Friday, February 24, 2017

ನನ್ನೂರಿನ ಶಿವಾಲಯ


ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಶಿರಸಿ ಮತ್ತು ಯಲ್ಲಾಪುರ ತಾಲೂಕುಗಳ ಸಂಗಮಸ್ಥಾನದಲ್ಲಿರುವ ನನ್ನೂರು ’ಶೇವ್ಕಾರ’ ದಲ್ಲಿ ಅನಾದಿಕಾಲದಿಂದಲೂ ಒಂದು ಶಿವದೇವಾಲಯವಿತ್ತು, ಮತ್ತು ಅದರಿಂದಾಗಿಯೇ ನನ್ನೂರಿಗೆ ’ಶಿವಾಗಾರ’ (ಶಿವನ ಮನೆ. ಅದೀಗ ಶೇವ್ಕಾರ ಎಂದಾಗಿದೆ) ಎಂಬ ಹೆಸರೂ ನಿಂತಿತೆಂಬ ಮಾತಿದೆ. ಬಾಲ್ಯಾದಾರಭ್ಯ ಇಂದಿನವರೆಗೆ ನಮ್ಮೂರಿನ ಶಿವಾಲಯದ ಕಥೆ ಕೇಳಿದ್ದೆವಾಗಲೀ ವ್ಯವಸ್ಥಿತವಾದ ಶಿವಾಲಯ ಎಂದೇನೂ ಇದ್ದಿರಲಿಲ್ಲ. ಹಾದಿ ಬದಿಯಲ್ಲಿ ಪಾಣಿಪೀಠರಹಿತವಾದ ಭಗ್ನಲಿಂಗವೊಂದು ಮಳೆ ಬಿಸಿಲಿಗೆ ಮೈಯೊಡ್ಡಿ ನಿಂತುದನ್ನು ದಿನಾ ನಾವೆಲ್ಲ ಶಾಲೆಗೆ ಹೋಗಿ ಬರುವಾಗೊಮ್ಮೆ ನೋಡುತ್ತಿದ್ದೆವು. ಆ ಲಿಂಗಕ್ಕೊಂದು ಇತಿಹಾಸವಿದೆ ಎಂಬುದಕ್ಕೆ ಸಾಕ್ಷಿಯಾಗಿ ಕಟ್ಟೆಯ ಕಲ್ಲಾಗಿ ನಿಂತಿದ್ದ ಅಸ್ಪಷ್ಟ ಶಾಸನ ಕಲ್ಲು ಮತ್ತು ಸಮೀಪದಲ್ಲೊಂದು ಹೂಳು ತುಂಬಿದ ಕಲ್ಯಾಣಿ- ಇದ್ದವು. ಕಟ್ಟೆಯ ಕಲ್ಲಾಗಿದ್ದ ಶಾಸನ ಬಹುಕಾಲ ಹಾಗೇ ನಿಂತು ಯಾವುದೋ ಕಥೆ ಹೇಳುತ್ತಿದ್ದು ಈಗೀಗ ಅದರ ದನಿಯೂ ಕ್ಷೀಣವಾಗಿದ್ದಿರಬೇಕು. ಕೊನೆಗೊಮ್ಮೆ ಅದಕ್ಕೆ ಸೋಗೆಯ ಚಪ್ಪರವನ್ನು ಕಟ್ಟಿಕೊಟ್ಟು ಶಿವರಾತ್ರಿಗೊಂದು ಪೂಜೆ ಮಾಡುವ ಕ್ರಮ ಬಂತು. ಹಾಗಿದ್ದೂ ಗೋಡೆಯಿಲ್ಲದ ಜೋಪಡಿಯಲ್ಲೇ ಭಗ್ನಲಿಂಗ ನಿಂತುಕೊಂಡಿತ್ತು.
ಇಂತಿಪ್ಪ ದೇವಾಲಯದ ಪುನರ್ನಿರ್ಮಾಣಕ್ಕೆ ಒಂದೂವರೆ ದಶಕದ ಹಿಂದೆ ಊರಿನ ಕೆಲವು ಮನಸುಗಳು ಸಂಕಲ್ಪಗೈದವು. ನಾವೊಂದಿಷ್ಟು ಜನ ಎಳೆ ಮೀಸೆಯ ಹುಡುಗರು ಮತ್ತು ಕೆಲವು ಹಿರಿಯರು ಆ ಶಿವಲಿಂಗವಿದ್ದ ಪ್ರದೇಶದಲ್ಲೆಲ್ಲ ಉತ್ಖನನ ಶುರು ಮಾಡಿದೆವು. ಹೆಚ್ಚೂಕಡಿಮೆ ಒಂದು ವಾರದ ಕಾಲ ಉತ್ಖನನ ಮಾಡಿದ ನಮಗೆ ಹಳೆಯ ದೇವಾಲಯದ ಕಟ್ಟಡದ ಕುರುಹಾಗಿ ದಕ್ಕಿದ್ದು ವ್ಯವಸ್ಥಿತ ನೆಲಗಟ್ಟು. ಆ ಬಳಿಕ ಸುಮಾರಷ್ಟು ಕಾಲ ಅದ್ಯಾಕೋ ಸಂಕಲ್ಪಗೈದ ಮನಸುಗಳು ಸುಮ್ಮನಾದವು. ಆಗೀಗೊಮ್ಮೆ ಶಿವಾಲಯದ ವಿಚಾರ ಬರುತ್ತಿತ್ತಾಗಲೀ ಹೆಚ್ಚಿನ ಉದ್ಯಮಕ್ಕೆ ಯಾರೂ ಉದ್ಯುಕ್ತರಾಗಲಿಲ್ಲ. 
