Tuesday, January 27, 2015

ಸದ್ದಿರದ ಕಣಿವೆ.


ಮೊನ್ನೆ ರವಿವಾರ ಜನೇವರಿಯ ೧೮ಕ್ಕೆ, ಕೇರಳದ Silent Valley ರಾಷ್ಟ್ರೀಯ ಉದ್ಯಾನಕ್ಕೆ ಹೋಗಿದ್ದೆ. ನಮ್ಮದೊಂದು ಬಳಗವಿದೆ, ’ಪ್ರಕೃತಿ ಬಳಗ’ ಎಂದು. ನಾವು ಕೆಲವರು ಸಮಾನಮನಸ್ಕ ಅಧ್ಯಾಪಕರು ಮತ್ತು ಆಸಕ್ತ ವಿದ್ಯಾರ್ಥಿಗಳಿರುವ ಬಳಗ ಅದು. ವಿರಾಮಕಾಲದಲ್ಲಿ ಪ್ರಕೃತಿಯ ಸೆರಗು ಹಿಡಿದು ಅಲೆದಾಡುವುದು ಇದರ ಹವ್ಯಾಸ. ಹಾಗೆ ಮೊನ್ನೆ ಆಯೋಜನೆಯಾದ್ದು ನಮ್ಮಿಂದ ೧೨೫ ಕಿ. ಮೀ ದೂರದಲ್ಲಿರುವ ಕೇರಳದ ಸದ್ದಿರದ ಕಣಿವೆ.

ನಮ್ಮ ವಾಹನ ಬೆಟ್ಟದ ಬಾಯಲ್ಲಿ ನಿಂತಾಗ ಬೆಳಗಿನ ೯ ಗಂಟೆ. ಅಲ್ಲೆಲ್ಲ ಇನ್ನೂ ಚಳಿಯಿತ್ತು, ಸೈಲೆಂಟ್ ವ್ಯಾಲಿಯ ಅರಣ್ಯ ಇಲಾಖೆಯ ಮಾಹಿತಿಕೇಂದ್ರಕ್ಕೆ ನಾವು ಬರುವ ಸೂಚನೆ ಮೊದಲೇ ಇತ್ತು. ಈ ಕಾಡಿಗೆ ಕಾಲಿಡುವುದಕ್ಕೆ ಇದೊಂದು ನಿಯಮವಿದೆ, ಮೊದಲೇ ಹೆಸರು ನೋಂದಾಯಿಸಬೇಕು. ಅದಿರದೆ ಪ್ರವೇಶವಿಲ್ಲ. 

ಕಾಡಿನ ಬಾಗಿಲಿಗೆ ಬಂದ ಬಳಿಕ ನಿಮ್ ನಿಮ್ಮ  ವಾಹನ ಬಡಿಗಿಡಬೇಕೆಂಬುದು ತಾಕೀತು. ಕಾಡಿನ ಅಂತರಂಗಕ್ಕೆ ಒಯ್ಯುವುದಕ್ಕೆ ಇಲಾಖೆಯದೇ ವಾಹನಗಳಿವೆ, ಖಾಸಗಿ ವಾಹನಗಳಿಗೆ ಒಳಬರುವಿಲ್ಲ. ಸರಿ, ಅವರಂದಿದ್ದಕ್ಕೆಲ್ಲ ಹೂಂ ಎಂದು ಗೋಣಾಡಿಸಿ, ಇಲಾಖೆಯ ಬಸ್ಸಲ್ಲಿ ಕೂತಾಯ್ತು. ನಮ್ಮೊಡನೆ ಒಬ್ಬ ದಾರಿತೋರುಗನೂ ಬಂದ. ಮುಂದಿನ ೨೫ ಕಿ. ಮೀ ಪೂರ್ತಿ ಗಾಢ ಬೆಟ್ಟ ಮತ್ತು ಕಡಿದಾದ ರಸ್ತೆ. ಅಲ್ಲಿನ ಓಡಾಟಕ್ಕೆ ಅದೇ ಚಾಲಕರೇ ಇದ್ದರೆ ಸರಿಯೆನ್ನಿಸುವಂತಿದೆ ರಸ್ತೆ. 

ಅದೊಂದು ನಿಸರ್ಗರಮಣೀಯವಾದ ಕಾಡಿನ ಮೌನ ತಪಸ್ಸಿನ ಕಣಿವೆ. ಕಾಡಿನ ನೀರವತೆಯನ್ನು ಕಲಕದಂತೆ ಮನವಿ, ಅಣತಿ ಎಲ್ಲವನ್ನೂ ದಾರಿತೋರುಗನೇ ಮಾಡಿದ. ಆ ನೀರವದಲ್ಲಿ ಅವ ಕಥೆ ಶುರುವಿಟ್ಟುಕೊಂಡ....

"ಅಪಾರ ಹಸಿರು ರಾಶಿ, ಎಂದಿಗೂ ಎಲೆಯುದುರಿಸಿ ಬೋಳಾಗದ ಕಾಡು, ಮನುಷ್ಯನನ್ನು ಒಳಗೆ ಬಿಟ್ಟುಕೊಂಡಿರದ ಕತ್ತಲೆ ಕಾನು, ಸೂರ್ಯಕಿರಣಗಳಿಗೂ ಹಸಿರುಗುಡಿಯೊಳಗೆ ಪ್ರವೇಶವಿಲ್ಲ... ಅಂಥಾ ಪರಮ ಗಂಭೀರ ಕಾಡಿನಲ್ಲಿ ಎರಡು ಪರ್ವತರಾಶಿಗಳು ಭೂಮಿಗಿಳಿಯುವ ಕಣಿವೆಯಲ್ಲೊಂದು ನದಿ. ಬಂಡೆಗಳನ್ನೇ ಕೊರೆದು ದಾರಿ ಮಾಡಿಕೊಂಡಿದೆಯೆನ್ನುವಂಥಾ ನದಿ ಅದು. ಆ ಕಾಡಿನ ನೆರಳಿನಲ್ಲಿ, ಆ ನದಿಯ ತಟಾಕದಲ್ಲಿ ಭಾರತದ ಅಪರೂಪದ ಕಾಡುಪ್ರಾಣಿಗಳಿವೆ.

ಹೀಗಿರುವಾಗ ಮನುಷ್ಯನೆಂಬ ದುರಂತ ಅವತಾರಕ್ಕೆ ಆ ಕಾಡು ದುರಾಸೆ ತಂಪಾಗಿಸುವ ಕಲ್ಪವೃಕ್ಷದಂತೆ ಕಂಡಿತು. ನದಿಯ ಹರಿವಿಗೆ ಹೆಚ್ಚಿನ ಖರ್ಚಿಲ್ಲದೆ ಅಣೆ ಕಟ್ಟೆ ಕಟ್ಟುವ, ಆ ಮೂಲಕ ಜಲವಿದ್ಯುತ್ ಉತ್ಪಾದಿಸುವ ಯೋಜನೆಯೊಂದು ಸಿದ್ಧವಾಯ್ತು. ಶಕ್ತಿಯ ದಾಹದ ಮುಂದೆ ಆ ಹಸಿರು ಹೊನ್ನು, ಅಲ್ಲಿನ ಜೀವರಾಶಿ, ಬುಡಕಟ್ಟು ಜನ, ಅಷ್ಟೆಲ್ಲ ಭೂಮಿ... ಹೀಗೆ ನಾಶವಾಗಲಿರುವ ಯಾವುದೂ ಮುಖ್ಯವಾಗಲಿಲ್ಲ. ಯೋಜನೆಯ ದಾಹಕ್ಕೆ ತೀವ್ರತೆಯೂ ಸಾಕಷ್ಟಿತ್ತು, ಇಂದಿರಾ ಸರಕಾರ ಎಪ್ಪತ್ತರ ದಶಕದಲ್ಲಿ ತರಾತುರಿಯಿಂದ ಯೋಜನೆಗೆ ಅಸ್ತು ಎಂದಿತ್ತು. ನೀಲನಕ್ಷೆ, ರಸ್ತೆ, ಉಳಿದ ಪರಿಕಲ್ಪನೆಗಳು.. ಎಲ್ಲವೂ ಸಿದ್ಧವಾದವು. ಪೂರ್ತಿ ಕಾಡು ಮನುಷ್ಯನ ಶಕ್ತಿದಾಹಕ್ಕೆ ಬಲಿಯಾಗಲು ಸಿದ್ಧವಾಯ್ತು. ಅಲ್ಲಿನ ಕೆಲವು ಮರಗಳ ಎದುರು ನಿಂತರೆ ನಾವೆಷ್ಟು ಚಿಕ್ಕವರೆಂಬುದು ಅರಿವಾಗುತ್ತದೆ. ೨೦೦-೩೦೦ ವರ್ಷದ ಮರಗಳಿರುವ ಕಾಡಿಗೆ ಮಾನವನೆಂಬ ಹುಲು(ಳು) ಜೀವಿ ಬಂದಳಿಕದಂತೆ ಅಮರಿದ್ದ ಸಂದರ್ಭ ಅದು.
ಭಾರತದ ಕೆಲವೇ ಬೆಟ್ಟಗಳಲ್ಲಿ ಬೆಳೆಯುವ ಅತಿ ಎತ್ತರದ ಮರಗಳು ಇಲ್ಲಿ ಬೆಳೆಯುತ್ತವೆ. ನೀಲಗಿರಿ ಲಂಗೂರ್ ಇಲ್ಲಿಯ ಪ್ರಮುಖ ಆಕರ್ಷಣೆಯ ಜೀವಿ. ಅದು ಬಿಟ್ಟರೆ ಎಲ್ಲೆಂದರಲ್ಲಿ ಸುಳಿದಾಡುವ ಆನೆ, ಅಲ್ಲೊಂದು ಇಲ್ಲೊಂದು ಚಿರತೆ... ಹೀಗೆ ಸಮೃದ್ಧ ಪ್ರಾಣಿ ಸಂಕುಲವಿದೆ. ಇಂದಿಗೂ ಕಾಡಿನೊಳಕ್ಕೆ ಒಯ್ಯುವ ಕಚ್ಚಾ ರಸ್ತೆಯ ತುಂಬ ಆನೆ ಲದ್ದಿ ಹೇರಳವಾಗಿ ಬಿದ್ದಿರುತ್ತದೆ.

ಸರಕಾರದ ಕೈಗಳು ಕಾಡಿಗೆ ನುಗ್ಗುತ್ತಿದ್ದಂತೆ ಬಹುಶಃ ಕಾಡಿನ ಪ್ರತಿಯೊಂದು ಜೀವವೂ ಮರುಗತೊಡಗಿತೇನೋ. ಜನಗಳು ಜಾಗೃತವಾದರು. ಆ ಜನಗಳೇನೂ ಅಲ್ಲಿ ವಾಸಿಸುವವರಲ್ಲ, ಆ ಬೆಟ್ಟ ಮುಳುಗಿದರೆ ಮನೆ ಹೋಗುವ ಸಂಕಟವೂ ಅವರಿಗಿಲ್ಲ.ಆದರೆ ಕಾಡು ಪ್ರೀತಿಸುವವರಿಗೆ ಗೊತ್ತು ಅದರ ನಾಶ ಎಂಥಾ ಬಗೆಯ ನೋವು ತರುತ್ತದೆ ಎಂಬುದು. ಅತಿ ಸಾಮಾನ್ಯ ಜನ ಹೋರಾಟಕ್ಕಿಳಿದರು, ಜಲಯೋಜನೆಯನ್ನೂ ಸರಕಾರದ ಉಪಕ್ರಮವನ್ನೂ ದಿಟ್ಟವಾಗಿ ವಿರೋಧಿಸಿದರು. ಒತ್ತಡಕ್ಕೆ ಸರಕಾರ ಮಣಿಯಲೇ ಬೇಕಾಯ್ತು, ಅಂತೂ ೧೯೮೫ ರಲ್ಲಿ ಸರಕಾರ ತನ್ನ ನಿಲುಮೆಯಿಂದ ಹಿಂಸರಿಯಿತು. ಅದೊಂದು ರಾಷ್ಟ್ರೀಯ ಉದ್ಯಾನವಾಗಿ ಉಳಿದಿದೆ ಇಂದು. ಅದರ ಉಳಿಕೆಗೆ ಜೀವ ತೇಯ್ದ ಎಲ್ಲ ಚೇತನಗಳಿಗೂ ನಮನ ಸಲ್ಲಿಸಿ ಆ ಹಸಿರಿನ ತಾಣದಲಿ ಮನಸು ಧ್ಯಾನಸ್ಥವಾಯ್ತು.
ಕಣಿವೆಯ ಹಾದಿ.

ಭಾರತದ ಗ್ರಾಮಗಳು, ಇಲ್ಲಿನ ಜನ, ಇಲ್ಲಿನ ಚರಿತ್ರೆ, ಕಡೆಗೆ ಇಲ್ಲಿನ ಕಾಡುಗಳು ಕೂಡ ಹೇಳುವುದಕ್ಕೆ ತಮ್ಮದೇ ಆದ ರಾಮಾಯಣದ್ದೋ ಮಹಭಾರತದ್ದೋ ಕಥೆಗಳನ್ನು ಉಳಿಸಿಕೊಂಡಿವೆ. ಅವು ಮೂಲಭಾರರತದಲ್ಲಿ ರಾಮಾಯಣದಲ್ಲಿ ಇರಲೇಬೇಕೆಂದಿಲ್ಲ, ತಮ್ಮ ತಮ್ಮ ಗ್ರಹಿಕೆಯೊಂದಿಗೆ ಪ್ರತಿಯೊಂದು ಸ್ಥಳವನ್ನೂ ಆ ಎರಡು ಮಹಾಕಾವ್ಯಗಳೊಡನೆ ಹೊಂದಿಸುವಲ್ಲಿ ನಮ್ಮವರಿಗೇನೋ ಖುಷಿಯಿದೆ. ಈ ವಿಷಯದಲ್ಲಿ ನಾವೆಷ್ಟು ಸಹಜವಾಗಿ ಮುಕ್ತವಾಗಿದ್ದೇವೆಂದರೆ, ಇಲ್ಯಾರೂ ಯಾರನ್ನೂ ಪ್ರಶ್ನಿಸುವುದಿಲ್ಲ "ಮೂಲ ಕಥೆಯಲ್ಲಿ ಹೀಗೆಲ್ಲ ಉಲ್ಲೇಖ ಇದೆಯೆ?" ಎಂದು. ಈ ಖುಶಿಯಿದೆಯಲ್ಲ, ಇದು ಸಂಸ್ಕೃತಿಯೊಂದರ ಮುಕ್ತತೆಯ ಕಾರಣಕ್ಕೆ ಬರುವಂಥದು.
ಸರಿ, ಈ ಕಾಡು ತನ್ನೊಡಲಲ್ಲಿ ಮಹಾಭಾರತದ ಕಥೆಯೊಂದನ್ನು ಉಳಿಸಿಕೊಂಡಿದೆ. ಮೂಲದಲ್ಲಿ ಅದು ಸೈರಂಧ್ರಿ ವನವಂತೆ. ಸೈರಂಧ್ರಿ ಎನ್ನುವುದು ಅಜ್ಞಾತವಾಸದ ಕಾಲದಲ್ಲಿ ದ್ರೌಪದಿಯ ಹೆಸರು. ಆಕೆಗೂ ಇಲ್ಲಿನ ಕಣಿವೆಯಲ್ಲಿ  ಹರಿಯುವ ನದಿಗೂ ಸಂಬಂಧವಿದೆಯೆಂಬುದು ಸಾರಾಂಶ.
ಅಂಥಾ ಕಣಿವೆಗೆ ತಲುಪುವುದಕ್ಕೆ ಕಚ್ಚಾ ರಸ್ತೆಯಿದೆ, ಏಕಮುಖಸಂಚಾರಕ್ಕೆ ಅನುವಾಗಿರುವ ಹಾದಿಯದು. ಬಹುಶಃ ಅಣೆಕಟ್ಟೆಯ ಜನ ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ರಸ್ತೆ ಇರಬಹುದು.
ಬರಬರುತ್ತ ಗಾಢವಾಗುವ ಕಾಡು ಸೈಲೆಂಟ್ ವ್ಯಾಲಿ ಎಂದು ಯಾಕೆ ಕರೆಸಿಕೊಳ್ಳುತ್ತದೆಯೆಂಬುದು ಮುಂದೆ ಸಾಗಿದಂತೆ ಅನುಭವಕ್ಕೆ ಬರುತ್ತದೆ. ಮಾತಿರಬಾರದು, ಕಾಡಿನ ಧ್ಯಾನಕ್ಕೆ ಒಳಗು ತೆರೆಯಬೇಕು ಎನ್ನುವ ಭಾವವೊಂದು ಅಪ್ರಯತ್ನವಾಗಿ ಮನಸನ್ನಾವರಿಸುತ್ತದೆ.

ಇಪ್ಪತ್ತೆರಡು ಕಿಲೋಮೀಟರು ಸಾಗಿದ ಬಳಿಕ ನದಿ, ಕಣಿವೆ ಪರ್ವತಾವಳಿಗಳು ಆಕಾಶವೆಂಬ ತೆರೆಯಲ್ಲಿ ಮೂಡಿದಂತೆ ಅನಾವರಣಗೊಳ್ಳುತ್ತವೆ. ಮನಸ್ಸು ಇನ್ನಷ್ಟು ಧ್ಯಾನಸ್ಥವಾಗಬಹುದಾದ ತಾಣ ಅದು. ಮುಮ್ದಿನದು ಚಾರಣದ ಭಾಗ; ಒಂದೈದು ಕಿಲೋಮೀಟರು. ನದಿಯ ತಣ್ಣೀರು, ಅಚಲ ಬಂಡೆಗಳ ಮಹಾರಾಶಿ, ಬೆಟ್ಟವೆಂಬ ದೇವತೆಯ ಸಜೀವ ದೇಗುಲ. ಚಿಂತನೆಗಳು ತಿಳಿಯಾಗುತ್ತ ಸಾಗಿ ಕೊನೆಗೊಮ್ಮೆ ಅವುಗಳಿಲ್ಲವಾಗುವ ಆನಂದಕ್ಕೆ ಇದೊಂದು ನೆಲೆಯಂತಿದೆ.
ಊಟಿ ಪರ್ವತದ ಇನ್ನೊಂದು ಮಗ್ಗುಲಂತೆ ಇದು.
ಶಿಖರದ ನೆತ್ತಿಯಲ್ಲಿ ವೀಕ್ಷಣಾ ಗೋಪುರವಿದೆ. ಅಲ್ಲಿಂದ ಸಿಗುವ ದೃಶ್ಯ ವೈಭವ ಅಮೋಘವಾದ್ದು. ಅಲ್ಲಿ ನಿಂತರೆ ಪರ್ವತಗಳೆಲ್ಲ ಅಂಗೈಲಿ ಬಂಧಿಯಾದಂತೆ, ಅಂಗಾಲಿಗೆ ನಿಲುಕಿದಂತೆ ಭಾಸ. ಕಾಲವೆಂಬುದು ಆ ಎತ್ತರದಲ್ಲಿ ಸಾವಧಾನಿಸಿ ಚಲಿಸುತ್ತಿರುವುದೋ ಎಂಬ ಭ್ರಮೆ.

