Sunday, January 31, 2016

ಹಣತೆ.

ಇಂದಿರುಳು ಎನಗಿರಲಿ
ಒಂದು ಮೃದು ಹೊಂಬೆಳಕು
ಚೆನ್ನಿರುಳು; ಹೊಸಬಗೆಯ ಕಕ್ಕುಲಾತಿ. 
ಹಳೆಯದೊಂದಿರಲಿಂದು
ಸಹಜ ಬೆಚ್ಚನೆ ಭಾವ
ಇರಲಿ ಈ ಇರುಳಿನಲಿ ನನ್ನನಾವರಿಸಿ.

ತಿಳಿನೆರಳ ಕಪ್ಪಿನಲಿ
ನನ್ನಿರವನಡಗಿಸಲು
ಅನುವಾಗಲೊಂದೊಮ್ಮೆ ಹಣತೆ ದೀಪ;
ಸುಡುಗಣ್ಣ ಸಾಂತ್ವನಿಸೆ
ತಂಪು ಕಿರಣಗಳಿರಲಿ
ನಾ ಮೆಚ್ಚದುರಿ ಕಳೆವ ದೀಪ ರೂಪ.

ಅಡಗಬೇಕಿಂದಿರುಳು;
ತಮವದಾವರಿಸುವುದು
ಭಯಗೊಳಿಪುದೆನ್ನನೀ ಘೋರ ಬೇನೆ.
ಅಳಿಯದೇ ಉಳಿವೊಂದು
ದೀಪಕುಡಿಯಿರಲೆನಗೆ
ಇರುಳುಕಳೆದೆನ್ನ ತಾ ಸಮ್ಮೋಹಗೊಳಿಸೆ.

ಇರುಳು ನಾನೇಕಾಂಗಿ
ಅವಧರಿಸು ಈ ನನ್ನ
ತನುದುಂಬಿದಾವಿರಹ ಖಾಲಿತನವ.
ನಾ ಮೌನಿ, ನಾನೊಂಟಿ
ಈ ಬೆಳಕ ಹೊನಲೊಡನೆ,
ಬೆಳಗುವೆನು ಹಣತೆಯನು ಕಳೆಯೆ ನೋವ.


Candle.

Tonight, I need a softer light,
a softer night, a different
kind of care.. I need
an old fashioned thing,
simple comfort to wrap me in;
candle light so I may hide,
in softer shadows, I need the
soothe, the gentle flame,
for eyes that burn, eyes
that prickle.. though I refuse them.
Tonight I need to hide,
the dark encroaches, and
I fear this dreadful ache..
I need the steady flicker, the slow
burn wick, to mesmerise,
to keep the night away..
hold back this hollow feeling,
this bereft.. heavy in my bones.
Tonight I am alone so
I light a candle, to assuage, 
this awful ache..
I am quiet, alone.. 
with
a flame that gutters...!!!




ಅವತರಣ- ನವೀನ ಗಂಗೋತ್ರಿ.

Friday, January 29, 2016

ಭಾಗ್ಯದ ವಲಯೇಶ.....

ಭಾಗ್ಯದ! ವಲಯೇಶ, ಯಾಹಿ ಮಜ್ಜನೀನಿಲಯಮ್
ತೇಹಂ ಕಥಂ ಜಾನೇ ಜನಿಕಾಯಾಃ ಸಂವಸಥಮ್
ಜಾನಾಮಿ ತನ್ಮಾರ್ಗಮಪಿ ನೈವ ಹೇ ಬಾಲೇ
ಸಂದಿಶ ಮೇ ಯಾಹಿ ತವ ದೇಶಮ್ 

ಸವ್ಯೇ ರಂಭಾವಾಟೀ, ಸವ್ಯೇತರೇ ಪನಸಮ್
ತನ್ಮಧ್ಯಮಾರ್ಗೇ ಸರ ತತ್ರ ವಲಯೇಶ
ತತ್ರೈವ ಮನ್ಮಾತೃಸಂವಸನಮ್
ಸುಮಂಗಲೇ ವತ್ಸೇ ಯಾಹಿ ಸಂದಿಶ ಪಂಥಾನಮ್

ಉನ್ನತೋನನ್ನತ ವೇಶ್ಮ, ಕಾಂಸ್ಯನಿರ್ಮಿತ ದ್ವಾರಮ್
ಸಂವದಮಾನಂ ಶುಕಯುಗಲಮೀಕ್ಷಸ್ವ
ತತ್ರೈವ ಮನ್ಮಾತೃಸಂವಸನಮ್
ಸುಮಂಗಲೇ ವತ್ಸೇ ಯಾಹಿ ಸಂದಿಶ ಪಂಥಾನಮ್


ಇಕ್ಷುಪೇಷಣಹೇತೋರ್ವಿಚಲಂತಿ ಯಂತ್ರಾಣಿ
ಕೇಕಿನಃ ಸಾರಂಗಾ ನಂದಂತಿ ವಲಯೇಶ
ತತ್ರೈವ ಮನ್ಮಾತೃಸಂವಸನಮ್
ಸುಮಂಗಲೇ ವತ್ಸೇ ಯಾಹಿ ಸಂದಿಶ ಪಂಥಾನಮ್

ಪುಣ್ಯಪರ್ಣೋಟಜೇ ಮೌಕ್ತಿಕ ಮಂಟಪೇ
ದೀವ್ಯತಿ ಸಾಕ್ಷೈರ್ವಲಯೇಶ ವೀಕ್ಷಸ್ವ
ಸಾ ಹಿ ಮಮಾಂಬಾ ಜಾನೀಹಿ..
ಸುಮಂಗಲೇ ವತ್ಸೇ ಯಾಹಿ ಸಂದಿಶ ಪಂಥಾನಮ್


ಗಾಢಲೋಹಿತಹರಿತವಲಯಾಯ ಸ್ಪೃಹಯಂತಿ
ಪ್ರಾಣಾಃ ಮನ್ಮಾತುರಿತಿ ವಿದ್ಧಿ ವಲಯೇಶ
ತತ್ರೈಕವಾರಂ ಚಲ ಕೃಪಯಾ...

