Tuesday, August 11, 2015

ರಿಯಾಲಿಟಿ ಶೋ ಎಂಬ ವಿಕ್ಷಿಪ್ತ ಮನರಂಜನೆ! (ಭಾಗ ಒಂದು)


ರಿಯಾಲಿಟಿ ಶೋ ಎಂಬ ಇಪ್ಪತ್ತೊಂದನೇ ಶತಮಾನದ ಒಪ್ಪಿತ ವಿಕೃತಿಯ ಕುರಿತಾಗಿ ಸಾಕಷ್ಟು ಚರ್ಚೆಯಾಗಿದೆ. ಹಾಗಿದ್ದೂ ಅದನ್ನು ನಿಲ್ಲಿಸುವಲ್ಲಿಯಾಗಲೀ, ಅದರ ಸ್ವರೂಪವನ್ನು ಬದಲಿಸುವಲ್ಲಿಯಾಗಲೀ ಯಾರೂ ಸಮರ್ಥರಾಗಿಲ್ಲ. ಕಾರಣ ಒಂದೇ, ಅದರ ಹಿಂದೆ ಹಣದ ಅಮೋಘ ಪ್ರವಾಹವಿದೆಯೆನ್ನುವುದು. ರಿಯಾಲಿಟಿ ಶೋಗಳ ಒಳ ಮರ್ಮವನ್ನು ಅರಿತ ಬಳಿಕವೂ ಜನ ಅದನ್ನು ನಿಜವೆಂದೇ ತಿಳಿದು ಖುಶಿ(!!) ಪಡುವುದು ನಡೆದೇ ಇದೆ.


ಮೊನ್ನೆ ಕೆಲವು ದಿನಗಳ ಹಿಂದೆ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ’ನಿಜಾಯಿತಿ ತೋರ್ಕೆ’ (ರಿಯಾಲಿಟಿ ಶೋ) ಕಾರ್ಯಕ್ರಮದ  ಎದುರು ಕೂರುವ ಕರ್ಮ ನನ್ನದಾಗಿತ್ತು. ಅಂದವಾದ ಭಾಷೆಯಿಲ್ಲದ, ದೇಹ ಬೆಳೆಸಿದ ಕಾರಣಕ್ಕೇ ಟಿವಿಯೊಳಗೆ ಸೇರಿಕೊಂಡ, ಹೋ ಹಾ ಎಂದೆಲ್ಲ ಒದರಿಕೊಳ್ಳುವ ಘೇಂಡಾಮೃಗದಂಥಾ ನಿರೂಪನೊಬ್ಬ ನಿಜಾಯಿತಿ ತೋರ್ಕೆಯನ್ನು ನಿರ್ವಹಿಸುತ್ತಿದ್ದ. ನಾ ನೋಡುತ್ತಿದ್ದ ತೋರ್ಕೆಯ ವಿಷ್ಯ ಏನಪ್ಪಾಂದ್ರೆ- ಹಳ್ಳಿ ಹೈದ ಪ್ಯಾಟೆಗೆ ಬಂದ್ರೆ ಆಗುವ ಹಳವಂಡಗಳ ಕುರಿತಾದ್ದು.
ಹಳ್ಳಿ ಹುಡುಗ್ರು ಅಂತ ಬಿಂಬಿಸಲಿಕ್ಕೆ ಇಲ್ಲಿ ಉತ್ತರಕನ್ನಡದಿಂದ ಸಿದ್ಧಿ ಜನಾಂಗದ ಎರಡ್ಮೂರು ಹುಡುಗರನ್ನೂ, ಉತ್ತರಕರ್ನಾಟಕದ ಹಳ್ಳಿಯಿಂದ ಯಾರೋ ಒಂದಿಬ್ಬರನ್ನೂ ಹಿಡಿದು ತಂದು ಕ್ಯಾಮೆರ ಎದುರು ನಿಲ್ಲಿಸಿಕೊಂಡಿದ್ದರು. ಅವರಿಗೆಲ್ಲ ಬಲು ಜಾಣೆಯರಂತೆ ತೋರುವ (ಈ ಹೆಣ್ ಮಕ್ಕಳಿಗೆ ಬರಕೊಟ್ಟ ಸಂಭಾಷಣೆ ಆ ಪರಿಯಲ್ಲಿತ್ತು) ತಲಾ ಒಬ್ಬೊಬ್ಬಳು ಗೆಳತಿ, ಅದೂ ಬಿಳೀ ಬಣ್ಣದವರು. (ಕೆಲವರನ್ನು ಬಹಳೆ ಮುತುವರ್ಜಿಯಿಂದ ಬಿಳಿ ಮಾಡಿದಂತಿತ್ತು). ಆ ಹೆಣ್ ಹೈಕಳೆಲ್ಲ ಭಾಳಾ ಶಾಣ್ಯಾ ಜನ, ಮತ್ತು ಈ ಗಂಡ್ ಪೋರರು ಪಕ್ಕಾ ಪೆದ್ದು ಎನ್ನುವುದೇ ಆ ಕಾರ್ಯಕ್ರಮದ ಒಳ ತಿರುಳು. ಘೇಂಡಾಮೃಗವಂತೂ ಈ ಪೋರರನ್ನು ಇದ್ದಿದ್ದೂ ಹೀನೈಸುವ ಪ್ರಯತ್ನವನ್ನು ತನ್ನ ಭಾಷಾ ಪರಿಣತಿಯ ಮಿತಿಯಲ್ಲಿ ಮಾಡುತ್ತಲೇ ಇರುವವ.

ಇಂತಿರಲು, ನಿರೂಪಕನ ಬಾಯಲ್ಲಿ ಬರುವ ಕನ್ನಡವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾ ನಾನು ಕಾರ್ಯಕ್ರಮವನ್ನು ಭಲೇ ಆಸಕ್ತಿಯಿಂದ ನೋಡಲು ಶುರುವಿಟ್ಟೆ. ನಮ್ಮೂರಿನ ಮಕ್ಕಳು ಇದ್ದರಲ್ಲ ಎಂಬುದಷ್ಟೆ ನನ್ನ ಕುತೂಹಲವನ್ನು ಕಾಯ್ದಿರಿಸಿದ ಸಂಗತಿ. ಶುರುವಾಯ್ತು ನೋಡಿ, ಹಡೆ ಮಾಡುವ ವಿವಿಧ ಚೇಷ್ಟೆಗಳು. (ಹಡೆ ಮಾಡುವುದು ಅಂದರೇನು ಅಂತ ಪ್ರಶ್ನೆ ಇದ್ದರೆ ಆ ಕಾರ್ಯಕ್ರಮ ನೋಡಿ, ತಿಳಿದೀತು). ಬಿಳೀ ಹೆಣ್ ಮಕ್ಕಳು ತಮ್ಮ ಕರ್ಲ್ ಕರ್ಲಿ ಕೂದಲು ತಿರುವುತ್ತಾ, ನಿರ್ದೇಶಕ ಕೊಟ್ಟಷ್ಟೆ ಬಟ್ಟೆಯಲ್ಲಿ ಮೈ ತುಂಬಿಡುವ ಪ್ರಯತ್ನ ಮಾಡುತ್ತಾ ತಮ್ ತಮ್ಮ ಕರೀ ಹುಡುಗರನ್ನ (ಇನ್ನಷ್ಟು ಕಪ್ಪಾಗಿ ಬೇಕಂತಲೇ ಬಿಂಬಿಸಿದ್ದರಾ ಅಂತ ಡೌಟು)  ವೇದಿಕೆಯ ಮೇಲೆ ಕರೆತರುವ ಹೊತ್ತಿಗೆ ನಿರೂಪಕನ ಭೀಕರ ಹೂಂಕಾರ ದಯನೀಯ ಹಂತ ತಲುಪಿತ್ತು. ಆ ಹೆಣ್ ಹೈಕಳು ತಮಗೆ ವಹಿಸಿದ್ದ ಈ ಹುಡುಗರನ್ನು ಪಕ್ಕಾ ಶಾಲೆ ಮಕ್ಕಳಂತೆ ಗೇಣುದ್ದದ ನೀಲಿ ಚಡ್ಡಿ, ಟಿಪಿಕಲ್ ಯೂನಿಫಾರ್ಮಿನ ಗೆರೆ ಗೆರೆ ಅಂಗಿ, ಬೆನ್ನಿಗೊಂದು ಸುಲೇಖಾ ಪಾಟಿಚೀಲ ತೊಡಿಸಿ ಕರಕೊಂಡು ಬಂದಿದ್ದರು. ಶಾಲೆಗೆ ಮಕ್ಕಳನ್ನು ಕರೆತರುವ ಅಮ್ಮಂದಿರನ್ನೇನೂ ನೀವಿಲ್ಲ ಕಲ್ಪಿಸಬೇಕಾದ್ದಿಲ್ಲ, ಸಂಜೆ ಹೊತ್ತಿಗೆ ನಗರದ ಶಾಂತ ಓಣಿಗಳಲ್ಲಿ ತಮ್ ತಮ್ಮ ಸಾಕುನಾಯಿಯ ಜೊತೆಗೆ ಕಾಲಾಡಿಸಿ (ವಾಕಿಂಗು) ಬರಲು ಹೊರಡುವ ಟೀ ಶರ್ಟಿನ ಹೆಣ್ ಮಕ್ಕಳನ್ನೂ (ಅವರ ಪೆಟ್ ನಾಯಿಯನ್ನೂ) ಕಣ್ ಮುಂದೆ ತಂದ್ಕಳಿ ಸಾಕು.