ನೀಲಗಿರಿ ಲಂಗೂರ್ ಕಪಿಯನ್ನು ಹಿಡಿದು ತಿಂದ ಚಿರತೆ ವಿಸರ್ಜಿಸಿದ ಮಲವನ್ನು ಹೇರಳವಾಗಿ ಕಾಣಿಸಿದ ನಮ್ಮ ಗೈಡ್. ಅಲ್ಲಿನವರೆಲ್ಲ ಕಾಡಿನ ಪರಿಸರಕ್ಕೆ ಒಗ್ಗಿದ್ದಾರೆ, ಗಾಢ ಕಾಡಿನ ಜೀವಿಗಳ ಜೊತೆ ಸಹವಾಸ ಸಾಧಿಸಿದ್ದಾರೆ. ನಮ್ಮನ್ನಾತ ಎಷ್ಟು ಎಚ್ಚರಿಸಿದನೆಂದರೆ, ಗುಂಪು ಬಿಟ್ಟು ಕೊಂಚವೂ ಆಚೆ ಹೋಗಲು ಬಿಡುತ್ತಿರಲಿಲ್ಲ. ಆನೆಗಳು ಎಲ್ಲಿಂದಾದರೂ ಪ್ರತ್ಯಕ್ಷವಾಗಬಹುದು, ಒಂಟಿಯಾಗಿರುವುದು ಅಪಾಯ ಎಂಬುದು ಅವನ ಎಚ್ಚರಿಕೆ. ಎಲೆಯುದುರಿಸದ ಕಾಡಿನ ಪಕ್ಕಾ ಗುರುತು ಕೆಂಪು ಚಿಗುರಿನ ಮರಗಳು. ಜೀವದ ಬೆಂಕಿ ಬಿದ್ದಂತೆ ಚಿಗುರನ್ನೇ ಮುಡಿದು ನಿಲ್ಲುವ ಮರಗಳಿವೆ.  ಬಿಡಿ ಕಾಡಿನ ಸೌಂದರ್ಯವನ್ನು ಎಷ್ಟೆಂದರೂ ಪದಗಳಲ್ಲಿ ಹಿಡಿಯುವುದು ಆಗದ ಮಾತು.
ಕೆಂಚಿಗುರಿನ ನೋಟ. 
ಸೈಲೆಂಟ್ ವ್ಯಾಲಿಗೆ ಭೇಟಿ ಕೊಡುವ ಮನಸಿದ್ದರೆ ಮೊದಲು ತತ್ಸಂಬಂಧಿ ಜಾಲತಾಣಕ್ಕೆ ಭೇಟಿ ಕೊಡಿ. ಕೊಂಡಿ ಇಲ್ಲಿದೆ. ಒಮ್ಮೆ ಭೇಟಿಯಿತ್ತರೆ ಉಳಿದ ವಿವರಣೆಯನ್ನು- ಅಲ್ಲ- ಅನುಭವವನ್ನು ಕಾಡು ಕರುಣಿಸುತ್ತದೆ. ಕಾಡನ್ನು ತುಂಬ ಉನ್ನತವಾದ ದೃಷ್ಟಿಯಿಂದ ಕಾಣುವುದು ಮತ್ತು ಅದೇ ಬಗೆಯಲ್ಲಿ ನೋಡುವಂತೆ ಕೇಳಿಕೊಳ್ಳುವುದು ನನಗೆ ಇಲ್ಲಿ ಅತ್ಯಂತ ಮನನೀಯವೆನಿಸಿದ ಸಂಗತಿ. ಕಾಡೆಂಬುದು ಒಂತರಾತ್ಮನ ಕಾಣಬಹುದಾದ ನೆಲೆ, ಸದ್ದು ಮಾಡಬೇಡಿ, ಇದು ಸತ್ಯದ ಅರಿವಿನ ತಾಣ ಎಂಬ ಫಲಕಗಳು ಎದೆ ತುಂಬ ಖುಶಿ ತುಂಬಿದವು. ಒಮ್ಮೆ ಈ ನೆಲೆ ಬಂದು ಶಾಂತಿಯನ್ನನುಭವಿಸುವ ಮನಸು ಮಾಡಿ ನೀವೂ. ಮರಳಿ ಮನೆಗೆ ಬರುವಾಗ ಕಾಡೆಂಬ ದೇವರನ್ನು ಸಂದರ್ಶಿಸಿದ ಧನ್ಯತೆ ನಮ್ಮಲ್ಲಿತ್ತು.


Saturday, January 17, 2015

ಪ್ರೇತ ನಗರಿಯ ಸಂಕಥನ ಕೊನೆಯ ಭಾಗ:

Ghost City ಎಂದ ಮಾತ್ರಕ್ಕೆ ಪ್ರೇತಗಳ ನಗರಿ ಅದಾಗಬೇಕಿರಲಿಲ್ಲ. ಆದರೆ ಧನುಷ್ಕೋಡಿಯ ಚಿತ್ರಣ ಅದಕ್ಕೆ ಪೂರಕವಾಗಿ ಬದಲಾಯ್ತು.  ಎಲ್ಲವೂ ನಾಶವಾದ ಸ್ಥಿತಿಯಲ್ಲಿ ಬಿಕೋ ಎನ್ನುತ್ತಿರುವಾಗಲೇ ಅದು LTTE ಎಂಬ ತಮಿಳ್ ಉಗ್ರರ ತಾಣದಂತಾಯ್ತು. ಜಗತ್ತಿನಿಂದ ಬೇರಾಗಿ ನಿಂತ ಆ ನೆಲ ಶ್ರೀಲಂಕೆ ಮತ್ತು ಭಾರತದ ಮಧ್ಯೆ ಉಗ್ರರಿಗಿರುವ ಸುರಕ್ಷಿತ ಜಾಗವಾಯ್ತು. (ಒಂದು ಕಾಲಕ್ಕೆ ಲಂಕೆಯಿಂದ ಪ್ರತಿದಿನವೂ ಈ ಮಾರ್ಗವಾಗಿ ಹಾಲು ತರಲಾಗುತ್ತಿತ್ತಂತೆ, ರಾಮೇಶ್ವರನ ಅಭಿಷೇಕಕ್ಕಾಗಿ. ಈಗ ಅದೆಲ್ಲ ಕನಸಿನ ಮಾತು. ತುಂಬಾ ಹತ್ತಿರವಾಗಿ ಕಾಣಿಸುವ ಲಂಕೆಯೂ ಇಂದಿಗೆ ಭಾರತದಿಂದ ಒಂದು ತಾಸು ಹಾರಾಟದಷ್ಟು ದೂರ). ಹಾಗೆ ಜನ ಸಂಚಾರಕೆ ನಿರ್ಬಂಧ ಅಯಾಚಿತವಾಗಿ ಹೇರಿಕೆಯಾಯ್ತು. ಇದನ್ನೆಲ್ಲ ಮನಗಂಡ ನಮ್ಮ ಸರಕಾರಗಳು ಭಾರತೀಯ ಸೇನೆಯನ್ನು ಅಲ್ಲಿಗೆ ಕಳಿಸಿದುವು. ಕ್ರಮೇಣ ಭಾರತೀಯ ಸೇನೆಯ ವಿಚಿತ್ರ ಚಟುವಟಿಕೆಗಳ ತಾಣವಾಯ್ತು ಧನುಷ್ಕೋಡಿ ಎಂಬ Once flourished City. ಸೈನ್ಯವೆಂದ ಬಳಿಕ, ಸಾಮಾನ್ಯ ಜನತೆಗೆ ನಿಲುಕದ ಕೆಲವು ಚಟುವಟಿಕೆಗಳಿರುವುದು ಅಚ್ಚರಿಯೇನಲ್ಲ.  ಇದಿಷ್ಟೂ ಕಾಲವೂ ಅಲ್ಲಿಗೆ ಯಾವೊಬ್ಬ ನಾಗರಿಕನಿಗೂ ಪ್ರವೇಶವಿರಲಿಲ್ಲ. ಭಾರತದ ಭೂಭಾಗವೊಂದಕ್ಕೆ ಭಾರತೀಯರಿಗೂ ಪ್ರವೇಶವಿರಲಿಲ್ಲ! ನಿಧಾನಕ್ಕೆ LTTE ಬಲ ಕುಸಿಯಿತು. ತಮಿಳ್ ಲಿಬರೇಶನ್ನಿನ ಹುಲಿ ಪ್ರಭಾಕರ್ ಕೊನೆಯಾದ. ಆ ಬಳಿಕ ಭಾರತೀಯ ಸೇನೆ ಕೂಡ ಅಲ್ಲಿಂದ ನಿಧಾನಕ್ಕೆ ಕಾಲ್ತೆಗೆಯಿತು. 

ಮುಂದಿನ ಕೆಲವೇ ವರ್ಷಗಳಲ್ಲಿ ಜನತೆಗೆ ಮುಕ್ತವಾಯ್ತು ಧನುಷ್ಕೋಡಿ. 

ಆ ಹೊತ್ತಿಗೆ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಜನರಲ್ಲಿ ಸಾವಿರ ಬಗೆಯ ಗುಮಾನಿ ಹುಟ್ಟಿಕೊಂಡಿತ್ತು. ಕತ್ತಲೆಯ ಬಣ್ಣದ ಕಥೆಗಳು ಪುಕ್ಕ ಬಂದು ಸಮುದಾಯದೆಲ್ಲೆಡೆ ಹಾರಾಡಿದುವು. ಸತ್ತವರೆಲ್ಲ ಸಂಸ್ಕಾರವಿಲ್ಲದೆ ಪ್ರೇತವಾಗಿ ಅಲ್ಲಿಯೇ ಸುಳಿದಾಡುತ್ತಿದ್ದಾರೆ ಎನ್ನುವ ರಂಜನೆಯೂ ಅಂಟಿಕೊಂಡಿತು. ಒಟ್ಟಿನಲ್ಲಿ ಕೆಲವೇ ವರ್ಷಗಳಲ್ಲಿ ಧನುಷ್ಕೋಡಿ ಎಂಬ ಹಿಂದೂ ಯಾತ್ರಾ ಸ್ಥಳ, ರಾಮ ನಡೆದಾಡಿದ ತಾಣ, ಪ್ರೇತಗಳ ನಗರಿಯಾಗಿ ಬದಲಾಯ್ತು. ಇಂದಿಗೂ ಕೆಲವರ ಕಣ್ಣಲ್ಲಿ ಧನುಷ್ಕೋಡಿಯಲ್ಲಿ ಪ್ರೇತಗಳಿವೆ!
People awaiting for a train before ruined station!!!
ಈ ಕಥೆಯ ಹೊರತಾಗಿಯೂ ಇಂದಿಗೆ ಅ ನಗರವನ್ನು ಕಂಡರೆ ಮುರುಕು ಕಟ್ಟಡಗಳು, ಕಿತ್ತೆದ್ದ ರಸ್ತೆಗಳು ಮತ್ತು ಮರಳು- ನಮ್ಮನ್ನು ಮರುಳಾಗಿಸುತ್ತವೆ- ಪ್ರೇತಗಳಿರಬಹುದೇ ಎಂದು! ಇದೀಗ ಸರಕಾರ ಧನುಷ್ಕೋಡಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಚಿಂತನೆ ನಡೆಸುತ್ತಿದೆಯಂತೆ. ಅದಾಗುವುದಾದರೆ ಅಲ್ಲಿ ಮೂಲಸೌಕರ್ಯಗಳನ್ನಾದರೂ ನಿರೀಕ್ಷಿಸಬಹುದು. 

ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದೆನಷ್ಟೆ. ಸುತ್ತಲೂ ಸಮುದ್ರವೇ ಇರುವ ಈ ಮರಳೂರಿನಲ್ಲಿ ಸಿಹಿನೀರಿಗೆ ಕೊರತೆಯಿಲ್ಲ! ಸಿಹಿನೀರಿನ ಸಹಜ ಕುಣಿಗಳಿವೆ, ಇದೊಂದು ವಿಚಿತ್ರ ಸತ್ಯ. ಅದೇ ಕುಣಿಗೆ ರಿಂಗ್  ಇಳಿಸಿ ಬಾವಿಯಂತೆ ಮಾಡಿಕೊಂಡಿದ್ದಾರೆ ಕೆಲವೆಡೆ. ಅದೇನೂ ಆಳವಿರುವುದಿಲ್ಲ. ಎಂಟೋ ಹತ್ತೋ ಅಡಿ ಆಳವಿರಬಹುದಷ್ಟೇ. ಜನ ಇವುಗಳಿಂದ ನೀರು ಪಡೆಯುತ್ತಾರೆ. ಮುರಿದ್ಉ ಬಿದ್ದ ಅವಶೇಷಗಳ ಮಧ್ಯೆ ಬದುಕಿ ಕೂಡ ಅವಶೇಷದಂತೆಯೇ ಸಾಗುತ್ತಿದೆ ಅಲ್ಲಿ.
ಸಿಹಿನೀರಿನ ಸಹಜ ಹೊಂಡ.
ಒಂದು ಕಾಲದಲ್ಲಿ ಚೆನ್ನಾಗೇ ಇದ್ದ ಚರ್ಚ್ ಆಗಿತ್ತಂತೆ ಇದು!
ಅಂದಿನ ಗೋಡೆಗಳಿಗೆ ಬಳಸಲಾದ ಕಲ್ಲಿನ ಸಂರಚನೆಯೂ ಮುಳುಗದೆ ತೇಲುವ ಕಲ್ಲಿನ ಸಂರಚನೆಯನ್ನು ಹೋಲುತ್ತದೆ. ಹಾಗಂತ ಇದೆಲ್ಲ ತೇಲುವ ಕಲ್ಲಲ್ಲ ಮತ್ತೆ! ಭೂಪದರಗಳ ನಿರ್ಮಾಣ ಹಂತದಲ್ಲಿ ಯಾವುದೋ ಬಗೆಯ ನಿರ್ದಿಷ್ಟ ಪ್ರಕ್ರಿಯೆಗೆ ಒಳಗಾಗಿದೆ ಇಲ್ಲಿನ ಶಿಲಾರಾಳ ಎಂದಂತಾಯ್ತು. ಇಲ್ಲಿ ಪಕ್ಕದಲ್ಲಿರುವುದು ಚರ್ಚ್ ಗೋಡೆಗೆ ಬಳಸಲಾದ ಕಲ್ಲಿನ ಚಿತ್ರ. ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿಯೂ ರಂಧ್ರಗಳು ಕಾಣ ಸಿಗುತ್ತವೆ.
ಇದೀಗ ಧನುಷ್ಕೋಡಿಯಲ್ಲಿ ದೂರದೂರದವರೆಗೆ ಉಳಿದಿರುವುದೆಲ್ಲ ಒಡಕು ಕಟ್ಟಡಗಳು, ಎಲ್ಲೋ ಮರಳಿನೊಡನೆ ಮರೆಯಾಗಿರಬಹುದಾದ ತಲೆಬುರುಡೆಗಳು ಮತ್ತು ಸಂಜೆ ೩- ೪ ರ ಹೊತ್ತಿಗೆ ಆರಂಭವಾಗಿ ಮರುಬೆಳಗು ೧೦ ಗಂಟೆಯವರೆಗೆ ಅವ್ಯಾಹತವಾದ ನಿರ್ಜನ ಮೌನ. ಇಲ್ಲಿರುವಷ್ಟೇ ಜನವಾದರೆ ಎಂಥ ಶಬ್ದ ಮಾಡಿಯಾರು! ಸಮುದ್ರವೂ ಮೌನಿಯಿಲ್ಲಿ. 
ತಂದಿದ್ದ ನೀರು ಖಾಲಿಯಾಗುವವರೆಗೆ ಅಲ್ಲೆಲ್ಲ ಸುತ್ತಾಡಿ, ಸಾಕೆನಿಸಿದ ನಂತರ ನಾವೆಲ್ಲ ಮತ್ತೆ ನಮ್ಮನ್ನು ಹೊತ್ತು ಬಂದಿದ್ದ ಮ್ಯಾಕ್ಸಿ ಕ್ಯಾಬ್ ಇದ್ದಲ್ಲಿ ಮರಳಿದೆವು. ಅದೋ, ನಮ್ಮನು ಅದೇ ದಾರಿಯಲ್ಲದ ದಾರಿಯಲ್ಲಿ ಹೊತ್ತು ಬಂದಿತು. ಅಷ್ಟು ಪ್ರಯಾಣಕ್ಕೆ ಎಲ್ಲ ಸೇರಿ ಗಾಡಿಯವನಿಗೆ ೨೦೦೦ ರೂ. ಕೊಟ್ಟಿದ್ದಾಯ್ತು. ವಾಪಸ್ ಬಸ್ಸು ಹತ್ತುವ ಜಾಗಕ್ಕೆ ಬಂದಾಗ ಧನುಷ್ಕೋಡಿಗೆ ಹೊರಟಿದ್ದ ಜೋಡಿ ಉದ್ದುದ್ದದ್ದೆರಡು ಐಸ್ ಕ್ಯಾಂಡಿ ಮೆಲ್ಲುತ್ತ ಸಮುದ್ರ ದಂಡೆಯ ಮರಳಲ್ಲಿ ಆತು ಕುಳಿತಿದ್ದರು. 

ನನ್ನ ಮುಂದಿನ ಪ್ರಯಾಣ ಅಗ್ನಿತೀರ್ಥವೆಂಬ ಸಮುದ್ರ ತೀರಕ್ಕೆ. ವಸ್ತುತಃ ಜನ ಅಲ್ಲಿ ಸ್ನಾನ ಮಾಡಿ ಪುಣ್ಯ ಗಳಿಸುತ್ತಾರಂತೆ. ನನಗೆ ಬೋಟ್ ರೈಡಿಂಗ್ ಕಂಡಿದ್ದರಿಂದ ಆ ಕಡೆಗೆ ಹೋದೆ. ಮಧ್ಯಾಹ್ನದ ಬಳಿಕದ ಸಾಗರ ತನ್ನ ವಿಶಿಷ್ಟ ಬಣ್ಣದಲ್ಲಿ ಹೊಳೆಯುತ್ತಿತ್ತು.ಆ ಹೊತ್ತಿನ ಜಲಯಾನ ಮನಸಿಗೆ ಮುದ ಕೊಟ್ಟಿತು. ಬರೀ ಅರವತ್ತು ರೂಪಾಯಿಗೆ ಅವ ನಮ್ಮನ್ನು ಸಮುದ್ರದಲ್ಲಿ ತುಂಬ ದೂರ ಒಯ್ದು ಒಂದು ಸುತ್ತು ಸುತ್ತಿಸಿ ತರುತ್ತಾನೆ. ಆಗ ಬೋಟಲ್ಲಿ ನೀವೇನು ಮಾಡಬಹುದು ಎಂದರೆ ಫೋಟೊ ತೆಗೆಯಬಹುದು, ಅಥವಾ ಚಂದದ ಕೂಸ್ಗಳಿದ್ದರೆ ನೋಡಬಹುದು. 

ನನ್ನ ಮುಂದಿನ ಪ್ರಯಾಣ ಪಾಂಬನ್ ಸೇತುಎಯ ಆರಂಭದ ಜಾಗ. ಸಾಧ್ಯವಾಗುವುದಾದರೆ ಆ ಸೇತುವೆಯ ನಡುಭಾಗ. ಆದರೆ ಆ ಜಾಗ ಒಂದು ಬೇಟಿಯ ತಾಣವೇ ಅಲ್ಲ, ಎಲ್ಲೋ ಹೋಗುವವರು ಅಲ್ಲಿಳಿದು ಅದನ್ನ ನೋಡಬೇಕಷ್ಟೆ. ಈ ಸೇತುವೆಯದು ಅಚ್ಚರಿಗಳು ಹಲವಿವೆ. ತನ್ನ ಕೆಳಗಿನ ಸಮುದ್ರದಲ್ಲಿ ಹಡಗು ಹಾಯ್ದು ಹೋಗುವಾಗ ಈ ಸೇತುವೆಯ ಒಂದು ಭಾಗ ಗೋಪುರದಂತೆ ಮೇಲೆದ್ದು ಹಡಗಿನ ಎತ್ತರಕ್ಕೆ ಜಾಗಮಾಡಿ ಕೊಡುತ್ತದೆ. ಇದು ತುಂಬಾ ಅಪರೂಪದ ದೃಶ್ಯ ಎಂಬುದು ನನ್ನ ಅನಿಸಿಕೆ. 
ಅದ್ಯಾವುದೋ ರೈಲಿಗೆ ಜೋತು,ಪಾಂಬಂನ್ ಜಂಕ್ಷನ್ ಗೆ ಬಂದಿಳಿದು, ಅಲ್ಲಿಂದ ಕಿಲೋಮೀಟರುಗಳಷ್ಟು ನಡೆದು ನಾನು ಸೇತುವೆಯ ಬುಡ ತಲುಪಿದೆ. ಸೂರ್ಯ ಆ ಹೊತ್ತಿಗೆ ಮುಳುಗುವ ತಯಾರಿಯಲ್ಲಿದ್ದ. ಸೇತುವೆಯ ಮೇಲೆ ಸ್ಥಳೀಯರು ನಡೆಯಗೊಡಲಿಲ್ಲ. ಅಲ್ಲೊಂದಿಷ್ಟು ಸಮಯ ಕಳೆದು ಮತ್ತೆ ರಾಮೇಶ್ವರಂ ರೈಲು ನಿಲ್ದಾಣಕ್ಕೆ ಬರುವ ವೇಳೆಗೆ ನನ್ನ ರೈಲು ಸಿದ್ಧವಿತ್ತು.