ಭಾಗ್ಯದ! ವಲಯೇಶ, ಯಾಹಿ ಮಜ್ಜನೀನಿಲಯಮ್


ಭಾಗ್ಯದ ಬಳೆಗಾರ ಹೋಗಿ ಬಾ ನನ್ತವರಿಗೆ
ನಿನ್ನ ತವರೂರ ನಾನೇನು ಬಲ್ಲೇನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
ತೋರಿಸು ಬಾರೇ ತವರೂರ


ಬಾಳೆ ಬಲಕ್ಕೆ ಬಿಡೊ, ಸೀಬೇ ಎಡಕ್ಕೆ ಬಿಡೊ
ನಟ್ಟ ನಡುವೇಲಿ ನೀ ಹೋಗೋ ಬಳೆಗಾರ
ಅಲ್ಲಿಹುದೇ ನನ್ನ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರುಬಾರೆ ತವರೂರ


ಅಂಚಿನ ಮನೆ ಕಾಣೊ ಕಂಚಿನ ಕದ ಕಾಣೊ
ಮಿಂಚಾಡೊವೆರಡು ಗಿಣಿ ಕಾಣೊ ಬಳೆಗಾರ
ಅಲ್ಲಿಹುದೇ ನನ್ನ ತವರೂರು
ಮುತ್ತೈಡೆ ಎಲೆ ಹೆಣ್ಣೆ ತೋರು ಬಾರೆ ತವರೂರ


ಆಲೆ ಆಡುತಾವೆ ಗಾಣ ತಿರುಗುತಾವೆ
ನವಿಲು ಸಾರಂಗ ನಲಿತಾವೆ ಬಳೆಗಾರ
ಅದೇ ಕಾಣೋ ನನ್ನ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ


ಮುತ್ತೈದೆ ಹಟ್ಟೀಲಿ ಮುತ್ತೀನ ಚಪ್ಪರ ಹಾಕಿ
ನಟ್ಟ ನಡುವೇಲಿ ಪಗಡೆಯ ಆಡುತಾಳೆ
ಅವಳೆ ಕಾಣೊ ಎನ್ನ ಹಡೆದವ್ವಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ
 ಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ
ಎನ್ನ ಹಡೆದವ್ಗೆ ಬಲು ಆಸೆ ಬಳೆಗಾರ
ಕೊಂಡೋಗೋ ಎನ್ನ ತವರಿಗೆ
ಭಾಗ್ಯದ ಬಳೆಗಾರ ಹೋಗಿ ಬಾ ನನ್ತವರಿಗೆ
ಜಾನಪದ ಮೂಲ.
ಅನುವಾದ: ನವೀನ ಗಂಗೋತ್ರಿ




Friday, January 22, 2016

ಕ್ರಿಯಾಶೂನ್ಯ ಚಿಂತನೆಗಳ ಜಾತ್ರೆ ಮರುಳಿನಲ್ಲಿ...


ಅವರ ವಾದ ಹೇಗಿರುತ್ತದೆಯೆಂದರೆ-  ಅದನ್ನು ನೀವು ಸಾರಾಸಗಟಾಗಿ ತಳ್ಳಿಹಾಕಲಾರಿರಿ, ಅದರಲ್ಲಿನ ಎಲ್ಲವೂ ಸುಳ್ಳು ಎನ್ನಲಾರಿರಿ, ಒಪ್ಪುವ ಮಾತು ದೂರವುಳಿಯಿತು ಬಿಡಿ. ಅದರ ತಳದಲ್ಲೆಲ್ಲೋ ವಿಷದ ವಾಸನೆ ಬರುತ್ತಿದೆಯೆಂಬುದು ನಿಮಗೆ ಗೊತ್ತಾಗುತ್ತದೆ. ಇಲಿ ಪಾಷಾಣವನ್ನು ಮಸಾಲೆ ಬನ್ ಜೊತೆ ಇಡುತ್ತಾರಲ್ಲ, ಹಾಗೆಯೇ ಅದು.

