುತ್ತದೆ. ಪಾಣಿನಿಮಹರ್ಷಿಗಳ ಅಷ್ಟಾಧ್ಯಾಯೀ ಗ್ರಂಥ ಮತ್ತದರ ವಿವರಣೆ ಇವತ್ತಿಗೂ ಮಾನವ ಮಿದುಳಿಗೆ ನಿರಾಯಾಸವಾಗಿ ಹೊಗುವ ಸಂಗತಿಗಳಲ್ಲ. ಪಾಶ್ಚಾತ್ಯ ವಿದ್ವಾಂಸ ಎಲ್. ಬ್ಲೂಮ್ ಫೀಲ್ಡ್ ಹೇಳುವಂತೆ ’ಪಾಣಿನಿಯ ವ್ಯಾಕರಣವೆಂಬುದು ಮಾನವ ಬುದ್ಧಿಮತ್ತೆಗೆ ಇದುವರೆಗೆ ಸಾಧ್ಯವಾಗಿರುವ ಅದ್ಭುತಗಳಲ್ಲಿ ಒಂದು’.  ಭಾಷೆಯಂಥ ಸಂಕೀರ್ಣ ವ್ಯವಸ್ಥೆಯನ್ನು ವಿವರಿಸಲು ಹೊರಟ ಅದು ಸಂಕೀರ್ಣವಾಗಿಯೇ ಇರಬೇಕಾದ್ದು ಸಹಜ.

ಪದವೊಂದು ಸಾಧುವೋ ಅಲ್ಲವೋ ಎಂಬ ನಿಶ್ಚಯಕ್ಕೆ ವ್ಯಾಕರಣವೇ ಶರಣು. ಮೇಲ್ನೋಟಕ್ಕೆ ವ್ಯಾಕರಣದ ಮೇಲೆ ದೊಡ್ಡ ಹೊರೆಯೇನೂ ಇದ್ದಂತೆ ಕಾಣದು. ಡಿಕ್ಷನರಿಯಂತೆ ಪದಗಳನ್ನು ಪಟ್ಟಿಮಾಡುತ್ತಾ ಸಾಗಿದರಾಗದೆ? ಸರಿಯಾಗಿರುವ ಪದಗಳನ್ನು ಪಟ್ಟಿ ಮಾಡಿದರಾಯ್ತಲ್ಲ, ಮತ್ತೆ ಸಾಧುತ್ವ ಹೇಳುವುದಕ್ಕೆ ವ್ಯಾಕರಣ ಯಾಕೆ  ಬೇಕು? ನಿಘಂಟು ಸಾಕು. ಹಾಗೆ ನೋಡಿದರೆ ಡಿಕ್ಷನರಿ ಎಂಬುದು ಮಾನವ ಮಿದುಳಿನ ಬುದ್ಧಿಮತ್ತೆಯ ಉತ್ಪನ್ನವಲ್ಲ. ಅದು smart ಕೆಲಸ ಎನ್ನುವುದಕ್ಕಿಂತ massive ಕೆಲಸ. ತುಂಬಾ ದೊಡ್ಡ ಶ್ರಮವನ್ನು ಬೇಡುವ ಕೆಲಸ.  ಆದರೆ ಪಾಣಿನಿಯ ವ್ಯಾಕರಣ massive ಅಲ್ಲ, ಅದು ಅತ್ಯಂತ smart ರೀತಿಯದು. ಹಾಗಾಗಿಯೇ ಅದು ಸಂಕೀರ್ಣ, ಮತ್ತು ತರ್ಕಾಶ್ರಿತ. ಭಾಷೆಯೊಂದರ ಎಲ್ಲ ಬಗೆಯ ಸಾಧ್ಯತೆಗಳನ್ನು ಬರೀ ೩೯೫೯  ಸೂತ್ರಗಳಲ್ಲಿ ಹಿಡಿದಿಟ್ಟ ಹೆಮ್ಮೆ ಅಷ್ಟಾಧ್ಯಾಯಿಯದು. ಭಾಷೆಯ ಅಗಾಧತೆಗೆ ಹೋಲಿಸಿದರೆ ಈ ಸೂತ್ರಗಳ ಪ್ರಮಾಣ ಬಲು ಸಣ್ಣದು. ಇಷ್ಟು ಸಣ್ಣ ಸಂಖ್ಯೆಯ  ಸೂತ್ರಗಳಲ್ಲಿ ಅಷ್ಟಾಧ್ಯಾಯಿ ಪೂರ್ತಿ ಭಾಷೆಯ ಎಲ್ಲಾ ಆಯಾಮಗಳನ್ನು ವಿವರಿಸಲು ಪ್ರಯತ್ನಿಸುತ್ತದೆ. ಎಲ್ಲಾ ಆಯಾಮಗಳನ್ನು ಎಂದರೆ ಕನ್ನಡದ ಮೂಲಕ ನಮಗೆ ತಿಳಿದಿರುವ ಸಂಧಿ ಸಮಾಸ ಕ್ರಿಯಾಪದ, ನಾಮಪದ, ಸರ್ವನಾಮ ಇದಿಷ್ಟೇ ಅಲ್ಲ. ಅವುಗಳ ವ್ಯುತ್ಪತ್ತಿ, ಸಿದ್ಧಿಪ್ರಕಾರ, ಸ್ವರಪ್ರಕ್ರಿಯೆ ಎಲ್ಲ ಎಲ್ಲವನ್ನೂ ವಿವರಿಸುವ ಕೆಲಸ.