ಇನ್ನೂ ನೋಡಬಹುದಾದ ಸ್ಥಳಗಳಿದ್ದುವು, ಆದರೆ ಅಲ್ಲೆಲ್ಲ ದೇವಾಲಯಗಳ ಹೊರತು ಇನ್ನೇನಿಲ್ಲ ಎಂದು ಕೇಳಿದೆ. ರಾಮಪಾದ ಎಂಬುದೊಂದು ದೇವಾಲಯ ಚೆಂದವಿದೆಯಂತೆ. ಉಳಿದಂತೆ ಅಗ್ನಿ ತೀರ್ಥದ ಮಂಡಪದ ಸಮೀಪ ಅಪ್ರಕ್ರಿಯೆಯಲ್ಲಿ ತೊಡಗಿದ್ದ ಜನರು, ವೈದಿಕರು ಸಾಲು ಸಾಲಾಗಿ ಕಂಡರು. ಮೂನ್ನೆ ಮೊನ್ನೆಯಷ್ಟೇ ನಾನು ಅನುವಾದಿಸಿ ಮುಗಿಸಿದ ’ಕರ್ಮ’ ಕಾದಂಬರಿಯ ಹಲವು ಪಾತ್ರಗಳು ನನ್ನ ಕಣ್ಣ ಮುಂದೆ ಹಾದು ಹೋದುವು. 

 ಮತ್ತೆ ಮರಳುವಾಗ ಪಾಂಬನ್ ಸೇತುವಿನ ನೀರ ಕಲಕಲ ನನ್ನ ಕಿವಿದುಂಬಿತು, ಗಾಢ ನಿದ್ರೆ ನನ್ನನ್ನಾವರಿಸಿತು. 









Friday, January 16, 2015

....ಮುಂದುವರೆದಿದೆ.

ಹಾಗೆ ಆ ಮ್ಯಾಕ್ಸಿ ಕ್ಯಾಬ್ ನ ಚಾಲಕನ ಮೇಲೆ ವಿಶ್ವಾಸವಿಟ್ಟು ರಾಮ ಸೇತುವಿನ ನಿರ್ಮಾಣಕ್ಕೆ ಹೊರಟ ಕಪಿ ಸೈನ್ಯದಂತೆ ನಾವಿದ್ದೆವು. ಈ ಮಧ್ಯೆ ನಮ್ಮ ವಾಹನದಲ್ಲಿ ಕೂರಲೆಂದು ಮುಂದೆ ಬಂದ ನವ ವಿವಾಹಿತ ಜೋಡಿಯೊಂದನ್ನು ತಡೆದು ನಿಲ್ಲಿಸಿದ ಚಾಲಕ ತನ್ನ ಭಯಂಕರ ಶೈಲಿಯಲ್ಲಿ ’ಎನ್ನ’? ಎಂದ. ಗುಬ್ಬಚ್ಚಿಯಂತಿದ್ದ ಆ ಜೋಡಿ ಹೆದರುತ್ತಲೇ ಉತ್ತರಿಸಿತು ’ಧನುಷ್ಕೋಡಿ ಜಾನಾ ಹೆ’. ನಮ್ಮ ಚಾಲಕ ತನ್ನ ಭಾಷೆಯಲ್ಲಿ ಅವರಿಗೆ ಅರ್ಥವಾಗುವಂತೆ (!) ವಿವರಿಸಿದ. ’ಧನುಷ್ಕೋಡಿ ಅಂದ್ರೆ, ಪ್ರೇತಗಳ ನಾಡು, The Ghost city. ಹೊಸದಾಗಿ ಮದ್ವೆಯಾದೋರು, ಸಂತಾನದ ನಿರೀಕ್ಷೆಯಲ್ಲಿರೋರು ಅಲ್ಲಿಗೆಲ್ಲ ಬರಬಾರ್ದು, ಬರ್ಬ್ಯಾಡ್ರಪ್ಪ’ ಅದ. ಆ ಜೋಡಿ ಭಯಗೊಂಡವೋ ಇಲ್ಲವೋ ತಿಳಿಯಲಿಲ್ಲ, ಆದರೆ ನಮ್ಮ ನಡುವೆ ಕೆಲವರು ಬೆವರಿದರು!!
ಅಂತೂ ಅವರನ್ನಲ್ಲೇ ಬಿಟ್ಟು ನಾವು ಮುಂಚಲಿಸಿದೆವು.
ತಾನು ಸಾಗಿದ್ದೇ ದಾರಿ ಎನ್ನುವ ಹಮ್ಮಿನಲ್ಲಿ ಅವ ಮರಳು ಹಾದಿಯಲ್ಲಿ ಮ್ಯಾಕ್ಸಿ ಕ್ಯಾಬ್ ನುಗ್ಗಿಸಿದ. ಆ ಕುಲುಕಾಟಕ್ಕೆ ನಲುಗಿದ ನಾವೆಲ್ಲ ಕೈಲಿದ್ದ ಮೊಬೈಲು ಕ್ಯಾಮೆರಾಗಳನ್ನು ಜೋಳಿಗೆಗೆ ಸೇರಿಸಿ, ಸಿಕ್ಕ ಯಾವುದೋ ಆಧಾರವನ್ನು ಹಿಡಿದು ಕೂತೆವು. ಆ ವಾಹನ ಚಲಿಸುತ್ತಿದ್ದ ದಾರಿಯನ್ನು ನೋಡಿದರೆ ಗಾಬರಿಯಾಗುವಂತಿತ್ತು. (Of course, ಉತ್ತರಕನ್ನಡದ ಹಳ್ಳಿಗಳಲ್ಲಿ ಸಂಚರಿಸಿದವರಿಗೆ ಅಂಥಾ ಭಯವೇನೂ ಆಗಲಿಕ್ಕಿಲ್ಲ) ರಸ್ತೆಯೆಂಬುದೇ ಇರಲಿಲ್ಲ. ಇರುವುದೆಲ್ಲ ನೀರು ಮರಳು ಮತ್ತು ಕುರುಚಲು ಕಾಡು! ಯು. ಪಿ ಯಿಂದ ಬಂದಿದ್ದ ಇನ್ನೊವಾ ಕಾರಿನ ಮಾಲಿಕ ತನ್ನ ಕಾರು ಯಾಕಿಲ್ಲಿ ಬರಲಾಗದು ಎಂಬ ಸತ್ಯವನ್ನು ಈಗ ಅರ್ಥಮಾಡಿಕೊಳ್ಳುತ್ತಿದ್ದ. ಮ್ಯಾಕ್ಸಿ ಕ್ಯಾಬ್ ಉಸುಕಿನಲ್ಲಿ ಮಾತ್ರವಲ್ಲ ನೀರಲ್ಲಿಯೂ ಸಂಚರಿಸುವ ಪರಿಗೆ ಒಳಗೇ ಕುಳಿತು ಬೆವರುತ್ತಿದ್ದ.
ಹೌದು, ನಮ್ಮ ವಾಹನ ನೀರಲ್ಲಿಯೂ ಸಂಚರಿಸುತ್ತಿತ್ತು. ಯಾಕಷ್ಟು ತುಕ್ಕು ಹಿಡಿದಿದೆಯೆಂದೂ, ಎರಡೇ ವರ್ಷಕ್ಕೆ ಯಾಕದು ಮುದಿಯಾಗುವುದೆಂದೂ ಈ ಹಾದಿಯಲ್ಲಿ ಬಂದ ಮೇಲೆ ಅರ್ಥವಾಯ್ತು. ಆ ಕಡೆಯೂ ಸಮುದ್ರ ಈ ಕಡೆಯೂ ಸಮುದ್ರ, ನಡುವಿನ ಅರೆಬರೆ ಭೂಖಂಡದಲ್ಲಿ ಚೆದುರಿಬಿದ್ದ ಹಿನ್ನೀರಿನ ಹರಿವನ್ನು ಹಾಯುತ್ತ ಅವ ದಾರಿ ಮಾಡಿಕೊಳ್ಳುತ್ತ ಸಾಗಿದ.
ದಾರಿ ಯಾವುದಯ್ಯಾ..
ಅಲ್ಲಿನವರೇ ಆದ ಚಾಲಕರಿಗೆ ನೀರಲ್ಲಿಯೂ ಮಾರ್ಗ ಗೊತ್ತಿದೆ, ಅವರಮೇಲೆ ನಂಬುಗೆಯಿಟ್ಟು ಕೂರುವುದಾದರೆ ಭಯವೇನಿಲ್ಲ. ನಡೆದು ಸಾಗಿ ಬರುವುದಾದರೆ ಕಾಲುಭಾಗದ ಹಾದಿಯನ್ನೂ ಹಾಯಲಾಗದು. ಮುಂದಿರುವುದೆಲ್ಲ ಸಮುದ್ರ ಎನ್ನಿಸಿಬಿಡುತ್ತದೆ, ಆದರೆ ಭೂಖಂಡ ಇನ್ನೂ ಉಳಿದಿರುತ್ತದೆ. ಅದರ ಮರ್ಮ ತಿಳಿದವರೇ ಗಣನಾಯಕರಾದರೆ ಆದೀತು.

ಸುಮಾರು ಮುಕ್ಕಾಲು ಗಂಟೆಯ ಈ ಹಾದಿಯಲ್ಲದ ಹಾದಿಯಲ್ಲಿ ಹಾದು ಬಂದು ಒಂದೆಡೆ ವಾಹನ ನಿಂತಿತು. ಇತಿಹಾಸದ ಅವಶೇಷಗಳ ನಡುವೆ ಬಂದು ನಿಂತಂತೆ ಅನ್ನಿಸಿತು. ಮತ್ತೆ ಅದೇ ಭಾವ, ಎಲ್ಲೆಡೆಯೂ ನೀರು, ನಾನು ನಿಂತಿರುವ ಜಾಗ ಮಾತ್ರವೇ ಭೂಮಿ ಎಂಬ ಭ್ರಮೆ. ಶುರುವಿನಲ್ಲಿ ಒಂದು ಶಿವಾಲಯವಿದೆ. ಶಿವಾಲಯದ ಎದುರಿನ ನೀರ ತೊಟ್ಟಿಯಲ್ಲಿ ಕಲ್ಲೊಂದಿದೆ. ಕಲ್ಲಿರುವುದು ಅಚ್ಚರಿಯಲ್ಲ, ಆದರೆ ಆ ಕಲ್ಲು ಉಳಿದ ಕಲ್ಲುಗಳಂತೆ ಮುಳುಗಿಲ್ಲ. ನಂಬಿ, ಅದು ತೇಲುತ್ತಿದೆ!!
ಕಲ್ಲೇ ಹೌದೋ ಅಲ್ಲವೋ ಎಂದು ಪರೀಕ್ಷೆ ಮಾಡಿದ್ದೂ ಆಯ್ತು, ಅದು ಕಲ್ಲೇ. ನಮ್ಮಲ್ಲಿ ಸಿಗುವ ಲಾಟರೈಟ್ ಕಲ್ಲಿನಂತೆಯೇ ಇದೆ, ಬಿಳಿ ವರ್ಣ, ಆದರೆ ಅದಕ್ಕಿಂತ ಹೆಚ್ಚಿಗೆ ಇನ್ನೇನೋ ಇದೆ ಇದರಲ್ಲಿ- ಬಹುಶಃ ಗಾಳಿ! ಎತ್ತಿ ನೋಡಿದ್ದೂ ಆಯ್ತು, ಸಾಕಷ್ಟು ಭಾರವಾಗಿಯೂ ಇದೆ.
ಕಪಿಸೇನೆ ಕಟ್ಟಿದ ರಾಮಸೇತುವಿಗೆ ಬಳಕೆಯಾದ ಕಲ್ಲು ಈ ಬಗೆಯದ್ದು ಎಂಬುದು ಸ್ಥಳೀಯರ ವಿವರಣೆ. ಅಲ್ಲೆಲ್ಲ ಆ ಬಗೆಯ ಕಲ್ಲು ಸಿಗುವುದಂತೆ. ನಮ್ಮ ಕಾವ್ಯಗಳು ಎಷ್ಟು ವ್ಯವಸ್ಥಿತವಾಗಿ ನಮ್ಮ ಭೂಸಂರಚನೆಯೊಡನೆ ತಳುಕು .
ತೇಲುವ ಶಿಲೆ.
ಹಾಕಿಕೊಂಡಿವೆ ಎಂಬುದು ಇಂಥ ಉದಾಹಾಣೆಗಳಿಂದ ಸ್ಪಷ್ಟವಾಗುತ್ತದೆ. ಧನುಷ್ಕೋಡಿ ೨೧ನೇ ಶತಮಾನದ ಸಾಮಾನ್ಯ ವಾಹನಗಳಿಗೆ ದುರ್ಭೇದ್ಯ, ಅಂಥದರಲ್ಲಿ ಕಾಡುಗಳೇ ಭೂಮಿಯ ಒಡೆಯರಾಗಿದ್ದ ಕಾಲದಲ್ಲಿ ಕವಿ ವಾಲ್ಮೀಕಿ ಈ ಭೂಭಾಗದ ಅಂಚನ್ನು ಗುರುತಿಸುತ್ತಾನೆ, ಅದು ಲಂಕೆಗೆ ಭಾರತದಿಂದ ಇರಬಹುದಾದ ಅತಿ ಹತ್ತಿರದ ಮಾರ್ಗ ಎಂಬುದನ್ನೂ ಅರ್ಥಮಾಡಿಕೊಳ್ಳುತ್ತಾನೆ. ಇಲ್ಲಿಂದ ಲಂಕೆ ಬರೀ ಹದಿನೆಂಟು ಕಿ. ಮೀ!! ಭಾರತದ ಭೂಭಾಗದೊಡನೆ, ಇಲ್ಲಿನ ಮಣ್ಣು ಗಾಳಿಯೊಡನೆ ಒಂದಾದ ಕಾವ್ಯಗಳಿವೆ ಎನ್ನುವುದೇ ನೆಲದ ಹೆಮ್ಮೆ. ಇರಲಿ. ಅಂಥಾ ಕಲ್ಲು ಇದ್ದರೆ ನನಗೂ ತರಬೇಕಿತ್ತು. ಅಂಥದೇ ಸಂರಚನೆಯಿರುವ ಕಲ್ಲನ್ನೇನೋ ತಂದೆ, ಆದರೆ ಇಲ್ಲಿ ಬಂದು ನೋಡಿದರೆ ಅದು ಎಲ್ಲ ಕಲ್ಲುಗಳಂತೆ ಅಮಾಯಕವಾಗಿ ನೀರಲ್ಲಿ ಮುಳುಗುತ್ತಿದೆ.

ಮುಂದುವರಿದಂತೆ ನಮ್ಮನ್ನು ಬರಮಾಡಿಕೊಂಡಿದ್ದು ಕಾಲದ ಎದುರಿಗೆ ಬಟಾಬಯಲು ಬೆತ್ತಲೆ ನಿಂತ ಹಲವು ಕಟ್ಟಡಗಳು. ಆಕಾರದಲ್ಲಿ ಭಾರೀ ಆಗಿಯೇ ಕಾಣಿಸುವ ಆ ಅವಶೇಷಗಳ ಮಧ್ಯೆ ಈಗಲೋ ಆಗಲೋ ಹಾರುವಂತಿರುವ ಜೋಪಡಿಗಳು, ಮತ್ತು ಜೀವಧಾರಣೆಗೆ ಹಂಬಲಿಸುತ್ತಿರುವ ಸಾಧಾರಣ ಕಣ್ಣುಗಳು. ಹೆಜ್ಜೆ ಕಸಿಯುವ ಉಸುಕಿನಲ್ಲಿ ಪಾದಗಳಿಗೆ ಗಟ್ಟಿಯಾದ ಆವಾರವೇನೋ ತಾಕುತ್ತಿದೆ! ಗಮನಿಸಿ ನೋಡಿದರೆ ರಸ್ತೆ! ಈ ನೆಲದಲ್ಲಿ ನಾನದನ್ನು ಊಹಿಸಲು ಸಾಧ್ಯವಿರಲಿಲ್ಲ. ಆದರಿಲ್ಲಿ ಅದು ಸತ್ಯವಾಗಿತ್ತು. ಸುತ್ತಮುತ್ತಲಿನ ಅವಶೇಷಗಳು ಮತ್ತು ನೆಲದಡಿಯ ರಸ್ತೆ ಏನನ್ನೋ ಹೇಳಲು ಪ್ರಯತ್ನ ಮಾಡ್ತಿವೆ. ಅದ್ಯಾವ ಕಥೆಯಿರಬಹುದು ಎಂಬ ಕುತೂಹಲ ತಡೆಯಲಾಗಲಿಲ್ಲ. ಹಾಗಂತ ಅಲ್ಲಿದ್ದ ಎನ್ನಡ ಎಕ್ಕಡಗಳಿಂದ ಅದರ ವಾಸ್ತವ ಕಥೆಯನ್ನು ನಿರೀಕ್ಷಿಸುವುದು ಸಾಧ್ಯವೂ ಇರಲಿಲ್ಲ.

ರಸ್ತೆಯಿಲ್ಲ, ಶಾಲೆಯಿಲ್ಲ, ವಾಹನವ್ಯವಸ್ಥೆ ಇಲ್ಲ, ಆಸ್ಪತ್ರೆಯಿಲ್ಲ, ವಿದ್ಯುತ್ತಿಲ್ಲ. ಆದರೆ ನನ್ನ ದೇಶದ ಜನರಿದ್ದಾರೆ ಅಲ್ಲಿ!! ಅಂದಾಜು ೫೦೦ ಜನಸಂಖ್ಯೆ ಇದೆ ಎಂಬುದು ಕೇಳಿಬಂದ ಮಾತು. ಧನುಷ್ಕೋಡಿಯಲ್ಲಿ ಎಂದಲ್ಲ, ಪೂರ್ತಿಯಾಗಿ ರಾಮೇಶ್ವರಮ್ ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಭಿಕ್ಷುಕರು, ಅಸಹಾಯಕರು, ಹುಚ್ಚರು ಇದ್ದಾರೆ. ಇದಕ್ಕೆ ಕಾರಣ ಗೊತ್ತಿಲ್ಲ. ಧನುಷ್ಕೋಡಿಯಲ್ಲಂತೂ ಅದೊಂದು ಜೀವನಾಧಾರ ಕಸುಬಿನಂತಾಗಿದೆ. ರಣ ಬಿಸಿಲಲ್ಲಿ ಮರಳಲ್ಲಿ ಕುಳಿತು ಭಿಕ್ಷೆ ಕೇಳುತ್ತಾರೆ. ಅವರ ಅವಸ್ಥೆಯನ್ನು ಕಂಡರೆ ನನ್ನ ಭಾರತದ ಬಗ್ಗೆ ಮನಸು ಮರುಕಪಡುತ್ತದೆ.

ಭಾರತ ಭೂಶಿರ ಕನ್ಯಾಕುಮಾರಿಯಲ್ಲಿ ನಿಂತಾಗಿನ ರೋಮಾಂಚನಕ್ಕೂ ಇಲ್ಲಿನದಕ್ಕೂ ವ್ಯತ್ಯಾಸವಿತ್ತು. ಅದು ಮೂರು ಸಮುದ್ರಗಳು ಸೇರುವಾಗಿನ ಅಪೂರ್ವ ಮೇಳ. ವಿವೇಕಾನಂದರು ತಪಗೈದ ನೆಲೆಯ ಅನುಭೂತಿ.  ಇಲ್ಲಿನದು ಶಾಂತ ಶರಧಿಯಲ್ಲಿ ಕೊನೆಯಾಗುವ ಭೂಭಾಗ. ಸೀತೆಯಿರದ ರಾಮನ ಕೋಪಕ್ಕೆ ಹೆದರಿ ಶಾಂತವಾದ ಸಾಗರ ಇಂದಿಗೂ ಶಾಂತವಾಗಿಯೇ ಇರುವನೇ ಎಂಬ ಭಾವ.
At the tip of My India. 