ಅಷ್ಟಾಯ್ತಾ, ಇವಾಗ ಮುಂದಿಂದು ಏನಪಾಂದ್ರೆ ನಮ್ಮೂರ್ ಹುಡುಗ್ರು ಆ ಪ್ಯಾಟೆ ಕೂಸ್ಗಳು ಹೇಳಿಕೊಟ್ಟ ಇಂಗ್ಲೀಷ್ ಶ್ಲೋಕಗಳನ್ನು (ರೈಮ್ಸ್ ಅನ್ನಬೇಕಿತ್ತಾ? ಮರೆತೆ) ಆ ಘೇಂಡಾಮೃಗಕ್ಕೆ ಒಪ್ಪಿಸೋ ಟಾಸ್ಕು. ಒಬ್ಬ ಟ್ವಿಂಕಲ್ ಟ್ವಿಂಕಲ್ ಪೂರ್ತಿ ಹೇಳಕ್ಕಾಗದೆ ಪಿಂಕ್ ಪಿಂಕ್ ಅಂದ, ಇನ್ನೊಬ್ಬ ಅಂಥದ್ದೇ ಬಾಲ್ವಾಡಿ ಶ್ಲೋಕವೊಂದನ್ನ ಬಾಯ್ಪಾಠ ಹೇಳಲಾಗದೆ ಪೆದ್ದ್ ಪೆದ್ದಾಗಿ ಚಡ್ಡಿ ಹಿಂಜಿಕೊಳ್ಳುತ್ತ ನಿಂತ. ಅದಷ್ಟಾದ ಬಳಿಕ, ಬೇರ್ ಬೇರೆ ಪ್ರಾಣಿಗಳ ಚಿತ್ರವನ್ನು ಪಟದಲ್ಲಿ ತೋರಿಸಿ ಇಂಗ್ಲೀಷಲ್ಲಿ ಅವುಗಳ ಹೆಸರು ಹೇಳುವುದಕ್ಕೆ ನಿರೂಪಕ ಕೇಳುತ್ತಿದ್ದ. ಆ ಹಳ್ಳಿ ಯುವಕರು ಅದು ತಿಳಿಯದೆ ಮಂಗಾ ಆಗುವುದನ್ನು ನೋಡಿ ಅವರ ಬಿಳೀ ಗೆಳತಿಯರು ನಾಚಿ ನೀರಾಗುವುದೇ ಕ್ಯಾಮೆರಾಕ್ಕೆ ಆಹಾರ. ಇನ್ನೂ ಹಲವಾರು ಪ್ರಶ್ನೆಗಳನ್ನು ಕೇಳಿ ಅವರನ್ನು ’ಹಳ್ಳೀ ಪೆದ್ದೂಸ್’ ಎಂದು ಬಿಂಬಿಸುವ ನಿರೂಪಕ ತನ್ನನು ತಾನು ಹೀರೋ ಅಂತ ಬಿಂಬಿಸಿಕೊಳ್ಳಲು ಹೆಣಗಾಡುತ್ತಿದ್ದ. ಒಟ್ಟಿನಲ್ಲಿ ಅದೊಂದ್ ಮೂರ್ ನಾಲ್ಕು ಜನ ಹಳ್ಳೀ  ಜನರನ್ನಿಟ್ಟುಕೊಂಡು, ಅವರನ್ನು ಧಡ್ಡಾ ದಡ್ಡವಾಗಿ ಬಿಂಬಿಸುವ ಮತ್ತು ಅದನ್ನು ಮನರಂಜನೆಯ ಹೆಸರಿನಲ್ಲಿ ಮಾರಾಟ ಮಾಡುವ ವ್ಯವಸ್ಥಿತ ಕಾರ್ಯಕ್ರಮಕ್ಕೆ ನಿಜಾಯ್ತಿ ತೋರ್ಕೆಯ ಹೆಸರು.

ಸರಿ, ಇದೆಲ್ಲ ಇವತ್ತಿನ ಬೇಡಿಕೆ ಮತ್ತು ಪೂರೈಕೆಯ ಆಧಾರದಲ್ಲಿ ನಡೆಯುತ್ತಿರುವ ಧಂಧೆ ಅಂತ ಸುಮ್ಮನಿರೋಣ ಅಂದ್ರೆ, ಯಾಕೋ ಆ ಕಾರ್ಯಕ್ರಮ ನೋಡ್ತಾ ಇದ್ದಂತೆ ಇದೊಂದು ಸಕಾರಾತ್ಮಕ ಕಾರ್ಯಕ್ರಮ ಎಂದು ಅನ್ನಿಸಲೇ ಇಲ್ಲ. ಸಿದ್ಧಿ ಜನಾಂಗ ಎನ್ನುವುದು ಪೂರ್ಚುಗೀಸರ ಕಾಲದಲ್ಲಿ ಅವರ ಹಡಗುಗಳಲ್ಲಿ ಗುಲಾಮರಾಗಿ ಭಾರತಕ್ಕೆ ಬಂದಿಳಿದು ಕಾಡುಗಳಲ್ಲಿ ಸೇರಿ ಯಾರಿಗೂ ತೊಂದರೆ ಕೊಡದೆ ಬದುಕುತ್ತಿರುವ ಜನಾಂಗ. ಆಧುನಿಕತೆ ಆ ಜನಕ್ಕೆ ಹೊಸದಿರಬಹುದು, ಹಾಗಂತ ಅವರು ಧಡ್ಡರೇನಲ್ಲ. ಇವತ್ತು ಅವರನ್ನು ಬುಡಕಟ್ಟು ಜನಾಂಗದ ಕಲೆಯ ಹೆಸರಿನಲ್ಲಿ ನಾಯಿಕೊಡೆಯಂಥಾ ರೆಸಾರ್ಟುಗಳ elite ಪ್ರವಾಸಿಗರ ಮೋಜಿಗಾಗಿ ಅರೆಬೆತ್ತಲೆ ಕುಣಿಸಲಾಗುತ್ತದೆ. ರಿಯಾಲಿಟಿ ಶೋಗಳಲ್ಲಿ Specimen ಎನ್ನುವಂತೆ ಬಿಂಬಿಸಿ ಹಣ ಮಾಡಲಾಗುತ್ತದೆ. ಭಾಗವಹಿಸುವವರಿಗೆ ಮನಸಿದ್ದರೆ ನಿಮ್ಮದೇನ್ ತಕರಾರು ಎಂದು ನೀವು ಕೇಳಬಹುದು, ಕಾನೂನಿನ ಪ್ರಕಾರ ಇದು ಸರಿಯಾದ ಪ್ರಶ್ನೆಯೇ. ಆದರೆ, ಅವರ ಮುಗ್ಧತೆಯನ್ನು ಆಡಿಕೊಂಡು ನಗುವುದಕ್ಕೆ ಅವಕಾಶ ಕಲ್ಪಿಸುವ ನಮ್ಮ ವಾಹಿನಿಗಳನ್ನು ಪ್ರಶ್ನಿಸುವುದು ಕಾನೂನಿನ ಪ್ರಶ್ನೆಗಿಂತ ಮಾನವೀಯ ಪ್ರಶ್ನೆ ಎನ್ನುವುದು ನನ್ನ ನಿಲುವು. ಇನ್ನೊಂದು ವಿಷ್ಯ ಏನಂದ್ರೆ, ನಮ್ಮ ಓರಾಟಗಾರರ್ಯಾರಿಗೂ ಇದು ಕುಚೋದ್ಯ ಎಂದಾಗಲೀ, ಸಮಾಜದಲ್ಲಿ ಹಿಂದುಳಿದವರ ವಿರುದ್ಧ ಮೇಲ್ವರ್ಗದ ಜನ ಮಾಡುವ ದೌರ್ಜನ್ಯ ಎಂದಾಗಲೀ ಅನ್ನಿಸುವುದಿಲ್ಲ.