ಹೌದು, ನಾನು ವಿತಂಡವಾದ ಮತ್ತು ವಿತಂಡವಾದಿಗಳ ಬಗ್ಗೆ ಮಾತಾಡುತ್ತಿದ್ದೇನೆ. ತನ್ನದಾದ ಮತ ಯಾವುದು ಅನ್ನುವುದನ್ನು ಸಾಂಗವಾಗಿ ಪ್ರತಿಪಾದನೆ ಮಾಡದ, ಮತ್ತು ಸಂಗತಿಯೊಂದನ್ನು ಖಂಡನೆ ಮಾತ್ರವೇ ಮಾಡಿ ಎದ್ದು ಹೋಗುವ ವಾದದ ಶೈಲಿಯೇ ವಿತಂಡಾ. ವಾದವೆಂದರೆ ಅದಕ್ಕೊಂದು ಚಂದವಿರಬೇಕು, ಸುಮ್ಮನೆ ಇನ್ನೊಬ್ಬನ ಮಾತನ್ನು ಖಂಡನೆ ಮಾಡುವುದು ಮತ್ತು ತನ್ನದನ್ನು ಮಂಡನೆ ಮಾಡದೆ ಎದ್ದು ನಡೆಯುವುದು ವಾದ ಅಂತಲೇ ಅನ್ನಿಸಿಕೊಳ್ಳುವುದಿಲ್ಲ. ನೀವು ಸರಿಯಾಗಿ ಊಹಿಸುತ್ತಿದ್ದೀರಾದರೆ ಇತ್ತೀಚೆಗೆ ಫೇಸ್ ಬುಕ್ಕಲ್ಲಿ ಚಲಾವಣೆ ಪಡೆದುಕೊಂಡ ಅಲಾವಿಕಾ ಅನ್ನುವವರು ಬರೆದ ಸಂಸ್ಕೃತದ ಕುರಿತಾದ ಲೇಖನ ಮತ್ತು ಡಾ. ಬರಗೂರರು ಭೈರಪ್ಪನವರ ಸಂಸ್ಕೃತದ ಕುರಿತಾದ ಮಾತುಗಳಿಗೆ ಬರೆದ ಪ್ರತಿಕ್ರಿಯಾತ್ಮಕ ಲೇಖನಗಳನ್ನು ಎದುರಿಗಿಟ್ಟುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ. ಇದಿಷ್ಟೇ ಅಲ್ಲದೆ ಹಿಂದೂ ಮದುವೆಗಳಲ್ಲಿ ಬಲಗಾಲಿಟ್ಟು ಒಳಗೆ ಬರುವುದನ್ನು ರಾಯರೊಬ್ಬರು ಮೇಲು ಕೀಳಿನ ಸಂಕೇತವೆಂದು ಕರೆದದ್ದು, ರಾಮ ಕಬ್ಬಿಣದ ಅದಿರು ತರಲು ಲಂಕೆಗೆ ಹೋದ ಅಂತ ಠರಾವು ಹೊರಡಿಸಿದ್ದು, ಸಾಕ್ಷಾತ್ ಭಗವಾನನೇ ಎದ್ದು ಆಸ್ತಿಕ ಮತ್ತು ನಾಸ್ತಿಕಪದಗಳಿಗೆ ಅರ್ಥ ಹೇಳಿ ಪ್ರಶಸ್ತಿ ಪಡೆದದ್ದು, ರೋಹಿತ್ ವೆಮುಲನ ಸ್ವಯಂಹತ್ಯೆಗೆ ಕರುಣಾಪೂರ್ಣವಾಗಿ ಕರಗುತ್ತಿರುವ ಕಾಮ್ರೇಡುಗಳು ಅವನ ದಲಿತತ್ತ್ವವನ್ನು ಮುಂದುಮಾಡಿಕೊಂಡು ಧೂಳೆಬ್ಬಿಸಿದ್ದು- ಇದೆಲ್ಲವೂ ಒಂದೇ ಐಡಿಯಾಲಜಿಯ ಬೇರೆ ಬೇರೆ ಸಂಭೂತಿಗಳು. ಒಟ್ಟಿನಲ್ಲಿ ಭಾರತದ ಐಡೆಂಟಿಟಿ ಯಾವುದೇ ಇದ್ದರೂ ಅದಕ್ಕವರ ವಿರೋಧ ಇದೆ.

