Tuesday, July 26, 2016

ಹಸಿರಿನ ಮತ್ತು ನೀರಿನ ದೇವಾಲಯಗಳು- 2

ಮೊನ್ನೆ ಈ ವರ್ಷದ ಮಳೆಗಾಲ ಶುರುವಾದಬಳಿಕ ಇನ್ನೊಂದು ಹಸಿರಿನ ತಾಣಕ್ಕೆ ಹೋಗಿದ್ದೆ. ಭೀಮೇಶ್ವರದಷ್ಟು ಅಜ್ಞಾತವಾಗುಳಿದ ದೇವಾಲಯವೇನೂ ಇದಲ್ಲ, ಹಾಗಂತ ತೀರ ಪರಿಚಿತವೂ ಅಲ್ಲ. ಕಣ್ಣು ಹಾಯಿಸಿದಷ್ಟೂ ಕಾಡೇ ಕಾಣುವ ಎತ್ತರದಲ್ಲಿ ಪುಟ್ಟದೊಂದು ಗುಡಿ ಇಲ್ಲಿದೆ. ಉತ್ತರಕನ್ನಡದ ಹೊನ್ನಾರವರ ತಾಲೂಕಿನ ಕರಿಕಾನ ಪರಮೇಶ್ವರಿ ದೇವಾಲಯದ ಬಗ್ಗೆ ನಾನು ಹೇಳುತ್ತಿದ್ದೇನೆ. 




ಕರಿಕಾನು ಹೆಸರಿಗೆ ತಕ್ಕಂತೆ ಈಗೊಂದೈವತ್ತು ವರ್ಷಗಳ ಹಿಂದೆ ಕಪ್ಪಾದ ಕಾನನವೇ ಆಗಿದ್ದಿರಬೇಕು. ಇವತ್ತು ಆ ಗಾಢತೆ ಕ್ಷೀಣಿಸುತ್ತಿದ್ದರೂ ಬೆಟ್ಟ ಗಹನವಾಗಿಯೇ ಇದೆ. ಇಲ್ಲಿ ಮನುಷ್ಯನ ವಾಹನ ಸಾಗಿ ಹೋಗುವಷ್ಟು ಸರಿಯಾದ ದಾರಿಯ ನಿರ್ಮಾಣವಾಗಿದ್ದೇ ಇತ್ತೀಚಿನ ದಶಕಗಳಲ್ಲಿ. ಈಗಲೂ ಖಾಸಗಿ ವಾಹನ ಮಾಡಿಸಿಕೊಂಡೇ ಇಲ್ಲಿಗೆ ತಲುಪಬೇರುವುದು ಒಂದರ್ಥದಲ್ಲಿ ಒಳ್ಳೆಯದಾಗಿದೆ. ಸಾರಿಗೆ ವಾಹನಗಳ ಸಂಚಾರ ಈ ಕಾಡಿನಲ್ಲಿ ಇಲ್ಲ. ಹಿಂದೆಲ್ಲ ಇಲ್ಲಿಗೆ ನಡೆದೇ ಬರಬೇಕಿತ್ತಂತೆ. ಹಸಿರು ಹಬ್ಬಿದ ಬೆಟ್ಟವನ್ನು ಹತ್ತಿ ಹೋದರೆ ಕಬ್ಬಂಡೆಗಳ ಎಡೆಯಲ್ಲಿ ಸಣ್ಣದೊಂದು ದೇವಾಲಯವಿದೆ. ದುರ್ಗೆಯೆಂಬ ಶಕ್ತಿದೇವತೆಯ ದೇಗುಲವದು.
ಇಂಥ ಎತ್ತರದಲ್ಲಿ, ಕಪ್ಪು ಕಾನನದಲ್ಲಿ ಪ್ರತಿಷ್ಠಾಪನೆಗೊಂಡ ದೇವಾಲಯಗಳ ಪ್ರಭಾವಳಿಯೇ ಬೇರೆ. ಅಲ್ಲಿ ದೇವತೆಯೊಂದೇ ಅಲ್ಲದೆ ಪೂರ್ತಿ ಕಾನನವೂ, ಪರಿಸರವೂ ಆರಾಧಿಸಲ್ಪಡುತ್ತದೆ, ರಕ್ಷಿಸಲ್ಪಡುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮಲ್ಲಿದ್ದ ದೇವರ ಕಾಡುಗಳು, ನಾಗಬನಗಳು ಎಷ್ಟೆಲ್ಲ ಮಹತ್ವದವಾಗಿವೆಯೋ ನೋಡಿ. ಆ ವನಕ್ಕೆಲ್ಲ ಆಯಾ ದೇವತೆಯೇ ಅಧಿದೇವತೆಯಾಗಿರುತ್ತಾಳೆ, ಕಾಡು ನಾಶಕ್ಕೆ ತೊಡಗುವವ ದೈವಿಕ ಕಾರಣಗಳಿಂದಾಗಿ ಹಿಂದೇಟು ಹಾಕುತ್ತಾನೆ. ಇಂಥ ದೇವಾಲಯಗಳು ಅತಿಯಾಗಿ ಬೆಳೆಯುವುದೂ ಕಡಿಮೆ, ಯಾಕೆಂದರೆ ಎಲ್ಲರೂ ಹೋಗಿ ಎಡತಾಕಬಹುದಾದ ತಾಣದಲ್ಲಿ ಅವು ಇರುವುದಿಲ್ಲ. ಆ ಮಟ್ಟಿಗೆ ನೋಡಿದಾಗ ತಿರುಪತಿಯ ತಿಮ್ಮಪ್ಪ ಮತ್ತು ವೈಷ್ಣೋದೇವಿಯ ದೇವಾಲಯಗಳು ಆ ಪರಿ ಶ್ರೀಮಂತವಾದ್ದು ಅಚ್ಚರಿ ಹುಟ್ಟಿಸುವಂಥದು. ಹಾಗಿದ್ದೂ ಒಮ್ಮೆ ಸಾರ್ವಜನಿಕ ಸಂಪರ್ಕ ವಾಹನಗಳ ಸೌಲಭ್ಯ ಒದಗಿದ ಮೇಲೆ ದೇವಾಲಯಗಳ ಪ್ರಶಾಂತಿ ಕದಡುವುದು ನಿಜವೇ.
ಕರಿಕಾನ ಪರಮೇಶ್ವರಿಯಿರುವುದು ಪಶ್ಚಿಮ ಘಟ್ಟಗಳ ಸಾಲಿನಲ್ಲೇ ಆದ್ದರಿಂದ ಪಶ್ಚಿಮ ಸಮುದ್ರವೇನೂ ಅದರಿಂದ ತುಂಬ ದೂರಕ್ಕಿಲ್ಲ. ದೇವಾಲಯದ ಆವಾರದಿಂದ ನೋಡುವಾಗ (ಅದರಲ್ಲೂ ಮಳೆಗಾಲದಲ್ಲಿ) ದಿಗಂತದಂಚನ್ನು ತಲುಪುವ ಹಸಿರು ಮತ್ತು ಅದಕ್ಕೊಂದು ನೀಲಿಯ ಕೊನೆಗೆರೆಯೆಳೆದಂತೆ ಪಶ್ಚಿಮ ಸಮುದ್ರ. ಹಿರಿಯ, ಕಿರಿಯ, ಹಾಸಾದ, ಚೂಪಾದ, ಕಣಿವೆಗೆಡೆಕೊಟ್ಟ ಹಸಿರು ಗುಡ್ಡಗಳು. ಅವುಗಳ ಮೇಲೆ ಸಾಗುವ ಮೇಘಗಳಿಂದಾಗಿ ರಂಗದ ಮೇಲೆ ಬೆಳಕು ಬಿಟ್ಟಂತೆ ಕೆಲವೇ ಕಡೆ ಬೀಳುವ ಸೂರ್ಯರಶ್ಮಿ, ಚಲಿಸುವ ಮೋಡಗಳಿಂದಾಗಿ ಬೆಳಕೂ ಚಲಿಸಿದಂತೆ ಭಾಸವಾಗಿ ಪೂರ್ತಿ ಬೆಟ್ಟವನ್ನು ಅದ್ಯಾರೋ ಶೋ ಕೇಸ್ ಮಾಡಿದಂಥಾ ಅನುಭವ. ಕೆಲವೇ ಕ್ಷಣದಲ್ಲಿ ಮಳೆ ಬಂದು, ಗಾಳಿ ಬೀಸಿ, ಎಲ್ಲ ಬಿಳುಪಾಗಿ ಬೆಟ್ಟವೆಲ್ಲ ಮಾಯ- ಬರೀ ನೀರು. ಒಟ್ಟಾರೆಯಾಗಿ ಅದೊಂದು ರಮ್ಯಾನುಭವ.
ದೇವಾಲಯದ ಗರ್ಭಗುಡಿಯಲ್ಲಿ ದೇವರೆಂದರೆ ಅಲ್ಲೇನೂ ದುರ್ಗೆಯ ಮೂರ್ತಿಯನ್ನು ಕಡೆದು ಕೂರಿಸಲಾಗಿಲ್ಲ. ಅಲ್ಲೊಂದು ಕಲ್ಲಿಗೆ ಸೀರೆಯುಡಿಸಿ, ಮಾಂಗಲ್ಯಾಲಂಕಾರ ಮಾಡಲಾಗುತ್ತದೆ. ಇಪ್ಪತ್ತನೇ ಶತಮಾನದ ಮಧ್ಯ ಭಾಗದಲ್ಲಿ ಕರ್ನಾಟಕದಲ್ಲಿ ಅಧ್ಯಾತ್ಮದ ಪ್ರಕಾಶವಾಗಿದ್ದ ಶ್ರೀಧರ ಸ್ವಾಮಿಗಳವರು ಈ ಪ್ರದೇಶವನ್ನು ಗುರುತಿಸಿ ಅದಕ್ಕೊಂದು ಗುಡಿಯ ವ್ಯವಸ್ಥೆ ಮಾಡಿದರು ಅನ್ನುವ ಐತಿಹ್ಯ ದೇವಸ್ಥಾನದಲ್ಲಿ ಉಲ್ಲಿಖಿತವಾಗಿದೆ. ಆದರೆ ಈ ದೇವಿಯನ್ನೇ ಕುಲದೇವಿಯನ್ನಾಗಿ ಹೊಂದಿರುವ ಹೊನ್ನಾವರದ ಕೆಲವು ಬ್ರಾಹ್ಮಣ ಕುಟುಂಬಗಳ ಸ್ಮರಣೆಯ ಪ್ರಕಾರ ಇತಿಹಾಸವು ತುಂಬಾ ತುಂಬಾ ಹಿಂದಕ್ಕೆ ಹೋಗುತ್ತದೆ. ದೆವಾಲಯಕ್ಕಾಗಿ ದೊಡ್ಡ ಜಾಗವನ್ನೇನೂ ಖುಲ್ಲಾಪಡಿಸದೆ ಇರುವುದರಲ್ಲಿಯೇ ಅಲ್ಲಲ್ಲಿ ಸಂಚಾರಯೋಗ್ಯಗೊಳಿಸಿ ಅಗತ್ಯವಿದ್ದಲ್ಲಿ ಸಿಮೆಂಟು ಬಳಿದು ದೇವಾಲಯ ಪ್ರಾಂಗಣವನ್ನು ನಿರ್ಮಿಸಿದ್ದಾರೆ. ಹೆಚ್ಚಿನ ಮಾರ್ಪಾಡು ಮಾಡದೇ ಇರುವುದಕ್ಕೆ ಕಾರಣವೂ ಇದೆ. ಸುತ್ತಲಿನ ಕಲ್ಲುಗಳೆಲ್ಲ ದೇವಿಯೇ ಆಗಿದ್ದು ಅವಕ್ಕೆ ಧಕ್ಕೆಯಾದರೆ ಅದು ದೇವಿಯನ್ನೇ ನೋಯಿಸಿದಂತೆ ಅನ್ನುವ ನಂಬಿಕೆಯಿದೆ. ಎಷ್ಟೆಂದರೆ ಅಲ್ಲಿನ ಕಲ್ಲುಗಳಿಗೇನಾದರೂ ಮುಕ್ಕಾದರೆ, ಗಾಯವಾದರೆ ಅವುಗಳಿಂದ ರಕ್ತ ಒಸರುವುದೆಂಬ ನಂಬಿಕೆ ಇಂದಿಗೂ ನೆಲೆಯಾಗಿದೆ. ಹಾಗಾಗಿ ಕೆತ್ತುವ, ಕಡೆಯುವ, ಮಾರ್ಪಾಡು ಮಾಡುವ ಕೆಲಸ ಅಲ್ಲಿ ನಡೆದಿಲ್ಲ. ಶುದ್ಧ ತಣ್ಣೀರು, ಅರಣ್ಯದ ಮೂಲಕ ಹಾದುಬರುವ ತಂಗಾಳಿ, ಆ ಎತ್ತರ ಮತ್ತು ಅಲ್ಲಿನ ವಾತಾವರಣವೆಲ್ಲ ಸೇರಿ ಅನನ್ಯವಾದೊಂದು ದೈವಿಕ ವಾತಾವರಣವನ್ನು ನಿರ್ಮಿಸುತ್ತವೆ.