’ನಿರ್ಮಾಣ’ ಎಂಬುದೊಂದು ಮಹಾ ಸಂಕಲ್ಪ. ಒಂದರೆಗಳಿಗೆಯಲ್ಲಿ ಸಾಧ್ಯವಾಗುವ ಸರಕಲ್ಲ ಅದು. ಭಂಜನೆಯದು ಕ್ಷಣದ ಉನ್ಮಾದ, ಅದಕ್ಕೆ ಸಂಕಲ್ಪವಿಲ್ಲ, ಅದೊಂದು ಧುತ್ತನೆ ಹೊಮ್ಮುವ ಆಘಾತ. ನಿರ್ಮಿತಿಗೆ ಕ್ರಮವಿದೆ, ಮಾನವಕೃತ ಭಂಜನೆಗೆ ಕ್ರಮವಿಲ್ಲ. ನಮ್ಮದಿಲ್ಲಿ ನಿರ್ಮಾಣದ ಸಂಕಲ್ಪವಾಗಿತ್ತು. ಅದು ಕೆಲವು ಕಾಲದ ಬಳಿಕ ಊರಿನ ಬಹುಪಾಲು ಜನರ ಮನಸಿನಲ್ಲಿ ಪುನಃ ಜಾಗೃತವಾಯ್ತು. ಈ ಸಲ ದೇವಾಲಯದ ಇತಿಹಾಸದ ಅವಗತಿಗಾಗಿ ಅಷ್ಟಮಂಗಲ ಪ್ರಶ್ನೆಯ ಮೊರೆಹೋಗಲಾಗಿ, ಬಹು ಕಾಲದ ಹಿಂದೆ ಕೆಲವು ಯತಿವರ್ಯರಿಂದ ಪ್ರತಿಷ್ಠಾಪಿತವಾದ ದೇವಾಲಯವಾಗಿತ್ತು ಎಂಬ ಮಾಹಿತಿಯೊಂದು ಲಭ್ಯವಾಯ್ತಲ್ಲದೆ ಅದು ಉಮಾಮಹೇಶ್ವರ ದೇವಾಲಯವೆಂಬುದೂ ತಿಳಿದು ಬಂತು. ಆದರೆ ಕಾಲಾಂತರದಲ್ಲಿ ಊರಿಗೂರೇ ನಾಶವಾಗಿ ಹೋಗಲಾಗಿ ದೇವಾಲಯವೂ ಅವನತಿಯನ್ನು ಹೊಂದಿರಬಹುದೆಂದು ಇಂದಿಗೆ ಊಹಿಸಬಹುದಷ್ಟೆ. (ಈ ಮಾತನ್ನು ಪುಷ್ಟೀಕರಿಸುವಂತ ಕೆಲವು ದಂತ ಕಥೆಗಳು ಮತ್ತು ಕೆಲವು ಭೌಗೋಳಿಕ ಸಾಕ್ಷ್ಯಗಳು ಊರಲ್ಲಿ ಇವತ್ತಿಗೂ ಲಭ್ಯವಿವೆ. ಹಿಂದೊಮ್ಮೆ ಅರವತ್ತು ಮನೆಗಳಿದ್ದ ಊರು ನಾಶವಾಗಿ ಹೋಗಿತ್ತಂತೆ. ಆ ಮನೆಗಳಿದ್ದ ಜಾಗದಲ್ಲಿ ಇಂದು ಕಾಡು ಕಾಡು. ನೆಲಗಟ್ಟುಗಳ ಅವಶೇಷ ಇವತ್ತಿಗೂ ಇದೆ) ಒಟ್ಟಿನಲ್ಲಿ ಅಜ್ಞಾತ ಇತಿಹಾಸವಿರುವ ಶಿವದೇವಾಲದ ಪುನರುತ್ಥಾನಕ್ಕೆ ನನ್ನೂರಿನ ಭಾಗಶಃ ಜನತೆ ಕಳೆದೆರಡು ವರ್ಷಗಳ ಹಿಂದೆ ಸಂಪೂರ್ಣ ಸಿದ್ಧವಾಗಿ ಎದ್ದುನಿಂತರು.
ಅದರ ಪರಿಣಾಮವಾಗಿಯೇ ಸುಭದ್ರವಾದ ದೇವಾಲಯವೊಂದು ಸಿದ್ಧವಾಗಿ ನಿಂತಿದೆ. ಹಳೆಯ ಲಿಂಗವಿದೆಯಾದರೂ ಅದು ಪಾಣಿಪೀಠರಹತವಾಗಿ, ಭಗ್ನಗೊಂಡು ನಿಂತಿದ್ದರಿಂದ ಪೂಜೆಗೆ ಯೋಗ್ಯವಲ್ಲ. ಹೊಸ ಬೃಹದಾಕಾರದ ಈಶ್ವರಲಿಂಗ, ಪಾಣಿಪೀಠ, ನಂದಿ ಹಾಗೂ ಗಣಪತಿ ವಿಗ್ರಹಗಳ ಕೆತ್ತನೆಯ ಕಾರ್ಯ ಬಹುತೇಕ ಮುಗಿದಿದೆ. ದೇವಾಲಯದ ಛಾವಣಿಯನ್ನು ಪೂರ್ತಿಯಾಗಿ ತಾಮ್ರದ ಹಾಳೆಗಳಿಂದ ಹೊದೆಸಿ ಸಿದ್ಧಮಾಡಲಾಗಿದೆ. ಈ ಬಗೆಯ ಲೋಹದ ಛಾವಣಿಯನ್ನು ಸುತ್ತಲ ಊರುಗಳಲ್ಲಿ ಕಾಣಲಾಗದು. ಉಮಾಮಹೇಶ್ವರ ದೇವಾಲಯವೂ ಈ ಭಾಗಕ್ಕೆ ಇದೊಂದೇ ಇರುವುದು. ಉಳಿದಂತೆ ದೇವಾಲಯಕ್ಕೆ ಸಂಬಂಧಿಸಿದ್ದ ಕಲ್ಯಾಣಿಯೂ ಅಂದ ಆಕಾರ ಪಡೆದುಕೊಂಡು ತಿಳಿನೀರನ್ನು ತುಂಬಿಕೊಂಡಿದೆ. ಶಿವನ ಶಿರಸ್ಸಿಗೆ ಅರ್ಪಣೆಯಾಗಲಿಕ್ಕಿರುವ ಶುದ್ಧಗಂಗೆಯಂತೆ ನಿರುದ್ವಿಗ್ನವಾಗಿ ನಿಂತಿದೆ. ಊರ ಜನರ ಶ್ರಮ, ಶ್ರದ್ಧಾಳುಗಳ ಸಹಾಯ ಮತ್ತು ಸತ್ಸಂಕಲ್ಪದ ಉತ್ಪನ್ನವಾಗಿ ಶೇವ್ಕಾರಿನ ಉಮಾಮಹೇಶ್ವರ ದೇವಾಲಯ ಎದ್ದುನಿಂತಿದೆ; ಭಾಗಶಃ ಊರಿನ ಅಭಿಮಾನದ ಪ್ರತೀಕದಂತೆ.