ಯಾಕೋ, ಮನರಂಜನೆ ಎನ್ನುವ ಪರಿಕಲ್ಪನೆಯನ್ನೆ ನಮ್ಮ ಮನರಂಜನೆಯ ಮನೆಗಳು ಅಪಾರ್ಥ ಮಾಡಿಕೊಂಡಿವೆ ಅನ್ನಿಸುತ್ತಿದೆ. ಯಾವುದು ಮನರಂಜನೆ? ಸೃಜನಶೀಲವಾದ ಮನರಂಜನೆಯನ್ನು ಸೃಷ್ಟಿಸಲು, ಒಂದೋ ಕಲೆಯಿರಬೇಕು, ಅಥವಾ ಅಸೀಮ ಬುದ್ಧಿವಂತಿಕೆಯಿರಬೇಕು (ಚಾತುರ್ಯ). ಎರಡನೆಯದರ ಕೊರತೆ ಇವತ್ತಿಗೆ ಕಾಡುತ್ತಿದೆ. ಹಾಗಾಗಿಯೇ, ಇನ್ನೊಬ್ಬನನ್ನು ಮಂಗ ಮಾಡಿ ಖುಷಿಪಡುವ ಪರಿಸ್ಥಿತಿ ನಮಗೆ ಬಂದಿದೆ.


ಇಷ್ಟರಮೇಲೂ ನಮ್ಮೂರ ಹುಡುಗರು ಮಂಗಾ ಆಗುವುದನ್ನು ನೋಡಲೇಬೇಕೆಂದಿದ್ದರೆ, ನಿಮ್ಮಿಷ್ಟ ನೋಡಿ J

ಮತ್ತೇನಲ್ಲ, ನಮ್ಮದೇ ವಿಕೃತಿಯನ್ನು ಝಗಾ ಝಗ್ ಬೆಳಕಿನಲ್ಲಿ ನೋಡಿಕೊಂಡಂತೆ ಇದು. 

Monday, August 10, 2015

ಒಲುಮೆಯಿಲ್ಲದ ಕೂಟ : Porn



ಕೇಂದ್ರ ಸರಕಾರದ ಪೋರ್ನ್ ban ನಿರ್ಣಯದ ಕುರಿತಾಗಿ ಬೌದ್ಧಿಕದಾಸ್ಯದ ವಲಯದಿಂದ ಬಂದ ಪ್ರತಿಕ್ರಿಯೆಗಳು ಮತ್ತು ಹಾಹಾಕಾರಗಳು ನನ್ನನು ಬಹುವಾಗಿಯೇ ಕಾಡಿದ್ದುವು, ಆದರೆ ಮತ್ತೇನನ್ನೂ ಬರೆಯಲಾಗದಂತೆ ಕೆಲಸವೊಂದರಲ್ಲಿ ಮಗ್ನವಾಗಿದ್ದೆ. ಇದೀಗ ಸಮಯ ಒದಗಿದೆ. ಬರೆಯದಿರಲಾಗದೆ ಬರೆಯುತ್ತಿದ್ದೇನೆ. 



ಮೊದಲಸಲ ನಾನು ಪೋರ್ನ್ ನೋಡಿದಾಗ ಖರೆಯೂ ಗಾಢವಾಗಿ  ಅನ್ನಿಸಿದ್ದು -“ಪ್ರೇಮವಿಲ್ಲದ ಕಾಮಕ್ಕೆ ಅರ್ಥವೂ, ಅಂದವೂ, ಮಾನವತೆಯೂ ಇಲ್ಲ” ಎಂದು.  ವಿಶ್ವಕ್ಕೆ ಸಂಸ್ಕೃತವು ಕೊಡಮಾಡಿದ ಸಾರ್ವಕಾಲಿಕ ಶ್ರೇಷ್ಠ ಕಾವ್ಯಗಳನ್ನು ಓದಿಕೊಂಡು ಮಾನವ ಪ್ರೇಮದ ಉತ್ಸವವನ್ನು ಮನಸಿನಲ್ಲಿ ಮೂಡಿಸಿಕೊಂಡಿದ್ದ ನನಗೆ, ಕಾವ್ಯಗಳ ಶಬ್ದ ಶರೀರದಲ್ಲಿ ಸ್ತ್ರೀ ಸೌಂದರ್ಯವನ್ನು ಕಲ್ಪಿಸಿಕೊಂಡಿದ್ದ ನನಗೆ, ವಿಪ್ರಲಂಭ ಶೃಂಗಾರದ ವರ್ಣನೆ ಓದಿದ್ದ ನನಗೆ, ಪೋರ್ನ್  ಕೊಡಮಾಡಿದ್ದು ಹಿಂಸೆಯನ್ನು ಮತ್ತು ಹೇವರಿಕೆಯನ್ನಷ್ಟೆ. ಮನುಷ್ಯನ ಮಧ್ಯೆ ಪ್ರೇಮವಿರದ ಬರೀ ಕಾಮದ ಇರವನ್ನೇ ತಿಳಿದಿರದಿದ್ದ ನನಗೆ ಪೋರ್ನ್ ಎಂಬುದು ನಾನು ಕಲ್ಪಿಸಿಯೂ ಇರದಿದ್ದ ಲೋಕವೊಂದನ್ನು ತೆರೆದಿಟ್ಟಿತು. ಪ್ರೇಮದ ಸುಳಿವೇ ಇರದ ಬರಿಯ ಮಾನವ ಕೂಟ ನನಗೆ ಕಾವ್ಯಾತ್ಮಕವೆನ್ನಿಸಲಿಲ್ಲ.