ಅಷ್ಟಾಧ್ಯಾಯಿಯೆಂಬ ಎಂಟು ಅಧ್ಯಾಯಗಳ ಪೂರ್ತಿ ರಚನೆಯಲ್ಲಿ ಮುಖ್ಯವಾಗಿ ಎರಡು ಭಾಗ. ಎಂಟು ಅಧ್ಯಾಯಗಳಲ್ಲಿ ಪ್ರತಿಯೊಂದು ಅಧ್ಯಾಯವೂ ನಾಲ್ಕು ಪಾದಗಳಲ್ಲಿ ವಿಭಾಗವಾಗಿದೆ. ಇದರಲ್ಲಿ ಏಳು ಅಧ್ಯಾಯಗಳು ಮತ್ತು ಎಂಟನೆಯದರ ಮೊದಲನೆಯ ಪಾದ- ಒಂದು ಭಾಗ. ಉಳಿದ ಮೂರೇ ಪಾದಗಳದ್ದು ಇನ್ನೊಂದು ಭಾಗ. ಸೋಜಿಗವೆಂದರೆ, ಮೊದಲನೆಯ ಭಾಗದ ದೃಷ್ಟಿಯಲ್ಲಿ ಎರಡನೆಯ ಭಾಗವೆಂಬುದೇ ಇಲ್ಲ! ಅಂದರೆ, ಶಬ್ದಸಿದ್ಧಿಯ ಪ್ರಕ್ರಿಯೆಯಲ್ಲಿ ಎರಡನೆಯ ಭಾಗದಲ್ಲಿರುವ ಸೂತ್ರಗಳ ಮೂಲಕ ಯಾವೆಲ್ಲ ಕಾರ್ಯ ಆಗಿವೆಯೋ, ಅವು- ಮೊದಲನೆಯ ಭಾಗದ ದೃಷ್ಟಿಯಲ್ಲಿ ಅಸಿದ್ಧ ( ಆಗದೇ ಇರುವಂತೆ). ಹಾಗಂತ ಮೂರೇ ಪಾದಗಳ ಎರಡನೆಯ ಭಾಗ ಇದೆಯಲ್ಲ, ಅದರ ದೃಷ್ಟಿಯಲ್ಲಿ ಮೊದಲನೆಯ ಭಾಗ ಇದ್ದೇ ಇದೆ, ಅಸಿದ್ಧವಲ್ಲ. ಅಂದರೆ ಇದು ದ್ವಿಮುಖ (ಟೂವೇ) ಅಂಧತ್ವ ಅಲ್ಲ. ಹೀಗೆ ಹೇಳಿದರೂ ಸ್ಪಷ್ಟವಾಗಲಿಕ್ಕಿಲ್ಲ, ಇನ್ನೂ ಸರಳವಾಗಿ ಹೇಳಬೇಕೆಂದರೆ...

ಎರಡು ಮನೆಗಳಿದ್ದಾವೆ, ಮತ್ತದರಲ್ಲಿ ಮನೆಯ ಸದಸ್ಯರಿದ್ದಾರೆ ಎಂದುಕೊಳ್ಳುವಾ. ಮೊದಲನೆಯದಕ್ಕೆ ಹಿರಿಮನೆ ಎಂದೂ ಎರಡನೆಯದಕ್ಕೆ ಕಿರಿಮನೆ ಎಂದೂ ಕರೆಯುವಾ. ಈ ಹಿರಿಮನೆಯ ಜನಗಳಿಗೆ ಕಿರಿಮನೆಯ ಜನ ಲೆಕ್ಕಕ್ಕೇ ಇಲ್ಲ, ಅವರ ಇರುವಿಕೆ ಮತ್ತು ಅವರ ಕಾರ್ಯಗಳು ಲೆಕ್ಕಕ್ಕಿಲ್ಲ. ಅಥವಾ ಆ ಕಿರಿಮನೆಯೆಂಬುದೇ ಇಲ್ಲ. ಹಾಗಂತ ಕಿರಿಮನೆಯವರಿಗೆ ಹಿರಿಮನೆಯ ಜನ, ಅವರ ಕಲಸಗಳೆಲ್ಲವೂ ಸ್ಪಷ್ಟ ಸ್ಪಷ್ಟ.  ಕಿರಿಮನೆಯ ಜನ ಅಡುಗೆ ಮಾಡಿಕೊಂಡರೂ, ಹೊಸ ಬಟ್ಟೆ ತಗೊಂಡರೂ, ಇನ್ನೇನೇ ಮಾಡಿದರೂ ಅದಕ್ಕೆ ಸಂಬಂಧಪಟ್ಟಂತೆ ಹಿರಿಮನೆಯ ಜನಗಳ ಪಾಲಿಗೆ ಅದು ಮಾಡಿಲ್ಲದಂತೆ. ಈ ಮೊದಲಮನೆಯ (ಹಿರಿಮನೆ) ಜನ ಅವರಿನ್ನೂ ಅಡುಗೆ ಮಾಡಿಲ್ಲ, ಬಟ್ಟೆ ತಗೊಂಡಿಲ್ಲ ಎಂದೇ ಅಂದುಕೊಳ್ಳುತ್ತಾರೆ. ಹಾಗಂದುಕೊಂಡು ಸುಮ್ಮನಿರುವುದಿಲ್ಲ, ಅದಕ್ಕನುಗುಣವಾಗಿಯೇ ತಮ್ಮ ಕೆಲಸ ಮಾಡುತ್ತಾರೆ.  