ರಾಮ ಸೇತು ನೋಡುವ ಉಮೇದಿಯಿದ್ದರೆ ಅದಿಲ್ಲಿ ಸುಳ್ಳಾಗುತ್ತದೆ. ಸೇತುವೆಯ ಆರಂಭ ಅಂತೆಲ್ಲ ಗುರುತಿಸಲಾಗದು. ಅದರಲ್ಲೂ ನಮ್ಮ ವಾಹನ ಸಾರಥಿ ಹೇಳಿದಂತೆ ಈಗಿರುವ ನೀರಿನ ಪ್ರಮಾಣದಲ್ಲಿ ಅಲ್ಲಿಯವರೆಗೆ ಹೋಗಲಾಗದಂತೆ. ಆದರೆ ಅದೊಂದು ಅನುಭೂತಿಯನ್ನು ಪಡೆಯಬಹುದಷ್ಟೆ, ನನ್ನ ನೆಲದ ಮಹಾಮಹಿಮನೊಬ್ಬ ಇಲ್ಲಿ ಐತಿಹಾಸಿಕ ನಿರ್ಮಿತಿಯೊಂದನ್ನು ನಡೆಸಿದ್ದ ಎಂಬ ರೋಮಾಂಚನ ನಮ್ಮದಾಗಿಸಿಕೊಳ್ಳಬಹುದು. ಇಷ್ಟೇ ರೋಮಾಂಚನಕಾಗಿ ಪ್ರವಾಸ ಹೊರಡುವ ನನ್ನಂಥವರಿಗೆ ಅಡ್ಡಿಯಿಲ್ಲ. ಮಧ್ಯಾಹ್ನ ಹನ್ನೆರಡಾದರೂ ಸುಡದ ಬಿಸಿಲಿನಲ್ಲಿ ಆ ಪ್ರೇತ ನಗರಿಯ ಉದ್ದಗಲಕ್ಕೆ ತಿರುಗಿದೆ. ಒಬ್ಬನೇ ಇದ್ದೆನಲ್ಲ, ಹಾಗಾಗಿ ನನ್ನ ಚಿತ್ರಗಳು ಕಡಿಮೆಯೇ ಇವೆ, ಸೆಲ್ಫಿ ನನಗೆ ಸರಿಯಾಗದು, ಹಾಗಾಗಿ ಜೊತೆಗಾರರು ಸಿಕ್ಕಾಗ ಮಾತ್ರ ’One click please' ಅಂತ ಅರಿಕೆ ಮಾಡಿಕೊಂಡು ನನ್ನ ಚಿತ್ರ ತೆಗೆಸಿಕೊಂಡಿದ್ದೇನೆ. ಆಹ್, ಪ್ರೇತಗಳ ಕಥೆ ಹೇಳಬೇಕಲ್ಲವೆ, ಹೇಳುವೆ. ಅದಕ್ಕೆಂದೇ ಹೊರಟಿದ್ದೇನೆ.

ಅದು 1964 ನೇ ಇಸವಿ. ಡಿಸೆಂಬರ್ 22 ರಾತ್ರಿ. ಅದುವರೆಗೆ ಕಂಡು ಕೇಳರಿಯದ ಮಹಾ ಚಂಡಮಾರುತವೊಂದು ಧನುಷ್ಕೋಡಿಯನ್ನೂ ರಾಮೇಶ್ವರಂ ಅನ್ನೂ ಅಪ್ಪಳಿಸುತ್ತದೆ. ಅದೆಂಥಾ ಚಂಡ ಮಾರುತವೆಂದರೆ, ಅದರ ರಭಸಕ್ಕೆ ಎದ್ದ ಅಲೆಗಳು 7 ಮೀಟರ್ ನಷ್ಟು ಎತ್ತರಕ್ಕೆ ನೆಗೆದಿದ್ದುವು ಎಂಬುದು ಇತಿಹಾಸದ ನೆನಕೆ. ಆ ಭೀಕರ ಚಂಡ ಮಾರುತ ಪೂರ್ತಿ ನಗರವನ್ನು ಹೊಸಕಿ ಹಾಕಿತು. ಅದುವರೆಗೆ ರಾಮೇಶ್ವರಂ ನಂತೆಯೇ ಪ್ರಸಿದ್ಧವಾಗಿದ್ದ ನಗರ ಪೂರ್ತಿಯಾಗಿ ಸತ್ತು ಮಲಗಿತು. ೧೮೦೦ ಜನ ಕ್ಷಣದಲ್ಲಿ ಹೆಣವಾದರು. ಭಾರತ ಮತ್ತು ಲಂಕೆಯ ಮಧ್ಯೆ ಇದ್ದ ಬೋಟ್ ಸಂಪರ್ಕವ್ಯವಸ್ಥೆಯನ್ನು ಶಾಶ್ವತವಾಗಿ ಮುಚ್ಚಲಾಯ್ತು. ನಗರದಲ್ಲಿ ದೇವಾಲಯಗಳಿದ್ದವು, ರೇಲ್ವೆ ವ್ಯವಸ್ಥೆಯಿತ್ತು, ರಸ್ತೆ ವ್ಯವಸ್ಥಿತವಾಗಿತ್ತು, ಪೋಸ್ಟಾಫೀಸೂ ಇತ್ತು, ದೊಡ್ಡ ದೊಡ್ಡ ಕಟ್ಟಡಗಳಿದ್ದುವು. ಭಾರತವನ್ನಾಳಿದ ಬ್ರಿಟಿಷರು ಇದೆಲ್ಲವನ್ನೂ ವ್ಯವಸ್ಥಿತವಾಗಿ ರೂಪಿಸಿದ್ದರು. ಈಗಿರುವುದಕ್ಕಿಂತ ಮೂರ್ನಾಲ್ಕು ಕಿಲೋಮೀಟರು ಮುಂದಿನವರೆಗೂ ಭೂಭಾಗ ಇತ್ತು. ಈಗದು ಶಾಶ್ವತವಾಗಿ ನೀರಲ್ಲಿ ಮುಳುಗಿದೆ. ಆ ರಾತ್ರಿ ತಲುಪಬೇಕಿದ್ದ ರಾಮೇಶ್ವರಂ- ಧನುಷ್ಕೋಡಿ ಪ್ಯಾಸೆಂಜರ್ ಟ್ರೈನ್ ಅಂದಿನ ಜಲವಿಕೋಪಕ್ಕೆ ಆಹುತಿಯಾಯ್ತು. ಒಟ್ಟಿಗೆ ೧೧೦ ಪ್ರಯಾಣಿಕರನ್ನು ಬಲಿ ಪಡೆಯಿತು. ಒಟ್ಟಿನಲ್ಲಿ ಭೂಭಾಗ  ನೀರಲ್ಲಿ ಶಾಶ್ವತವಾಗಿ ಮುಳುಗುವ ಪ್ರಕೃತಿ ಪ್ರಕ್ರಿಯೆಗೆ ಸಾವಿರಾರು ಜನ ಪ್ರಾಣ ತೆತ್ತರು. ನಗರವೊಂದು ನಿರ್ನಾಮವಾಯ್ತು. ಮತ್ತದು ಇಂಗ್ಲೀಷಿನಲ್ಲಿ Ghost Town ಅನ್ನಿಸಿಕೊಂಡಿತು. (ಪರಿತ್ಯಕ್ತ ನಗರಕ್ಕೆ ಆ ಭಾಷೆಯಲ್ಲಿ ಬಳಕೆಯಲ್ಲಿರುವ ಪದ ಅದು).
ಪುರಾತನ ರೇಲ್ವೆ ನಿಲ್ದಾಣ. 

ಅಳಿದುಳಿದ ಜನ ಅಲ್ಲಿಂದ ಕಾಲ್ಕಿತ್ತರು, ಹಲವಷ್ಟು ಹೆಣಗಳು ಕೊನೆಗೂ ಸಿಗದೆ ಉಳಿದುವು. ಇವತ್ತಿಗೆ ಬೆರಳೆಣಿಕೆಯ ಕುಟುಂಬಗಳಷ್ಟೇ ಅಲ್ಲಿರುವುದು. ಅದೂ ಅತ್ಯಂತ ದಯನೀಯ ಸ್ಥಿತಿಯಲ್ಲಿ. ಆದರೂ ಅದನ್ನು ಪ್ರೇತ ನಗರಿ ಎಂದು ಜನ ಕರೆಯಲು ತೊಡಗಿದ್ದಕ್ಕೆ ಮತ್ತಷ್ಟು ಕಾರಣಗಳಿವೆ. ಅದನ್ನು ಮತ್ತೆ ಚರ್ಚಿಸುವೆ. ಇನ್ನಷ್ಟು ಚಿತ್ರಗಳೊಂದಿಗೆ, ಮುಂದಿನ ಸಂಚಿಕೆಯಲ್ಲಿ....

Thursday, January 15, 2015

ಧನುಷ್ಕೋಡಿಯೆಂಬ ಪ್ರೇತ ನಗರಿಗೆ.....

ಏಳು ತಾಸಿನ ಸುಲಲಿತ ನಿದ್ರೆಯನ್ನು ಯಾರೋ ಕಲಕಲ ಧ್ವನಿಗೈದು ತಿಳಿಯಾಗಿ ಕಲಕುತ್ತಿದ್ದರು. ಭಾರತೀಯ ರೇಲ್ವೆಯ ಯಾವುದೇ ಬಗೆಯ ಸದ್ದು ನನಗೆ ಕಳೆದ ಏಳು ವರ್ಷಗಳಿಂದ ಪರಿಚಿತ. ಆದರೆ ಈ ಶಬ್ದ ರೇಲ್ವೆಯದಲ್ಲ! ಕಣ್ ಬಿಟ್ಟು ಎದ್ದು ಕುಳಿತೆ. ಆ ಶಬ್ದ ಇನ್ನಷ್ಟು ಸ್ಪಷ್ಟವಾಯ್ತು. ಕಿಟಕಿಯ ಪಕ್ಕ ಬಂದು ಕುಳಿತು ಹೊರಗಿಣುಕಿದೆ. ಇನ್ನೂ ಸೂರ್ಯ ಮೂಡುವುದರಲ್ಲಿದ್ದ, ಬೆಳಕು ನಿಚ್ಚಳವಾಗಿರಲಿಲ್ಲ, ಚಳಿಯು ಹದವಾಗಿತ್ತು. ಕಣ್ಣರಳಿಸಿ ನೋಡುತ್ತೇನೆ- ಮಬ್ಬು ಬೆಳಕಲ್ಲಿ ಅಂತವಿರದ ಜಲರಾಶಿ, ಆ ಕಡೆಗೂ ಈ ಕಡೆಗೂ. ನಾನಿದ್ದ ರೇಲ್ವೆ ನಿಧಾನಕ್ಕೆ ಸದ್ದಿರದೆ ಸಾಗುತ್ತಿದೆ, ಹಾಗಾಗಿ ನೀರಿನ ಆ ಕಲಕು ಶಬ್ದವೇ ತುಂಬಿಕೊಂಡಿದೆ ಎಲ್ಲೆಲ್ಲಕಡೆಗೂ. ಸಮುದ್ರಕ್ಕೆ ಕಟ್ಟಿದ ಸೇತುವೆಯ ಮೇಲಿನ ಮೊದಲ ರೈಲು ಅನುಭವ ನನ್ನದು. ಅಲೆಗಳ ಮೊರೆತ, ಇತಿಹಾಸದ ತುಂಡಿನಂತೆ ಇರುವ ಆ ಅಪೂರ್ವ ಸೇತುವೆ... ನಾನು ರಾಮೇಶ್ವರಂ ಎಂಬ ದ್ವೀಪನಾಡನ್ನು ತಲುಪುತ್ತಿದ್ದೆ. ಮತ್ತೆ ಆ ಸೇತುವೆ ಭಾರತದೊಂದಿಗೆ ಸಂಪರ್ಕ ಕಲ್ಪಿಸುವ ಅನನ್ಯ ಮಾರ್ಗ, ಅದಿಲ್ಲದಿದ್ದರೆ ಭಾರತದ ಪಾಲಿಗೆ ರಾಮೇಶ್ವರಮ್ ಎಂದೆಂದಿಗೂ ದ್ವೀಪವೆ. ಎರಡೂಕಾಲು ಕಿಲೋಮೀಟರು ಉದ್ದದ, ನೂರು ವರ್ಷದ ಇತಿಹಾಸವಿರುವ  ಪಾಂಬನ್ ಸೇತುವೆ!
Pamban Bridge.
ಆ ಸೇತುವೆಯ ವಯಸ್ಸನ್ನೂ, ಒಂದೇ ವರ್ಷದಲ್ಲಿ ಕಟ್ಟಿ ಮುಗಿಸಿದ ಆ ಜನಗಳ ಎಂಜಿನಿಯರಿಂಗ್ ಕೌಶಲವನ್ನೂ ಚಿಂತಿಸುತ್ತ ಕುಳಿತೆ. ನಾನಿದ್ದ ರಾಮೇಶ್ವರಂ ಎಕ್ಸ್ಪ್ರೆಸ್ ಸುಮಾರು ಹದಿನೈದು ನಿಮಿಷ ಹೆಚ್ಚಿನ ಸದ್ದಿರದೆ ಸೇತುವೆ ಕ್ರಮಿಸಿತು. ನನ್ನನು ಭಾರತದ ದ್ವೀಪ ಪ್ರದೇಶವೊಂದಕ್ಕೆ ಕೊಂಡೊಯ್ದಿತು.

ಬೆಳಗಿನ ಆರುವರೆಗೆಲ್ಲ ರಾಮೇಶ್ವರಮ್ ನ ಸಮುದ್ರದ ಎದುರಿಗೆ ನಿಂತಿದ್ದೆ. ಸೂರ್ಯ ಇನ್ನೂ ಉದಯಿಸುತ್ತಿದ್ದ, ಮೋಡಗಳು ಮಳೆ ಹನಿಸುತ್ತಿದ್ದುವು. ಸಮುದ್ರ ಸ್ನಾನದ ಜನರು ಪಾವನವಾಗುತ್ತಿದ್ದರು. ಅದೋ ಅಲ್ಲಿ ದೇವಸ್ಥಾನ ಆಗಲೇ ಜನಗಳ ಗಡಿಬಿಡಿಗೆ ಸಾಕ್ಷಿಯಾಗುತ್ತಿತ್ತು. ನನಗೆ ದೇವಾಲಯದ ದರ್ಶನಕ್ಕಿಂತ ಹೆಚ್ಚಿಗೆ ಸಮುದ್ರ ಮತ್ತು ರಾಮಸೇತು ಕರೆಯುತಿದ್ದುವು, ಅದಕ್ಕಲ್ಲವೆ ಇಷ್ಟು ದೂರ ಒಂಟಿ ಪ್ರಯಾಣಿಸಿ ಬಂದಿದ್ದು!
              

ರಾಮೇಶ್ವರದ ಬೆಳಗು. 
ದೇವಾಲಯ ತುಂಬಾ ವಿಸ್ತಾರವಾದ್ದು. ತುಂಬ ಹಳೆಯ ಶೈಲಿಯದಲ್ಲ, ಆದರೆ ಇಲ್ಲಿಯ ಆಚರಣೆಗಳು ವಿಶಿಷ್ಟವಾದವುಗಳು. ದೇವಾಲಯದ ಆವರಣದಲ್ಲಿ ೨೨ ಬಾವಿಗಳಿವೆ, ಅವೆಲ್ಲವನ್ನೂ ತೀರ್ಥವೆಂದು ಬಗೆಯುವ ಭಕ್ತರು ಅವಷ್ಟರಲ್ಲೂ ಸ್ನಾನ ಮಾಡಿ ದೇವರ ದರ್ಶನ ಮಾಡುತ್ತಾರೆ. ಪೂರ್ಣ ಶಿಲಾಮಯವಾದ ದೇವಾಲಯದಲ್ಲಿ ಬೃಹತ್ ನಂದಿ ಮತ್ತು ಶಿವಲಿಂಗ ಇವೆ. ರಾಮ ಅರ್ಚನೆ ಮಾಡಿದ್ದು ಮರಳಿನ ಲಿಂಗವಾದ್ದರಿಂದ ಈ ದೇವಾಲಯದಲ್ಲಿ ಲಿಂಗವಿರಲಿಲ್ಲ, ಆದಿ ಶಂಕರರು ಸ್ಫಟಿಕ ಲಿಂಗವನ್ನು ಪೂಜೆಗಾಗಿ ಕೊಟ್ಟರೆಂಬ ಪ್ರತೀತಿ ಕೇಳಿಬಂತು. ಬೃಹತ್ತಾದ ಈ ದೇವಾಲಯದಲ್ಲಿ ಅರ್ಚನೆಯ ಲಿಂಗವಿರಲಿಲ್ಲ ಎಂಬುದು ವಿಚಿತ್ರಗಳಲಿ ಒಂದೆನ್ನಿಸಿತು. ದೇವಾಲಯದ ಒಳ ಮೇಲ್ಛಾವಣಿಯನ್ನು ಅಲಂಕರಿಸಿದ ಚಿತ್ರಗಳು ಚಿತ್ತಾಕರ್ಷಕವಾಗಿವೆ. ಖುಷಿಯಾದ ಸಂಗತಿಯೆಂದರೆ ಸಾಮಾನ್ಯ ದೇವಾಲಯಗಳಲ್ಲಿ ಇರುವಂತೆ ಹಣಕ್ಕಾಗಿ ಪೀಡನೆ ಇಲ್ಲಿ ಅಷ್ಟಾಗಿ ಕಂಡು ಬರಲಿಲ್ಲ. ನಾನೊಂದು ತಾಸು ದೇವಾಲಯದ ಪ್ರಾಂಗಣದಲ್ಲಿ ಕಳೆದೆ. ಅಲ್ಲಂತೂ ಫೋಟೊಗ್ರಫಿಗೆ ಅವಕಾಶವಿರಲಿಲ್ಲ. ನನ್ನ ಗಮನವೆಲ್ಲ ಧನುಷ್ಕೋಡಿಯೆಂಬ ಭಾರತ ಭೂಶಿರದ ತುದಿಯಲ್ಲಿತ್ತು. ದೇವಾಲಯದಿಂದ ಹೊರಗೆ ಹೊರಟೆ. 