ಬದುಕನ್ನು ಹೆಚ್ಚು ಹೆಚ್ಚು ಜೀವಂತವಾಗಿಸಿಕೊಳ್ಳುತ್ತ, ಹೊರ ಹೊರಗಿನ ತೋರಿಕೆಯಲ್ಲದೆ ಒಳಗಿನ ಸಂವೇದನೆಗೆ ಸ್ಪಂದಿಸುವುದನ್ನು ಕಲಿಸಿಕೊಟ್ಟ ನನ್ನ ಪರಿಸರ, ಪ್ರಕೃತಿ, ಓದಿಕೊಂಡ ಸಾಹಿತ್ಯ ಮತ್ತು ಒದಗಿದ ಪರಿಸ್ಥಿತಿಗಳ ಉನ್ನತಿಯ ಎದುರು ಪೋರ್ನ್ ಎನ್ನುವುದು ಎಲ್ಲೆಂದರೆ ಎಲ್ಲಿಯೂ ಹೊಂದಿಕೆಯಾಗದ ಪ್ರೇತದ ಚಿತ್ರದಂತಿತ್ತು. ಅದೆಂದಿಗೂ ನನಗೆ ಮಾನವೀಯ ಎಂದೆನಿಸಲಿಲ್ಲ. ಆದರೆ, ಅದೇ ಅಮಾನುಷ ತೊಗಲಿನ ಲೋಕದ ನಿರ್ಮಾಣಕ್ಕಾಗಿ ಜಗತ್ತಿನಲ್ಲಿ ಎಷ್ಟು ದೊಡ್ಡ ಹಿಂಸೆಯ, ನರಕ ಸದೃಶ ಲೋಕವನ್ನು ಸೃಷ್ಟಿಸಿಕೊಳ್ಳಲಾಗಿದೆ ಎನ್ನುವುದು ತಿಳಿಯುತ್ತ ಬಂತು. ನಮ್ಮ ದಕ್ಷಿಣಕನ್ನಡ ಜಿಲ್ಲೆಯಿಂದ ವರ್ಷಕ್ಕೆ ಹತ್ತಿಪ್ಪತ್ತರ ಲೆಕ್ಕದಲ್ಲಿ ಮಾಯವಾಗುವ, ಅಡ್ರೆಸ್ಸೇ ಸಿಗದೆ ಹೋಗುವ, ಹೆಣ್ಣುಮಕ್ಕಳು ಅಂಥದೇ ನರಕಕ್ಕೆ ನೂಕಲ್ಪಟ್ಟಿರಬಹುದಲ್ಲವೇ ಅನ್ನಿಸಿದಾಗೆಲ್ಲ ಹಿತ್ತಿಲಲ್ಲೇ ಕೊಳಚೆ ನಿರ್ಮಾಣವಾದ ಅನುಭವ.  ಪ್ರತಿ ವರ್ಷವೊಂದಕ್ಕೆ ಹೆಸರೇ ಇಲ್ಲದ ಕಾಣೆಯಾಗುವ ಹೆಣ್ಣುಮಕ್ಕಳ ವಿಷಯವಾಗಿ ಪೋಲೀಸ್ ಒದಗಿಸಿದ ಅಂಕಿ ಸಂಖ್ಯೆ ನೋಡಿದರೆ ತಲೆ ತಿರುಗುತ್ತದೆ. ಅದರಲ್ಲೂ ಕರ್ನಾಟಕವಂತೂ ದಕ್ಷಿಣಭಾರತಕ್ಕೆ ಈ ವಿಷಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ೨೦೧೪ ರಲ್ಲಿ ಕಾಣೆಯಾದ ೭೮೩ ಹೆಣ್ ಮಕ್ಕಳ ಪತ್ತೆ ಇಂದಿಗೂ ಆಗಿಲ್ಲ. ಇದೆಲ್ಲ ಅಧಿಕೃತ ದಾಖಲಾದ ಸಂಗತಿ. ಇದರ ಹೊರತಾಗಿ ನೇತ್ರಾವತಿಯಲ್ಲಿ ಸಿಗುವ ಅನಾಥ ಶವಗಳು ಯಾವ ಕಾರಣಕ್ಕೆ ಶವಗಳಾದವು ಎನ್ನುವುದು ಎಂದೆಂದಿಗೂ ನಿಗೂಢ. ಮಾನವ ಕಳ್ಳ ಸಾಗಣೆ ಎನ್ನುವುದು ಯಾಕಿಷ್ಟು ಬೆಳೆದಿದೆ? ಮತ್ತದೇ ಪೋರ್ನ್ ಪ್ರಪಂಚಕ್ಕೆ ಬಂದು ನಿಲ್ಲುತ್ತದೆ ಚರ್ಚೆ.

ಖಜುರಾಹೋ ಶಿಲ್ಪಗಳನ್ನು, ಬೇಲೂರಿನ ಶಿಲಾ ಬಾಲಿಕೆಯರನ್ನು, ಹೋಗಲಿ- ಉತ್ತರ ಕನ್ನಡ ಜಿಲ್ಲೆಯ ಸೋದೆ ಅರಸರ ಕ್ಷೇತ್ರಗಳಲ್ಲಿ ಕಾಡಿನೊಂದಿಗೆ ಕಾಡಿನಂತೆ ನಿಂತ ದೇವಾಲಯಗಳ ಭಿತ್ತಿಗಳಲ್ಲಿನ ಚಿತ್ರಗಳನ್ನು ಪೋರ್ನ್ ಗೆ ಹೋಲಿಸುವುದಾದರೆ, ಕಲೆಯನ್ನು ವ್ಯಭಿಚಾರದೊಂದಿಗೆ ತುಲನೆ ಮಾಡಿದಂತೆ. ಕೋಕ ಶಾಸ್ತ್ರವನ್ನು, ವಾತ್ಯ್ಸ್ಯಾಯನನ ಕಾಮಸೂತ್ರವನ್ನು ಇವತ್ತಿನ ಪೋರ್ನ್ ಜೊತೆ ಸಮವಾಗಿ ಕಾಣುವುದೆಂದರೆ ಶಾಸ್ತ್ರೀಯ ಅಧ್ಯಯವನ್ನು ಫಟಿಂಗರ ಪೋಲಿ ಪುಸ್ತಕದೊಡನೆ ತುಲನೆ ಮಾಡಿದಂತೆ. ಅಧ್ಯಯನ ಇರುವ ಯಾರೂ ಈ ಬಗೆಯ ವಾದವನ್ನು ಮಾಡಲಾರರು.  ಇವರೇನಾದರೂ ಮೇಘದೂತವನ್ನೋ, ಮಾಘಕವಿಯನ್ನೋ, ಕುಮಾರಸಂಭವವನ್ನೋ ಓದಿದ್ದಿದ್ದರೆ ಅವೆಲ್ಲ ರತಿ ಚಕೋರಿಗಿಂತ ಭಿನ್ನವಾದ ಸಾಹಿತ್ಯವಲ್ಲ ಎಂದೇ ಬರೆಯುತ್ತಿದ್ದರೇನೋ!