ಉದಾ-

ಹಿರಿಮನೆಯಲ್ಲಿ ಒಬ್ಬರಿದ್ದಾರೆ, ಗುಣಸಂಧಿಯನ್ನು ವಿಧಿಸುವವರು. ಅವರ ಪ್ರಕಾರ ಅ, ಆ, ಕಾರಗಳ ಮುಂದೆ ಯಾವುದೇಸ್ವರವರ್ಣ ಬಂದರೆ, ಅವುಗಳ ಬದಲಿಗೆ ಏ ಮತ್ತು ಓ ಎಂಬ ವರ್ಣಗಳು ಯೋಗ್ಯತೆಯನುಸಾರ ಒಂದೇ ಆದೇಶವಾಗಿ ಬರುತ್ತವೆ. ಉದಾ- ರಮಾ+ ಈಶಃ= ರಮೇಶಃ (+= ). ಸರಿ, ಇದೊಂದು ವಿಧಿ ಸೂತ್ರ, ಮತ್ತದು ಪೂರ್ತಿ ಭಾಷೆಯಲ್ಲಿ ತನ್ನ ಅಗತ್ಯವೆಲ್ಲಿದೆಯೆಂದು ಹುಡುಕುತ್ತಲೇ ಇರುತ್ತದೆ.

ಈಗ ಇನ್ನೊಂದು ಉದಾಹರಣೆ ನೋಡೋಣ. ’ಬಾಲಕಾ ಇಹ’ (ಇಲ್ಲಿ ಬಾಲಕರಿರುವರು ಎಂದರ್ಥ) ಅಂತ ಒಂದು ಶಬ್ದ ಪ್ರಸಂಗ. ವಸ್ತುತಃ ’ಬಾಲಕಾಸ್’ ’ಇಹ’ ಎಂದು ಎರಡು ಪದಗಳು ಅವು, ಆದರೆ ಸಂಹಿತೆಯ (ಸಂಧಿಸಂಭವ) ಕ್ರಮದಲ್ಲಿ ಸಂಧಿಯಾದಾಗ ಬಾಲಕಾ ಶಬ್ದದ ಮುಂದಿರುವ ಸಕಾರಕ್ಕೆ ರ ಎಂಬುದು ಆದೇಶವಾಗಿ,  ಆ ’ರ’ ವರ್ಣಕ್ಕೆ ಯಕಾರಾದೇಶವಾಗಿ ಮುಂದೆ ಆ ಯಕಾರಕ್ಕೂ ಲೋಪ ಬಂದು ಬರೀ ’ಬಾಲಕಾ’ ಅಂತ ಉಳಿದುಕೊಳ್ಳುತ್ತದೆ. ಇದಿಷ್ಟೂ ಕೆಲಸ ಮಾಡುವವರು ಕಿರಿಮನೆಯ ಜನ.

ಪರಿಸ್ಥಿತಿ ಹೀಗಿರಲಾಗಿ, ಗುಣ ಸಂಧಿಯನ್ನು ಹೇಳುವ ಸೂತ್ರ ಹಿರಿಮನೆಯಲ್ಲಿರುವುದು ನಮಗೆ ನೆನಪಾಗಿಬಿಡುತ್ತದೆ. ಅಕಾರ ಆಕಾರಗಳ ಮುಂದೆ ಬಾಕಿ ಯಾವುದೇ ಸ್ವರ ಬಂದರೂ ಏ ಮತ್ತು ಓ ವರ್ಣಗಳು ಯೋಗ್ಯತೆಯನುಸಾರ ಬರುತ್ತವೆ ಎಂಬುದು ತಾನೆ ಆ ಸೂತ್ರ! ಹಾ, ಇಲ್ಲಿದೆಯಲ್ಲ, ಬಾಲಕಾ ಇಹ ಅನ್ನುವಲ್ಲಿ ಆ ಕಾರದ ಮುಂದೆ ಇಕಾರ ಇದೆ, ಹಂಗಾಗಿ ಏಕಾರ ಬರಲಿ ಎಂಬುದು ಸಂಶಯ. ಹಾಗಾಗೋದಿಲ್ಲ, (ಹಾಗಾಗಿದ್ದಿದ್ದರೆ ಅದು ಲೋಕದ ವ್ಯವಸ್ಥೆಗೆ ವಿರುದ್ಧವಾಗುತ್ತಿತ್ತು. ವ್ಯಾಕರಣದಿಂದ ಭಾಷೆಯಲ್ಲ, ಭಾಷೆಗಾಗಿ ವ್ಯಾಕರಣ ತಾನೆ!)  ಮೊದಲೇ ಹೇಳಿದೆನಲ್ಲ, ಹಿರಿಮನೆಯವರಿಗೆ ಕಿರಿಮನೆಯವರು ಮಾಡಿದ್ಯಾವುದೂ ಕಾಣುವುದಿಲ್ಲ, ಜನ ಇರುವುದೂ ಗೊತ್ತಾಗುವುದಿಲ್ಲ ಎಂದು, ಹಾಗೆಯೇ ಇಲ್ಲಿ ಕಿರಿಮನೆಯವರು ಮಾಡಿದ ಕೆಲಸಗಳಾದ ಯಕಾರಾದೇಶ, ಲೋಪ- ಇದ್ಯಾವುದೂ ಹಿರಿಮನೆಯ ಗುಣಸಂಧಿಗೆ ಕಾಣುವುದಿಲ್ಲ. ಕಾಣುವುದಿಲ್ಲ ಅಂದರೆ ಅದರ ಪಾಲಿಗೆ ಅಲ್ಲಿನ ಶಬ್ದರೂಪ ’ಬಾಲಕಾಸ್’ ಎಂದೇ ಇದೆ. ಹಾಗಿದ್ದಾಗ ಗುಣಸಂಧಿಯಾಗುತ್ತದಲ್ಲ ಎಂಬ ಪ್ರಸಂಗವೇ ಏಳದು.