ಪ್ರಕೃತಿಗೆ ಹತ್ತಿರವಾಗುವ ಮನಸಿರುವವರಿಗೆ ಹೇಳಿ ಮಾಡಿಸಿದ ತಾಣ ಕರಿಕಾನಮ್ಮನ ಮನೆ. 

Monday, July 25, 2016

ಹಸಿರಿನ ಮತ್ತು ನೀರಿನ ದೇವಾಲಯಗಳು- 1

ಮಳೆಗಾಲದ ಶುರುವಾತಿನಲ್ಲಿ ಕಳೆದೆರಡು ಮೂರು ವರ್ಷಗಳಿಂದ ಕೆಲವು ವಿಶಿಷ್ಟ ಎನ್ನಿಸುವ ದೇವಾಲಯಗಳಿಗೆ ಭೇಟಿಕೊಡುವ ಸುಯೋಗ ಒದಗಿ ಬರುತ್ತಿದೆ. ಮಳೆಗಾಲದ ಶುರುವಾತು ಅನ್ನುವುದು ವಿಶೇಷ ಹಸಿರುತನವನ್ನು ತುಂಬಿಕೊಟ್ಟಿರುವಂಥ ದೇವಾಲಯಗಳವು. ಹಸಿರುತನವಿಲ್ಲದ್ದು ಮತ್ತು ನೀರಿನ ನೆಲೆಯಿಲ್ಲದ್ದು ಒಂದು ದೇವಾಲಯವಾಗಿ ಇದುವರೆಗೆ ನನ್ನನು ಸೆಳೆದಿಲ್ಲ.
ಹಾಗೆ ನೋಡಿದರೆ ನಮ್ಮ ಪ್ರಾಚೀನ ದೇವಾಲಯಗಳೆಲ್ಲ ನೆಲೆಯಾಗಿದ್ದು ನೀರ ತೀರದಲ್ಲಿ (ನದಿ ಅಥವಾ ಕಡಲಿನ ಅಂಚಲ್ಲಿ) ಗಾಢ ಕಾಡಿನ ಗುಡ್ಡದ ಮೇಲೆ ಅಥವಾ ಒಂದಲ್ಲೊಂದು ಬಗೆಯಲ್ಲಿ serene ಅನ್ನಿಸುವ ತಾಣದಲ್ಲಿಯೇ ಹೊರತು ಬೇರೆಡೆಗಲ್ಲ. ಹನ್ನೆರಡು ನೂರು ವರ್ಷಗಳ ಹಿಂದೆ ಸ್ಥಾಪಿತವಾದ ಶೃಂಗೇರಿ ಪೀಠದ ಪರಿಸರ ಆ ಕಾಲದಲ್ಲಿ ಹೇಗಿದ್ದಿರಬಹುದು, ತಿರುಪತಿ ಗಿರಿವಾಸನ ನೆಲೆ ಅದು ಕಟ್ಟಲ್ಪಟ್ಟ ಕಾಲಕ್ಕೆ (ಅಜಮಾಸು ಕ್ರಿ.ಶ.೩೦೦) ಹೇಗಿದ್ದೀತು, ಶೃಂಗೇರಿಯ ಸಮೀಪದ ಕಿಗ್ಗ ಋಷ್ಯ ಶೃಂಗೇಶ್ವರನ (ರಾಮಾಯಣದ ಕಾಲದ ಲಿಂಗವಂತೆ ಅಲ್ಲಿಯದು) ಆಸುಪಾಸಿನ ಕಾಡು ಅದೆಂಥದಿದ್ದೀತು ಅಂದಿನ ಕಾಲಕ್ಕೆ! ಯಾಕೀ ಪ್ರಶ್ನೆ ಅಂದರೆ ಇವತ್ತಿನ ದಿಕ್ಕೆಟ್ಟ ಆಧುನಿಕತೆಯ ನಡುವೆಯೂ ಅಲ್ಲಿನ ಪರಿಸರಗಳು ಕಾಡು ಕಾಡಾಗಿವೆ. ಅದೇ ಸಾವಿರ ವರ್ಷಗಳ ಹಿಂದೆ ಊಹೆಗೆ ನಿಲುಕದಷ್ಟು ಘನಾರಣ್ಯ ಅದಾಗಿದ್ದಿರಬಹುದಲ್ಲವೇ? ಅಯ್ಯಪ್ಪನ ನೆಲೆ, ಉತ್ತರದ ತುದಿಯ ವೈಷ್ಣೋದೇವಿ ಕೂಡ ಕಾಡಿನ ನಡುವೆಯೇ ಮೈದಳೆದ ದೇವಾಲಯಗಳು. ಹೆಸರಿಸ ಹೋದರೆ ಸಾವಿರ ಇವೆ. ಮೈಸೂರಿನ ಚಾಮುಂಡಿಯೂ ಬೆಟ್ಟದ ದೇವತೆಯೇ.
ಈ ದೇವಾಲಯಗಳನ್ನೆಲ್ಲ ಅಲ್ಲಿಯೇ ನಿರ್ಮಿಸುವುದಕ್ಕೆ ನಿರ್ಮಾತೃಗಳಿಗೂ, ಅಥವಾ ತಾವಾಗಿಯೇ (ಸ್ಥಳ ಪುರಾಣದ ಪ್ರಕಾರ) ಅಂಥಲ್ಲಿ ನೆಲೆಯಾಗುವುದಕ್ಕೆ ಆಯಾ ದೇವತೆಗಳಿಗೂ ಪರಿಸರದ ಸೆಳೆತವೆಂಬ ಬಲವಾದ ಕಾರಣ ಇದ್ದಿರಲೇ ಬೇಕು. ಕಲ್ಯಾಣಿಯಾಗಲೀ, ಪರಿಸರವಾಗಲೀ ಆಧುನಿಕ ದೇವಾಲಯಗಳಿಗೆ ಮುಖ್ಯವಾಗಿಲ್ಲ ಎನ್ನುವುದು ಖೇದಕರ ಬೆಳವಣಿಗೆ. ಆ ಮಟ್ಟಿಗೆ ದೇವಾಲಯವೆಂಬ ಬಲು ವಿಸ್ತಾರವಾದ ಪರಿಕಲ್ಪನೆಯನ್ನು (concept) ನಾವು ಕಳೆಗುಂದಿಸಿಕೊಂಡಿದ್ದೇವೆ. ಬರೀ ಪೂಜೆಗೆ ಸೀಮಿತವಾಗಿ ನಮ್ಮ ದೇವಾಲಯಗಳು ಇವತ್ತಿಗೆ ಪ್ರಚುರವಾಗುತ್ತಿವೆ. ದೇವಾಲಯಗಳಲ್ಲಿ ಪೂಜೆಯೆಂಬುದು ಕಲೆಯದ್ದೂ, ಸಂಗೀತದ್ದೂ, ಬದುಕಿನದ್ದೂ ಆಗಿರುತ್ತಿದ್ದ ಶ್ರೀಮಂತ ಕಾಲವನ್ನು ನಾವು ಕಳೆದುಕೊಂಡಿದ್ದೇವೆ.
ಅಪವಾದಕ್ಕೆಂಬಂತೆ ಪ್ರಕೃತಿಯನ್ನೇ ಪೂರ್ತಿಯಾಗಿ ದೇವಾಲಯ ಎಂದು ಪರಿಗಣಿಸಿರುವ ಉದಾಹರಣೆ ಇಂದಿಗೂ ನಮ್ಮಲ್ಲಿ ಇದೆಯೆಂಬುದು ಅಷ್ಟರಮಟ್ಟಿಗೆ ಸಮಾಧಾನ. ಮತ್ತು ತೀರಾ ಮೂರ್ತಿಪೂಜೆಯನ್ನಷ್ಟೇ ಅವಲಂಬಿಸಿರುವ ಭಕ್ತರು ಇಂಥಲ್ಲಿಗೆ ಕಡಿಮೆ ಸಂಖ್ಯೆಯಲ್ಲಿ ಭೇಟಿಕೊಡುತ್ತಾರೆನ್ನುವುದು ಇನ್ನೂ ಸಮಾಧಾನದ ವಿಷಯ. ಗರ್ಭಗುಡಿಯ ಮೂರ್ತಿಯನ್ನು ಮಾತ್ರವೇ ದೇವರೆಂದು ಪರಿಗಣಿಸುವ ಜನರಿಂದ ದೇವಾಲಯಗಳಿಗೆ ತೊಂದರೆ ಇದೆಯಷ್ಟೆ. ಈ ಬಗೆಯ ಭಕ್ತರು ಹೋಗಿ ತಲುಪದ ಎರಡು ದೇವಾಲಯಗಳಲ್ಲಿನ ನನ್ನ ಅನುಭವನನ್ನು ಹಂಚಿಕೊಳ್ಳುತ್ತೇನೆ.