ಮುಂದಿನ ಪ್ರಯಾಣ ಧನುಷ್ಕೋಡಿಯೆಡೆಗೆ. ಆ ಹೊತ್ತಿಗೆ ಆಗಸ ಶುದ್ಧವಾಗಿತ್ತು, ಸೂರ್ಯ ಸ್ಪಷ್ಟವಾಗಿದ್ದ. ಬಸ್ಸೊಂದು ನನ್ನನ್ನು ಧನುಷ್ಕೋಡಿಯ ದಿಕ್ಕಿಗೆ ಒಯ್ದಿತು. ಎರಡೂ ಕಡೆಗೆ ನೀರಿರುವ, ಮಿಕ್ಕ ಜಾಗದಲ್ಲೆಲ್ಲ ಹಸುರು ಹೊದ್ದಿರುವ, ಮಣ್ಣೆಂದರೆ ಮರಳೋ ಎಂಬಂತಿರುವ ಹಾದಿಯಲ್ಲಿ ಮುಕ್ಕಾಲು ಗಂಟೆ ಪ್ರಯಾಣ. ಸ್ಪಷ್ಟವಾಗಿ ತಿಳಿಯುವಂತೆ ಅದು ಸಮುದ್ರದ ಮಧ್ಯದಲ್ಲಿ ಭೂಮಿಯ ಒಳಚಾಚು. ಅದರ ಅಂತೂ ಅಗಲ ಒಂದು ಕಿ. ಮೀ ಇದ್ದೀತಷ್ಟೆ. ಟಾರ್ ರಸ್ತೆ ಮುಗಿಯುವಲ್ಲಿ ಬಂದು ಬಸ್ಸಿನವ ನಿಂತ, ಎದುರಿಗೆ ಸಮುದ್ರವಿತ್ತು. ಮನಸು ಸಂಭ್ರಮಿಸಿತು.
ಅಲೆಯೆದ್ದು- ಅಲೆಬಿದ್ದು...
ಅರಬ್ಬಿ ಸಮುದ್ರದ ಪರಿಚಯವಿದ್ದ ನನಗೆ ಈ ಸಮುದ್ರ ಬಣ್ಣದಲ್ಲಿ, ಸ್ವಭಾವದಲ್ಲಿ, ಧ್ವನಿಯಲ್ಲಿ ಭಿನ್ನವಾಗಿ ಕಂಡಿತು. ತಿಳಿ ನೀಲಿ ಬಣ್ಣದ (ಅಥವಾ ಹಸಿರೋ!) ಅಗಾಧ ಜಲರಾಶಿ, ಸಮುದ್ರವೆಂದರೆ ಶಬ್ದ ಎಂಬಂತಿರುವ ನಮ್ಮ ಪಶ್ಚಿಮ ಕರಾವಳಿಯಿಂದ ಪೂರ್ತಿ ಭಿನ್ನವಾದ ಅದರ ಸದ್ದಿರದ ಸ್ವಭಾವ, ಒಮ್ಮೆಗೇ ಆಳವಾಗುವ ಹರವಲ್ಲದ ತೀರ, ಆಗೊಮ್ಮೆ ಈಗೊಮ್ಮೆ ಬರುವ ಅಲೆ... ಬಂಗಾಳಕೊಲ್ಲಿಯ ವ್ಯವಹಾರ ಅರಬ್ಬಿ ಸಮುದ್ರಕ್ಕಿಂತ ಭಿನ್ನ. ಎಲ್ಲಕ್ಕಿಂತ ನನಗೆ ಆಕರ್ಷಕವೆನ್ನಿಸಿದ್ದು ಅದರ ಬಣ್ಣ. ತುಂಬಾ ಸೊಗಸಾದ, ಕಣ್ ಸೆಳೆಯುವ ವರ್ಣ ಅದರದ್ದು. ಅರಬ್ಬೀ ಸಮುದ್ರಕ್ಕಿಂತ ಸ್ಪಷ್ಟವಾಗಿ ನೆಲಕಾಣಿಸುವ ಶುದ್ಧತೆ. ಅರಬ್ಬೀ ಸಮುದ್ರ ಮನುಷ್ಯನನ್ನು ಆರಾಮಕ್ಕೆ ಒಳಗೆ ಬಿಟ್ಟುಕೊಂಡರೆ ಇದರದ್ದು ಸ್ವಲ್ಪ ಬಿಗುಮಾನ. ಅಲೆಗಳನ್ನು ಊಹಿಸಲಾಗದು, ತೀರದ ಆಳವನ್ನೂ. ಹಾಗಾಗಿ ಸಮುದ್ರದ ಒಳಕ್ಕಿಳಿಯುವುದು ಕಷ್ಟ. ದೂರದಿಂದ ಚಂದವೆನ್ನಿಸುವ ನೀರ್ರಾಶಿ. ಸೂರ್ಯ ಹೊಳೆಯುತ್ತಿದ್ದರೂ ಆ ಪುಲಿನರಾಶಿ ಅಹಿತವೆನಿಸಲಿಲ್ಲ, ಹಿತವಾದ ಚಳಿಯಿತ್ತು. ಕನ್ಯಾಕುಮಾರಿಯಲ್ಲಿ ಮೂರು ಸಮುದ್ರ ಸೇರುವ ಜಾಗದಲ್ಲಿ ( ಅವು ಬೇರೆ ಬೇರೆ ಎಂಬುದೇ ಕಲ್ಪನೆ ಎಂಬುದು ಬೇರೆ ಮಾತು) ಈ ತಿಳಿಸುಂದರಿಯ ಗುರುತು ಇಷ್ಟು ಸ್ಪಷ್ಟವಾಗಿಲ್ಲ. ಇಲ್ಲಿ ಅವಳದ್ದೇ ಸಾಮ್ರಾಜ್ಯ. ಪೂರ್ವ ಜಲಧಿಯದ್ದು. 
ನನ್ನ ಕನಸಿನ ಧನುಷ್ಕೋಡಿ ಇದಲ್ಲವೆಂದು ಕೈಲಿದ್ದ ಗೂಗಲ್ ಮ್ಯಾಪ್ ತೋರಿಸುತ್ತಿತ್ತು. ಇದು ಸಾಮಾನ್ಯವಾಗಿ ಪ್ರವಾಸಿಗರು ಬಂದು ಹೋಗುವ ಕೊನೆಬಿಂದು. ಇಲ್ಲಿಗೆ ರಸ್ತೆ ಮುಗಿಯುತ್ತದೆ,  ಆದರೆ ಸಮುದ್ರದ ಒಳಚಾಚು ಇದಿಷ್ಟಕ್ಕೆ ಮುಗಿಯುವುದಿಲ್ಲ. ಅದಿನ್ನೂ ಕಿರಿದಾಗುತ್ತ ಸಾಗುತ್ತದೆ. ನಡು ನಡುವೆ ಭೂಖಂಡಗಳೇ ಮರೆಯಾಗಿ ಬರಿಯ ನೀರು ಸಿಗುತ್ತದೆ. ಒಂದೊಂದು ಭಾಗವೂ ಒಂದೊಂದು ದ್ವೀಪದಂತೆ. ಗೂಗಲ್ ಅರ್ಥ್ ನಲ್ಲಿಯೂ ಈ ಭಾಗ ಕಿರಿದಾಗುತ್ತ ಸಾಗುವ ಬಾಲದಂತೆಯೇ ಕಾಣಿಸುತ್ತದೆ. 

ನನಗಲ್ಲಿ ನಿಲ್ಲಲು ಮನಸು ಒಗ್ಗಲಿಲ್ಲ. ಭೂಮಿ ಖಾಲಿಯಾಗುವವರೆಗೆ ನಡೆಯುವ ಹುಚ್ಚಿತ್ತು, ಹೆಗಲ ಭಾರ ಹೆಚ್ಚಿರಲಿಲ್ಲ, ಮನಸೂ ಹಗುರವಿತ್ತು. ಯಾವುದೇ ಖಾಸಗಿ ವಾಹನದವರಿಗೂ ಮುಂದಕ್ಕೆ ವಾಹನ ಚಲಾಯಿಸುವ ಅನುಮತಿಯಿಲ್ಲ, ’ರಸ್ತೆ ಅಪಾಯಕಾರಿ, ಹಾಗಾಗಿ ಹೋಗಗೊಡುವುದಿಲ್ಲ’ ಎಂದು ಸ್ಥಳೀಯರು, ಭಾಡಿಗೆ ವಾಹನದದವರು ತಮಗೆ ಬರುವ ಅಷ್ಟೂ ಭಾಷೆಯಲ್ಲಿ ಪ್ರವಾಸಿಗರ ಮನ ಒಲಿಸುತ್ತಿದ್ದರು. ಇದೆಲ್ಲ ಹಣ ಮಾಡುವ ಹುನ್ನಾರು ಎಂದು ನಾವೆಲ್ಲ ಪ್ರವಾಸಿಗರು ಮೂಗು ಮುರಿಯುತ್ತ ಸುಮಾರು ಹೊತ್ತು ಕಳೆದೆವು. ಅಂತೂ ಕೊನೆಗೊಂದಿಪ್ಪತ್ತು ಜನ ಸೇರಿ ಮಾಕ್ಸಿ ಕ್ಯಾಬ್ ಒಂದನ್ನು ಒಪ್ಪಿಸಿದೆವು. ಆ ವಾಹನದ ಸರ್ವಾಂಗವೂ ಕಂಪಿಸುತ್ತಿತ್ತು, ತುಕ್ಕು ಅಕಾಲಿಕವಾಗಿ ಬಂದ ಮುಪ್ಪಿನಂತೆ ಆ ವಾಹನವನ್ನು ತಿಂದು ಹಾಕುತಿತ್ತು. ಆ ಚಾಲಕನಿಗೆ ವಾಹನದ ಮೇಲೆ ಕರುಣೆಯೇ ಇದ್ದಂತಿರಲಿಲ್ಲ!! ’ಇವನ ಲಡ್ಕಾರು ಮ್ಯಾಕ್ಸಿ ಕ್ಯಾ ಬ್ ಹೋಗುವುದಾದರೆ ನಮ್ಮ ಇನ್ನೋವಾ ಹೋಗದೆ?’ ಯು.ಪಿ. ಇಂದ ಬಂದಿದ್ದ ಪ್ರವಾಸಿಗರು ಪರಿಪ್ರಶ್ನೆಗೈಯುತಿದ್ದರು. ಕೊನೆಗೂ ನಾವೆಲ್ಲ ಆ ಮ್ಯಾಕ್ಸಿ ಕ್ಯಾಬಿನಲ್ಲಿ ಸೀಟುಗಳನ್ನು ಹುಡುಕಿ ತೂರಿಕೊಂಡೆವು.

ಆ ವಾಹನ ರಸ್ತೆಯಲ್ಲದ ರಸ್ತೆಯಲ್ಲಿ ಹೊರಟಿತು. ನೀರು,ಕಾಡುಗಳ ಮಧ್ಯೆ...

ಮತ್ತೆ ಬರೆಯುತ್ತೇನೆ...
     
   

ಪ್ರಥಮೆ.

ತುಂಬಾ ಸರಳವಾಗಿ ಕಾಣುವ ವಿಭಕ್ತಿ ಇದು. ಪ್ರಥಮೆಯಲ್ಲಿ ಕನ್ನಡದ ನಾಮಪದಕ್ಕೆ ಇರುವುದು ಉ ಎಂಬ ಪ್ರತ್ಯಯ. ಪ್ರತ್ಯಯ ಅಂದರೆ ಮತ್ತೇನಲ್ಲ, ಶಬ್ದಗಳ ಮೂಲರೂಪದ ಎದುರಿಗೆ ಬಂದು ಸೇರಿಕೊಂಡು ಅರ್ಥ ಹೊಮ್ಮಿಸುವ ಸಣ್ಣ ಸಣ್ಣ ಕೈ-ಕಾಲು-ಕೊಂಬು-ಕೊಳಚುಗಳು. ಇವು ಬಾರದೆ ಇದ್ದರೆ ಶಬ್ದರೂಪದ ಅಭಿಪ್ರಾಯ ಏನೆಂದೇ ಅರ್ಥವಾಗದು. ಕಾಲ, ಉದ್ದೇಶ, ಸ್ಥಳ, ಸಂಬಂಧ, ಸಲಕರಣೆ- ಹೀಗೆ ಪದಗಳ ಮೂಲಕ ಅರ್ಥ ಹೊಮ್ಮುವುದಿದ್ದರೆ ಅದಕ್ಕೆಲ್ಲ ಈ ಪ್ರತ್ಯಯಗಳೇ ಕಾರಣ. ಸರಿ, ಪ್ರಥಮೆಗೆ ಉ ಎಂಬ ಪ್ರತ್ಯಯ ಕನ್ನಡದಲ್ಲಿ, ಉದಾಹರಣೆಯೂ ಸರಳವೇ- ಚಂದ್ರ, ನಾನು, ಹೊಳೆ, ಮನೆ, ಬಾವಿ ಇತ್ಯಾದಿ.
ಸರಿ, ಇಲ್ಲೆಲ್ಲಿದೆ ಸ್ವಾಮಿ ಉ ಪ್ರತ್ಯಯ!? ಉ ಎಂಬ ಧ್ವನಿಯೂ ಇಲ್ಲಿಲ್ಲವಲ್ಲ! ನಿಜ, ಅಲ್ಲಿಲ್ಲ ಎಂದಲ್ಲ, ನಾವು ಬಳಸುತ್ತಿಲ್ಲ. ಅದಿಲ್ಲದೆಯೂ ಅದರ ಅರಿವು ಮಾಡಿಕೊಂಬಷ್ಟು ನಮ್ಮ ಮಿದುಳಿನ ಭಾಷಾ ಭಾಗ ಸಿದ್ಧವಾಗಿದೆ. ಹಿಂದೆಲ್ಲ ಇದೇ ಉದಾಹರಣೆಗಳನ್ನು ಚಂದ್ರನು, ಹೊಳೆಯು, ಮನೆಯು, ಬಾವಿಯು ಎಂದೇ ಬಳಸುತ್ತಿದ್ದರು. (ಚಂದ್ರನ್, ನಾನ್, ಅವನ್ ಎಂದೆಲ್ಲ ಕನ್ನಡದಲ್ಲಿ ನಕಾರಾಂತ ಶಬ್ದಗಳು) ಹಳೆಯ ಕನ್ನಡ ಪುಸ್ತಕವಿದ್ದರೆ ಅದರ ಒಕ್ಕಣೆಯನ್ನು ಗಮನಿಸಿ, ಅಲ್ಲೆಲ್ಲ ಪ್ರಥಮೆಯು ಕಣ್ಣಿಗೆ ಕಾಣುವಂತೆ ಚಂದವಾಗಿ ಕೂತಿರುತ್ತಾಳೆ. ಉದಾ- ಮೈಸೂರು ಮುದ್ರಣಾಲಯದವರು ಅಚ್ಚು ಮಾಡಿದ ಪುಸ್ತಕವು, ಮೂರನೆಯ ಪ್ರಕಟಣೆಯು- ಇತ್ಯಾದಿ. ಇಲ್ಲೆಲ್ಲ ಪ್ರಥಮಾ ವಿಭಕ್ತಿ ಕಣ್ಣಿಗೆ ಕಾಣುವಂತಿದೆ. ಆದರೆ ಇವತ್ತು ನಾವು ಹೆಚ್ಚಿನ ನಾಮಪದಗಳಲ್ಲಿ ಪ್ರಥಮೆಯನ್ನು ಊಹಿಸಿಯೇ ತಿಳಿದುಕೊಳ್ಳುವ ಪರಿಸ್ಥಿತಿ ಇದೆ. ಅದೇ ಬಹುಜನಪ್ರಿಯವಾದ ಶೈಲಿಯೂ ಹೌದು. ಸಂಸ್ಕೃತದಲ್ಲಿ ಹೀಗೆಲ್ಲ ಬಿಟ್ಟುಬಿಡುವ ಅವಕಾಶ ಇಲ್ಲ.
ಪ್ರತ್ಯಯ ಬರುವುದು ಅರ್ಥ ಹೇಳುವುದಕ್ಕೆ ಎಂದಾದರೆ ಪ್ರಥಮೆಗೂ ಒಂದರ್ಥವಿರಲೇಬೇಕು; ಇದೆ. ಆದರೆ ಇದರ ಅರ್ಥ ವಿಶೇಷಾರ್ಥ ಅಲ್ಲ, ಬಹಳ ಪ್ರಾಥಮಿಕ ಸ್ತರದ ಅರ್ಥ. ಬರೀ ಇರುವಿಕೆಯನ್ನು (Absolute existence) ತಿಳಿಸುವುದಕ್ಕೆ ಬರುವಾಕೆ ಪ್ರಥಮೆ. ವಿಭಕ್ತಿಯನ್ನು ಬಳಸಿದಾಕ್ಷಣ ಒಂದು ಬಯಕೆ ಹುಟ್ಟುತ್ತದೆ ಮನಸಲ್ಲಿ; ’ಮುಂದೇನು?’ ಎಂಬ ಕುತೂಹಲ ಇಣುಕುತ್ತದೆ. ಉದಾ-   ೧.ಹುಡುಗನು ಅವಳನ್ನು...      
          ೨. ಹುಡುಗಿಯು ಅವನಲ್ಲಿ..
ಅಬ್ಬಾ! ಹುಡುಗ ಅವಳನ್ನು ಏನು ಮಾಡಿದ? ನೋಡಿದನೆ? ಮಾತಾಡಿದನೆ? ಮದುವೆಯಾದನೆ? ಮುದ್ದಿಸಿದನೆ? ಈ ಕುತೂಹಲಗಳೆಲ್ಲ ದ್ವಿತೀಯಾ ವಿಭಕ್ತಿಯ ಪರಿಣಾಮ. ಹಾಗೆಯೇ ’ಹುಡುಗಿಯು ಅವನಲ್ಲಿ’ ಎಂದು ಅರ್ಧಕ್ಕೇ ನಿಲ್ಲಿಸಿದರೆ ಮತ್ತೆ ಕುತೂಹಲ; ಹುಡುಗಿಯು ಅವನಲ್ಲಿ ಏನಾದಳು? ಅನುರಕ್ತೆಯಾದಳೆ? ಸಿಟ್ಟುಗೊಂಡಳೆ?- ಹೀಗೆ ಎಷ್ಟೆಲ್ಲ ಪ್ರಶ್ನೆಗಳು. ಇಲ್ಲಿ ನಮ್ಮ ತಪ್ಪಿಲ್ಲ, ಅದೆಲ್ಲ ವಿಭಕ್ತಿಯ ಮಹಿಮೆ. ಅದರೆ ಪ್ರಥಮಾ ಇದಾಳಲ್ಲ ಅವಳು ಅನಾಸಕ್ತೆ, ಈ ಬಗೆಯ ಕುತೂಹಲ ಎಂದಿಗೂ ಇಲ್ಲ ಅವಳಲ್ಲಿ. ಸತ್ತಾ (ಇರುವಿಕೆ) ಮಾತ್ರವೇ ಈ ವಿಭಕ್ತಿಯ ಅರ್ಥ. ಹಾಗಾಗಿ ಪ್ರಥಮಾ ಬಳಕೆಯ ಬಳಿಕ ಮತ್ತೆ ಬಯಕೆಗಳಿಲ್ಲ.
ಸುಳ್ಳು ಎನಿಸುತ್ತದೆಯಲ್ಲವೆ? ಯಾಕೆಂದರೆ ಬಯಕೆಯೇ ಇಲ್ಲದಿದ್ದರೆ ಪ್ರಥಮಾ ವಿಭಕ್ತಿಯ ಬಳಿಕ ವಾಕ್ಯ ಎಂಬುದೇ ಇರಬಾರದು. ಅಥವಾ ಕ್ರಿಯೆಯ ಬಯಕೆ ಇಲ್ಲದಿದ್ದರೆ ವಾಕ್ಯವು ಮುಂದುವರಿಯುವುದು ಹೇಗೆ? ಹಾಗಾಗಿ ಕ್ರಿಯೆ ಇದೆ, ಇರುವಿಕೆಯೂ ಒಂದು ಕ್ರಿಯೆ! ಅದೊಂದು ಅತಿ ಸಾಮಾನ್ಯವಾದ, ಪ್ರಾಥಮಿಕವಾದ ಕ್ರಿಯೆ. ಹಾಗಾಗಿ ಅದಷ್ಟನ್ನು ಹೇಳಿ ಪ್ರಥಮಾ ಸುಮ್ಮನಾಗುತ್ತಾಳೆ. ವಿಶೇಷವಾದ ಯಾವ ಕ್ರಿಯೆಯ ಬಯಕೆಯೂ ಅವಳಿಗಿಲ್ಲ. ಇದಕ್ಕಾಗಿಯೇ ನಾವೆಲ್ಲ ಹೆಸರು ಬರೆದುಕೊಳ್ಳುವುದು ಪ್ರಥಮಾ ವಿಭಕ್ತಿಯಲ್ಲಿ. ನಮ್ಮ ನಮ್ಮ ಹೆಸರು ಬರೆದುಕೊಳ್ಳುವಾಗ ಹೇಳಿಕೊಳ್ಳುವಾಗ ಮತ್ಯಾವ ಕ್ರಿಯೆಯನ್ನೂ ನಮ್ಮ ಜೊತೆ ಜೋಡಿಸಿಕೊಳ್ಳುವ ಉದ್ದೇಶ ನಮಗಿರುವುದಿಲ್ಲ, ನಮ್ಮ ’ಇರುವಿಕೆ’ಯನ್ನು ಹೇಳಬೇಕಿರುತ್ತದೆ ಅಷ್ಟೆ. ಇಲ್ಲದಿದ್ದರೆ ದ್ವಿತೀಯಾ ಮೊದಲಾದ ಉಳಿದ ವಿಭಕ್ತಿಗಳನ್ನು ಬಳಸಿರುತ್ತಿದ್ದೆವು. ಸುಮ್ಮನೇ ಪ್ರಯೋಗಕ್ಕೆಂದು ಫೇಸ್ ಬುಕ್ ಪ್ರೊಫೈಲಿನ ತಮ್ ತಮ್ಮ ಹೆಸರಿನಲ್ಲಿ ಪ್ರಥಮಾ ಬಿಟ್ಟು ದ್ವಿತೀಯೆಯನ್ನೋ ಚತುರ್ಥಿಯನ್ನೋ ಬಳಸಿ ನೋಡಿ ಗೊತ್ತಾಗುತ್ತದೆ ಜನರ ಕುತೂಹಲ( ವಿಭಕ್ತಿಗಳು ಹುಟ್ಟಿಸುವ ಕುತೂಹಲ) ಹೇಗಿರುತ್ತದೆ ಎಂದು!
ಹೀಗಂದ ಮಾತ್ರಕ್ಕೆ ಪ್ರಥಮಾ ಯಾವುದೇ ಕೆಲಸವಿಲ್ಲದವಳು (ಕ್ರಿಯಾಕಾಂಕ್ಷೆಯಿಲ್ಲದವಳು) ಎಂದೆಣಿಸಬೇಕಿಲ್ಲ. ಅರ್ಥಕ್ಕೊಂದು ವಿಶ್ರಾಂತಿ ಕೊಡುವುದಿದ್ದರೆ ಅವಳು ಪ್ರಥಮೆಯೇ. ಕಾಂಕ್ಷೆಯೆಲ್ಲ ತಣಿದವಳು ಅವಳು. ಉಳಿದ ವಿಭಕ್ತಿಗಳ ಜೊತೆಯಲ್ಲಿ ರಮಿಸುವ, ನರ್ತಿಸುವ ಆಡುವ ಓಡುವ ಅರ್ಥ, ಕೊನೆಯಲ್ಲಿ ಬಂದು ಸೇರುವುದು, ಶಾಂತವಾಗುವುದು, ವಿರಮಿಸುವುದೆಲ್ಲ ಪ್ರಥಮೆಯ ಮಡಿಲಲ್ಲಿ. ನದಿಗಳಿಗೆ ಕಡಲಿದ್ದಂತೆ ಅವಳು. ಇವಳು ಸ್ವತಃ ಯಾವ ಕಾಂಕ್ಷೆಯಿಲ್ಲದವಳಾದರೂ ಅರ್ಥಕ್ಕೆ ಕೊನೆಯಲ್ಲಿ ಇವಳದ್ದಷ್ಟೇ ಕಾಂಕ್ಷೆ. ಪ್ರಥಮೆಯನ್ನು ಬಳಸದೆ ಒಂದು ಪೂರ್ಣಾರ್ಥಕೊಡುವ ಪಾರಾಗ್ರಾಪ್ ಬರೆಯಿರಿ ನೋಡುವಾ! ಅಷ್ಟೇಕೆ, ಪ್ರಥಮೆಯ ಹಂಗಿರದೆ ಒಂದು ವಾಕ್ಯವನ್ನೂ ಮಾಡಲಾಗದು. ಇವಳಿಲ್ಲದೆ ಅರ್ಥಕ್ಕೆ ಶಾಂತಿಯಿಲ್ಲ. ಕನ್ನಡದಲ್ಲಂತೂ ಹೀಗೆಯೇ, ನಾವೆಲ್ಲ ನಮ್ಮ ನಮ್ಮ ಮಿದುಳಿನಲ್ಲಿ ಭಾಷಾ ವಿಭಾಗವನ್ನು ಹೀಗೆಯೇ ತರಬೇತಿಗೊಳಿಸಿದ್ದೇವೆ. ಆದರೆ ಸಂಸ್ಕೃತ ವ್ಯಾಕರಣದವರ ಮಿದುಳು ಹೀಗಿಲ್ಲ!      