 
ಮುಂಬರುವ ವೈಶಾಖ ಮಾಸದ ಮೊದಲಿನಲ್ಲಿ ಯತಿಶ್ರೇಷ್ಠ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಪೂರ್ಣಾನುಗ್ರಹದೊಂದಿಗೆ ಶೇವ್ಕಾರಿನಲ್ಲಿ ಉಮಾಮಹೇಶ್ವರ ಪುನಃ ಪ್ರತಿಷ್ಠಾಪಿತವಾಗಲಿದ್ದಾನೆ. ನಾಲ್ಕುದಿನಗಳ ಕಾರ್ಯಕ್ರಮವು ಸಂಪೂರ್ಣವಾದ ವೈದಿಕ ತೇಜಸ್ಸನ್ನು ಊರಿನಲ್ಲಿ ಕಟ್ಟಿಕೊಡುವುದಕ್ಕಿದೆ.  ಸಂತರಿಂದ ಸ್ಥಾಪಿತವಾಗಿತ್ತೆನ್ನಲಾದ ಆಲಯವೊಂದು ಮತ್ತೆ ಸ್ವರ್ಣವಲ್ಲೀ ಶ್ರೀಗಳಂಥಾ ಶ್ರೇಷ್ಠ ಸಂತರ ಕೈಯಿಂದ ಜೀರ್ಣೋದ್ಧಾರಗೊಳ್ಳುತ್ತಿರುವುದು ಕಾಲದ ಕರುಣೆ. ಶ್ರೀಗಳ ಮತ್ತು ಉಮಾಮಹೇಶ್ವರನ ಅಕಂಪಾನುಕಂಪದಿಂದ ಮುಂದಿನ ವರ್ಷದ ಶಿವರಾತ್ರಿಯು ಶೇವ್ಕಾರದ ಉಮಾಮಹೇಶ್ವರನಿಗೆ ವೈದಿಕೋಕ್ತ ರೀತಿಯಲ್ಲಿ ಸಲ್ಲಿಕೆಯಾಗಲಿಕ್ಕಿದೆ. ಊರೂ ಸಹ ಅದನ್ನೇ ಕಾಯುತ್ತಿದೆ.

ಶಿವರಾತ್ರಿಯ ದಿನ ಇಷ್ಟನ್ನು ಹೇಳಬೇಕನ್ನಿಸಿತು. 

Friday, February 3, 2017

ಉತ್ತರಕಾಂಡದ ಓದು ಮತ್ತು ಜಿಜ್ಞಾಸೆ.



ರಾಮಾಯಣವನ್ನಾಗಲೀ ಮಹಾಭಾರತವನ್ನಾಗಲೀ ಅವಲೋಕಿಸುವ ಸಂದರ್ಭ ಆಗಾಗ ಬರುತ್ತಲೇ ಇರುತ್ತದೆ. ಅದೆಷ್ಟು ಬಾರಿಗೆ ಅವಲೋಕಿಸಿದರೂ ರಾಮನೆಂಬಾತ ಮಾತ್ರ ಎಟುಕಿಗೆ ನಿಲುಕದ, ಯಾವುದಕ್ಕೂ ಕಲಕದ, ಅರ್ಥವಾಗದ ಮತ್ತು ಅರ್ಥಮಾಡಿಸಿಕೊಳ್ಳುವ ಬಯಕೆಯೂ ಇಲ್ಲದ ಪಾತ್ರವಾಗಿಯೇ ನನಗೆ ತೋರುತ್ತಾನೆ. ಅವನ ಕೃತ್ಯಗಳ ಪರವಾಗಿ ಜಿಜ್ಞಾಸೆಗೆ ನಿಂತಾಗೆಲ್ಲ ಕೊನೆಯಲ್ಲಿ ಆತನ ನಿರ್ಧಾರಗಳೆಡೆಗೆ ಪ್ರಶ್ನೆಗಳೇ ಉಳಿಯುತ್ತವೆ. ಹಾಗಂತ ಅವನ ಕೃತ್ಯಗಳ ಪರವಲ್ಲದ ಕೋನ ಹಿಡಿದುಕೊಂಡೆನೋ, ಆತನ ’ಧರ್ಮ’ವು ಎಲ್ಲೋ ಒಂದು ಸಣ್ಣ ಹೊಳಹಿನಲ್ಲಿ ಸುಳಿದು ವಿರೋಧವಾದದ ಬುಡವನ್ನೇ ಕಡಿಯುತ್ತದೆ. ರಾಮ ಇವತ್ತಿಗೂ ನನ್ನ ಅರಿವಿನ ಯಾವ ಅಂಚಿಗೂ ನಿಲುಕದವನು. 