ಇವರ ಐಡಿಯಾಲಜಿಗೆ ಸರಿಯಾದ ಗ್ರೌಂಡ್ ಲೆವಲ್ ಸಂಘಟನೆ ಅನ್ನುವುದೇ ಇಲ್ಲ. ಅಂದರೆ, ತಮ್ಮ ಐಡಿಯಾಲಜಿಯನ್ನು ಕಾರ್ಯರೂಪಕ್ಕೆ ತರುವ ಯಾವ ಸ್ವನಿರ್ಮಿತ ಸಾಧನವೂ ಅವರ ಬಳಿ ಇಲ್ಲ. ಸಮಯ ಬಂದಾಗ ಹೆಸರು ಹಾಕಿಕೊಂಡು ಪ್ಲಕಾರ್ಡ್ ಹಿಡಿದು ಆಯಕಟ್ಟಿನ ಜಾಗಗಳಲ್ಲಿ ಗಲಾಟೆ ಮಾಡುವುದು ಅವುಗಳ ಕಾರ್ಯ ಶೈಲಿ. ಹೆಗಲುಕೊಟ್ಟು  ತಮ್ಮ ಐಡಿಯಾಲಜಿಯನ್ನು ನಿರ್ಮಾಣ ಕಾರ್ಯವಾಗಿ ಬದಲಾಯಿಸುವ ಶಕ್ತಿ ಸಂಚಯ ಅವರಲ್ಲಿ ಇಲ್ಲ. ಚಿಂತನೆಗಳು, ಚಿಂತನೆಗಳು ಮತ್ತು ಚಿಂತನೆಗಳು ಮಾತ್ರವೇ ಅವರ ಬಂಡವಾಳ. ಅವಾದರೂ ತಮ್ಮ ಕಾಲ ಮೇಲೆ ತಾವು ನಿಲ್ಲುವ ಚಿಂತನೆಗಳೋ? ಅಲ್ಲ, ಪಕ್ಕಾ ಪರಾವಲಂಬಿ ಚಿಂತನೆಗಳು. ಯಾಕವನ್ನು ನಾನು ಪರಾವಲಂಬಿ ಅನ್ನುತ್ತಿದ್ದೇನೆ ಅಂದರೆ- ಮುಖ್ಯವಾಹಿನಿಯ ಮೂಲ ಚಿಂತನೆಯನ್ನು ಹಳಿಯುತ್ತ,ಅದನ್ನು ಕೀಳೈಸುತ್ತ, ಅದರ ದೋಷಗಳನ್ನು (of course ದೋಷಗಳಿದ್ದೇ ಇರುತ್ತವೆ) ಆಡಿಕೊಳ್ಳುತ್ತ, ಅದರ ಉತ್ಪನ್ನಗಳನ್ನು ದ್ವೇಷಿಸುತ್ತ ಈ ಜನಗಳ ಚಿಂತನೆಗಳು ಬದುಕುಳಿಯುತ್ತವೆ. ಉದಾಹರಣೆಗೆ - ರಾಷ್ಟ್ರವಾದದ ವಿರೋಧ. ರಾಷ್ಟ್ರವಾದವನ್ನು ವಿರೋಧಿಸಲಿಕ್ಕಾಗಿ ಇವರ ಉದಾಹರಣೆಯಾಗಿ ಜರ್ಮನಿಯ ಹಿಟ್ಲರನನ್ನು ಘೋರಿಯಿಂದೆಬ್ಬಿಸಿ ತರಲಾಗುತ್ತದೆ. ರಾಷ್ಟ್ರವಾದವೆಂದರೆ ಏಕಸಂಸ್ಕೃತಿ ವಾದವೆಂದೂ, ಅದರ ಹೇರಿಕೆಯಾಗುತ್ತಿದೆಯೆಂದೂ, ಬಹುಸಂಸ್ಕೃತಿ ನಾಶವಾಗುವುದೆಂದೂ ಎದೆ ಬಡಿದುಕೊಂಡು ಭೀಕರವಾಗಿ ಅಳುತ್ತಾರೆ. (ಹಾಗಂತ ಇವರೇ ಕೆಂಪು ಕಮ್ಯುನಿಸಮ್ಮನ್ನು ಆಲಂಗಿಸುತ್ತಾರೆ; ಅದನ್ನಪ್ಪಿಕೊಂಡ ಚೀನಾದ ಬಹುಸಂಸ್ಕೃತಿ ಏನಾಯ್ತೆಂದು ಗೊತ್ತಿದ್ದರೂ.) ಅತಿರಾಷ್ಟ್ರವಾದದ ಗಂಭೀರ ಅಪಸವ್ಯಗಳನ್ನೇ ಸಾಮಾನ್ಯ ರಾಷ್ಟ್ರ ಚಿಂತನೆಗೂ ಅನ್ವಯಿಸಿ ಅದಕ್ಕೆ ಕೆಲವು ಹಿರಿಯರ ಮಾತುಗಳನ್ನು ಕೋಟ್ ಮಾಡುತ್ತಾರೆ. (ಉದಾ- ರವೀಂದ್ರನಾಥ್ ಟಾಗೋರರು ರಾಷ್ಟ್ರವಾದ ಅತಿಯಾದರೆ ಏನಾಗುತ್ತದೆಂದು ಬರೆದಿದ್ದನ್ನೇ ತಮ್ಮ ವಾದಕ್ಕೆ ಬಳಸುವುದು). ಅಮೃತವೇ ಆದರೂ ಸರಿ, ಅತಿಯಾದರೆ ವಿಷವೇ ಅನ್ನುವುದು ಈ ದೇಶದಲ್ಲಿ ಸಾಮಾನ್ಯಜನಕ್ಕೆಲ್ಲ ಗೊತ್ತಿರುತ್ತದೆ. ಹಾಗಿದ್ದಾಗ, ರಾಷ್ಟ್ರವಾದವಾಗಲೀ, ಏಕತೆಯ ಚಿಂತನೆಯಾಗಲೀ ಅತಿಯಾದರೆ ಉಸಿರು ಕಟ್ಟುತ್ತದೆಂಬುದು ನಮ್ಮ ಜನಕ್ಕೆ ಗೊತ್ತಿರಲಾರದೆ? ಗೊತ್ತಿರುತ್ತದೆ, ಸಾಮಾನ್ಯರಿಗೆ ತಿಳಿದಿರುತ್ತದೆ; ಆದರೆ ಬುದ್ಧಿಹಲ್ಲು ಮೂಡಿಸಿಕೊಂಡವರಿಗಲ್ಲ. (ರಾಷ್ಟ್ರವಾದದ ಅತಿರೇಕವನ್ನು ವಿರೋಧಿಸುವ ಇವರೇ ಬುದ್ಧನನ್ನು ತಮ್ಮ ಆದರ್ಶ ಪುರುಷನನ್ನಾಗಿ ಬಗೆದು, ಬುದ್ಧನ ಉಪದೇಶದ ಅಹಿಂಸೆಯನ್ನು ಜಗತ್ತಿಗೆಲ್ಲ ಏಕಕಾಲಕ್ಕೆ ಅನ್ವಯಿಸಿ ಅತಿರೇಕಕ್ಕ ಒಯ್ದುಬಿಡುತ್ತಾರೆ.)

ಅಂದರೆ ಇವರ ಚಿಂತನೆಗಳು ಬದುಕುಳಿಯಲಿಕ್ಕೆ ಮುಖ್ಯವಾಹಿನಿಯ, ಬಹುಜನರೊಪ್ಪುವ, ಸಾಮಾನ್ಯ ಮನಸಿಗೆ ಸಮಾಧಾನಕರವಾಗಿರುವ ಚಿಂತನೆಗಳ ಅಗತ್ಯ ಇದ್ದೇ ಇದೆ. ಅದಿಲ್ಲದೆ ಇವರ ಚಿಂತನೆಗಳಿಗೆ ಅಸ್ತಿತ್ವವೇ ಇಲ್ಲ. ಸಂಸ್ಕೃತವನ್ನು ಬ್ರಾಹ್ಮಣರು ಬಧ್ರವಾಗಿ ಬಂಧಿಸಿಟ್ಟರು, ಶೂದ್ರರು ಕೇಳಿಸಿಕೊಂಡರೂ ಕಿವಿಯಲ್ಲಿ ಕಾದಸೀಸ ಸುರಿದರು ಅಂತೆಲ್ಲ ಇವರ ವಾದಗಳಿರುತ್ತವೆ. ಸ್ವಾತಂತ್ರ್ಯ ಬಂದಾಗಿನಿಂದ ಈ ದೇಶದಲ್ಲಿ ಸಂಸ್ಕೃತ ಒಂದೇ ಯಾಕೆ, ವೇದಗಳ ಕಲಿಕೆಯೂ ಎಲ್ಲರಿಗೆ ಮುಕ್ತವಾಗಿದೆ. ಅದಾಗಿ ಎಪ್ಪತ್ತು ವರ್ಷ ಕಳೆದರೂ ಅವರ ಅಳಲು ಮಾತ್ರ ಬದಲಾಗಿಲ್ಲ. ಅಂದರೆ, ಸಂದರ್ಭವೊಂದು ಬದಲಾದ ಮೇಲೂ ಆ ಕುರಿತಾದ ಹಳಹಳಿಕೆಗಳು ಇವರಲ್ಲಿ ಇಂಗಲಾರವು. ತಮ್ಮ ಗೋಳಾಟ ಇಲ್ಲದಂತಾಗುವ ಸಂದರ್ಭವೊಂದು ದೇಶದಲ್ಲಿ ಸೃಷ್ಟಿಯಾಗಲಿಕ್ಕೇ ಬಿಡದವರು ಇವರು.