 ಮುಂದಿನ ಕಂತಿನಲ್ಲಿ ಪ್ರಥಮೆಯನ್ನು ಇನ್ನಷ್ಟು ಕಣ್ ತುಂಬಿಕೊಳ್ಳೋಣ, ವೈಯಾಕರಣರ ಅರ್ಥವನ್ನೂ ಕಾಣೋಣ. 

Monday, January 12, 2015

ಷಷ್ಠಿಯ ಮುಂಬರಿದ ಕಥೆ... 

ಭಾಷೆಯ ವಿಷಯದಲ್ಲಿ ಸೂಕ್ಷ್ಮವಾಗುತ್ತ ಸಾಗಿದಂತೆಲ್ಲ ಅರ್ಥವೆಂಬುದು ಭಾಷೆಯ ಪರಿಕರದೊಳಗೆ ಎಂದಿಗೂ ನಿಲುಕದ್ದು ಎಂಬರಿವು ಹುಟ್ಟುತ್ತದೆ. ವ್ಯಾಕರಣ ಎಂದಿಗೂ ಭಾಷೆಯನ್ನು ಕಟ್ಟುವುದಿಲ್ಲ, ಹುಟ್ಟಿಸುವುದೂ ಇಲ್ಲ, ಅದು ನಿಯಮಗಳನ್ನು ವಿವರಿಸುತ್ತದೆಯಷ್ಟೆ. ಹಾಗಂತ ವ್ಯಾಕರಣವನ್ನು ಒದ್ದು ಮುರಿದು ಭಾಷೆಯನ್ನೆಲ್ಲ ಬೇಲಿಯಿರದ ಹೊಲವಾಗಿಸಿಕೊಂಡರೆ ಅದೇನೂ ಚಂದವಲ್ಲ. ಮಾನವಜಗತ್ತಿನಲ್ಲಿ ಸುಂದರವಾದ ಸಂಗತಿಗಳೆಲ್ಲ ಒಂದು ಚೌಕಟ್ಟಿನೊಳಗೇ ಇವೆ. ಇರಲಿ, ಇದೀಗ ಮೊನ್ನೆ ಮಾತಾಡಿದ್ದೆವಲ್ಲ ಷಷ್ಠಿಯ ಬಗ್ಗೆ, ಅದನ್ನೇ ಮುಂದುವರಿಸುವಾ.
ಇಂಗ್ಲೀಷು ಕಲಿಕೆಯಲ್ಲಿ ನಮ್ಮಲ್ಲಂತೂ ವಿಭಕ್ತಿಯನ್ನು ಕೈಬಿಟ್ಟಾಗಿದೆ, ಆದಾಗ್ಯೂ Cases ಇವೆ ಇಂಗ್ಲೀಷಿನಲ್ಲಿ. ಆ Case Study ಯ ಪ್ರಕಾರ ನಮ್ಮ ಷಷ್ಠಿ ವಿಭಕ್ತಿಗೆ Possessive case ಅಂತ ಹೆಸರು. ಅಂದರೆ ಸ್ವಾಮ್ಯವನ್ನು ತೋರಿಸುವಂಥ case. ರಾಮನ ಮನೆ, ನನ್ನ ಊರು ಎಂಬಲ್ಲೆಲ್ಲ ಅದು ಸುವ್ಯಕ್ತ. ಮೊನ್ನೆ ನಾವು ನೋಡಿದ ಉದಾಹರಣೆಗಳಲ್ಲಿ ಬಹುತೇಕ ವಾಕ್ಯಗಳು ಈ ಸ್ವಾಮ್ಯರ್ಥದ (ಅಥವಾ ಸ್ವಾಮ್ಯಾರ್ಥದ) ಇರುಕಿನಲ್ಲಿ ಅಳವಡಲಾರವು. ಆ ನಿಟ್ಟಿನಲ್ಲಿ ಸಂಬಂಧ (ಅಥವಾ ಜೋಶಿಯವರ ಅಭಿಮತದಂತೆ some-ಬಂಧ) ಅಂದರೇನೆ ಹೆಚ್ಚು ಸರಿಯಾಗಬಹುದು. ಇದೇ ವಿಭಕ್ತಿ Genitive case ಎಂದೂ ಕರೆಯಲ್ಪಟ್ಟಿದೆ, ಮತ್ತು ಅದು ಸ್ವಾಮ್ಯರ್ಥ ಮಾತ್ರವಲ್ಲದೆ ಎಲ್ಲ ಬಗೆಯ ಸಂಬಂಧವನ್ನೂ ಒಳಗೊಳ್ಳುತ್ತದೆ.
ಸ್ವಾಮ್ಯರ್ಥ ಅಥವಾ ಒಡೆತನದರ್ಥ ಇರುವಾಗೆಲ್ಲ ಯಾರು ಒಡೆಯನೋ ಆ ನಾಮಪದ ಷಷ್ಠಿಯನ್ನು ಹೊಂದುತ್ತದೆ. ಹುಡುಗನ ಕೊಡೆ, ಮನೆಯ ಹೆಸರು ಎನ್ನುವಕಡೆಯಲ್ಲಿ ಇದು ನಿಚ್ಚಳ. ಹಾಗಂತ ರಾಹುಲನ ಅಪ್ಪ ಎಂದಮಾತ್ರಕ್ಕೆ ರಾಹುಲ ಅವನ ತಂದೆಯ ಒಡೆಯ ಅಂತಲ್ಲ ಮತ್ತೆ! ಅಲ್ಲಿರುವುದು ಸ್ವಾಮ್ಯರ್ಥವಲ್ಲವೇ ಅಲ್ಲ. ಸ್ವಾಮ್ಯರ್ಥವಿದ್ದಲ್ಲಿ ಒಡೆಯನು ಷಷ್ಠಿಯನ್ನಪ್ಪುವ ನಿಯಮ ಎಲ್ಲಿಯೂ ವ್ಯತಿರಿಕ್ತವಾದಂತಿಲ್ಲ. ಹಾಗೆಯೇ ಆಧಾರ ಆಧೇಯ ಸಂಬಂಧದಲ್ಲೂ ಆಧಾರಕ್ಕೆ ಷಷ್ಠಿಯ ತಬ್ಬುಗೆಯ ಭಾಗ್ಯ. ನದಿಯ ನೀರು, ಕೃಷ್ಣನ ಪ್ರೀತಿ ಎನ್ನುವಲ್ಲಿ ಇದನ್ನು ಕಾಣಬಹುದು.
ಸರಿ, ಗುಣಕ್ಕೆ ಗುಣಿ ಆಧಾರ ಎಂಬುದು ಸಾಮಾನ್ಯ ಅರಿಕೆ. ನಮ್ಮ ಷಷ್ಠಿಯ ಪರಿಮಿತಿಯಲ್ಲಿ ಗುಣಿಯಾದವನನ್ನು ಈ ವಿಭಕ್ತಿ ಆಲಂಗಿಸಬೇಕು.  
ಇಲ್ಲೊಂದೆರಡು ಉದಾಹರಣೆ ನೋಡಿ-
. ತಿಳಿನಗೆಯ ಹುಡುಗಿ
. ಸಿಂಹನಡೆಯ ನಾಯಕ.
ಕನ್ನಡದಲ್ಲಿ ಬಲು ಸುಂದರವಾದ ವಾಕ್ಯನಿರ್ಮಿತಿ ಇದು. ಆದರೆ ನಮ್ಮ ಷಷ್ಠಿಗೆ ಇಲ್ಲಿ ಏನು ಮಾಡಬೇಕೆಂದೇ ತಿಳಿಯದೆ ಎಲ್ಲೋ ಬಂದು ಕೂತಿದೆ ಎನ್ನುವಂತಿದೆ. ತಿಳಿನಗೆ ಎನ್ನುವುದು ಒಂದು ಗುಣವೆಂದೂ, ಅದರ ಒಡತಿ ಆ ಹುಡುಗಿಯೆಂದೂ ಬಗೆದು ಷಷ್ಠಿಯನ್ನು ಹುಡುಗಿಯ ಜೊತೆ ಸೇರಿಸಿದಿರೋ, ವಾಕ್ಯದ ಚಂದಗಾಣಿಕೆ ಖಲಾಸ್. ಅದೊಂದು ಅತಿ ಸಾಮಾನ್ಯ ವಾಕ್ಯವಾಗುತ್ತದೆ. ಇದು ಸರಿಯಾಗಿ ಗೊತ್ತಾಗಬೇಕೆಂದರೆ ಕ್ರಿಯಾಪದದ ಸಹಾಯ ಬೇಕು, ತಗೊಂಡು ನೋಡುವಾ-
          ) ತಿಳಿನಗೆಯ ಹುಡುಗಿಯನ್ನು ಕಂಡೆ (ಮಾತನಾಡಿಸಿದೆ)
          ) ಹುಡುಗಿಯ ತಿಳಿನಗೆಯನ್ನು ಕಂಡೆ (ಮಾತನಾಡಿಸಲಾದೀತೆ?)
ಮೊದಲನೆಯ ವಾಕ್ಯದ ಭಾವ ಎರಡನೆಯದರಲ್ಲಿ ಇಲ್ಲ, ಅದು ಬೇರೆಯದೆ ಭಾವ. ಕಾಣುವುದರ ಬದಲಾಗಿ ಮಾತನಾಡಿಸುವ ಕ್ರಿಯೆ ಇದ್ದರಂತೂ ಎರಡನೆಯ ವಾಕ್ಯಕ್ಕೆ ಅರ್ಥವೇ ಬಾರದು. ಸಿಂಹನಡೆಯ ನಾಯಕನದೂ ಇದೇ ಸ್ಥಿತಿ. ವಾಕ್ಯಗಳಲ್ಲಿ ಮತ್ತವುಗಳ ರೂಪಿನಲ್ಲಿ ತಪ್ಪಿಲ್ಲ, ಆದರೆ ತಿಳಿನಗೆಯ ಹುಡುಗಿ ಎಂಬಲ್ಲಿ ತಿಳಿನಗೆಗೂ ಹುಡುಗಿಗೂ ಇರುವ ಸಂಬಂಧವನ್ನು ಹೇಳುವುದಕ್ಕೆ ಬಂದ ಷಷ್ಠಿಯನ್ನು ಯಾವ ಬಗೆಯ ಷಷ್ಠಿ ಎಂದು ಕರೆಯುವುದು? ನಾವು ಇದುವರೆಗೆ ಕಂಡ ಷಷ್ಠಿಯ ಪ್ರಕಾರಗಳಿಗಿಂತ ಇದು ಭಿನ್ನವಾದ್ದು. ಸಂಸ್ಕೃತದಲ್ಲಿ ಹೀಗೆ ವಿಶೇಷಣ ವಿಶೇಷ್ಯ ಭಾವದ ಮಧ್ಯೆ ಷಷ್ಠಿ ಬಂದು ಕೂರುವುದಿಲ್ಲ. ಇದೇ ವಾಕ್ಯವನ್ನು ಅಲ್ಲಿಗೆ ಯಥಾವತ್ತಾಗಿ ಭಾಷಾಂತರಿಸಲೂ ಸಾಧ್ಯವಿಲ್ಲ. ಕನ್ನಡದ ಈ ಭಾವವನ್ನು ಸಂಸ್ಕೃತಕ್ಕೆ ಒಯ್ಯಲೇ ಆಗುವುದಿಲ್ಲ. ಹಾಗಂತ ಇಂಗ್ಲೀಷಿಗೆ ಧಾರಾಳವಾಗಿ ಕೊಂಡೊಯ್ಯಬಹುದು. ಉದಾ- ಉಲಿದನಿಯ ತರುಣಿ- A damsel of lilting voice. ನನಗನ್ನಿಸುವಮಟ್ಟಿಗೆ ಕನ್ನಡದ ಈ ಪ್ರಕಾರ ಬಲು ಸುಂದರವಾದ್ದು, ಮತ್ತು ನನಗೆ ಅದರ ಬಳಕೆ ಬಲು ಇಷ್ಟವೂ ಹೌದು. ಕವಿ ಕುವೆಂಪುರವರ ರಾಮಾಯಣದರ್ಶನಂ ಈ ಬಗೆಯ ಹೇರಳ ಪ್ರಯೋಗದ ಖನಿ
ಪ್ರೀತಿಯ ಹುಡುಗ, ಒಲವಿನ ಹುಡುಗಿಯರೆಲ್ಲ ಇದೇ ಬಳಕೆಯ ಉದಾಹರಣೆಗಳು.
ಇನ್ನೊಂದು ವಿಚಾರ ಮೊನ್ನೆ ಅರ್ಧಕ್ಕೆ ಬಿಟ್ಟಿದ್ದು-
ಷಷ್ಠೀ ಸಮಾಸದ ಜೊತೆಯಲ್ಲಿ ಇನ್ನೊಂದು ಷಷ್ಠಿ ಬಂದರೆ ಗತಿಯೇನು? ವಸ್ತುತಃ ಈ ಸಮಸ್ಯೆ ಸಂಸ್ಕೃತದ ಪರಿವೇಷಕ್ಕೆ ಅನ್ವಯಿಸುವಂಥದು. ಕನ್ನಡದಲ್ಲಿ ಅಂಥ ಸಂಭವ ಕಡಿಮೆ. ಆದರೂ ಹುಡುಕಬಹುದು ಅಪರೂಪಕ್ಕೆ-
. ಸುಧಾಮನ ಅರಮನೆ
. ಸಿದ್ಧರಾಮನ ಶಾದಿಭಾಗ್ಯ.
ಅರಸನ ಮನೆ-ಅರಮನೆ ಎನ್ನುವಲ್ಲಿ ಷಷ್ಠೀ ಸಮಾಸ, ಮತ್ತು ಸುಧಾಮನ ಅರಮನೆ ಎನ್ನುವಲ್ಲಿ ಸುಧಾಮನಿಗೆ ಷಷ್ಠೀ ಇದೆ. ಅರ್ಥ ಹೇಗೆ ಮಾಡಿಕೊಳ್ಳುವುದು? ಸುಧಾಮನ ಅರಸನ ಮನೆ ಎಂದೇ? ಆಗ ಸುಧಾಮನಿಗೆ ಅರಮನೆಯ ಭಾಗ್ಯ ಇರದು, ಅದು ಅರಸನ ಸುಪರ್ದಿಗೆ ಒಳಗಾಗುತ್ತದೆ. ಇಲ್ಲಾ, ಸುಧಾಮನದ್ದೇ ಅರಮನೆ ಅಂದುಕೊಂಡರೆಅರಮನೆ ಭಾಗ್ಯ ಸುಧಾಮನಿಗೆ ದೊರೆಯುತ್ತದೆ. ಸಂಸ್ಕೃತದಲ್ಲಿ ಅದು ಸುಧಾಮನದ್ದೇ ಅರಮನೆ ಎಂದಾಗುವಂತೆ ವ್ಯಾಕರಣದ ಕಾಯ್ದೆ ಮಾಡಿಕೊಂಳ್ಳಲಾಗಿದೆ. ನಾವು ಏನ್ ಮಾಡುವಾ?
ಸಿದ್ಧರಾಮನ ಶಾದಿಭಾಗ್ಯದ ಅರ್ಥ ಅವರವರ ಅವಗಾಹನೆಗೆ ಬಿಟ್ಟಿದ್ದು.
ಇನ್ನು, ಕೋಗಿಲೆಕಂಠದ ಗಾಯಕಿ, ನವಿಲುಗಣ್ಣಿನ ಸುಂದರಿ ಎಂಬಲ್ಲೆಲ್ಲ ಷಷ್ಠಿಯ ವಿವರಣೆ ಬೇರೆ ಬೇರೆ ಆಯಾಮಗಳನ್ನು ಆಶ್ರಯಿಸಬೇಕಾಗುತ್ತದೆ. ಇಲ್ಲದಿದ್ದರೆ ಅರ್ಥ ಅಂದಗೆಡುತ್ತದೆ. ಅದಕ್ಕೇ ಅಂದಿದ್ದು, ಅರ್ಥದ ಮುಂದೆ ಭಾಷೆಯದು ತಿಪ್ಪರಲಾಗವೇ ಎಂದು.

ಇದಿಷ್ಟು ಷಷ್ಠಿಯ ಕಥೆ

Saturday, January 10, 2015

ವಿಭಕ್ತಿಯ ಕಥೆಗಳು...



ಅರ್ಥದ ಸಂವಹನಕ್ಕೆ ಭಾಷೆಯನ್ನು ಬಳಸುತ್ತೇವೆ ನಿಜ, ಆದರೆ ಅರ್ಥವೆಂಬುದು ಅದೆಷ್ಟು ಬಗೆಯಲ್ಲಿ ಭಾಷೆಯಿಂದ ಭಿನ್ನ ಅಲ್ಲವಾ? ಅದು ಭಾಷೆಯ ನಿಲುಕಿಗೆ ಪೂರ್ತಿಯಾಗಿ ಎಂದಿಗೂ ಸಿಕ್ಕೇ ಇಲ್ಲ. ಮಿಂಚಿನಷ್ಟು ಚಂಚಲ!
ಷಷ್ಠೀ ವಿಭಕ್ತಿಯನ್ನು ನೋಡುವಾ.
ಷಷ್ಠೀ ವಿಭಕ್ತಿ ಎಂಬುದು ಸಾಮಾನ್ಯವಾಗಿ ಸಂಬಂಧವನ್ನು ಹೇಳುವುದಕ್ಕೆ ಬಳಕೆಯಾಗುವಂಥದು. ಹಾಗಂತ ಅದರ ಅರ್ಥ ಸಂಬಂಧ ಮಾತ್ರವೇ ಅಲ್ಲ, ನೂರೆಂಟು ಷಷ್ಠ್ಯರ್ಥಗಳಿವೆ ಅಂದಿದೆ ಸಂಸ್ಕೃತ ವ್ಯಾಕರಣ. ಕನ್ನಡದಲ್ಲೇ ಅದರ ಇರು-ಬರವನ್ನು (ಸ್ಥಿತಿಗತಿ!) ಗಮನಿಸುವುದಾದರೆ-
೧. ಮರದ ಹಣ್ಣು.
೨. ಹಣ್ಣಿನ ಪಾಯಸ.
ಇಲ್ಲಿ ಎರಡೂ ಕಡೆ ಸಂಬಂಧವೇ ಮೇಲ್ನೋಟಕ್ಕೆ ಅರ್ಥ. ಮರಸಂಬಂಧಿಯಾದ ಹಣ್ಣು, ಹಣ್ಣಿನ ಸಂಬಂಧಿ ಪಾಯಸ ಅಂತ. ಆದರೆ ಅದರಲ್ಲೂ ಭೇದ ಇದೆ. ಮರದ ಹಣ್ಣು- ಮರದಿಂದ ಉತ್ಪತ್ತಿಯಾದ ಹಣ್ಣು. ಹಣ್ಣಿನ ಪಾಯಸ ಹಣ್ಣಿನಿಂದ ಉತ್ಪತ್ತಿಯಾದ್ದಲ್ಲ, ಬದಲಿಗೆ ಹಣ್ಣೇ ತಾನು ರೂಪಾಂತರವಾಗಿ ಪಾಯಸವಾಗಿದೆ, ಮತ್ತಿಲ್ಲಿ ಹಣ್ಣಿನ ಉಳಿಕೆ ಹಣ್ಣಿನ ರೂಪದಲ್ಲಿ ಇಲ್ಲ.