ಉತ್ತರಕಾಂಡವನ್ನು ಎತ್ತಿಕೊಂಡಾಗ ಕಾದಂಬರಿಕಾರನು ಕಥೆಯ ಹರಿವಿನಲ್ಲಿ ಒದಗಿಸಬಹುದಾದ ರಸಸೃಷ್ಟಿಯಲ್ಲಿ ಮಿಂದೇಳುವ ಬಯಕೆಯು ಹಿರಿದಾಗಿತ್ತಾದರೂ ರಾಮನನ್ನು ನನಗೆ ಹತ್ತಿರವಾಗಿಸಬಹುದೇನೋ ಅನ್ನುವ ಸಣ್ಣದೊಂದಾಸೆಯೂ ಮನಸಲ್ಲಿತ್ತು.
ಭೈರಪ್ಪನವರ ಕೃತಿಗಳಲ್ಲೆಲ್ಲ ನನ್ನನ್ನು ಅತಿಯಾಗಿ ಆವರಿಸಿದ್ದು ಪರ್ವ. ಅದು ಬಿಟ್ಟರೆ ನಾನು ಮೊತ್ತ ಮೊದಲಿಗೆ ಓದಿಕೊಂಡಿದ್ದ ಸಾರ್ಥ. ಉಳಿದ ಕೃತಿಗಳದ್ದು ಪರ್ವದ ಎತ್ತರ ಅಲ್ಲವೇ ಅಲ್ಲ. ಅವರ ’ದಾಟು’ ಕೃತಿಯನ್ನು ಮಾತ್ರ ದಾಟಲಾಗದೇ ಅರ್ಧಕ್ಕೆ ಬಿಟ್ಟಿದ್ದೇನೆ. ಕಾದಂಬರಿಕಾರನಾಗಿ ಭೈರಪ್ಪನವರ ಸ್ವಾಮಿತ್ವವನ್ನು ಕಂಡದ್ದೇನಿದ್ದರೂ ಪರ್ವದಲ್ಲಿ. ಇದೀಗ ಉತ್ತರಕಾಂಡಕ್ಕೆ ಅಂಥದೇ ಲೋಕೋತ್ತರ ಕಾವ್ಯವೊಂದರ ಮರುನಿರ್ಮಾಣವೇ ವಸ್ತುವಾದ್ದರಿಂದ ಅವರ ಉಳಿದ ಕಾದಂಬರಿಗಳ ಓದಿಗಿಂತ ಭಿನ್ನವಾಗಿರಬಹುದೆಂಬ ನಿರೀಕ್ಷೆಯಂತೂ ಇತ್ತು. 

ಉತ್ತರಕಾಂಡದ ಸೀತೆ ಎಲ್ಲವನ್ನೂ ತನ್ನ ಕಣ್ಣಲ್ಲಿ ಕಾಣುತ್ತ, ಕಾಣಲಾಗದ್ದನ್ನು ಅವರಿವರಿಂದ ಕೇಳುತ್ತ, ಹಾಗೆ ಕೇಳಿದ್ದನ್ನು ತನ್ನ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುತ್ತ ಹೋಗುತ್ತಾಳೆ. ಸೀತೆಯೇ ಕೇಂದ್ರವಾಗಿದ್ದರಿಂದ ಉತ್ತಮಪುರುಷದ ನಿರೂಪಣೆಯೇ ಕಾದಂಬರಿಯುದ್ದಕ್ಕೂ. ನಿರೂಪಣೆಗಳಲ್ಲಿ ಅತ್ಯಂತ ಪ್ರಬಲವಾದ್ದು ಉತ್ತಮಪುರುಷದ ನಿರೂಪಣೆಯೆಂಬುದು ನನ್ನ ಅನಿಸಿಕೆ. ಸಹಜವಾಗಿಯೇ ಆಕೆ ಕಟ್ಟಿಕೊಡುವ ಕಥೆ ಶಕ್ತವಾಗಿದೆ. 

ರಾಮಾಯಣದ ಮರುನಿರೂಪಣೆಯನ್ನು ಅದೆಷ್ಟು ಭಾರತೀಯ ಕವಿಗಳು ಮಾಡಿಲ್ಲ ಹೇಳಿ. ಅದು ರಘುವಂಶದ ಕಾಲಿದಾಸನಿರಬಹುದು, ಉತ್ತರರಾಮಚರಿತದ ಭವಭೂತಿಯಿರಬಹುದು, ಶ್ರೀರಾಮಾಯಣದರ್ಶನದ ಕುವೆಂಪುವಿರಬಹುದು- ಎಲ್ಲರೂ ’ಅಪಾರೇ ಕಾವ್ಯಸಂಸಾರೇ ಕವಿರೇಕಃ ಪ್ರಜಾಪತಿಃ’ ಅನ್ನುವುದನ್ನು ಮತ್ತೆ ಮತ್ತೆ ಸತ್ಯ ಮಾಡಿದ್ದಾರೆ. ಅದೇ ಸಾಲಿಗೆ ಉತ್ತರಕಾಂಡದ ಭೈರಪ್ಪ ಕೂಡ ಸೇರುತ್ತಾರೆ. ರಾಮಾಯಣದ ವಸ್ತುವನ್ನು ಕಾವ್ಯದ ಹದಕ್ಕೆ ಮಾಗಿಸುವಾಗಿನ ಇವರೆಲ್ಲರ ಸ್ವಾತಂತ್ರ್ಯವು ಪ್ರಜಾಪತಿಯ ಸೃಷ್ಟಿಶೀಲತೆಯಷ್ಟೇ ಮಹತ್ತ್ವದ್ದು ನಿಜ. 