ಅಯ್ತು, ಬ್ರಾಹ್ಮಣರು ಸಂಸ್ಕೃತ ಮತ್ತು ವೇದವನ್ನು ತಮ್ಮ ಜೋಳಿಗೆಯಿಂದ ಹೊರಬರಗೊಡಲಿಲ್ಲ ಅಂದವರು, ಅದಕ್ಕಾಗಿ ಗೋಳಿಟ್ಟವರು, ಅದರ ಬದಲಾವಣೆಗಾಗಿ ಕ್ರಿಯಾತ್ಮಕವಾಗಿ ಏನು ಮಾಡಿದರು? ಸಂಸ್ಕೃತ ಶಾಲೆ ತೆರೆದರೆ? ವೇದ ಮಂದಿರ ತೆರೆದರೆ? ಇಲ್ಲ. ಆದರೆ, ಬ್ರಾಹ್ಮಣ ಸಂಘಟನೆ ಎಂದು ಇವರೇ ಕರೆದು ಜರೆಯುವ ಆರೆಸ್ಸೆಸ್ ತಾನು ನಡೆಸುವ ಹಲವಾರು ಗುರುಕುಲಗಳಲ್ಲಿ ಶೂದ್ರರಿಗೂ ವೇದ ಸಂಸ್ಕೃತವನ್ನು ಹೇಳಿಕೊಡುತ್ತಿದೆ. ಕಲಿಯುತ್ತಿರುವ ಮಕ್ಕಳೂ ಇದ್ದಾರೆ. ಪಕ್ಕಾ ಬುಡಕಟ್ಟು ಜನಾಂಗದ ಸಿದ್ಧಿ ಸಮುದಾಯದ ಹುಡುಗ ಕೂಡ ವೇದ ಕಲಿಯುತ್ತಿದ್ದಾನೆ. ಇದೆಲ್ಲ ಕ್ರಿಯಾತ್ಮಕತೆಯಿಂದಲ್ಲದೆ ಬರಿಯ ಚಿಂತನೆಯಿಂದ ಸಾಧ್ಯವಾದ ಸಂಗತಿಯಲ್ಲ. ಚಿಂತನೆ ಅಂತ ಗಗನಕ್ಕೆ ಮುಖಮಾಡಿ ಕೂತವರು ಇವತ್ತಿಗೂ ಅದನ್ನಷ್ಟೇ ಮಾಡುತ್ತಿದ್ದಾರೆ.
ಹೀಗಾಗಿ, ಅಂದರೆ ಕ್ರಿಯಾತ್ಮಕತೆ ಇಲ್ಲದಿರುವುದರಿಂದಾಗಿ, ಅವಕ್ಕೆ ಸಜ್ಜಿತ ಸಂಘಟನೆಯ ಅಗತ್ಯವೇ ಇರಲಾರದು. ಇದ್ದರೂ ಅದರ ಕೆಲಸ ಹೃದಯ ವಿದ್ರಾವಕ ಕವಿಗೋಷ್ಠಿ ಮತ್ತು ಉನ್ಮತ್ತ ಬರವಣಿಗೆಗಳ ಚೌಕಟ್ಟಿನಿಂದ ಹೊರಬಂದು ದೇಶದ ಮಟ್ಟದಲ್ಲಿ ಏನನ್ನಾದರೂ ನಿರ್ಮಿಸುವ, ನಷ್ಟ ತುಂಬುವ ಕೆಲಸಕ್ಕಂತೂ ಒದಗಲಾರದು. ಹಾಗಿದ್ದೂ ಈ ಚಿಂತನೆ ಜೀವಂತವಾಗಿರುವುದು ಕಾಮ್ರೇಡುಗಳ ಕಂಠದ ಬಲದ ಮೇಲೆ. ಒಟ್ಟಿನಲ್ಲಿ ಚೀರಾಡಬೇಕು, ದೊಡ್ಡ ಸುದ್ದಿಯಾಗಬೇಕು, ಜನ ಮಾತಾಡಿಕೊಳ್ಳಬೇಕು. ಅದಷ್ಟಾಯಿತೆಂದರೆ ಅವರ ಕೆಲಸ ಮುಗಿದಂತೆ.