ನಮ್ಮ ಶೃಂಗಾರ ಸಾಹಿತ್ಯದ ಮೊದಲ ಅಂಶವೇ ಒಲುಮೆ. ಒಲಿಸಿಕೊಳ್ಳುವ ಅಂದ, ಒಲಿಯೆನೆನ್ನುವ ಹುಸಿ ಹಠ, ಕೊನೆಗೂ ಒಲಿಯುವ ನಮ್ಯತೆ, ಒಲಿಸಿಕೊಳ್ಳುವ ಪ್ರಕ್ರಿಯೆಯೇ ಸಲ್ಲಾಪವೆನ್ನುವ ಗ್ರಹಿಕೆ- ಈ ಅಂಶಗಳಿಲ್ಲದ ಶೃಂಗಾರ ಕಲ್ಪನೆ ನಮ್ಮಲ್ಲಿಲ್ಲ. ಕಾವವನ್ನು ಮಹಾಪಾಪವೆಂದು ಬಗೆದ, ಸ್ತ್ರೀ ಪುರುಷ ಸಂಯೋಗವನ್ನೇ ಪಾಪದ ಆರಂಭವೆಂದು ತಿಳಿದ ನಾಗರಿಕತೆ ನಮ್ಮದಲ್ಲ. ಒಲುಮೆಯಿಲ್ಲದ ಕಾಮದ ಕುರುಹು ನಮ್ಮಲ್ಲಿ  ಪ್ರಾಯಃ  ಸಿಗಲಾರದು. ಕಾವ್ಯಕ್ಕೆ ಕಾವ್ಯವಾಗುವ ತಾಕತ್ತು ಬರುವುದೇ ಒಲುಮೆಯ ಹಿನ್ನೆಲೆಯಲ್ಲಿ. ಪಾಶುಪತ ಪಡೆಯಲು ಹಿಮಾಲಯ ಬೆಟ್ಟ ಹತ್ತಿದ ಅರ್ಜುನನದೂ ಒಲುಮೆಯೇ. ಒಲಿಸಿಕೊಳ್ಳುವ ತಾಳ್ಮೆಯಿಲ್ಲದ, ಬರಿಯ ಉನ್ಮಾದದ ಯಾವುದೂ ಬದುಕಾಗಲೀ ಕಾವ್ಯವಾಗಲೀ ಆಗದು. ಅಲ್ಲಿಗೆ ಅದಕ್ಕೆ ಬೆಲೆಯೂ ಇರದು. ಒಲುಮೆ ಎನ್ನುವುದು ಸಣ್ಣ ಸಂಗತಿಯಲ್ಲ, ಅದಿಲ್ಲದೆ ಯಾವ ಸಾಧನೆಯೂ ಇಲ್ಲ. ಅದೊಂದು ತಪಸ್ಸು.  ಅಂಥದರಲ್ಲಿ ಒಲುಮೆಯ ಸೆಲೆಯೇ ಇಲ್ಲದ ಬೆತ್ತಲೆ ಮಿಥುನಗಳ ಉದ್ವೇಗ ಮುಖಿಯಾದ ಚಿತ್ರಣ- ಪೋರ್ನ್- ಮಾನವಪರವಾದ ಸಂಗತಿ ಹೇಗಾದೀತು? ಕೆಡುಕಿನ ಕಲ್ಪನೆ ಒಬ್ಬನಿಗೆ ಬೇಕಿದ್ದಲ್ಲಿ ಪೋರ್ನ್ ನೋಡಬಹುದೇನೋ.
ಸಾಮಾನ್ಯರ ಕಲ್ಪನೆಗೆ ನಿಲುಕದೇ ಇರುವಷ್ಟು ಹಿಂಸೆ, ಪಾಶವೀಯತೆ, ಈ ಭೂಮಿಯ ಮೇಲೆ ನಮ್ಮ ಬೃಹತ್ ಮಾನವ ಕುಲದ ಮಧ್ಯೆ ಇದೆ. (ISIS ನೆನಪಾಗುತ್ತದೆ ಇಲ್ಲಿ) ಮತ್ತದೇ ಒಲುಮೆಯಿರದ ಲೈಂಗಿಕತೆಯ ವಿಜೃಂಭಣೆಯೇ ಮಾನವ ಸೃಷ್ಟಿಸಬಹುದಾದ ಹಿಂಸೆಯ ಪರಮ ಪಾತಾಳ ಎಂದು ನನ್ನ ಊಹೆ. ಹಿಂಸೆ ಮತ್ತು ಒಲವಿಲ್ಲದ ಲೈಂಗಿಕತೆ ಇವೆರಡೇ ಭೂಮಿಯ ಮೇಲೆ ನರಕ ಸೃಷ್ಟಿಸಿರುವ ಸಂಗತಿಗಳು, ಮತ್ತಿವು ಪರಸ್ಪರ ಅಂತಃಸಂಬಂಧ ಉಳ್ಳವೂ ಆಗಿವೆ.
ಒಲುಮೆಯ ತಪಸ್ಸಿಗೆ ಕುಳಿತು ಚೈತನ್ಯಯುತವಾದ ಬದುಕು ಬದುಕುವುದಕ್ಕೆ ಭಾರತೀಯ ಪ್ರಜ್ಞೆಯಲ್ಲಿ ದೂಡ್ಡ ಅವಕಾಶ ಇದೆ. ನಮಗಲ್ಲದಿದ್ದರೂ ನಮ್ಮ ಹಿಂದಿನ ಸಾಹಿತ್ಯಕ್ಕೆ ಆ ಉನ್ನತಿಯ ನೆನಪಿದೆ. ಇಂಥ ಶುದ್ಧ ಗಂಗೆಯಂಥಾ ಬದುಕನ್ನು ಬಿಟ್ಟು ಅಚೈತನ್ಯದ, ಸಂವೇದನಾರಹಿತ, ಜೀವ ಕಳೆಯಿಲ್ಲದ ಉದ್ವೇಗದ ಮೇಲಾಟದ ಮಾನವ ಮಿಲನವನ್ನು ಆನಂದಿಸುವ ತುಚ್ಛತೆ ನಮಗೆ ಬೇಕೆ?

ಪೋರ್ನ್ ಉಳಿಯಬೇಕು ಎನ್ನುವವರು ಅದೆಷ್ಟು ಕುರುಡಾಗಿ ವಾದಗಳನ್ನು ಮಂಡಿಸುತ್ತಿದ್ದಾರೆಂದರೆ, ಬಳಕೆ ಸಂಸ್ಕೃತಿಯ Commodity  ಪ್ರಪಂಚದ ದಾಸರೇ ಆಗಿಹೋಗಿದ್ದಾರೋ ಅನ್ನಿಸುವಷ್ಟು. ಅಗತ್ಯವಿದೆ, ಹಾಗಾಗಿ ಪೂರೈಕೆಯೂ ಆಗಲೇ ಬೇಕು ಎನ್ನುವ ವಾದ ಅದು. ಈಗಾಗಲೇ ನಮ್ಮ ಶೋಕಿಗಾಗಿ ನಾವು ಮಾನವತೆಯ ಎಲ್ಲೆಯನ್ನು ದಾಟಿಯಾಗಿದೆ. ಸುಗಂಧಕ್ಕಾಗಿ ಒಂದು ಪ್ರಾಣಿ, ರೆಕ್ಕೆ ಪುಕ್ಕಕ್ಕಾಗಿ ಹಕ್ಕಿ, ಚರ್ಮಕ್ಕಾಗಿ ಹಾವು ಹುಲಿಗಳು, ದಂತಕ್ಕಾಗಿ ಆನೆ... ನಮ್ಮ ಕೊಲೆಗಡುಕತನ ಇನ್ನೂ ವಿಸ್ತಾರವಾಗುತ್ತಲೇ ಇದೆ. ಬಹುಶಃ, ಪೋರ್ನ್ ಇರಲೇ ಬೇಕು ಎನ್ನುವುದು ಇದೇ ಕೊಲೆಗಡುಕತನದ ಇನ್ನಷ್ಟು ವಿಸ್ತಾರವಾದ ಪರಿಧಿ. ಕೊಲೆಗಿಂತಲೂ ಹಿಂಸಾತ್ಮಕವಾದ್ದು ಪೋರ್ನ್. 


ನ್ಯಾಯಾಂಗವಾಗಲೀ ಸರಕಾರವಾಗಲೀ ಪೋರ್ನ್ ಎಂಬ ಹೀನಾಯವನ್ನು ನಿಲ್ಲಿಸುವುದರಲ್ಲಿ ಸಮರ್ಥವಾದರೆ ಅದು ಸ್ವಸ್ಥವಾದ ಹೊಸಯುಗದ ಆರಂಭಕ್ಕೆ ನಾಂದಿಯಾದೀತು.      

Monday, August 3, 2015

ಅರಿಯದ ಶಾಕುಂತಲೆಯ ಅಂತ-ರಂಗ


ನಾಟಕವೆಂದರೆ ಅಭಿಜ್ಞಾನ ಶಾಕುಂತಲೆಯೇ ಎನ್ನುವ ಅರ್ಥದ ಮಾತೊಂದಿದೆ ಸಂಸ್ಕೃತದಲ್ಲಿ. ಅಷ್ಟು ಚೇತೋಹಾರಿಯಾದ ನಾಟಕ ಅದು. ಅದರ ಕರ್ತೃ ಕಾಲಿದಾಸನ ಬಗ್ಗೆಯೂ ’ಕವಿಯೆಂದರೆ ಕಾಲಿದಾಸನಯ್ಯಾ’ ಎನ್ನುವ ಅರ್ಥದ ಮಾತೂ  ಚಾಲ್ತಿಯಲ್ಲಿದೆ. ಅಗ್ರಮಾನ್ಯ ಕವಿಯೊಬ್ಬನ ಅಗ್ರಮಾನ್ಯ ಕೂಸು ಅಭಿಜ್ಞಾನ ಶಾಕುಂತಲ ನಾಟಕ. ಭಾರತೀಯ ಸಾಹಿತ್ಯದ ಗಣನೆಯಲ್ಲಿ ಯಾವಕಾಲಕ್ಕೂ ಬಿಡಲೇ ಆಗದ ಕೃತಿಯದು.