ಮೊದಲನೆಯದು ಕಳೆದ ವರ್ಷ ಮಳೆಗಾಲದ ಆದಿಯಲ್ಲಿ ನಾನು ಭೇಟಿ ಕೊಟ್ಟಿದ್ದ ಭೀಮೇಶ್ವರ ದೇವಾಲಯ. ಶಿರಸಿಯಿಂದ ಜೋಗದ ಗುಂಡಿಯ ಮಾರ್ಗವಾಗಿ ಭಟ್ಕಳಕ್ಕೆ ಹೋಗುವ ಹಾದಿಯಲ್ಲೆಲ್ಲೋ ಒಳಗೆ (ಶಿವಮೊಗ್ಗ ಜಿಲ್ಲೆ) ಹೀಗೊಂದು ದೇವಾಲಯ ಇದೆಯೆಂದು ಯಾರಿಗೂ ಕಲ್ಪನೆಗೆಟುಕದು. ಡಾಂಬರು ರಸ್ತೆಯಿಂದ ಮೂರ್ನಾಲ್ಕು ಕಿಲೋಮೀಟರು ಮಣ್ ರಸ್ತೆಯಲ್ಲಿ ಕಾಡಿನೊಳಗೆ ನಡೆದ ಬಳಿಕವಷ್ಟೇ ಈ ದೇವಾಲಯ ಗೋಚರವಾಗುತ್ತದೆ. ಮಳೆಗಾಲವಾದರೆ ಹಾದಿಯಲ್ಲಿ ರಕ್ತ ಹೀರುವ ಇಂಬಳಗಳ ಸಾಥ್ ಕೂಡ ದೊರೆಯುತ್ತದೆ. ನಾಲ್ಕು ಮಳೆಯಾಯಿತೆಂದರೆ ನಡೆದಲ್ಲದೆ ಬೇರೆ ಬಗೆಯಲ್ಲಿ ಹೋಗಲಾಗದು. ಬೇಸಿಗೆಯಲ್ಲಿ ಎಸ್ ಯು ವಿ ವಾಹನಗಳು ಹೋಗಬಹುದೇನೋ. ದೇವಾಲಯದ ಬುಡ ತಲುಪಿದಂತೆಲ್ಲ ಕಲ್ಲಿನ ಮೆಟ್ಟಿಲ ಸಾಲು ಇದಿರಾಗುತ್ತದೆ; ಅದರ ಮೂಲಕ ಹತ್ತಿ ಹೋಗುವಾಗ ಬಲಗಡೆಯಲ್ಲಿ ಸದ್ದು ಮಾಡುತ್ತ ಇಳಿದು ಸಾಗುವ ಜಲಪಾತದ ನೀರು. ಇವತ್ತಿಗೂ ಊರು ಬೆಳೆದಿರದ ಕಾಡಲ್ಲಿ ನೆಲೆ ನಿಂತ ಭೀಮೇಶ್ವರನಿಗೆ ದಿನಾ ಪೂಜೆಯಿದೆಯೆನ್ನುವುದೇ ಅಚ್ಚರಿ. ಆ ಕೈಂಕರ್ಯಕ್ಕೆಂದೇ ಪುರೋಹಿತರೊಬ್ಬರು ತಮ್ಮ ಕೊನೆಗಾಲದ ಹಿಡಿ ಜೀವವನ್ನು ಹಿಡಿದುಕೊಂಡು ತಪಸ್ಸಿನಂಥಾ ಮೌನದ ಬದುಕನ್ನು ಬದುಕುತ್ತಿದ್ದಾರೆ. ಅಪರೂಪಕ್ಕೆ ಪ್ರವಾಸಿಗರು ಹೋದರೆ ಮಾತು, ಅದಿಲ್ಲದಿದ್ದರೆ ಅವರುಂಟು ಅವರ ಭೀಮೇಶ್ವರನುಂಟು. ಉಳಿದಂತೆ ಕಾನನದ ಜೀರುಂಡೆಗಳ ಜೀರ್ ಸದ್ದು ಮತ್ತು ದೇವಾಲಯದ ಪ್ರಾಂಗಣದಲ್ಲೇ ಎಂಬಂತೆ ಸುರಿದುಬಿದ್ದು ಶಬ್ದಮಾಡುವ ಜಲಪಾತವೊಂದು ಅವರ ಸಹವಾಸಕ್ಕೆಂಬಂತೆ ಅಲ್ಲಿವೆ. 

ನಡೆಯ ಆಯಾಸವನ್ನೆಲ್ಲ ಪರಿಹರಿಸುವಂಥಾ ರಮ್ಯ ದೇವಾಲಯ ಭೀಮೇಶ್ವರನದು. ರಮ್ಯವೆಂದರೆ ಭವ್ಯವಾಗಿಯೂ, ಬೃಹದಾಕಾರವಾಗಿಯೂ ಇದೆಯೆಂದಲ್ಲ. ಹಾಗೆ ನೋಡಿದರೆ ಅದು ಸುವ್ಯವಸ್ಥಿತವಾಗಿಯೂ ಇಲ್ಲ; ಈಗಲೋ ಆಗಲೋ ನೆಲಕ್ಕೊರಗಿಬಿಡಬಹುದೆಂಬಂತಿದೆ. ಆದರೆ ಅದು ನೀರು ಮತ್ತು ಹಸಿರಿನ ಕಾರಣಕ್ಕೆ ತನ್ನೊಳಗೆ ನಿರ್ಮಿಸಿಟ್ಟುಕೊಂಡ ಚೈತನ್ಯಯುತ ಪರಿಸರವಿದೆಯಲ್ಲ ಅದು ಅತುಲ್ಯವಾದ್ದು. ಪಿರಮಿಡ್ ಆಕೃತಿಯ ಛಾವಣಿಯೂ ಸೇರಿದಂತೆ ಪೂರ್ಣ ದೇವಾಲಯ ನಿರ್ಮಾಣವಾಗಿದ್ದೇ ಕಲ್ಲಿನಲ್ಲಿ. ಕಂಬಗಳು, ಬೋಧಿಗೆಳು, ತೊಲೆಗಳು, ಛಾವಣಿಯ ಹಾಸು, ಪೀಠಗಳು- ಎಲ್ಲವೂ ಕಲ್ ಕಲ್ಲು. ನಾ ಅಲ್ಲಿಗೆ ಭೇಟಿ ಕೊಟ್ಟಿದ್ದ ಮಳೆಗಾಲದಲ್ಲಿ ಎಲ್ಲ ಸ್ತಂಭಗಳಿಗೂ, ನಲ ಹಾಸಿಗೂ, ಗೋಡೆಗಳಿಗೂ ಮಳೆಯೆಂಬುದು ಅಮ್ಮನಂತೆ ಸ್ನಾನ ಮಾಡಿಸುತ್ತಿತ್ತು. ಅದ್ಯಾವುದೋ ತಿಳಿಯದಷ್ಟು ಹಳೆಯ ಕಾಲದ ಕಲ್ಲಿನ ಛಾವಣಿಯು ಹೆಚ್ಚಿಗೆ ಹಟ ಮಾಡದೆ ನೀರನ್ನೆಲ್ಲ ಒಳಗೆ ಬಿಟ್ಟುಕೊಡುತ್ತಿತ್ತು. ಪಕ್ಕದಲ್ಲೇ ಧುಮುಕುವ ಜಲಪಾತದ ಎರಚು ಹನಿ, ಅದರ ತುಂಟ ಕವಲು ಧಾರೆಗಳು ದೇವಾಲಯದ ಮುಖ್ಯಭಾಗದಮೇಲೂ ಎರಗುತ್ತಿದ್ದವು. ಇಡೀ ದೇವಾಲಯದಲ್ಲಿ ಬಟ್ಟೆ ಬದಲಾಯಿಸುವುದಕ್ಕೂ ಒಣ ಜಾಗವನ್ನು ಹುಡುಕಲಾಗದ ಸ್ಥಿತಿ, ದೇವಾಲಯದ ಆವಾರದಲ್ಲಿ ಕಾಲಿಟ್ಟಲ್ಲೆಲ್ಲ ಜಾರುವಷ್ಟು ಹಾವಸೆ. ಇವೆಲ್ಲ ಸೇರಿಯೇ ಒಂದು ಬಗೆಯ ಖುಶಿಯನ್ನು ತುಂಬುತ್ತವೆ. 