ಅವರು ಟೌನ್ ಹಾಲಿನ ಎದುರೋ, ಇನ್ನೆಲ್ಲೋ ಸರ್ಕಲ್ಲಿನಲ್ಲೋ ಘೋಷಣೆ ಕೂಗಿ, ಮೊಂಬತ್ತಿ ಹಚ್ಚಿ, ಎದ್ದು ಹೋದಬಳಿಕ ಕಟ್ಟುವ ಕಾರ್ಯಕ್ಕೆ ಅವರ್ಯಾರೂ ಒದಗಲಾರರು. ಅದನ್ನು ಇನ್ಯಾರೋ ಮಾಡಬೇಕು. ಅರ್ಧ ದಿನದ ಶೋ ಮತ್ತು ಸಂಜೆ ಹೊತ್ತಿನ ಪಾನಗೋಷ್ಠಿಗಳಲ್ಲೇ ಇಷ್ಟುಕಾಲ ಬದುಕಿದ ಬರೀ ಚಿಂತನೆಗೆ ಆಲಂಬನವೆಂದರೆ ಕಟ್ಟುವ ಮನಸ್ಥಿತಿಯ ಶ್ರಮ ಮತ್ತು ಕಾರ್ಯಗಳೇ ಅಲ್ಲದೆ ಬೇರೆ ಅಲ್ಲ. ವಿಭಾಜಕ ಮನಸ್ಥಿತಿಯನ್ನು ಮಾತ್ರ ಇಟ್ಟಕೊಂಡು ನಿರ್ಮಿತಿಯ ಚಿಂತನೆಯಿಲ್ಲದೆ ಹಿಸೆಯಾದ ಪಾಕಿಸ್ತಾನದ ಅವಸ್ಥೆಯಾದರೂ ಇವರ್ಯಾರಿಗೆ ನಿರ್ಮಾಣಾತ್ಮಕ ಚಿಂತನೆಯ ಅಗತ್ಯವನ್ನು ಅರಿವಾಗಿಸುತ್ತಿಲ್ಲ.
ಒಂದನ್ನು ವಿರೋಧಿಸುತ್ತೇವೆಂದರೆ ಅದಕ್ಕೆ ಪರ್ಯಾಯವಾದ ಗಟ್ಟಿ ಸಂಗತಿಯೊಂದು ನಮ್ಮಲ್ಲಿರಬೇಕಾಗುತ್ತದೆ; ಅದು ಸಕಾರಾತ್ಮಕತೆಯ ಮತ್ತು ನಿರ್ಮಾಣಾತ್ಮಕತೆಯ ಲಕ್ಷಣ. ನಿರ್ಮಿತಿಯ ಬಯಕೆ ಇಲ್ಲದ ಯಾವುದಕ್ಕೇ ಆದರೂ ನಿರಂತರ ಶ್ರದ್ಧೆ ಮತ್ತು ತಪಸ್ಸಿನ ಅಗತ್ಯ ಇಲ್ಲ; ಅದಕ್ಕೆ ನಡುಮಧ್ಯಾಹ್ನದಲ್ಲಿ ಬೀದಿಗಿಳಿಯುವ ಉಮೇದಿಯೊಂದೇ ಸಾಕಾಗುತ್ತದೆ. ನಿರ್ಮಾಣ ಬುದ್ಧಿಯ ತೊಂಭತ್ತು ವರ್ಷದ ಸಂಘಟನೆ ಆರೆಸ್ಸೆಸ್ ಇವತ್ತಿಗೂ ದಿನಾ ಬೆಳಗ್ಗೆ ಮತ್ತು ಸಂಜೆ ಶಾಖೆಯಲ್ಲಿ ತಪಸ್ಸು ಮಾಡುತ್ತದೆ, ಶಕ್ತಿ ಸಂಚಯಿಸಿಕೊಳ್ಳುತ್ತದೆ; ಯಾಕೆಂದರೆ ಅದಕ್ಕೆ ಮಾಡುವುದಕ್ಕೆ ಕೆಲಸವಿದೆ.  

ಕಟ್ಟುವ ಬಗ್ಗೆ ಮಾತಾಡಿರೆಂದರೆ ’ಮುರಿಯದೆ ಕಟ್ಟುವುದೆಂತು?’ ಎಂದು ಪ್ರಶ್ನೆ ಮಾಡುತ್ತಾರೆ. ಸಮಗ್ರವಾಗಿ ಕೆಡವಿಯೇ ಕಟ್ಟಬೇಕಾದ ಯಾವುದೂ ಪ್ರಕೃತಿಯಲ್ಲಿ ಇಲ್ಲ, ಅದು ಮಾನವ ಸಮಾಜದ ವ್ಯವಸ್ಥೆಗೂ ಅನ್ವಯಿಸುತ್ತದೆ. ಯಾವುದು ಸರಿಯಿಲ್ಲವೋ ಅದನ್ನಷ್ಟೇ ನೇರ್ಪುಗೊಳಿಸಿಕೊಳ್ಳುತ್ತ ಪ್ರಕೃತಿ ತನ್ನ ಬದುಕನ್ನು ಬದುಕುತ್ತದೆ. ಸಮಾಜವೂ ಹಾಗೆಯೇ; ಅದು ಸ್ವಯಂ ಗತಿಶೀಲವಾದ್ದು. ಪ್ರತಿಭಟನೆ, ಕ್ರಾಂತಿ ಮಾತ್ರವೇ ಅದನ್ನು ಮುನ್ನಡೆಸಬೇಕಿಲ್ಲ. ಕ್ರಾಂತಿಯ, ಸುಧಾರಣೆಯ, ವ್ಯವಸ್ಥೆಯ ಬದಲಾವಣೆಯ  ಮಾತಾಡುವ ಇವರೆಲ್ಲ ಇಷ್ಟು ವರ್ಷಗಳಲ್ಲಿ ಸಮಾಜದ ಶಾಂತಿಯ ಮತ್ತು ನಿಷ್ಕಾಮ ಬುದ್ಧಿಯ ಯಾವ ಸಂಘಟನೆಯನ್ನು ಬೆಳೆಸಿದ್ದಾರೆ? ದೇಶದ ಯಾವುದೇ ಭಾಗದಲ್ಲಿ ಅನಾಹುತವಾದರೆ ನೆರವಿಗೆ ಧಾವಿಸುವ ಯಾವ ’ಬುದ್ಧಿಜೀವಿ ಸಂಘಟನೆ’ ’ಚಿಂತಕರ ಚಾವಡಿ’  ಈ ದೇಶದಲ್ಲಿವೆ? ಅಂದರೆ,  ಚಿಂತನೆ ಮತ್ತು ವಿರೋಧಗಳು ಮಾತ್ರವೇ ತಮ್ಮ ಕೆಲಸವೆಂದೂ ಅಂತಿಮ ಕರ್ತವ್ಯವೆಂದೂ ಅವು ಬಗೆದಿವೆ. ಪ್ರತಿಭಟನೆಯಿಂದ ಯಾವು ಮತ್ತು ಘೋಷಣೆಗಳಿಂದ ಕಾರ್ಯ ಸಿದ್ಧಿಸುತ್ತದೆಂದು ನಂಬುವುದು ಈ ಜನರ ಮೂಢ ನಂಬಿಕೆಯಷ್ಟೇ.   