ಅದೇ ನೆರಳಲ್ಲಿ ಆರಂಭಗೊಳ್ಳುವ ಆಧುನಿಕ ಕನ್ನಡ ನಾಟಕ ’ಅನಭಿಜ್ಞ ಶಾಕುಂತಲ’ ಇವತ್ತಿನ ರಂಗಭೂಮಿಯ ಬೆರಗು. ನಿನ್ನೆ ರಂಗಶಂಕರದಲ್ಲಿ ಅನಭಿಜ್ಞಶಾಕುಂತಲದ ೪೯ ಮತ್ತು ೫೦ ನೇ ಪ್ರಯೋಗ ತುಂಬಿದ ಸಭಾಂಗಣದಲ್ಲಿ ಯಶಸ್ವಿಯಾಯ್ತು. ಬದುಕಿನ ಎರಡು ತಾಸು ಕಳೆದಿದ್ದೇ ತಿಳಿಯಲಿಲ್ಲ! ಅಷ್ಟು ಒಪ್ಪ ಓರಣವಾದ ಎಲ್ಲಿಯೂ ಜಾರಿಲ್ಲದ, ಕೊಸರಿಲ್ಲದ ಪ್ರಯೋಗ ಅನಭಿಜ್ಞ ಶಾಕುಂತಲ.

ಡಾ. ಕೆ ವೈ ನಾರಾಯಣ ಸ್ವಾಮಿಯವರ ಕಲ್ಪನೆಯ ಕೂಸು ಅನಭಿಜ್ಞ ಶಾಕುಂತಲ.

ಪಾರಂಪರಿಕವಾಗಿ ಬಂದ ಸಂಸ್ಕೃತ ರಂಗಭೂಮಿಯ ಮಂಗಳಗೀತೆ ’ ಆಂಗಿಕಂ ಭುವನಂ ಯಸ್ಯ...’ (ಭರತಮುನಿಯ ನಾಟ್ಯ ಶಾಸ್ತ್ರ) ಅಂತಲೇ ಶುರುವಾಗುವ ನಾಟಕ, ಸಂಸ್ಕೃತ ನಾಟಕಗಳ ರೀತಿಯನ್ನೇ ಅನುಸರಿಸುತ್ತ ಸೂತ್ರಧಾರನಿಂದ ಶುರುವಾಗುತ್ತದೆ. ಅಭಿಜ್ಞಾನ ಶಾಕುಂತಲವನ್ನು ಆಡಲು ಸಿದ್ಧಗೊಳ್ಳುತ್ತಿದ್ದಂತೆ ಬಂದೆರಗುವ ಅಭಿಜ್ಞಾನದ ಕರ್ತೃ ಕಾಲಿದಾಸನ ಹತ್ಯೆಯ ವಾರ್ತೆ, ನಾಟಕ ಆಡುಗರನ್ನು ತಡೆಯುತ್ತದೆ. ಅಭಿಜ್ಞಾನಕ್ಕಾಗಿ ಸಿದ್ಧವಾದ ವೇದಿಕೆ ನೋವಿನ, ಗಾಬರಿಯ ಬೀಡಾಗಿ ಬದಲಾಗುತ್ತದೆ, ಮತ್ತು ಉದ್ದೇಶಿತ ಪ್ರದರ್ಶನ ಅಲ್ಲಿಗೆ ನಿಲ್ಲುತ್ತದೆ. ಅಲ್ಲಿಂದಲೇ ಅನಭಿಜ್ಞ ಶಾಕುಂತಲ ಶುರುವಾಗುತ್ತದೆ. ಕೃತಿಕಾರ ಬದುಕಿರುವವರೆಗೆ ಸ್ವತಂತ್ರವಾಗಿಲ್ಲದೆ ಕೃತಿಕಾರನ ಮನದ ಭಾವಕ್ಕೆ ಮತ್ತು ವಿಚಾರಕ್ಕೆ ಮಾತ್ರವೇ ದನಿಯಾಗಿದ್ದ ಪಾತ್ರಗಳೆರಡು ಕವಿಯ ಮರಣದಿಂದಾಗಿ ಬಿಡುಗಡೆ ಹೊಂದಿದಂತಾಗಿ ಮಾಯಾಕನ್ನಡಿಯಿಂದೆಂಬಂತೆ ಹೊರಬಂದು ವಾಸ್ತವದೊಳಗೆ ಬೆರೆತು ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸಲು ಶುರುವಿಡುತ್ತವೆ.

ಅಜ್ಞಾತ ಅಮ್ಮನ ಪುತ್ರನಾದ ಕಾಳಿ ಎಂಬಾತ ಕಾಶ್ಮೀರದ ಹಳ್ಳಿಯ ಹಾಡಿಯ ಜನರ ನಡುವೆ ಬೆಳೆದು ಆ ಬೆಳ್ಳಂಬೆಟ್ಟಗಳ, ತಿಳಿ ಮೋಡಗಳ, ನೀಲಿಯಾಗಸವ, ಹರಿವ ನದಿಯ, ಉಲಿವ ಹಕ್ಕಿಗಳ ಕಾಣ್ ಕಾಣುತ್ತ ಕವಿಯಾದ ಕಥೆ ಅದು.  ಉಸಿರೆಲ್ಲವೂ ಕವಿತನವೇ ಆದ ಅವನ ಅಕ್ಷರದ ಮೋಡಿಗೆ, ಸಿರಿಗಾಯನದ ಕೊರಳಿಗೆ ಮರುಳಾದ ಹೆಣ್ಣುಗಳ ಸುತ್ತ ಕಾಳಿಯ ಬದುಕು ಒಂದೊಂದು ಮಹಾಕಾವ್ಯವಾಗಿ ಮೈದಳೆಯುತ್ತದೆ. ಗಂಧರ್ವ ಕನ್ಯೆಯೆಂಬ ಭ್ರಮೆಯ ಮೋಹಕ್ಕೆ ಬಿದ್ದ ಕಾಳಿ ಅವಳನ್ನು ಭೋಗಿಸುತ್ತಾನೆ, ಆಕೆ ಗರ್ಭವತಿಯಾಗುತ್ತಾಳೆ. ಆದರೆ ಇತ್ತ  ಭೋಜನ ಧಾರಾನಗರಿಯೇ ಬಂದು ಕಾಳಿಯನ್ನು ಕೊಂಡೊಯ್ದು ಕಾಳಿದಾಸನೆಂಬ ಅಭಿಧಾನವನ್ನೀಯುತ್ತದೆ. ಬಹುಶಃ ಅಲ್ಲಿಂದ ಕಾಳಿಯ ಬದುಕಿನ ನೋವು ಶುರುವಾಗುತ್ತದೆ. ಅರಳುವುದಕ್ಕೆ ಒತ್ತಾಯಕ್ಕೆ ಒಳಗಾದ ಮೊಗ್ಗಿನ ರೀತಿಯಲ್ಲಿ ಕಾಳಿದಾಸ ರಾಜತ್ವದ ಬಂಧನದಲ್ಲಿ ಬಳಲುತ್ತಾನೆ. ಕಥೆ ಇಲ್ಲೆಲ್ಲ ಬಲು ನಾಟಕೀಯವಾಗಿ ನಡೆದುಕೊಳ್ಳುತ್ತದೆ. ಅದಲ್ಲದೇ ಕೊರಗಿನ ಕಾವ್ಯವಾದ ಮೇಘದೂತವೂ ಸಿದ್ಧವಾಗುತ್ತದೆ. ತನ್ನ ಪ್ರಿಯೆಯ ಪ್ರೇಮವನ್ನು ಹೊಂದಲಾಗದ ನೋವಿನಲ್ಲಿ ಕಾಳಿದಾಸ ತನ್ನ ಗುಡ್ಡ ಕಾಡುಗಳ ಬೆಳ್ಳಿ ಬೆಟ್ಟಗಳ ನಗರಿಗೆ ಪುನಃ ಬರುತ್ತಾನೆ. ಅಲ್ಲಿ ತನ್ನ ಅಭಿಜ್ಞಾನ ಶಾಕುಂತಲೆಯನ್ನು ವಾಚಿಸುತ್ತಿರುವಾಗಲೇ  ಕೈಬೀಸಿನ ಕತ್ತಿಯ ಇರಿತಕ್ಕೆ ಎದೆಯೊಡ್ಡಿ ಕೊನೆಯಾಗುತ್ತಾನೆ. ಕಾಳಿದಾಸನ ನಾಟಕದಿಂದ ಬಿಡುಗಡೆಗೊಂಡು ಕನ್ನಡಿಯಿಂದ ಹೊರಬಂದಂತೆ ಬಂದ ಬಿಂಬಗಳು ಮತ್ತದೇ ಕನ್ನಡಿಯನ್ನು ಸೇರಿಕೊಂಡು ಬರಿಯ ಬಿಂಬಗಳಾಗುತ್ತವೆ.