೩. ಮಣ್ಣಿನ ಕೊಡ
೪. ನೀರಿನ ಕೊಡ
ವ್ಯಾಕರಣದ ಗಂಧವೇ ಇಲ್ಲದವನಿಗೂ ಈ ಎರಡು ವಾಕ್ಯಗಳು ಗೊಂದಲ ತರುವುದಿಲ್ಲ, ಸರಳವಾಗಿ ಅರ್ಥವಾಗುತ್ತವೆ. ಆದರೆ ಇವೆರಡೂ ವಾಕ್ಯದಲ್ಲಿ ಷಷ್ಠಿಯನ್ನು ನಾವು ಅರ್ಥಮಾಡಿಕೊಳ್ಳುವ ಬಗೆಯೇ ಬೇರೆ. ಮಣ್ಣಿನ ಕೊಡ ಎಂಬಲ್ಲಿ ಷಷ್ಠಿಯನ್ನು ಅರ್ಥೈಸಿಕೊಂಡಂತೆ ನೀರಿನ ಕೊಡ ಎಂಬಲ್ಲಿಯೂ ಅರ್ಥೈಸಿಕೊಂಡರೆ? ಆಗದು, ಅದು ಅಸಂಭವ. ಮಣ್ಣಿನ ವಿಕಾರ (ಅದರಿಂದ ಉಂಟಾದ್ದು- ವಿಕಾರ) ಕೊಡವಿರುವಂತೆ, ನೀರಿನಿಂದ ಮಾಡಿದ ಕೊಡವಿರಲಾರದು. ನೀರನ್ನು ತರುವುದಕ್ಕಾಗಿ ಇರುವ ಕೊಡ ಅದು-ನೀರಿನ ಕೊಡ. ಆದರೂ ಗೊಂದಲವಿರದೆ ಇವೆರಡೂ ವಾಕ್ಯಗಳನ್ನು ಬಳಸುತ್ತೇವೆ ನಾವು. ನಮ್ಮ ಮಿದುಳಿನ ಅರ್ಥೈಸುವ ಸಾಮರ್ಥ್ಯ ಎಷ್ಟು ದೊಡ್ಡದು!
೫. ಜ್ವರದ ಗುಳಿಗೆ
. ನಿದ್ರೆಯ ಗುಳಿಗೆ
 ಷಷ್ಠಿ ಒಂದೇ ಎರಡೂ ಕಡೆಯಲ್ಲಿ, ಆದರೆ ಅರ್ಥ ಮಾತ್ರ ನಿತರಾಂ ವಿರುದ್ಧವಾದ್ದು. ಜ್ವರದ ಗುಳಿಗೆ-ಜ್ವರದ ನಿವಾರಣೆಗೆ, ನಿದ್ರೆಯ ಗುಳಿಗೆ ನಿದ್ರೆಯ ನಿವಾರಣೆಗೆ ಅಲ್ಲ!! ಔಷಧ ಅಂಗಡಿಯವನು ಮಾತ್ರವಲ್ಲ, ವೈದ್ಯರ ಪ್ರಿಸ್ಕ್ರಿಪ್ಶನ್ಗಿಂತ ಜಟಿಲವಾಗಿರುವ ಭಾಷೆಯ ಈ  ಗೊಂದಲಮಯ ಪ್ರಿಸ್ಕ್ರಿಪ್ಷನ್ನನ್ನು ಯಾರೂ ತಪ್ಪಾಗಿ ಅರ್ಥೈಸುವುದಿಲ್ಲ. ಹಾಗೇನಾದರೂ ತಪ್ಪು ಅರ್ಥೈಸಿದರೆ ಕಥೆ ಮುಗಿದಂತೆ.
೭. ರಾಮನ ಪೂಜೆ
೮. ಹುಡುಗಿಯ ಹಾಡು
ಇಲ್ಲಿನ ಷಷ್ಠಿಗಳಲ್ಲಿ ಗೊಂದಲ ಇದ್ದೇ ಇದೆ. ಇದು ಬಗೆಹರಿಯುವುದು ಕಷ್ಟ. ರಾಮನ ಪೂಜೆಯಲ್ಲಿ ರಾಮ ಎಂಬಾತ ಪೂಜೆಗೊಳ್ಳುವವನೋ, ಪೂಜೆ ಮಾಡುವವನೋ? (ವ್ಯಾಕರಣದ ಪರಿಭಾಷೆಯಲ್ಲಿ ಕೇಳುವುದಾದರೆ ರಾಮನು ಕರ್ತನೋ, ಕರ್ಮವೋ?). ಸಂದರ್ಭಕ್ಕನುಗುಣವಾಗಿ ಅರ್ಥ ಮಾಡಿಕೊಳ್ಳುತ್ತೇವೆ. ಅದಿಲ್ಲದಿದ್ದರೆ ಭಾಷೆಯ ಕೈಯಿಂದ ಅರ್ಥ ಆರಾಮಾಗಿ ನುಸುಳಿಕೊಳ್ಳುತ್ತದೆ. ಹುಡುಗಿಯ ಹಾಡು ಹುಡುಗಿಯೇ ಹಾಡಿದ್ದೋ ಅಥವಾ ಹುಡುಗಿಯ ಕುರಿತಾದ್ದೋ? ಗೋವಿನ ಹಾಡಿನಂತೆ.
ಇಷ್ಟಕ್ಕೆ ಮುಗಿಯಲಿಲ್ಲ ಈ ಕಥೆ. ಎರಡೆರಡು ಷಷ್ಠಿ ಬರುವುದಿದೆ ಒಮ್ಮೊಮ್ಮೆ. ಉದಾ- ಆಚೆಮನೆಯ ಮಾವಿನ ಹಣ್ಣಿನ ಪಾಯಸ. ಅಂದರೆ ’ಮಾವಿನ ಹಣ್ಣು ಆಚೆ ಮನೆಯದ್ದು ಮತ್ತು ಅದರ ಪಾಯಸ ನಮ್ಮನೆಯದು’ ಅಂತಲೋ, ಅಥವಾ ಮಾವಿನ ಹಣ್ಣು ಮತ್ತು ಪಾಯಸ ಎರಡೂ ಆಚೆ ಮನೆಯದ್ದು ಅಂತಲೋ!? ಗೊಂದಲವೇ ಗೊಂದಲ. ಭಾಷಾಂತರದ ಕಾಲದಲ್ಲಿ ಇವು ಕೊಡುವ ಕಷ್ಟ ಹೇಳತೀರದು. ಇಷ್ಟರ ಮೇಲೆ ಕೆಲವೊಮ್ಮೆ ಷಷ್ಠೀ ತತ್ಪುರುಷದ ಜೊತೆಗೆ ಇನ್ನೊಂದು ಷಷ್ಠಿ ಬಂದರೆ ಕಥೆ ಇನ್ನೂ ಬಿಗಡಾಯಿಸುತ್ತದೆ. ಉದಾ- ವಿಶ್ವಾಮಿತ್ರರ ಗುರುಕುಲ. ಇದರ ಕುರಿತು ಇನ್ನೊಂದಿನ ಮಾತಾಡೋಣ.

ಒಟ್ಟಿನಲ್ಲಿ ಅರ್ಥವೆಂಬುದು ಭಾಷೆಯ ಹಿಡಿತಕ್ಕೆ ಸಿಗುವುದಿಲ್ಲ ಅಂತ ಖಾತ್ರಿ. ಇದ್ದುದರಲ್ಲಿ ಸಂಸ್ಕೃತಭಾಷೆ ಅರ್ಥವನ್ನು ಹಿಡಿದಿಡಲು ಉಳಿದ ಭಾಷೆಗಳಿಗಿಂತ ಹೆಚ್ಚಿನ ಸಾಹಸ ಮಾಡಿದೆ. ಷಷ್ಠ್ಯರ್ಥ ನೂರು ಎನ್ನುವುದೂ, ಅರ್ಥಕ್ಕೆ ಪ್ರಕರಣವು ಮುಖ್ಯ ಎನ್ನುವುದೂ ಆ ಪ್ರಯತ್ನದ ಭಾಗವೇ. ಕನ್ನಡವನ್ನೇ ರಕ್ತವಾಗಿ ಪಡೆದ ನಮಗೆ ಕನ್ನಡದಲ್ಲಿ ಇದು ಸಮಸ್ಯೆಯೇ ಅಲ್ಲ, ಆದರೆ ಅನ್ಯಭಾಷಿಕರಿಗೆ, ಅಥವಾ ಭಾಷಾಂತರಕ್ಕೆ ಕುಳಿತವರಿಗೆ ಈ ಬಗೆಯ ತೊಂದರೆಗಳು ತಪ್ಪಿದ್ದಲ್ಲ.

Friday, January 9, 2015

ನದಿ ಮರಳಿ....