ಇವರಲ್ಲೇ ಕೆಲವು ಜನ ಮಾಧ್ಯಮದ ಆಯಕಟ್ಟಿನ ಜಾಗದಲ್ಲಿ ಕುಳಿತು ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ವ್ಯಾಖ್ಯಾನಿಸಬಲ್ಲವರಾಗಿರುತ್ತಾರೆ. ಅದೆಷ್ಟು ನಯವಾದ ಸುಳ್ಳುಗಳನ್ನಿವರು ಆಡಬಲ್ಲರೆಂದರೆ, ಯಾವುದೇ ಐಡಿಯಾಲಜಿಯ ಹುಳ ಇನ್ನೂ ಹೊಕ್ಕಿರದ ಶುದ್ಧ ಮನಸಿನ ಒಬ್ಬಾತ ಅವರನ್ನೋದಿಕೊಂಡರೆ ಯಾವುದೋ ಒಂದು ವರ್ಗವನ್ನು ಶರಂಪರ ದ್ವೇಷಿಸತೊಡಗುತ್ತಾನೆ. ಇಲ್ಲದ ಒಂದನ್ನು ತಮ್ಮ ಮಾತಿನ ಭರದಲ್ಲೇ ಇವರು ಕಟ್ಟಿನಿಲ್ಲಿಸಬಲ್ಲರು (ಈ ವಿಷಯದಲ್ಲಿ ನಿರ್ಮಿತಿಯ ಶಕ್ತಿ ಅವಕ್ಕಿದೆ). ಸಧ್ಯದ ಸಂದರ್ಭದಲ್ಲಿ ಈ ನಿರ್ಮಾಣಶಕ್ತಿಗೊಂದು ಒಳ್ಳೆಯ ಉದಾಹರಣೆಯೆಂದರೆ ಅಸಹಿಷ್ಣುತೆಯ ಹೊಗೆ ಹಬ್ಬಿಸಿದ್ದು. ದೇಶವೆಲ್ಲ ಉಸಿರುಗಟ್ಟಿಹೋಗುತ್ತಿದೆ ಅಂತ ಕೆಲವು ಬುದ್ಧಿಶೂರರು ಕೂಗಿದ್ದೇ ತಡ, ಅದಕ್ಕೆ ಹೆಗಲೆಣೆಯಾಗಿ ಈ ದೇಶದ ಮಾಧ್ಯಮದ ಒಂದು ಭಾಗ ಆ ಹೊಗೆಯ ಗಾಢತೆಯನ್ನು ಹೆಚ್ಚಿಸಲು ತೊಡಗಿತು. ದೇಶದ ಜನಸಂಖ್ಯೆಗೆ ಹೋಲಿಸಿದರೆ ಧೂಳಿನಕಣಕ್ಕೂ ಸಮವಾಗದ ಇವರ ಸಂಖ್ಯೆ ಇಡೀ ದೇಶದಲ್ಲಿ ಗದ್ದಲ ಮಾಡಬಹುದು ಅಂದರೆ ಕಾಮ್ರೇಡುಗಳ ಚೀರಾಡುವ ಶಕ್ತಿಯನ್ನೊಪ್ಪಲೇ ಬೇಕು. ಒಂದೈವತ್ತು ಜನ ಅಜ್ಞಾತ ಸಾಹಿತಿಗಳು ಮತ್ತು ಕಲಾವಿದರು ಅಸಹಿಷ್ಣುತೆಯನ್ನು ವಿರೋಧಿಸಿ ’ಅವಾರ್ಡ್ ವಾಪಸಿ’ ಮಾಡಿದ್ದೇನು, ದಿನಾ ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದೇನು, ಅಮೀರ್ ಖಾನ್ ದೇಶ ಬಿಡುತ್ತೇನೆ ಅಂದಿದ್ದೇನು- ಆಹ್, ದೇಶದ ಜನಕ್ಕೆ ಅಸಹಿಷ್ಣುತೆ ಅನ್ನುವ ಪದ ಪರಿಚಯವಾಗಿ ಅದರ ಉಚ್ಚಾರಣೆ ಕಲಿಯುತ್ತಿರುವ ಹೊತ್ತಿನಲ್ಲೇ ಕಾಮ್ರೇಡುಗಳ ಕಂಠ ಸುಮ್ಮನಾಗಿಬಿಟ್ಟಿತ್ತು. ಬಿಹಾರ್ ಚುನಾವಣೆ ಮುಗಿದಿತ್ತಲ್ಲ ಹೇಗೂ! ಇದೀಗ ಒಬ್ಬೊಬ್ಬರಾಗಿ ವಾಪಾಸ್ ಮಾಡಿದ್ದನ್ನ ವಾಪಾಸ್ ಪಡೆದುಕೊಳ್ಳುತ್ತಿದ್ದಾರೆ. ನಯನ್ ತಾರ ಸೆಹಗಲ್ ಮರಳಿ ಪಡೆದುಕೊಳ್ಳೋದಕ್ಕೆ ಒಪ್ಪಿದರಂತೆ!