ಕಾಲಿದಾಸನ ರಾಮನೂ ’ಸೀತೆಗಾಗಿ ಮಾಡಿದ ಯುದ್ಧವಲ್ಲ ಅದು, ನನ್ನ ಅಹಂತೆಯನ್ನು ಕೆಣಕಿದವನಿಗೆ ಕೊಟ್ಟ ಉತ್ತರವಷ್ಟೇ’ ಅನ್ನುವ ಮಾತಾಡುತ್ತಾನೆ. (’ರಕ್ಷೋ ವಧಾಂತೋ ನ ಚ ಮೇ ಪ್ರಯಾಸಃ.....’). ಸೀತೆಗಾಗಿಯೇ ರಾಮ ಲಂಕೆಯನ್ನು ಪುಡಿಗೈದನೆಂಬ ಆದರ್ಶ ಪ್ರೇಮದ ವಾದಕ್ಕೆ ಮೊದಲ ಪೆಟ್ಟು ಬಹುಶಃ ಇದೇ ಇದ್ದೀತು. ಭವಭೂತಿಯ ಉತ್ತರಾಮಚರಿತವಂತೂ ಪೂರ್ಣ ರಾಮಾಯಣವನ್ನು ಕರುಣರಸದ ಮೇರು ಶೃಂಗಕ್ಕೊಯ್ದು ನಿಲ್ಲಿಸುತ್ತದೆ. ಅಲ್ಲಿ ದುಃಖದ ಅತಿರೇಕದಿಂದಾಗಿ ಬಹುತೇಕ ಪಾತ್ರಗಳು ಅಡಿಗಡಿಗೆ ಮೂರ್ಛೆ ಬಂದು ಬೀಳುತ್ತವೆ. ಮೊದಲ ಓದಿಗೆ ಈ ಪರಿಯ ದುಃಖದ ಅಭಿವ್ಯಕ್ತಿಯು ಅಲೋಕಸಾಧಾರಣವಾದ್ದು ಎಂದು ಯಾರಿಗಾದರೂ ಅನ್ನಿಸುವುದು ಸಹಜ. ಇನ್ನು ಕುವೆಂಪುರವರಂತೂ ’ಕೊಲೆಯ ಕಥೆಯಲ್ಲವಿದು, ಕಲೆಯ ಕಥೆಯು’ ಎಂದೇ ಆರಂಭಿಸಿ ತಮ್ಮ ಕಾವ್ಯದ ಉದ್ದಕ್ಕೂ ರೋಮಾಂಚದ ಉತ್ತುಂಗವನ್ನು ಸೃಷ್ಟಿಸಿಕೊಡುತ್ತಾರೆ. ಕಾವ್ಯಸತ್ಯಗಳನ್ನು ನಿರ್ಮಿಸಿಕೊಂಡು ರಮಿಸುವ ಮಾನವ ಮನಸಿನ ಸ್ವಭಾವಕ್ಕೆ ಕುವೆಂಪು ಅವರ ಕಾವ್ಯದುದ್ದಕ್ಕೂ ದಂಡಿಯಾಗಿ ಸಿಗುತ್ತದೆ ಸರಕು.   

ಈ ಮೇಲಿನ ಮೂವರಿಗೂ ’ದಿವ್ಯ’ ದ ಸ್ಪರ್ಷದಿಂದ ಪೂರ್ತಿಯಾಗಿ ಬಿಡಿಸಿಕೊಳ್ಳುವ ಅಗತ್ಯ ಕಂಡಿರಲಿಲ್ಲವೇನೋ. ದಿವ್ಯವಾದ್ದನ್ನು (ಅಥವಾ ಅಲೌಕಿಕವಾದ್ದನ್ನು) ಇಟ್ಟುಕೊಂಡೇ ಹೊರಟ ಈ ಮೂವರಿಗೆ ರಸಸೃಷ್ಟಿಯು ಪ್ರಾಯಃ ಕಷ್ಟತಮವಾದ್ದಾಗಿರಲಿಲ್ಲ. ಮಾನವ ಮನಸಿನ ಸ್ವಭಾವದಂತೆ ಲೋಕಾತೀತವಾದ್ದು ನಮ್ಮನ್ನು ಅತ್ಯಂತ ಬೇಗ ರಸೋನ್ನತಿಗೆ ಕೊಂಡೊಯ್ಯುತ್ತದೆ. ಉತ್ತರಕಾಂಡವು ಈ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವುದಿದ್ದರೆ ಅದು ತನ್ನ ನೆಲಕ್ಕಂಟಿಯೇ ನಡೆಯುವ ಸ್ವಭಾವದಿಂದಾಗಿ. ನೆಲವನ್ನೆಂದಿಗೂ ಬಿಡೆನೆಂಬ ಶಪಥ ಮಾಡಿಯೇ ಹೊರಟಂತಿದೆ ಕಥೆ. ನೆಲದ ಮಗಳ ಕಣ್ಣಲ್ಲಿ ಕಾಂಬ ಕಥೆಯಾದ್ದರಿಂದ ನೆಲವ ಬಿಡೆನೆಂಬ ಶಪಥ ಇಲ್ಲಿ ಸಹಜಜವೂ ಹೌದು. ಅದೇನೇ ಆದರೂ ರಾಮಾಯಣದ ಕಥೆಯನ್ನು ದಿವ್ಯದ ಹಂಗು ತೊರೆದು ಬರೆಯುವೆನೆಂಬುದು ಸಾಹಸಾತ್ಮಕ ನಿರ್ಣಯ. ಮಹಾಭಾರತವನ್ನೂ ನೆಲಕ್ಕೆ ಬಿಗಿದು ಬಂಧಿಸುವ ಪ್ರಯತ್ನ ಪರ್ವದಲ್ಲಿದೆಯಾದರೂ ಮಹಾಭಾರತದ ಕಥೆಗಿರುವ ಸ್ವಭಾವಕ್ಕೂ ರಸಸೃಷ್ಟಿಗೂ ಅವಿನಾಭಾವ ಸಂಬಂಧವಿರುವುದರಿಂದ ಅದು ಇಷ್ಟೊಂದು ದೊಡ್ಡ ಸವಾಲಾಗಿರಲಿಕ್ಕಿಲ್ಲ. ಆದರೆ ರಾಮಾಯಣದ ಕಥೆ ಹಾಗಲ್ಲ. ದಿವ್ಯವನ್ನು ತೊರೆದರೆ ಇಲ್ಲಿ ಉಳಿಯುವ ರಸವೆಂದರೆ ಕರುಣ ಮಾತ್ರ, ಅದ್ಭುತವಂತೂ ಮಣ್ಣುಗೂಡಿ ಹೋಗುತ್ತದೆ. ಶೃಂಗಾರ, ವೀರ, ಅದ್ಭುತ, ಭೀಭತ್ಸ, ರೌದ್ರಗಳನ್ನೆಲ್ಲ ದಿವ್ಯದ ಹೊರತಾಗಿಯೂ ಮಹಾಭಾರತಲ್ಲಿ ಹಿಡಿದುಕೊಟ್ಟಂತೆ ಇಲ್ಲಿ ಊಹೂಂ.  ’ಏಕೋ ರಸಃ ಕರುಣ ಏವ..’ ಎಂಬ ಮಾತು ರಾಮಾಯಣದ ಕಥೆಗೆ ಹೇಳಿ ಮಾಡಿಸಿದಂಥದು. ಅದು ಬಿಟ್ಟರೆ ಶಾಂತವನ್ನು ದುಡಿಸಿಕೊಳ್ಳಬಹುದಷ್ಟೆ. ಹಾಗೊಂದು ಮಿತಿಗೆ ತಾನು ಬದ್ಧವಾಗುತ್ತೇನೆಂಬ ಅರಿವಿದ್ದೂ ದಿವ್ಯವನ್ನು ಬದಿಗಿಟ್ಟು ಉತ್ತರಕಾಂಡದ ಕಥೆ ಬರೆದಿದ್ದು ಬರಹಗಾರನ ಸಾಹಸವಲ್ಲದೆ ಮತ್ತೇನಲ್ಲ.