ಹೀಗೆ ಈ ಉದಾಹರಣೆಯಲ್ಲಿ ಗುಣಸಂಧಿಯಾಗದಿರುವುದೇ ಬೇಕಾದ್ದು. ಅದನ್ನೇ ಹಿರಿಮನೆ ಕಿರಿಮನೆ ವ್ಯವಸ್ಥೆಯಲ್ಲಿ ನಿರ್ವಹಿಸಲಾಗಿದೆ. ಇದು ಒಂದು ಉದಾಹರಣೆ ಮಾತ್ರ, ಇದರೊಂದಿಗೆ ಇನ್ನೂ ಹಲವು ಆಯಾಮಗಳನ್ನೊಳಗೊಂಡ ಸಮಸ್ಯೆಗಳು ಬಂದಾಗೆಲ್ಲ ಪೂರ್ತಿ ಅಷ್ಟಾಧ್ಯಾಯಿಯೆಂಬುದು ಸ್ವಯಂ ಒಂದು ತಂತ್ರಾಂಶದಂತೆ ಕಾರ್ಯ ನಿರ್ವಹಿಸುತ್ತದೆ!
ಇದಲ್ಲದೆ ಎರಡೂ ಮನೆಯ ಪ್ರತಿಯೊಬ್ಬ ಸದಸ್ಯನಿಗೂ ನಿರ್ದಿಷ್ಟ ಕಾರ್ಯಭಾರ ಇದ್ದಂತೆಯೇ ನಿರ್ದಿಷ್ಟ ವಿಳಾಸವೂ ಇದೆ. ಯಾವ ಅಧ್ಯಾಯದ ಯಾವ ಪಾದದ ಎಷ್ಟನೆಯ ಸೂತ್ರ ಎಂಬುದು unique ಆದ ವಿಳಾಸ.


ಎರಡು ಮನೆಗಳ ಚಿತ್ರ ಇಷ್ಟಾದಬಳಿಕ, ಇನ್ನುಮೇಲೆ ಕಾರ್ಯಕಾಲ ಮತ್ತು ಯಥೋದ್ದೇಶ ಪಕ್ಷಗಳ ವಿಚಾರಕ್ಕೆ ದಾರಿಯಾಯ್ತು. ಅದೇನಪ್ಪ ಅಂದ್ರೆ-

(ಮುಂದುವರಿಯುವುದು.....)

Tuesday, January 27, 2015

ಸದ್ದಿರದ ಕಣಿವೆ.


ಮೊನ್ನೆ ರವಿವಾರ ಜನೇವರಿಯ ೧೮ಕ್ಕೆ, ಕೇರಳದ Silent Valley ರಾಷ್ಟ್ರೀಯ ಉದ್ಯಾನಕ್ಕೆ ಹೋಗಿದ್ದೆ. ನಮ್ಮದೊಂದು ಬಳಗವಿದೆ, ’ಪ್ರಕೃತಿ ಬಳಗ’ ಎಂದು. ನಾವು ಕೆಲವರು ಸಮಾನಮನಸ್ಕ ಅಧ್ಯಾಪಕರು ಮತ್ತು ಆಸಕ್ತ ವಿದ್ಯಾರ್ಥಿಗಳಿರುವ ಬಳಗ ಅದು. ವಿರಾಮಕಾಲದಲ್ಲಿ ಪ್ರಕೃತಿಯ ಸೆರಗು ಹಿಡಿದು ಅಲೆದಾಡುವುದು ಇದರ ಹವ್ಯಾಸ. ಹಾಗೆ ಮೊನ್ನೆ ಆಯೋಜನೆಯಾದ್ದು ನಮ್ಮಿಂದ ೧೨೫ ಕಿ. ಮೀ ದೂರದಲ್ಲಿರುವ ಕೇರಳದ ಸದ್ದಿರದ ಕಣಿವೆ.

ನಮ್ಮ ವಾಹನ ಬೆಟ್ಟದ ಬಾಯಲ್ಲಿ ನಿಂತಾಗ ಬೆಳಗಿನ ೯ ಗಂಟೆ. ಅಲ್ಲೆಲ್ಲ ಇನ್ನೂ ಚಳಿಯಿತ್ತು, ಸೈಲೆಂಟ್ ವ್ಯಾಲಿಯ ಅರಣ್ಯ ಇಲಾಖೆಯ ಮಾಹಿತಿಕೇಂದ್ರಕ್ಕೆ ನಾವು ಬರುವ ಸೂಚನೆ ಮೊದಲೇ ಇತ್ತು. ಈ ಕಾಡಿಗೆ ಕಾಲಿಡುವುದಕ್ಕೆ ಇದೊಂದು ನಿಯಮವಿದೆ, ಮೊದಲೇ ಹೆಸರು ನೋಂದಾಯಿಸಬೇಕು. ಅದಿರದೆ ಪ್ರವೇಶವಿಲ್ಲ. 