ಇಷ್ಟೆಲ್ಲ ಮಾಡಿದ್ದು, ದೇಶದ ತುಂಬಾ ಧೂಳೆಬ್ಬಿಸಿದ್ದು, ನೂರಕ್ಕಿಂತ ಕಡಿಮೆ ಸಂಖ್ಯೆಯ ಬುದ್ಧಿಜೀವಿಗಳೆಂದರೆ ನಂಬಬೇಕಷ್ಟೆ. ಅಂದರೆ, ಕೆಲವೇ ಜನ ಗಲಾಟೆಮಾಡಿಯೂ ದೇಶದ ಚಿಂತನೆಯನ್ನು ಚಂಚಲ ಮಾಡಬಹುದೆನ್ನುವುದಕ್ಕೆ ಇದು ಉದಾಹರಣೆ. ಯಾಕೂಬ್ ಮೆಮೊನ್ ತಾನು ಮಾಡಿದ ಪಾಪಕ್ಕೆ ಗಲ್ಲಿಗೇರಿದಾಗ, ಅವನ ಪರವಾಗಿ ಮಾನವೀಯತೆ ಇವರೊಳಗೆ ಎದ್ದುನಿಲ್ಲುತ್ತದೆ. ದೇಶದ ನಿರ್ದಿಷ್ಟ ಸಮುದಾಯದ ಯಾರಿಗೇನೇ ಆದರೂ ಇವರ ಪ್ರೊಫೈಲುಗಳಲ್ಲಿ ಶೋಕ ಮಡುಗಟ್ಟುತ್ತದೆ. ಇವರೆಂಥಾ ಸಂವೇದನಾಶೀಲರೆಂದರೆ ದೂರದೇಶದ ಹಿಂಸೆಯೂ ಇವರ ಎದೆ ಕಲಕುತ್ತದೆ. ಆದರೆ ದುರಂತವೆಂದರೆ ನಮ್ಮ ಮನೆಯಾಚೆಯ ರೈತನ ಸಾವು ಲೆಕ್ಕಕ್ಕಿಲ್ಲದ್ದಾಗುತ್ತದೆ. ಅದೆಷ್ಟು ನಿರ್ಲಜ್ಜವಾಗಿ ಸೆಲೆಕ್ಟಿವ್ ಮಾನವೀಯತೆ ಮತ್ತು ಜೀವಪರ ಸಂವೇದನೆ ಇವರದಾಗುತ್ತದೆ ಅಂದರೆ, ದೇಶದೊಳಗಿರುವ ಶತ್ರುಗಳೆಂದರೆ ಇವರೇ ಇರಬೇಕು ಅನ್ನಿಸುವಷ್ಟು.  

ಇವರು ಮಂಡಿಸುವ ವಾದಗಳೋ, ತಲೆ ಬುಡ ಇಲ್ಲದವು. ಕೆಲವು ಉದಾಹರಣೆಗಳು- ಸಾವು ದಲಿತನದಾಗಿದ್ದರೆ ಪ್ರತಿಕ್ರಿಯಿಸುವ ರೀತಿಗೂ, ದಲಿತನಲ್ಲದವನ ಸಾವಾಗಿದ್ದರೆ ಪ್ರತಿಕ್ರಿಯಿಸುವ ರೀತಿಗೂ ಅವರಿಗೆ ಮಾತ್ರವೇ ಅರ್ಥವಾಗಬಲ್ಲ ಡೆಮಾಕ್ರೆಟಿಕ್ ವ್ಯತ್ಯಾಸಗಳಿರುತ್ತವೆ. ಸಂಸ್ಕೃತಭಾಷೆಯು ಸಮಗ್ರವಾಗಿಲ್ಲವೆಂಬ ತಮ್ಮ ಮೂಗಿನ ನೇರದ ಅಭಿಪ್ರಾಯಕ್ಕೆ ತಕ್ಕಂತೆ ಫರ್ಮಾನ್ ಹೊರಡಿಸಿ ಆ ಬಳಿಕ ಅದು ಸ್ವಂತದ ಅಭಿಪ್ರಾಯ ಮತ್ತದು ಸಾರ್ವಜನಿಕವಲ್ಲ ಅಂದುಬಿಡಲಾಗುತ್ತದೆ. ಬರೆಯಲು ಮತ್ತೇನೂ ಸಿಗದಿದ್ದರೆ ನಮ್ಮಲ್ಲೇ ಭೈರಪ್ಪನವರಂಥಾ ಸಾಹಿತಿಗಳನ್ನೋ, ಅಥವ ವಿವೇಕಾನಂದರ ಮಾತುಗಳನ್ನೋ ತಮಗೆ ಬೇಕಾದಂತೆ ತಿರುಚಿ- ವ್ಯಾಖ್ಯಾನ ಬರೆಯಲಾಗುತ್ತದೆ. ಹೇಳ ಹೊರಟರೆ ಇನ್ನೂ ಸಾವಿರ ಇದೆ. ಒಟ್ಟರ್ಥ ಒಂದೇ, ಇವರ ಮನಸಿನ ಅಶಾಂತಿಯನ್ನೇ ಜಗತ್ತಿನ ತುಂಬ ಹಬ್ಬಿಸುವ ಜನ ಇವರು.

ತಮ್ಮ ಢೋಂಗಿ ಹೋರಾಟಗಳನ್ನು ಮತ್ತು ವಿರೋಧಕ್ಕಾಗಿ ವಿರೋಧಿಸುವ ಹುಸಿತನವನ್ನು ಬಿಟ್ಟು ಸಕಾರಾತ್ಮಕವಾದ ಮತ್ತು ತಾಳ್ಮೆಯಿರುವ ಸಂಘಟನೆಯೊಂದನ್ನು ಇವರು ಕಟ್ಟಬಲ್ಲವರಾದರೆ, ಆಗ ಸೈದ್ಧಾಂತಿಕ ಭಿನ್ನಾಪ್ರಾಯದ ಹೊರತಾಗಿಯೂ ಸಮಾಜ ಇವರನ್ನು ಒಪ್ಪಬಹುದು. ಅದಿಲ್ಲದಿದ್ದಲ್ಲಿ, ಪಿಶಾಚಿಗಳಂತೆಯೇ ಇವರ ಸಿದ್ಧಾಂತಗಳೂ ಸುತ್ತೆಲ್ಲ ಅಲೆಯುತ್ತ, ಆಗಾಗ ರಕ್ತ ಹರಿಸುತ್ತ, ಸ್ಮಶಾನದ ರುದ್ರತೆಯನ್ನು ದೇಶದಲ್ಲಿ ಪಸರಿಸುತ್ತ, ಜನಸಾಮಾನ್ಯರ ನೆಮ್ಮದಿ ಕೆಡಿಸುತ್ತ ವಿಘಟಕ ಬದುಕು ಬದುಕುವುದಷ್ಟೇ ಇವರ ಸಾಧನೆಯಾದೀತು.