ಉದಾಹರಣೆಗೆ ನೋಡಿ- ಕುವೆಂಪುರವರ ರಾಮನ ಕಾಲಿಗೆ ತಾಕಿದ ಕಲ್ಲೊಂದು ಅಹಲ್ಯೆಯಾಗಿ ಮೈತಳೆದ ಕ್ಷಣದಲ್ಲಿ, ಆ ವಿಸ್ಮಯಕ್ಕೆ ಬೆರಗಾಗಿ ಸ್ವತಃ ರಾಮನೇ ಆ ಹೆಣ್ಣು ಜೀವಕ್ಕೆ ಅರೆಕ್ಷಣ ಶಿರಬಾಗುತ್ತಾನೆ. ’ತನ್ನ ಕಾವ್ಯಕೆ ತಾಂ ಮಹಾಕವಿ ಮಣಿವಂತೆ!’ ಎಂಬ ಉಪಮೆಯನ್ನೂ ಕವಿ ಕೊಡುತ್ತಾರೆ. ಆ ಬಿಂದುವಿನಲ್ಲಿ ಸಹೃದಯನಿಗೆ ಹೊತ್ತಿಕೊಳ್ಳುವ ರೋಮಾಂಚವಿದೆಯಲ್ಲ ಅದು ಅಮೋಘವಾದ್ದು. ಇದು ಅತ್ಯಂತ ಶಕ್ತ ಅಭಿವ್ಯಕ್ತಿ ಎಂಬುದು ಅದಕ್ಕೆ ಕಾರಣವಾದರೂ ಅದಕ್ಕೂ ಆಧಾರಭೂತವಾದ್ದು ಅಹಲ್ಯೆಯು ಕಲ್ಲಾಗಿದ್ದಳೆಂಬ ಅಲೌಕಿಕ ಕಾವ್ಯಸತ್ಯ. ಆದರೆ ಉತ್ತರಕಾಂಡದಲ್ಲಿ ಕಲ್ಲೇ ಆಗದ ಅಹಲ್ಯೆಯನ್ನು ಯಾವ ರಾಮನ ಕಾಲಿಗೆ ಸೋಕಿಸಿಯೂ ಹೆಣ್ಣು ಮಾಡಲು ಸಾಧ್ಯವಿಲ್ಲ. ಮತ್ತಲ್ಲಿ ಅದ್ಭುತರಸದ ಉನ್ನತಿಯೂ ಅಸಂಭವ. ಲೋಕೋತ್ತರ ಕಾವ್ಯವೊಂದನ್ನು ನೆಲಕ್ಕೆ ಬಾಗಿಸುವಾಗ ಸೃಷ್ಟಿಕರ್ತನಿಗೆ ಎದುರಾಗಬಹುದಾದ ಬಲುದೊಡ್ಡ ಸವಾಲು ಇಂಥವು. ಉತ್ತರಕಾಂಡ ಅದಕ್ಕಲ್ಲ ಎದೆಗೊಡುತ್ತದೆ. ಸೀತೆಯನ್ನು ಕದ್ದೊಯ್ಯಲು ಪುಷ್ಪಕವಿಮಾನದಲ್ಲಿ ಬಾರದ ರಾವಣ, ರಾವಣನನ್ನು ತಡೆಯಲೆಂದು ಬಾರದ ಜಟಾಯು, ಸೀತೆಯನ್ನು ಹಡುಕಲೆಂದು ಸಮುದ್ರಲಂಘನ ಮಾಡದ ಕಪಿ, ಹತ್ತು ತಲೆಯಿರದ ರಾವಣ ಮತ್ತು ಎಲ್ಲಕ್ಕಿಂತ ದೊಡ್ಡದೆಂದರೆ ಸೇತುವೆಯನ್ನೇ ಕಟ್ಟದ ರಾಮ! ಇಷ್ಟೆಲ್ಲ ನೆಲಕ್ಕಂಟಿಕೊಂಡು ನಡೆಯುವ ಕಥೆ ಉತ್ತರಕಾಂಡ. ಇದೆಲ್ಲದರ ಮಧ್ಯೆ ವಿಲಕ್ಷಣನೆಂದರೆ ರಾಮ. ಅವ ಅತ್ತ ನೆಲದವನೂ ಅಲ್ಲದೆ ಇತ್ತ ದಿವ್ಯನೂ ಅಲ್ಲದೆ ಹೆಣಗಾಡಿದನಾ ಅನ್ನಿಸುವಂತಿದ್ದಾನೆ. ಉತ್ತರಕಾಂಡದ ಮಟ್ಟಿಗೆ ಮಾತ್ರವೇ ಈ ಪ್ರಶ್ನೆ ಯಾಕೆಂದರೆ ನೆಲದ ಜೀವಗಳು ಕೈಗೊಳ್ಳದ ನಿರ್ಣಯವನ್ನು ಕೈಗೊಳ್ಳುತ್ತಾನೆ ರಾಮ. ರಾಮನನ್ನು ಲೋಕೋತ್ತರವಾಗಿಸಲು ಹೊರಟಿದ್ದರೆ ಈ ಪ್ರಶ್ನೆ ಬರುತ್ತಿರಲಿಲ್ಲ, ಆದರೆ ಇಲ್ಲಿ ರಾಮನು ನೆಲದ ಜೀವವಾಗಿರಬೇಕಾದವನು.  