ಕಾಡಿನ ಬಾಗಿಲಿಗೆ ಬಂದ ಬಳಿಕ ನಿಮ್ ನಿಮ್ಮ  ವಾಹನ ಬಡಿಗಿಡಬೇಕೆಂಬುದು ತಾಕೀತು. ಕಾಡಿನ ಅಂತರಂಗಕ್ಕೆ ಒಯ್ಯುವುದಕ್ಕೆ ಇಲಾಖೆಯದೇ ವಾಹನಗಳಿವೆ, ಖಾಸಗಿ ವಾಹನಗಳಿಗೆ ಒಳಬರುವಿಲ್ಲ. ಸರಿ, ಅವರಂದಿದ್ದಕ್ಕೆಲ್ಲ ಹೂಂ ಎಂದು ಗೋಣಾಡಿಸಿ, ಇಲಾಖೆಯ ಬಸ್ಸಲ್ಲಿ ಕೂತಾಯ್ತು. ನಮ್ಮೊಡನೆ ಒಬ್ಬ ದಾರಿತೋರುಗನೂ ಬಂದ. ಮುಂದಿನ ೨೫ ಕಿ. ಮೀ ಪೂರ್ತಿ ಗಾಢ ಬೆಟ್ಟ ಮತ್ತು ಕಡಿದಾದ ರಸ್ತೆ. ಅಲ್ಲಿನ ಓಡಾಟಕ್ಕೆ ಅದೇ ಚಾಲಕರೇ ಇದ್ದರೆ ಸರಿಯೆನ್ನಿಸುವಂತಿದೆ ರಸ್ತೆ. 

ಅದೊಂದು ನಿಸರ್ಗರಮಣೀಯವಾದ ಕಾಡಿನ ಮೌನ ತಪಸ್ಸಿನ ಕಣಿವೆ. ಕಾಡಿನ ನೀರವತೆಯನ್ನು ಕಲಕದಂತೆ ಮನವಿ, ಅಣತಿ ಎಲ್ಲವನ್ನೂ ದಾರಿತೋರುಗನೇ ಮಾಡಿದ. ಆ ನೀರವದಲ್ಲಿ ಅವ ಕಥೆ ಶುರುವಿಟ್ಟುಕೊಂಡ....

"ಅಪಾರ ಹಸಿರು ರಾಶಿ, ಎಂದಿಗೂ ಎಲೆಯುದುರಿಸಿ ಬೋಳಾಗದ ಕಾಡು, ಮನುಷ್ಯನನ್ನು ಒಳಗೆ ಬಿಟ್ಟುಕೊಂಡಿರದ ಕತ್ತಲೆ ಕಾನು, ಸೂರ್ಯಕಿರಣಗಳಿಗೂ ಹಸಿರುಗುಡಿಯೊಳಗೆ ಪ್ರವೇಶವಿಲ್ಲ... ಅಂಥಾ ಪರಮ ಗಂಭೀರ ಕಾಡಿನಲ್ಲಿ ಎರಡು ಪರ್ವತರಾಶಿಗಳು ಭೂಮಿಗಿಳಿಯುವ ಕಣಿವೆಯಲ್ಲೊಂದು ನದಿ. ಬಂಡೆಗಳನ್ನೇ ಕೊರೆದು ದಾರಿ ಮಾಡಿಕೊಂಡಿದೆಯೆನ್ನುವಂಥಾ ನದಿ ಅದು. ಆ ಕಾಡಿನ ನೆರಳಿನಲ್ಲಿ, ಆ ನದಿಯ ತಟಾಕದಲ್ಲಿ ಭಾರತದ ಅಪರೂಪದ ಕಾಡುಪ್ರಾಣಿಗಳಿವೆ.