ನಿರಂತರ ನೀರಿನ ದಾಳಿಗೆ ಸಿಕ್ಕು ಕೆಲವು ಕಲ್ಲಿನ ಕಂಬಗಳೂ ಮರದ ಕಂಬದಂತೆ ಗೆದ್ದಿಲು ಹಿಡಿದು ಹಾಳಾದವರಂತೆ ಕೊರೆದು ಹೋಗಿವೆ. ಆ ಜಲಪಾತದ ನೀರು ಎಂದೆಂದಿಗೂ ಬತ್ತಿದ ದಾಖಲೆಯಿಲ್ಲ ಎಂಬುದು ಅರ್ಚಕರ ಮಾತು. ಹಾಗಾಗಿ ಕಂಬಗಳಿಗೆ ನೀರಿಲ್ಲದ ದಿನವೇ ಇಲ್ಲ. ಹಾಗಾಗಿಯೇ ಕಲ್ಲಿನ ಕಂಭದ ಮೇಲೆಲ್ಲ ಹಸಿರು ಪಾಚಿಯ ಥರದ ಜೀವ ಅಂಕುರಿಸಿದೆ; ಕಲ್ಲಿಗೂ ಜೀವ ಬಂದಿದೆಯೆಂಬಂತೆ. ದೇವಾಲಕ್ಕೆ ಬಳಸಿಕೊಂಡ ಕಲ್ಲುಗಳಲ್ಲದೆ ಆ ಪರಿಸರದಲ್ಲಿರುವ ಇತರ ಬಂಡೆಗಳೂ ಮಳೆಯ ಜೊತೆ ಸುಖಿಸಿ ತಮ್ಮ ಮೈ ತುಂಬ ಹಸಿರಿನ ತುರಾಯಿಗಳನ್ನು ಹುಟ್ಟಿಸಿಕೊಂಡಿದ್ದವು. ಆ ತುರಾಯಿಗಳ ತುದಿಯಲ್ಲಿ ನಿಂತ ಬಿಂದು ನೀರು. ಒಟ್ಟಿನಲ್ಲಿ ಜೀವ ಮತ್ತು ಅಜೀವ ಎಂಬುದನ್ನು ವಿಂಗಡಿಸಿ ನೋಡಲಾಗದ, ಅವೆರಡಕ್ಕೂ ವಿಭಿನ್ನ ವಿವರಣೆ ಕೊಡಲಾಗದ ಅದ್ವೈತದ ಪರಮಾವಸ್ಥೆಯೊಂದು ಇಲ್ಲಿ ಸಾಕ್ಷಾತ್ತಾಗಿದೆಯೋ ಅನ್ನುವಂತಿತ್ತು.  

ನೀರಿಗೂ ಶಿವನಿಗೂ ಅವಿನಾಭಾವ ನಂಟು. ಅವನಿರುವುದೇ ಕೈಲಾಸಪರ್ಪತವೆಂಬ ನೀರ ನೆಲೆಯಲ್ಲಿ, ಗಂಗೆಯೆಂಬ ನೀರಿವಳಿರುವುದೂ ಅವನ ತಲೆಯಲ್ಲಿ. ಅವನಿದ್ದಲ್ಲೆಲ್ಲ ಅಭಿಷೇಕಕ್ಕೆ ಎಲ್ಲಿಲ್ಲದ  ಪ್ರಾಧಾನ್ಯ. ಶಿವಾಲಯಗಳಲ್ಲಿ ಶಿವಲಿಂಗದ ಮೇಲೆ ನಿರಂತರ ಬಿಂದು ನೀರು ಬೀಳುವಂತೆ ವ್ಯವಸ್ಥೆ ಮಾಡಿರುತ್ತಾರೆ. ಪ್ರಾಕೃತಿಕವಾಗಿಯೇ ಅಂಥ ವ್ಯವಸ್ಥೆ ಇರುವ ಶಿವಾಲಯಗಳೂ ನಮ್ಮಲ್ಲಿವೆ. ಯಾಣದ ಶಿವಾಲಯ ಇದಕ್ಕೆ ಉದಾಹರಣೆ. ಕಲ್ಲಿನಿಂದ ನೀರೊಸರುವ ತಾಣ ಅದು. ಭೀಮೇಶ್ವರ ಕೂಡ ಅದೇ ಬಗೆಯ ತಾಣವೆಂದರೆ ತಪ್ಪಾಗಲಾರದು. ಬಾಹುಬಲಿ ಚಿತ್ರದ ನಾಯಕ ತನ್ನ ಅಮ್ಮನ ಶಿವಾರ್ಚನೆಯ ಹೊತ್ತಿನಲ್ಲಿ ನೀರು ಹೊತ್ತು ತರುವ ಆಯಾಸ ಆಕೆಗೆ ಇರದಿರಲೆಂದು ಶಿವಲಿಂಗವನ್ನೇ ಜಲಪಾತದ ಅಡಿಯಲ್ಲಿ ಇರಿಸುತ್ತಾನಲ್ಲ, ಅದು ಇಲ್ಲಿ ವಾಸ್ತವವಾದಂತಿದೆ.
ಪುಣ್ಯವಶಾತ್ ಭೀಮೇಶ್ವರದಲ್ಲಿ ಗರ್ಭಗುಡಿಯ ಒಳಗೂ ಹೋಗುವ ಅವಕಾಶ ನನಗಾಗಿತ್ತು. ಗರ್ಭಗುಡಿಯೊಳಗೆ ಅರ್ಚಕರು ಹೊತ್ತಿಸಿಟ್ಟ ತೈಲದೀಪವನ್ನು ಹೊರತುಪಡಿಸಿದರೆ ಬೇರೆ ಬೆಳಕಿನ ಮೂಲ ಇರಲಿಲ್ಲ. ಲಿಂಗವೆಲ್ಲಿದೆ, ದ್ವಾರವೆಲ್ಲಿದೆ, ಗೋಡೆಯೆಲ್ಲಿದೆಯೆಂದೂ ಕಾಣದಷ್ಟು ಕತ್ತಲು. ತಮ್ಮ ಮಿದುಳಲ್ಲಿ ಅಚ್ಚಾದ ನಕ್ಷೆಯ ಆಧಾರದಲ್ಲೇ ಅರ್ಚಕರು ಗರ್ಭಗುಡಿಯೊಳಗೆ ಸಂಚರಿಸುತ್ತಾರೆ ಅನ್ನಿಸಿತು ನನಗೆ. ನಾನಂತೂ ಕೈಲಿದ್ದ ಮೊಬೈಲಿನ ಟಾರ್ಚ್ ಬೆಳಕಲ್ಲೇ ಗರ್ಭಗುಡಿಯ ಒಳಾಂಗಣವನ್ನೆಲ್ಲ ನೋಡಿದ್ದು. ಬಲಗಡೆ ಗಣಪತಿಯ ಮತ್ತು ಎಡಗಡೆ ದುರ್ಗಾಪರಮೇಶ್ವರಿಯ ಸುಂದರ ಕೆತ್ತನೆಯ ಮೂರ್ತಿಗಳು, ನಡುವೆ ಗರ್ಭ ಗುಡಿಯಲ್ಲಿ ಕತ್ತಲೆಯ ತಂಪಿನಲ್ಲಿ ಭೀಮೇಶ್ವರ.  ಅಲ್ಲಿಯೂ ನೆಲಕ್ಕೆ, ಗೋಡೆಗೆ ಬಾಗಿಲ ಪಟ್ಟಿಗೆಲ್ಲ  ನೀರಿನ ಪಸೆ, ಎಲ್ಲ ಹಸಿ ಹಸಿ.  ’ಭಟ್ಟರೇ ಈ ಕತ್ತಲಲ್ಲಿ ಕರ್ಪೂರಕ್ಕೆಂದು ಕೈಯಿಟ್ಟಲ್ಲಿ ಹಾವು ಕೈಗೆ ಸಿಕ್ಕರೇನು ಮಾಡ್ತೀರಿ?’ ಅನ್ನುವ ನನ್ನ ಪ್ರಶ್ನಗೆ ’ಭೀಮೇಶ್ವರ ನನ್ನ ಕಾಯ್ತಾನೆ, ಇದುವರೆಗೆ ಅಂಥದೆಲ್ಲ ಆಗಿಲ್ಲ, ನನ್ನ ಕೊನೆಯ ಉಸಿರಿನವರೆಗೂ ಭೀಮೇಶ್ವರನಿಗೆ ಅರ್ಚನೆ ತಪ್ಪಿಸದಿರುವುದೇ ನನ್ನ ಬದುಕಿನ ಧ್ಯೇಯ’ ಅನ್ನುವ ಧಾಟಿಯಲ್ಲಿ ಉತ್ತರ ಕೊಟ್ಟರು. ಆ ಹಿರಿಯರ ಶ್ರದ್ಧೆಗೆ ನಮೋ ಅಂದೆ. ’ಶ್ರದ್ಧಾ ವಿಶ್ವಮಿದಂ ಜಗತ್’ ಅಂತ ವೇದವೂ ಶ್ರದ್ಧೆಯನ್ನು ಸ್ಮರಿಸುತ್ತದಷ್ಟೆ.