ಮೊಡ್ಡು ಕತ್ತಿಯ  ಅಲಗಿನ ತುಕ್ಕು ಸವೆದು ಅದರ ಕಂದು ಬಣ್ಣ ಕಳೆದು ಮೀನಿನ ಒಳ ಮೈಯಂಥ ಹೊಳಪು ಕಾಣಿಸುತ್ತಿತ್ತು. ಮಾವಿನ ಮರದ ನೆರಳಿನಲ್ಲಿ ಚಳಿ ಕಳೆದು ಆಗತಾನೆ ಮೂಡಿದ್ದ ಹೀಚು ಕಾಯಿಗಳು ಉದುರಿ ನೀರು ಹರಿಯುವ ಆ ಕಡಮಾರಿನಲಿ ನಿಧಾನಕ್ಕೆ ತೇಲುತ್ತಿದ್ದುವು. ಎದುರು ಒಂದು ಕಾಲಕ್ಕೆ ಬೆಳೆ ತೆಗೆಯುತ್ತಿದ್ದ ಭತ್ತದ ಗದ್ದೆ. ಕತ್ತಿ ಮಸೆಯಲೆಂದೇ ಇದ್ದ ಮಸೆ ಕಲ್ಲಿನ ಅಂಚಿಗೆ ಇಪ್ಪತ್ನಾಲಕರ  ಅವನು- ಶ್ರವಣ- ತನ್ನ ಬಲವನ್ನೆಲ್ಲ ಹಾಕಿ ಒತ್ತಿ, ಕತ್ತಿ ಮಸೆಯುತ್ತಿದ್ದ. ಮನೆಯಲಿದ್ದ ಹರಿತವಾದ ಕತ್ತಿಯನ್ನು ತನ್ನ ಕೈಗೆ ಕೊಡುವುದಿಲ್ಲ ಅಪ್ಪ ಅನ್ನುವ ಸಣ್ಣ ಸಿಟ್ಟು, ಕತ್ತಿಯೊಂದಿಗೆ ಆಟ ಬೇಡ ಎಂದು ನಿರಾಕರಿಸುತ್ತಲೇ ಗದರಿಸುವ ಆಯಿಯ ಬಗೆಗಿನ ಅಸಹನೆ ಎರಡೂ ತನ್ನನ್ನು ಕತ್ತಿಯಿಂದ ದೂರವಿಟ್ಟು ಸಾಕಿದುವಲ್ಲ ಬಾಲ್ಯದಲ್ಲಿ, ಆ ನೆನಪು ಮತ್ತು ಇಂದಿನ ಅನಿವಾರ್ಯತೆ ಎಲ್ಲ ಮೇಳೈಸಿ ಅವ ಇನ್ನಷ್ಟು ಮತ್ತಷ್ಟು ಈ ಹಳೆಯ ಕತ್ತಿಯನ್ನೇ ಅಪ್ಪನ ಕತ್ತಿಯಂತೆ ಹರಿತಗೊಳಿಸುವ ಛಲಕ್ಕೆ ಬಿದ್ದಂತೆ ಕುಕ್ಕರುಗಾಲಿನಲ್ಲಿ ಕೂತು ಮಸೆಯುತ್ತಿದ್ದ. ಪೂರ್ವಜನ್ಮದ ತನ್ನ ನೆನಪುಗಳನ್ನು ಕಳೆದುಕೊಂಡಹಾಗೆ ಎಲ್ಲೋ ಮೂಲೆಯಲಿ ಬಿದ್ದಿದ್ದ ಆ ಕತ್ತಿ ಹಳೆಯ ಕೊಳೆಯನ್ನು ಕಳೆದುಕೊಂಡು ಹೊಳೆಯತೊಡಗಿತ್ತು. ತನ್ನ ಆಲೋಚನೆಗಳನ್ನು ಈ ಕತ್ತಿಯಾದರೂ ಒಪ್ಪಿದಂತೆ ಶ್ರವಣ ಅಂದುಕೊಳ್ಳುತ್ತಿರುವಾಗಲೇ ಆ ಕಡೆಯಂಚಿನ ಗದ್ದೆ ತುದಿಯಲ್ಲಿ ನಿಂತ ಯಾರೋ ತನ್ನನ್ನೇ ಕರೆದ ಸದ್ದು. ಹೌದು, ಕರೆಯುತ್ತಿರುವುದೇ ಖರೆಅವ ಸದಾಶಿವ, ಸದು ಅಂತ ಎಲ್ಲರೂ ಅವನನ್ನು ಕರೆಯುವುದು. ಹೆಗಲಮೇಲೆ ಒಂದು ಕಂಬಳಿ, ಬಾಯಲ್ಲಿ ಕೆಂಪು ಕವಳ, ಅಷ್ಟೇನೂ ಒಪ್ಪವಲ್ಲದ ಮುಖ ಮತ್ತು ತಲೆಗೂದಲು... ಅವನನ್ನು ಸದಣ್ಣ ಎಂದು ಕರೆಯುವ ತನ್ನ ವಯಸ್ಸಿನ ಹುಡುಗರ ಒಂದು ಪಡೆಯೇ ಇತ್ತು ಈ ಊರಲ್ಲಿ ಒಂದು ಕಾಲದಲ್ಲಿ. ಇಂದಿಗೆ ಆ ಹುಡುಗರೆಲ್ಲ- ಗೆಳೆಯರು- ಓದು ಮುಗಿಸಿ ಪೇಟೆ ಪಟ್ಟಣ ಸೇರಿರಬೇಕು. ಈ ಸದಣ್ಣ ಹೊಸ ತಲೆಮಾರಿನ ಏಕೈಕ ಮಹಾ ದುಡಿಮೆಗಾರ ಅಂತ ಇಂದಿಗೆ ಬದುಕಿಲ್ಲದ ಅಂದಿನ ಹಳೆಯ ತಲೆಮಾರುಗಳು ತಲೆದೂಗುತ್ತಿದ್ದುದು ತನ್ನ ಬಾಲ್ಯದ ನೆನಪುಗಳಲ್ಲಿದೆ. ಅದು ಅವನಿಗೆ ಅಂದಿನ ದೊಡ್ದ ಐಡೆಂಟಿಟಿ ಆಗಿದ್ದಲ್ಲದೆ ಪುರುಷತ್ವದ ಏಕಮೇವ ಕುರುಹೆಂದರೆ  ಹಾಗೆ ಗದ್ದೆಯಲ್ಲಿ ಗೇಯುವುದು ಎನ್ನುವ ಅವನ ಸಿದ್ಧಾಂತವೂ ಜೊತೆಯಾಗಿತ್ತು. ಅದಕ್ಕೆ ತಕ್ಕಂತೆ ಸದಣ್ಣನನ್ನು ಬಿಟ್ಟು ಊರಿನ ಉಳಿದ ಗಂಡು ಮಕ್ಕಳು ಜಮೀನಿನ ದುಡಿತ ಕಲಿಯುವವರಲ್ಲ ಎನ್ನುವ ಸಾಮಾನ್ಯ ಅನಿಸಿಕೆಯೊಂದು ಹಳ್ಳಿಯ ಎಲ್ಲರಿಗೂ ಶುರುವಾಗಿತ್ತು. ಹೈಸ್ಕೂಲಿಗಿಂತ ಹೆಚ್ಚಿಗೆ ಓದದೆ, ಮನೆಯ ಗದ್ದೆ, ತೋಟ, ಕಬ್ಬಿನ ಕೃಷಿ, ಉದ್ದು ಬೆಳೆಯುವುದು.. ಹೀಗೆ ಮಣ್ಣು ಮಳೆ ಬಿಸಿಲಿಗೆ ಬಿದ್ದು ಸದ್ದಿರದೆ 32 ವರ್ಷವಾದ ಅವನಿಗೆ ಹೆಣ್ಣು ಸಿಗದೆ.... ಹೀಗೆ ಸದಣ್ಣನ ಚರಿತ್ರೆಯೇ ಶ್ರವಣನ ಕಣ್ಣೆದುರು ಹಾದು ಬಂತು. ಅಷ್ಟರಲ್ಲಿ ಅವ ಇಷ್ಟು ಹತ್ತಿರಕ್ಕೆ ಅವನಾಗಿಯೇ ಬಂದಿದ್ದ. ಬಾಯಲಿದ್ದ ಎಲೆ ಅಡಿಕೆ ಉಗುಳಿ, ದೊಡ್ಡಕ್ಕೆ ಮಂಗನನ್ನು ಬೆದರಿಸುವವನಂತೆ ಅರೆ ನಗೆಯ ಮುಖ ಮಾಡಿ ವಿಚಾರಿಸಿಕೊಂಡ-
'ಅಪರೂಪದ ಜನ ಯಾವಾಗ ಬಂದದ್ದು? ಮತ್ತದೇನು ಇಲ್ಲಿ ಗದ್ದೆ ಹತ್ತಿರ?!!
ತನಗೆ ಮಾತ್ರವೆ ಈ ದನಿಯಲ್ಲಿ ಕುಹಕ ಕಾಣುತ್ತಿದೆಯೋ ಅಥವಾ ನಿಜಕ್ಕೂ ಇದರಲ್ಲಿ ಕುಹಕದ ಛಾಯೆ ಇದೆಯೋ ಅರಿಯಲಾಗಲಿಲ್ಲ ಶ್ರವಣನಿಂದ. ಥತ್, ಮಾತಾಡುವುದನ್ನೇ ಕಲಿತಾಗಿಲ್ಲ ಇಂದಿಗೂ ತನಗೆ...
'ಹಾ, ಮೊನ್ನೆ ಸಂಜೆಯೇ ಬಂದಿದ್ದು... ಗದ್ದೆಯ ಕಡೆಯೇ ಇನ್ನು ಬರುವುದು ನಾನು..'
ಮೊನ್ನೆ ಮನೆಗೆ ಬಂದಾಗಿನಿಂದ ಯಾರೂ ಒಪ್ಪಿರದ ತನ್ನ ನಿಧರ್ಾರವನ್ನು ಮತ್ತಷ್ಟು ತನಗೆ  ತಾನೇ ಗಟ್ಟಿ ಮಾಡಿಕೊಳ್ಳುವವನಂತೆ ಹೇಳಿದ ಶ್ರವಣ. ಇಲ್ಲಿ ಸದಣ್ಣನ ಎದುರು ಈ ಗಡಸುತನ ಬೇಕಿರಲಿಲ್ಲ.
ಇದೇನೋ ಹೊಸ ರೀತಿ ಎಂದು ಸದಾಶಿವನಿಗೂ ಅರ್ಥವಾಯ್ತು. ಕಂಬಳಿಯನ್ನು ಎಡ ಹೆಗಲಿನಿಂದ ಬಲ ಹೆಗಲಿಗೆ ವಗರ್ಾಯಿಸಿ, ಒಮ್ಮೆ ಗಂಟಲು ಕೊಸರಿ ಹೊಸದೇ ವಿಷಯಕ್ಕೆ ಬಂದ..
'ಮೂರು ವಾರ ಆಗೋಯ್ತು ಅಡಿಕೆ ಕೊಯ್ಯಲು ಆಳಿಗೆ ಬರಹೇಳಿ, ಇಂದಿಗೂ ಅವನಿಗೆ ಪುರುಸೊತ್ತಾಗಿಲ್ಲ.. ಛೆ, ಹೀಗೆ ಆದ್ರೆ ಅಡಿಕೆ ಎಲ್ಲ ಉದುರಿ ಖಾಲಿ..'
ಮೊದಲಿನ ವಿಷಯ ಬಿಡಲು ಶ್ರವಣ ತಯಾರಿರಲಿಲ್ಲ. ಅವ ಮತ್ತೆ ಬುಡಕ್ಕೆ ಬಂದ.
'ಸದಣ್ಣ, ಓದಿದ್ದು ಸಾಕು ಅನ್ನಿಸ್ತುಅದಕ್ಕೆ ಮನೆಗೆ ಬಂದೆ, ಮತ್ತೆ ಆ ದೂರದ ಧಾರವಾಡ ನಗರಕ್ಕೆ ಹೋಗುವ ಮಾತಿಲ್ಲ. ಮನೆ, ತೋಟ, ಆರು ವರ್ಷದಿಂದ ಹಾಳು ಬಿಟ್ಟ ಈ ಭತ್ತದ ಗದ್ದೆ, ಇವನ್ನೆಲ್ಲ ಸರಿ ಮಾಡಿಕೊಂಡು ಇಲ್ಲಿ ಇದ್ದುಬಿಡುವಾ ಅಂತ.'
ಹಾಗೆ ಹೇಳುವಾಗೇನೋ ತನ್ನ ಕೈಯಲ್ಲಿ ಹರಿತಗೊಂಡ ಕತ್ತಿಯ ಬಗ್ಗೆ ಗಮನ ಹರಿದು, ತನ್ನ ಬಗ್ಗೆ ಹೆಮ್ಮ ಅನ್ನಿಸಿ, ಅದರ ಅಲಗಿನ ಧಾರೆಯ ಮೇಲೆ ಹರಿತ ನೋಡುವವನಂತೆ ನಿಧಾನಕ್ಕೆ ಬೆರಳು ಸವರಿದ ಶ್ರವಣ.
ಸದಾಶಿವನಿಗೆ ಇದೆಲ್ಲ ಏನೆನ್ನಿಸಿತೋ, ಹುಮ್.... ಅಂದವನು ತೋಳಿನ ವರೆಗೆ ಮುಚ್ಚಿದ್ದ ಶ್ರವಣನ ಅಂಗಿಯನ್ನು ಎರಡು ಬೆರಳಿನಿಂದ ಹಿಡಿದು ಮೆಚ್ಚಿಕೊಂಡವನಂತೆ ' ಒಳ್ಳೆ ಬಟ್ಟೆ ಮಾರಾಯ, ನನಗೂ ಒಂದು ಬೇಕು ಇಂಥದು, ನೀ ಮತ್ತೆ ಬರುವಾಗ ತಂದುಕೊಡು..' ಅಂದ.
ಅಷ್ಟಕೆ ನಿಲ್ಲದೆ, ' ಭೂಮಿಯ ಬದುಕಿಗೆ ತೋಳು ತುಂಬಿದ ತಾಕತ್ತು ಬೇಕು ತಮ್ಮಾ, ಕಲ್ಲು ಕರಗಿಸುವ ಬಲ ಬೇಕು. ಬಿಡು, ಪೇಟೆಯ ಜೀವ ಹಳ್ಳಿಗೆ ಊಹುಂ..' ಅಂದ. ಅಷ್ಟರಲ್ಲಿ ಅವನ ಕಬ್ಬಿನ ಗದ್ದೆಯ ಬೇಲಿ ಗಂಡಿಯಿಂದ ಕರಿಬಣ್ಣದ ಎತ್ತು ನುಗ್ಗಿದ್ದು ಕಾಣಿಸಿ, ಒಂದೇ ಉಸಿರಿಗೆ 'ಮತ್ತೆ ಮಾತಾಡುವಾ..' ಎಂದವನೇ ಓಡಿ ಮಾಯವಾದ. ಅವ ಹೋದ ದಿಕ್ಕನ್ನು ನೋಡುತ್ತ, ಅವ ಕಲಕಿದ ಗಾಳಿಯಲ್ಲಿ ಏನೋ ಗುಂಗು ಹತ್ತಿದವನಂತೆ ಇವನು ಕೆಲಕಾಲ ಸ್ತಬ್ಧನಾದ.
ಓಹೋ, ತನ್ನ ಅಂಗಿಯ ಬಟ್ಟೆಯನ್ನು ನೋಡಿದ್ದಲ್ಲ ಅವನು, ತೋಳು ನೋಡಿದ್ದಾ ಅನ್ನಿಸಿತು. ಅದಲ್ಲದೆ ಮತ್ತೆ ಬರುವಾಗ ತನಗೂ ಒಂದು ತಾ ಅಂದನಲ್ಲ, ಅಂದರೆ ನಾನೆಷ್ಟೇ ಅಂದರೂ ಮತ್ತೆ ಈ ಊರಿನ ಜೀವವಾಗಿ ನಾನಿರಲಾರೆ ಅಂತ ಅವನಿಗೆ ಖಾತ್ರಿಯಾ? ಬಲ ಬೇಕಂತೆ ಇಲ್ಲಿ ಬದುಕಲಿಕ್ಕೆ, ಅದ್ಯಾಕಂದ ಹಾಗೆ? ಅವನಿಗೆ ಹಮ್ಮಿರಬಹುದು ತನಗೆ ಬಲವಿದೆ ಅಂತ, ಇದ್ದಿದ್ದೂ ಖರೆಯೇ, ಹೇಗೆ ಭೂಮಿ ನಲುಗುವಂತೆ ಓಡಿದ ಇಲ್ಲಿಂದ! ಬಿಸಿಲು ಏರತೊಡಗಿತ್ತು. ಕೈಲಿದ್ದ ಮಸೆದ ಕತ್ತಿಯ ಮೇಲಿದ್ದ ನೀರು ಆರಿ, ಅದರ ಪಕ್ಕಾ ಬಿಳಿಯ ಲೋಹದ ಹೊಳಪು ನಿಧಾನಕ್ಕೆ ಕೆಂಪು ಕಂದು ಬಣ್ಣಕ್ಕೆ ತಿರುಗತೊಡಗಿತ್ತು. ಮತ್ತೆ ಅದನ್ನು ಸವೆಯಿಸಿ ಹೊಳಪು ತರುವ ಮನಸಾದರೂ, ಅದರಿಂದ ಮಾಡುವುದೇನು ಎಂದು ಹೊಳೆಯದೆ ಸುಮ್ಮನಾದ.  ಕತ್ತಿಯ ಹರಿತಕಿಂತ ಹೆಚ್ಚಿನದು, ತನ್ನಲಿಲ್ಲದ್ದು, ಸದಣ್ಣ ಹೇಳಿದ್ದು ತನಗೇನೋ ಬೇಕಿದೆ ಇಲ್ಲಿ ಬದುಕುವುದಕ್ಕೆ ಅನ್ನಿಸತೊಡಗಿತು ನಿಧಾನಕ್ಕೆ.
ಅಜ್ಜಿಯ ಮನೆಯಲ್ಲಿ ಉಳಿದುಕೊಂಡು ಹೈಸ್ಕೂಲು ವರೆಗೆ ಓದಿ ಮತ್ತೆ ದೊಡ್ಡ ಓದಿಗೆ ಅಂತ ಧಾರವಾಡದ ಪೇಟೆಗೆ ಸರಿದು.. ಎಷ್ಟು ವರ್ಷ ಕಳೆದು ಹೋಯಿತಲ್ಲ ಮನೆಯಲ್ಲಿ ನಿರಂತರವಾಗಿ ಬದುಕಲು ಅವಕಾಶ ಸಿಕ್ಕಿ! ಅದು ಬೇರೆ ಮನೆಯವರು ಊರವರು ಎಲ್ಲ ಸೇರಿ ಹೊರಗಡೆ ಓದುವ ಹುಡುಗರೆಲ್ಲ ಹೊರ ಹೊರಗೇನೆಯೆ ಬದುಕು ಕಂಡುಕೊಳ್ಳುವರೆಂಬ ಹುಂಬ ನಂಬಿಕೆಯನ್ನು ತಾವೂ ಉಂಡರು, ಉಳಿದವರಿಗೂ ಉಣಿಸಿದರಲ್ಲ. ಹಳ್ಳಿಯ ಬದುಕು ಇವರಿಗೆಲ್ಲ ಬೇಸರ ಬಂದು ಹೋಗಿರಬಹುದು, ಆದರೆ ತನಗೆ ಅದು ಬೇಕಾಗಿದೆ... ಇಲ್ಲಿ ಉಳಿಗಾಲವೇ ಇಲ್ಲವೆಂಬಂತೆ ಮಾತನಾಡುವ ಇವರನೆಲ್ಲ ಕಂಡರೆ ನನ್ನೊಳಗೂ ಶಂಕೆಯಾಗುತ್ತಿದೆ, ಇದು ಕಷ್ಟದ ಬದುಕು.
ಕೌಲು ಮರದ ಕಾಯಿಯನ್ನು ಕಾಲಿನಲ್ಲಿ ಉರುಳಿಸಿಕೊಂಡು ಗುಂಪು ಗುಂಪಾಗಿ ಶಾಲೆಗೆ ಹೋಗುತ್ತಿದ್ದ ಕಿರಿಯ ಪ್ರಾಥಮಿಕ ಹಂತದ ಆ ದಿನಗಳಲ್ಲಿ ಬಿಳಿ ಗಡ್ಡದ ರಾಮಜ್ಜನೆಂದರೆ, ಹಾದಿ ಬದಿಯ ದೆವ್ವದ ಮರವೆಂದರೆ, ಹೊಳೆಯಂಚಿನ ಜಟಕ ದೇವರೆಂದರೆ ನಮಗೆಲ್ಲ ಎಂಥ ಭಯವಿತ್ತು! ಆಡಲು ದೊರೆಯದ ಗದ್ದೆ ಬಯಲುಗಳ ಬಗ್ಗೆ ಅಸೂಯೆ ಇತ್ತು. ಇಂದು ಇಲ್ಲಿ ಅಜ್ಜಂದಿರು ಮರಗಳು ಮತ್ತು ಗುಡಿಯಿರದ ದೇವರುಗಳು ಒಂದೂ ಇಲ್ಲ. ಅಚ್ಚರಿಯೆಂದರೆ ಅಂದಿನಂತೆ ಭಯ ಪಡುವ ಮಕ್ಕಳೂ ಇಲ್ಲ. ಗದ್ದೆ ಬಯಲುಗಳು ಖಾಲಿ ಖಾಲಿಯಾಗಿ ಗೋಗರೆಯುತ್ತಿದ್ದರೂ ಆಡುವ ಮಕ್ಕಳಿಲ್ಲ. ಬಸ್ಸು ಎಂದರೆ ಭಯ ಪಡುತ್ತಿದ್ದ ತಾನು ನಗರಕ್ಕೆ ಹೋದ ದಿನಗಳಲ್ಲಿ ಅದಕ್ಕೆ ಹೊಂದಿಕೊಳ್ಳಲು ಪಟ್ಟ ಪಾಡು ದೊಡ್ಡದೇ. ಇವತ್ತಿಗೆ ಇಲ್ಲಿನ ಯಾವ ಮಗುವಿಗೂ ನಗರದ ಯಾವ ಸಂಗತಿಯ ಬಗೆಗೂ ಭಯ ಇರಲಾರದು, ತಿಳಿಯದೆಂಬ ಹಿಂಜರಿಕೆಯೂ ಇರಲಾರದು. ಛಿ, ಇದೆಲ್ಲ ಯಾಕೆ ಸುಮ್ಮನೆ ತಲೆಯೊಳಗೆ ಬರುತ್ತಿದೆಯೋ..
ವಾರದ ಹಿಂದೆ ಮನೆಗೆ ಹೊರಡುವ ನಿಧರ್ಾರ ಗಟ್ಟಿಯಾಗುತ್ತಿದ್ದ ಹಂತಕ್ಕೆ ನಿದ್ರೆಯಲ್ಲಿ ಕಂಡ ಕನಸು ನೆನಪಾಗುತ್ತಿದೆ. ಮನೆಗೆ ಬಂದವನಿಗೆ ಅಪ್ಪ ಹೇಳಿದ ಮಾತೇನದು, ' ವರ್ಷಕೊಂದಾವತರ್ಿ ನಿನ್ನಜ್ಜಯ್ಯನ ತಿಥಿಗೆ ವೈದಿಕರು ಸಿಗದಂತಾಗಿದೆ ಅದು ಗೊತ್ತ ನಿನಗೆ, ಎಲ್ಲ ಪೇಟೆಯಲ್ಲೇ ನಿಂತಿದಾರೆ, ಇಲ್ಲಿ ಉಳಿಗಾಲ ಇಲ್ಲ. ಹಳ್ಳಿ ಬದುಕಲ್ಲಿ ಹಣ ಹುಟ್ಟೂದಿಲ್ಲ...' ಆಗ ಉತ್ತರ ತಿಳಿಯದವನಂತೆ ಸುಮ್ಮನಾದೆ ತಾನು. ಈ ಕನಸು ಆಗ ನೆನಪಾಗದೆ ಹೋಯ್ತು. ಕನಸಿನಲ್ಲಿ, ಎಲ್ಲೋ ತಿಳಿಯದೊಂದು ಊರಿನಲ್ಲಿ ಕಥೆ, ಕವಿತೆ, ಪ್ರಬಂಧ, ಕಿರುಹನಿ, ಲೇಖನ ಹೀಗೆ ಎಲ್ಲವನ್ನೂ ಬರೆಯುವ ಹತ್ತು ಮಂದಿ ಬರವಣಿಗೆಯ ಜನಗಳು-ಮತ್ತೇನೂ ಬಾರದವರು-ಬಂದು ಸೇರಿಕೊಳ್ಳುತ್ತಾರೆ. ಕೆಲವೇ ವರ್ಷಗಳಲ್ಲಿ ಆ ಊರಿನ ಎಲ್ಲರೂ ಅವನ್ನೆಲ್ಲ ಬರೆಯಲು ಕಲಿಯುತ್ತಾರೆ, ಗೋಷ್ಠಿಗಳು ನಿರಂತರ ನಡೆಯುತ್ತವೆ. ಕ್ರಮೇಣ ಕೆಲವು ಅಜ್ಜಂದಿರನ್ನು ಬಿಟ್ಟು ಎಲ್ಲರೂ ಬರವಣಿಗೆಯನ್ನೇ ನೆಚ್ಚಿಕೊಂಡು ಬದುಕಲು ಶುರು ಮಾಡುತ್ತಾರೆ, ಕೆಲಸಗಳು ಎಲ್ಲರಿಗೂ ಮರೆಯುತ್ತವೆ, ಅಜ್ಜಂದಿರು ಸತ್ತ ಬಳಿಕ ಜನಗಳಿಗೆ ಬದುಕುವುದೇ ಮರೆತಂತಿರುತ್ತದೆ, ಬರೀ ಬರೆಯುವುದೇ ಬರೆಯುವುದು.. ಕನಸು ಪೂತರ್ಿಯಾಗದೆ ನಿದ್ದೆ ಮುಗಿಯಿತು ಅಂದು. ಆದರೆ ಅದು ಮನಸನ್ನು ಎಷ್ಟು ಕಲಕಿತಲ್ಲ ಹಗಲಿಡೀ. ಅಪ್ಪನಿಗೆ ಈ ಕನಸನ್ನು ಆ ಕ್ಷಣವೇ ಹೇಳಬೇಕಿತ್ತು ಅನ್ನಿಸಿತು ಶ್ರವಣನಿಗೆ. ಅವನಿಗೆಷ್ಟು ಏನಂತ ಅರ್ಥವಾಗ್ತಿತ್ತೋ ಏನೋ.
ಮಾವಿನ ಮರದ ನೆರಳಿಗೆ ಬಂದು ಕುಳಿತುಕೊಂಡ. ದೂರದಲ್ಲಿ ಸದಣ್ಣ, ಬೇಲಿ ಹೊಕ್ಕಿದ್ದ ಗೂಳಿಯನ್ನು ಬೆದರಿಸಿ ಹೊರ ಹಾಕುತ್ತಿದ್ದುದು ಕಾಣಿಸುವಂತಿತ್ತು. ಹಿಂಬದಿಗೆ ಹಾಳು ಬಿದ್ದ ಬಿದಿರಿನ ತಟ್ಟಿಯ ಗುಡಿಸಲು, ಸಿದ್ದಿಯ ಯಂಕಟ ಆಚೆ ವರ್ಷ ಬಿಟ್ಟು ಹೋದದ್ದು. ಇಲ್ಲಿ ಸರಿಯಾಗಲಿಲ್ಲ, ಇನ್ನೆಲ್ಲಿಗೋ ಹೋದನಂತೆ, ಮತ್ತಲ್ಲಿ ಬೇಸರ ಬಂದರೆ ಇನ್ನೆಲ್ಲಿಗೋ. ಅದು ಸ್ವಾತಂತ್ರ್ಯ ಅಂದರೆ! ಕಾಡು, ಪೇಟೆ, ನದಿ, ಕೊಳ್ಳ ಯಾವುದಕ್ಕೂ ಹಿಂಜರಿಯದವನು ಅವನೊಬ್ಬ. ದೂರದಲ್ಲಿ ಎತ್ತು ಗುಟುರು ಹಾಕುತ್ತ ಸದಣ್ಣನನ್ನು ಹೆದರಿಸುವಂತೆ ಅವನಿಗೆದುರಾಗಿ ನಿಂತಿತ್ತು. ಅರೆ ಕ್ಷಣ ಅಲ್ಲಿಗೆ ಓಡಿ ಹೋಗಿ ಸಹಾಯವೆಂಬಂತೆ ಅವನಿಗೆ ಜೊತೆಯಾಗುವಾ ಅನ್ನಿಸಿದರೂ-ಸದಣ್ಣನಿಗೆ ಇವೆಲ್ಲ ಹೊಸದಲ್ಲ, ಬಲವಿರುವವನಲ್ಲವೆ ಎದುರಿಸಲಿ-ಅಂದುಕೊಂಡ. ಗೂಳಿಯ ಹುಂಬತನವೆ ಸದಣ್ಣನ ಬಲಕ್ಕಿಂತ ಹೆಚ್ಚು ಆಕರ್ಷಕ ಅನ್ನಿಸಿ, ಆ ಗೂಳಿಯ ಜಾಗದಲ್ಲಿ ಮನಸು ತನ್ನನ್ನು ಕಲ್ಪಿಸಿಕೊಂಡು ಸುಖಿಸತೊಡಗಿತು. ಕ್ಷಣ ಕ್ಷಣಕ್ಕೆ ಆ ಸುಖವೇ ಮತ್ತೊಂದು ಛಲವಾಗಿ, ಮೈ ತುಂಬ ಹುಂಬತನ ತುಂಬಿದವನಂತೆ ಕುಳಿತಲ್ಲಿಂದ ಎದ್ದು ನಿಂತ. ತನ್ನೊಳಗೇನೆಯೆ ಗೂಳಿ ಆವಿರ್ಭವಿಸಿದಂತೆ ಗಟ್ಟಿಯಾದ. ಆಡುವವರೆಲ್ಲಾ ಆಡಿಕೊಳ್ಳಲಿ, ಊರು ತೊರೆದು ಪಟ್ಟಣ ಸೇರುವ ಮಾತೇ ಇಲ್ಲ ಅನ್ನುವವನಂತೆ ಕತ್ತಿಯನ್ನು ಇನ್ನಷ್ಟು ಭದ್ರವಾಗಿ ಹಿಡಿದುಕೊಂಡ. ಅವನೊಳಗೊಂದು ತಳಿರಿನ ಮಾವಿನ ಮರ, ಹಸಿರು ತುಂಬಿ ಬಸಿರಾದ ಗದ್ದೆ, ಮತ್ತು ಎದೆ ತುಂಬ ಎಳೆದುಕೊಂಬಂತಹ ಶುದ್ಧ ಉಸಿರು ನೆಲೆಯಾಗಿದ್ದುವು.

ಅಷ್ಟೊತ್ತಿಗೆ ಸದಣ್ಣನ ಕಬ್ಬಿನ ಗದ್ದೆಗೆ ನುಗ್ಗಿದ್ದ ಗೂಳಿ ದೂರ ಓಡಿಯಾಗಿತ್ತು, ದಿನಾ ಗೆಲ್ಲುವ ಯುದ್ಧದಲ್ಲಿ ಹೊಸತನ ಇರುವುದಿಲ್ಲ ಎನ್ನುವಂತಹ ನಡಿಗೆಯ ಸದಣ್ಣ ಮತ್ತೆ ಶ್ರವಣನಿರುವ ಮಾವಿನ ಮರದ ಹತ್ತಿರ ಬರುತ್ತಿದ್ದ. ಗಟ್ಟಿ ಹೆಜ್ಜೆ, ಕಪ್ಪು ಕಂಬಳಿಯ ಹೆಗಲು..ಗೂಳಿಯಂತಹವನು.