ಹೀಗಿರುವಾಗ ಮನುಷ್ಯನೆಂಬ ದುರಂತ ಅವತಾರಕ್ಕೆ ಆ ಕಾಡು ದುರಾಸೆ ತಂಪಾಗಿಸುವ ಕಲ್ಪವೃಕ್ಷದಂತೆ ಕಂಡಿತು. ನದಿಯ ಹರಿವಿಗೆ ಹೆಚ್ಚಿನ ಖರ್ಚಿಲ್ಲದೆ ಅಣೆ ಕಟ್ಟೆ ಕಟ್ಟುವ, ಆ ಮೂಲಕ ಜಲವಿದ್ಯುತ್ ಉತ್ಪಾದಿಸುವ ಯೋಜನೆಯೊಂದು ಸಿದ್ಧವಾಯ್ತು. ಶಕ್ತಿಯ ದಾಹದ ಮುಂದೆ ಆ ಹಸಿರು ಹೊನ್ನು, ಅಲ್ಲಿನ ಜೀವರಾಶಿ, ಬುಡಕಟ್ಟು ಜನ, ಅಷ್ಟೆಲ್ಲ ಭೂಮಿ... ಹೀಗೆ ನಾಶವಾಗಲಿರುವ ಯಾವುದೂ ಮುಖ್ಯವಾಗಲಿಲ್ಲ. ಯೋಜನೆಯ ದಾಹಕ್ಕೆ ತೀವ್ರತೆಯೂ ಸಾಕಷ್ಟಿತ್ತು, ಇಂದಿರಾ ಸರಕಾರ ಎಪ್ಪತ್ತರ ದಶಕದಲ್ಲಿ ತರಾತುರಿಯಿಂದ ಯೋಜನೆಗೆ ಅಸ್ತು ಎಂದಿತ್ತು. ನೀಲನಕ್ಷೆ, ರಸ್ತೆ, ಉಳಿದ ಪರಿಕಲ್ಪನೆಗಳು.. ಎಲ್ಲವೂ ಸಿದ್ಧವಾದವು. ಪೂರ್ತಿ ಕಾಡು ಮನುಷ್ಯನ ಶಕ್ತಿದಾಹಕ್ಕೆ ಬಲಿಯಾಗಲು ಸಿದ್ಧವಾಯ್ತು. ಅಲ್ಲಿನ ಕೆಲವು ಮರಗಳ ಎದುರು ನಿಂತರೆ ನಾವೆಷ್ಟು ಚಿಕ್ಕವರೆಂಬುದು ಅರಿವಾಗುತ್ತದೆ. ೨೦೦-೩೦೦ ವರ್ಷದ ಮರಗಳಿರುವ ಕಾಡಿಗೆ ಮಾನವನೆಂಬ ಹುಲು(ಳು) ಜೀವಿ ಬಂದಳಿಕದಂತೆ ಅಮರಿದ್ದ ಸಂದರ್ಭ ಅದು.
ಭಾರತದ ಕೆಲವೇ ಬೆಟ್ಟಗಳಲ್ಲಿ ಬೆಳೆಯುವ ಅತಿ ಎತ್ತರದ ಮರಗಳು ಇಲ್ಲಿ ಬೆಳೆಯುತ್ತವೆ. ನೀಲಗಿರಿ ಲಂಗೂರ್ ಇಲ್ಲಿಯ ಪ್ರಮುಖ ಆಕರ್ಷಣೆಯ ಜೀವಿ. ಅದು ಬಿಟ್ಟರೆ ಎಲ್ಲೆಂದರಲ್ಲಿ ಸುಳಿದಾಡುವ ಆನೆ, ಅಲ್ಲೊಂದು ಇಲ್ಲೊಂದು ಚಿರತೆ... ಹೀಗೆ ಸಮೃದ್ಧ ಪ್ರಾಣಿ ಸಂಕುಲವಿದೆ. ಇಂದಿಗೂ ಕಾಡಿನೊಳಕ್ಕೆ ಒಯ್ಯುವ ಕಚ್ಚಾ ರಸ್ತೆಯ ತುಂಬ ಆನೆ ಲದ್ದಿ ಹೇರಳವಾಗಿ ಬಿದ್ದಿರುತ್ತದೆ.

ಸರಕಾರದ ಕೈಗಳು ಕಾಡಿಗೆ ನುಗ್ಗುತ್ತಿದ್ದಂತೆ ಬಹುಶಃ ಕಾಡಿನ ಪ್ರತಿಯೊಂದು ಜೀವವೂ ಮರುಗತೊಡಗಿತೇನೋ. ಜನಗಳು ಜಾಗೃತವಾದರು. ಆ ಜನಗಳೇನೂ ಅಲ್ಲಿ ವಾಸಿಸುವವರಲ್ಲ, ಆ ಬೆಟ್ಟ ಮುಳುಗಿದರೆ ಮನೆ ಹೋಗುವ ಸಂಕಟವೂ ಅವರಿಗಿಲ್ಲ.ಆದರೆ ಕಾಡು ಪ್ರೀತಿಸುವವರಿಗೆ ಗೊತ್ತು ಅದರ ನಾಶ ಎಂಥಾ ಬಗೆಯ ನೋವು ತರುತ್ತದೆ ಎಂಬುದು. ಅತಿ ಸಾಮಾನ್ಯ ಜನ ಹೋರಾಟಕ್ಕಿಳಿದರು, ಜಲಯೋಜನೆಯನ್ನೂ ಸರಕಾರದ ಉಪಕ್ರಮವನ್ನೂ ದಿಟ್ಟವಾಗಿ ವಿರೋಧಿಸಿದರು. ಒತ್ತಡಕ್ಕೆ ಸರಕಾರ ಮಣಿಯಲೇ ಬೇಕಾಯ್ತು, ಅಂತೂ ೧೯೮೫ ರಲ್ಲಿ ಸರಕಾರ ತನ್ನ ನಿಲುಮೆಯಿಂದ ಹಿಂಸರಿಯಿತು. ಅದೊಂದು ರಾಷ್ಟ್ರೀಯ ಉದ್ಯಾನವಾಗಿ ಉಳಿದಿದೆ ಇಂದು. ಅದರ ಉಳಿಕೆಗೆ ಜೀವ ತೇಯ್ದ ಎಲ್ಲ ಚೇತನಗಳಿಗೂ ನಮನ ಸಲ್ಲಿಸಿ ಆ ಹಸಿರಿನ ತಾಣದಲಿ ಮನಸು ಧ್ಯಾನಸ್ಥವಾಯ್ತು.
ಕಣಿವೆಯ ಹಾದಿ.