ಇಂಥದೊಂದು ದೇವಾಲಯವನ್ನು ಇಷ್ಟು ಸುಂದರವಾಗಿ ಇಂಥಾ ಕಾಡಲ್ಲಿ ಯಾರು ಯಾಕಾಗಿ ಯಾವ ಕಾಲದಲ್ಲಿ ಕಟ್ಟಿದರು? ಅದರ ಐತಿಹ್ಯವೇನು- ಯಾವುದೂ ಸ್ಪಷ್ಟವಿಲ್ಲ. ಅರ್ಚಕರ ಪ್ರಕಾರ ಪಾಂಡವರು ವನವಾಸದ ಕಾಲದಲ್ಲಿ ಇಲ್ಲಿಗೆ ಬಂದಿದ್ದಾಗ ಭೀಮ ಈ ಲಿಂಗವನ್ನು ಸ್ಥಾಪಿಸಿ ಪೂಜಿಸಿದ್ದನಂತೆ. ಆ ಜಲಪಾತ ಅರ್ಜುನನ ಬಾಣದ ಹೊಡೆತಕ್ಕೆ ಕಣ್ಣೊಡೆದ ನೀರ ಸೆಲೆಯಂತೆ. ಈ ಬಗೆಯ ಕಥೆಗಳು ಭಾರತದ ಯಾವುದೇ ಹಳ್ಳಿಯಲ್ಲೂ ಧಾರಾಳ ಸಿಗುತ್ತವೆ. ಆದರೆ ಕಲ್ಲಿನ ದೇವಾಲಯವನ್ನು ಬೆಟ್ಟದ ಮಧ್ಯೆ ಕಟ್ಟಿದವರಾರು ಎಂಬ ವಿಷಯದಲ್ಲಿ ಇತಿಹಾಸ ಸುಮ್ಮನಾಗಿದೆ. ಇವತ್ತಿಗೂ ಉಳಿದುಕೊಂಡರು ಸೌಂದರ್ಯವನ್ನು, ಜೀವಂತ ದೇವಾಲಯವನ್ನು ಕಾಣುವ ಭಾಗ್ಯ ಒದಗಿದ್ದಕ್ಕೆ ಸುಮ್ಮನಾಗಬೇಕೇನೋ. ನಿಧಾನಕ್ಕೆ ಪ್ರಚಾರ ಪಡೆಯುತ್ತಿರುವ ಭೀಮೇಶ್ವರಕ್ಕೆ ಈಗೀಗ ಜನ ಬರುತ್ತಿದ್ದಾರೆ. ಅಲ್ಲಿಯ ಪರಿಸರದ ಶಾಂತಿಯನ್ನು ಕಲಕುವ ಕೆಲಸ ಇನ್ನೇನು ಶುರುವಾಗಬಹುದೆಂಬ ಭಯ ಇದ್ದೇ ಇದೆ. ಆದರೂ ಕಲ್ಲಿನ ಪದರಗಳಲ್ಲಿ ನಿರ್ಭಯವಾಗಿ ತೂಗಿಕೊಂಡಿರುವ ಹೆಜ್ಜೇನುಗಳು, ಬೆಟ್ಟದ ಹಾವುಗಳು, ಮಣ್ಣರಸ್ತೆ ಮತ್ತು ಜಾರುವ ನೆಲ- ಎಲ್ಲಾ ಸೇರಿ ಭೀಮೇಶ್ವರನ ಶಾಂತಿಯನ್ನು ಕಾಪಾಡಿಯಾವೆಂಬ ಭರವಸೆಯಿದೆ.  

Thursday, July 21, 2016

ಯುವ ಭಗೀರಥರಿವರು

ಮಳೆ ಇಲ್ಲ, ಬೆಳೆ ಕಡಿಮೆ, ಆಹಾರ ವಸ್ತುಗಳ ಬೆಲೆ ಏರಿಕೆ- ಸಾರ್ವಜನಿಕರಿಂದ ಸರ್ಕಾರಕ್ಕೆ ಬೈಗಳು, ಶಾಪ.
ಮಳೆ ಸರಿಯಾಗಿ ಆಗಿಲ್ಲ, ಬೇಸಿಗೆ, ಕುಡಿಯಲು ನೀರಿಲ್ಲ -ಜನರಾಶಿಯಿಂದ ಸರಕಾರಕ್ಕೆ ಮಂಗಳಾರತಿ.
ಹಳೆಯ ಕೆರೆಗಳ ಒತ್ತುವರಿ, ಅಕ್ರಮ- ಮಾಧ್ಯಮ ಮತ್ತು ಸಾರ್ವಜನಿಕರಿಂದ ಸರಕಾರಕ್ಕೆ ಛೀ ಮಾರಿ.
ಕುಡಿಯುವ ನೀರಿಗಾಗಿ ಮಹಿಳೆಯರಿಂದ ರಸ್ತೆ ತಡೆ, ಧರಣಿ, ಸತ್ಯಾಗ್ರಹ- ಬೇಕೇ ಬೇಕು ಕೂಗು.

ಇಂಥದ್ದು ತೀರಾ ಸಾಮಾನ್ಯ ಸುದ್ದಿಯಲ್ಲವೆ? ಬೈಯುವ, ತೆಗಳುವ, ಕಾಲೆಳೆಯುವ, ಆಡಿಕೊಂಡು ನಗುವ ಜನ ಬೇಕಾದಷ್ಟಿದ್ದಾರೆ. ಆದರೆ ಸಮಸ್ಯೆಯ ಪರಿಹಾರಕ್ಕೆ ತಾವೇ ಇಳಿದು ಕಾಯಕವೆಂಬ ತಪಸ್ಸಿನಲ್ಲಿ ತೊಡಗಿದವರು ತೀರಾ ಕಡಿಮೆ. ಸಮಸ್ಯೆಯೊಂದನ್ನು ಸಮಸ್ಯೆಯಾಗಿಯೇ ಇರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಾಯಕರ ಕಾಲದಲ್ಲಿ ನಾವಿದ್ದೇವೆ. ಅದರಲ್ಲಿ ಮುಖ್ಯವಾದ ಮತ್ತು ಚಿರಂತನವಾದ ಸಮಸ್ಯೆಯೆಂದರೆ ಅದು ನೀರಿನ ಕುರಿತಾದ್ದು. ಸಮಸ್ಯೆ ಎಷ್ಟು ಭೀಕರವಾಗಿದೆಯೆಂದರೆ ಇನ್ನೊಂದು ಮಹಾಯುದ್ಧ ಈ ಭೂಮಿಯಮೇಲೆ ನಡೆದರೆ ಅದು ನೀರಿಗಾಗಿ ಎಂಬಲ್ಲಿಯವರೆಗೆ ತಜ್ಞರು ತರ್ಕಿಸಿದ್ದಾರೆ. ಅಂಥದರಲ್ಲಿ ನಮ್ಮ ಜಲಮೂಲಗಳ ಬಗ್ಗೆ ಎಚ್ಚರ ತುಂಬುವ ಮತ್ತು ಅವುಗಳ ಉಳಿಕೆಗಾಗಿ ಶ್ರಮಿಸುತ್ತಿರುವ ಬೆರಳೆಣಿಕೆಯಷ್ಟು ಜನಗಳೂ ಮತ್ತು ಕೆಲವೇ ಕೆಲವು ಸಂಘಟನೆಗಳೂ ನಮ್ಮ ನಡುವೆ ಇವೆ ಎಂಬುದು ತುಂಬಾ ಧನಾತ್ಮಕವಾದ ಸಂಗತಿ.