ಲೋಕದ ಯಾವ ಹರಿವಿಗೂ ಕರಗದೊಂದು ಕಲ್ಲ ಬಂಡೆ ರಾಮ. ಧರ್ಮವೆಂದರೆ, ಸತ್ಯವೆಂದರೆ, ಅವನೇ ಹೇಳುವಂತೆ ಅಚಲವಾದ, ಬದಲಾಗದ ತ್ರಿಕಾಲಿಕೈಕರೂಪವಾದ ಸಂಗತಿಯಿರಬಹುದು. ಆದರೆ ಅಂಥದೊಂದು ಸತ್ಯದ್ರವ್ಯವು ಲೌಕಿಕ ಬದುಕಿಗೆ ಒದಗುವಂಥದಲ್ಲ; ಲೋಕದ ಬದುಕಿಗೆ ಲೋಕದ ಸತ್ಯಗಳೇ ಆಧಾರ. ರಾಮನ ಧರ್ಮದ ವ್ಯಾಖ್ಯಾನ ಸೀತೆಗೆ ಹೇಗೆ ಅರ್ಥವಾಗಲಿಲ್ಲವೋ ಹಾಗೇ ಯಾರಿಗೂ ಅರ್ಥವಾದಂತೆ ಕಾಣುವುದಿಲ್ಲ. ಅರ್ಥವಾದಂತೆ ಕಂಡರೂ ಪ್ರಶ್ನೆಯನ್ನಂತೂ ಉಳಿಸಿಹೋಗುತ್ತಾನೆ ಆತ. ತ್ರಿಕಾಲಾಬಾಧಿತ ಸತ್ಯವೊಂದಕ್ಕಾಗಿ ನಿಂತುಕೊಳ್ಳುವ ಪುರುಷನ ಸುತ್ತಲಿನವರ ಲೌಕಿಕಸಾಧಾರಣ ಬದುಕು ಅದೆಂಥ ದಾರುಣವಾಗಿರುತ್ತದೆ ಎಂಬುದಕ್ಕೆ ಕನ್ನಡಿ ಹಿಡಿದ ಕೃತಿ ಇದು. ’ಸ್ವಯಂ ಹಿಂಸೆ ಮತ್ತು ಅವಲಂಬಿತರ ಹಿಂಸೆಯೇ ನಿನ್ನ ಧರ್ಮದ ತಿರುಳೋ?’ ಎಂದೊಮ್ಮೆ ಲಕ್ಷ್ಮಣನಿಂದ ಕೇಳಿಸಿಯೂ ಇದ್ದಾರೆ ಕಾದಂಬರಿಕಾರ. ಧರ್ಮವು ಮೂರು ಕಾಲಿನಲ್ಲಿ ನಿಂತುಕೊಂಡಿತ್ತೆನ್ನಲಾದ ತ್ರೇತಾಯುಗದಲ್ಲೆ ಆದರ್ಶಕ್ಕೆ ಈ ಕಥೆಯಾದರೆ ಕಲಿಯುಗದ ಕಥೆಯೇನಿದ್ದೀತೋ! 