ಭಾರತದ ಗ್ರಾಮಗಳು, ಇಲ್ಲಿನ ಜನ, ಇಲ್ಲಿನ ಚರಿತ್ರೆ, ಕಡೆಗೆ ಇಲ್ಲಿನ ಕಾಡುಗಳು ಕೂಡ ಹೇಳುವುದಕ್ಕೆ ತಮ್ಮದೇ ಆದ ರಾಮಾಯಣದ್ದೋ ಮಹಭಾರತದ್ದೋ ಕಥೆಗಳನ್ನು ಉಳಿಸಿಕೊಂಡಿವೆ. ಅವು ಮೂಲಭಾರರತದಲ್ಲಿ ರಾಮಾಯಣದಲ್ಲಿ ಇರಲೇಬೇಕೆಂದಿಲ್ಲ, ತಮ್ಮ ತಮ್ಮ ಗ್ರಹಿಕೆಯೊಂದಿಗೆ ಪ್ರತಿಯೊಂದು ಸ್ಥಳವನ್ನೂ ಆ ಎರಡು ಮಹಾಕಾವ್ಯಗಳೊಡನೆ ಹೊಂದಿಸುವಲ್ಲಿ ನಮ್ಮವರಿಗೇನೋ ಖುಷಿಯಿದೆ. ಈ ವಿಷಯದಲ್ಲಿ ನಾವೆಷ್ಟು ಸಹಜವಾಗಿ ಮುಕ್ತವಾಗಿದ್ದೇವೆಂದರೆ, ಇಲ್ಯಾರೂ ಯಾರನ್ನೂ ಪ್ರಶ್ನಿಸುವುದಿಲ್ಲ "ಮೂಲ ಕಥೆಯಲ್ಲಿ ಹೀಗೆಲ್ಲ ಉಲ್ಲೇಖ ಇದೆಯೆ?" ಎಂದು. ಈ ಖುಶಿಯಿದೆಯಲ್ಲ, ಇದು ಸಂಸ್ಕೃತಿಯೊಂದರ ಮುಕ್ತತೆಯ ಕಾರಣಕ್ಕೆ ಬರುವಂಥದು.
ಸರಿ, ಈ ಕಾಡು ತನ್ನೊಡಲಲ್ಲಿ ಮಹಾಭಾರತದ ಕಥೆಯೊಂದನ್ನು ಉಳಿಸಿಕೊಂಡಿದೆ. ಮೂಲದಲ್ಲಿ ಅದು ಸೈರಂಧ್ರಿ ವನವಂತೆ. ಸೈರಂಧ್ರಿ ಎನ್ನುವುದು ಅಜ್ಞಾತವಾಸದ ಕಾಲದಲ್ಲಿ ದ್ರೌಪದಿಯ ಹೆಸರು. ಆಕೆಗೂ ಇಲ್ಲಿನ ಕಣಿವೆಯಲ್ಲಿ  ಹರಿಯುವ ನದಿಗೂ ಸಂಬಂಧವಿದೆಯೆಂಬುದು ಸಾರಾಂಶ.
ಅಂಥಾ ಕಣಿವೆಗೆ ತಲುಪುವುದಕ್ಕೆ ಕಚ್ಚಾ ರಸ್ತೆಯಿದೆ, ಏಕಮುಖಸಂಚಾರಕ್ಕೆ ಅನುವಾಗಿರುವ ಹಾದಿಯದು. ಬಹುಶಃ ಅಣೆಕಟ್ಟೆಯ ಜನ ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ರಸ್ತೆ ಇರಬಹುದು.
ಬರಬರುತ್ತ ಗಾಢವಾಗುವ ಕಾಡು ಸೈಲೆಂಟ್ ವ್ಯಾಲಿ ಎಂದು ಯಾಕೆ ಕರೆಸಿಕೊಳ್ಳುತ್ತದೆಯೆಂಬುದು ಮುಂದೆ ಸಾಗಿದಂತೆ ಅನುಭವಕ್ಕೆ ಬರುತ್ತದೆ. ಮಾತಿರಬಾರದು, ಕಾಡಿನ ಧ್ಯಾನಕ್ಕೆ ಒಳಗು ತೆರೆಯಬೇಕು ಎನ್ನುವ ಭಾವವೊಂದು ಅಪ್ರಯತ್ನವಾಗಿ ಮನಸನ್ನಾವರಿಸುತ್ತದೆ.

ಇಪ್ಪತ್ತೆರಡು ಕಿಲೋಮೀಟರು ಸಾಗಿದ ಬಳಿಕ ನದಿ, ಕಣಿವೆ ಪರ್ವತಾವಳಿಗಳು ಆಕಾಶವೆಂಬ ತೆರೆಯಲ್ಲಿ ಮೂಡಿದಂತೆ ಅನಾವರಣಗೊಳ್ಳುತ್ತವೆ. ಮನಸ್ಸು ಇನ್ನಷ್ಟು ಧ್ಯಾನಸ್ಥವಾಗಬಹುದಾದ ತಾಣ ಅದು. ಮುಮ್ದಿನದು ಚಾರಣದ ಭಾಗ; ಒಂದೈದು ಕಿಲೋಮೀಟರು. ನದಿಯ ತಣ್ಣೀರು, ಅಚಲ ಬಂಡೆಗಳ ಮಹಾರಾಶಿ, ಬೆಟ್ಟವೆಂಬ ದೇವತೆಯ ಸಜೀವ ದೇಗುಲ. ಚಿಂತನೆಗಳು ತಿಳಿಯಾಗುತ್ತ ಸಾಗಿ ಕೊನೆಗೊಮ್ಮೆ ಅವುಗಳಿಲ್ಲವಾಗುವ ಆನಂದಕ್ಕೆ ಇದೊಂದು ನೆಲೆಯಂತಿದೆ.
ಊಟಿ ಪರ್ವತದ ಇನ್ನೊಂದು ಮಗ್ಗುಲಂತೆ ಇದು.
ಶಿಖರದ ನೆತ್ತಿಯಲ್ಲಿ ವೀಕ್ಷಣಾ ಗೋಪುರವಿದೆ. ಅಲ್ಲಿಂದ ಸಿಗುವ ದೃಶ್ಯ ವೈಭವ ಅಮೋಘವಾದ್ದು. ಅಲ್ಲಿ ನಿಂತರೆ ಪರ್ವತಗಳೆಲ್ಲ ಅಂಗೈಲಿ ಬಂಧಿಯಾದಂತೆ, ಅಂಗಾಲಿಗೆ ನಿಲುಕಿದಂತೆ ಭಾಸ. ಕಾಲವೆಂಬುದು ಆ ಎತ್ತರದಲ್ಲಿ ಸಾವಧಾನಿಸಿ ಚಲಿಸುತ್ತಿರುವುದೋ ಎಂಬ ಭ್ರಮೆ.