ಕಾಳಿದಾಸ ಸಾಯುವ ಕವಿಯಲ್ಲ, ಎಲ್ಲರೆದೆಗಳಲ್ಲಿ ಬೆಳಗುವ ಕವಿ.

ಕತ್ತಲೆಯಾಗುವ ಪೂರ್ಣ ರಂಗಮಂದಿರವನ್ನು ಹರ್ಷದ ಚಪ್ಪಾಳೆ ತುಂಬಿಕೊಳ್ಳುತ್ತದೆ.    

ಕೊಲೆ ಮಾಡಿದ್ದು ಯಾರು ಎನ್ನುವುದನ್ನು, ಮತ್ತು ಅಲ್ಲಿನ ಸಂಘರ್ಷವನ್ನು ನಾನಿಲ್ಲಿ ಬರೆದು ನಾಟಕದ ಕುತೂಹಲವನ್ನು ಕೊಲ್ಲಲಾರೆ.

ಪ್ರೇಮ, ಪ್ರೇಮದ ಒಡಲಿನ ಕೂಸಾಗುವ ದ್ವೇಷ, ಬಯಕೆಯ ಬೆನ್ನು ಬೀಳುವ ಹೆಣ್ಣುಗಳು, ಯಾರಿಗೂ ದೊರೆಯದೆ ಹೋಗುವ ಕಾಳಿ, ಕಾಶ್ಮೀರದ ಹಾಡಿಯ ಜೀವಗಳ ಅಭಿಮಾನ ಇವಿಷ್ಟು ಕಥೆಯ ಜೀವ ಬಿಂದುಗಳಾದರೆ ಸಂಗೀತ, ಬೆಳಕು, ರಂಗ ಸಜ್ಜಿಕೆ, ತಾಂತ್ರಿಕತೆ, ನಟನೆಯ ಔಚಿತ್ಯ, ಭಾಷೆಯ ತುಂಬು ಯೌವನ ಸೌಂದರ್ಯ, ಹಾಡುಗಾರನ ಕಂಠ ಮತ್ತು ಸಾಹಿತ್ಯ ಎಲ್ಲವೂ ಉತ್ತಮ ಕೃತಿಯೊಂದನ್ನು ರೂಪಿಸಿವೆ. ಡಾ. ಕೆ ವೈ ನಾರಾಯಣ ಸ್ವಾಮಿಯವರ ಪ್ರತಿಭೆಗೆ ಸರಿಯಾದ ಸಾಥ್ ಕೊಟ್ಟು ಇದನ್ನೊಂದು ಯಶಸ್ವಿ  ನಾಟಕವನ್ನಾಗಿಸಿದ್ದು  ನಿರ್ದೇಶಕ ಪ್ರಕಾಶ್ ಶೆಟ್ಟಿಯವರು. ಪ್ರತಿಭೆ ಈ ನಾಟಕದಲ್ಲಿ ಅದೆಷ್ಟು ದುಡಿದಿದೆ ಮತ್ತು ಅದೆಂತು ಸಫಲವಾಗಿದೆ ಎನ್ನುವುದು ಅರಿವಾಗುವುದಕ್ಕೆ ನಾಟಕವನ್ನೊಮ್ಮೆ ನೀವೇ ನೋಡಬೇಕು.
ಪ್ರಜ್ಞಾ ನವ ನವೋನ್ಮೇಷಶಾಲಿನೀ ಪ್ರತಿಭಾ ಎನ್ನುವುದು ಎಷ್ಟನೆಯದೋ ಬಾರಿಗೆ ನನಗೂ ಖರೆಯೆನ್ನಿಸಿತು. ಕಾಳಿದಾಸನೆಂಬ ಇತಿಹಾಸಿಕ ಸತ್ಯವನ್ನು ಕಲ್ಪನೆಯ ಮಾಯಾ ಬಲೆಯ ಮಧ್ಯೆ ಮರು-ಹೆಣೆಯುವ ಕೌಶಲಕ್ಕೆ ಮಣಿದೆ. ತುಂಬಾ ಪ್ರಭಾವಿಯಾದ ಬರವಣಿಗೆ. ಭಾಷೆಯಂತೂ ಕನ್ನಡದ ಅಂತಃಸತ್ವವೇ ನವಿರೇಳುವಂತೆ ಮನೋಜ್ಞವಾಗಿದೆ.
ಆನಂದದ ಸಂದಾಯವೇ ಕಲೆಯ ಉನ್ನತ ಕಾಣಿಕೆ. ಆ ಮಾತಿಗೆ ಎರಡಿಲ್ಲ.

ಆದರೆ....

ಯಾಕೆ ಇಷ್ಟು ಒಳ್ಳೆಯ ಪ್ರತಿಭೆ ತನ್ನ ಉನ್ನತಿಯನ್ನು ಯಾವುದೋ ಕೆಲಸಕ್ಕೆ ಬಾರದ ಅಜೆಂಡಾದ ಧ್ವನಿಯಾಗುತ್ತದೆ? ಕೀಳಿನ ಸ್ಪರ್ಷವಿಲ್ಲದ ಶುದ್ಧ ಸಾಹಿತ್ಯವನ್ನು ಬರೆಯುವುದಕ್ಕೆ ಶಕ್ತಿಯಷ್ಟೇ ಅಲ್ಲ, ಮನಸಿರಬೇಕು. ರಸದ ಅನುಭೂತಿ ನನ್ನ ಒಳಗಿನ ಖಾಲಿ ಜೇನುಗೂಡನ್ನೆಲ್ಲ ಆವರಿಸಿ ನಿಂತ ಬಳಿಕವೂ ಅಜೀರ್ಣವಾದ ಕೆಲವು ಅಂಶಗಳಿವೆ ನಾಟಕದಲ್ಲಿ ಅಂತ ನನ್ನ ವಿಮರ್ಶಕ ಮನಸಿನ ಅನಿಸಿಕೆ.

ಕಾಳಿದಾಸನೆಂಬ ಕಾವ್ಯಸಂತಾನದ ಬಗ್ಗೆ ಒಮ್ಮತ ಭಾರತೀಯ ವಿದ್ವಾಂಸರಲ್ಲೂ ಪಾಶ್ಚಾತ್ಯರಲ್ಲೂ ಇಲ್ಲ. ನಮ್ಮ ಸಾಹಿತ್ಯ ಸ್ರೋತದ ಮೂಲಭೂತ ಸಮಸ್ಯೆ ಅವುಗಳ ಕಾಲಘಟ್ಟದ್ದು ಮತ್ತು ಕರ್ತೃಗಳ ಜೀವನದ ಕುರಿತಾದ ಪಕ್ಕಾ ನಿರುತ್ತರಕ್ಕೆ ಸಂಬಂಧಿಸಿದ್ದು. ಕಾಳಿದಾಸನೂ ಇದಕ್ಕೆ ಹೊರತಲ್ಲ. ಕಾಳಿದಾಸನ ಕೆಲವು ಕೃತಿಗಳ ಪೂರ್ಣ ಕರ್ತೃ ಕಾಳಿದಾಸನೇ ಅಲ್ಲ ಎಂಬುದರಿಂದ ಹಿಡಿದು, ಒಂದಕ್ಕಿಂತ ಹೆಚ್ಚು ಕಾಳಿದಾಸರು ಇದ್ದರೆಂಬ ಕಥೆಯವರೆಗೂ ಈ ಪ್ರತಿಭಾನ್ವಿತ ಕವಿಯ ಜೀವನದ್ದು ಬರೀ ಊಹಾಪೋಹಗಳೇ ಹೊರತು ಘನವಾದ ಐತಿಹಾಸಿಕ ಆಧಾರವಿಲ್ಲ. ಭೋಜನ ಧಾರಾನಗರಿಯಲ್ಲಿ ಇದ್ದನೆಂದೂ, (ಇಂದಿನ ಮಧ್ಯಪ್ರದೇಶ), ವಿಕ್ರಮಾದಿತ್ಯನ ಆಸ್ಥಾನ ಕವಿಯೆಂದೂ,  ಕಾಶ್ಮೀರದ ಹಿಮಬೆಟ್ಟದ ಮರುಳಿನ ಕವಿಯಾಗಿದ್ದನೆಂದೂ ಕಾಳಿದಾಸನ ಬಗೆಗಿನ ಸಾಮಾನ್ಯ ಅರಿವು. ಕಾಲವಂತೂ ಕ್ರಿ.ಪೂ ಮತ್ತು ಕ್ರಿಶ ಆರನೇ ಶತಮಾನದವರೆಗೆ ಹೊಯ್ದಾಡುತ್ತದೆ. ಇಂತಿಪ್ಪ ಕಾಳಿದಾಸನ ಬದುಕಿನ ಅಜ್ಞಾತ ಕಥೆಯನ್ನು ’ಅನಭಿಜ್ಞ ಶಾಕುಂತಲ’ ಎಂಬ ಹೆಸರಲ್ಲಿ ಅವನ ಕೃತಿಗಳ ಹಿನ್ನೆಲೆ ಕಲ್ಪಿಸಿ ಹೆಣೆಯುವಾಗ ಪ್ರತಿಭೆ ಅದ್ಭುತವನ್ನೇ ಮೆರೆದಿದೆ.