೨೦೧೪ ರ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಭಾರತದ ಪ್ರಧಾನಿಯನ್ನಾಗಿ ನರೇಂದ್ರಮೋದಿಯವರನ್ನೇ ಚುನಾಯಿಸುತ್ತೇವೆಂಬ ಜಾಗ್ರತಿಯನ್ನು ಸಮಾಜದ ಮಧ್ಯೆ ಮೂಡಿಸಲು ಹುಟ್ಟಿಕೊಂಡ ಯುವ ಸೇನೆ ನಮೋ ಬ್ರಿಗೇಡ್. ಆ ಕಾಲದಲ್ಲಿ ಫೇಸ್ ಬುಕ್ ಎನ್ನುವುದು ಏನೆಲ್ಲ ಕ್ರಾಂತಿಯನ್ನು ಭಾರತದಾದ್ಯಂತ ತಂದಿತ್ತೆಂಬುದನ್ನು ನಾವೆಲ್ಲ ಕಂಡಿದ್ದೇವೆ. ನಮೋ ಬ್ರಿಗೇಡ್ ನನಗೆ ಪರಿಚಯವಾದ್ದೂ ಆ ಮೂಲಕವೇ. ನೋಡ ನೋಡುತ್ತ ನಮೋ ಬ್ರಿಗೇಡ್ ಅಕ್ಷರಶಃ ಹಳ್ಳಿ ಹಳ್ಳಿಯನ್ನೂ ತಲುಪಿತು. ಕರ್ನಾಟಕದಲ್ಲಿ ಆ ಹೊತ್ತಿನಲ್ಲಿ ನಮೋ ಬ್ರಿಗೇಡ್ ಹೆಸರು ಕೇಳದವರು ಇರಲಿಕ್ಕಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಬ್ರಿಗೇಡ್ ಕೂಡ ರಾಜಕೀಯ ಮಾಡುತ್ತ ಕುಳಿತುಕೊಳ್ಳುತ್ತದೆಂದೇ ಹಲವರ ಊಹೆಯಾಗಿತ್ತು. ಆದರೆ ನಡೆದಿದ್ದೇ ಬೇರೆ; ಮೋದಿ ಪ್ರಧಾನಿಯಾಗುತ್ತಿದ್ದಂತೆ ’ಮಿಷನ್ ಅಕಂಪ್ಲಿಷ್ಡ್’ ಅಂತ ಘೋಷಿಸಿ ನಮೋ ಬ್ರಿಗೇಡ್ ಅವತಾರ ಮುಗಿಸಿಕೊಂಡಿತು. ಆದರೆ ಅಷ್ಟಕ್ಕೇ ಸುಮ್ಮನಾಗದೆ ಭಾರತ ಕಟ್ಟುವ ಕನಸಿಗೆ ನೀರೆರೆಯಲೆಂದೇ ಯುವಾ ಬ್ರಿಗೇಡ್ ಅಂತ ಶುರುವಾಯ್ತು.

ಕರ್ನಾಟಕದ ಧನಾತ್ಮಕ ಯುವ ಪಡೆಗೆ ಯುವಾ ಬ್ರಿಗೇಡ್ ಅದ್ಭುತವಾದ ವೇದಿಕೆಯಾಯ್ತು. ವೇದಿಕೆಯೆಂದರೆ ಮತ್ತೆ ವೀಕೆಂಡ್ ಗಳಲ್ಲಿ ಚಾಯ್ ಉಪ್ಪಿಟ್ಟು ಸೇವಿಸಿ ಎದೆಯೊಡೆಯುವ ಕವಿತೆಗಳನ್ನೋದುವ ವೇದಿಕೆಯಲ್ಲ! ಅದಕ್ಕೆಂದೇ ಸಾವಿರಾರು ಬಳಗಗಳಿವೆ. ಕೆಂಪ್  ಕೆಂಪು ವಿಚಾರಗಳು ಮತ್ತು ಬಡವನ ಕಣ್ಣೀರಿನ ಕವಿತೆಯೋದುತ್ತ ಅವು ಮರಿ ಕ್ರಾಂತಿಕಾರರನ್ನು ತಯಾರಿಸುತ್ತವೆ. ಬ್ರಿಗೇಡ್ ಒದಗಿಸಿದ್ದು ಅಂಥ ವೇದಿಕೆಯನ್ನಲ್ಲವೇ ಅಲ್ಲ.  ಕರ್ನಾಟಕದಲ್ಲಿ ಕಣ್ಮರೆಯಾಗುತ್ತಿರುವ ದೊಡ್ಡ ಸಂಖ್ಯೆಯ ಕಲ್ಯಾಣಿಗಳಿವೆ, ಅವನ್ನೆಲ್ಲ ನಾವ್ ನಾವೇ ಪುನರುದ್ಧಾರ ಮಾಡೋಣ, ನೀರು ನಿಲ್ಲಿಸೋಣ ಬನ್ನಿ ಅಂತ ಕರೆಯಿತು. ಅದೊಂದು ಸಂಕಲ್ಪಕ್ಕೆ ಕೈಜೋಡಿಸಿ ಅಸ್ತು ಎಂದು ಹೊರಟ ಯುವಕರ ಪಡೆ ಇವತ್ತಿಗೆ ಬಹುತೇಕ ಎಲ್ಲ ಊರುಗಳಲ್ಲಿದೆ. ಎಲ್ಲೋ ದಾರಿ ಬಂದ್ ಮಾಡಿ ಹೋರಾಟ ಮಾಡುತ್ತ, ದೊಂಬಿ ಗಲಾಟೆಗೆ ತುಪ್ಪ ಸುರಿಯುತ್ತ, ಯಾರದ್ದೋ ಪ್ರತಿಕೃತಿ ಸುಟ್ಟು ತಿಥಿ ಮಾಡುತ್ತ, ಕೊನೆಗೆ ಬಂದು ಫೇಸ್ ಬುಕ್ ನಲ್ಲಿ ಕ್ರಾಂತಿಗೀತೆ ಬರೆಯುತ್ತ, ನಿನ್ನೆ ತಿಂದ ಕಬಾಬ್, ಮೊನ್ನೆ ಬರೆದ ಪೋಲಿ ಕವಿತೆ ಅಂತೆಲ್ಲ ಪುಂಗಿಯೂದುತ್ತ ಕೂರಲೇ ಇಲ್ಲ ಬ್ರಿಗೇಡ್. ತಣ್ಣಗೆ ತನ್ನ ಕೆಲಸ ಶುರುಮಾಡಿತು.

ಆ ಸಂಕಲ್ಪದ ಸಿದ್ಧಿಯೆಂಬಂತೆ ಇವತ್ತಿಗೆ ಕಣ್ಮರೆಯಾಗಿದ್ದ, ಕಾಯಕಲ್ಪವಿಲ್ಲದೆ ಬಡವಾಗಿದ್ದ, ಹೂಳು ತುಂಬಿ ಸತ್ತೋಗಿದ್ದ ಎಷ್ಟೋ ಕಲ್ಯಾಣಿಗಳು ಶುದ್ಧವಾಗಿವೆ, ತಣ್ಣೀರಿನ ಕೊಳಗಳಾಗಿವೆ. ಬಡವಾಗಿದ್ದ ಬಯಲಲ್ಲಿ ಹಸಿಗಿಡಗಳು ಜೀವ ಹಿಡಿದುಕೊಂಡಿವೆ. ಇದಲ್ಲವೆ ತಪಸ್ಸೆಂದರೆ?

ಕಲ್ಯಾಣ ಕಾರ್ಯಕ್ರಮಕ್ಕೆ ಯಾರು ಬೇಕಾದರೂ ಹಸ್ತ ಜೋಡಿಸಬಹುದು, ಅದಕ್ಕೆ ಮೀಸಲಾತಿಯ ಪರಿಧಿ ಇಲ್ಲ. ಹೆಸರಿಗಾಗಿ ಬರುವವರಿಗೆ ಈ ಕಾರ್ಯಗಳೆಲ್ಲ ಆಪ್ತವೆನ್ನಿಸದೇ ಇರಬಹುದು. ಬ್ರಿಗೇಡ್ ಹುಡುಗರಲ್ಲಿ ನಾನು ಹೆಸರು ಹೆಚ್ಚಿಸಿಕೊಳ್ಳುವ ಪ್ರವೃತ್ತಿಯನ್ನು ಕಂಡಿಲ್ಲ. ಅಥವಾ ಕಲ್ಯಾಣಿ ಶುದ್ಧಿಯ ಸಾಹಸಗಳನ್ನು ಬ್ರಿಗೇಡ್ ಹುಡುಗರು ಭಯಂಕರವಾಗಿ ಬರೆದುಕೊಂಡಿದ್ದಿಲ್ಲ. ನೆಲದ ಸೇವೆ ಮಾಡಬೇಕೆಂಬ ಮನಸಿದ್ದವನಿಗೆ ಕಾಯಕವು ಕೊಡುವ ಆತ್ಮ ತೃಪ್ತಿಯು ಎಲ್ಲದಕ್ಕಿಂತ ದೊಡ್ಡದಿರುತ್ತದೆ, ಹೆಸರಿನ ಗುಂಗು ಅದರೆದುರಿಗೆ ಏನೇನೂ ಅಲ್ಲ.  