ಕಾದಂಬರಿಯಲ್ಲಿ ಪ್ರೇಮವೆಂಬ ದ್ರವ್ಯದ ಅಸತ್ಯತೆಯನ್ನು ಸೀತೆ ಮಥಿಸಿ ಅರಿತುಕೊಳ್ಳುತ್ತಾಳಲ್ಲ, ಆ ಭಾಗ ತಾತ್ತ್ವಿಕವಾಗಿ ಬಲು ದೃಢವಾದ್ದು ಮತ್ತು ಪ್ರಭಾವಿಯಾದ್ದು. ಪ್ರೇಮವೆಂಬುದು ಈ ಲೋಕದ ಅತ್ಯಂದ ಸುಂದರವಾದ ಅಸತ್ಯ. ಅದು ಸ್ವಾರ್ಥದ  ಉತ್ಪನ್ನ. ಉಪನಿಷತ್ತಿನ ವಾಕ್ಯಗಳು ಸೀತೆಯ ಈ ಚಿಂತನೆಗೆ ಒತ್ತಾಸೆಯಾಗಿ ನಿಲ್ಲುತ್ತವೆ. (ಹಾಗಿದ್ದೂ ಪ್ರೇಮವಿಲ್ಲದೆ ಜೀವನವಿಲ್ಲೆಂಬುದು ಮತ್ತದೇ ಲೋಕಸತ್ಯ.). ಕಾದಂಬರಿಯಲ್ಲಿ ಇದು ಅಸಹಾಯ ವೇದಾಂತವಲ್ಲ, ಬದಲಿಗೆ ಅನುಭವದಿಂದೆದ್ದ ತಿಳಿವು. ಧರ್ಮವೆಂದರೇನೆಂಬುದಕ್ಕೆ ಲೋಕೋನ್ನತ ಉದಾಹರಣೆಯಾಗಿ ನಿಲ್ಲಲೆಂಬಂತೆ ಹೊರಟ ರಾಮನ ಪ್ರೇಮವೂ ಸಹ ಸ್ವಾರ್ಥದ್ದೇ ಚಂದದ ರೂಪವಾಗಿ ತೋರುವ ಕಾದಂಬರಿಯ ಘಟ್ಟವಿದೆಯಲ್ಲ, ಅಲ್ಲಿ ಪ್ರಾಯಃ ರಾಮನು ಒಂದು ಕ್ಷಣಕ್ಕೆ ನೆಲದತ್ತ ಬಾಗಿದನೇನೋ. ಆದರೆ ಮುಂದುವರಿಯುವ ಮೌನ, ನಿಶ್ಚಲ ವ್ಯಕ್ತಿತ್ವಗಳು ಅನತಿಕಾಲದಲ್ಲಿ ಮತ್ತೆ ಅವನನ್ನು ನೆಲದವನಲ್ಲವೆಂಬಂತೆ ನಿಲ್ಲಿಸಿಬಿಡುತ್ತವೆ. ಧರ್ಮಸಭೆಯಲ್ಲಿ ಸೀತೆಯ ನಡೆಯಿಂದ ಇನ್ನಷ್ಟು ಮತ್ತಷ್ಟು ಅಂತರ್ಮುಖಿಯಾಗುತ್ತಾನೆ. ತನ್ನ ನಿರ್ಧಾರಗಳ ಕುರಿತಾದ ಹೆಚ್ಚಿನ ವಿವರಣೆಯಿಲ್ಲದೆ ರಾಮ ಮರೆಯಾಗುತ್ತಾನೆ. ಸೀತೆ ಮಾತ್ರ ’ಆತ್ಮನಸ್ತು ಕಾಮಾಯ ಪತಿಃ ಪ್ರಿಯೋ ಭವತಿ’ ಎಂದು ಪ್ರೇಮದ ಅಸತ್ಯತೆಯನ್ನು ಅರಿವಾಗಿಸಿಕೊಂಡಬಳಿಕವೂ ತಾನು ಆ ಪ್ರೇಮವನ್ನು ತೊರೆದು ಬದುಕಲಾರೆ ಎಂಬಂತೆ, ನೆಲದವಳಾಗಿ ತನ್ನ ಬದುಕು ಅಸತ್ಯವೇ ಆದರೂ ಪ್ರೇಮಕ್ಕೇ ಜೋತುಬೀಳುವುದೆಂಬುದನ್ನು ತೋರಿಸುತ್ತಾಳೆ. ನೆಲಕ್ಕೇ ಸೇರುತ್ತಾಳೆ. 

ಕರುಣವೆಂಬ ರಸವನ್ನಲ್ಲದೆ ಬೇರೆ ರಸವನ್ನು ಹೊತ್ತಿಸಬೇಕೆಂದು ಧರ್ಮಸಭೆ ಕರೆದಿದ್ದ ಕವಿ, ತನ್ನ ಕೈಗೆ ಮೀರಿದ್ದು ಇವೆಲ್ಲ ಎಂಬಂತೆ ಕೈ ಚೆಲ್ಲುತ್ತಾನೆ. ಗಹನವಾದ ತಾತ್ತ್ವಿಕ ಜಿಜ್ಞಾಸೆಗಳಿಗೆ ರಾಮಾಯಣದಲ್ಲಿ ಯಾವೆಲ್ಲ ಜಾಗಗಳು ಉಳಿದುಕೊಂಡಿವೆಯೋ ಅದೇ ಜಾಗಗಳು ಇಲ್ಲೂ ಇವೆ, ಇನ್ನೂ ಇವೆ. ಲೌಕಿಕಾಲೌಕಿಕಗಳು ಒಂದಾಗಿ ಬದುಕಿಗೆ ಒದಗವು ಎಂಬುದೇ ರಾಮಾಯಣದ ಸಂದೇಶವೇ? ರಾಮನೆಂದರೆ ’ವಿಗ್ರಹವಾನ್ ಧರ್ಮಃ’ ಎಂದು ಪ್ರಸಿದ್ಧಿಯಿದೆಯಲ್ಲ, ಅದು ಮಾನವ ಮಾತ್ರನಿಗೆ ಎಂದೆಂದಿಗೂ ಆದರ್ಶದ ಮಟ್ಟದ್ದಾಗಿ ಮಾತ್ರ ಉಳಿಯಬಲ್ಲ, ಎಂದಿಗೂ ವಾಸ್ತವದಲ್ಲಿ ಹದಗಾಣದ ಸಂಗತಿಯೇ? ಈ ಪ್ರಶ್ನೆಗಳಿಗೆ ಎಸ್ ಎಲ್ ಭೈರಪ್ಪರವರ ಉತ್ತರಕಾಂಡವು ತನ್ನ ದನಿಯಲ್ಲಿ ’ಹೌದು’ ಎಂದುತ್ತರಿಸಿದಂತೆ ನನಗೆ ಭಾಸವಾಯ್ತು. ಅಂತೂ ನೆಲದ ಪಾತಳಿಗೆ ಸಮಾನಾಂತರವಾಗಿ ಹರಿದ ಉತ್ತರಕಾಂಡದಲ್ಲೂ ಶ್ರೀರಾಮ ನೆಲಕ್ಕೆ ಒದಗಲಿಲ್ಲ. ರಾಮಾಯಣವು ಎಂದೆಂದಿಗೂ ಮುಗಿಯದ ಕಥೆ ಎಂಬುದು ಸತ್ಯವೇನೋ.