“ಕಾಡಿನಲ್ಲಿ ಮುನಿಗಳು ರಾಜಕುಮಾರರಿಗೆ ಮತ್ತು ಕಾಡು ಜನರ ಮಕ್ಕಳಿಗೆ ಅಕ್ಷರ ಹೇಳಿಕೊಡುವಾಗ ಕದ್ದು ಅದನ್ನೆಲ್ಲ ಆಲಿಸಿ, ಮರಳಿನಲ್ಲಿ ಅವರು ತಿದ್ದಿ ಬಿಟ್ಟಿ ಹೋದ ಅಕ್ಷರಗಳಮೇಲೆಯೇ ತಿದ್ದಿ ಬರೆದು ಕಾಳಿ ಅಕ್ಷರ ಕಲಿತ” ಅಂತ ನಾಟಕದಲ್ಲಿ ಒಂದು ಕಡೆ ಬರುವ ಮಾತು. ಸರಿ. ಕಾಳಿದಾಸ ಅಕ್ಷರ ಕಲಿತದ್ದು ಹಾಗೇ ಎನ್ನುವುದು ಕವಿಯ ಸ್ವಾತಂತ್ರ್ಯ.

ಮುಂದೊಂದು ಕಡೆಗೆ ಕಾಳಿದಾಸ ತನ್ನ ಅನುರಕ್ತೆಯಲ್ಲಿ ಸಂದರ್ಭವೊಂದರಲ್ಲಿ ಉಲ್ಲೇಖಿಸುತ್ತಾನೆ “ಹಾರ್ವ ಪಿಳ್ಳೆಗಳಿಗೆ ತಿಳಿದರೆ ಕಷ್ಟ”- ಎಂದು. ಇಲ್ಲಿ ರಾಜಸಂತಾನಗಳಿಗೆ ಮತ್ತು ಕಾಡು ಜನರ ಮಕ್ಕಳಿಗೆ ಲಭ್ಯವಿದ್ದ ಅಕ್ಷರವಿದ್ಯೆಯನ್ನು ಕದ್ದು ಕೇಳಿಸಿಕೊಂಡು ಕಾಳಿದಾಸ ಬೆಳೆದ ಎನ್ನುವುದಕ್ಕೂ, ಮುಂದೆ ಅದೇ ಕಾಳಿದಾಸ ಹಾರ್ವಪಿಳ್ಳೆಗಳನ್ನು ತನ್ನ ಪ್ರತಿಗಾಮಿಗಳಂತೆ ಕಂಡುದಕ್ಕೂ ಸಾರಾಪೂರ ಹೊಂದಿಕೆಯಾಗುತ್ತಿಲ್ಲ.    ಎಲ್ಲರಿಗೂ ಲಭ್ಯವಿದ್ದ ವಿದ್ಯೆಯನ್ನು ಕದ್ದು ಕಲಿತನೆಂಬುದೂ, ಕೊನೆಯಲ್ಲಿ ಹಾರ್ವರನ್ನು ಅನಗತ್ಯವಾಗಿ ಎಳೆದು ತಂದುದೂ ಒಂದಕ್ಕೊಂದು ವಿರುದ್ಧವಾದ ಸಂಗತಿಗಳು. ಈ ಚರ್ಚೆ ಬೆಳೆದರೆ ಲೇಖಕ ಯಾವುದೋ ಸಮಜಾಯಿಷಿ ಕೊಟ್ಟು ಇದನ್ನು ಸಮರ್ಥಿಸೊಕೊಳ್ಳಬಹುದು. ಆದರೆ ನಾಟಕದ ರಸ ಚೌಕಟ್ಟಿಗೆ, ರೋಚಕತೆಗೆ, ಇದೊಂದು ಮಾತಿನ ಅಗತ್ಯವೇ ಇರಲಿಲ್ಲ. ಅಗತ್ಯ ಇರಲಿಲ್ಲ ಒಂದೇ ಅಲ್ಲ, ಅದು ರಸೋನ್ನತಿಯ ಎದುರು ಮಾನವ ಮನಸಿನ ಕುಬ್ಜತೆ  ಬಯಲಾದಂತೆ.

ಹೀಗೆ ಇತಿಹಾಸದ ಅನಿಶ್ಚಿತ ಸಂಗತಿಗಳನ್ನು ಕಲೆಯ ಕುಂದಣದಲ್ಲಿ ಕಟ್ಟುವ ಪ್ರತಿಭೆಗೆ ವಾದಗಳ ಹೊಗೆ ಅಂಟದೇ ಇದ್ದರೆ ಚೆನ್ನಿತ್ತು ಎಂಬುದೇ ನನ್ನ ನಿಲುವು. ಇದೇ ಬಗೆಯ ಕಾಲದ ಮತ್ತು ಸಂಗತಿಯ ಅನಿಶ್ಚಿತತೆಯನ್ನು ದುಡಿಸಿಕೊಂಡು ಶಂಕರ ಮೊಕಾಶಿ ಪುಣೇಕರರು ಬರೆದ ಕನ್ನಡದ ಮಹತ್ತರ ಕಾದಂಬರಿ “ಅವಧೇಶ್ವರಿ” ನನ್ನ ನೆನಪಿನಲ್ಲಿ ಮಗ್ಗುಲು ಬದಲಿಸಿತು.  ನಾಟಕದ ಆದಿಯಲ್ಲಿ ಗಣೇಶನ ಸ್ತುತಿಯಿಂದ ಆರಂಭಿಸುವ ವಾಡಿಕೆಯನ್ನು ಮುರಿದುದಕ್ಕೇ ಪ್ರತ್ಯಕ್ಷವಾಗುವ ಗಣಪನನ್ನು ಲಘುವಾಗಿ ಚಿತ್ರಿಸಿದರಲ್ಲ, ಅದೊಂದು ವಿಡಂಬನೆಯಂತಿತ್ತಲ್ಲ ಎಂದು ಸಾಂಪ್ರದಾಯಿಕ ಮನಸುಗಳಿಗೆ ಅನ್ನಿಸಲೂ ಬಹುದು, ಆದರೆ ಅಷ್ಟು ಮಾತ್ರದ ವಿಡಂಬನೆಯನ್ನು ಕಲೆಯ ಭಾಗವಾಗಿಯೇ ಸ್ವೀಕರಿಸುವ ಸಾಂಸ್ಕೃತಿಕ ಹಿರಿತನ ಈ ಪರಂಪರೆಗೆ ಇದೆ.
ಅನಭಿಜ್ಞ ಶಾಕುಂತಲ ಅಚ್ಚಾದ ಒಂದು ನೆನಪಿನಂತೆ ಉಳಿದುಕೊಳ್ಳುತ್ತದೆ ನನ್ನಲ್ಲಿ.