ನಾವಿಂತಿಷ್ಟು ಕಲ್ಯಾಣಿಗಳನ್ನು ಸರಿಮಾಡಿದೆವು ಅಂತ ಬ್ರಿಗೇಡ್ ಇವತ್ತಿಗೂ ಬ್ಯಾನರ್ ಹಾಕಿದ್ದನ್ನು ನಾನು ಕಂಡಿಲ್ಲ ಎಲ್ಲೂ. ಚಕ್ರವರ್ತಿ ಅಣ್ಣ ಆಗೀಗ ತಮ್ಮ ಹುಡುಗರು ಹೀಗೊಂದು ಕಲ್ಯಾಣಿಯನ್ನು ತಿಳಿಗೊಳಿಸಿದರು ಅಂತ ತಮ್ಮ ಗೋಡೆಯ ಮೇಲೆ ಒಂದು ಸಾಲಿನ ಒಕ್ಕಣೆ ಬರೆದು ಕಲ್ಯಾಣಿಯ ಚಿತ್ರ ಪ್ರಕಟಿಸುತ್ತಾರೆ; ಮುಗಿಯಿತಷ್ಟೆ. ಅಥವಾ ಮುಂದಿನವಾರ ಹೀಗೊಂದು ಕಲ್ಯಾಣಿ ಇಂಥಲ್ಲಿ ತಿಳಿಗೊಳಿಸೋದಕ್ಕಿದೆ, ನಮ್ಮನ್ನು ಸೇರಿಕೊಳ್ಳುವವರು ಬರಬಹುದು ಅಂತ ಅಂಚೆ ಕಾರ್ಡಲ್ಲಿ ಹಸ್ತಾಕ್ಷರದಲ್ಲಿ ಬರೆದು  ತಮ್ಮ ವಾಲ್ ಗೆ ಅಂಟಿಸಿಕೊಳ್ಳುತ್ತಾರೆ. ನೀರಿಗಾಗಿ ಮಾಡುವ ಮಹತ್ತರ ತಪಸ್ಸೊಂದು ಹೆಚ್ಚಿಗೆ ಸದ್ದೇ ಮಾಡದೆ ಹಾಗೆ ಸಂಪನ್ನವಾಗುತ್ತದೆ. ನಿರಾಡಂಬರವಾಗಿದ್ದುಕೊಂಡು ದೇಶದ ನೆಲದ ಕುರಿತಾಗಿ ಶ್ರಮ, ಧನ, ಸಮಯ ಮೀಸಲಿಡುವ ಇಂಥ ಸಂಘಟನೆಗಳು, ಮತ್ತು ವ್ಯಕ್ತಿಗಳೆಡೆಗೆ ಎದೆತುಂಬಿದ ಗೌರವ ನನ್ನಲ್ಲಿದೆ.

ವೈಯಕ್ತಿಕವಾಗಿ  ನಾನು ಯುವಾ ಬ್ರಿಗೇಡ್ ಜೊತೆ ಕೆಲಸ ಮಾಡಿಲ್ಲ, ಆದರೆ ಅದರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದೊಂದನ್ನೂ ಗಮನಿಸಿದ್ದೇನೆ. ಆ ಹುಡುಗರು ರಕ್ತಬಸಿದು (ನಿಜಕ್ಕೂ ತಮ್ಮ  ಬೆವರು ಮತ್ತು ರಕ್ತ ಚೆಲ್ಲಿ) ಕೆರೆ ಶುದ್ಧಿ ಮಾಡಿ ಕೊನೆಯಲ್ಲಿ ಬರೆದುಕೊಳ್ಳುವ ಒಂದೇ ಸಾಲಿನ ತಿಳಿನೀರಿನಂಥಾ ಸಾಲು ಓದಿ ನಾನೇ ಹಸಿಗಣ್ಣಾಗಿದ್ದೇನೆ. ನನ್ನೂರಿನ ಸುತ್ತಮುತ್ತ ಅಂಥಾ ಪುನರುದ್ಧಾರ ಬೇಕಿರುವ ಕಲ್ಯಾಣಿ ಇದೆಯೇ ಎಂದು ಹುಡುಕಿದ್ದೇನೆ. ಸಧ್ಯಕ್ಕೆ ನಮ್ಮಲ್ಲಿನ ಕಲ್ಯಾಣಿಗಳು ಮಾಸಿಲ್ಲ. ಇನ್ನೆಲ್ಲೋ ಮಾಡುವ ಕಲ್ಯಾಣ ಕಾರ್ಯಕ್ರಮದಲ್ಲಿ ಒಮ್ಮೆಯಾದರೂ ಭಾಗವಹಿಸುವ ಸಂಕಲ್ಪವಿದೆ. ಇವತ್ತಿಲ್ಲಿ ಬ್ರಿಗೇಡ್ ಬಗ್ಗೆ ಬರೆದು ನನಗೆ ಆಗಬೇಕಾದ ಲಾಭವೇನೂ ಇಲ್ಲ, ಅವರೆಡೆಗಿನ ಗೌರವ ಇದನ್ನೆಲ್ಲ ಬರೆಸಿತಷ್ಟೆ.



Tuesday, July 5, 2016

    ಅರಣ್ಯ ಇಲಾಖೆಯೆಂಬ ಅಣಕು

ಕೇಂದ್ರ ಸರಕಾರ ಇನ್ನುಮುಂದೆ ದಟ್ಟಾರಣ್ಯದಲ್ಲಿ ಖಾಸಗಿಯವರಿಗೆ ಅರಣ್ಯ ಬೆಳೆಯಲು  ಅವಕಾಶ ಕೊಡುವುದರ ಬಗ್ಗೆ ಸೊಲ್ಲೆತ್ತಿದ್ದು ಸುದ್ದಿಯಾಗಿದೆ. ’ಅರಣ್ಯ ಬೆಳೆಯುವುದು’ ಎಂಬ ಪರಿಕಲ್ಪವನ್ನು ನಾನಂತೂ ನನ್ನ ಬಾಲ್ಯದಾರಭ್ಯ ಒಂದು ವ್ಯಂಗ್ಯದಂತೆಯೇ ಕಾಣುತ್ತ ಬಂದಿದ್ದೇನೆ.  ಇದೇ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಂಥಾ ಮಲೆಯ ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯು ಪ್ರದರ್ಶಿಸುವ ಕೆಲವಾರು ಮೂರ್ಖತನಗಳು ನೆನೆಪಾದವು.