ನೀಲಗಿರಿ ಲಂಗೂರ್ ಕಪಿಯನ್ನು ಹಿಡಿದು ತಿಂದ ಚಿರತೆ ವಿಸರ್ಜಿಸಿದ ಮಲವನ್ನು ಹೇರಳವಾಗಿ ಕಾಣಿಸಿದ ನಮ್ಮ ಗೈಡ್. ಅಲ್ಲಿನವರೆಲ್ಲ ಕಾಡಿನ ಪರಿಸರಕ್ಕೆ ಒಗ್ಗಿದ್ದಾರೆ, ಗಾಢ ಕಾಡಿನ ಜೀವಿಗಳ ಜೊತೆ ಸಹವಾಸ ಸಾಧಿಸಿದ್ದಾರೆ. ನಮ್ಮನ್ನಾತ ಎಷ್ಟು ಎಚ್ಚರಿಸಿದನೆಂದರೆ, ಗುಂಪು ಬಿಟ್ಟು ಕೊಂಚವೂ ಆಚೆ ಹೋಗಲು ಬಿಡುತ್ತಿರಲಿಲ್ಲ. ಆನೆಗಳು ಎಲ್ಲಿಂದಾದರೂ ಪ್ರತ್ಯಕ್ಷವಾಗಬಹುದು, ಒಂಟಿಯಾಗಿರುವುದು ಅಪಾಯ ಎಂಬುದು ಅವನ ಎಚ್ಚರಿಕೆ. ಎಲೆಯುದುರಿಸದ ಕಾಡಿನ ಪಕ್ಕಾ ಗುರುತು ಕೆಂಪು ಚಿಗುರಿನ ಮರಗಳು. ಜೀವದ ಬೆಂಕಿ ಬಿದ್ದಂತೆ ಚಿಗುರನ್ನೇ ಮುಡಿದು ನಿಲ್ಲುವ ಮರಗಳಿವೆ.  ಬಿಡಿ ಕಾಡಿನ ಸೌಂದರ್ಯವನ್ನು ಎಷ್ಟೆಂದರೂ ಪದಗಳಲ್ಲಿ ಹಿಡಿಯುವುದು ಆಗದ ಮಾತು.
ಕೆಂಚಿಗುರಿನ ನೋಟ. 
ಸೈಲೆಂಟ್ ವ್ಯಾಲಿಗೆ ಭೇಟಿ ಕೊಡುವ ಮನಸಿದ್ದರೆ ಮೊದಲು ತತ್ಸಂಬಂಧಿ ಜಾಲತಾಣಕ್ಕೆ ಭೇಟಿ ಕೊಡಿ. ಕೊಂಡಿ ಇಲ್ಲಿದೆ. ಒಮ್ಮೆ ಭೇಟಿಯಿತ್ತರೆ ಉಳಿದ ವಿವರಣೆಯನ್ನು- ಅಲ್ಲ- ಅನುಭವವನ್ನು ಕಾಡು ಕರುಣಿಸುತ್ತದೆ. ಕಾಡನ್ನು ತುಂಬ ಉನ್ನತವಾದ ದೃಷ್ಟಿಯಿಂದ ಕಾಣುವುದು ಮತ್ತು ಅದೇ ಬಗೆಯಲ್ಲಿ ನೋಡುವಂತೆ ಕೇಳಿಕೊಳ್ಳುವುದು ನನಗೆ ಇಲ್ಲಿ ಅತ್ಯಂತ ಮನನೀಯವೆನಿಸಿದ ಸಂಗತಿ. ಕಾಡೆಂಬುದು ಒಂತರಾತ್ಮನ ಕಾಣಬಹುದಾದ ನೆಲೆ, ಸದ್ದು ಮಾಡಬೇಡಿ, ಇದು ಸತ್ಯದ ಅರಿವಿನ ತಾಣ ಎಂಬ ಫಲಕಗಳು ಎದೆ ತುಂಬ ಖುಶಿ ತುಂಬಿದವು. ಒಮ್ಮೆ ಈ ನೆಲೆ ಬಂದು ಶಾಂತಿಯನ್ನನುಭವಿಸುವ ಮನಸು ಮಾಡಿ ನೀವೂ. ಮರಳಿ ಮನೆಗೆ ಬರುವಾಗ ಕಾಡೆಂಬ ದೇವರನ್ನು ಸಂದರ್ಶಿಸಿದ ಧನ್ಯತೆ ನಮ್ಮಲ್ಲಿತ್ತು.