ನನ್ನೂರು ಬೆಟ್ಟಗಳಿಂದ ಆವೃತವಾಗಿದೆ; ಉತ್ತರಕನ್ನಡದ ಹಲವಾರು ಹಳ್ಳಿಗಳಂತೆ. ಬೆಟ್ಟ ಇದ್ದಲ್ಲೆಲ್ಲ ಬೆಟ್ಟಕ್ಕೆ ಸಂಬಂಧಪಟ್ಟ ಇಲಾಖೆಯ ಚಟುವಟಿಕೆಯಿರುವುದು ಸಹಜವೇ. ಆದರೆ ಬೆಟ್ಟದ ವಿಷಯದಲ್ಲಿ ಸಾಮಾನ್ಯ ಹಳ್ಳಿಗರಿಗಿರುವಷ್ಟು ಜ್ಞಾನವೂ ಇಲ್ಲದವರಂತೆ ಈ ಬೆಟ್ಟದ ಇಲಾಖೆ ಮೂರ್ಖತನವನ್ನು ತೋರುತ್ತದೆ. ಮೂವತ್ತು ವರ್ಷಗಳ ಹಿಂದೆ ನಿತ್ಯಹರಿದ್ವರ್ಣ ಕಾಡಾಗಿದ್ದ ನನ್ನೂರಿನ ಒಂದು ಪಕ್ಕದ ಕಾಡಿನಲ್ಲಿ ಅರಣ್ಯ ಇಲಾಖೆಗೆ ಏಕಾ ಏಕಿ ಸಾಗುವಾನಿ (ಟೀಕ್ ವುಡ್) ಬೆಳೆಯುವ ಉಮೇದು ಹೊತ್ತಿತು. ಸರಿ, ನಿತ್ಯಹರಿದ್ವರ್ಣ ಕಾಡನ್ನು ತರಿದು ಹಾಕಿ ಗುಡ್ಡದ ಮೈಮೇಲೆಲ್ಲ ಸಾಗುವಾನಿಯನ್ನು ನೆಡಲಾಯ್ತು. ನಿತ್ಯಹರಿದ್ವರ್ಣ ಕಾಡು ಕ್ರಮೇಣ ಮಾಯುತ್ತ ಬಂದು ಇವತ್ತಿಗೆ ಆ ಗುಡ್ಡಕ್ಕೆ ಗುಡ್ಡವೇ ಸಾಗುವಾನಿ ಗುಡ್ಡವಾಗಿದೆ. ಸಾಗುವಾನಿ ಎಂಥಾ ಮರವೆಂದರೆ ಅದು ತನ್ನ ಸುತ್ತ ಬೆಟ್ಟದ ಸಹಜ ಸಸ್ಯರಾಶಿಯನ್ನು ಬೆಳೆಯಗೊಡುವುದಿಲ್ಲ, ಬೇಸಿಗೆ ಬಂತೆಂದರೆ ಎಲೆ ಉದುರಿಸಿ ಕಾಲ ಬುಡಕ್ಕೆ ರಾಶಿ ಹಾಕಿಕೊಳ್ಳುತ್ತದೆ, ಮತ್ತು ಬೆಟ್ಟದ ಬೆಂಕಿಗೆ ಆ ತರಗೆಲೆ ಪ್ರತಿವರ್ಷವೂ ಸುಟ್ಟು ಬೂದಿಯಾಗುತ್ತದೆ. ಪರಿಣಾಮ, ಅಕಸ್ಮಾತ್ ಬದುಕಿದ್ದ ಸಣ್ಣಪುಟ್ಟ ಸಸ್ಯಗಳ ಮಾರಣ ಹೋಮ ಮತ್ತು ಪ್ರಾಣಿಸಂಕುಲಕ್ಕೆ ಬರೆ. ಊರಿನ ಇನ್ನೊಂದು ಪಕ್ಕದ ಗುಡ್ಡಕ್ಕೆ ನಿತ್ಯಹರಿದ್ವರ್ಣ ಕಾಡು ಇವತ್ತಿಗೂ ಜೀವಂತ ಹಬ್ಬಿಕೊಂಡಿದೆ. ನಂಬಿ, ಬೇಸಗೆಯಲ್ಲೂ ಅದೆಷ್ಟು ತಂಪನೆಯ ಬೆಟ್ಟವೆಂದರೆ ಅದಕ್ಕೆ ಬೆಂಕಿ ಹೊತ್ತಲಾರದು. ನಾನೆಂದೂ ಆ ಬೆಟ್ಟಕ್ಕೆ ಬೆಂಕಿ ಬಿದ್ದುದನ್ನೇ ಕಂಡಿಲ್ಲ, ಸೂರ್ಯನ ನೇರ ಬೆಳಕು ನೆಲಕ್ಕೆ ಬೀಳದಷ್ಟು ಗಾಢ ಕಾನನ ಅದು. ಇನ್ನೊಂದು ಪಕ್ಕಕ್ಕೆ ವಕ್ಕರಿಸಿಕೊಂಡಿರುವ ಸಾಗುವಾನಿ ಕಾಡೆಂಬ ಬೆಂಗಾಡನ್ನು ಕಾಣುವಾಗೆಲ್ಲ ಅಮೂಲ್ಯವಾದ್ದನ್ನು ಕಳಕೊಂಡ ನೋವಾಗುತ್ತದೆ ಮನಸಿಗೆ. ಅರಣ್ಯ ಇಲಾಖೆಯ ಪ್ರಜ್ಞಾ ಶೂನ್ಯತೆಗೆ ಇದೊಂದು ಉದಾಹರಣೆ.
ಪ್ರತಿಬಾರಿಯೂ ಮಳೆಗಾಲದಲ್ಲಿ ಗಿಡ ನೆಡುವ ಒಳ್ಳೆಯ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯೂ ಹಮ್ಮಿಕೊಳ್ಳುತ್ತದೆ. ಹಾಗೆಯೇ ಪ್ರತಿಬಾರಿಯೂ ಹಿಂದಿನ ವರ್ಷ ಸಸಿ ನೆಟ್ಟ ಜಾಗದಲ್ಲೇ ಮತ್ತೆ ಸಸಿ ನೆಡುವ ಹೀನಾಯ ಅಪಮಾನವನ್ನು ದಶಕಗಳಿಂದ ಉಣ್ಣುತ್ತಿದೆ. ಮೊನ್ನೆ ಊರಿಗೆ ಹೋದಾಗ ಎಂದಿನಂತೆ ಬೆಟ್ಟ ಸುತ್ತಲು ಹೋಗಿದ್ದೆ. ಬೆಟ್ಟದ ಬದಿಯ ದಿಣ್ಣೆಯಮೇಲೆ ಪ್ರತಿವರ್ಷದಂತೆ ಈ ವರ್ಷವೂ ಕತ್ತರಿಯಾಕಾರದಲ್ಲಿ ಬೇಲಿ ಗಿಡ ನೆಟ್ಟಿದ್ದಾರೆ. ಅದನ್ನು ನೋಡಿ ವಿಷಾದ ಅನ್ನಿಸಿತು. ಈಗ್ಗೆ ಹದಿನೈದು ವರ್ಷಗಳ ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ನಾವು ಮಕ್ಕಳು ಶಾಲೆಯ ಬೇಲಿಗೆಂದು  ಮಳೆಗಾಲದಲ್ಲಿ ತಂದು ನೆಟ್ಟ ಬಕುಲ ಗಿಡಗಳು ಇಂದು ಮರವಾಗಿವೆ, ಆದರೆ ಅರಣ್ಯ ಇಲಾಖೆ ಮಾತ್ರ ಒಂದು ಸಸಿಯನ್ನೂ ಬದುಕಿಸಿಕೊಳ್ಳಲಾಗಿಲ್ಲ- ಇದು ವಿಷಾದ ಅಲ್ಲದೆ ಇನ್ನೇನು? ಆಯಾ ಪರಿಸರಕ್ಕೆ ಹೊಂದಿಕೊಳ್ಳದ ಗಿಡಗಳನ್ನು ನೆಡುವುದು, ನೆಟ್ಟಮೇಲೆ ಮತ್ತೆಂದೂ ಆ ಕಡೆ ಸುಳಿಯದಿರುವುದು, ಅದಕ್ಕೆ ರಕ್ಷಣೆ ಕೊಡದಿರುವುದು ಇವೆಲ್ಲ ಶ್ರದ್ಧೆಯುಳ್ಳವರ ಕಾರ್ಯಗಳಲ್ಲವಷ್ಟೆ. ನಿತ್ಯಹರಿದ್ವರ್ಣ ಕಾಡಿನಲ್ಲಿ ಅಕೇಶಿಯಾ ಗಿಡ ನೆಡುವಾಗ ಸುತ್ತಲಿನ ಐದಾರು ಗಿಡಗಳನ್ನು ಕಡಿದು ಅದಕ್ಕೆ ಆಧಾರ ಒದಗಿಸಲಾಗುತ್ತದೆ. ಒಟ್ಟಿನಲ್ಲಿ ಪ್ರತಿ ಮಳೆಗಾಲದಲ್ಲಿ ಮರ ನೆಡಬೇಕು, ನೆಡುತ್ತಾರಷ್ಟೆ.

ಬೆಟ್ಟದ ಕೊನೆಗಳಲ್ಲಿ ಮನುಷ್ಯರು ಸುಲಭವಾಗಿ ಒಳಹೋಗಲಾಗದಂತೆ, ಪ್ರಾಣಿಗಳು ಊರಿಗೆ ಬರಲಾಗದಂತೆ, ಮಳೆಗಾಲದಲ್ಲಿ ನೀರು ಇಂಗಲೆಂಬಂತೆ ಕಳೆದವರ್ಷ ನಮ್ಮಲ್ಲೆಲ್ಲ ಹಳ್ಳದಂಥದ್ದೇನೋ ತೋಡಿದೆ ಅರಣ್ಯ ಇಲಾಖೆ ಮತ್ತು ಅಲ್ಲಿಯೂ ಅವೈಜ್ಞಾನಿಕತೆ ಮೆರೆದಿದೆ. ಬೇಸಿಗೆಯಲ್ಲಿ ಮರದ ಬುಡದ ಮಣ್ಣನ್ನು ಎತ್ತಿ ಹಾಕಿದ್ದರಿಂದ ಈ ವರ್ಷದ ಮಳೆಗಾಲಕ್ಕೆ ಮರಗಳು ಬುಡಕಳಚಿ ಧರೆಗುರುಳುತ್ತಿವೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡಂತಲ್ಲವೆ ಇದು?

ಅಕೇಶಿಯಾ ಗಿಡಗಳನ್ನಂತೂ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ನೆಡುತ್ತದೆ ಇಲಾಖೆ. ಉತ್ತರಕನ್ನಡದ ಸಜಹ ಅರಣ್ಯಗಳಲ್ಲಿ ಈ ಅಕೇಶಿಯಾ ಅನ್ನುವ ಮಾರಿಗೆ ಜಾಗ ಕೊಡಬೇಕಾದ್ದೇ ಇರಲಿಲ್ಲ. ಆದರೆ ದುರದೃಷ್ಟಕ್ಕೆ ಈಗಾಗಲೇ ಅದು ಅರಣ್ಯವನ್ನೂ ಕೃಷಿ ಭೂಮಿಯನ್ನೂ ಆವರಿಸಿಕೊಂಡಾಗಿದೆ. ಬೆಟ್ಟದ ಮಧ್ಯೆ ಬದುಕುವ ಸಾಮಾನ್ಯ ಜನಕ್ಕೂ ಗಿಡಮರಗಳ ಬಗ್ಗೆ ಕಾಳಜಿ, ತಿಳುವಳಿಕೆ ಮತ್ತು ಗೌರವಗಳಿರುತ್ತವೆ. ಅರಣ್ಯ ಇಲಾಖೆ ಮಾತ್ರ ಕಾಟಾಚಾರಕ್ಕೆಂಬಂತೆ ಕಾಡಿನ ಕೆಲಸ ಮಾಡುತ್ತದೆ. ಗಿಡ ನೆಡುವ ವಿಚಾರ ಮಾತ್ರವೇ ಅಲ್ಲ, ಒಡ್ಡು ನಿರ್ಮಾಣದ ವಿಷಯದಲ್ಲೂ ಇದೇ ಕಥೆ. ಅರಣ್ಯ ಇಲಾಖೆಯದ್ದೊಂದೇ ಹಣೆಬರಹ ಇದಲ್ಲ, ಸರಕಾರೀ ಯಂತ್ರದ ಬೇರೆ ಬೇರೆ ಪಾರ್ಟ್ ಗಳಲ್ಲೂ ಇದೇ ಖಾಯಿಲೆ ಇದೆ.  ಪ್ರಯೋಜನಕ್ಕೆ ಬಾರದ ಕೆಲಸ ಮಾಡುವ ಸರಕಾರೀ ಸ್ವಭಾವ ಯಾವಾಗ ಶಮನವಾಗುವುದೋ ದೇವರೇ ಬಲ್ಲ. ಬಹುಶಃ ಇದನ್ನೆಲ್ಲ ನೋಡಿಯೇ ಮೋದಿ ಸರಕಾರ ಖಾಸಗಿಯವರಿಗೆ ಅರಣ್ಯದಲ್ಲಿ ಅರಣ್ಯ ಬೆಳೆಸಲು (!) ಅವಕಾಶ ಕೊಡುವ ವಿಚಾರ ಶುರುಮಾಡಿಕೊಂಡಿದೆ. ಸರಕಾರದ ಚಿಂತನೆಯ ಹಿನ್ನೆಲೆ ಏನಿದೆಯೋ ಗೊತ್ತಿಲ್ಲ, ಆದರೆ ಹಾಗೊಂದು ನೀತಿ ಬಂದಲ್ಲಿ ಅರಣ್ಯ ನಾಶದ ಹೊಸದೊಂದು ದಿಕ್ಕು ತೆರೆದುಕೊಳ್ಳುವುದು ಖಚಿತ.